ಮತ್ತೆ ಮತ್ತೆ ಕಾಡುವ ನೆನಪುಗಳು
ಮಾತು ಆಡಿದಷ್ಟೂ ಮುಗಿಯದ ವಿಷಯಗಳು. ನಕ್ಕ ಷ್ಟೂ ಹೆಚ್ಚುತ್ತಿದ್ದ ಹಾಸ್ಯಗಳು. ಅದೆಷ್ಟು ಚೆನ್ನಾಗಿದ್ದವು ಆ ದಿನಗಳು. ಒಂಭತ್ತು ಗಂಟೆಯ ತರಗತಿಗೆ ಹಾಜರಾಗುತ್ತಿದ್ದದ್ದು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಎಲ್ಲರೂ ಆಯ್ಕೆ ಮಾಡಿಕೊಳ್ಳುತ್ತಿದ್ದದ್ದು ಹಿಂದಿನ ಬೆಂಚನ್ನೇ. ಕಾರಣ ಹೇಳಬೇಕೆಂದಿಲ್ಲಾ ಅಲ್ವಾ? ನಾವೇ ಜೋರಾಗಿ ಹಾಡಿಕೊಳ್ಳುತ್ತಿದ್ದುಂಟು ಹಿಂದಿನ ಬೆಂಚಿನ ಹುಡುಗರು ಎಂದರೆ ನಮಗೇ ಯಾರ ಭಯವಿಲ್ಲ...ಅದಕ್ಕೆ ತಕ್ಕಂತೆ ಚೇಷ್ಟೆಗಳೂ ಜತೆಯಲ್ಲಿ ಸಾಗುತ್ತಿದ್ದವು. ಪ್ರತಿಯೊಂದು ಉಪನ್ಯಾಸಕರಿಗೂ ಒಂದೊಂದು ಹೆಸರು ನಾವೇ ಇಟ್ಟದ್ದು. ನಿಜ ನಾಮಧೇಯದಲ್ಲಿ ಕರೆಯುತ್ತಿದ್ದಿದ್ದು ಬಹಳ ಅಪರೂಪ. ಪಾಠ ಸಾಕು ಎಂದೆನಿಸಿದಾಗ ಶುರುವಾಗುತ್ತಿದ್ದ ಹಾಡುಗಳು ಉಪನ್ಯಾಸಕರಿಗೆ ಮುನ್ಸೂಚನೆ ನೀಡುತ್ತಿದ್ದವು. ಅಲ್ಲಿಯೇ ಪಾಠ ನಿಲ್ಲಿಸಿದರೆಂದರೆ ಶುರುವಾಗುತ್ತಿತ್ತು, ಸರಿ ಯಾರೆಲ್ಲಾ ಅಸೈನ್ಮೆಂಟ್ ಕಂಪ್ಲೀಟ್ ಮಾಡಿದ್ದೀರಿ? ತರಗತಿಯಲ್ಲಿ ಗೆಳೆಯರೆದುರು ಅವಮಾನವಾಗಬಾರದೆಂಬ ಕಾರಣಕ್ಕೆ ಎಲ್ಲರೂ ಅಸೈನ್ಮೆಂಟ್ ಕಂಪ್ಲೀಟ್ ಮಾಡಿದ್ದೇವೆ ಎನ್ನುವ ಉತ್ತರ. ಆದರೆ ಕೆಲಸ ಮುಗಿಸಿರುತ್ತಿದ್ದವರು ಅರ್ಧದಷ್ಟು ಜನ ಮಾತ್ರ. ನಂತರ ಇದ್ದೇ ಇದೆಯಲ್ಲಾ..ನೂರೆಂಟು ಕಾರಣಗಳನ್ನು ಆಫೀಸು ಕೊಠಡಿಯಲ್ಲಿ ಹೇಳಿ ಒಂದೆರಡು ದಿನಗಳ ಹೆಚ್ಚಿನ ಕಾಲಾವಕಾಶ ಕೇಳುವ ಪರಿ. ಒಬ್ಬನಿಗೆ ಅನುಮತಿ ಸಿಕ್ಕಿತೆಂದರೆ ಸಾಕು. ಸಾಲು ಸಾಲಾಗಿ ಹೋಗಿ ಉಪನ್ಯಾಸಕರ ಮನಸ್ಥಿತಿಯನ್ನರಿತು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದದ್ದು. ಕಾಲೇಜು ವಾರ್ಷಿಕೋತ್ಸವ, ಪ್ರತಿಭಾ ದಿನಾಚರಣೆ ಬಂತೆಂದರೆ ಸಾಕು ಪ್ರತಿಯೊಂದು ತರಗತಿಯಲ್ಲೂ ಪ್ರಾಕ್ಟೀಸ್ ಗಾಗಿ ಸಮಯ ಕೊಡಿ ಸರ್ ಇವತ್ತೊಂದು ದಿನ ಪಾಠ ಬೇಡ ಸರ್ ಎಂಬ ಮಾತಿಗೆ ಇಲ್ಲ ಅನ್ನಲಾಗದೆ ಮನಸ್ಸಿಲ್ಲದ ಮನಸ್ಸಿನಿಂದ ಏನದ್ರೂ ಮಾಡಿಕೊಳ್ಳಿ ಹೋಗಿ ಸಿಲೆಬಸ್ ಮುಗ್ದಿಲ್ಲ ಅಂತ ನನ್ನನ್ನು ದೂರಬಾರದು ಎಂದು ಹೋಗುತ್ತಿದ್ದರು.
ತರಗತಿಯಲ್ಲಿ ಯಾರದ್ದಾದರೂ ಹುಟ್ಟು ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ,ಖುಷಿ. ಬೋರ್ಡ್ ಮೇಲೆ ಹೆಸರಿನೊಂದಿಗೆ ಶುಭಾಶಯ ಬರೆದು ಬರ್ತ್ ಡೇ ಬೇಬಿ ಸಿಹಿತಿಂಡಿ ಹಂಚುವವರೆಗೂ ಹಾಡು ನಿಲ್ಲುತ್ತಿರಲಿಲ್ಲ.
ಅಲ್ಲದೆ ಆ ದಿನ ಹುಟ್ಟು ಹಬ್ಬ ಆಚರಿಸಿಕೊಳ್ಳವವರು ಯಾವುದೇ ತಪ್ಪು ಮಾಡಿದರೂ ಅವರಿಗೆ ಯಾರೂ ಏನೂ ಮಾಡುತ್ತಿರಲಿಲ್ಲ. ಒಂದು ದಿನದ ವಿನಾಯಿತಿ ಇದೆಯೆಂದು ಸಾಧ್ಯವಾದಷ್ಟು ಗೆಳೆಯರನ್ನು ,ಉಪನ್ಯಾಸಕರನ್ನು ಗೋಳು ಹೊಯ್ಕೊಳ್ಳುತ್ತಿದ್ದರು. ಹುಟ್ಟುಹಬ್ಬದ ದಿನಗಳಲ್ಲಿ ಹೆಚ್ಚಾಗಿ ಗೆಳೆಯರ ಬಳಗ ಇರುತ್ತಿದ್ದದ್ದು ಓಪನ್ ಕ್ಲಾಸ್ನಲ್ಲಿ ಅಥವಾ ಕ್ಯಾಂಟೀನ್ನಲ್ಲಿ. ಹೀಗೆ ಈ ಆಚರಣೆಗಳು ಸುಂದರ ಅನುಭವದ ನೆನಾಪಾಗಿ ನೆನಪಿನ ಬುತ್ತಿಯನ್ನು ಸೇರಿಕೊಳ್ಳುತ್ತಿದ್ದವು.
ಇನ್ನು ತರಗತಿ ಪರೀಕ್ಷೆಗಳ ಸ್ಥಿತಿಯನ್ನು ಕೇಳೋದೇ ಬೇಡ ಅಂತನ್ನಿಸಬಹುದು. ಯಾಕಂತೀರಾ..ದಿನಾಲೂ ಕುಳಿತುಕೊಳ್ಳವ ಜಾಗದಲ್ಲೆ ಇರುತ್ತಿದ್ದರಿಂದ ಪಾಯಿಂಟ್ಸ್ ಬುಕ್ಗಳು ಜತೆಗೇ ಇರುತ್ತಿದ್ದವು. ಇನ್ನು ಕ್ಲಾಸಿನ ಹರಟೆಯನ್ನಂತೂ ಹೇಳತೀರದು. ಮಾತು ಮಾತಿಗೂ ನಗು,ಹುಸಿಕೋಪ..ಮನೆಯಿಂದ ತರುತ್ತಿದ್ದ ಮಧ್ಯಾಹ್ನದ ಬುತ್ತಿಯನ್ನು ಖಾಲಿ ಮಾಡಿ ಏನೂ ಗೊತ್ತಿಲ್ಲದವರಂತೆ ಕುಳಿತುಕೊಳ್ಳೋದು. ಪಾಠಗಳ ನಡುವೆ ಮುಂದಿನ ಬೆಂಚಿನಲ್ಲಿ ಕುಳಿತಿರುವವರ ತಲೆಗೂದಲು ಎಳೆಯುವುದು, ಚಪ್ಪಲಿಯನ್ನು ಕಳಚಿ ಕುಳಿತಿದ್ದರೆಂದರೆ ಇನ್ನೊಬ್ಬರ ಕಾಲಡಿಗೆ ಅವುಗಳನ್ನು ಜಾರಿಸಿ ಬಿಡುವುದು, ಕಾರಣವಿಲ್ಲದೆ ಟ್ರೀಟ್ ಕೊಡಿಸಲು ಹೇಳುವುದು.. ಅದೂ ತರಗತಿಯ ಟೀ ಅಸೊಸಿಯೆಷನ್ನಿಂದ ..ಹೀಗೆ ನೆನಪಿನ ಬುತ್ತಿಯನ್ನು ತೆರೆದಷ್ಟೂ ನೆನಪಾಗುತ್ತಿರುವ ಸವಿ ಸವಿ ನೆನಪುಗಳು ಇಂದು ನೆನೆಪಿಸಿಕೊಳ್ಳೋದಿಕ್ಕೆ ಮಾತ್ರ. ಕಾಲೇಜು ಜೀವನ ಮುಗಿದು ಆಗಲೇ ಐದಾರು ತಿಂಗಳುಗಳಾಗಿವೆ. ಉದ್ಯೋಗದ ಬೆನ್ನತ್ತಿ ಹೆಚ್ಚಿನ ಗೆಳಯರೆಲ್ಲಾ ಬೆಂಗಳೂರಿನಲ್ಲಿ ನೆಲೆಯಾಗಿದ್ದೇವೆ. ಇನ್ನು ಕೆಲವರು ಮನೆಯಲ್ಲಿ ಯಾರೂ ಇಲ್ಲವೆಂಬ ಕಾರಣಕ್ಕೆ ಮನೆಯಲ್ಲೇ ಉಳಿದುಕೊಂಡ್ರು. ಒಂದಿಬ್ಬರು ತಮ್ಮ ತಮ್ಮ ಊರುಗಳಲ್ಲೆ ಕೆಲಸ ನೋಡಿಕೊಂಡರು.
ಒಂದೇ ಗೂಡಿನಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ ಹಕ್ಕಿಗಳು ಇಂದು ತಮ್ಮ ತಮ್ಮ ನೆಲೆಯನ್ನರಸುತ್ತಾ ಅವುಗಳ ಹಾದಿಯಲ್ಲಿ ಸಾಗಿವೆ. ಕಾಲೇಜಿನ ಆ ಮೋಜಿನ ದಿನಗಳನ್ನು ಕೆಲಸದ ಒತ್ತಡವಿರುವ ಈ ದಿನಗಳಾಗಿ ಬದಲಾಯಿಸಿಕೊಳ್ಳಬೇಕಾದರೆ ಪಟ್ಟ ಪಾಡೆಷ್ಟೋ. ಐದು ನಿಮಿಷಕ್ಕೊಮ್ಮೆ ಟ್ರಾಫಿಕ್ ಜಾಮ್ ಆಗುತ್ತಿರುವ ಈ ಮಹಾನಗರದಲ್ಲಿ ಬೆಳಗ್ಗೆ ಮನೆ ಬಿಟ್ಟರೆ ಸರಿಯಾದ ಸಮಯಕ್ಕೆ ಆಫೀಸಿಗೆ ತಲುಪಬಹುದೋ ಎಂಬ ಚಿಂತೆ.. ಮಧ್ಯಾಹ್ನವಾಯಿತೆಂದರೆ ಸಂಜೆ ಆಫೀಸುಬಿಟ್ಟರೆ ರಾತ್ರಿಯಾಗುವುದರೊಳಗೆ ರೂಂ ಸೇರಿಬಿಡಬೇಕೆಂಬ ತವಕ. ಇವುಗಳ ನಡುವೆ ಬೇಡವೆಂದರೂ ನೆನಪಾಗುತ್ತಿರುವ ಮನೆ, ಮನೆಯವರು ..ಹೀಗೆ ರೂಂ ಸೇರಿದರೆಂದರೆ ನಾಳೆ ಬೇಗ ಎದ್ದು ಆಫೀಸಿಗೆ ಹೋಗಬೇಕೆಂಬ ಆಲೋಚನೆ,,,ಇವುಗಳೆಲ್ಲವನ್ನೂ ಮರೆತು ಮತ್ತೆ ಒಂದು ದಿನವಾದರೂ ಗೆಳೆಯರೆಲ್ಲರ ಜತೆಗೂಡಿ ಕಾಲೇಜಿನ ಬೆಂಚಿನ ಮೇಲೆ ಕುಳಿತು ಮತ್ತೆ ಮಕ್ಕಳಾಗೋಣ ಎಂದುಕೊಂಡರೆ "ಸಾರಿ ಕಣೇ ನಂಗ್ ರಜಾಇಲ್ಲಾ' ವೀಕ್ ಆಫ್ ನಾವು ಕೇಳಿದ್ ದಿವಸ ಕೊಡಲ್ಲ ಕಣೆ' ಒಂದು ರಜಾ ಕೊಡ್ತಾರೆ ಒಂದು ದಿನದ ಪ್ರಯಾಣವೇ ಇರುವಾಗ ಹೇಗೆ ಬರೋದು' ಇಂತಹ ಉತ್ತರಗಳು ಸಿದ್ದವಾಗಿರುತ್ತವೆ..ಆದರೂ ಮತ್ತೆ ಆ ಕಾಲೇಜಿನ ತರಗತಿಗಳಲ್ಲಿ ಒಟ್ಟಾಗುವ ದಿನದ ನಿರಿಕ್ಷೆ ಎಲ್ಲರ ಮನದಲ್ಲೂ..
ಇವೆಲ್ಲದರ ನಡುವೆಯೂ ಮತ್ತೆ ಮತ್ತೆ ನೆನಪಾಗಿ ಕಾಡಿ ತನ್ನ ತುಂಟಾಟಿಕೆಯಿಂದ ತುಟಿಯಂಚಿನಲ್ಲಿ ನಗು ತರಿಸುತ್ತಿರುವವಳು ಖುಷಿ...