ಪ್ರಿಯತಮನಿಗಾಗಿ ಕಾಯುತ್ತಿರುವ ಅಬಿಸಾರಿಕೆಯರ0ತೆ ರಾಯರ ಕವಿತೆಗಳು
ನನ್ನ ನಲ್ಮೆಯ ಕವಿ ಮೈಸೂರು ನರಸಿಂಹಸ್ವಾಮಿಯವರು ದೇಹ ತ್ಯಜಿಸಿದಾಗ ಬರೆದ ನನ್ನ ಮನದ ಮಾತುಗಳು.
ಬಂದ ಮನೆಗೇ ಹೊರಟು ಹೋದರು ರಾಯರು. ಬಂದು-ಹೋಗುನ ನಡುವೆ ನಮ್ಮ ಮನದಲ್ಲಿ ಮನೆಮಾಡಿಬಿಟ್ಟರು. ಹೀಗೂ ಬದುಕಬಹುದೆಂಬುದನ್ನು ಮನಮಿಡಿಯುವಂತೆ ಬರೆದರು. ಅದಕ್ಕೂ ಹೆಚ್ಚಾಗಿ, ಬರೆದಂತೆ ಬದುಕಿದರು. ಅವರ ಜೀವನ್ ಪ್ರೀತಿ ಅದಮ್ಯವಾಗಿತ್ತು. ಎಲ್ಲರ ಮನವನ್ನು ತಲುಪಿ (ತಮ್ಮ ಕವನಗಳ ಮೂಲಕ), ಪ್ರೇಮ-ಪ್ರೀತಿಗಳಿಂದಲೇ ತಮ್ಮ ಕವಿತೆಗಳಿಗೆ ಜೀವ ತುಂಬುತ್ತಿದ್ದ ಕಲಾಕಾರರವರು. ಬಿಡಿ ಹೂಗಳನ್ನು ನಾಜೂಕಾಗಿ ಪೋಣಿಸಿ-ಪೋಷಿಸಿ ಮಾಲೆ ಕಟ್ಟಿ, ಮುಡಿದವರ ಮನೆ-ಮನ ತುಂಬ ಕಂಪು ಬೀರಿದ ಕವಿಶ್ರೇಷ್ಠರವರು. ಇದ್ದೂ ಇಲ್ಲದಂತಿದ್ದರು. ಈಗ ಇಲ್ಲದೆಯೂ (ದೈಹಿಕವಾಗಿ) ಇದ್ದಾರೆ ಸದಾ ನಮ್ಮ ಮನೆ (ಅವರ ಪುಸ್ತಕಗಳು) ಮತ್ತು ಮನ (ಅವರ ಕವಿತೆಗಳು)ಗಳಲ್ಲಿ. ಎಂದಿಗೂ ಹಳತಾಗದ ನಾವೀನ್ಯತೆ ಹಾಗೂ ಯಾವತ್ತಿಗೂ ಕಡಿಮೆಯಾಗದ ಘಮ ಅವರ ಕವಿತೆಗಳಿಗಿದೆ. ಅವರ ಕವಿತೆಗಳು ಅವರಿಷ್ಟದ ಮಲ್ಲಿಗೆಯ ಹಾಗೆ.
ಮೊದಲ ಸಲ, ಮೊಟ್ಟ ಮೊದಲ ಸಲ ಓದಿಕೊಂಡಾಗ ಗೊತ್ತಿರದ ಹುಡುಗಿಯ ಬಾಹ್ಯ ಸೌಂದರ್ಯದಂತೆ. ಪುನರಾವರ್ತಿಸಿದಾಗ ಆಂತರ್ಯದ ಭಾವ, ಭವ್ಯತೆ ಮತ್ತು ಸೌಂದರ್ಯ ಗೋಚರಿಸುತ್ತದೆ. ಎಂಥಹ ಸಾಮಾನ್ಯನಿಗೂ ಅರ್ಥವಾಗುವಂತೆ ಬರೆದದ್ದು ರಾಯರ ಹೆಚ್ಚುಗಾರಿಕೆ. ತುಂಬ ಸಾಮಾನ್ಯ ಹಾಗೂ ಸರಳವೆನಿಸುವ ಪದಗಳನ್ನೇ ಜೋಡಿಸಿ ಅವುಗಳಿಗೆ ಅಸಾಮಾನ್ಯವಾದ ಸೌಂದರ್ಯ ತುಂಬಿ, ಅಲಂಕರಿಸಿ, ಮುಡಿಗೆ ಮುಡಿಸುವ ಕಲೆ ಅವರಿಗೆ ಒಲಿದಷ್ಟು ಮತ್ತ್ಯಾರಿಗೂ ಒಲಿದಿರಲಾರದು (ನಿಸ್ಸಾರರ ಕವಿತೆಗಳಲ್ಲಿ ಒಮ್ಮೊಮ್ಮೆ ನನಗೆ ರಾಯರ ಛಾಯೆ ಕಾಣಿಸುವುದುಂಟು). ಸಿಂಗರಿಸಿದ ಮಧುಮಗಳಂತೆ ಕಂಗೊಳಿಸುತ್ತವೆ ಅವರ ಕಾವ್ಯಕುಸುಮಗಳು.
Hidden beauty manifested so maginificently and majestically in his poems with everlasting fragrance and decoration. ಅಲಂಕರಿಸಿಕೊಂಡು, ತನ್ನ ಪ್ರಿಯತಮನಿಗಾಗಿ ಕಾಯುತ್ತಿರುವ ಅಭಿಸಾರಿಕೆಯಂತೆ ಅವರ ಗೀತೆಗಳು. ಎಂದಿಗೂ ಬಡವಾಗದ ಶ್ರೀಮಂತ ಕವಿತೆಗಳನ್ನು ನಮಗಾಗಿ ಕಟ್ಟಿಕೊಟ್ಟ ರಾಯರು ಅತ್ಯಂತ ಸರಳ ಮತ್ತು ಸುಂದರ ಬದುಕನ್ನು ಬದುಕಿದವರು. ಸರಳತೆಯಲ್ಲಿ ಸೌಂದರ್ಯವಿದೆ ಎಂಬ ಮಾತು ಕೇಳಿದಾಗಲೆಲ್ಲ ನನಗೆ ನೆನಪಿಗೆ ಬರುವುದು ರಾಯರು ಮತ್ತು ಅವರ ಗೀತೆಗಳು. ಸರಳ ಪದಗಳನ್ನು ಜೋಡಿಸಿ ಶ್ರೀಮಂತ ಪದ್ಯಗಳನ್ನು ಹೊಸಿದವರವರು. ಜಡತೆ - ಜಡತ್ವದ ಒಂದು ಕುರುಹೂ ಸಹ ಅವರ ಕವಿತೆಗಳಲ್ಲಿ ಶೋಧಿಸಿದರೂ ಸಿಗುವುದೇ ಇಲ್ಲ.
ಅದು ಸದಾ ಹರಿಯುವ ಚಿಲುಮೆ, ಒಳೆಯುವ ನಕ್ಷತ್ರ, ನಿತ್ಯನೂತನ, ಚಿರಂತನ, ಕಡಿಮೆಯಾಗದ ಘಮ, ಮುದ ನೀಡುವ ತಂಗಾಳಿ..... ಅಲ್ಲಿ ಮುದ್ದು ಮಗುವಿನ ಮುಗ್ದತೆಯಿದೆ, ತುಂಟ ಕಂದನ ಬಾಲ್ಯದ ಲೀಲೆಗಳಿವೆ, ಪ್ರೇಮಿಗಳ ಸಲ್ಲಾಪದಲ್ಲಿರುವ ಮಾಧುರ್ಯವಿದೆ, ಪ್ರೀತಿಯ ಸೆಲೆಯಿದೆ, ವೈವಿಧ್ಯತೆಯಿದೆ, ಭವ್ಯತೆಯಿದೆ, ನಮ್ಮ ಇರವನ್ನೇ ಮರೆಸುವ ಸಂಮೋಹಕ ಶಕ್ತಿಯಿದೆ, ಹೊಸತನವಿದೆ.... ಎಲ್ಲಕ್ಕೂ ಮಿಗಿಲಾಗಿ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುವ ಕರೆಯಿದೆ. ಅವರ ಕಾವ್ಯ ಯಾವಗಲೂ ವಸಂತ ಋತು.
ಬದುಲಿನ ವಿವಿಧ ಮಜಲುಗಳನ್ನು, ಅದರಲ್ಲೂ ದಾಂಪತ್ಯದ ಸವಿ-ಸಿಹಿಯನ್ನು ಅದರ ಎಲ್ಲ ಸೂಕ್ಷ್ಮತೆ, ಹದ ಹಾಗೂ ಒಳ-ಹೊರಗುಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂದ ನನ್ನ ನೆಚ್ಚಿನ ಕವಿ ನರಸಿಂಹಸ್ವಾಮಿಯವರು. ಅವರ ದೈಹಿಕ ಅಸ್ತಿತ್ವ ಅಂತ್ಯಗೊಂಡ ಸುದ್ದಿ ಕೇಳಿ (೨೦೦೩ ರಲ್ಲಿ) ಯಾಕೋ ಮನಸ್ಸು-ಹೃದಯಗಳೆರಡೂ ನನಗರಿವಿಲ್ಲದೆಯೇ ಭಾರವಾದವು. ಕಣ್ಣುಗಳು ಒದ್ದೆಯಾಗಿಬಿಟ್ಟಿದ್ದವು.
ಎಂದಿಗೂ ಹಳತಾಗದ, ಹೃದಯವನ್ನು ಹಗುರಾಗಿಸುವ, ಮನಸ್ಸನ್ನು ಮುದಗೊಳಿಸುವ, ಓದಿದರೆ ಮತ್ತೆ ಮತ್ತೆ ಓದಬೇಕೆನಿಸುವ, ಕೇಳಿದರೆ ಪುನಃ ಪುನಃ ಕೇಳಬೇಕೆನಿಸುವ..... ಸಾವಿಲ್ಲದ ಮುತ್ತಿನ ಪದಗಳನ್ನು ಕಟ್ಟಿಕೊಟ್ಟ ನನ್ನ ಪ್ರೇಮಕವಿಯ ಸಾವಿನ ಸುದ್ದಿ ಆ ವರ್ಷದ ಅತ್ಯಂತ ದುಃಖಕರವೆನಿಸಿತ್ತು ನನಗೆ. ಅವರದೇ ಕವಿತೆಗಳನ್ನು ಓದಲು ಕೂತೆ, ಮನಸ್ಸೆಲ್ಲ ಹಗುರಗುರ. ಮತ್ತೆ ಲವಲವಿಕೆಯಿಂದ ತನ್ನ ಎಂದಿನ ಲಯಕ್ಕೆ ಮನಸ್ಸು ತಿರುಗಿತ್ತು. ಮಲ್ಲಿಗೆಯ ಕವಿಯ ಗೀತೆಗಳ ಕಂಪು ನನ್ನನ್ನು ಎಷ್ಟೋ ಸಲ ಸಂಮೋಹಗೊಳಿಸಿ, ಹೇಳಿಕೊಳ್ಳಲಾಗದ ಆನಂದದ ಸ್ಥಿತೆಗೆ ಕೊಂಡೊಯ್ದಿದೆ. ಅದು ಅವರ ಮತ್ತು ಅವರ ಕಾವ್ಯಕನ್ನಿಕೆಯರ ತಾಕತ್ತು. ಮೊನ್ನೆಯಷ್ಟೇ (೨೦೦೩ ರಲ್ಲಿ) ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನದಲ್ಲಿ ಅವರ ಮೈಸೂರು ಮಲ್ಲಿಗೆ ಹಾಗೂ ದೀಪ ಸಾಲಿನ ನಡುವೆ ಕವನ ಸಂಕಲನಗಳನ್ನು ಕೊಂಡು ತಂದಿದ್ದೆ. ಕೊಟ್ಟದ್ದು ಕೊಂಚ, ಪಡೆದದ್ದಕ್ಕೆ ಬೆಲೆಕಟ್ಟಲು ಯತ್ನಿಸುವುದು ಮೂರ್ಖತನ.
ಮನಸ್ಸಿಗೆ ಬೇಜಾರಾದಾಗ, ಹೃದಯ ಭಾರವೆನಿಸಿದಾಗ, ಸ್ಪೂರ್ತಿಯ ಸೆಲೆ ಬತ್ತಿದಾಗ, ಬದುಕು ಬೇಡವೆನಿಸಿದಾಗ.... ರಾಯರ ಯಾವುದಾದರೊಂದು ಕವಿತೆ ಓದಿದರೆ ಸಾಕು, ಏನೋ ನಿಮ್ಮದಿ. ಮೊಗ್ಗು ಅರಳಿ ತನ್ನ ಕಂಪನ್ನು ಪರಿಸರದ ತುಂಬೆಲ್ಲ ಪಸರಿಸಿದ ಹಾಗೆ. ಕಂಪ ಸೂಸುವುದು ಹೂವಿನ ಗುಣ; ಆಸ್ವಾದಿಸುವುದು ಬಿಡುವುದು ನಮಗ್ಗೆ ಬಿಟ್ಟದ್ದು. ಏಕೆ ತನ್ನ ಘಮವನ್ನು ಆಸ್ವಾದಿಸಲಿಲ್ಲವೆಂದು ಮಲ್ಲಿಗೆ (ರಾಯರು) ಯಾವತ್ತೂ ನಮ್ಮನ್ನು ಕೇಳಲಿಲ್ಲ ಹಾಗು ಕೇಳುವುದೂ ಇಲ್ಲ. ಮೌನ ಅವರ ಆಭರಣ.