ಬ್ರಿಟಿಶ್ ಪ್ರಧಾನಿಗಾಗಿ ಸ್ಮಾರ್ಟ್ಫೋನ್ ಆಪ್
ಬಂತು ವಿಂಡೋಸ್ ಫೋನ್8
ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಸ್ಮಾರ್ಟ್ಫೋನ್ ವಿಂಡೋಸ್ 8 ಶುಕ್ರವಾರ ಮಾರಾಟಕ್ಕೆ ಲಭ್ಯವಾಯಿತು.ಈ ಮೊದಲು ಇದ್ದ ವಿಂಡೋಸ್ 7 ಸ್ಮಾರ್ಟ್ಫೋನ್ ಹೆಚ್ಚು ಜನಪ್ರಿಯವಾಗಿರಲಿಲ್ಲ.ವಿಂಡೋಸ್ 8 ಹೊಸ ಫೋನ್,ಹೊಸ ಆಪರೇಟೀಂಗ್ ವ್ಯವಸ್ಥೆಯ ಜತೆ ಬಂದಿರುವುದರಿಂದ,ಈಗದು ಹೆಚ್ಚು ಯಶಸ್ಸು ಕಾಣಬಹುದು.ಇದನ್ನು ಬಳಸಿ ನೋಡಿದ ತಜ್ಞರು,ಹೊಸ ಫೋನ್ ಹಳೆಯದ್ದಕ್ಕಿಂತ ಉತ್ತಮವಿದೆ ಎನ್ನುವ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹೊಸ ಆಪರೇಟಿಂಗ್ ವ್ಯವಸ್ಥೆಯಂತೂ ಸ್ಪರ್ಶಸಂವೇದಿ ತೆರೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ಎಕ್ಸ್ಬಾಕ್ಸ್ ಎನ್ನುವ ಕಂಪ್ಯೂಟರ್ ಆಟದ ಸಾಧನವನ್ನು ಮೈಕ್ರೋಸಾಫ್ಟ್ ಮಾರುಕಟ್ಟೆಯಲ್ಲಿ ಇಳಿಸಿದ ಮೊದಲ ಯಂತ್ರಾಂಶವಾಗಿತ್ತು.ನಿಧಾನವಾಗಿ ಈಗದು ಉಳಿದವುಗಳಿಗಿಂತ ಹೆಚ್ಚು ಜನಪ್ರಿಯವಾಗಿದೆ.ಹಾಗೆಯೇ ಹೊಸ ಸ್ಮಾರ್ಟ್ಫೋನ್ ಕೂಡಾ ಗೂಗಲ್,ಆಪಲ್ ಸ್ಮಾರ್ಟ್ಫೋನ್ಗಳಿಗೆ ಸ್ಪರ್ಧೆಯೊಡ್ಡಲು ಸಮರ್ಥವಾಗಬಾರದೆಂದಿಲ್ಲ.ಫೋನ್ ಸಂಪರ್ಕದೊಂದಿಗೆ ವಿಂಡೋಸ್ 8 ನೂರು ಡಾಲರು ಬೆಲೆಯಲ್ಲಿ ಲಭ್ಯವಿದೆ.ವೆರಿಜೋನ್ ಅಂತಹ ಸೇವಾದಾತೃಗಳ ಮೊಬೈಲ್ ಸಂಪರ್ಕದೊಂದಿಗೆ ಕೂಡಾ ವಿಂಡೋಸ್ 8 ಲಭ್ಯವಿರುವುದು,ಮೈಕ್ರೋಸಾಫ್ಟ್ಗೆ ಅನುಕೂಲಕರವಾಗಲಿದೆ.ಕಂಪೆನಿಯು ಹೆಚ್ಚಿನ ಹಣ ಹೂಡಿ,ಕಾದು ನೋಡಲು ಸಮರ್ಥವಿರುವುದರಿಂದ ಯಶಸ್ಸು ಕಾಣುವುದು ಅಸಾಧ್ಯವೇನಲ್ಲ.
--------------------------------------------
ಬ್ರಿಟಿಶ್ ಪ್ರಧಾನಿಗಾಗಿ ಸ್ಮಾರ್ಟ್ಫೋನ್ ಆಪ್
ಬ್ರಿಟನ್ ಪ್ರಧಾನಿ ಡೇವಿಡ್ ಕಾಮೆರೋನ್ ಅವರು ತಮ್ಮ ಸರಕಾರದ ಕೆಲಸ ಕಾರ್ಯಗಳ ಬಗ್ಗೆ ಜನರ ಅನಿಸಿಕೆಗಳನ್ನು ತಿಳಿಯಲು ಸಾಮಾಜಿಕ ಜಾಲತಾಣಗಳಲ್ಲಿನವರ ಅಭಿಮತದ ಮೇಲೆ ಗಮನಕೊಡುತ್ತಾರೆ.ಅದನ್ನು ಸಮರ್ಥವಾಗಿ ಮಾಡಲು ಮಾಹಿತಿಯ ಕ್ರೋಢೀಕರಣ ಮಾಡುವ ತಂತ್ರಾಂಶವೊಂದನ್ನು ಅವರಿಗೋಸ್ಕರವೇ ಅಭಿವೃದ್ಧಿ ಪಡಿಸಲಾಗುತ್ತಿದೆ.ಈ ತಂತ್ರಾಂಶದ ಮೂಲಕ,ವಿವಿಧ ಯೋಜನೆಗಳ ಅನುಷ್ಠಾನ ಹೇಗೆ ನಡೆಯುತ್ತಿದೆ,ಜನರು ಇವುಗಳ ಬಗ್ಗೆ ಏನನ್ನುತ್ತಿದ್ದಾರೆ ಎನ್ನುವುದನ್ನು ಗಮನಿಸುವುದು ಕಾಮೆರೋನ್ ಅವರಿಗೆ ಸುಲಭವಾಗಲಿದೆ.ನಿರ್ಧಾರಗಳನ್ನು ಕೈಗೊಳ್ಳಲು ಈ ಮಾಹಿತಿ ಅವರಿಗೆ ಹೆಚ್ಚು ಸಹಾಯಕವಾಗಲಿದೆ.
-----------------------------------------
ಬಾಹ್ಯಾಕಾಶದಲ್ಲೂ ಇಂಟರ್ನೆಟ್
ಅಡೆತಡೆ ಸಹಿಸುವ ಕಂಪ್ಯೂಟರ್ ಜಾಲ ತಂತ್ರಜ್ಞಾನ Disruption Tolerant Networking (DTN) ಎನ್ನುವ ಹೊಸ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶ ಅಥವ ಅನ್ಯಗ್ರಹಗಳಲ್ಲೂ ಇಂಟರ್ನೆಟ್ ಲಭ್ಯವಾಗಿಸುವ ಪ್ರಾಯೋಗಿಕ ಯೋಜನೆಯ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಗಗನಯಾತ್ರಿಗಳು ಭೂಮಿಯ ಮೇಲಿನ ರೊಬೋಟ್ ಅನ್ನು ನಿಯಂತ್ರಿಸುವ ಪ್ರಯತ್ನ ಯಶಸ್ಸು ಕಂಡಿದ್ದಾರೆ.ಡಿಟಿಎನ್ ಎನ್ನುವ ತಂತ್ರಜ್ಞಾನವು, ಇಂಟರ್ನೆಟ್ ಅಂತೆಯೇ ಇದೆ.ವ್ಯತ್ಯಾಸ ಎಂದರೆ,ಅದು ಬಹು ನಿಧಾನವಾಗಿ ಬರುವ ದತ್ತಾಂಶಗಳನ್ನು ಸ್ವೀಕರಿಸಲು ಸಮರ್ಥವಾಗಿದೆ.ಈ ನಿಧಾನವಾಗುವಿಕೆಗೆ ಕಾರಣ ಸೌರ ಚಟುವಟಿಕೆಗಳು ಮತ್ತು ಬಾಹ್ಯಾಕಾಶ ಯಾನಗಳು ಗ್ರಹಗಳ ಹಿಂದೆ ಇರುವ ಕಾರಣದಿಂದಾಗಿ ಸಂಭವಿಸಬಹುದು.ಡಿಟಿಎನ್ ಅನ್ನು ಅಭಿವೃದ್ಧಿ ಪಡಿಸಲು ಭೂಮಿಯ ಮೇಲೆ ಇಂಟರ್ನೆಟ್ಗೆ ಅನುವು ಮಾಡಿದ ವ್ಯಕ್ತಿ ವಿಂಟ್ ಸರ್ಫ್ ಎಂಬಾತನೇ ಕಾರಣ.ಇದರಲ್ಲಿ ಮಾಹಿತಿಯು ಹಲವು ಕೇಂದ್ರಗಳಲ್ಲಿ ಸಂಗ್ರಹವಾಗಿ ಉಳಿಯುತ್ತವೆ.ಯಾವ ಕಾರಣದಿಂದಾದರೂ ಮಾಹಿತಿಯ ರವಾನೆ ನಿಧಾನವಾದರೆ,ಅವು ಕೇಂದ್ರಗಳಲ್ಲಿ ಉಳಿದಿರುವುದರಿಂದ ಅವು ಕಳೆದುಹೋಗವು.ಮುಂಬರುವ ದಿನಗಳಲ್ಲಿ ಅಂತರಗ್ರಹಯಾನಗಳು ಹೆಚ್ಚುವಾಗ.ಡಿಟಿಎನ್ ತಾಂತ್ರಿಕತೆಯ ಮೂಲಕ ಸಂಪರ್ಕ ಸರಾಗವಾಗಲಿದೆ.
---------------------
ಥಟ್ಟಂತ ಅನುವಾದಿಸುವ ಇಂಗ್ಲೀಷ್-ಚೀನೀ ಅನುವಾದಕ
ಮೈಕ್ರೋಸಾಫ್ಟ್ ಕಂಪೆನಿಯು ಇಂಗ್ಲೀಷಿನಲ್ಲಿ ಮಾತನಾಡಿದೊಡನೆ ಚೀನೀ ಭಾಷೆಗೆ ಅನುವಾದಿಸುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.ಇದು ಮಾತನಾಡಿದವರ ಸ್ವರದಲ್ಲೇ ಚೀನೀ ಭಾಷೆಯ ಶಬ್ದಗಳ ಉಚ್ಛಾರ ಬರುವಂತೆ ಮಾಡಲೂ ಸಮರ್ಥ,ಮಿದುಳಿನ ಕಾರ್ಯನಿರ್ವಹಣಾ ಶೈಲಿಯನ್ನು ತಂತ್ರಾಂಶ ಅಭಿವೃದ್ಧಿ ಪಡಿಸುವಾಗ ಬಳಸಲಾಗಿರುವುದರಿಂದ,ಈ ಅನುವಾದಕ ಹೆಚ್ಚು ತಪ್ಪುಗಳನ್ನು ಮಾಡದು.ಆದರೂ ಇದು ಪರಿಪೂರ್ಣ ಎನ್ನಲಾಗದು.ತಪ್ಪಿನಿಂದ ಕಲಿಯುವ ಬಗೆಯನ್ನಿಲ್ಲಿ ಅಳವಡಿಸಿದ್ದರಿಂದ,ಹೆಚ್ಚು ಹೆಚ್ಚು ಬಳಸಿದಂತೆ ಅನುವಾದಕ ಹೆಚ್ಚು ಸಮರ್ಥ ಅನುವಾದ ಮಾಡಲು "ಕಲಿಯುತ್ತದೆ".
----------------------------------------------
ಮಿಲಿಟರಿಗೆ ಬಿಡಿಭಾಗ ಮುದ್ರಿಸಿ ತಯಾರು!
ಅಮೆರಿಕಾದ ಮಿಲಿಟರಿ ಪಡೆಯು ತನ್ನ ವಿಮಾನಗಳಲ್ಲಿ ಬಿಡಿಭಾಗಗಳ ಅಗತ್ಯ ಕಂಡರೆ,ಅವನ್ನು ಒಡನೆಯೇ ತಯಾರಿಸಬಲ್ಲ,ಮೂರು ಆಯಾಮದ ಮುದ್ರಕವನ್ನು ಕಂಡುಹಿಡಿದಿದೆ.ಅಲಬಾಮಾದ ಮಿಲಿಟರಿ ದಳವು ಈ ಸಾಧನೆಗೈದಿದೆ.ಪ್ಲಾಸ್ಟಿಕ್ ಘನವನ್ನು ಕರಗಿಸುವುದರ ಮೂಲಕ,ಮತ್ತು ಅದಕ್ಕೆ ಬೇಕಾದ ಆಕಾರವನ್ನು ಕೊಡುವ ಮೂಲಕ,ಬಿಡಿಭಾಗಗಳನ್ನು ತಯಾರಿಸಲು ಬೇಕಾದ ಸಮಯ ಅತ್ಯಲ್ಪ.ಅದೇ,ಬಿಡಿಭಾಗಕ್ಕೆ ಅದರ ತಯಾರಿಕಾ ಕಂಪೆನಿಗೆ ಆರ್ಡರ್ ಕೊಟ್ಟು,ಅದು ಬಟವಾಡೆ ಆಗಲು ಹೆಚ್ಚು ಸಮಯದ ಅವಶ್ಯಕತೆಯಿದೆ.ಸುಮಾರು ಆರುನೂರೈವತ್ತೈದು ಡಾಲರು ಬೆಲೆಯ ಈ ಮೂರು ಆಯಾಮದ ಮುದ್ರಕದ ಭಾಗಗಳು ಹಾಳಾದರೆ,ಅವನ್ನೂ ಮುದ್ರಿಸಿ ತಯಾರಿಸಲು ಬರುತ್ತದೆ!ಮಾದರಿಗಳನ್ನು ತಯಾರಿಸಲೂ ಈ ಮುದ್ರಕ ಕೆಲಸಕ್ಕೆ ಬರುತ್ತದೆ.
--------------------------------
ಕೂಡಂಕುಲಮ್ ಅಣುವಿದ್ಯುತ್ ಉತ್ಪಾದನೆ ಡಿಸೆಂಬರಿನಿಂದ ಶುರು
ಡಿಸೆಂಬರ್ ಮೊದಲವಾರದ ವೇಳೆ ಕೂಡಂಕುಳಂ ಅಣುಶಕ್ತಿ ವಿದ್ಯುದಾಗಾರವು ಒಂದು ಸಾವಿರ ಮೆಗಾವ್ಯಾಟ್ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುವ ನಿರೀಕ್ಷೆಯಿದೆ.ಇದರಲ್ಲಿ ನಾಲ್ನೂರೈವತ್ತು ಮೆಗಾವ್ಯಾಟ್ ವಿದ್ಯುತ್ತನ್ನು ತಮಿಳ್ನಾಡು ರಾಜ್ಯವೇ ಪಡೆದರೆ,ಉಳಿದದ್ದು ರಾಷ್ಟ್ರೀಯ ಗ್ರಿಡ್ಗೆ ಸೇರಲಿದೆ.ಆದರೆ ತಮಿಳ್ನಾಡು ಸರಕಾರವು ಸಂಪೂರ್ಣ ವಿದ್ಯುಚ್ಛಕ್ತಿಯನ್ನು ತನಗೇ ನೀಡಲು ಅರಿಕೆ ಮಾಡಿದೆ.ಸದ್ಯ ವಿದ್ಯುದಾಗಾರದಲ್ಲಿ ಯುರೇನಿಯಂ ಇಂಧನವನ್ನು ರಿಯಾಕ್ಟರಿಗೆ ತುಂಬುವ ಕೆಲಸ ಮುಗಿದಿದ್ದು,ಇನ್ನು ಅದರ ಒತ್ತಡವನ್ನು ಹೆಚ್ಚಿಸಿ,ಸರಪಳಿ ಕ್ರಿಯೆಯ ಮೂಲಕ ಶಾಖವನ್ನು ಉತ್ಪಾದಿಸುವ ಕೆಲಸಕ್ಕೆ ಹತ್ತಿಪ್ಪತ್ತು ದಿನ ತಗಲಬಹುದು ಎಂದು ಅಂದಾಜು.
---------------------------------------
ಸಬ್ಸಿಡಿಗೆ "ಆಧಾರ"
ಜನವರಿಯಿಂದ ಮೊದಲುಗೊಂಡು ಭಾರತದ ಸುಮಾರು ಇಪ್ಪತ್ತು ಜಿಲ್ಲೆಗಳಲ್ಲಿ ಸಬ್ಸಿಡಿ ಹಣವನ್ನು "ಆಧಾರ್" ಗುರುತಿನ ಸಂಖ್ಯೆಯ ಮೇಲೆ ನೀಡಲು ಸರಕಾರ ತೀರ್ಮಾನಿಸಿದೆ.ಬಹಳಂಶ ಜನರು ಆಧಾರ್ ಗುರುತಿನ ಚೀಟಿ ಪಡೆದಿರುವ ಇಪ್ಪತ್ತು ಜಿಲ್ಲೆಗಳನ್ನು ಪ್ರಯೋಗಕ್ಕೆ ಆಯ್ದುಕೊಳ್ಳಲಾಗಿದೆ.ಸಬ್ಸಿಡಿ,ಪೆನ್ಶನ್ ಹಣ ಸಹಾಯಧನ ಇತ್ಯಾದಿ ಸರಕಾರಿ ಯೋಜನೆಗಳ ಅನ್ವಯ ಫಲಾನುಭವಿಗಳಿಗೆ ಬಟವಾಡೆಯಾಗ ಬೇಕಾದ ಹಣವನ್ನು ಅವರ ಖಾತೆಗಳಿಗೇ ನೇರ ಜಮೆ ಮಾಡಿ,ಅದು ಅನ್ಯರ ಪಾಲಾಗುವುದನ್ನು ತಪ್ಪಿಸುವುದು ಸರಕಾರದ ಯೋಜನೆಯಾಗಿದೆ.
----------------------------------
ಕ್ರೆಡಿಟ್ ಕಾರ್ಡಿನಲ್ಲಿ ಕೀಲಿಮಣೆ,ಎಲ್ಸಿಡಿ ತೆರೆ
ವೀಸಾ ಕಾರ್ಡ್ ಕಂಪೆನಿಯ ಕ್ರೆಡಿಟ್ ಕಾರ್ಡಿನಲ್ಲಿ ಕಿರು ಎಲ್ಸಿಡಿ ತೆರೆ ಹಾಗೂ ಸ್ಪರ್ಶಸಂವೇದಿ ತೆರೆಯಲ್ಲಿ ಕೀಲಿಮಣೆ ಸೌಲಭ್ಯ ಸಿಗಲಿದೆ.ಕೀಲಿಮಣೆಯನ್ನು ಗುಪ್ತಪದವನ್ನು ಬದಲಾಯಿಸಲು ಬಳಸಬಹುದು.ತೆರೆಯಲ್ಲಿ ಕಾಡಿನಲ್ಲಿ ಉಳಿದಿರುವ ಹಣದ ಮೊತ್ತವನ್ನು ಪ್ರದರ್ಶಿಸಲು ಬಳಸಬಹುದು.ಒಂದು ಕಡೆ ಮೊಬೈಲ್ ಸಾಧನದ ಮೂಲಕವೇ ಹಣಕಾಸಿನ ವ್ಯವಹಾರಗಳನ್ನು ಮಾಡಲು ಅನುವು ಮಾಡಿ,ಕ್ರೆಡಿಟ್ಕಾರ್ಡಿನ ಅಗತ್ಯವೇ ಇಲ್ಲದ ಹಾಗೆ ಮಾಡುವ ಪ್ರಯತ್ನ ನಡೆದಿದ್ದರೆ,ಇನ್ನೊಂದೆಡೆ,ಕಾರ್ಡನ್ನು ಉತ್ತಮಗೊಳಿಸಿ,ಹೆಚ್ಚು ಅನುಕೂಲಕರವಾಗಿ ಮಾರ್ಪಡಿಸಲೂ ಪ್ರಯತ್ನ ಸಾಗಿರುವುದು ವಿಶೇಷ.
(ಈ ಅಂಕಣ ಬರಹಗಳು http://ashok567.blogspot.comನಲ್ಲೂ ಲಭ್ಯವಿವೆ.)
*ಅಶೋಕ್ಕುಮಾರ್ ಎ
UDAYAVANI
epaper