ಕೀಲುಕುದುರೆ...

ಕೀಲುಕುದುರೆ...

ಕವನ

 

ಹಗಲುಗನಸಿನ ಹಾಲು ಗಲ್ಲದ

ಹುಡುಗು ಚೇಷ್ಟೆಯ ದುಡುಕು ಬುದ್ಧಿಯ

ಕುಣಿವ ಚಿಣ್ಣರ ದಣಿವ ಮರೆಸುವ

ಬಣ್ಣದ ಲೋಕದ ಇಂದ್ರಜಾಲದ

ಮಂತ್ರ ಶಕ್ತಿಯ ತಂತ್ರ ಯುಕ್ತಿಯ

ಅಭೇದ್ಯ ಕೋಟೆಯ ಅಜೇಯ ರಾಜನ

ಕೀಲು ಕುದುರೆಯ ಮಂತ್ರ ಕೋಲಿನ

ಅಡುಗೋಲಜ್ಜಿಯ ಜನಪದ  ಕಥೆಗಳ

ಆಗರ ಕನ್ನಡ ಜನಪದ ಲೋಕ    || 1  ||

 

ಪಂಪಾ ತೀರದ ತುಂಗೆಯ ಮಡಿಲಿನ

ಪುರದ ಹೆಸರಿನ ಪ್ರಸಿದ್ಧ ಪಟ್ಟಣ

ಅಲ್ಲಿಯ ರಾಜನ ಏಕೈಕ ಪುತ್ರಿಯು

ಏಳು ಮಲ್ಲಿಗೆ ಹೂವಿನ ತೂಕದ

ನಾಜೂಕು ಕನ್ಯೆ ತ್ರಿಲೋಕ ಸುಂದರಿ

ನಿದ್ದೆಗೆ ಜಾರಿದ ರಾಜ ಕುವರಿಯ

ಒಂದೇ ಕಣ್ಣಿನ ಕುರೂಪಿ ರಾಕ್ಷಸ

ಕರಾಳ ಕತ್ತಲೆ ರಾತ್ರಿಯ ಹೊತ್ತಲಿ

ಮಾಂತ್ರಿಕ ಶಕ್ತಿಯ ತಂತ್ರದ ಬಲದಲಿ

ಮಂಚದ ಸಹಿತವೆ ಹೊತ್ತೇ ಹಾರಿದ   || 2 ||

 

ಸಪ್ತ ಸಮುದ್ರದ ದೂರದ ದ್ವೀಪದ

ಭಯಂಕರ ಕೂಪದ ಗುಹೆಯೊಳಗಿಟ್ಟನು

ಎರೆಡು ತಲೆಗಳ ಮಸೆಯುವ ಹಲ್ಲಿನ

ಕಪ್ಪನೆ ಬಣ್ಣದ ಕೆಂಡದ ಕಣ್ಣಿನ

ಕ್ರೂರ ನಾಯಿಯ ಕಾವಲಿಗಿಟ್ಟನು

ಕೋರೆಯ ಹಲ್ಲಿನ ಗೂನಿನ ಬೆನ್ನಿನ

ಬಿಳುಪಿನ ಕೂದಲ ಕೆದರಿದ ತಲೆಯ

ಸುಕ್ಕಿನ ಚರ್ಮದ ಸಿಡುಕಿನ ಮೋರೆಯ

ಕೆಡುಕಿನ ರಕ್ಕಸಿ ಜೊತೆಯಲಿ ಬಿಟ್ಟನು   || 3 ||

 

ಬೆಳಕು ಹರಿಯಲು ಎದ್ದು ನೋಡಲು

ರಾಜ ಕುವರಿಯು ಬೆಚ್ಚಿ ಬಿದ್ದಳು

ಕೆಡುಕು ರಕ್ಕಸಿ ಒಡಕು ದನಿಯಲಿ

ಕ್ರೂರ ರಾಕ್ಷಸ ಹೊತ್ತು ತಂದಿಹ

ಮದುವೆಯಾದರೆ ಇರದು ತೊಂದರೆ

ಯಾರೂ ಬಾರರು ನಿನ್ನ ಬಿಡಿಸಲು

ಎಂದು ಹೇಳಲು ನೊಂದು ಬೆಂದಳು  || 4 ||

 

ರಾಜ ಕುವರಿಯ ಮೌನ ರೋದನ

ಕೇಳುವರಾರು ಘೋರ ದ್ವೀಪದಿ

ಧೈರ್ಯ ಗುಂದದೆ ದೈವ ನಂಬುತ

ನಂಬಿ ಕೆಟ್ಟವರಿಲ್ಲವೀ ಜಗದೊಳು

ಸಮಯ ಸಿಕ್ಕರೆ ನೂರು ದಾರಿಯು

ವ್ರತವ ಹಿಡಿಯುವೆ ಹಂಪೆಯ ಪಂಪನ

ವ್ರತವದು ಮುಗಿಯೆ ಮದುವೆಯಾಗುವೆ

ನಂಬು ಎಂದಳು ಕ್ರೂರ ರಾಕ್ಷಸಗೆ     || 5 ||

 

ರಾಜ ಕುವರಿಯು ಕಾಣದಾಗಿರೆ

ರಾಜ ರಾಣಿಯ ರೋದನ ಹೆಚ್ಚಲು

ರಾಜ ಜೋತಿಷಿಯ ಮಂತ್ರಿ ಕರೆಸಿದ

ರಮಲ ಶಾಸ್ತ್ರದಿ ಅಂಜನ ಹಾಕಲು

ರಾಜ ಕುವರಿಯ ಸಪ್ತ ಸಮುದ್ರದ

ಘೋರ ದ್ವೀಪದ ಕ್ರೂರ ರಾಕ್ಷಸ

ಸೆರೆಯಲಿಟ್ಟಿಹ ದೃಶ್ಯವ ತಿಳಿಸಿದ    || 6 ||

 

ಢಂಢಂ ಠರಠರ ಢಂಢಂ ಠರಠರ

ಕೇಳಿರಿ ಕೇಳಿರಿ ಪುರದ ಪ್ರಜೆಗಳೆ ಕೇಳಿರಿ

ಪುರದ ಅರಸರ ರಾಜ ಡಂಗುರ

ರಾಜ ಕುವರಿಯ ಬಿಡಿಸಿ ತಂದರೆ

ಮಗಳ ಜೊತೆಯಲಿ ಪೂರ್ಣ ರಾಜ್ಯವ

ಧಾರೆ ಎರೆಯುವ ರಾಜ ಡಂಗುರ

ಧೈರ್ಯವಂತರು ಮುಂದೆ ಬಂದರೆ

ರಾಜ ವೀಳ್ಯವ ನೀಡಿ ಕಳಿಸುವ

ವಿಷಯ ತಿಳಿಸಿದ ರಾಜ ಭಟರು

ಪುರದಲೆಲ್ಲವ ಸಾರಿ ಬಂದರು   || 7 ||

 

ನೆರೆಯ ರಾಜ್ಯದ ವಿಜಯಸಿಂಹನು

ಮಾರು ವೇಷದಿ ಪುರವ ಸೇರಿದ

ರಾಜ ಕುವರಿಯ ಹುಡುಕಿ ತರುವ

ರಾಜ ವೀಳ್ಯವ ಪಡೆದು ಹೊರಟನು

ದಾರಿಯ ಮಧ್ಯದ ದಟ್ಟನೆ ಕಾಡಿನ

ನಟ್ಟ ನಡುವೆಯೆ ದಿವ್ಯ ಮೌನದ

ಮುನಿಗೆ ನಮಿಸಿದ ವಿಜಯ ಸಿಂಹನ

ನೋಡಿ ಮುನಿಗಳು ಮುಗುಳು ನಗೆಯಲಿ

ಮಾತನಾಡಲು ಮೌನ ಮುರಿದರು  || 8 ||

 

ಪುರದ ಕುವರಿಯ ಹುಡುಕಿ ಹೊರಟಿಹ

ವಿಜಯಸಿಂಹನ ವಿಷಯ ತಿಳಿದರು

ರಾಜ ಕುವರಿಯ ಗುಪ್ತ ಸ್ಥಳವನು

ದಿವ್ಯ ದೃಷ್ಟಿಯ ಮುನಿಯು ತಿಳಿದರು

ಸಪ್ತ ಸಮುದ್ರದ ಘೋರ ದ್ವೀಪದ

ಗುಹೆಯ ತಲುಪಲು ಕೀಲು ಕುದುರೆಯ

ಕದವ ತೆರೆಯಲು ಮಂತ್ರ ದಂಡವ

ಹರಸಿ ಕೊಟ್ಟರು ದಿವ್ಯ ಖಡ್ಗವ    || 9 ||

 

ಮುನಿಗೆ ನಮಿಸಿದ ವಿಜಯಸಿಂಹನು

ಕೀಲು ಕುದುರೆಯ ಏರಿ ಹಾರುತ

ಸಪ್ತ ಸಮುದ್ರವ ದಾಟಿ ಸೇರಿದ

ಘೋರ ದ್ವೀಪದ ಗುಹೆಯ ಬಳಿಯಲಿ

ಮಂತ್ರ ದಂಡವು ಗುಹೆಯ ತಾಕಲು

ಸದ್ದು ಮಾಡದೆ ಕದವು ತೆರೆಯಿತು  || 10 ||

 

ಎರೆಡು ತಲೆಯ ಕರಿಯ ನಾಯಿಯು

ಹಲ್ಲು ತೋರತ ಮೇಲೆ ಬಂದಿತು

ಮಂತ್ರ ಕೋಲಿನ ಸ್ಪರ್ಶ ಮಾತ್ರದಿ

ಕಲ್ಲು ಗೊಂಬೆಯ ರೂಪ ತಾಳಿದ

ನಾಯಿ ನೋಡಿದ ರಾಜ ಕುವರಿಯು

ವಿಜಯಸಿಂಹನ ನೋಡಿ ಹೆದರಲು

ಧೈರ್ಯ ತುಂಬುತ ವಿಜಯಸಿಂಹನು

ಪುರದ ರಾಜನ ರಾಜ ವೀಳ್ಯವ

ತೋರೆ ನಿಜದಲಿ ಹರುಷ ಪಟ್ಟಳು  || 11 ||

 

ಸಿಡುಕು ರಾಕ್ಷಸಿ ಬರುವ ಹೊತ್ತಿದು

ಅಡಗಿ ಕೊಂಡರೆ ಇರದು ತೊಂದರೆ

ಎಂದು ಹೇಳಲು ಮಂತ್ರ ದಂಡದ

ಮಹಿಮೆಯಿಂದಲೆ ಮಾಯವಾಗುವೆ

ಕಾಣಲಾರೆನು ಯಾರ ಕಣ್ಣಿಗು

ಕ್ರೂರ ರಾಕ್ಷಸ ಜೀವ ರಹಸ್ಯದ

ಸುಳಿವು ತಿಳಿಯುವ ಕಾರ್ಯ ಸಾಧಿಸು

ನಾಯಿ ಜೀವವ ಮತ್ತೆ ಮರಳಿಸಿ

ಮಾಯವಾದನು ಧೈರ್ಯ ಹೇಳುತ  || 12 ||

 

ಸಿಡಕು ರಾಕ್ಷಸಿ ಊಟ ತಂದಳು

ಬಹಳ ಗೆಲುವಲಿ ರಾಜ ಕುವರಿಯು

ವ್ರತವು ಮುಗಿದಿದೆ ಮದುವೆಯಾಗುವ

ವಿಷಯ ತಿಳಿಸಲು ಓಡಿ ಬಂದನು

ಜೊಲ್ಲು ಸುರಿಸುತ ಕ್ರೂರ ರಾಕ್ಷಸ

ರಾಜ ಕುವರಿಯ ಮಂದ ಹಾಸಕೆ

ಮರುಳು ರಾಕ್ಷಸ ಬಾಯಿ ಬಿಟ್ಟನು  || 13 ||

 

ಪಶ್ಚಿಮ ದಿಕ್ಕಿನ ದಟ್ಟ ಕಾನನ

ನಟ್ಟ ನಡುವಿನ ತಾಳ ವೃಕ್ಷದ

ಪೊಟರೆ ಗೂಡಿನ ನೀಲಿ ಗಿಳಿಯಲಿ

ತನ್ನ ಜೀವವ ಅಡಗಿಸಿಟ್ಟಿಹ

ಗುಟ್ಟು ತಿಳಿಸಿದ ಮೂರ್ಖ ರಾಕ್ಷಸ

ನಾಳೆ ಒಳ್ಳೆಯ ದಿವಸವಿರುವುದು

ಎಂದು ಹೇಳಲು ನಂಬಿ ರಾಕ್ಷಸ

ಮದುವೆ ಕನಸಲಿ ಹೊರಗೆ ನಡೆದನು   || 14 ||

 

ವಿಜಯಸಿಂಹನ ಕರೆದು ತಿಳಿಸಲು

ಕೀಲು ಕುದುರೆಯ ಕೀಲಿ ತಿರುವಲು

ಬಿಳಿಯ ರೆಕ್ಕೆಯ ಬೀಸಿ ಹಾರುತ

ಗಗನ ಯಾನದಿ ವಿಜಯಸಿಂಹನು

ತಾಳ ವೃಕ್ಷವ ಹುಡುಕಿ ಹೊರಟನು

ಪೊಟರೆ ಗೂಡಿನ ನೀಲಿ ಗಿಳಿಯನು

ಹಿಡಿದು ಮರಳಿದ ಗುಹೆಯ ಬಳಿಯಲಿ

ಸಿಡುಕು ರಾಕ್ಷಸಿ ಕರಿಯ ನಾಯಿಯ

ದಿವ್ಯ ಖಡ್ಗದಿ ಹೊಡೆದು ಕೊಂದನು    || 15 ||

 

ಒಂಟಿ ಕಣ್ಣಿನ ಕ್ರೂರ ರಾಕ್ಷಸ

ಕುಣಿಯುತ ಬಂದನು ಮದುವೆ ಕನಸಲಿ

ಎರೆಡು ತಲೆಯ ನೆಚ್ಚಿನ ನಾಯಿ

ವಿಕಾರ ದೇಹದ ಸಿಡುಕು ರಕ್ಕಸಿ

ಸತ್ತು ಬಿದ್ದಿಹ ಸ್ತಿಥಿಯ ನೋಡಿ

ದಂಗು ಬಡಿದು ಮುಂದೆ ನೋಡಲು

ಮಂತ್ರ ದಂಡದ ಕೀಲು ಕುದುರೆಯ

ದಿವ್ಯ ಖಡ್ಗದ ವಿಜಯಸಿಂಹನು     || 16 ||

 

ವಿಕಾರ ರೂಪದ ಕುರೂಪಿ ರಾಕ್ಷಸ

ಹಲ್ಲು ಮಸೆಯುತ ಬೆಂಕಿಯುಗುಳುತ

ಕತ್ತಿ ಬೀಸುತ ಮೇಲೆ ಬಿದ್ದನು

ದಿವ್ಯಖಡ್ಗದ ಘೋರಯುದ್ಧದಿ

ವಿಜಯಸಿಂಹನ ಕೈಯು ಸೋಲಲು

ರಾಜಕುವರಿಯು ಧೈರ್ಯದಿಂದಲಿ

ನೀಲಿ ಗಿಳಿಯ ಕತ್ತು ಒತ್ತಲು

ಉಸಿರುಗಟ್ಟಿದ ಕ್ರೂರರಾಕ್ಷಸ

ನೆಲಕೆ ಕುಸಿಯಲು ಮಂತ್ರ ದಂಡವು

ತಲೆಗೆ ತಾಕಲು ಕ್ರೂರ ರಾಕ್ಷಸ

ನಾಯಿ ಮರಿಯ ರೂಪ ಪಡೆದನು   || 17 ||

 

ವಿಜಯಸಿಂಹನು ರಾಜಕುವರಿಯು

ನೀಲಿಗಿಳಿಯನು ನಾಯಿಮರಿಯನು  

ಜತನದಿಂದಲಿ ತಮ್ಮಜೊತೆಯಲೆ

ಕೀಲುಕುದುರೆಯನೇರಿ ಹಾರುತ

ದಟ್ಟ ಕಾಡಿನ ಮೌನ ಮುನಿಗಳ

ಬಳಿಯಲಿಳಿದು ಮುನಿಗೆ ನಮಿಸಿ

ಮುನಿಯು ಕೊಟ್ಟಿಹ ಮಂತ್ರದಂಡ

ಕೀಲು ಕುದುರೆ ದಿವ್ಯ ಖಡ್ಗವ

ಮರಳಿ ಅರ್ಪಿಸೆ ಮೌನಮುನಿಗಳು

ದೀನದಲಿತರ ಕ್ಷೇಮಕಾರ್ಯಕೆ

ದಿವ್ಯಖಡ್ಗವು ಕೀಲುಕುದುರೆಯು

ನಿನ್ನಲಿರಲೆನ್ನುತ ಹರಸಿ ಕೊಟ್ಟರು   || 18 ||

 

ಕೀಲುಕುದುರೆಯನೇರಿ ಈರ್ವರು

ಗಗನಯಾನದಿ ಘನತೆಯಿಂದಲೆ

ಪುರದ ರಾಜ್ಯದ ಅರಮನೆಯಲಿಳಿದರು

ವಿಜಯಸಿಂಹನು ರಾಜಕುವರಿಯ

ಅರಸನಿಗೊಪ್ಪಿಸಿ ನಿಜವತಿಳಿಸಲು

ಹರ್ಷದಿಂದಲೆ ಪುರದ ರಾಜನು

ಮಾತಿನಂತೆಯೆ ವಿಜಯಸಿಂಹಗೆ

ಮಗಳನು ಕೊಟ್ಟು ರಾಜ್ಯವನಿತ್ತು

ಹರಸಿದರೆಲ್ಲರು ದಂಪತಿಗಳನು   || 19 ||

 

ಸ್ಪರ್ಧೆಯ ವಿದ್ಯೆಯ ಭಾರದ ಹೊರೆಯಲಿ

ಮುದುಡಿದ ಮನದ ದುಗುಡವ ಕಳೆಯುವ

ಚಿಣ್ಣರ ಮನಸನು ಮುದದಲಿ ರಂಜಿಪ

ಹಳ್ಳಿಯ ಸೊಗಡಿನ ಜ್ಞಾನದ ಸೊಡರಿನ

ಮಹೇಂದ್ರಜಾಲದ ಮೋಡಿಯ ಆಟದ

ಕೌತುಕ ತುಂಬಿದ ಕುತೂಹಲ ಕೆರಳಿಸೊ

ಜನಪದ ಕಥೆಗಳ ಸುಂದರ ಲೋಕದ

ಪ್ರವೇಶ ಪ್ರಯತ್ನದ ಜನಪದ ಕಥನದ

ವಿನಯದ ಯತ್ನದ ಜಯಪ್ರಕಾಶಿತ ಕವನ  || 20 ||