ಯಾರ್ರಿ, ಯಾರ್ರಿ, ಯಾರ್ರಿ............

ಯಾರ್ರಿ, ಯಾರ್ರಿ, ಯಾರ್ರಿ............

                                             “ಯಾರ್ರಿ, ಯಾರ್ರಿ, ಯಾರ್ರಿ”
                                                                      - ಲಕ್ಷ್ಮೀಕಾಂತ ಇಟ್ನಾಳ
   ಮಗನನ್ನು ಕಣ್ಣ ರೆಪ್ಪೆಗಳಂತೆ ಬೆಳೆಸಿದ ಕರುಣೆಗಣ್ಣುಗಳ ಅಪ್ಪನೊಬ್ಬ. ಜೀವನದ ಯಾವುದೇ ಸಂಗತಿಯನ್ನು ಮಗನ ಜೊತೆ ಹಂಚಿಕೊಳ್ಳಲು ತುಡಿಯುವ ಮುಗ್ಧ ಮನಸಿನ ಸ್ನೇಹಿತನಂತಿರುವ ಅಪ್ಪ.. ಅದರಲ್ಲೇ ಸುಖ ಕಂಡು ಅನಿರ್ವಚನೀಯ ಆನಂದ ಕಾಣುವ. ಅವನಿಗಾಗಿ ಕಣ್ಣುಗಳಲ್ಲೇ ಪ್ರಾಣ ಇಟ್ಟುಕೊಂಡವ. ಅತೀವ ಬಡತನದ ಮಧ್ಯೆಯೇ ಜಾಣನಿಗೆ ವಿದ್ಯೆಯಲ್ಲಿ ಯಾವುದೇ ತೊಂದರೆ ಯಾಗಬಾರದೆಂದು ಹಗಲು ಇರುಳುಗಳನ್ನು ಭೂಮ್ಯಾಕಾಶಗಳನ್ನು ಒಂದು ಮಾಡಿ, ಹರಿದ ಚಪ್ಪಲಿಯಲ್ಲಿದ್ದರೂ ಮಗನಿಗೆ  ಬೂಟುಕೊಡಿಸುವವ. ಹಸಿದ ಹೊಟ್ಟೆಯಲ್ಲಿ  ಮೃಷ್ಟಾನ್ನ ಉಣಿಸುವವ. ಸಣ್ಣ ಸಂಬಳವಾದರೂ  ಮಗನ ಬೇಕು ಬೇಡಗಳನ್ನು ಒಂದು ಹೆಜ್ಜೆ ಹೆಚ್ಚೇ ತೀರಿಸುವವ. ಮಗ ಅಪ್ಪ ಎನ್ನುವ ಮುನ್ನ ಅವನ ಮಾತುಗಳನ್ನು ಅರ್ಥಮಾಡಿಕೊಳ್ಳುವವ. ಅವನ ಪ್ರೀತಿಯ ಒಡನಾಟದಲ್ಲಿ ದಿನನಿತ್ಯವೂ ಬಿಡುವಿನ ವೇಳೆಗಳಲ್ಲಿ ಓದುತ್ತಿರುವ, ಆಡುತ್ತಿರುವ ಹುಡುಗನ ಜೊತೆ ಕಾಲ ಕಳೆಯುವುದರಲ್ಲೆ ಸುಖಕಾಣುವ. ಸುತ್ತಲಿನ ಝಗಮಗಿಸುವ ಜಗತ್ತನ್ನು ಕಂಡು ಅದರ ತುಣುಕೊಂದನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಡುವ ತವಕ. ಅದಕಾಗಿ ಮಗನ ಏಳ್ಗೆಯಲ್ಲಿ ತನ್ನ ಕನಸುಗಳನ್ನು ಬಿಚ್ಚಿಕೊಳ್ಳುತ್ತ ಹಾರುವ ಮನಸ್ಸಿಗೆ ತುಸು ರೆಕ್ಕೆ ಹಚ್ಚಿಕೊಳ್ಳುತ್ತ, ಆಕಾಶ ದೆತ್ತರಕೆ ತುಸು ತುಸುವೇ ಏರುತ, ಸುತ್ತಮುತ್ತಲಿನವರಿಗೆ ಮಗನ ಗುನಗಾನ ಮಾಡುತ್ತ, ಬದುಕಿನಲ್ಲಿ ಎಲ್ಲಿಯೂ ಸಿಗದ ಮಾನಸಿಕ ನೆಮ್ಮದಿಯನ್ನು ಅವನಲ್ಲಿ ಕಾಣುವವ. ವಾಸ್ತವಿಕ ಜಗದಲ್ಲಿ ನಡೆಯಲಾಗದೇ ಕೆಲವೊಮ್ಮೆ ಕುಸಿಯುತ್ತ, ತೆವಳಿಯಾದರೂ ಸರಿಯೇ ಗುರಿ ತಲುಪುವ ಬಡ ದೇಹದ ಅಗಾಧ ಹಂಬಲದ ಹೃದಯವಂತ.
    ಪುಟ್ಟ ಪುಟ್ಟ ವಿಷಯಗಳಲ್ಲಿ, ಜಯಗಳಲ್ಲಿ ಮಗನ ಏಳ್ಗೆಯನ್ನು ಮನಸಾರೆ ಮೆಚ್ಚುತ್ತ, ಅದೊಂದು ದಿನ ಇಂಜಿನೀಯರಿಂಗ್ ಸೀಟು ಸಿಕ್ಕಾಗ, ಇಡೀ ಊರಿಗೇ, ಸುತ್ತಮುತ್ತಲಿನ ಏರಿಯಾದಲ್ಲೆಲ್ಲ ತಂದೆ ತಾಯಿ ಪಾಲಕರಿಗೆ ಆದರ್ಶದ ಮೂರ್ತಿಯಾದ, ಅವರಿಗೆಲ್ಲ ಕೇಳಿದ್ದೇ ತಡ, ಹೇಗೆ ಓದುವುದು ಮುಂತಾಗಿ, ತಾನೇ ಮುಂದಾಗಿ ಉಚಿತ ಸಲಹೆಗೆ ಮುನ್ನುಗ್ಗಿ ನೀಡುವ ಉದಾರ ಮನಸ್ಸಿನವ. ಎಲ್ಲರಿಗೂ ಲೇಸನ್ನೇ ಬಯಸುತ್ತ ಊರಿನ ಪ್ರತಿಯೊಂದು ಸುದ್ದಿಯನ್ನು ಮಗ ಬೆಂಗಳೂರಿನ ದಿನ ನಿತ್ಯದ ಕಾಲೇಜಿನ ಅವಧಿ ಮುಗಿದ ಕೂಡಲೇ ಒಬ್ಬರಿಗೊಬ್ಬರು ವೋಬೈಲ್ ನಲ್ಲಿ ಮಾತಾಡದಿದ್ದರೆ ಸಮಾಧಾನವೇ ಇಲ್ಲ. ಹಾಗೂ ಹೀಗೂ ಹುಡುಗ ಮೂರನೆಯ ವರ್ಷ ಮುಗಿದ ಕೂಡಲೇ  ಎಮ್ ಎನ್ ಸಿ ಯವರು ಕಾಲೇಜ್ ಕ್ಯಾಂಪಸ್ ಸಿಲೆಕ್ಷನ್ ನಲ್ಲಿ ವರ್ಷಕ್ಕೆ ಎಂಟು ಚಿಲ್ಲರೆ ಲಕ್ಷಗಳ ಪ್ಯಾಕೇಜ್ ನೊಂದಿಗೆ ಆಯ್ಕೆಯಾದ ಕೂಡಲೇ ಸಂತೋಷದಿಂದ ಮಗ ಅಪ್ಪನಿಗೆ ನೇರವಾಗಿ ಫೋನ್ ಮಾಡಿ ವಿಷಯ ತಿಳಿಸಿದ್ದೇ ತಡ. ಎಲ್ಲ ಬಂಧು ಬಳಗಕ್ಕೆ ಅಲ್ಲಲ್ಲಿ ನೆಲೆಸಿರುವ ಅಣ್ಣತಮ್ಮಂದಿರಿಗೆ, ಸಹೋದರಿಗೆ ವಿಷಯ ತಿಳಿಸಿದ್ದು ಸಾಲದೆಂಬಂತೆ, ಎರಡು ಗಂಟೆಯ ಪ್ರಯಾಣ ದೂರದಲ್ಲಿರುವ ತಮ್ಮನ ಹತ್ತಿರವಿರುವ ತಾಯಿಗೆ ಸಿಹಿಸುದ್ದಿಯನ್ನು ಮುದ್ದಾಂ ಹೇಳಬೇಕೆಂಬ ಉತ್ಕಟ ಬಯಕೆಯೊಂದು ಮನದಲ್ಲಿ ಕಾರಂಜಿಯಂತೆ ತಡೆಯಲಾರದೇ ಪುಟಿಯತೊಡಗಿದಾಗ, ಮನದ ಹಂಬಲದ ಕುದುರೆಯನೇರಿದಂತೆ, ಮದ್ಯಾಹ್ನದ ಕಛೇರಿಯ ಬಿಡುವಿನಲ್ಲಿ ಊಟಕ್ಕೆಂದು ಮನೆಗೆ ಹೊರಟ ಬೈಕ್ ನ್ನು ತನ್ನ ತಾಯಿಯಿರುವ ಊರಿನ ಕಡೆಗೆ ಹೊರಳಿಸಿ, ಪೇಟೆಯಲ್ಲಿ ಪೇಢೆ ಪೊಟ್ಟಣ ಕೊಂಡು ಅವರಿವರೊಡನೆ ವೋಬೈಲ್ ನಲ್ಲಿ ಮಾತಾಡುತ್ತ ಸಂತೋಷದಿಂದ ಫೋನಾಯಿಸುತ್ತಲೇ ಹೊರಟಿತ್ತು ಇವನ ಸವಾರಿ. ಸಮೀಪ ಒಂದು ಗಂಟೆ ಪ್ರಯಾಣ ದೂರದ ಊರಿನಲ್ಲಿ ನೆಲೆಸಿದ ಇನ್ನೊಬ್ಬ ಅಣ್ಣನೊಂದಿಗೆ ಈ ಸಮಾಚಾರ ಆಗಲೇ ನಾಲ್ಕೈದು ಬಾರಿ ಹೇಳಿದ್ದರೂ ಊರಿಗೆ ‘ಅವ್ವ’ನಿಗೆ ಸ್ವೀಟ್ ಕೊಟ್ಟು ಖುದ್ದಾಗಿ ಸಿಹಿಸುದ್ದಿ ಹೇಳುವ ಐಡಿಯಾವನ್ನು ಹೇಳಿದಾಗ ಆ ಅಣ್ಣ ಮೀಟಿಂಗ್ ನಲ್ಲಿದ್ದುದರಿಂದ ಹೆಚ್ಚಿಗೇನೂ ಮಾತನಾಡದೇ ಈಗ ಸ್ವಲ್ಪ ಹೊತ್ತಿನಲ್ಲಿ ಲಂಚ್ ಬ್ರೇಕ್ ನಲ್ಲಿ ಮಾತನಾಡುವುದಾಗಿ ಹೇಳಿದ್ದರಿಂದ ಮೀಟಿಂಗ್ ಬಿಟ್ಟನಂತರ ಫೋನ್ ಮಾಡು ಹಾಗಾದರೆ ಎಂದ.
    ಲಂಚ್ ಬ್ರೇಕ್ ಬಿಟ್ಟಾಗ ಹೊರಗೆ ಬಂದು ತಮ್ಮ ಫೋನ್ ಮಾಡಿದ್ದುದು ನೆನಪಾಗಿ, ಫೋನ್ ಮಾಡಿದ ಅಣ್ಣ. ಅತ್ತಲಿಂದ ಅಪರಿಚಿತ ಧ್ವನಿ ಬಂದುದರಿಂದ ಯಾರಿಗೆ ಫೋನ್ ಮಾಡಿದೆ ಎಂದು ನೊಡಿಕೊಂಡ ಅಣ್ಣನಿಗೆ ಆ ಹೆಸರು  ನಂಬರು ಸರಿಯಾಗಿಯೇ ಇರುವುದರಿಂದ ತಾವ್ಯಾರು, ಇದು ಇಂಥವರ ಫೋನ್ ಅಲ್ಲವೇ, ಅವರಿಗೆ ಕೊಡಿ ಎಂದು ಹೇಳಿದಾಗ ಅತ್ತಲಿಂದ, ಸರ್, ನಾನು 108 ದ ಡ್ರೈವರು ಮಾತನಾಡುವುದು, ಈ ವೊಬೈಲ್ ನವರು ಬೈಕನಲ್ಲಿ ಬಿದ್ದಿದ್ದಾರೆ, ತಲೆ ಮೈಕೈಗೆ ಗಾಯವಾಗಿದೆ, ಇವರನ್ನು ಸಮೀಪದ ಆಸ್ಪತ್ರೆಗೆ ಒಯ್ತುತ್ತಿದ್ದೇವೆ. ಒಂದು ಚದುರಿದ ಸಿಹಿಪೊಟ್ಟಣ ಬಿಟ್ಟರೆ ಮತ್ತೇನೂ ಅಂತಹ ವಸ್ತುಗಳೇನೂ ಸ್ಥಳದಲ್ಲಿ ಇರಲಿಲ್ಲ. ಇಂತಹ ಊರಲ್ಲಿ ಇರುವುದಾಗಿ ತಿಳಿಸಿದಾಗ ಕೂಡಲೇ ಪರಿಸ್ಥಿತಿ ಅರಿತು ಅವನ ಕೈಗೆ ವೋಬೈಲ್ ಕೊಡಿ ಎಂದ ಅಣ್ಣ.  ಫೋನ್ ನನ್ನು ಹತ್ತಿರ ಹಿಡಿದಾಗ  ‘ ಯಾರ್ರೀ ಯಾರ್ರಿ ಯಾರ್ರಿ’ ಎನ್ನುವುದನ್ನು ಬಿಟ್ಟು ಬೇರೇನೂ ಮಾತಾಡದ ತಮ್ಮನ ಯೋಗಕ್ಷೇಮದ ಬಗ್ಗೆ ಗಾಭರಿಯಾಗಿ,  ಆಗಲೇ ಸ್ಥಳಕ್ಕಾಮಿಸಿದ ಸಂಬಂಧಿಯೊಬ್ಬರಿಗೆ ಅಂಬುಲನ್ಸ್ ನಲ್ಲಿ ತಾನಿರುವ ಊರಿಗೆ ತರಲು ತಿಳಿಸಿ,  ತಾನಿರುವ ನಗರದಲ್ಲಿ ಧೋ ಧೋ ಎಂದು ಮಳೆ ಸುರಿಯುತ್ತಿದ್ದರೂ ಐಸಿಯು ಒಂದನ್ನು ಹುಡುಕಿ, ಮುಂದಿನ ಕಾರ್ಯಕ್ರಮಕ್ಕಾಗಿ ಹಲವಾರು ಡಾಕ್ಟರುಗಳನ್ನು ಸಂಪರ್ಕಿಸಿ ಗಾಯಗೊಂಡ ತಮ್ಮನಿಗಾಗಿ ದಾರಿಕಾಯುತ್ತ ಕುಳಿತ, ಕ್ಷಣ ಕ್ಷಣಕ್ಕೂ ವಿಚಾರಿಸುತ್ತ, ಸ್ಥಳೀಯ  ಪ್ರಥವೋಪಚಾರ ನೀಡಿದ ಡಾಕ್ಟರು ತೊಂದರೆ ಏನಿಲ್ಲ. ಸ್ವಲ್ಪ ತರಚು ಗಾಯUಳಾಗಿವೆ, ಮತ್ತೇನೂ ತೊಂದರೆಯಿಲ್ಲ ಎಂದು ಅಲ್ಲಿನವರಿಗೆ ಹೇಳಿದ್ದು ಅಲ್ಲದೇ ಫೋನಿನಲ್ಲೂ ಈ ಅಣ್ಣನಿಗೂ ತಿಳಸಿದರು. ಮನಸ್ಸು ನಿರಾಳವಾಯಿತು. ಸ್ವಲ್ಪ ನಿಧಾನವಾಗಿಯಾದರೂ ಸ್ಕಾನ್ ಮುಂತಾದ ಮುಂಜಾಗರೂಕತಾ ಕ್ರಮ ಕೈಕೊಂಡರಾಯಿತು ಎಂದು ಯೋಚಿಸಿ ಅವನ ಯೋಗಕ್ಷೇಮ ವಿಚಾರಿಸುತ್ತಿರುವ ಸಹೋದರರು ವೋಬೈಲ್ ಸ್ವಿಚ್ ಆಫ್ ಮಾಡಿದ್ದರಿಂದ ಸಂಪರ್ಕ ತಪ್ಪಿಹೋಯಿತು, ಒಮ್ಮೆಲೇ ರಾತ್ರಿ ಅವರ ಫೋನ್ ಆನ್ ಆದಾಗ ವಿಚಾರಿಸಿದಾಗ  ಬೈಕಿನಿಂದ ಬಿದ್ದ ತಮ್ಮನೇ ಎದ್ದು ಮನೆಗೆ ಹೋಗೋಣ ನನಗೆ ಏನೂ ಆಗಿಲ್ಲ ಆರಾಮವಾಗಿದ್ದೇನೆ ಎಂದು ತಿಳಿಸಿ ತಾನಿರುವ ಊರಿಗೆ ಅವರೊಂದಿಗೆ ಹೋಗಿದ್ದಾನೆ. ಸುಮ್ಮನೆ ಅವರಿವರ ಕಾಟ ಬೇಡ ಎಂದು ವೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ, ಹೀಗಾಗಿ ದೂರದಲ್ಲಿರುವ ಅಣ್ಣನಿಗೆ ಸಂಪರ್ಕವಿಲ್ಲದೇ ಒದ್ದಾಡುವಂತಾದ್ದುದು ಸಹಜ.  ವಿಷಯ ಗೊತ್ತಾಗಿದ್ದುದರಿಂದ ಮರುದಿನ ಸೂರ್ಯೋದಯಕ್ಕೂ ಮುನ್ನ ಹೊರಟು ಮುಂಜಾನೆಯೇ ಡಾಕ್ಟರ್ರಲ್ಲಿ ಅವನನ್ನು ಕರೆದುಕೊಂಡು ಸ್ಥಳಿಯ ನರ್ಸಿಂಗ್ ಹೋಂ ಒಂದಕ್ಕೆ ಕರೆದುಕೊಂಡು ಚಕ್ ಅಪ್ ಮಾಡಲು ಹೋದಾಗ ಎಕ್ಷರೇ ತೆಗೆದ ಡಾಕ್ಟರು ಎದೆ ಗೂಡಿನ ಐದು ಎಲವು ಹಾಗೂ ಕಾಲರ್ ಬೋನ್ ಮುರಿದಿರುವ ಬಗ್ಗೆ ತಿಳಿಸಿ, ಸೂಕ್ತ ಚಿಕಿತ್ಸೆ ನೀಡಿದರು.  ತಲೆಯ ಸ್ಕಾನ್ ಮಾಡಿಸಲು ಕೋರಿದಾಗ ಅದು ಅವಶ್ಯಕತೆ ಇಲ್ಲವೆಂದು ಡಾಕ್ಟರು ತಿಳಿಸಿದ್ದರಿಂದ ನಿರಾಳ ಮನದಿಂದ ಮನೆಗ ಕರೆತಂದರು.
     ಮತ್ತೆರಡು ದಿನಗಳ ನಂತರ ಒಮ್ಮೆಲೇ ರಾತ್ರಿ ಫಿಟ್ಸ್ ಬರಹತ್ತಿದಾಗ, ತಮ್ಮನ ಮಗ ರಾತ್ರಿ ಒಂದು ಗಂಟೆಗೆ ಫೋನ್ ಮಾಡಿ ದೊಡ್ಡಪ್ಪ ನನಗೇನೂ ತೋಚುತ್ತ ಇಲ್ಲ, ಏನು ಮಾಡುವುದು, ಎಲ್ಲಿಗೆ ಒಯ್ಯುವುದು ಎಂದೆಲ್ಲ ಆತಂಕದಿಂದ ಫೋನ್ ಮಾಡಿದಾಗ, ನೆಟ್ ನಲ್ಲಿ ನೋಡಿ ಐದೇ ನಿಮಿಷದಲ್ಲಿ ಯಾವುದಾದರೂ ಎಲ್ಲ ವ್ಯವಸ್ಥೆಗಳಿರುವ ಅಸ್ಪತ್ರೆಗಳಿರುವಲ್ಲಿ ಮೂರು ಗಂಟೆಯೊಳಗಾಗಿ  ಚಿಕಿತ್ಸೆ ದೊರೆಯದಿದ್ದರೆ ರೋಗಿಗೆ ಹೃದಯಸ್ಥಂಭನ ವಾಗುವುದು ಎಂದು ವಿವರಗಳು ಇದ್ದುದರಿಂದ ಕೂಡಲೇ ದೊಡ್ಡ ಪಟ್ಟಣದ ಒಂದು ಸುಸಜ್ಜಿತ ಆಸ್ಪತ್ರೆಗೆ ಸಾಗಿಸಲಾಯಿತು, ಈ ಆಸ್ಪತ್ರೆಗೆ ಹೋದವರು ಹೆಣವಾಗಿಯೇ ಬರುತ್ತಾರೆಂದು ರೋಗಿಯ ಸಂಬಂಧಿಗಳು ನಿರ್ಗತಿಕರಾಗುತ್ತಾರೆಂದು ಅನೇಕರಿಂದ ಕೇಳಿದ್ದರೂ ಅನಿವಾರ್ಯವಾಗಿ ಅಲ್ಲಿಗೆ ಕರೆದುಕೊಂಡು ಹೋಗಲು ತಿಳಿಸಿ, ಅವರಿಗೆ ಸಹಾಯ ಮಾಡಲು ಸಮೀಪದ ಸಂಬಂಧಿಗಳಿಗೆ ಫೋನಾಯಿಸಿ ಅವರನ್ನೆಲ್ಲ ಅಪರಾತ್ರಿ ಎಬ್ಬಿಸಿ ರೋಗಿಗೆ ಒಳೋಪಚಾರ ಮಾಡಿಸಲು ಕ್ರಮ ಕೈಕೊಳ್ಳಲಾಯಿತು, ಒಂದು ಗಂಟೆಯ ಪ್ರಯಾಣ ಮಾಡಿ ಅಲ್ಲಿಗೆ ತರುವಷ್ಟರಲ್ಲಿ ಸಮೀಪ ಬಂಧುಗಳು ಎಲ್ಲ ಉಪಕ್ರಮ ಕೈಗೊಂಡಿದ್ದರಿಂದ ನೇರವಾಗಿ ಐಸಿಯು ಗೆ ಸ್ಥಳಾಂತರಿಸಿ, ಚಿಕಿತ್ಸೆ ಕೊಡಿಸಲಾಯಿತು, ಫಿಟ್ಸ್ ಬಂದಾಗ ಎಚ್ಚರ ತಪ್ಪಿದ್ದ ರೋಗಿ ನಾಲ್ಕಾರು ದಿನಗಳಲ್ಲಿ ಗುರುತು ಹಿಡಿದು ಮುಗುಳ್ನಗುವುದಷ್ಟರ ಮಟ್ಟಿಗೆ ಗುಣಮುಖನಾಗುತ್ತಿದ್ದಂತೆಯೆ ಇನ್ನು ಗುಣಮುಖವಾಗುತ್ತಾನೆಂದು ಡಾಕ್ಟರ್ ಸಹಿತ ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ, ಒಂದು ದಿನ ಕೋಮಾಕ್ಕೆ ಜಾರುತ್ತಿದ್ದಂತೆಯೇ ತಕ್ಷಣ ತಲೆಯಲ್ಲಿ ಗಡ್ಡೆಗಟ್ಟಿದ ರಕ್ತದ ಗೆಡ್ಡೆಗಳನ್ನು ತೆಗೆಯದೇ ಹೋದರೆ ಅಪಾಯ ಎಂದು ತಿಳಿಸಿ, ಸುದೀರ್ಘ ನಾಲ್ಕು ತಾಸು  ಆಪರೇಶನ್ ಮಾಡಿ ಮೆದುಳಿನಲ್ಲಿ ಶೇಖರವಾಗಿದ್ದ ಗೆಡ್ಡೆಗಳನ್ನು ಹೊರತೆಗೆಯಲಾಯಿತು.
    ದಿನ ಬಿಟ್ಟು ದಿನ ತಮ್ಮನ ಆರೋಗ್ಯ ವಿಚಾರಿಸಲು ಹೋಗುತ್ತಿದ್ದ ಅಣ್ಣನಿಗೆ ಒಂದು ದಿನ ರೋಗಿಯ ಹತ್ತಿರವಿರುವ ತಮ್ಮನ ಹೆಂಡತಿಯ ಹತ್ತಿರ ಯಾರಾದರೂ ಜವಾಬ್ದಾರಿ ಇರುವ ದೊಡ್ಡವರನ್ನು ಇಂದು ಕರೆಸಿ ಎಂದು ಮುಂಜಾನೆಯ ರೌಂಡನಲ್ಲಿ ತಿಳಿಸಿದ ಡಾಕ್ಟರ್ರ ಸಲಹೆಯಂತೆ ಒಂದು ಗಂಟೆ ಪ್ರಯಾಣದೂರದಲ್ಲಿರುವ ಅಣ್ಣನಿಗೆ ಬರಹೇಳಲಾಯಿತು, ಕೂಡಲೇ ಎಲ್ಲ ಕೆಲಸ ಬದಿಗೊಟ್ಟಿ ಆಸ್ಪತ್ರೆಗೆ ಹೋಗಿ ವಿಚಾರಿಸಲು ಮದ್ಯಾಹ್ನ ನಾಲ್ಕು ಗಂಟೆ ನಂತರ ಭೇಟಿಯಾಗಿ ಅಂದರು. ನಂತರ ಸಂಜೆ ಏಳು ಗಂಟೆಯಾದರೂ ಬರದ ಡಾಕ್ಟರ ಹತ್ತಿರ ಮಾತನಾಡಬಹುದೇ ಎಂದು ಕೇಳಿದಾಗ ರೋಗಿಯ ಹತ್ತಿರ ನಿಲ್ಲಲು ತಿಳಿಸಿದಂತೆ  ಏನು ಹೇಳುವರೋ ಎಂದು ಆತಂಕದಿಂದ ಅವರ ಬರವನ್ನೇ ಕಾಯುತ್ತಿದ್ದಾಗ ಕೊನೆಗೂ ಬಂದರು, ಬಂದು ತಮ್ಮ ಸಿಬ್ಬಂದಿಗೆ ಸೂಚನೆ ನೀಡುತ್ತ ಮುಂದೆ ಹೋಗುತ್ತಿದ್ದುದನ್ನು ನೋಡಿ, ಸರ್ ನವ್ಮೊಡನೆ ಮಾತನಾಡುವುದಾಗಿ ತಿಳಿಸಿದ್ದರಿಂದ ನಾವು ಬಂದಿದ್ದೇವೆ ಎಂದು ನಮ್ರವಾಗಿ ಅರಿಕೆಮಾಡಿಕೊಂಡಾಗ ನೀವಾರು, ಯಾರೋ ಒಬ್ಬ ಸಿಬ್ಬಂದಿ ಕಡೆಗೆ ಮುಖಮಾಡಿ ‘ಏ ಬೋಲ್ ಬಾ ಇನ್ ಕೋ ಬಡೇ ಆಯೇ ಪೂಛನೇವಾಲೇ’ ಎಂದು  ಗೊಣಗಿಕೊಂಡು ಮುಂದೆ ಹೋದರು, ಅಣ್ಣ ಸ್ಥಂಭೀಭೂತನಾದ, ಡಾಕ್ಟರುಗಳು ಹೀಗೂ ಇರುತ್ತಾರೆಂದು ಕನಸು ಮನಸಿನಲ್ಲೂ ಎಣಿಸದಿದ್ದ ಅವನಿಗೆ, ತಮ್ಮನನ್ನು ಬಿಡಿ, ಈ ಡಾಕ್ಟರು ಎಂಬ ಮನುಷ್ಯ ತನ್ನ ರೋಗಿಗಳ ಕುರಿತು ಸ್ವಲ್ಪಾದರೂ ವಿವೇಚನೆ ಇಲ್ಲದ ನರರಾಕ್ಷಸನಂತೆ ಕಂಡ, ಒಬ್ಬ ಲೇಮ್ಯಾನ್ ಗೆ ಇರುವ ಸೌಜನ್ಯವಿರದ ವ್ಯಕ್ತಿತ್ವಹೀನ ಮನುಷ್ಯ. ಜನಸೇವೆಯ ನಾಟಕ ಮಾಡುವ ವೇಷಧಾರಿ, ಕೊನೆಯ ವರೆಗು ಅಲ್ಲಿರುವವರೆಗೂ ಯಾರೊಂದಿಗೂ ಮುಖ ಕೊಡದೇ, ಅವನಿಗೆ ಏನಾಗಿದೆ ಎಂದು ಏನೊಂದೂ ಹೇಳದೇ ದಿನಕ್ಕೊಂದು ಟೆಸ್ಟ್ ಹೇಳಿ ದುಡ್ಡು ತುಂಬಲು ತಿಳಿಸಿ, ಚಿತ್ರಹಿಂಸೆ ನೀಡುವ ಯಮಕಿಂಕರ, ಇಂತಹವರಿಗೆ ವೊದಲು ಮೆಡಿಕಲ್ ಸಬ್ಜೆಕ್ಟ್ ಕಲಿಸುವ ಮುನ್ನ  ಮನುಷ್ಯತ್ವದ ಪಾಠ ಹೇಳಬೇಕಾದುದು, ವ್ಯಕ್ತಿತ್ವ ವಿಕಸನದ ಪಾಠ ಬಿಡಿ,ಅದು ವ್ಯಕ್ತಿತ್ವ ಇದ್ದವರಿಗೆ, ಮನುಷ್ಯತ್ವವಿಲ್ಲದವರಿಗೆ ಏನು ಮಾಡಬೇಕೆಂದು ಆಕ್ರೋಶಿಸಿತು ಅಣ್ಣನ ಮನ ಹತಾಶವಾಗಿ. ಕೂಸಿನಂತೆ ಉದ್ದಕ್ಕೂ ಮಲಗಿದ ತಮ್ಮನತ್ತ ನೋಡುತ್ತ ಕಣ್ಣೀರು ದಳದಳನೆ ಉದುರುವುದನ್ನು ಕಷ್ಟಪಟ್ಟು ತಡೆಯುತ್ತ, ಹೊರಬಂದವು ಕಾಲುಗಳು.   ಇಂತಹ ಮನಸ್ಥಿತಿಯ ಒಬ್ಬ ಡಾಕ್ಟರನಿಂದ ನೂರು ಡಾಕ್ಟರ್ಗಳನ್ನು ಸಂಶಯದಿಂದ ನೋಡುವ  ಬದಲು ಇಂತಹವರಿಗೆ ನಡೆ ನುಡಿ ಕಲಿಸುವ ಕೆಲಸವಾಗಬೇಕು. ಹಲವಾರು ಸೆಕ್ಷನ್ಗಳಲ್ಲಿ ಒಬ್ಬರಿಗೊಬ್ಬರು ಮೈಮೇಲೆ ಹಾಕಿಕೊಳ್ಳದೇ ಸುಮ್ಮನೇ ದಿನದೂಡುವವರು, ಬೇರೆ ಆಸ್ಪತ್ರೆಗೆ ತೋರಿಸುವ ಇಚ್ಚೆ ವ್ಯಕ್ತಪಡಿಸಿದಾಗ ‘ಅಗೇನಸ್ಟ್ ಮೆಡಿಕಲ್ ಅಡ್ವೈಸ್’ ಎಂದು ಹೇಳಿ ಯಾವುದೇ ರೆಕಾರ್ಡ ನೀಡದೇ, ಬಿಡುUಡೆಗೊಳಿಸುವ ಇಂತಹ ಆಸ್ಪತ್ರೆಗಳು ರೋಗಿಗಳಿಗಾಗಿ ಇರುವವೇ ಎಂದು ಸಂಶಯವಾಯಿತು.  ಎಲ್ಲಿದೆ ಬಡರೋಗಿಗೆ ಚಿಕಿತ್ಸೆ ಈ ದೇಶದಲ್ಲಿ ಎಂಬ ಕೊರಗನ್ನು ಅನುಭವಿಸಿ, ಸಂಕಟವಾಯಿತು ಅಣ್ಣನಿಗೆ. ರೋಗಿಯಾದರೂ ಸಣ್ಣ ಸಂಬಳದವನಾದ್ದರಿಂದ  ಬಿಪಿಎಲ್ ಕಾರ್ಡ ಸಿಗುವುದಿಲ್ಲ, ಮೆಡಿಕಲ್ ಬಿಲ್ಗಳು ಸಂದಾಯವಾಗುತ್ತವೆ ಎಂಬುವದಿದ್ದರೂ ನಿಯಮಾವಳಿಗಳನ್ನು ಪಾಲಿಸಿ ಅವುಗಳ ಮರುಪಾವತಿಗೆ ಸಂಬಂಧಿಗಳ ಕರುಣೆತುಂಬಿದ ಕಣ್ಣುಗಳು ದಾರಿ ನೋಡುತ್ತಿವೆ  ಒಂಥರಾ ಸಂಕಟದ ಪರಸ್ಥಿತಿ.
     ಪೋಸ್ಟ ಆಪರೇಶನ್ ಉಪಚಾರ ಏನೇ ಮಾಡಿದರೂ ಗುಣಮುಖವಾಗದ ಕಾರಣ, ಪ್ರತಿ ನಿತ್ಯ ಅಸ್ಪತ್ರೆಯ ಹತ್ತಾರು ಸಾವಿರಗಳನ್ನು ಪೂರೈಸಲು ಸಾಧ್ಯವಾಗದೇ ರೋಗಿಗಳ ಸಂಬಂಧಿಗಳ ಹೊಟ್ಟೆಗೇ ದುಡ್ಡು ತೀರಿದ್ದರಿಂದ ಎರಡೂವರೆ ತಿಂಗಳ ಪ್ರಯತ್ನದನಂತರ ಏನಾದರೂ ತಾಯಿಯ ಊರಿನಲ್ಲಿಯೇ ಆಗಲಿ ಎಂದು ತಾಯಿಯ ಹತ್ತಿರ ತರಲಾಯಿತು, ಒಂದು ವಾರ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ನಂತರ ಮನೆಗೆ ಸ್ಥಳಾಂತರಿಸಲಾಯಿತು.  ಆಸ್ಪತ್ರೆಯಲ್ಲಿ ತಿಳಿಸಿದಂತೆ ಮೂಗಿನ ಮುಖಾಂತರ ಜೋಡಿಸಿದ ನಳಿಗೆಯಲ್ಲಿ ಗಂಜಿ ಹಾಗೂ ಗಂಟಲಿನ ತೂತಿನ ಮುಖಾಂತರ ಉಸಿರಾಡುವ ಜೀವಂತ ದೇಹದೊಂದಿಗೆ ಮಲಗಿದವನಿಗೆ ಈಗ ನಾಲ್ಕುತಿಂಗಳು ಮುಗಿದು ಐದನೇ ತಿಂಗಳಿಗೆ ಜಾರಿದ ಕೋಮಾ ಸ್ಥಿತಿ. ಮಲಗಿದ ತಮ್ಮನ ಪಕ್ಕದಲ್ಲಿಯೇ ತಾಯಿ ಕುಳಿತರೂ ತಿಳಿಯದು, ಮಗ ಹತ್ತಿರ ಕುಳಿತು ಮಾತಾಡಿದರೂ ಮಾರುತ್ತರವಿಲ್ಲ. ಎಲ್ಲ ಬಂಧುಗಳು ಸುತ್ತ ನೆರೆದರೂ ಗುರುತಿಸದ ಸಮಾಧಿಸ್ಥಿತಿ. ಜೀವಂತ ದೇಹವೊಂದು  ಅದಾವುದನ್ನೂ ತನ್ನ ಮನಸ್ಸಿಗೆ ತೆಗೆದುಕೊಳ್ಳದ ಯೋಗಿಯ ಹಾಗೆ ಕಣ್ಣುಮಾತ್ರ ಬಿಡುತ್ತ ಮುಚ್ಚುತ್ತ, ಧ್ಯಾನಸಕ್ತನಾಗಿರುವ ಈ ತಪಸ್ವಿಯ ಕೋಮಾ ಸ್ಥಿತಿ ಮುಂದುವರೆದಿದೆ,  ಆ ದೇವರಿಗೆ ಇನ್ನೇನು ಬೇಕಾಗಿದೆಯೋ, ಆಡಿಸುತ್ತ ಇದ್ದಾನೆ, ಅವನ ಬೇಸರ ಎಂದು ಮುಗಿಯುವುದೋ ಕಾಯುತ್ತಿದ್ದಾರೆ. ಹೆಂಡತಿ ಮಕ್ಕಳು, ಹಾಗೂ ಅಣ್ಣನೊಂದಿಗೆ ಮನೆಮಂದಿ ಬಂಧುಬಾಂಧವರೆಲ್ಲ. ಪ್ರೀತಿಯ ಮಗನಿಂದ ಸಿಹಿ ಸುದ್ದಿಯ ಪೇಢೇ ಸ್ವೀಕರಿಸಲು 80 ರ ವಯದ ಹಣ್ಣಾದ ಅವ್ವ ತುಂಬಿದ ಕಣ್ಣುಗಳಿಂದ ಖುದ್ದಾಗಿ ಕಾಯುತ್ತಿದ್ದಾಳೆ ಮಗ್ಗಲಲ್ಲಿ ಕುಳಿತು.  ಆ ತಂದೆ ಮಗನ ತಪಸ್ಸಿನ ಫಲದ  ಶುಭ ಸುದ್ದಿಯನ್ನು ಹೇಳಿ, ಸಿಹಿತಿನ್ನಿಸಿ, ಕಾಲುಮುಟ್ಟಿ, ಆಶೀರ್ವಾದ ಪಡೆಯಲು ತವಕಿಸಿದ ಆ ಮುಗ್ಧ ತಂದೆಗೆ ಈ ಶಿಕ್ಷೆಯೇ ದೇವರೇ! ಈ ಶಿಕ್ಷೆ ನ್ಯಾಯವೇ? ಕೇಳುತ್ತದೆ ಅಣ್ಣನ ಮನ ದೈನ್ಯತೆಯಿಂದ.   
ಕಿವಿಯಲ್ಲಿ ತಮ್ಮನ ಕೊನೆಯ ಮಾತುಗಳು ಇನ್ನೂ ರಿಂಗುಣಿಸುತ್ತಿವೆ ಈ ಅಣ್ಣನಿಗೆ, “ಯಾರ್ರಿ, ಯಾರ್ರಿ, ಯಾರ್ರಿ”.
 

Rating
No votes yet