ಪ್ರೊ. ಆರ್. ಗುರುರಾಜಾರಾಯರು

ಪ್ರೊ. ಆರ್. ಗುರುರಾಜಾರಾಯರು

 ಪ್ರೊ. ಆರ್. ಗುರುರಾಜಾರಾಯರ ಆಪ್ತ ಬಂಧುಗಳು, ಆತ್ಮೀಯ ನಿಕಟವರ್ತಿಗಳು, ಶನಿವಾರ ನವೆಂಬರ್ 10ರಂದು, ಹನುಮಂತನಗರದಲ್ಲಿ ಸಂಸ್ಮರಣ ಸಂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ರಾಯರ ಜನ್ಮಶತಮಾನೋತ್ಸವ, ಇದು.
 ಪ್ರೊ. ರಾಯರದು ಪ್ರಭಾವಶಾಲೀ ವ್ಯಕ್ತಿತ್ವ. ಅಂದರೆ ಸರಕಾರದ ಪ್ರಶಸ್ತಿಗಳನ್ನೋ, ಬಿಡಿಎ ಸೈಟನ್ನೋ ಕೊಡಿಸುವ ವರ್ಚಸ್ಸು ಅವರಲ್ಲಿತ್ತು ಎಂದುಕೊಳ್ಳಬಾರದು; ಅವರದು ಸುನಾಗರಿ, ಸಾಂಸಕೃತಿಕ ಪ್ರಭಾವ. ಯಾರಮೇಲಾದರೂ ಪ್ರಭಾವ ಬೀರಿ ಹೆಸರುಗಳಿಸಿಕೊಳ್ಳುವ ಪ್ರಯತ್ನಶೀಲತೆ ಅವರದಾಗಿಯೇ ಇರಲಿಲ್ಲ; ತಾವೇ ಗುರ್ತಿಸಿ ಶರನಾದವರಿಗಷ್ಟೇ ಅದರ ಸ್ವಾರಸ್ಯ ತಿಳಿಯುತ್ತಿತ್ತು.
 ಅವರ ಸಾಂಸರಿಕ ’ಜೀವನ ಸೌಖ್ಯ’ದ ಬಗ್ಗೆ ಹೇಳುವುದಕ್ಕೇನೂ ಇಲ್ಲ. ಆದರೆ ಆ ಕಹಿಯನ್ನವರು ಎಲ್ಲೂ ತೋಡಿಕೊಳ್ಳಲಿಲ್ಲ; ಹಂಚಿಕೊಳ್ಳಲಿಲ್ಲ! ಅವರೊಬ್ಬ ಉಲ್ಲಾಸಶಾಲೀ ಮಾಸ್ತರು. ಆದರೆ ಆ ಲಾಲಿತ್ಯದಲ್ಲಿ ಬೆಜವಾಬ್ದಾರಿಯ ಲವಲೇಶವೂ ಇರುತ್ತಿರಲಿಲ್ಲ. ಯಾವುದನ್ನೂ ಗಮನಿಸಿಲ್ಲವೇನೋ ಎಂಬಂತೆ ಕಾಣುತ್ತಿದ್ದರು (ಅವರಿಗೆ ಸ್ವಲ್ಪ ಮೆಳ್ಳೆಗಣ್ಣೂ ಇತ್ತು!) ಆದರೆ ಯಾವುದೂ ಅವರ ದೃಷ್ಟಿಯನ್ನು ತಪ್ಪಿಸಿಹೋಗುತ್ತಿದ್ದಿಲ್ಲ. ನಾನವರನ್ನು ಮಾಸ್ತರಾಗಿ ಕಂಡಾಗ (ಅಷ್ಟುಹೊತ್ತಿಗೆ ಅದಾಗಲೇ ಅವರು ಬಹಲಷ್ಟೇ ನುರಿತ ಪ್ರಾಧ್ಯಾಪಕರಾಗಿದ್ದರು) ಇಡೀ ತರಗತಿ ಅವರಿಗೆ ಘನ-ಗೌರವ ನೀಡುತ್ತಿದ್ದದ್ದು ಗಮನರ್ಹವಾಗಿತ್ತು. ಆ ಗೌರವ, ಬೇರೆ ’ಸಿಡಿ’ ಮತ್ತು ’ಜಿ’ಗಳಂತೆ ಸಿಡಿದುಬೀಳುತ್ತಾರೆಂಬ ಭಯಕ್ಕಲ್ಲ;  ಅಪ್ರತಿಮ ವಿದ್ವಾಂಸರೆಂಬ ಪ್ರೌಢಿಮೆಗೂ ಅಲ್ಲ. ಏಕೋ ಗೊತ್ತಿಲ್ಲ, ತರಗತಿಯ ಪ್ರವೇಶದೊಂದಿಗೇ ಅವರ ವ್ಯಕ್ತಿತ್ವ, ನಮ್ಮೊಳಗಿನ ಕಾವ್ಯಕುತೂಹಲದೊಂದಿಗೆ ಸೇರಿಹೋಗಿರುತ್ತಿತ್ತು. ನಾಟಕ ಅವರ ಅಚ್ಚು-ಮೆಚ್ಚುಎಂದು ಹೇಳುತ್ತಾರೆ. ಅದು ಪಠ್ಯೇತರವಾಗಿ ಮಾತ್ರಾ.  ಅವರ ನೈಜ ಅಧ್ಯಾಪಕತ್ವ ಇದ್ದದ್ದು ಕಾವ್ಯದ ಕ್ಲಾಸಿನಲ್ಲೇ. ಯಾವುದೇ ಸಾಹಿತ್ಯದ ರಸ-ಸ್ವಾರಸ್ಯವಿರುವುದು ಅದರ ಪದ್ಯ ಸಾಹಿತ್ಯದಲ್ಲಿ. ಅದು ಕವಿಯೊಬ್ಬನ ಅನುಭೂತಿಯ ಅಮೂರ್ತ ರಸೋತ್ಕರ್ಷವಾಗಿರುತ್ತದೆ. ರಸಸಂಸ್ಕಾರವಂತರಿಗಷ್ಟೇ, ಅದನ್ನು ಮೂರ್ತಸ್ವರೂಪದ ಸಾಕಾರಕ್ಕೆ ತರುವುದು ಸಾಧ್ಯವಾಗುವುದು.
ಬಾಲ್ಯದ ದೈನೇಸೀತನಕ್ಕೆ, ಕಡು ಹಾಸ್ಯದ ಅಭವ್ಯಕ್ತಿಯನ್ನು ಮತ್ತು ಯವ್ವನ ಕಾಲದ ಸಂಸಾರ ಭಾರದಲ್ಲಿ ಜೀವನ ಸ್ವಾರಸ್ಯ ಕಾಣುವ ರಸಿಕತೆಯನ್ನೂ ಅವರು ತಾಳ್ಮೆ ಮತ್ತು ಸ್ವೋಪನ್ನತೆಯಿಂದ ಸಾಧಿಸಿದ್ದರೇನೋ?!
ನಾಟಕ ಮತ್ತು ರಂಗಭೂಮಿ ಅಭ್ಯುದಯಕ್ಕಾಗಿ ತುಡಿಯುತ್ತಿದ್ದ ಹೃದಯ, ರಾಯರದ್ದು. ನಾಟಕ, ಕಾಲಾಯಾಪನೆಯ ಹವ್ಯಾಸವಾಗಿದ್ದರೂ ಅದರ ಬಗ್ಗೆಯೂ ಇವರ ತೀವ್ರ ಬೌದ್ಧಿಕ ಮಂಥನ ನಡೆದಿತ್ತು. ನಾಟಕವೆಂಬ ’ಜೀವಂತ ಕಲೆ’ ಸಜೀವವಾಗಿರಬೇಕಾದರೆ, ಅದು ಹವ್ಯಾಸೀ ರಂಗಚಟುವಟಿಕೆಯಿಂದಲೇ ಎನ್ನುವುದು ಇವರ ಖಚಿತ ಅಭಿಪ್ರಾಯ. ಪ್ರೊ. ಗುರುರಾಜಾರಾಯರ ಜನ್ಮಶತತಮಾನೋತ್ಸವದ ಅಂಗವಾಗಿ, ಕೈಲಾಸಂ ಅವರ ’ಟೊಳ್ಳು-ಗಟ್ಟಿ’ ನಟಕ ಪ್ರದರ್ಶನವನ್ನೂ ಆಯೋಜಿಸಲಾಗಿದೆ.