ಪರಿಸರ ಹೋರಾಟಗಾರರಲ್ಲಿ ಮತ್ತು ಅರಣ್ಯ ಇಲಾಖೆಯವರಲ್ಲಿ ಬಹಳ ದೊಡ್ಡ ವಿನಂತಿ.

ಪರಿಸರ ಹೋರಾಟಗಾರರಲ್ಲಿ ಮತ್ತು ಅರಣ್ಯ ಇಲಾಖೆಯವರಲ್ಲಿ ಬಹಳ ದೊಡ್ಡ ವಿನಂತಿ.

ಶ್ಚಿಮ ಘಟ್ಟ ಕಾಡುಗಳಾನ್ನು ಉಳಿಸಿ ಬೆಳಸಬೇಕು ಎನ್ನುವ ವಿಶ್ವಸಂಸ್ಥೆಯ ಕೂಗಿನ ಜೊತೆ ಜೊತೆಗೆ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಅಭಿವೃದ್ದಿ ಹೆಸರಿನ ಯೋಜನೆಗಳಿಂದ ಕಾಡುಗಳು ನಾಶವಾಗಿ ವನ್ಯ ಸಂಕುಲ ನಶಿಸಿ  ಅನೇಕ ನದಿ ಮೂಲಗಳು ಬತ್ತುತ್ತಿರುವುದು ವಿಶಾದನೀಯ. ಸರ್ಕಾರದ ಇಂತಹ ದುಡುಕಿನ ಕೆಲಸಕ್ಕೆ ಕುದುರೆ ಮುಖದ ಗಣಿಗಾರಿಕೆಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಇಂತಹದೆ ಇನ್ನೊಂದು ಯೋಜನೆ ನಮ್ಮ ಪಶ್ಚಿಮ ಘಟ್ಟದಲ್ಲಿ ನಡೆಯುತಿದ್ದು ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಯೋಜನೆ:
400kv Electrical Power lines of UPCL (Udupi Power Corporation Limited formally known as Nagarjuna).

ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ನಾಲ್ಕು ಲಕ್ಷ ವೋಲ್ಟ್ ಅಂದರೆ ನಾಲ್ಕುನೂರು ಕಿಲೋ ವೊಲ್ಟ್ ಸಾಮರ್ಥ್ಯದ ವಿಧ್ಯುತ್ ತಂತಿ ಮತ್ತು ಬೃಹತ್ ಟವರ್‌ಗಳು ಅಂಡಿಂಜೆ > ಲೈಲ > ನಾಡ > ಇಂದ್ರ ಬೆಟ್ಟು > ತೋಟತ್ತಡಿ > ಮುಂಡಲ್‍ಕಲ್ಲು ಎಸ್ಟೇಟ್ > ಗಾಳಿಗುಡ್ಡೆ > ಗುತ್ತಿ > ದೇವರ ಮನೆ > ಹಳ್ಳಿಬೈಲು > ಪಟ್ಟದೂರು > ಹಾಲೂರು > ಲಕ್ಷ್ಮೀ ಪುರ > ಜಿ. ಹೊಸಹಳ್ಳಿ > ಹೊಸುರು ಗುಡ್ಡ > ಉತ್ತಲು > ಕಲ್ಲಾಹಳ್ಳಿ ಮಾರ್ಗವಾಗಿ ಹಾದು ಹೋಗುತ್ತದೆ. ಈ ಯೋಜನೆಯು ನಿರ್ಮಾಣದ ಹಂತದಲ್ಲಿದ್ದು ಯಾವುದೇ ಸಮಯದಲ್ಲಿ ಸಂಪೂರ್ಣಗೊಂಡು ವಿಧ್ಯುತ್ ಹರಿವು ಪ್ರಾರಂಭ ಆಗಬಹುದು.

ಯೋಜನೆಯ ದುಷ್ಪರಿಣಾಮಗಳು ಮತ್ತು ಭವಿಷ್ಯದ ಅಪಾಯಗಳು.

೧. ಸರಾಗವಾಗಿದ್ದ ಪಶ್ಚಿಮ ಘಟ್ಟದ ಕಾಡು ಇಬ್ಬಾಗವಾಗಿ ವಿಭಜನೆ ಗೊಳ್ಳುತ್ತದೆ.
೨. ಸ್ವತಂತ್ರವಾಗಿ ಸಂಚರಿಸುತಿದ್ದ ವನ್ಯ ಮೃಗಗಳಿಗೆ ಇದರಿಂದ ಅಪಾಯವಿದೆ.
೩. ೪೦೦ ಕಿಲೋ ವೊಲ್ಟ್ ಹೊತ್ತುಯ್ಯುವ ಈ ವಿಧ್ಯುತ್ ಲೈನ್ ಪಕ್ಷಿಗಳ ಹಾರಾಟಕ್ಕೆ ಅಡ್ಡಿಯಾಗಿ ಅವುಗಳನ್ನು ಕೊಲ್ಲುವುದಲ್ಲದೆ ಜನರ ಆರೋಗ್ಯದ ಮೇಲೂ ಪರಿಣಾಮ ಭೀರಲಿದೆ. (ಈ ಭಾಗದ ಸಾಕಷ್ಟು ಪಕ್ಷಿಗಳನ್ನು ಮೂಡಿಗೆರೆಯ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ತೆಗೆಯುತಿದ್ದ ಛಾಯಾಚಿತ್ರಗಳಲ್ಲಿ ಕಾಣಬಹುದು).
೪. ದೇವರಮನೆ ಹಳ್ಳಿಬೈಲು ಈ ಭಾಗವು ಅದರಲ್ಲೂ ಮಲೆಯಕಾಡು; ಮತ್ತೊಮ್ಮೆ ಹೇಳಬೇಕು ಈ ಮಲೆಯ ಕಾಡು ಅನೇಕ ವಿನಾಶದ ಅಂಚಿನ ಜೀವಿಗಳನ್ನು ರಕ್ಷಿಸುತ್ತಿರುವ ಹಾಟ್‍ಸ್ಪಾಟ್. ಮಲೆಕಾಡು ಮಲೆಕುಡಿಯ ಎಂಬ ಆಧಿವಾಸಿಗಳಿರುವ ಕಾಡಾಗಿದ್ದು ಇಲ್ಲಿ ಚಿಪಿಗಿನ ಬೆಕ್ಕು, ಕಡವು, ಕಾಡುಪಾಪು, ಆನೆ, ಹುಲಿ, ಚಿರತೆ,ಜಿಂಕೆ, ಕರಡಿ, ಮಂಗ, ಮುಸಿಯ, ಕಾಡುಕೋಣ, ಕಾಳಿಂಗ ಸರ್ಪ, ಕಾಡುಕುರಿ, ಸೀಳುನಾಯಿ, ನರಿ, ಮುಳ್ಳುಹಂದಿ, ಬರ್ಕನ ಬೆಕ್ಕು, ಕಾಡು ಬೆಕ್ಕು(ಹುಲಿ ಬೆಕ್ಕು), ವೈವಿಧ್ಯಮಯ ಪಕ್ಷಿಗಳು, ಇನ್ನೂ ಬೆಳಕಿಗೇ ಬಂದಿರದ ಉಭಯವಾಸಿಗಳು (ಮುಖ್ಯವಾಗಿ ಕಪ್ಪೆಗಳು) ಇಲ್ಲಿ ಬಾಳಿ ಬದುಕಿದ್ದು ಇವುಗಳ ವಿನಾಶದ ಭಯವಿದೆ.
೫. MRPL ಪೈಪ್ ಲೈನ್ ಇಲ್ಲಿ ಈಗಾಗಲೆ ಬಂದಿದ್ದು ಹಿಂದೊಮ್ಮೆ ಇದರಿಂದ ಸೋರಿಕೆಯಾದ ತೈಲಕ್ಕೆ ಬೆಂಕಿ ಹಿಡಿದು ಅನಾಹುತವಾಗಿತ್ತು ಇದು ಮುಂದೆಯೂ ಸಭವಿಸ ಬಹುದೆಂಬ ಭೀತಿ ಇದ್ದೇ ಇದೆ.
೬. MRPL ನಂತರ ಈ ನಾಗಾರ್ಜುನ ಪವರ್ ಲೈನ್ ಯೋಜನೆಯು ನಡುಯುತಿದ್ದು ಇದರ ಹಿಂದೆಯೇ ಗ್ಯಾಸ್ ಲೈನ್ ಬರುವ ಸಂಭವವಿದೆ. ಇದಕ್ಕಾಗಲೆ ಈ ಬಾಗದ ರೈತಾಪಿ ಜನರಿಗೆ ನೋಟಿಸ್ ಬಂದಿದೆ.
೭. ನೂರಾರು ಎಕರೆ ವ್ಯವಸಾಯ ಭೂಮಿ ನಾಗಾರ್ಜುನ ಯೋಜನೆಯಿಂದ ಕಬಳಿಕೆಯಾಗಿದೆ.
೮. ಎಲ್ಲಕಿಂತಲೂ ಬಹಳ ಬಹಳ ಮುಖ್ಯವಾಗಿ ಈ ಯೋಜನೆಯ ಪರಿಣಾಮದಿಂದ ಒಮ್ಮೆ ಒಂದು ಜೀವಸಂಕುಲ ಕಣ್ಮರೆಯಾಯಿತೆಂದರೆ ಸಾವಿರ ಕೋಟಿ ತೆತ್ತರೂ ಹಿಂಬರುವುದಿಲ್ಲ.

ದಯವಿಟ್ಟು ಸಂಭಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ತುರ್ತಾಗಿ ಪರಿಶೀಲನೆ ನೆಡೆಸಿ ಈ ವನ್ಯಸಂಪತ್ತನ್ನು ಉಳಿಸಬೇಕಾಗಿ ಕಳಕಳಿಯ ವಿನಂತಿ
.

ಪೇಜಾವರ ಶ್ರೀಯವರ ಹೋರಾಟ ವಿಫಲವಾದಂತೆ ಕಂಡು ಬಂದರೂ ಅದರ ಕಿಡಿ ಪುನಃ ಹೊತ್ತಿ ಉರಿಯಲಿದೆ ಅನ್ನುವ ನಂಭಿಕೆ ಇದ್ದೇ ಇದೆ. ಆದಕಾರಣವೇ ಈ ಬಗ್ಗೆ ಇಲ್ಲಿ ಬರೆಯಲಾಗಿದ್ದು ಮಾನವೀಯ ಅಂತಕರಣ ಉಳ್ಳವರು ಕೈ ಜೋಡಿಸಿ.

ಮಾಹಿತಿ ಕೋಂಡಿಗಳು.
ಮಲೆಕಾಡಿಗೆ ಬರಲಿಚ್ಚಿಸುವವರಿಗೆ ರಸ್ತೆ ಮಾರ್ಗ ಹೀಗಿದೆ.
ಬೆಂಗಳೂರು >ಹಾಸನ >ಮೂಡಿಗೆರೆ >ಗುತ್ತಿ >ದೇವರಮನೆ >ಮಲೆಯ ಕಾಡು
ಮಂಗಳೂರು >ಬೆಳ್ತಂಗಡಿ >ಉಜಿರೆ >ಚಾರ್ಮಡಿ >ಕೊಟ್ಟಿಗೆಹರ >ಮೂಡಿಗೆರೆ >ಗುತ್ತಿ >ದೇವರಮನೆ >ಮಲೆಯ ಕಾಡು
ಮಂಗಳೂರು >ಬೆಳ್ತಂಗಡಿ >ನೆರಿಯ >ಮಲೆಯ ಕಾಡು.
ಮಲೆಕಾಡ ಲೊಕೇಷನ್ ವಿಕಿಮ್ಯಾಪ್ ನಲ್ಲಿ http://www.wikimapia.org/#lat=13.1049448&lon=75.5633318&z=15&l=0&m=b&search=guthi
http://nammapadubidri.com/Pejavara_Mutt_Swamiji_s_fast.html

ಮಿಂಚಂಚೆ ವಿಳಾಸ: vidyakumargv209@gmail.com

ಓದುಗರು ಕೊನೆಯ ಪಕ್ಷ ಈ ವಿಚಾರವಾಗಿ ತಮ್ಮ ಸಾಮಾಜಿಕ ತಾಣಗಳಲ್ಲಿ ಬರೆದು ಚರ್ಚೆಗೆ ಎಡೆಮಾಡಬಹುದು.

"ಮಾನವ ತನಗಾದ ಸಹಾಯಕ್ಕೆ ಪ್ರತಿಯಾಗಿ ತ್ಯಾಂಕ್ಸ್ ಹೇಳಿ ಮರೆತು ಬಿಡಬಹುದು; ಮಾತೇ ಬಾರದ ಮೂಖ ಜೀವ ನಿಮಗೇನೂ ಹೇಳದಿದ್ದರೂ ನಿಮ್ಮ ನಮ್ಮೆಲ್ಲರ ಜೀವ ಚೈತನ್ಯವೇ ಅವುಗಳು.

Comments

Submitted by ನಂದೀಶ್ ಬಂಕೇನಹಳ್ಳಿ Fri, 02/01/2013 - 22:47

ಉಡುಪಿ-ಹಾಸನದ ನಡುವೆ ಅಂದರೆ, ವಿದ್ಯುತ್ ತಂತಿ ಹಾದುಹೋಗಿರುವ ಮಾರ್ಗ ಏನಿದೆಯಲ್ಲ, ಅದು ಕರ್ನಾಟಕದ ಅತಿಸೂಕ್ಷ್ಮ ಅರಣ್ಯಪ್ರದೇಶಗಳಲ್ಲಿ ಹಾದುಹೋಗಿದೆ.ದೇವರಮನೆಯಿಂದ ಮೊದಲುಗೊಂಡು ಚಾರ್ಮಾಡಿಯವರೆಗಿನ ವಿಶಾಲ ವನಸಿರಿಯ ಒಡಲಲ್ಲಿ ಹಲವಾರು ವಿವಿಧ ಜೀವಸಂಕುಲ ಆಸರೆ ಪಡೆದಿವೆ.ಮೊದಲೆಲ್ಲಾ ಚಾರ್ಮಾಡಿಯ ಮಲಯಮಾರುತದ ಮೇಲೆ ನಿಂತು ನೋಡಿದರೆ ವಿಶಾಲವಾಗಿ ಹಬ್ಬಿರುವ ಬೆಟ್ಟಗುಡಗಳ ಸಾಲುಸಾಲು ಕಣ್ಮನ ಸೆಳೆಯುತ್ತಿತ್ತು.ಈಗ ಆ ಬೆಟ್ಟ ಗುಡ್ಡಗಳ ನೆತ್ತಿಯನ್ನು ಗಾಸಿಗೊಳಿಸಿ ಮುಗಿಲೆತ್ತರದ ವಿದ್ಯುತ್ ತಂತಿಹೊತ್ತ ಟವರ್ ಗಳ ಸಾಲು ಕಾಣಸಿಗುತ್ತದೆ.ಬಲು ಅಪರೂಪದ ಅಳಿವಿನಂಚಿನ ಪ್ರಾಣಿಗಳಿರುವ ಕಾಡುಗಳಲ್ಲಿ ಮಾನವನ ಅತಿಕ್ರಮಣ ಮಿತಿಮೀರಿದೆ.ವಿದ್ಯುತ್ ಹರಿಯುವ ಟವರ್ ಸಮೀಪ ನಿಲ್ಲಲಾಗದಷ್ಟು ಅಲೆಅಲೆಯ ಶಬ್ದ ಕೇಳಿಬರುತ್ತಿರುತ್ತದೆ,ಇವು ಸಣ್ಣಪುಟ್ಟ ಪ್ರಾಣಿಗಳಿಗೆ ಅಪಾಯಕಾರಿಯಾಗಿದೆ.ಈ ಯೋಜನೆಯನ್ನು ವಿರೋದಿಸಬೇಕಾದ ರೈತವರ್ಗ ಸರ್ಕಾರ ನೀಡುವ ಪುಡಿಗಾಸಿನಾಸೆಗೆ ತಲೆಬಾಗಿ ಸುಮ್ಮನಾಗಿರುವುದು ಮಾತ್ರ ವಿಪರ್ಯಾಸ
Submitted by ಗಣೇಶ Sat, 02/02/2013 - 00:05

In reply to by ನಂದೀಶ್ ಬಂಕೇನಹಳ್ಳಿ

ನಂದೀಶ್, >>>...ವಿರೋದಿಸಬೇಕಾದ ರೈತವರ್ಗ ಸರ್ಕಾರ ನೀಡುವ ಪುಡಿಗಾಸಿನಾಸೆಗೆ ತಲೆಬಾಗಿ ಸುಮ್ಮನಾಗಿರುವುದು ಮಾತ್ರ ವಿಪರ್ಯಾಸ----ಪಾಪದ ರೈತವರ್ಗವನ್ನು ದೂಷಿಸಿ ಪ್ರಯೋಜನವಿಲ್ಲ. ಆ ಪ್ರದೇಶದ ರಾಜಕಾರಣಿಗಳು+ಬುದ್ಧಿಜೀವಿಗಳು ಏನು ಮಾಡುತ್ತಿದ್ದಾರೆ? ಚಾರ್ಮಾಡಿಯ ಸುಂದರ ಚಿತ್ರಗಳಿಗಾಗಿ- http://rakeshholla… ಮತ್ತು ಈ ಯೋಜನೆಯನ್ನು KWF ವಿರೋಧಿಸಿರುವ ಬಗ್ಗೆ ಹಿಂದೂವಿನಲ್ಲಿ ಬಂದಿರುವ ವರದಿ- http://www.thehindu…
Submitted by ನಂದೀಶ್ ಬಂಕೇನಹಳ್ಳಿ Sat, 02/02/2013 - 06:42

In reply to by ಗಣೇಶ

ಹಾಸನ ಮೂಡಿಗೆರೆ ಭಾಗದಲ್ಲಿ ರೈತರು ಸಂಘಟಿತರಾಗಿ ಪ್ರತಿಭಟನೆಯ ಮೂಲಕ, ಹಲವಾರು ಸಮಸ್ಯೆಗಳನ್ನು ಬಗ್ಗೆಹರಿಸಿಕೊಂಡಿದ್ದಾರೆ.ರೈತಸಂಘಟನೆಗಳು ಇಲ್ಲಿ ಸರ್ಕಿಯವಾಗಿವವೆ.ಈ ಭಾಗದಲ್ಲಿ ರೈತಾಪಿವರ್ಗವೇ ಬಹುಸಂಖ್ಯೆಯಲ್ಲಿರುವುದ್ದರಿಂದ ಯಾವ ಪಕ್ಷ ಆಡಳಿತಕ್ಕೆ ಬಂದರೂ ಇಲ್ಲಿನ ರಾಜಕಾರಣಿಗಳು ರೈತರ ವಿರೋದ ಕಟ್ಟಿಕೊಳ್ಳಲು ತಯಾರಿಲ್ಲ.ಆದರೆ ಇಲ್ಲಿ ಪ್ರೆಶ್ನಿಸಬೇಕಾದ ರೈತರೆ ಸುಮನಾಗಿರುವಾಗ ರಾಜಕಾರಣಿಗಳಾದರೂ ಯಾಕೆ ತಲೆಕೆಡಿಸಿಕೊಳ್ಳುತ್ತಾರೆ ಹೇಳಿ? ಮಗು ಅತ್ತರೇ ತಾನೇ ತಾಯಿ ಹಾಲುಣಿಸುವುದು. ವಿದ್ಯುತ್ ತಂತಿ ಹಾದುಹೋದ ಜಮೀನಿನ ರೈತರಿಗೆ ಲಕ್ಷಾಂತರ ರೂ ನೀಡಿ ರೈತರ ಬಾಯಿ ಮುಚ್ಚಿಸಲಾಗಿದೆ.ಇದು ವಾಸ್ತವ.ಕಷ್ಟವಾದರೂ ಅರಗಿಸಲೇಬೇಕಾದ ಸತ್ಯ.ವಿದ್ಯುತ್ ಯೋಜನೆಯಿಂದ ತೊಂದರೆ ಪಡುವ ರೈತರೇ ಸುಮ್ಮನಾಗಿರುವಾಗ ಈ ಬಗ್ಗೆ ಕಾಳಜಿವಹಿಸುವವರಾದರೂ ಯಾರು ಸ್ವಾಮಿ?