ಮಿತ್ರಾ ಹಿರಣ್ಯಕಾ..

ಮಿತ್ರಾ ಹಿರಣ್ಯಕಾ..

ಕವನ

ಮಕ್ಕಳೆ ಕೇಳಿ ಕಥೆಯನು ಹೇಳುವೆ|

ಬೇಟೆಯ ಬೇಡನ ಬಲೆಯಲಿ ಬಂಧಿತ|

ಕಪೋತ ಬಳಗವು ಕಷ್ಟದಿ ಸಿಲುಕಲು |

ಅಳುವುದ ಬಿಟ್ಟು ಯುಕ್ತಿಯ ಹೂಡಿ |

ಧೈರ್ಯದಿ ಒಟ್ಟಿಗೆ ಒಗ್ಗಟ್ಟಲಿ ಹಾರಿ|

ಮಿತ್ರನ ಸಹಾಯದಿ ಬಿಡುಗಡೆ ಪಡೆದ|

ಕಥೆಯನು ಕನ್ನಡ ಕಣ್ಮಣಿಗಳೆ ಕೇಳಿ||

 

ಪಂಪಾತೀರದ ಹಂಪೆಯ ಕಾಡಲಿ|

ಚಿತ್ರಗ್ರೀವನು ಕಪೋತ ರಾಜನು|

ತನ್ನಯ ಬಳಗದ ಜೊತೆಯಲೆ ಇರುವನು|

ನಿತ್ಯವು ಹಾರುತ ಕಾಳನು ಹುಡುಕುತ |

ಹೊಟ್ಟೆಯ ತುಂಬಿಸಿ ಮರಿಗಳ ಪೊರೆಯುತ|

ಬಾನಲಿ ನಲಿಯುತ ಸುಖದಿಂದಿರುವ|

ಕಪೋತ ಬಳಗವ ನಿತ್ಯವು ನೋಡಲು|

ಬಲೆಯನು ಬೀಸಿ ಹಿಡಿಯುವ ಆಸೆಯು |

ಹೆಚ್ಚಿತು ಮನದಲಿ ಬೇಟೆಯ ಬೇಡಗೆ|

ಹೊರಗಡೆ ಹೊಲದಲಿ ಅಕ್ಕಿಯ ಬೀರಿದ|

ಕೆಳಗಡೆ ಠಕ್ಕಿನ ಬಲೆಯನು ಹರಡಿದ|

ಅಕ್ಕಿಯು ಕೆಳಗಡೆ ಬಲೆಯದು ಮೇಲೆ|

ಹಕ್ಕಿಯ ಹಿಡಿಯಲು ಕುಳಿತನು ಹೊಂಚಿ ||

 

ಮೋಸವ ತಿಳಿಯದ ಕಪೋತ ಬಳಗವು|

ಹರಡಿದ ಅಕ್ಕಿಯ ನೋಡಲು ಕೆಳಗಡೆ|

ಅಕ್ಕಿಯ ಆಸೆಗೆ ಹಸಿವೆಯು ಹೆಚ್ಚಲು|

ನಲಿಯುತ ಇಳಿದು ಅಕ್ಕಿಯ ಮುಕ್ಕಲು|

ಬೇಡನ ಬಲೆಯಲಿ ಮೋಸದಿ ಸಿಲುಕಲು|

ಮಿತ್ರರ ರೋದನ ಮುಗಿಲನು ಮುಟ್ಟಲು|

ರೋದಿಸೆ ಏನೂ ಪ್ರಯೋಜನ ವಾಗದು|

ಧೈರ್ಯವಗೆಡದೆ ಚತುರತೆಯಿಂದಲೆ|

ಬಿಡುಗಡೆ ಪಡೆಯುವ ಯೋಜನೆಯೊಂದಿದೆ|

ಗಲಾಟೆ ಮಾಡದೆ ಕೇಳಿರಿ ಸುಮ್ಮನೆ|

ಚಾಚೂ ತಪ್ಪದೆ ಪಾಲಿಸಿ ಸೂಚನೆ|

ಎನ್ನುತ ರಾಜನು ಧೈರ್ಯವ ತುಂಬಲು||

 

ಮತಂಗ ಪರ್ವತ ಗುಹೆಯಾ ಬಿಲದಲಿ|

ಹಿರಣ್ಯಕನೆಂಬ ಮೂಷಿಕ ರಾಜನು|

ನನ್ನಯ ನಲ್ಮೆಯ ಸ್ನೇಹಿತನಿರುವನು|

ಅವನೇ ಬಂಧನ ಬಿಡಿಸುವ ಬಂಧುವು|

ಹೆಮ್ಮೆಯ ರೆಕ್ಕೆಯೆ ನಮ್ಮಯ ಶಕ್ತಿಯು|

ತಲೆಯೊಳಗಿರಲು ಬುದ್ಧಿಯ ಯುಕ್ತಿಯು|

ಬೇಡನು ಬರಲು ಮೂರನು ಎಣಿಸುವೆ|

ಬಲೆಯ ಸಮೇತವೆ ಒಟ್ಟಿಗೆ ಹಾರುವ|

ಎಂದನು ಧೈರ್ಯದ ಕಪೋತ ರಾಜನು|

ಬೇಡನು ಬರುತಿಹ ಸದ್ದನು ಕೇಳಲು|

ಮೂರನೆ ಸಂಖ್ಯೆಯ ತಕ್ಷಣ ಹೇಳಲು|

ಒಗ್ಗಟ್ಟಲಿ ಎಲ್ಲರು ಒಟ್ಟಿಗೆ ಹಾರಲು||

 

ಬಾಯನು ಬಿಡುತಲಿ ಬೇಡನು ನೋಡಿದ|

ಓಡಿದ ಬೇಡನು ಬೊಬ್ಬೆಯ ಹೊಡೆಯುತ|

ಬಲೆಯ ಸಮೇತ ಬಾನಲಿ ಹಾರುವ|

ಪಾರಿವಾಳಗಳ ಕೋಪದಿ ಬೈಯುತ|

ಹಕ್ಕಿಯು ಸಿಕ್ಕದೆ ಬಲೆಯೂ ಸಿಕ್ಕದೆ|

ಬೇಡನು ನಡೆದನು ಏನೂ ದಕ್ಕದೆ||

 

ಗಗನದಿ ಹಾರುತ ಬಲೆಯನು ಹೊತ್ತು|

ಮತಂಗ ಪರ್ವತ ಮುಟ್ಟಿದ ಮಿತ್ರರು|

ಇಳಿದರು ಇಲಿಯ ಬಿಲದಾ ಬಳಿಯಲಿ|

ಮಿತ್ರಾ ಹಿರಣ್ಯಕಾ ಮಿತ್ರಾ ಹಿರಣ್ಯಕಾ|

ಆತಂಕದಿ ಕೂಗಲು ಕಪೋತರಾಜನು|

ಓಡುತ ಬಂದನು ಮೂಷಿಕ ರಾಜನು|

ಮಿತ್ರನ ಕಷ್ಟದ ಸ್ಥಿತಿಯನು ನೋಡಲು|

ಮರುಗಿದ ಹಿರಣ್ಯಕ ಬಂಧನ ಬಿಡಿಸಲು |

ಬಲೆಯನು ಕಡಿಯುವ ಆತುರ ತೋರಲು|

ಮೊದಲಲಿ ಬಿಡಿಸು ಎನ್ನಯ ಪ್ರಜೆಗಳ|

ಕೊನೆಯಲೆ ಬರಲಿ ನನ್ನಯ ಸರದಿ|

ಎನ್ನಲು ಚಿತ್ರಗ್ರೀವನು ಧೃಡತೆಯಲಿ|

ಪ್ರಜೆಗಳ ಕ್ಷೇಮವೆ ಮೊದಲಲಿ ರಾಜಗೆ|

ಮೆಚ್ಚಿದ ಹಿರಣ್ಯಕ ಮಿತ್ರನ ಮಾತಿಗೆ|

ಚೂಪಿನ ಹಲ್ಲಲಿ ಬಲೆಯನು ಕಡಿಯುತ|

ಎಲ್ಲರ ಬಂಧನ ಬಿಡಿಸಿದ ಹಿರಣ್ಯಕ||

 

ಒಗ್ಗಟ್ಟಿದ್ದರೆ ಎಲ್ಲವು ಸಾಧ್ಯವು|

ಸ್ನೇಹದ ಒಲವು ಭಾರೀ ಬಲವು|

ಎರೆಡೂ ಇದ್ದರೆ ಎಲ್ಲಾ ಗೆಲುವು|

ಮೂಷಿಕ ರಾಜಗೆ ವಂದನೆ ಸಲ್ಲಿಸಿ|

ಕಪೋತ ಬಳಗವು ಮರಳಲು ಗೂಡಿಗೆ|

ಮಿತ್ರರ ಬಂಧನ ಬಿಡಿಸಿದ ಹಿರಣ್ಯಕ|

ಬೀಗುತ ಹಿಗ್ಗಲಿ ಬಿಲವನು ಸೇರಿದ||

 

ರಾಜನ ಮಕ್ಕಳ ಬುದ್ಧಿ ವಿಕಸನ|

ವಿಷ್ಣುಶರ್ಮನ ಪಂಚತಂತ್ರ ಕಥನ|

ಜಯಪ್ರಕಾಶಿತ ಕನ್ನಡ ಕವನ|

ಕನ್ನಡ ಸಿರಿ ಸಂಪದಿಗರಿಗೆ ನಮನ.||