ಶಾಕುಂತಲೆ

ಶಾಕುಂತಲೆ

ಕವನ

 

ಸರಿಗಮ ಸಂಗಮ ತಾಳದ  ಥಳುಕಿಗೆ

ಇಂದ್ರನ ಸಭೆಯಲಿ ದಣಿವೆಯೆ ಇಲ್ಲದ

ಬಳುಕುತ ಕುಣಿಯುವ ಯಾಂತ್ರಿಕ ಬಂಧನ

ಅರಸಿಕ ಅಮರರ ನೀರಸ ಸರಸದಿ

ರೋಸಿದ ಮೇನಕೆ ಮೌನದಿ ನವೆದಿರೆ  || 1 ||

 

ನಾರದ ನರರನು ಸಭೆಯಲಿ ಹೊಗಳುತ

ವಿಶ್ವಾಮಿತ್ರನ ತಪಸಿನ ತಾಪವು

ಭೂಮಿಯ ಮೀರುತ ಇಂದ್ರನ ಕಾಡುವ

ಸಂಭವ ತಿಳಿಸಲು ತಪವನು ಕೆಡಿಸುತ

ಮನಿಯನು ಒಲಿಸಲು ಮೇನಕೆ ನೇಮಕ   || 2 ||

 

ವಿಶ್ವಾಮಿತ್ರನ ವಿವರದ ತವಕಕೆ

ನಾರದ ಮುನಿಗಳ ನೈಜದ ವಿವರಣೆ

ಹೊರಟಳು ಮೇನಕೆ ಮುನಿಯನು ಸೇರಲು

ಮದನನ ಬಾಣವ ಮುದದಲಿ ಹೂಡುವ

ಪ್ರಣಯದ ಸರಿಗಮ ಪಂಚಮ ರಾಗದ

ವಸಂತ ವನದೊಳು ಮೋಹದ ಮದನಿಕೆ   || 3 ||

 

ಮೇನಕೆ ಕುಣಿದಳು ಮುನಿಗಳ ಮುಂದೆ

ಶೃಂಗಾರ ಸೊಬಗಿನ ಮತ್ತನು ಸೂಸುತ

ತೀರದ ದಾಹದ ಕಾಮದ ತೃಷೆಯಲಿ

ವಿಶ್ವಾಮಿತ್ರನ ಪ್ರಣಯದ ತಂತಿಯ

ಮೀಟಿದ ಮೇನಕೆ ಮೋಹದ ರಾಗಕೆ

ತಪವನು ತೊರೆದನು ಕೌಶಿಕ ಮುನಿಯು  || 4 ||

 

ದೇವ ಮಾನವ ಪ್ರಣಯದ ಪರಿಣಯ  

ಶಿಶುವಿನ ಪ್ರಸವದ ಪ್ರಮಾಣಿತ ಪ್ರಣಯದ

ಪಯಣವ ಮುಗಿಸಿದ ಮೇನಕೆ ಕೌಶಿಕ

ನಡೆದರು ಶಿಶುವನು ಅನಾಥೆಯ ಮಾಡಿ

ತಾಯ್ತನವರಿಯದ ಮೇನಕೆ ಮಡಿಲು

ಶಿಶುವನು ಅಪ್ಪದ ತಾಪಸಿ ಕೌಶಿಕ    || 5 ||

 

ಮಾನವ ಲೋಕದ ಕೋಗಿಲೆ ಸಂತತಿ

ಸುರತದ ಸುಖವನು ಸವಿಯುವ ಸಿನಿಕರು

ಶಿಶುವನು ಪೊರೆಯುವ ಹೊರೆಯನು ಒಲ್ಲರು

ತಂದೆಯು ರಸ ಋಷಿ ವಿಶ್ವಾಮಿತ್ರ

ತಾಯಿಯು ಮೇನಕೆ ತ್ರಿಭುವನ ಸುಂದರಿ

ಭೂಮಿಯ ಕಾಡಲಿ ಅನಾಥ ಶಿಶುವು    || 6 ||

 

ಶಕುಂತ ಪಕ್ಷಿಯು ಪೊರೆದವು ಮಗುವನು

ಕಣ್ವನೆ ಕರುಣೆಯ ತಂದೆಯು ಶಿಶುವಿಗೆ

ಶಕುಂತ ಶಿಶುವನು ಶಾಕುಂತಲೆ ಎಂದರು

ಕೌಶಿಕ ಕ್ಷಾತ್ರದ ಮೇನಕೆ ದೈವದ

ವಿಶ್ವಾಮಿತ್ರನ ಯತ್ನದ ತೇಜದ

ವರ್ಣದ ಗುಣಗಳ ಆಕರ ಶಿಶುವದು  || 7 ||

 

ಕಣ್ವರ ಕ್ಷೇತ್ರದ ಕ್ಷೀರವ ಹೀರುತ

ಬೆಳೆದಳು ಬಾಲಿಕೆ ಕಣ್ವರ ಕಣ್ಮಣಿ

ಸಖಿಯರ ಸ್ನೇಹದಿ ಬನದಲಿ ಬಿರಿದಿಹ

ಅಪೂರ್ವ ಪುಷ್ಪದ ಭೃಂಗದ ಭಂಗವ

ತೊಡೆಯಲು ಬಂದ ದುಷ್ಯಂತ ರಾಜನ

ಮನವನು ಹೊಕ್ಕಳು ಕನಸಲು ಕಾಡುತ  || 8 ||

 

ಕಾಳಿದಾಸನ ಕಾವ್ಯದ ಕನ್ನಿಕೆ

ರವಿವರ್ಮನ ಕುಂಚದ ಕುವರಿಗೆ

ಗಂಧರ್ವ ವಿಧಿಯ ವಿವಾಹ ಬಂಧನ

ಪ್ರಕೃತಿ ಪುರುಷನ ಅಪೂರ್ವ ಮಿಲನ

ನೆನಪಿನ ಮುದ್ರೆಯ ಉಂಗುರ ಪ್ರದಾನ

ದುಷ್ಯಂತ ವಿದಾಯದ ವಿರಹದ ಪರ್ವ  || 9 ||

 

ಕಾಡಿನ ಕೋಮಲೆ ಬಾಡಿದ ಮುಖವನು

ನಗೆಯಲಿ ಅರಳಿಸೊ ಸಖಿಯರ ಯತ್ನದ

ವಿಫಲ ಪ್ರಯತ್ನದ ಪರಿಯನು ಮೀರಿದ

ವಿರಹದ ಮೊರೆತಕೆ ಪರಿವೆಯೆ ಮರೆತಿಹ 

ಶಕುಂತಲೆ ಪ್ರೇಮದ ದುರಂತ ಸಮಯಕೆ

ದೂರ್ವಾಸ ಮುನಿಗಳ ಆಶ್ರಮ ಪ್ರವೇಶ   || 10 ||

 

ಮಕ್ಕಳ ಮಮತೆಯನರಿಯದ ದೂರ್ವಾಸ

ಅತಿಥಿ ಸತ್ಕಾರದ ಲೋಪದ ಕೋಪದಿ

ಶಪಿಸಿದ ಶಕುಂತಲೆ ಪ್ರಿಯಕರ ಮರೆಯಲು

ಸಖಿಯರು ಶಾಪದ ವಿಶಾಪವ ಕೇಳಲು

ನೆನಪಿನ ಮುದ್ರೆಯ ಮರಳಿಯೆ ತೋರಲು

ಮರೆವಿನ ಶಾಪದ ವಿಮೋಚನೆ ರಾಜಗೆ   || 11 ||

 

ಮುನಿಗಳ ಮುನಿಸಲು ಸುಖಾಂತ್ಯ ಬಯಸಿದ

ಸಖಿಯರು ಸಂತೈಸೆ ಶಕುಂತಲೆ ಮನವ

ಮರೆತನೆ ದೊರೆಯು ಕಾಡಿನ ಬಾಲೆಯ

ಹೃದಯ ಬಿರಿಯುವ ಮೌನದ ರೋದನ

ಬಾರದ ರಾಜನ ಕುಡಿಯದು ಗರ್ಭದಿ

ಶಕುಂತಲೆ ತೊಳಲಿನ ತಳಮಳ ನಿಲ್ಲದು  || 12 ||

 

ಕಣ್ವರ ಗಮನವ ಸಖಿಯರು ಸೂಚಿಸೆ

ಲಜ್ಜಿತ ಮಗಳ ಮನಸಿನ ದುಗುಡವ

ತಿಳಿದಿಹ ಕಣ್ವರು ಒಪ್ಪಿಗೆ ಸೂಚಿಸೆ 

ಬಾಲ್ಯದ ದಿನಗಳ ನೆನಪನು ಹೊತ್ತು  

ತೊರೆದಳು ತೌರನು ಕಂಬನಿ ಮಿಡಿಯುತ

ಕಣ್ವರ ಕುವರಿಯು ಪತಿಗೃಹ ಸೇರಲು   || 13 ||

 

ಭಾರದ ಹೃದಯದಿ ಗರ್ಭಿಣಿ ಶಕುಂತಲೆ

ಗೌತಮಿ ಜೊತೆಯಲಿ ನಡೆದಳು ನಗರಿಗೆ

ಸಖಿಯರ ಸರಸದ ಕೆಣಕುವ ಕಥೆಯಲಿ

ದುಷ್ಯಂತನರಮನೆ ವಾಸದ ಕನಸಲಿ

ನದಿಯನು ದಾಟುವ ಸಮಯದಿ ತಿಳಿಯದೆ

ಬೆರಳಿನ ಉಂಗುರ ಜಾರಿತು ನೀರಿಗೆ    || 14 ||

 

ದೂರ್ವಾಸ ದುಷ್ಕರ ಶಾಪದ ಪಾಶದ

ಮರೆವಿನ ಬಲೆಯಲಿ ಬಂಧಿತ ಶಕುಂತಲೆ

ಧಾವಿಸೆ ದುಗುಡದಿ ದುಷ್ಯಂತನೆಡೆಗೆ

ಪರಿಚಯ ವಿರದ ಭಾವದ ಮುಖದಲಿ

ದುಷ್ಯಂತ ದೊರೆಯು ಯಾರೆಂದು ಕೇಳಲು

ದುರಂತ ಶಕುಂತಲೆ ಮನಸದು ಮುದುಡಿತು   || 15 ||

 

ಲಜ್ಜೆಯ ತ್ಯಜಿಸಿ ಸಂಕೋಚವ ಬಿಟ್ಟು

ಭೃಂಗದ ಭಂಗದ ಗಂಧರ್ವ ಪರಿಣಯ

ಸುರತ ಸಂಗದಿ ಒಡಲಲಿ ರಾಜನ

ಒಲವಿನ ಕುಡಿಯದು ಬೆಳೆದಿಹ ನೆನಪಿನ

ಸುರುಳಿಯ ಬಿಚ್ಚುತ ಬೆರಳಲಿ ತೊಡಿಸಿದ  

ನೆನಪಿನ ಉಂಗುರ ಬೆರಳನು ತೋರಲು    || 16 ||

 

ಉಂಗುರ ವಿಹೀನ ಉಂಗುರದಂಗುಲಿ

ನೋಡಿದ ದುಷ್ಯಂತ ಲೇವಡಿ ಮಾಡಲು

ಸಹಿಸದ ಗೌತಮಿ ಶಕುಂತಲೆ ಒಪ್ಪಿಸಿ

ಕಣ್ವರ ಕುವರಿಯು ಅನೃತ ನುಡಿಯಳು

ಮುನಿಗಳ ಸೂಚನೆ ಮೇರೆಗೆ ಬಂದೆವು

ಸಖಿಯರು ಹೊರಟರು ಶಕುಂತಲೆ ತೊರೆದು  || 17 ||

 

ವಿಧಿ ವಿಲಾಸದ ಬಲೆಯಲಿ ಶಕುಂತಲೆ

ಮೇನಕೆ ವಿಶ್ವಾಮಿತ್ರರ ಮಗಳು

ಕಣ್ವರ ಪ್ರೀತಿಯ ಧಾರೆಯ ಕುವರಿ

ಧರೆಯನಾಳುವ ದೊರೆಯೆ ಪತಿಯು

ಗರ್ಭದಿ ಭಾವಿ ಭರತ ಚಕ್ರೇಶ

ದುಷ್ಯಂತನೆದುರಲೆ ಅನಾಥೆ ಶಕುಂತಲೆ   || 18 ||

 

ತವರಿಗೆ ತೆರಳಲು ಮನಸದು ಒಪ್ಪದು

ನಡೆದಳು ದಿಟ್ಟೆ ದಟ್ಟಡವಿಯ ವಾಸಕೆ

ಮನುಜರಿಗಿಂತಲು ಮೃಗಗಳೇ ಮೇಲು

ಕಾನನ ವಾಸದಿ ಮಗುವಿನ ಜನನ

ಭರತನ ನಾಮದಿ ಪೊರೆದಳು ಮಗನ   || 19 ||

 

ಮನಸಿನ ಮಂಕಲಿ ದುಷ್ಯಂತ ರಾಜನು

ಹಾಸಿಗೆ ಹಿಡಿದನು ರಾಜ್ಯವ ಮರೆತು

ಚಿಂತೆಯ ಮಂತ್ರಿಯು ವೈದ್ಯರ ಕರೆಸಲು

ರಾಜ ವೈದ್ಯರು ಕೈಚೆಲ್ಲಿ ಕುಳಿತರು

ಮನಸಿನ ದೋಷಕೆ ಔಷಧಿ ದೊರೆಯದು

ಆಹಾರ ವಿಹಾರದಿ ರಾಜನು ತೊಡಗಲಿ  || 20 ||

 

ಅರಮನೆ ಅಡಿಗೆಗೆ ಮತ್ಸ್ಯವ ಸೀಳಲು

ಮೀನಿನ ಹೊಟ್ಟೆಯಲಡಗಿದ ಉಂಗುರ

ರಾಜನ ಮುದ್ರೆಯ ಗುರುತಿನ ಉಂಗುರ 

ದೊರೆಯಲು ಮಂತ್ರಿಯು ತೋರಲು ದೊರೆಗೆ

ಶಾಪ ವಿಶಾಪದ ಶಕುಂತಲೆ ನೆನಪಲಿ

ದೂರಾಯಿತು ದೊರೆಯ ಮನಸಿನ ಖಿನ್ನತೆ  || 21 ||

 

ಪತ್ನಿಯ ಹುಡುಕಲು ಕಾಡಿಗೆ ಓಡಿದ

ಕಣ್ವರ ಕೇಳಲು ಶಕುಂತಲೆ ದೊರೆಯದೆ

ಕಾಡಲಿ ಬೇಡರ ಪಡೆಯನು ಕೇಳಲು

ದೂರದ ದಟ್ಟನೆ ಕಾಡಿನ ಮಧ್ಯದ

ಕುಟೀರದಲಿರುವ ಮಾಹಿತಿ ಪಡೆದು

ನಡೆದನು ಹುಡುಕಲು ಪತ್ನಿಯ ಪುತ್ರನ  || 22 ||

 

ಸಿಂಹವ ಮಣಿಸುತ ಹಲ್ಲನು ಎಣಿಸುವ

ಸಾಹಸ ಮೆರೆಯುವ ಭರತನ ಕರೆಯಲು

ದುಷ್ಯಂತ ನೋಡಿದ ಪತ್ನಿಯ ಪುತ್ರನ

ಮರೆತಿಹ ತಪ್ಪಿನ ಕ್ಷಮೆಯನು ಯಾಚಿಸೆ

ಶಕುಂತಲೆ ರಾಜನ ತಪ್ಪನು ಮನ್ನಿಸಿ

ಜೊತೆಯಾದಳು ಪತಿಗೆ ಭರತನ ಸಹಿತ  || 23 ||

 

ಭಾರತ ಕಥನದ ದುಷ್ಯಂತ ಪ್ರಸಂಗದ

ಕಾಳಿದಾಸನ ಅಭಿಙಾನ ಶಾಕುಂತಲೆ

ಸಂಸ್ಕೃತ ನಾಟಕ ತುಂತುರು ಹನಿಗಳ

ಪಾವನ ಸ್ನಾನದ ವಿನಯದ ಯತ್ನದ

ಜಯಪ್ರಕಾಶಿತ ಕನ್ನಡ ಕವನ          || 24 ||

Comments