‘ದಿವ್ಯ’ ದಾಂಪತ್ಯ
ಹಿಂದೂ ವಿವಾಹ ಪದ್ಧತಿಯಲ್ಲಿ ಗಂಡು-ಹೆಣ್ಣುಗಳು ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಮಾತೆಂದರೆ ಧರ್ಮೇಚ,ಅರ್ಥೇಚ, ಕಾಮೇಚ ನಾತಿಚರಿತಾಮಿ, ನಾತಿಚರಿತವ್ಯಂ. ಅಂದರೆ ದಾಂಪತ್ಯದ ಹೊಸಿಲಲ್ಲಿ ನಿಂತಿರುವವರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಈ ಭಾಷೆ ದಾಂಪತ್ಯದ ಪರೀಕ್ಷೆಗೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತದೆ. ಪರಸ್ಪರರು ಧರ್ಮವಾಗಿ ನಡೆದುಕೊಂಡರೆ, ಸಂಪತ್ತಿಗಾಗಿ ಪರಿತಪಿಸದೇ ಅತಿಯಾಸೆ ಪಡದಿದ್ದರೆ, ಕಾಮಾತುರತೆಯಲ್ಲಿ ಅನ್ಯರೊಂದಿಗೆ ಸಂಬಂಧವಿಟ್ಟುಕೊಳ್ಳದಿದ್ದರೆ ಅಂಥ ಜೋಡಿಗಳೆಂದಿಗೂ ಪರಸ್ಪರ ಅನುಮಾನ ಪಡದೇ ಬಾಳುತ್ತವೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ಹಾಗಾಗಿಯೇ ಮದುವೆ ಸಂದರ್ಭದಲ್ಲಿ ಈ ಪರಸ್ಪರ ಮಾತುಕೊಟ್ಟುಕೊಳ್ಳುವ ‘ಮಾತು’
ಆದರೆ ದಾಂಪತ್ಯದಾಚೆಗಿನ ಕೂಡಾವಳಿಯಂತಿರುವ ಇತ್ತೀಚಿನ ಲಿವಿಂಗ್ ಟುಗೆದರ್ ಅನ್ನುವ ಅಪಭ್ರಂಶ ಪರಸ್ಪರರನ್ನು ಯಾವ ಮಾತಿಗೂ, ಪ್ರಮಾಣಕ್ಕೂ, ನಂಬಿಕೆಗೂ ಕಟ್ಟುಹಾಕದ ಕಾರಣ ಬಹುತೇಕ ನಗರಗಳಲ್ಲಷ್ಟೇ ಚಾಲ್ತಿಯಲ್ಲಿರುವ ಇಂಥ ಸಂಬಂಧಗಳು ದೈಹಿಕ ಕಾಮನೆ ತೀರಿ, ಹಣದ ಪ್ರಶ್ನೆಯೇ ದೊಡ್ಡದಾದಾಗ ಕಡಿದು ಬೀಳುತ್ತವೆ. ವಿಚ್ಛೇದನವೆನ್ನುವುದು ಇಂಥವರಿಗೊಂದು ಆಟ.
ದಿವ್ಯ ಎನ್ನುವುದಕ್ಕೆ ಪವಿತ್ರ, ಸುಂದರ, ಶ್ರೇಷ್ಠ ಅನ್ನುವ ರ್ಥಗಳಿರುವಂತೆಯೇ ಪರೀಕ್ಷೆ ಅನ್ನುವ ಮತ್ತೊಂದು ಅರ್ಥವೂ ಇದೆ. ಆ ಕಾರಣಕ್ಕಾಗಿಯೇ ದಾಂಪತ್ಯವೆನ್ನುವುದೂ ದಿವ್ಯ ಅನುಸಂಧಾನವೇ. ಏಕೆಂದರೆ ಗಂಡು-ಹೆಣ್ಣುಗಳು ಪರಸ್ಪರ ಸಂಸಾರದಲ್ಲಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುತ್ತಲೇ ಸಂಸಾರದ ಸುಂದರ ಮತ್ತು ಶ್ರೇಷ್ಠತೆಯನ್ನು ಮೆರಸಬಹುದು. ಅದರ ಜೊತೆಗೇ ಸದಾ ದಾಂಪತ್ಯ ಪರೀಕ್ಷೆಗೂ ಒಡ್ಡಿಕೊಳ್ಳುತ್ತಲೇ ಇರಬಹುದು. ಅಗ್ನಿ ದಿವ್ಯ, ಪಾಷಾಣ ದಿವ್ಯ, ತಪ್ತಮಾಲ ದಿವ್ಯ ಹೀಗೆ ಹಲವು ಹತ್ತು ಪರೀಕ್ಷೆಗಳನ್ನು ಆರೋಪಿಯ ಅಪರಾಧವನ್ನು ಪತ್ತೆಮಾಡಲು ನಮ್ಮ ಧರ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸಂಸಾರವೆಂಬ ಲೌಕಿಕದ ಜಗತ್ತಿನಲ್ಲೂ ಅಪರಾಧವೆಸಗುವವರಿದ್ದೇ ಇರುತ್ತಾರೆ. ಅಂಥವರ ಪರೀಕ್ಷೆಗೂ ‘ದಿವ್ಯ’ ಸಾಧನವಾಗಿದೆ.
‘ನೀನು ಮುಗಿಲು ನಾನು ನೆಲ’ ಅನ್ನುವ ಜಿ.ಎಸ್.ಶಿವರುದ್ರಪ್ಪನವರ ಭಾವಗೀತೆ ಗಂಡು-ಹೆಣ್ಣುಗಳ ಪರಸ್ಪರ ಅವಲಂಬನೆಯನ್ನು ಸಾರ್ಥಕವಾಗಿ ಚಿತ್ರಿಸಿದ ಕವಿತೆ. ವೈವಾಹಿಕ ಬದುಕಿಗೆ ಕಾಲಿಟ್ಟ ಗಳಿಗೆಯಿಂದಲೇ ಈ ಅವಲಂಬನೆ ಮೊದಲಾಗುತ್ತದೆ. ದಾಂಪತ್ಯ ಜೀವನದ ದಿವ್ಯ ಕೂಡ ಜೊತೆಗೇ ಸುರುವಾಗುತ್ತದೆ. ಅರ್ಥಾತ್ ಬದುಕಿನ ಏರಿಳಿತಗಳು, ಕತ್ತಲು ಬೆಳಕುಗಳು, ಆಕರ್ಷಣ ವಿಕರ್ಷಣಗಳು ದಾಂಪತ್ಯದ ನಿಜದ ದಿವ್ಯಗಳು. ಅವನ್ನು ಹಾದೇ ಮುಂದಡಿಯಿಡಬೇಕಾದ ಅನಿವಾರ್ಯತೆ. ಒಂದು ಸುಳ್ಳು ಹಲವು ಗೊಂದಲಗಳನ್ನು ಸೃಷ್ಟಿಸಿದರೆ ಕಾಣಿಸಿದ ಸತ್ಯಗಳು ಅವಕುಂಠನಗೊಳಿಸಿದ ನಿಜಗಳು ಲೆಕ್ಕಕ್ಕೆ ಸಿಕ್ಕದವು, ಅನುಭವದ ಕಡಲಲ್ಲಿ ತೇಲಿಬಂದ ಬೆಣ್ಣೆಯ ಮುರುಕುಗಳು.
ದಾಂಪತ್ಯವೆನ್ನುವುದೇ ಒಂದು ಧರ್ಮ. ಅದಕ್ಕೆ ಬದ್ಧವಾಗಿ ಅದರ ಅನುಶಾಸನದಂತೆ ನಡೆದುಕೊಂಡವರಿಗೆ ಅದೊಂದು ಸ್ವರ್ಗ. ಧರ್ಮೇಚ ನಾತಿಚರಾಮಿ ಅನ್ನುವ ಮಾತು ಆಗಷ್ಟೇ ಅರ್ಥಗಳಿಸಿಕೊಳ್ಳುತ್ತದೆ. ಆದರೆ ಸುಳ್ಳುಗಳು ಸಂಸಾರಗಳನ್ನು ಒಡೆಯುತ್ತವೆ. ಇನ್ನು ಅರ್ಥೇಚ ಅನ್ನುವುದು ಶಬ್ದಾರ್ಥದಲ್ಲಲ್ಲದೇ ಕಾಂಚಾಣ ಸಿದ್ಧಿಯಲ್ಲೂ ಮನನಮಾಡಿಕೊಳ್ಳಬೇಕು. ಗಳಿಕೆಯೇ ಮುಖ್ಯವಾಗಿ ಇತರ ಸಹಜ ಬಯಕೆಗಳನ್ನು ಅದುಮಿಟ್ಟರೆ ಸಂಸಾರದ ಸುಖ ನಾಶವಾಗುತ್ತದೆ. ಕಾಮೇಚ ನಾತಿಚರಾಮಿ ಅನ್ನುವುದು ಕೇವಲ ದೈಹಿಕ ವಾಂಛೆಯ ನಿಗ್ರಹಣೆಯಲ್ಲ ಬದಲಿಗೆ ಅದು ಲೌಕಿಕದ ಇತರ ಆಕರ್ಷಣೆಗಳಿಂದಲೂ ಮುಕ್ತವಾಗುವ ಉಪಾಯ.
ದಾಂಪತ್ಯದಲ್ಲಿ ಪ್ರೀತಿ, ಪಾವಿತ್ರ್ಯ,ನಿಷ್ಠೆ, ಸಾಮರಸ್ಯಗಳನ್ನು ಉಳಿಸಿ ಬೆಳಸಿಕೊಳ್ಳುವುದು ನಿಜಕ್ಕೂ ದಿವ್ಯವೇ. ದಾಂಪತ್ಯದಿವ್ಯದಲ್ಲಿ ಮಿಂದು ಪವಿತ್ರವಾಗುವ ಜೋಡಿಗೆ ದಾಂಪತ್ಯವೆನ್ನುವುದು ಕೇವಲ ದೈಹಿಕ ಕಾಮನೆಯ ಅಥವ ವ್ಯಾವಹಾರಿಕತೆಯ ಕುರುಹಲ್ಲ. ಬದಲಿಗೆ ಅದು ಅವರ ವ್ಯಕ್ತಿ ಜೀವನದ ಉದಾತ್ತೀಕರಣ ಮತ್ತು ಸಮಷ್ಠಿಯ ಹಿತ ಸಾಧನ. ಪರಿಶುದ್ಧ ವೈವಾಹಿಕ ಜೀವನ ಹಾಗೂ ಹಿತವಾದ ಕೌಟುಂಬಿಕ ಬಾಂಧವ್ಯ ಧರ್ಮೇಚ ಅರ್ಥೇಚ, ಕಾಮೇಚ ಮಾತುಕೊಟ್ಟುಕೊಂಡಿರುವವರೆಲ್ಲರ ಮಂತ್ರವಾದರೆ ವಿಚ್ಛೇಧನೆಗಳ ಪ್ರಾಬಲ್ಯ ಕಡಿಮೆಯಾದೀತು.