ಖಾರ ! ?

ಖಾರ ! ?

ಕವನ

 ಖಾರವೆ ಇಲ್ಲದ ಊಟವೆ ಅಲ್ಲವು

ಎಂದರು ರಾಯರು ಮೀಸೆಯ ತಿರುವುತ

ಖಾರದ ಖದರದು ಹೆಂಗಿರಬೇಕು

ಸಾಯುವವರೆಗೂ ನೆನಪಿರಬೇಕು

ನೆನೆದರೆ ಸಾಕು ಮೈ ಬೆವರಿರಬೇಕು

ಖಾರವ ಅರೆಯುವ ಕಲ್ಲನು ನೋಡಲು

ಕಣ್ಣಲಿ ನೀರು ಹರಿದಿರಬೇಕು

ಕಿವಿಯಂಚುಗಳು ಸುಡುತಿರಬೇಕು

ಮಾಡಿದ ಕರಗಳು  ಉರಿತಿರಬೇಕು

ಬರೀ ಖಾರದ ನೆನಪೇ ಹೀಗಿದ್ದರೆ

ಖಾರವ ತಿಂದರೆ ಹೆಂಗಿರಬೇಡ

ಬಾಯಲಿ ನಾಲಿಗೆ ಲಪಲಪವಾಡಲು

ನೆತ್ತಿಯ ಮೇಲೆ ಗಂಗೆಯ ಧಾರೆ

ಕಿವಿಯಲಿ ನಿಲ್ಲದ ಟುಮಟುಮ ಸದ್ದು

ಬಾಯಲಿ ನಿಲ್ಲದ ಜೊಲ್ಲಿನ ಜೋರು

ರೆಪ್ಪೆಯೆ ಆಡದ ಕೆಂಪಿನ ಕಣ್ಣು

ಬುಸುಬುಸುಗುಟ್ಟುವ ಮೂಗಿನ ಹೊಳ್ಳೆ

ಕ್ವಯಕ್ ಕ್ವೊಕ್ ತಾನದ ಬಿಕ್ಕುವ ಶಬ್ದ

ಕುಳಿತಲ್ಲಿಯೆ ಕೈಕಾಲಲಿ ನಾಟ್ಯ

ನವರಂಧ್ರಗಳಲಿ ಹೊಗೆಯಾಡುತ

ಹೊಯ್ದಾಡುವ ಗಂಡನ ನೋಡುತ

ತಟ್ಟಿದ ರೊಟ್ಟಿಯ ಹಂಚಿಗೆ ಹಾಕದೆ

ಹಂಚಲಿ ಸೀಯುವ ರೊಟ್ಟಿಯ ತೆಗೆಯದೆ

ದಿಕ್ಕೇತೋಚದೆ ಸರಬರ ಮಾಡುತ

ಸೀರೆಯ ಸೆರಗನು ಬರಬರ ಹೊದೆಯುತ

ಅವಸರದಲಿ ಮುಸುರೆಯ ನೀರನೆ

ಕುಡಿಯಲು ಕೊಡುವ ಚೆಂದದ ನೀರೆ

ಬಾಯಲಿ ಬೆಲ್ಲವ ತುರುಕುವ ತಾಯಿ

ರಾಯರ ಖಾರವ ತಿನ್ನುವ ಖದಿರಿಗೆ

ಬೆದರಿದರೆಲ್ಲಾ ಮನೆಮಂದಿ

ಬರಿ ತಿನ್ನುವ ವರಸೆಯೇ ಹೀಗಿದ್ದರೆ

ತಿಂದಾದಮೇಲಿನ ಪರಿಯೇ ಬೇರೆ

ನವರಂಧ್ರಗಳಲಿ ಏರಿದ ಉರಿಯು

ಹೊಟ್ಟೆಯ ಗೂಡಲಿ ಡೊಳ್ಳಿನ ಬಡಿತ

ಡರ್ರನೆ ತೇಗುವ ಗಾಳಿಯ ಮೊರೆತ

ಕುಂತಲ್ಲಿ ಕೂಡದ ನಿಂತಲ್ಲಿ ನಿಲ್ಲದ

ಶಥಪಥ ತಿರುಗುವ ನಾಯಿಯ ಪಾಡು

ನೋಡುವ ಮೊದಲೆ ಏರುವ ಸಿಟ್ಟು

ನಿದ್ದೆಯು ಬಾರದೆ ಎಲ್ಲಾ ಎಡವಟ್ಟು

ಅರ್ಧವೆ ಎದ್ದು ಮೈ ಓರೆಯ ಮಾಡುತ

ಪಿರ್ರನೆ ಹೊಡೆಯುವ ಶಬ್ದವೆ ಇಲ್ಲದ

ಫಿರಂಗಿ ಸದ್ದಿಗೆ ಮೂಗೇ ಮುಚ್ಚದ

ಧೀರರು ಎಂದರೆ ರಾಯರು ಒಬ್ಬರೇ

ಎಲ್ಲರ ಪಾಡು ಹೇಳಲು ಬಾರದು

ಮುಚ್ಚಿದ ಮೂಗನು ತೆಗೆಯಲು ಆಗದ

ಕಟ್ಟಿದ ಉಸುರನು ಹಿಡಿದಿಡಲಾರದೆ

ದಡಬಡ ಮಾಡುತ ದೂರಕೆ ಓಡುತ

ಬದುಕಿದೆಯ ಬಡಜೀವವೆ ಎನ್ನುತ

ಉಸಿರಾಡುವರು ಮನೆಯವರೆಲ್ಲ

ಮರುದಿನದ ಕತೆಯೇಬೇರೆ

ಲಾಭದ ಆಸೆಗೆ  ಹಂದಿಯ ಸಾಕಿದ

ತಿಮ್ಮನ ಪಾಡದು ಯಾರಿಗು ಬೇಡ

ಹಾಡಿಗೆ ಬಾರದ ಹಂದಿಯ ನೆನೆದು

ದಿಗಿಲಿಗೆ ಬಿದ್ದನು ತಿಮ್ಮನು ನೋಡಿ

ಹುಡುಕುತ ಹೊರಟನು ಊರಲಿ ಹಂದಿಯ

ರಾಯರ ಮನೆಯ ಮುಂದಿನ ಮೋರೆಯ

ಪಕ್ಕದಿ ಬಿದ್ದಿಹ ಹಂದಿಯ ನೋಡಿ

ಎಬ್ಬಿಸೆ ಏಳದು ಕರೆದರು ತಿರುಗದು

ಹೊತ್ತನು ಹಂದಿಯ ವೈದ್ಯರ ಬಳಿಗೆ

ಸಾಲದ ಕಂತಿನ ಚಿಂತೆಯು ತಿಮ್ಮಗೆ

ಆತಂಕದಿ ವೈದ್ಯರ ಮುಖವನು ನೋಡಲು

ಭಾರೀ ಖಾರವ ತಿಂದಿದೆ ಹಂದಿಯು

ಎಂದರು ವೈದ್ಯರು ಗಂಭೀರದಲಿ

ಔಷಧಿ ಕೊಡುವೆನು ಹೊರಗಡೆ ಬಿಡದಿರು

ಸರಿಯಾಗುವುದು ಎರಡೇ ದಿನದಲಿ

ನೋಡಿದ ನೆನಪು ಬೆಳಗಿನ ಹೊತ್ತಲಿ

ತಂಬಿಗೆ ಹಿಡಿದು ಹೊರಟಿಹ ರಾಯರ

ರಾಯರ ಹಿಂದೆಯೇ ಹಂದಿಯು ಅಯ್ಯೋ

ಹಂದಿಯ ಪಾಡೇ ಹೀಗಿರಬೇಕಾದರೆ

ರಾಯರ ಪಾಡದು ಹೆಂಗೋ ಏನೋ

ಎನ್ನುತ ಓಡಿದ ರಾಯರ ನೋಡಲು

ರಾಯರೆ ಕೂಗಿ ಕರೆದರು ತಿಮ್ಮನ

ಮಾತೇ ಹೊರಡದೆ ನೋಡಿದ ರಾಯರ

ತಿಮ್ಮನ ಪಾಡದು ಯಾರಿಗು ಬೇಡ

ತಿರುಗಿಯು ನೋಡದೆ  ಓಡಿದ ಮನೆಕಡೆ

ಬಡಪಾಯಿ ಹಂದಿಯ ನೆನೆಯುತ

ರಾಯರ ತೆವಲಿನ ಖಾರದ ಕವಳದ

ಜಯಪ್ರಕಾಶಿತ ರಂಜಿತ ಕೃತಿಯಿದು

ಹಾಸ್ಯದ ಲಾಸ್ಯದ ಕನ್ನಡ ಕವನ

ಕನ್ನಡ ಸಿರಿ ಸಂಪದಿಗರಿಗೆ ನಮನ

Comments

Submitted by jayaprakash M.G Thu, 09/20/2012 - 11:11

In reply to by partha1059

ಮೆಚ್ಚುಗೆಗೆ ಮತ್ತು ಫೇಸ್ಬುಕ್ನಲ್ಲೂ ಹಂಚಿದ್ದಕ್ಕೆ ವಿಶೇಷ ವಂದನೆಗಳು ಪಾರ್ಥರವರೆ
ಜಯಪ್ರಕಾಶ

Submitted by jayaprakash M.G Thu, 09/20/2012 - 11:17

In reply to by Krishna Kulkarni

ರುಬ್ಬುವ ಮೊದಲು ಸ್ವಲ್ಪ ಜೀರಿಗೆ ಬಿಸಿ ಮಾಡಿ ಸೇರಿಸಿದಲ್ಲಿ ಊಟದ ನಂತರದ ಅವಾಂತರ ಕಡಿಮೆಯಾಗುವುದು ನಿಮ್ಮ ಮೆಚ್ಚುಗೆಗೆ ವಂದನೆಗಳು ಕ್ರಿಷ್ಣ ಕುಲಕರ್ಣಿಯವರೆ--ಜಯಪ್ರಕಾಶ

Submitted by jayaprakash M.G Thu, 09/20/2012 - 11:28

In reply to by makara

ಶ್ರೀಧರರೇ ವಂದನೆಗಳು ಕಾರ ಮೂಲ ಶಬ್ದ ಖಾರ ಮೆಣಶಿನಕಾಯಿ ಭಾರತಕ್ಕೆ(ಕರ್ನಾಟಕಕ್ಕೆ)ಬಂದನಂತರದ ಶಬ್ದ.ಜಾನಪದದಲ್ಲಿ ಬಾಣಂತಿಯರಿಗೆ ಮತ್ತು ಹೊಸ ಅಳಿಯಂದಿರಿಗೆ ಕೊಡುತ್ತಿದ್ದ ಪೌಷ್ಟಿಕ ಕೊಬ್ಬರಿ ಕಾರ ವಾಸ್ತವವಾಗಿ ಸಿಹಿ.(ಕೊಬ್ಬರಿ+ಬೆಲ್ಲ+ಉತ್ತತ್ತಿ+ಗೋಡಂಬಿ+ಒಣಗಿದದ್ರಾಕ್ಷಿ+ತುಪ್ಪದಲ್ಲಿ ಕರಿದ ತಿನ್ನುವ ಮರದ ಅಂಟು ಇವುಗಳ ಮಿಶ್ರಣಮತ್ತು ಯಥೇಚ್ಚ ತುಪ್ಪ)--ಜಯಪ್ರಕಾಶ