ಹೇಗಿತ್ತು ದೀಪಾವಳಿ ?ಹೀಗಾಯಿತು..

ಹೇಗಿತ್ತು ದೀಪಾವಳಿ ?ಹೀಗಾಯಿತು..


ವಾರಕ್ಕೆಮುಂಚೆಯೇ  ಬಾಳೆಗೊನೆ ಕಡಿದಿಟ್ಟು  ಹಬ್ಬದ  ಸಮಯಕ್ಕೆ ಸರಿಯಾಗಿ  ಹಣ್ಣಾಗಲೆಂದು  ಅದಕ್ಕೆ ಊದುಕಡ್ಡಿಯನ್ನಿಟ್ಟು ಕಟ್ಟಿ ಇಟ್ಟರೆಂದರೆ ಬಿಚ್ಚೋದು ಹಬ್ಬದ ದಿನವೇ. ಮಕ್ಕಳೆಲ್ಲಾ ಸೇರಿ  ಬಣ್ಣ ಬಣ್ಣದ  ಕಾಗದಗಳಿಂದ  ಗೂಡುದೀಪಗಳನ್ನು  ತಯಾರಿಸುವ ಸಂಭ್ರಮ  ಒಂದೆಡೆಯಾದರೆ , ಹಿರಿಯರು ತಮ್ಮ ಜಮೀನಿನ ಸಲಕರಣೆಗಳು ,ಜಾನುವಾರುಗಳನ್ನು ಶುಚಿಯಾಗಿಸಿ ಅವುಗಳನ್ನು ಅಂದವಾಗಿ ಜೋಡಿಸಿ ,ಹೂಗಳಿಂದ ಅಲಂಕರಿಸಿಡುತ್ತಾರೆ. ಹೆಂಗಳೆಯರು ಮನೆಯ ಕೆಲಸಗಳನ್ನು ಮಾಡಿ, ವಿವಿಧ ರೀತಿಯ ತಿಂಡಿಗಳನ್ನು  ತಯಾರಿಸುವುದರಲ್ಲಿ  ಮಗ್ನರಾಗಿರುತ್ತಾರೆ. ಹಬ್ಬದ ದಿನದಂದು ನೆಂಟರಿಷ್ಟರನ್ನು ಕರೆದು ಉಣಬಡಿಸಿ ಸಂಭ್ರಮಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ.  ಹೊಸತಾಗಿ ಮದುವೆಯಾದ ಹೆಣ್ಣಿಗೆ ಆ ವರ್ಷದ ದೀಪಾವಳಿ ಮಹತ್ವದ್ದು. ತವರು ಮನೆಗೆ ಹೊರಡುವ ತವಕ. ಮೊದಲ ದೀಪಾವಳಿಗೆ ಬಂದ ಮಗಳಿಗೆ ಉಡಿತುಂಬಿಸಿ,ಉಡುಗೊರೆ ಕೊಟ್ಟು ಕಳುಹಿಸುವುದು  ಪದ್ದತಿ.
ತೀರಾ ಹಳ್ಳಿಯಾದರೆ ಅವಲಕ್ಕಿ,ಬಾಳೆಹಣ್ಣು ತಿನ್ನುವ ಸ್ಪರ್ಧೆ. ಆದರೆ ಯಾವುದೇ ಬಹುಮಾನಗಳಿಲ್ಲ. ಎಲ್ಲರೂ ಜತೆಯಾದ ಸಂಭ್ರಮಕ್ಕೆ ಈ ಸ್ಪರ್ಧೆ.ನಂತರ ತಮ್ಮ ತಮ್ಮ ಊರಿನ ಉಭಯಕುಷಲೋಪರಿಗಳು. ಹಬ್ಬದ ದಿನ ಊರೆಲ್ಲಾ ಮಣ್ಣಿನ ಹಣತೆಯ ಬೆಳಕಿನ ಚಿತ್ತಾರ. ದೀಪದ ಮಂದವಾದ ಬೆಳಕಿನಲ್ಲಿ  ಮನೆಯ ಅಂಗಳ, ಊರಿನ ಅಂದವೇ ಬದಲಾಗಿರುತ್ತದೆ. ದೀಪಗಳಲ್ಲಿ  ಸದಾ  ಎಣ್ಣೆ  ಖಾಲಿಯಾಗದಂತೆ  ನೋಡಿಕೊಳ್ಳುವುದು  ಆ ಮನೆಯ  ಹೆಣ್ಣು ಮಕ್ಕಳ  ಕೆಲಸ. ಮೂರು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಮೊದಲ ದಿನ  ಎಣ್ಣೆ ಸ್ನಾನ, ದೇವರ ಆರಾಧನೆ. ಎರಡನೇ ದಿನ ರುಚಿಯಾದ ತಿಂಡಿಗಳ  ತಯಾರಿಕೆಯ ಗಮ್ಮತ್ತು, ಅಂಗಡಿ ಪೂಜೆಯ ದಿನ. ವ್ಯಾಪಾರ ಚೆನ್ನಾಗಿ ನಡೆಯಲಿ ಎಂಬ ಪ್ರಾರ್ಥನೆಯೊಂದಿಗೆ ಅಂಗಡಿಗಳಲ್ಲಿ ಪೂಜೆ ಮಾಡಲಾಗುತ್ತದೆ. ಕೊನೆಯ ದಿನ ಹಳ್ಳಿಗಳಲ್ಲಿ ಮರ ಹಾಕುವುದು ಎಂಬ  ಆಚರಣೆಯ ಗಮ್ಮತ್ತು. ಬಲಿಯೇಂದ್ರ  ಸ್ವಾಮಿಯ ಪೂಜೆ, ಗೋವುಗಳನ್ನು  ಸಿಂಗರಿಸಿ ಅವುಗಳನ್ನು ದೇವರ  ಸಮಾನವಾಗಿ ಪೂಜಿಸುವ ದಿನ. ದೀಪಗಳ ಬೆಳಕಿನಿಂದ ಅಂಧಕಾರವೆಲ್ಲಾ ಮಾಯವಾಗಿ  ಊರೆಲ್ಲಾ ಬೆಳಕಾಗಲಿ...ಅಜ್ಞಾನ ದೂರವಾಗಿ ಬಾಳು ಬೆಳಕಾಗಲಿ ಎಂಬ ಆಶಯ ಈ ಆಚರಣೆಗೆ. ಇಂದು ಇಂತಹ ಸುಂದರ ಆಚರಣೆಗಳು ಕಾಣಸಿಗುವುದು ಬಹಳ ಅಪರೂಪ. ತೀರಾ ಹಳ್ಳಿಗಳಲ್ಲಿ ಈ ಆಚರಣೆಗಳನ್ನು ನೋಡಬಹುದೇನೋ?
ಹೀಗಾಯಿತು..
ಇಂದಿನ ದಿನಗಳಲ್ಲಿ ಬಣ್ಣದ ಗೂಡುದೀಪಗಳ  ಜಾಗವನ್ನು   ಪ್ಲಾಸ್ಟಿಕ್‌ನಿಂದಾವೃತವಾದ ವಿದ್ಯುತ್‌  ದೀಪಗಳು ಆವರಿಸಿಕೊಂಡಿವೆ. ದುಡ್ಡು ಕೊಟ್ಟರೆ  ಸಾಕು ವಿವಿಧ  ರೀತಿಯ  ವಿನ್ಯಾಸದ  ಗೂಡುದೀಪಗಳು ದೊರೆಯುತ್ತವೆ. ಕೆಲಸದ ಒತ್ತಡದಲ್ಲಿ ಮನೆಯ ತಿಂಡಿ ತಿನಿಸುಗಳ ಬದಲಾಗಿ ಬೇಕರಿಗಳಲ್ಲಿ  ತಯಾರಾಗಿರುವ ತಿಂಡಿಗಳು ಬಣ್ಣದ  ಪ್ಲೇಟುಗಳನ್ನು  ಅಲಂಕರಿಸುತ್ತವೆ.    ಅಂದು ಕಲ್ಲಿನಲ್ಲಿ ಕುಟ್ಟಿದರೆ ಶಬ್ದ ಬರುತ್ತಿರುವ ಸುಡುಮದ್ದುಗಳ ಬದಲಿಗೆ ಇಂದು ಎದೆಯೊಡೆಯುವಷ್ಟು ತೀವ್ರ  ತರದ ಶ ಬ್ಧಗಳು  ಸುಡುಮದ್ದುಗಳಿಂದ  ಹೊರಬರುತ್ತಿವೆ. ಮಕ್ಕಳಿಗೆ  ಖುಷಿಯೋ  ಖುಷಿ. ಬಣ್ಣ  ಬಣ್ಣದ ಪೊಟ್ಟಣಗಳಲ್ಲಿರುವ  ಸುಡುಮದ್ದು (ಪಟಾಕಿ) ಸಿಡಿಸಿ ಅದರ ಶಬ್ದ, ಚಿತ್ತಾಕರ್ಷಕ ಬೆಳಕಿನ ವಿನ್ಯಾಸಗಳನ್ನು ನೋಡಿ  ಸಂಭ್ರಮಿಸಬಹುದೆಂದು. ಹಣತೆಗಳ ಬದಲಿಗೆ ವಿದ್ಯುತ್‌ ದೀಪಾಲಂಕಾರಗಳು ಜಗಮಗಿಸುತ್ತಿವೆ . ಪಟ್ಟಣಗಳಲ್ಲಿರುವ ಆಳೆತ್ತರದ ಕಟ್ಟಡಗಳ ಮೇಲಿನಿಂದ ರಾಕೆಟ್‌ಗಳ  ರೂಪದ    ಸುಡುಮದ್ದುಗಳು ಕಣ್ಮನ ಸೆಳೆಯುತ್ತಿವೆ. ಮಾರ್ಕೆಟ್‌ಗಳಲ್ಲಿ ಹಣ್ಣು ಹೂವುಗಳ ಮಾರಾಟ ಭರ್ಜರಿಯಾಗಿರುತ್ತದೆ. ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹಬ್ಬ ಬಂತೆಂದರೆ ಊರಿಗೆ ಹೊರಡುವ ಸಂಭ್ರಮ.  ಕೆಲಸದ ಒತ್ತಡಗಳನ್ನೆಲ್ಲಾ  ಮರೆತು ಹಾಯಾಗಿ ಮನೆ ಮಂದಿಯೊಂದಿಗೆ ನಾಲ್ಕು ದಿನ ಕಳೆಯಬಹುದಲ್ಲಾ  ಎಂದು .
ಇಷ್ಟೆಲ್ಲಾ ಬದಲಾವಣೆಗಳಾದರೂ, ಕೈಯಲ್ಲಿ ಸಾಕಷ್ಟು  ಹಣವಿದ್ದರೂ  ಯಾಕೋ ಅಂದಿನ ದೀಪಾವಳಿಯೇ  ಮನಸ್ಸಿಗೆ  ಹಬ್ಬದ ಸಂಭ್ರಮವನ್ನೀಯುತ್ತಿತ್ತು ಎಂಬುಬು ನಮ್ಮ  ಗೆಳೆಯರ ಬಳಗದ ಅಭಿ ಪ್ರಾಯ.   ದುಡ್ಡು ಎಷ್ಟೇ ಖರ್ಚು ಮಾಡಿದರೂ ಆಚರಣೆಯ ಸಹಜತೆ ಮಾಯವಾಗಿದೆ. ಕೆಲಸದ ಒತ್ತಡದಲ್ಲಿ ಮನೆಗೆ ಹೋದರೂ  ಆಫೀಸಿನದೇ ಚಿಂತೆ. ಸುಡುಮದ್ದುಗಳಿಂದ ಹೊರಬರುತ್ತಿರುವ  ವಿಷಪೂರಿತ  ರಾಸಾಯನಿಕಗಳಿಂದಾಗಿ  ಪರಿಸರ  ಮಾಲಿನ್ಯ. ಮಕ್ಕಳಿಗಾಗುತ್ತಿರುವ ಪಟಾಕಿ ಅವಘಡಗಳು ಹೀಗೆ ಒಂದೇ ಎರಡೇ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿವೆ. ರೂಮಿನಿಂದ ಹೊರಗಡೆ ಬಂದು ಹಾಯಾಗಿ ನಿಲ್ಲೋಣವೆಂದು ಅಂದುಕೊಂಡರೆ ಮಹಡಿಯೆ ಕುಸಿದು ಬೀಳುತ್ತಿದೆಯೇನೋ  ಎಂಬ  ಸ್ಫೋಟಕ ಶಬ್ದ. ಸುದ್ದಿವಾಹಿನಿ ನೋಡಿಕೊಂಡು  ಕೂರೋಣವೆಂದರೆ  ಸಿಡಿಮದ್ದು  ಮಳಿಗೆಗಳ ಲ್ಲಿ ಆಕಸ್ಮಿಕ  ಬೆಂಕಿಯ ಅವಘಡ, ಪಟಾಕಿ ಸಿಡಿಸಲು ಹೋದ ಬಾಲಕ ಕಣ್ಣು ಕಳೆದುಕೊಂಡ , ಈ ರೀತಿಯ ಸುದ್ದಿಗಳಿಂದಾಗಿ ಯಾವಾಗ ಈ ದೀಪಾವಳಿ ಮುಗಿಯುತ್ತೋ ಅನ್ನೋ ಭಾವನೆ  ಬಂದಿದ್ದು  ಸುಳ್ಳಲ್ಲ.