ಬೆಲೆ ಕುರ್ಛಿಗೊ? ಮನುಜನಿಗೊ?

ಬೆಲೆ ಕುರ್ಛಿಗೊ? ಮನುಜನಿಗೊ?

 ಬೆಲೆ ಕುರ್ಚಿಗೋ?ವiನುಜನಿಗೋ?
ನೀನು ಯಾರು? ಎಂಬ ಪ್ರಶ್ನೆಗೆ ಉತ್ತರವೇನು? ನಿನ್ನನ್ನು ಏನೆಂದು ಗುರ್ತಿಸಿಕೊಳ್ಳುವೆ ಎಂಬ ಪ್ರಶ್ನೆಗೆ ಅನುಭವೀ ಹಿರಿಯರೊಬ್ಬರು ಹೇಳುತ್ತಾರೆ.  ತಾಯಿಯ ಗರ್ಭದಲ್ಲಿದ್ದಾಗ ನನ್ನನ್ನು ಪಿಂಡ ಎಂದು ಕರೆದರು, ಜನನದ ನಂತರ ನಾನು  'ಶಿಶು'ವಾದೆ.  ನಂತರ ಕಿಶೋರ, ಯುವಕ, ಗೃಹಸ್ಥ, ಮುದುಕ, ಎಂಬಂತೆ ಅನೇಕಾನೇಕ ಬಿರುದುಗಳಿಂದ ನನ್ನನ್ನು ಕರೆಯುತ್ತಾ ಹೋದರು.  ನಾನು ಈಗಲೇ ಆಗಲೇ ಎಂಬಂತೆ ಮೃತ್ಯುವಿನ ಹಾದಿಯನ್ನು ಕಾಯುತ್ತಿದ್ದೇನೆ.  ಆ ನಂತರದಲ್ಲಿ ನನ್ನನ್ನು 'ಹೆಣ' ಎಂದು ಕರೆವರು.  ಇದು ನನ್ನ ಜೀವನದ ಅನೇಕಾನೇಕ ಘಟ್ಟಗಳು ಹಾಗೂ ನನ್ನನ್ನು ಜನರು ಕರೆಯುವ ಹೆಸರುಗಳು ಎಂದು.
ಮಗುವಾಗಿದ್ದಾಗ ಹೆದರಿಕೆ ಏನೆಂದು ತಿಳಿದಿರಲಿಲ್ಲ.  ಪ್ರೀತಿ, ಮುಗ್ಧತೆ ಹಾಗೂ ಎಲ್ಲರೂ ನನ್ನವರೆಂಬ ಭಾವನೆಯಿಂದ ಭೂಮಿಯ ಮೇಲೆ ಜನ್ಮತಾಳಲು ಕಾರಣನಾದ ಆ ಸೃಷ್ಟಿಕರ್ತನ ಜೊತೆ ಬಾಂದವ್ಯ ಬೆಳೆಸಿದ್ದೆ. ಈಗ ಜನರನ್ನು ಗುರ್ತಿಸುವುದು ಅವರಿಗೆ ತಗುಲಿಸಿರುವ ಪದವಿ,ಹುದ್ದೆಗಳಿಂದ.  ಅವರ ಜಾತಿ, ಮತ್ತು ಹಣಬಲದಿಂದ! ಇದನ್ನು ಕೇಳುತ್ತಿದ್ದ ನನಗೆ, ಇತ್ತೀಚಿನ ಘಟನೆ ನೆನಪಿಗೆ ಬಂದಿತ್ತು. ಸಮಾರಂಭವೂಂದಕ್ಕೆ ಕರೆಯಲು ನನ್ನ ಶಿಷ್ಯ ನನ್ನನ್ನು ಹುಡುಕಿಕೊಂಡು ಬಂದಿದ್ದು ನನಗೆ ಬಹಳ ಸಂತೋಷ ತಂದಿತ್ತು, ಎಲ್ಲರಿಗೂ ದೂರವಾಣಿ ಹಾಗೂ ಮೆಸೇಜ್ ಮೂಲಕ ಆಹ್ವಾನ ನೀಡುತ್ತಿದ್ದ ಆತ ನನ್ನನ್ಮ್ನ ಖುದ್ದಾಗಿ ಬಂದು ಕರೆಯಲು ಕಾರಣವೇನು  ಎಂದು ತಿಳಿಸಿದಾಗ ಅವಾಕ್ಕಾದೆ. ನಾನು ಕುಳಿತ ಕುರ್ಚಿಗೆ ಮರ್ಯಾದೆ ಕೊಟ್ಟು , ಆಹ್ವಾನಿಸಲು ಕಚೇರಿಯವರೆಗೂ ಆತ ಬಂದಿದ್ದ.
ಓಹ್, ಕುರ್ಚಿಗೆ ಬೆಲೆಯೇ?ಆ ಕುರ್ಚಿ ನನಗೆ ಖಾಯಂ ಅಲ್ಲ.  ಇಂದು ನನಗೆ, ನಂತರ ಬೇರೆ ಯಾರಿಗೋ? ನನ್ನ ಆತ್ಮೀಯ ಶಿಷ್ಯ ಅವನಾದ್ದರಿಂದ ವ್ಯಕ್ತಿಗೆ ಕೊಡುವ ಬೆಲೆ ಮುಖ್ಯ ಎಂದು ಆತನಿಗೆ ತಿಳಿಹೇಳಿದ್ದೆ ಆ ದಿನ!.
ಶ್ರೀಮಂತನಿಗಿಂತ,ಧನಿಕನಿಗಿಂತ,ಹ್ಲದಯವಂತನೇ ಸಿರಿವಂತನಲ್ಲವೇ?ಹ್ಲದಯವಂತಿಕೆ ಯಾರೂ ಕದಿಯಲಾರದ ಸಂಪತ್ತು.ಏನಾದರೂ ಆಗು ಮೊದಲು ಮಾನವನಾಗು ಎಂಬ ಕುವೆಂಪು ರವರ ನುಡಿಯನ್ನು ನಡೆಯಾಗಿಸಬೇಕು.ಮಾನವೀಯ ಮೌಲ್ಯಗಳನ್ನುಹೊತ್ತ , ಪರಿಪೂರ್ಣಮನುಷ್ಯನ ಮುಂದೆ,ಅತ್ಯುನ್ನತ ಪದವಿಯಲ್ಲಿರುವವನೂ ತೃಣಕ್ಕೆ ಸಮಾನನಾಗುವನು.ಪದವಿ,ಪಟ್ಟ ಇವೆಲ್ಲಾ ಕ್ಷಣಿಕ.ಒಳ್ಳೆಯ ವ್ಯಕ್ತಿತ್ವ ಉಸಿರಿರುವ ತನಕ!
ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ

 

Rating
No votes yet

Comments