ಅರಿಯದೆ ಕುವರಿಯನಿತ್ತೆ . . .

ಅರಿಯದೆ ಕುವರಿಯನಿತ್ತೆ . . .

 

 

ರಾಗ: ಸಾವೇರಿ

ಅರಿಯದೆ ಕುವರಿಯನಿತ್ತೆ | ಸರ್ವ | ಸುರರೊಳು ಲಾಘವವೆತ್ತೆ | ಸರಸಿಜಭವ ಸುರ | ವರರು ಬೋಧಿಸೆ ಲೋಕ | ಗುರುವೆಂದು ಕೇಳ್ದತಿ | ಮರುಳಾಗಿ ಗೊರವಗಾನರಿಯದೆ  ||ಪ||


ವರ ವ್ಯಾಘ್ರ ಚರ್ಮವನ್ನುಟ್ಟು | ವಿಷ | ಧರ ಭೂಷಣಂಗಳನಿಟ್ಟು | ಕರಿಚರ್ಮಮಂ ಪೊದೆ | ದೊರಲುವ ತಲೆಯೋಡ | ಕರದಿ ಪಿಡಿದು ನಿಚ್ಚ | ಚರಿಸುವನಾಥನಿಗರಿಯದೆ              || ೧ ||


ಪಿಂಗದೆ ಪಳೆಯೆತ್ತನೇರಿ | ಮುದಿ | ಸಿಂಗಿಯ ವಿಷವನು | ಪೀರಿ ಕಂಗೊಳಿಸುವ ಶಬ | ರಾಂಗವ ಧರಿಸಿ ಕ | ರ್ಮಂಗಳ ವರ್ಜಿಸಿ | ದಿಂಗಳಗಣ್ಣಗಾನರಿಯದೆ                         || ೨ ||


ರೂಢಿಯರಿಯೆ ತಿರಿದುಂಡು | ಮೈಗೆ | ಕಾಡ ಬೂದಿಯ ಪೂಸಿ ಕೊಂಡು | ಕೋಡುಗಲ್ಲೊಳು ಗೂಡ | ಮಾಡಿ ಭೂತಗಳೊಡ | ನಾಡಿ ಬತ್ತಲೆ ಕುಣಿ | ದಾಡುವ ಮರುಳಗಾ | ನರಿಯದೆ || ೩ ||


ಊರೊಳಗಿರ್ಪುದ ಬಿಟ್ಟು | ಕಾಡ | ಸೇರಿ ಮೂರೂರ್ಗಳ ಸುಟ್ಟು | ಕ್ರೂರ ಬಾಣನ ಪಡಿ | ಹಾರನೆಂದೆನಿಸಿ ಪು | ನ್ನಾರಿರವನಾಂತು | ನಾರ ಪೊತ್ತಿರುವಗಾನರಿಯದೆ || ೪ ||


ಪಲವು ನಾಮಂಗಳ ನಾಂತು | ಎಲು | ದಲೆ ಮಾಲೆಗಳ ತಳೆದಿಂತು | ಸುಲಭನಲ್ಲದೆ ಮನವಳಿದು ಸಂಸಾರವ | ನುಳಿದು ಲೋಗರ ಶೂಲೆ | ಗೆಳಸುವ ಮರುಳಗಾನರಿಯದೆ     || ೫ ||

 

     ಇದು ೧೮ನೆಯ ಶತಮಾನದ ಲಿಂಗಣ್ಣಕವಿ (ಕವಿ ಮನೆತನದ ಮೂಲ ಪುರುಷ) ರಚಿಸಿದ ಖಂಡ ಕಾವ್ಯ  'ದಕ್ಷಾಧ್ವರ ವಿಜಯ' ಕೃತಿಯಲ್ಲಿ ದಕ್ಷನು ಪರಮೇಶ್ವರನಿಗೆ ತನ್ನ ಮಗಳನ್ನು ಕೊಟ್ಟ ಬಗ್ಗೆ ಹಳಹಳಿಸುವ, ಶಿವನನ್ನು ನಿಂದಿಸುವ ಸನ್ನಿವೇಶ. ತಾನೇ ಶ್ರೇಷ್ಠನೆಂಬ ಹಮ್ಮಿನಿಂದ ಬೀಗುತ್ತಿದ್ದ ದಕ್ಷನನ್ನು ಶಿವ ಎದ್ದು ಗೌರವಿಸಲಿಲ್ಲವೆಂಬ ಕಾರಣದಿಂದ ಸಿಟ್ಟಿಗೆದ್ದ ದಕ್ಷ ಶಿವನನ್ನು ನಿಂದಿಸುವ ಸನ್ನಿವೇಶದಲ್ಲಿ ಇದನ್ನು ಕವಿ ರಚಿಸಿದ್ದಾನೆ. ಕವಿಯೇ ಹೇಳಿಕೊಂಡಿರುವಂತೆ 

 

"ಪಳಗನ್ನಡದೊಳಚ್ಚ ಸಕ್ಕದಂಗಳೊಳುಸುರೆ |

ತಿಳಿಯಲ್ಕೆ ಕೆಲಬರ್ಗಸಾಧ್ಯಮೆಂದು ||

ತಿಳಿದುತದ್ಭವಮಿಶ್ರದೇಶೀಯವರ್ಣಕೋ |

ಜ್ವಲ ವಸ್ತುಕಾನ್ವಿತ ಸುಗಾನ ಭಣಿತೆಯೊಳು ||" ಇದನ್ನು ರಚಿಸಿದ್ದಾನೆ. 

ಇದು ಕೆಳದಿ ಕವಿಮನೆತನದ 7ನೆಯ ತಲೆಮಾರಿನ ಬಹುಮುಖ ಪ್ರತಿಭೆ ದಿ. ಎಸ್.ಕೆ. ಲಿಂಗಣ್ಣಯ್ಯನವರು (1879-1943) ರಚಿಸಿದ ಚಿತ್ರ -  'ವೀರಭದ್ರ ಸೃಷ್ಟಿ'

 

 

 

Comments

Submitted by ಗಣೇಶ Sun, 12/23/2012 - 23:32

>>>ಕೋಡುಗಲ್ಲೊಳು ಗೂಡ ಮಾಡಿ ಭೂತಗಳೊಡನಾಡಿ.... ಕವಿನಾಗರಾಜರೆ, ಈ ಲೇಖನ ಅದು ಹೇಗೆ ನನ್ನ ಕಣ್ಣು ತಪ್ಪಿಸಿತೋ ಕಾಣೆ. ನೀವು ಬರೆದ ಹಳೆಯ ಲೇಖನಕ್ಕಾಗಿ ಹುಡುಕುವಾಗ ನೋಡಿದೆ. >>> "ಸರಸಿಜಭವ ಸುರವರರು ಬೋಧಿಸೆ ಲೋಕ ಗುರುವೆಂದು ಕೇಳ್ದತಿ ಮರುಳಾಗಿ ಗೊರವಗಾನರಿಯದೆ ಕುವರಿಯನಿತ್ತೆ..." --ಛೇ.. >>>"ವ್ಯಾಘ್ರ ಚರ್ಮವನ್ನುಟ್ಟು ವಿಷಧರ ಭೂಷಣಂಗಳನಿಟ್ಟು ಕರಿಚರ್ಮಮಂ ಪೊದೆದೊರಲುವ ತಲೆಯೋಡ ಕರದಿ ಪಿಡಿದು..." ವ್ಹಾ ವ್ಹಾ..ಉತ್ತಮ ಕಾವ್ಯದ ಪರಿಚಯ ಮಾಡಿದಿರಿ. -ಪಳಗನ್ನಡದೊಳಚ್ಚ ಸಕ್ಕದಂಗಳೊಳುಸುರೆ ತಿಳಿಯಲ್ಕೆ ಕೆಲಬರ್ಗಸಾಧ್ಯಮೆಂದು... :) ಲಿಂಗಣ್ಣ ಕವಿಯವರು ರಚಿಸಿದ ಚಿತ್ರವೂ ಚೆನ್ನಾಗಿದೆ. ಕವಿಮನೆತನದ ತಮಗೂ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇದೇ ಕಾರಣದಿಂದ.. -ಗಣೇಶ.