ಬರ

ಬರ

ಬರ!!! ಇದು ಅಂತಿಂಥ ಬರ ಅಲ್ಲ...

ಇಲ್ಲಿ ತಿನ್ನುವ ಅನ್ನಕ್ಕೆ ಬರ...ಕುಡಿಯುವ ನೀರಿಗೆ ಬರ...ಬೀಸುವ ಗಾಳಿಗೆ ಬರ...ಮಗುವಿನ ನಗುವಿಗೆ ಬರ...ಅಪ್ಪ ಅಮ್ಮಂದಿರ ನಗುವಿಗೆ ಬರ...ಸ್ನೇಹಕ್ಕೆ ಬರ..ಸಂಬಂಧಗಳಿಗೆ ಬರ...

ಇಂಥಹ ಊರಲ್ಲದ ಊರಿನಲ್ಲಿ ಎಲ್ಲ ಊರಿನಂತೆ ಇಲ್ಲೂ ಮಳೆ ಗಾಳಿಯಾಗಿ, ಹೊಳೆಗಳು ನದಿಗಳು ಮೈದುಂಬಿ, ಹೊಲ ಗದ್ದೆಗಳು ಹಚ್ಚ ಹಸುರಿನಿಂದ ತುಂಬಿಕೊಂಡು, ಮನೆಗಳಲ್ಲಿದ್ದ ಕಣಜಗಳು ಸದಾಕಾಲ ಭತ್ತ ರಾಗಿಯಿಂದ ತುಂಬಿಕೊಂಡು, ಮನೆ ಮಂದಿಯೆಲ್ಲ ನಗುನಗುತ್ತ ಇಡೀ ಊರಿಗೆ ಊರೇ ಸಂಭ್ರಮದಿಂದ ತುಂಬಿಕೊಂಡಿತ್ತು.

ಇಂಥಹ ಊರು ಇಂದು...ಛೆ!! ನಂಬಲಸಾಧ್ಯವಾಗುವ ಹಾಗೆ ಬದಲಾಗಿ ಹೋಗಿದೆ. ಕೆರೆಗಳು ನಮ್ಮಲ್ಲಿ ನೀರೆ ಇರಲಿಲ್ಲವೇನೋ ಎನ್ನುವ ಹಾಗೆ ಬರಡಾಗಿ ಹೋಗಿದ್ದವು....ಇದ್ದ ಅಂತರ್ಜಲವನ್ನು ಬೋರ್!! ಎಂಬ ಮಹಾಮಾಯೆ ನುಂಗಿ ಹಾಕಿದೆ. ಇನ್ನು ನದಿಗಳಂತೂ...ಯಾವುದೋ ದೊಡ್ಡ ಬೆಟ್ಟವನ್ನು ಪುಡಿ ಮಾಡಿ ಆ ಕಲ್ಲುಗಳನ್ನು ಸಾಲಾಗಿ ಚೆಲ್ಲಿಕೊಂಡು ಹೋಗಿದ್ದಾರೆನೋ ಎನ್ನುವ ಹಾಗೆ ಆಗಿದ್ದವು....ಬಾವಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಜನರು ಮಾಡಿಕೊಂಡ ತಾಣದಂತೆ ಪಾಳು ಬಿದ್ದು ಹೋಗಿವೆ.

ಒಂದೊಮ್ಮೆ ಮಳೆಗಾಲ ಬಂತೆಂದರೆ ಆಗಸಕ್ಕೆ ತೂತು ಬಿದ್ದಿದೆ ಏನೋ ಎನ್ನುವಷ್ಟು....ನದಿಗಳು...ಕೆರೆಗಳು...ಹಳ್ಳಗಳು...ತುಂಬಿ ಕೋಡಿ ಹರೆಯುವಷ್ಟು....ಒಮ್ಮೆ ತುಂಬಿದರೆ ಮುಂದಿನ ಮಳೆಗಾಲದವರೆಗೂ ಚಿಂತಿಸದಷ್ಟು ಮಳೆಯನ್ನು ತೋರಿಸುತ್ತಿದ್ದ ಆಗಸ ಇಂದು ಯಾರೋ ಮೇಲೆ ಹೋಗಿ ಆ ತೂತಿಗೆಲ್ಲ ಮೇಣವನ್ನು ಮೆತ್ತಿ ಎಲ್ಲಿಂದಲೂ ಒಂದೇ ಒಂದು ಹನಿ ಭೂಸ್ಪರ್ಶ ಮಾಡದಂತೆ ಆಗಿದೆ..

ಊರಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಮರಗಳು ಎಷ್ಟು ದಟ್ಟವಾಗಿತ್ತೆಂದರೆ ಸೂರ್ಯ ತನ್ನ ಪ್ರತಾಪವನ್ನು ತೋರಿಸಲು ಹರಸಾಹಸ ಪಡಬೇಕಾಗಿತ್ತು. ಅದೇ ಸೂರ್ಯ ಇಂದು ಯಾವುದೇ ಅಡ್ಡಿ ಆತಂಕ ಇಲ್ಲದೆ ಎಲ್ಲೆಡೆ ರಾಜಾರೋಷವಾಗಿ ತನ್ನ ಪ್ರತಾಪವನ್ನು ತೋರುತ್ತಿದ್ದಾನೆ.

ಜನರ ಸ್ವಾರ್ಥ, ಹಣದ ಆಸೆಗೆ ನೂರಾರು ವರ್ಷಗಳ ಕಾಲ ಬಾಳಿ ಬದುಕಿದ ವಯೋವೃದ್ಧ ಮರಗಳು ತಮ್ಮನ್ನು ಕೊಲ್ಲಲು ಬಂದ ಹಂತಕರಿಂದ ತಪ್ಪಿಸಿಕೊಳ್ಳಲು ಹಾಕಿದ ಕಣ್ಣೀರು ಯಾರಿಗೂ ಕಾಣದೆ ಧರೆಗುರುಳಿದವು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ಅತಿಥಿಯಂತೆ ಬಂದು ಹೋಗುತ್ತಿದ್ದ ಮಳೆಗೆ ಅಲ್ಪ ಸ್ವಲ್ಪ ಮಳೆಗೆ ಅಲ್ಪ ಸ್ವಲ್ಪ ಬೆಳೆ ಬೆಳೆದು ಅಲ್ಪ ಸ್ವಲ್ಪ ಹಸಿರು ಉಳಿಸಿಕೊಂಡಿದ್ದ ಹೊಲ ಗದ್ದೆಗಳು ಸೂರ್ಯನ ಕೆಂಗಣ್ಣಿಗೆ ಗುರಿಯಾಗಿ ತನ್ನ ಹಚ್ಚ ಹಸುರಿನ ಬಟ್ಟೆಯನ್ನು ಕಳಚಿ ನಗ್ನವಾಗಿ ತನ್ನ ಅಸ್ಥಿ ಪಂಜರವನ್ನು ತೋರಿಸುತ್ತ ಮಲಗಿದೆ.

ಸದಾಕಾಲ ಮೊಸರು, ಮಜ್ಜಿಗೆ, ಬೆಣ್ಣೆಯಿಂದ ತುಂಬಿದ್ದ ಗಡಿಗೆಗಳೆಲ್ಲ ಇಂದು ಬರಿದಾಗಿ ಧೂಳು ಹಿಡಿದು ಮೂಲೆಯಲ್ಲಿ ಒಡೆದ ಚೂರುಗಳಾಗಿ ಬಿದ್ದಿವೆ.ಮೈದುಂಬಿ ಕೆಚ್ಚಲು ತುಂಬಿಹಾಲು ಕೊಡುತ್ತಿದ್ದ ಹಸುಗಳೆಲ್ಲ ಮೇವಿಲ್ಲದೆ ಕೆಚ್ಚಲು ಬರಿದು ಮಾಡಿಕೊಂಡು ಒಣಕಲಾಗಿ ಕೊಟ್ಟಿಗೆಗಳಲ್ಲಿ ಭೂಮಿಗೆ ಭಾರವೆಂಬಂತೆ ಬಿದ್ದಿವೆ...

ಸದಾ ಪಡ್ಡೆ ಹೈಕಳಿಂದ ಕಳ್ಳತನಕ್ಕೆ ಒಳಗಾಗುತ್ತಿದ್ದ ಮಾವಿನ ತೋಟಗಳು ಇಂದು ಬರೀ ಹುಳುಕಾದ ಮಾವಿನ ಕಾಯಿಗಳನ್ನು ಬಿಡುತ್ತ, ಎಲೆಗಳನ್ನು ಉದುರಿಸಿಕೊಂಡು ಕಾವಲುಗಾರನಿಗೆ ಕೆಲಸವಿಲ್ಲದೆ ಬೋಳಾಗಿ...ಕಳ್ಳರಿಲ್ಲದೆ ಬೇಸರವಾಗಿ..ಆತ್ಮಹತ್ಯೆಗೆ ಸಿದ್ಧವಾಗಿ ನಿಂತಿದೆ. ಅದಕ್ಕೆ ಪೋಟಿ ಎಂಬಂತೆ ತನ್ನೊಡಲಲ್ಲಿ ಸಮೃದ್ಧವಾದ ಸವಿಯಾದ ನೀರನ್ನು ತುಂಬಿಕೊಂಡು ಎಲ್ಲರನ್ನೂ ತಣಿಸುತ್ತಿದ್ದ ತೆಂಗಿನ ಮರಗಳು ಇಂದು ದಾಳಿಕೋರರು ಪಕ್ಕದಲ್ಲೇ ನಡೆದು ಹೋದರು ಮರಕ್ಕೆ ಸೂತಕ ಬಂದಿದೆಯೇನೋ ಎನ್ನುವಂತೆ ಅದನ್ನು ಮುಟ್ಟದೆ ಮೇಲೆ ತಲೆ ಎತ್ತಿ ಸಹ ನೋಡದೆ ಹೋಗುವುದ ಕಂಡು ಮರುಕ ಪಡುತ್ತಿದೆ.

ನಗ್ನವಾಗಿದ್ದ ಹೊಲಗದ್ದೆಗಳ ಮೇಲೆ, ಒಣಗಿ ಹೋಗಿದ್ದ ಕೆರೆಗಳ ಮೇಲೆ JCB ಯ ಅತ್ಯಾಚಾರ ಶುರುವಾಗಿ ಮರಳು ಧಂಧೆ ಯಥೇಚ್ಚವಾಗಿ ಸಾಗುತ್ತಿದೆ, ಒಂದು ಕಾಲದಲ್ಲಿ ತನಗೆ ಅನ್ನ ನೀಡುತ್ತಿದ್ದದ್ದು ಇದೆ ಭೂಮಿಯಂದು ಮರೆತು ಮಾಲೀಕರು ವೇಶ್ಯೆ ಗೃಹಕ್ಕೆ ಮಾರಿದಂತೆ ಭೂಮಿಯನ್ನು ಮಾರುತ್ತಿದ್ದಾರೆ.

ಎಷ್ಟು ಮೊಗೆದರೂ ಖಾಲಿಯಾಗದಿದ್ದ ಕಣಜಗಳು ಇಂದು ತನ್ನೊಡಲಲ್ಲಿ ಇಲಿ,ಜಿರಳೆ, ಹಲ್ಲಿಗಳನ್ನು ತುಂಬಿಕೊಂಡು ಅವುಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.

ಬಹುಷಃ ಇದಕ್ಕಿಂತ ಇನ್ನೇನೂ ಘೋರ ಆಗದಿರಲು ಸಾಧ್ಯವಿಲ್ಲವೇನೋ....

ಆದರೆ ಆಗಿರುವ ಈ ಘೋರಗಳಿಗೆ ಕಾರಣವೇನು?

ಕಾರಣ ಯಾರು???

Rating
No votes yet

Comments

Submitted by sathishnasa Wed, 09/26/2012 - 11:43

>>ಕಾರಣ ಯಾರು???<< ನಾವುಗಳೆ ಕಾರಣ ಜಯಂತ್ ರವರೇ ನಮ್ಮಲ್ಲಿನ ಸ್ವಾರ್ಥದ ಮತ್ತು ಎಲ್ಲ ತನ್ನದಾಗ ಬೇಕೆಂಬ ದರಾಸೆಯಿಂದ ಇಂದು ಈ ಪರಿಸ್ಥಿತಿ ತಂದುಕೊಂಡಿದ್ದೇವೆ
...ಸತೀಶ್

Submitted by sathishnasa Wed, 09/26/2012 - 11:46

In reply to by sathishnasa

>>ಕಾರಣ ಯಾರು???<<
ನಾವುಗಳೆ ಕಾರಣ ಜಯಂತ್ ರವರೆ ನಮ್ಮ ಸ್ವಾರ್ಥದ ಮತ್ತು ಎಲ್ಲ ಪಡೆಯಬೇಕೆಂಬ ದುರಾಸೆಯಿಂದ ಇಂದು ಈ ಪರಿಸ್ಥಿತಿ ನಾವೆ ತಂದು ಕೊಂಡಿದ್ದೇವೆ ಮೇಲಿನ ಪ್ರತಿಕ್ರಿಯೆಯಲ್ಲಿ ಪೂರ್ಣ ಪದಗಳು ಬಂದಿಲ್ಲ ಅದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ಸೇರಿಸಿದ್ದೇನೆ
...ಸತೀಶ್

Submitted by venkatb83 Wed, 09/26/2012 - 18:04

In reply to by partha1059

ಈ ಭೂಮಿ ನಮ್ ಅವಶ್ಯಕತೆಗಳನ್ನು ಪೂರೈಸುತ್ತದೆ-ಆಶೆಗಳನ್ನು ಪೂರೈಸುತ್ತದೆ - ದುರಾಸೆಯನ್ನಲ್ಲ - ಹೇಳಿದ್ದು ಮಹಾತ್ಮ ಗಾಂಧೀ ಅವರು ಅಂತ ಬೀ ಈ ಎಲ್ ಸರ್ಕಲ್ ಹತ್ತಿರದ ಗೋಡೆ ಮೇಲೆ ಬರಹ ಇದೆ... ಅದು ನಿಜವೇ ಇರ್ಬೇಕು...'

ಹಳ್ಳಿಯಿಂದ ದಿಲ್ಲಿಯವೆರ್ಗೆ ಬೇಜಾನ್ ಬದಲಾವಣೆಗಳು ಆಗಿವೆ...ಜನರಲ್ಲಿ.. ಆದ್ರೆ ನಾವ್ ಗೂಬೆ ಕೂರಿಸೋದು ಯಾರ್ ಮೇಲೆ ಗೊತ್ತ??

ಕಾಲ ಬದಲಾಗಿದೆ ಅಂತ...:((೯
ಆಗಲೂ ಅದೇ ಕಾಲ್ ಈಗಲೂ ಅದೇ ಕಾಲ ...!!

ಬರ ಎನ್ನೋದು ನಿಜವಾದ ಅರ್ಥದಲ್ಲಿ ನಿಮ್ಮ ಬರಹದಲಿ ಮೂಡಿದೆ....

ಶುಭವಾಗಲಿ

ನನ್ನಿ
\|

Submitted by Prakash Narasimhaiya Wed, 09/26/2012 - 21:51

In reply to by venkatb83

ಆತ್ಮೀಯ ಜಯಂತರೆ,
ನಾವೇ ಕಾರಣ. ನಮ್ಮ ಶೋಧನೆಯಲ್ಲಿ ಇವೆಲ್ಲ ಅನಿವಾರ್ಯ ಅನಿಸಿಬಿಟ್ಟಿದೆ. ಯಾರಿಗೂ ಪರಿಸರ ಬೇಡ ಮುದಿ ಅಪ್ಪ ಅಮ್ಮನ ತರಹ!!! ತನ್ನ ಹಳ್ಳಿ , ತನ್ನ ಮನೆ ಬೇಡ. ಮನುಷ್ಯನ ಆಸೆಗೆ ಮಿತಿಯೇಲ್ಲಿದೆ? ಭೂಮಿಯನ್ನು ಬಿಡಿ.... ಆ ಮಂಗಳನನ್ನು ಬಿಟ್ಟಿಲ್ಲ, ಈ ದುರಾಸೆ ಮಾನವ.
ಒಳ್ಳೆಯ ವಿಚಾರ.

Submitted by Jayanth Ramachar Thu, 09/27/2012 - 07:40

In reply to by Prakash Narasimhaiya

ನಿಜ ಪ್ರಕಾಶ್ ಅವರೇ ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ನಂತರ ಅದರ ನಷ್ಟವನ್ನು ತಾನೇ ಅನುಭವಿಸಬೇಕಾಗುವುದು ಎಂಬುದನ್ನು ಮರೆತಿದ್ದಾನೆ. ಅದೇ ವಿಪರ್ಯಾಸ.
ಧನ್ಯವಾದಗಳು