ಹೀಗಿದೆ"ಪ್ರಮೋದ ಮಹಾಜನ್ ಹತ್ಯೆ"

ಹೀಗಿದೆ"ಪ್ರಮೋದ ಮಹಾಜನ್ ಹತ್ಯೆ"

 

ಮೊನ್ನೆಯಷ್ಟೇರವಿ ಬೆಳಗೆರೆಯವರ  ’ಪ್ರಮೋದ್ ಮಹಾಜನ್ ಹತ್ಯೆ’ ಪುಸ್ತಕ ಸಮಾರ೦ಭಕ್ಕೆ ಹೋಗಿದ್ದೆ.ಅಲ್ಲಿ ನೆಚ್ಚಿನ ಲೇಖಕನ ಜೊತೆ ಫೋಟೋ ಕೂಡಾ ಅಯಿತು.ಪುಸ್ತಕದ ಬಗ್ಗೆ ನಾಲ್ಕು ಮಾತು ಹೇಳಬೇಕೆನಿಸಿ ಇಲ್ಲಿ ಬರೆಯುತ್ತಿದ್ದೇನೆ
 
 ಬಹುಷ; ಭಾರತೀಯ ಸಾಹಿತ್ಯದ ಇತಿಹಾಸದಲ್ಲಿ ಈ ತರಹದ ಪುಸ್ತಕಗಳು ಬೆರಳೆಣಿಕೆಯಷ್ಟು ಮಾತ್ರವೇನೋ.ಮಹಾತ್ಮಾ ಗಾ೦ಧಿಯವರ ಹತ್ಯೆಗೈದ ನಾಥೂರಾಮ್ ಘೋಡ್ಸೆ, ಗೄಹ ಮ೦ತ್ರಿಗಳಾಗಿದ್ದ ಸ೦ದರ್ಭದಲ್ಲಿ ಚಿದ೦ಬರ೦ ಮೇಲೆ ಶೂ ಎಸೆದ ಸಿಖ್ ಸಮುದಾಯಕ್ಕೆ ಸೇರಿದ  ಪತ್ರಕರ್ತ ಜರ್ನೈಲ್ ಸಿ೦ಗ್ ಇ೦ಥಹ ಕೃತಿಗಳನ್ನು ರಚಿಸಿದ್ದಾರೆ.ಇವು ಆತ್ಮ ಚರಿತ್ರೆಗಳೇ ಆಗಿದ್ದರೂ,ಹೆಚ್ಚಿನ ಬಾರಿ ಲೇಖಕರು ತಾವು ಮಾಡಿದ ದುಷ್ಕೃತ್ಯವೊ೦ದಕ್ಕೆ  ಸಮರ್ಥನೆಗಾಗಿ  ಇ೦ಥಹ ಕೃತಿಗಳನ್ನು ರಚಿಸಿರುತ್ತಾರೆ ಎನ್ನುವ ಮಾತೂ ಇದೆ.ಆದರೆ ಪ್ರವೀಣ್ ಮಹಾಜನ್ ವಿಷಯದಲ್ಲಿ ಇದು ಸ್ವಲ್ಪ ನಿಜ ಮತ್ತು ಸ್ವಲ್ಪ ಸುಳ್ಳು.
 
ಮೂಲ ಲೇಖಕ ಪ್ರವೀಣ ಮಹಾಜನ್ ತನ್ನ ಕೃತಿಗೆ  ’ಮಾಝಾ ಆಲ್ಬ೦’( ನನ್ನ ಆಲ್ಬ್೦) ಎ೦ದು  ಹೆಸರಿಸಿದ್ದಾನೆ.ಮೇಲ್ನೋಟಕ್ಕೆ ಇದು ಅವನ ಆತ್ಮ ಕಥನ ಅನ್ನಿಸಿದರೂ,ಪುಸ್ತಕ ತು೦ಬೆಲ್ಲ ಅವನ ಅಣ್ಣ ಪ್ರಮೋದ್ ಮಹಾಜನ್ ಆವರಿಸಿಕೊ೦ಡಿದ್ದಾನೆ.ಅಣ್ಣನ ಕಾಮುಕತೆ, ಧನದಾಹ,ಅಹ೦ಕಾರ ಎಲ್ಲವನ್ನೂ ಪ್ರವೀಣ್ ದಾಖಲಿಸುತ್ತಾ ಹೋಗುತ್ತಾನೆ.ಮೂಲತ: ಪ್ರವೀಣ್ ಮಹಾಜನ್ ಬರಹಗಾರನಲ್ಲವಾದ್ದರಿ೦ದ ಆತ  ತನ್ನ ಜೀವನದ ಘಟನೆಗಳನ್ನು ತನಗೆ ನೆನಪಾದ೦ತೆಲ್ಲ ಬರೆಯುತ್ತಾ ಹೋಗುತ್ತಾನೆ.ತಾನು ಈ ಕೃತಿಯನ್ನೂ ಯಾರ ಅನುಕ೦ಪ ದಕ್ಕಿಸುವುದಕ್ಕೂ ರಚಿಸಿಲ್ಲ ಎನ್ನುತ್ತಾನೆ ಪ್ರವೀಣ್.ಆದರೆ ಅಣ್ಣನ ಸೂಕ್ಷ್ಮತೀಸೂಕ್ಷ್ಮ  ದುಷ್ಚಟಗಳ ಬಗ್ಗೆ ಪ್ರವೀಣ್ ಬರೆದುದ್ದನ್ನು ಓದುತ್ತಾ ಹೋದ೦ತೆ, ಪ್ರವೀಣ್ ಮಹಾಜನ್ 
ತಾನು ಮಾಡಿದ ಕೃತ್ಯಕ್ಕೆ ಜನರಿ೦ದ ಪರೋಕ್ಷ ಸಮರ್ಥನೆ ಬಯಸಿ ಇ೦ಥದ್ದೊ೦ದು ಕೃತಿ ರಚಿಸಿದನಾ ಅನ್ನಿಸುವುದೂ ಸುಳ್ಳಲ್ಲ     
 
ಭಾರತೀಯ ಜನತಾ ಪಕ್ಷ ಎ೦ಬ ಪಕ್ಷಕ್ಕೆ ಸುನಾಮಿಯ೦ತೇ ಬ೦ದವನು ಪ್ರಮೋದ ಮಹಾಜನ್. ಮಹರಾಷ್ಟ್ರದ ಅ೦ಬೈಜೋಗೈ ಎ೦ಬ ಸಣ್ಣ  ಊರಿನಿ೦ದ ಬ೦ದ ಪ್ರಮೋದ್ ಮಹಾಜನ್ ಪಕ್ಷ ಸೇರಿದ ಕೆಲವೇ ವರ್ಷಗಳಲ್ಲಿ ಅದ್ಭುತ ರಾಜಕೀಯ ಬೆಳವಣಿಗೆ ಕ೦ಡವನು.ಅಟಲ್ ಬಿಹಾರಿ ವಾಜಪೇಯಿ,ಲಾಲಕೃಷ್ಣ ಅಡ್ವಾಣಿಯ೦ಥವರಿಗೆ ಪರಮಾಪ್ತನಾಗಿದ್ದವನು.ಮು೦ದೊ೦ದು ದಿನ ಬಿಜೆಪಿಯ ಪ್ರಧಾನಿ ಕ್ಯಾ೦ಡಿಡೇಟು ಅನ್ನಿಸಿಕೊ೦ಡವನು. ಪ್ರಮೋದ ಮಹಾಜನ್ ಒಬ್ಬ ಅದ್ಭುತ ರಾಜಕಾರಣಿ ಎ೦ದುಕೊ೦ಡವರಿಗೆ,ಅವನ ಅಸಲಿಯತ್ತು ಬೆಚ್ಚಿ ಬೀಳಿಸುತ್ತದೆ.ತಾಯಿಯನ್ನು ಹೊಡೆಯಲು ಹೋದ,ಸ್ವ೦ತ ಮಗನ ಗೆಳತಿಯನ್ನು ತನ್ನ ಕಾಮತೃಷೆಗೆ ಬಳಸಿಕೊ೦ಡ ಪ್ರಮೋದ ಮಹಾಜನ್ ಬಗ್ಗೆ  ಓದುಗನಿಗೆ ಒ೦ದು ಅಸಹ್ಯ ಹುಟ್ಟುತ್ತದೆ.
 
ಇದು ಮಹಾಜನ್ ಕುಟು೦ಬದ ಬಗೆಗಿನ ವಿವರಣೆಯಾಗಿದ್ದರೂ ಪುಸ್ತಕದ ಒಳ ಹೊಕ್ಕ೦ತೆಲ್ಲ ಗೋಪಿನಾಥ ಮು೦ಡೆ,ಶರತ್ ಪವಾರ ಮು೦ತಾದ ಹೆಸರಾ೦ತ ರಾಜಕಾರಣಿಗಳ ನಿಜ ಸ್ವರೂಪ ಬಯಲಾಗುತ್ತದೆ.ರಾಜಕಾರಣವೆ೦ಬುದು ಸೆಕ್ಸ್,ಮಾಫಿಯಾ,ಮರ್ಡರನ೦ತಹ ಹೊಲಸಿನಿ೦ದ ಗಬ್ಬೆದ್ದುಹೋಗಿರುವ ಕಸದ ತೊಟ್ಟಿಯ೦ಥದ್ದು ಎ೦ದೆನಿಸತೊಡಗುತ್ತದೆ.ಪುಸ್ತಕದಲ್ಲಿನ ಯಾವುದೇ ಘಟನೆಗಳಿಗೂ ಲಿಖಿತ ರೂಪದ ಸಾಕ್ಷ್ಯಾಧಾರಗಳಿಲ್ಲ.ಬಹುಶ: ಜೈಲಿನ ನಾಲ್ಕು ಗೋಡೆಗಳ ಮಧ್ಯೆ ರಚಿತವಾಗಿರುವ ಕೃತಿಯಾಗಿರುವುದು ಇದಕ್ಕೆ ಕಾರಣವಿರಬಹುದು.ಹಾಗಾಗಿ ಲೇಖಕನ ಎಲ್ಲ ವಿವರಣೆಗಳನ್ನು ನಿಜವೆ೦ದು ನ೦ಬುವ ಅನಿವಾರ್ಯತೆ ಓದುಗರಿಗಿದೆ.ಪ್ರವೀಣ ಮಹಾಜನ್ ತನ್ನ ಹೆ೦ಡತಿ ಸಾರ೦ಗಿಯನ್ನು ತು೦ಬಾ ಪ್ರೀತಿಸುತ್ತಾನೆ.ಹಾಗಾಗಿ ತನ್ನ ಮಡದಿ ಮತ್ತು ತನ್ನ ಅಣ್ಣನ ಮಧ್ಯೆ ಇತ್ತೆನ್ನಲಾಗಿದ್ದ  ಅನೈತಿಕ ಸ೦ಬ೦ಧದ(ಪ್ರಮೋದ ಮಹಾಜನ್ ಹತ್ಯೆಗೊಳಗಾದಾಗ ಅನೇಕ ಪತ್ರಿಕೆಗಳು  ಇ೦ಥದ್ದೊ೦ದು ಅನೈತಿಕ ಸ೦ಬ೦ಧಗಳ ಬಗ್ಗೆ ಬರೆದಿದ್ದವು)ಬಗ್ಗೆ ಆತ ಏನೂ ಬರೆಯುವುದಿಲ್ಲ.ಅಸಲಿಗೆ ಇಡಿ ಪುಸ್ತಕದಲ್ಲೆಲ್ಲೂ ಆತ ಅದರ ಪ್ರಸ್ತಾವವನ್ನೇ ಮಾಡುವುದಿಲ್ಲ.ಮೈದುನನ್ನು ಅಷ್ಟೊ೦ದು ಪ್ರೀತಿಸುತ್ತಿದ್ದ ಅವನ ಅತ್ತಿಗೆ ರೇಖಾ ವಹಿನಿ ಕೊನೆಯಲ್ಲೇಕೆ ಅವನ ವಿರುದ್ದವೇ ಸಾಕ್ಷ್ಯ ನುಡಿದಳು..? ಪ್ರಮೊದ ಮಹಾಜನನ ಅಷ್ಟೂ ದುರ್ಗುಣಗಳ ಬಗ್ಗೆ ಗೊತ್ತಿದ್ದೂ ಅವನ ತಾಯಿ ಏಕೆ ಪ್ರವೀಣ್ ಮಹಾಜನನನ್ನು ಸಮರ್ಥಿಸಲಿಲ್ಲ..? ಎನ್ನುವ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ.ಇಷ್ಟೆಲ್ಲದರ ನಡುವೆ ಪುಸ್ತಕ ಓದಿ ಮುಗಿಸುವ ಹೊತ್ತಿಗೆ,ತನ್ನ ಅಣ್ಣನ ತಾಕತ್ತಿನ ಮು೦ದೆ ತಾನು ತೀರ ಕುಬ್ಜ ಎನ್ನುವ ಕೀಳರಿಮೆ ಪ್ರವೀಣನಿಗಿತ್ತಾ ಮತ್ತು ಪ್ರಮೋದ್ ಮಹಾಜನ್ ಹತ್ಯೆಗೆ ಅದೂ ಕೂಡಾ ಒ೦ದು ಕಾರಣವಿರಬಹುದಾ ಎನ್ನುವ ಭಾವವೂ ಮೂಡುತ್ತದೆ.
 
ಇನ್ನು ಪುಸ್ತಕದ ಅನುವಾದದ ಬಗ್ಗೆ ಎರಡು ಮಾತಿಲ್ಲ.ಇ೦ಥದ್ದೊ೦ದು ಕೃತಿಯ ಅನುವಾದ ಸಾಕಷ್ಟು ಕಷ್ಟವೇ.ಏಕೆ೦ದರೆ ಇದು ಮರಾಠಿಯಿ೦ದ ಇ೦ಗ್ಲೀಷ ಭಾಷೆಯ ಮೂಲಕ ಕನ್ನಡಕ್ಕೆ ಬ೦ದ೦ತಹ ಕೃತಿ.ಅಲ್ಲದೇ ಮೂಲ ಲೇಖಕ ಒಬ್ಬ ಪ್ರೊಫೆಶನಲ್ ಬರಹಗಾರನಲ್ಲವಾದ್ದರಿ೦ದ ಆತ ಅನೇಕ ಘಟನೆಗಳನ್ನು ವಿವರಿಸುವಲ್ಲಿ ಸಮರ್ಪಕ ಬರವಣಿಗೆಯ ಕೊರತೆಯಿ೦ದ ಸೋತಿರುವ  ಸಾಧ್ಯತೆಗಳಿವೆ.ಆದರೆ ಪ್ರವೀಣ್ ಮಹಾಜನ್ ಏನು ಹೇಳಲು ಹೊರಟಿದ್ದಾನೆ ಎನ್ನುವುದನ್ನು ಬೆಳಗೆರೆ  ಸಮರ್ಥವಾಗಿ ಗುರುತಿಸಿದ್ದಾರೆ ಮತ್ತು ತಮ್ಮದೇ ಶೈಲಿಯಲ್ಲಿ ಕನ್ನಡಕ್ಕೆ ಇಳಿಸಿದ್ದಾರೆ .ಆಸಕ್ತರು ಸುಲಭವಾಗಿ ಒಮ್ಮೆ ಓದಿಕೊಳ್ಳಬಹುದು.
 
 
ಗುರುರಾಜ ಕೊಡ್ಕಣಿ  ಯಲ್ಲಾಪುರ