ಕರ್ನಾಟಕದ ನೆಲ-ಜಲ (೧)
ಅಡ್ಡೂರು ಕೃಷ್ಣರಾಯರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸದ ಹಸ್ತಪ್ರತಿಯನ್ನು ಅವರಿಂದ ಕೇಳಿ ಪಡೆದು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಪದಿಗರಿಗೆಲ್ಲ ಅಡ್ಡೂರು ಕೃಷ್ಣರಾಯರು 'ಕೃಷಿ ಸಂಪದ'ದ ಮೂಲಕ ಹಾಗೂ ಇತ್ತೀಚೆಗೆ ಸಂಪದದ ಮೂಲಕವೇ ಚಿರಪರಿಚಿತ. ೧೭, ನವೆಂಬರ್, ೨೦೧೨ರ ಶನಿವಾರ ಇವರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸ "ಕರ್ನಾಟಕದ ನೆಲ-ಜಲ" ಕುರಿತಾಗಿತ್ತು. ಇದರ ಬರಹ ರೂಪದ ಮೊದಲ ಕಂತು ಈ ಲೇಖನ. - ಹರಿ ಪ್ರಸಾದ್ ನಾಡಿಗ್, ಸಂಪದ ತಂಡದ ಪರವಾಗಿ,
ಇತ್ತೀಚೆಗೆ, ಅಕ್ಟೋಬರ್ ೬, ೨೦೧೨ರಂದು ಕರ್ನಾಟಕ ಬಂದ್ ಕಾರಣದಿಂದಾಗಿ ಜನಜೀವನ ಸ್ತಬ್ಧವಾಗಿತ್ತು. ಅಂದು ರಾಮನಗರದಲ್ಲಿದ್ದ ನನಗೆ ಸಂಜೆ ೭ ಗಂಟೆಯ ನಂತರವೇ ಬಸ್ಸೇರಿ ಬೆಂಗಳೂರಿಗೆ ಹೋಗಲು ಸಾಧ್ಯವಾಯಿತು. ಯಾಕೆಂದರೆ ಮುಂಜಾನೆಯಿಂದ ಯಾವೊಂದು ವಾಹನವೂ ರಾಮನಗರ-ಬೆಂಗಳೂರು ರಸ್ತೆಯಲ್ಲಿ ಓಡಾಡಲಿಲ್ಲ. ಅದು, ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ ಬಗೆ.
ಕನ್ನಡ ಭಾಷೆಯ ಆಧಾರದಿಂದ ಕನ್ನಡದ ಪ್ರದೇಶಗಳ ಏಕೀಕರಣಕ್ಕಾಗಿ ಕನ್ನಡಿಗರು ಐದಾರು ದಶಕಗಳ ಕಾಲ ಹೋರಾಡಬೇಕಾಯಿತು. ಆದರೆ ನವಂಬರ್ ೧, ೧೯೫೬ರಂದು ಕನ್ನಡನಾಡು ರೂಪುಗೊಂಡ ನಂತರವೂ ತಮ್ಮ ನೆಲವನ್ನು ಮತ್ತು ಜಲವನ್ನು ಕಾಪಾಡಿಕೊಳ್ಳಲಿಕ್ಕಾಗಿ ಕನ್ನಡಿಗರು ಹೋರಾಡುತ್ತಲೇ ಇರಬೇಕಾಗಿರುವುದು ಒಂದು ವಿಪರ್ಯಾಸ.
ಕನ್ನಡನಾಡಿನ ಜಲಹೋರಾಟಗಳ ಕಾರಣ ಹಾಗೂ ಬೆಳವಣಿಗೆಗಳನ್ನು ಗಮನಿಸೋಣ. ಕರ್ನಾಟಕದಲ್ಲಿವೆ ಅರುವತ್ತಕ್ಕೂ ಹೆಚ್ಚಿನ ನದಿಗಳು. ಇವುಗಳಲ್ಲಿ ಪ್ರಧಾನವಾಗಿ ವಿವಾದಕ್ಕೆ ಒಳಗಾಗಿರುವುದು ಕಾವೇರಿ ಮತ್ತು ಕೃಷ್ಣಾ ನದಿಗಳು.
ಒಂದು ರಾಜ್ಯದಲ್ಲಿ ಹುಟ್ಟಿದ ನದಿ ಸಮುದ್ರ ಸೇರುವ ಹಾದಿಯಲ್ಲಿ ಆ ರಾಜ್ಯದ ಗಡಿ ದಾಟುವುದು ಸಹಜ. ಹೀಗೆ ವಿವಿಧ ರಾಜ್ಯಗಳಲ್ಲಿ ಒಂದು ನದಿ ಹರಿಯುವಾಗ ಅದರ ನೀರಿನ ಬಳಕೆಗೆ ಆ ರಾಜ್ಯಗಳಲ್ಲಿ ಪೈಪೋಟಿಯೂ ಸಹಜ. ಆದರೆ ಹಲವು ರಾಜ್ಯಗಳ ನಡುವೆ ಈ ಪೈಪೋಟಿ ವಿವಾದವಾಗಿ, ಚಳವಳಿ ಸ್ವರೂಪ ಪಡೆದು ರಾಷ್ಟ್ರೀಯ ಸಮಸ್ಯೆಯಾಗಿದೆ.
ಕಾವೇರಿ ನದಿಯ ನೀರಿನ ವಿಷಯದಲ್ಲಿಯೂ ಹೀಗೆ ಆಗಿದೆ. ಈ ವಿವಾದಕ್ಕೆ ಒಂದು ಶತಮಾನಕ್ಕಿಂತ ಹೆಚ್ಚಿನ ಇತಿಹಾಸವಿದೆ. ನದಿ ನೀರಿನ ಹಂಚಿಕೆ ಮೊದಲು ವಿವಾದ ಹುಟ್ಟು ಹಾಕಿ, ಅನಂತರ ರೈತರ ಹಾಗೂ ಫಲಾನುಭವಿಗಳ ಭಾಗವಹಿಸುವಿಕೆಯಲ್ಲಿ ಹೋರಾಟವಾಗಿ ಮಾರ್ಪಟ್ಟು ಚಳವಳಿಯ ಸ್ವರೂಪ ಪಡೆದಿದೆ.
ಕಾವೇರಿ ನದಿ ಹುಟ್ಟುವುದು ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ. ಅನಂತರ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿಗಳ ಭೂಭಾಗಗಳಲ್ಲಿ ಹರಿದು, ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ೩೮೦ ಕಿಮೀ ಉದ್ದ ಹರಿಯುವ ಕಾವೇರಿ ನದಿ, ತಮಿಳುನಾಡಿನಲ್ಲಿ ಹರಿಯುವುದು ೩೭೫ ಕಿಮೀ ಉದ್ದ. ಈ ನದಿಯ ನೀರಿಗೆ ಕರ್ನಾಟಕದ ಕೊಡುಗೆ ೩೫೫ರಿಂದ ೪೨೫ ಟಿಎಂಸಿ ಹಾಗೂ ತಮಿಳುನಾಡಿನ ಕೊಡುಗೆ ೨೦೧ ಟಿಎಂಸಿ ಎಂದು ಅಂದಾಜಿಸಲಾಗಿದೆ.
ಕಾವೇರಿ ನದಿ ನೀರಿನ ವಿವಾದ ಚೋಳ - ಪಾಂಡ್ಯರ ಕಾಲದಲ್ಲಿಯೇ ಹುಟ್ಟಿಕೊಂಡಿತ್ತು. ಕ್ರಿ.ಶ. ೧೮೮೧ರಲ್ಲಿ ಮೈಸೂರು ಸಂಸ್ಥಾನದ ಆಡಳಿತ ಬ್ರಿಟಿಷರಿಂದ ರಾಜಮನೆತನದ ಒಡೆಯರ ಕೈಗೆ ಬಂದಿತ್ತು. ಅನಂತರ ಕಾವೇರಿ ನೀರಿನ ವಿವಾದ ರಾಜಕೀಯ ಸ್ವರೂಪ ಪಡೆಯಿತು. ಕಾವೇರಿ ನೀರಿನ ಹರಿವಿಗೆ ತಡೆಯೊಡ್ಡುವ ಯಾವುದೇ ಕಾಮಗಾರಿಯನ್ನು ಮೈಸೂರು ಸಂಸ್ಥಾನ ಕೈಗೊಳ್ಳಬಾರದು ಎಂಬುದು ಮದ್ರಾಸು ಪ್ರಾಂತ್ಯದ ತಕರಾರು. ಹಾಗಾಗಿ ೧೮೯೨ರಲ್ಲಿ ಬ್ರಿಟಿಷರು ಮಧ್ಯಸ್ಥಿಕೆ ವಹಿಸಿ, ಈ ಕಾಮಗಾರಿಗಳಿಗೆ ಮದ್ರಾಸಿನ ಪೂರ್ವಾನುಮತಿ ಅಗತ್ಯ ಎಂಬ ಒಪ್ಪಂದ ಮಾಡಿಸಿದ್ದರು. ಮದ್ರಾಸಿನಲ್ಲಿ ನೆಲೆಸಿದ್ದ ಬ್ರಿಟಿಷರು, ಮದ್ರಾಸು ಪ್ರಾಂತ್ಯದ ಪರವಾಗಿ ಹೀಗೆ ಒಪ್ಪಂದ ಮಾಡಿಸಿ, ಮೈಸೂರು ಪ್ರಾಂತ್ಯಕ್ಕೆ ಅನ್ಯಾಯ ಮಾಡಿದರು. ಇದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈಗ, ಬ್ರಿಟಿಷರ ಬದಲಾಗಿ, ಕೇಂದ್ರ ಸರಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ.
ಆ "ಒಪ್ಪಂದ"ವನ್ನು ಎರಡೂ ಸಂಸ್ಥಾನಗಳು ಉಲ್ಲಂಘಿಸಿದವು. ಮೈಸೂರು ಸಂಸ್ಥಾನ ಕೃಷ್ಣರಾಜಸಾಗರ ಅಣೆಕಟ್ಟು ಆರಂಭಿಸಿತು. ಹಾಗೆಯೇ ಮದ್ರಾಸು ಸಂಸ್ಥಾನ ಮೆಟ್ಟೂರು ಅಣೆಕಟ್ಟು ನಿರ್ಮಾಣಕ್ಕೆ ತೊಡಗಿತು. ಇದರಿಂದಾಗಿ, ಎರಡು ಸಂಸ್ಥಾನಗಳ ನಡುವೆ ಕಾವೇರಿ ನೀರಿನ ವಿವಾದ ತೀವ್ರವಾಯಿತು. ಯಾಕೆಂದರೆ, ಇದೀಗ ಕೇವಲ ಭಾವುಕತೆಯ ವಿವಾದವಾಗಿ ಉಳಿದಿರಲಿಲ್ಲ. ಇದರ ಮೂಲದಲ್ಲಿ ಇರುವುದು ಆರ್ಥಿಕತೆಯ ವಿಚಾರ.
ಬ್ರಿಟಿಷ್ ಆಡಳಿತವು ಇವೆರಡೂ ಸಂಸ್ಥಾನಗಳ ಸರಕಾರಗಳನ್ನು ಸಂಧಾನಕ್ಕೆ ಕರೆಯಿತು. ಇದರ ಪರಿಣಾಮವಾಗಿ ೧೯೨೪ರಲ್ಲಿ ಮೈಸೂರು ಮತ್ತು ಮದ್ರಾಸು ಸಂಸ್ಥಾನಗಳ ನಡುವೆ ಒಪ್ಪಂದವಾಯಿತು. ಆಗ ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದವರು ಡಾ. ಎಂ. ವಿಶ್ವೇಶ್ವರಯ್ಯ. ಅವರ ಮುಂದಾಳುತನದಲ್ಲಿ ೧೨೪ ಅಡಿ ಎತ್ತರದ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾಯಿತು. ಅದರಲ್ಲಿ ಸಂಗ್ರಹವಾಗುವ ನೀರಿನ ಪರಿಮಾಣ ೪೦ ಟಿಎಂಸಿ. ಇದರ ಉದ್ದೇಶ ೧.೫ ಲಕ್ಷ ಎಕರೆ ಜಮೀನಿಗೆ ನೀರು ಒದಗಿಸುವುದು ಮತ್ತು ವಿದ್ಯುತ್ ಉತ್ಪಾದಿಸುವುದು.
೧೯೨೪ರ ಒಪ್ಪಂದದ ಅವಧಿ ಐವತ್ತು ವರುಷ. ಅದು, ೧೯೭೪ಕ್ಕೆ ಮುಗಿದಾಗ ಕರ್ನಾಟಕ ಸರಕಾರವು, ಇನ್ನು ತಾನು ಅದಕ್ಕೆ ಬದ್ಧವಾಗುವುದಿಲ್ಲ ಎಂದು ಘೋಷಿಸಿತು. ಯಾಕೆಂದರೆ, ನಮ್ಮ ದೇಶ ಸ್ವತಂತ್ರವಾದ ಬಳಿಕ, ೧೯೭೧ರ ಹೊತ್ತಿಗೆ ತಮಿಳುನಾಡಿನಲ್ಲಿ ಕಾವೇರಿ ನೀರು ೨೮ ಲಕ್ಷ ಎಕರೆಗಳಿಗೆ ನೀರಾವರಿ ಒದಗಿಸುತ್ತಿದ್ದರೆ, ಕರ್ನಾಟಕದಲ್ಲಿ ಕೇವಲ ೬.೮ ಲಕ್ಷ ಎಕರೆಗಳಿಗೆ ನೀರುಣಿಸುತ್ತಿದೆ. ಈ ತಾರತಮ್ಯವೇ ಕರ್ನಾಟಕದ ಘೋಷಣೆಗೆ ಕಾರಣ. ಇದರಿಂದಾಗಿ ಆತಂಕಪಟ್ಟ ತಮಿಳ್ನಾಡು ಸರಕಾರವು ಕೇಂದ್ರ ಸರಕಾರಕ್ಕೆ ಮೊರೆಯಿಟ್ಟಿತು.
ಅನಂತರ ಎರಡು ಸರಕಾರಗಳ ನಡುವೆ ಹಲವು ಸುತ್ತಿನ ಮಾತುಕತೆ ಜರಗಿದವು. ಆದರೆ ಯಾವುದೇ ಒಪ್ಪಂದ ಏರ್ಪಡಲಿಲ್ಲ. ಈ ನಡುವೆ, ೧೯೮೬ರಲ್ಲಿ ತಂಜಾವೂರಿನ ರೈತ ಸಂಘಟನೆ ಸುಪ್ರೀಂ ಕೋರ್ಟಿನ ಮೆಟ್ಟಲೇರಿತು. ಸುಪ್ರೀಂ ಕೋರ್ಟಿನ ಆದೇಶದ ಅನುಸಾರ ೧೯೯೦ರಲ್ಲಿ ಕೇಂದ್ರ ಸರಕಾರವು ಕಾವೇರಿ ನ್ಯಾಯಮಂಡಳಿ ರಚಿಸಿತು. ಇದು ಜೂನ್ ೨೫, ೧೯೯೧ರಂದು ಮಧ್ಯಂತರ ಆದೇಶ ನೀಡಿತು. ೧೯೮೦ರಿಂದ ೧೯೯೦ರ ವರೆಗೆ ಮೆಟ್ಟೂರು ಜಲಾಶಯಕ್ಕೆ ಹರಿದ ನೀರಿನ ಪ್ರಮಾಣದ ಆಧಾರದಿಂದ, ಕರ್ನಾಟಕವು ೨೦೫ ಟಿಎಂಸಿ ನೀರನ್ನು ತಮಿಳ್ನಾಡಿಗೆ ಹರಿಸಬೇಕೆಂಬುದೇ ಆದೇಶ.
ಕರ್ನಾಟಕವು ಪ್ರತಿ ತಿಂಗಳು ತಮಿಳ್ನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನೂ ಕಾವೇರಿ ನ್ಯಾಯಮಂಡಳಿ ನಿಗದಿಪಡಿಸಿತು. ಕರ್ನಾಟಕವು ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಜಮೀನನ್ನು ೧೧.೨ ಲಕ್ಷ ಎಕರೆಗಳಿಗಿಂತ ಹೆಚ್ಚಿಸಿಕೊಳ್ಳಬಾರದೆಂದು ನಿರ್ಬಂಧಿಸಿತು. ಕರ್ನಾಟಕದ "ಡಿಸ್ಟ್ರೆಸ್ ಪ್ಲೀ"ಯನ್ನೂ ಕಾವೇರಿ ನ್ಯಾಯಮಂಡಳಿ ತಿರಸ್ಕರಿಸಿತು.
ಇದು ಕರ್ನಾಟಕದ ರೈತರ ಹಿತಕ್ಕೆ ಧಕ್ಕೆ ತರುವ ಆದೇಶವಾಗಿತ್ತು. ಆದ್ದರಿಂದ ಕರ್ನಾಟಕದ ಸರಕಾರ ಇದನ್ನು ಖಂಡತುಂಡ ವಿರೋಧಿಸಿತು. ಈ ವಿರೋಧ ಲೆಕ್ಕಿಸದೆ, ಪ್ರಧಾನಮಂತ್ರಿ ಪಿ. ವಿ. ನರಸಿಂಹರಾಯರ ಕೇಂದ್ರ ಸರಕಾರವು ಆದೇಶವನ್ನು ಗೆಜೆಟಿನಲ್ಲಿ ಪ್ರಕಟಿಸಿತು. ಆಗ ಕಾವೇರಿ ಕಣಿವೆಯ ಜನಸಮುದಾಯದ ಆಕ್ರೋಶ ಸ್ಫೋಟವಾಯಿತು. ಅಲ್ಲೆಲ್ಲ ಹಿಂಸಾಚಾರ ಭುಗಿಲೆದ್ದಿತು. ದಕ್ಷಿಣ ಕರ್ನಾಟಕ ಪ್ರತಿಭಟನೆಯ ಬೆಂಕಿಯಲ್ಲಿ ಉರಿಯಿತು. ಕರ್ನಾಟಕದ ತಮಿಳರು ಗುಳೆ ಹೋಗಬೇಕಾಯಿತು. ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಚಾರ ಸ್ತಬ್ಧವಾಯಿತು. ಅವು ಕರ್ನಾಟಕದ ಚರಿತ್ರೆಯಲ್ಲಿಯೇ ಕರಾಳ ದಿನಗಳು.
ಕರ್ನಾಟಕದ ವಿಧಾನಸಭೆಯು ಸರ್ವಪಕ್ಷಗಳ ಒಮ್ಮತದಿಂದ ಮಧ್ಯಂತರ ಆದೇಶವನ್ನು ತಿರಸ್ಕರಿಸುವ ನಿರ್ಣಯ ಕೈಗೊಂಡಿತು. ಕರ್ನಾಟಕದಲ್ಲಿ ಆಗ ಇದ್ದದ್ದು ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾಂಗ್ರೆಸ್ ಸರಕಾರ. ಕೇಂದ್ರದಲ್ಲಿ ಇದ್ದದ್ದೂ ಕಾಂಗ್ರೆಸ್ ಸರಕಾರ. ಆದರೂ ಕರ್ನಾಟಕ ಸರಕಾರ ಕನ್ನಡಿಗರ ಹಿತವನ್ನು ಬಲಿಗೊಡಲಿಲ್ಲ. "ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಸಂರಕ್ಷಣಾ ಸುಗ್ರೀವಾಜ್ನೆ"ಯನ್ನು ಜುಲಾಯಿ ೨೫, ೧೯೯೧ರಂದು ಹೊರಡಿಸಿತು. ಆ ಮೂಲಕ ಕನ್ನಡನಾಡಿನ ಹಿತಾಸಕ್ತಿಗೆ ತನ್ನ ಬದ್ಧತೆಯನ್ನು ಪ್ರಕಟಿಸಿತು. ಅನಂತರ, ಆ ಸುಗ್ರೀವಾಜ್ನೆ ಅಸಿಂಧು ಎಂದು ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿತೆಂಬುದು ಬೇರೆ ಮಾತು.
ಈ ಮಧ್ಯಂತರ ಆದೇಶ ಮತ್ತು ತರುವಾಯದ ಆದೇಶಗಳನ್ನು ಕಾರ್ಯರೂಪಕ್ಕಿಳಿಸಲು ಕೇಂದ್ರ ಸರಕಾರವು ಆಗಸ್ಟ್ ೧೯೯೮ರಲ್ಲಿ ಕಾವೇರಿ ನದಿ ಪ್ರಾಧಿಕಾರ ಸ್ಥಾಪಿಸಿದೆ. ಅದಾಗಿ ಫೆಬ್ರವರಿ ೫, ೨೦೦೭ರಂದು ಕಾವೇರಿ ನ್ಯಾಯ ಮಂಡಳಿಯು ಅಂತಿಮ ಆದೇಶ ನೀಡಿತು. ಅದರ ಪ್ರಕಾರ ಕರ್ನಾಟಕವು ಪ್ರತೀ ವರುಷ ತಮಿಳ್ನಾಡಿಗೆ ೧೯೨ ಟಿಎಂಸಿ ನೀರು ಬಿಡಬೇಕು.
ಕಾವೇರಿ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ, ಎಪ್ರಿಲ್ ೨೩, ೨೦೦೭ರಂದು ಕರ್ನಾಟಕವು ಸುಪ್ರೀಂ ಕೋರ್ಟಿನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಿದೆ. ಕೇರಳ ಮತ್ತು ತಮಿಳ್ನಾಡು ಸರಕಾರಗಳೂ ಎಸ್ಎಲ್ಪಿ ಸಲ್ಲಿಸಿವೆ. ಇದರ ಪ್ರಧಾನ ವಿಷಯಗಳನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ಪರಿಗಣಿಸ ಬೇಕಾಗಿದೆ.
ಕರ್ನಾಟಕವು ಕಾವೇರಿ ನ್ಯಾಯಮಂಡಳಿಯಲ್ಲಿ ೪೬೫ ಟಿಎಂಸಿ ಕಾವೇರಿ ನೀರು ತನ್ನ ಹಕ್ಕು ಎಂದು ಪ್ರತಿಪಾದಿಸಿತ್ತು. ಆದರೆ, ನ್ಯಾಯಮಂಡಳಿ ಮಂಜೂರು ಮಾಡಿದ್ದು ಕೇವಲ ೨೭೦ ಟಿಎಂಸಿ. ಇದನ್ನೂ, ಕರ್ನಾಟಕದ ರೈತರ ಹಿತಾಸಕ್ತಿಗೆ ಧಕ್ಕೆ ಮಾಡುವ ನ್ಯಾಯಮಂಡಳಿಯ ಇನ್ನಿತರ ತೀರ್ಮಾನಗಳನ್ನೂ ಕರ್ನಾಟಕವು ಎಸ್ಎಲ್ಪಿಯಲ್ಲಿ ಪಶ್ನಿಸಿದೆ.
ಅದಾದ ನಂತರವೂ ಕಾವೇರಿ ನದಿ ನೀರಿನ ಮೇಲಿನ ಕರ್ನಾಟಕದ ನ್ಯಾಯಬದ್ಧ ಹಕ್ಕಿಗೆ ತಮಿಳುನಾಡು ನಿರಂತರವಾಗಿ ತಡೆಯೊಡ್ಡುತ್ತಿದೆ. ಇದಕ್ಕಾಗಿ ಸುಪ್ರೀಂ ಕೋರ್ಟಿಗೆ ಪದೇಪದೇ ಮನವಿ ಸಲ್ಲಿಸುತ್ತಿದೆ. ಶಿವನಸಮುದ್ರ ಮತ್ತು ಮೇಕೆದಾಟು ಜಲವಿದ್ಯುತ್ ಯೋಜನೆಗಳನ್ನು ತಡೆಯಬೇಕೆಂದು ೨೦೦೮ರಲ್ಲಿ ಮನವಿ ಸಲ್ಲಿಸಿದೆ. ಹೊಸ ಚೆಕ್ ಡ್ಯಾಂ ನಿರ್ಮಿಸದಂತೆ, ಹೂಳೆತ್ತುವಿಕೆ ಸಹಿತ ಯಾವುದೇ ನೀರಾವರಿ ಕಾಮಗಾರಿ ನಡೆಸದಂತೆ ಕರ್ನಾಟಕವನ್ನು ತಡೆಯಬೇಕೆಂದು ಆಗಸ್ಟ್ ೬, ೨೦೧೦ರಂದು ತಮಿಳ್ನಾಡು ಕೋರಿದೆ. ಕರ್ನಾಟಕದ ಮೇಲೆ ಕಾವೇರಿ ನದಿ ನೀರಿನ ಬಳಕೆ ಬಗ್ಗೆ ಇನ್ನಷ್ಟು ನಿರ್ಬಂಧಗಳನ್ನು ಹೇರುವಂತೆ ಮಾರ್ಚ್ ೨೧, ೨೦೧೨ರಂದು ಮನವಿ ಮಾಡಿದೆ.
ತಮಿಳ್ನಾಡು ಶತಮಾನದಿಂದ ತಕರಾರು ಎತ್ತುತ್ತಿದ್ದರೂ, ತಮಿಳ್ನಾಡಿಗೆ ಕಾವೇರಿ ನೀರು ಬಿಡುವ ವಿಷಯದಲ್ಲಿ ಕರ್ನಾಟಕದ ನಡವಳಿಕೆ ನ್ಯಾಯಸಮ್ಮತವಾಗಿದೆ. ೨೦೦೭ರಿಂದೇಚೆಗೆ ಎರಡೂ ರಾಜ್ಯಗಳ ರೈತರು ನೀರಾವರಿ ಲಭ್ಯತೆಯಲ್ಲಿ ಯಾವುದೇ ತೊಂದರೆ ಅನುಭವಿಸಿಲ್ಲ ಎಂಬುದು ಕರ್ನಾಟಕದ ನ್ಯಾಯಬದ್ಧ ನಿಲುವಿಗೆ ನಿದರ್ಶನ.
ಈ ವರುಷ, ೨೦೧೨ರಲ್ಲಿ ಮಳೆಯ ಕೊರತೆಯಿಂದಾಗಿ ಕಾವೇರಿ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದ ನೀರಿನ ಪ್ರಮಾಣ ಶೇಕಡಾ ೫೦ಕ್ಕಿಂತಲೂ ಕಡಿಮೆ. ಇದರ ಪರಿಣಾಮವಾಗಿ, ತಮಿಳುನಾಡಿಗೆ ಅದರ ಪಾಲಿನ ಕಾವೇರಿ ನದಿ ನೀರನ್ನು ಬಿಡುವ ಭರವಸೆ ನೀಡಲು ಕರ್ನಾಟಕಕ್ಕೆ ಸಾಧ್ಯವಿಲ್ಲವಾಗಿದೆ.
ಈ ಸನ್ನಿವೇಶದಲ್ಲಿ ಇನ್ನೊಂದಷ್ಟು ಸತ್ಯಾಂಶಗಳನ್ನು ಗಮನಿಸೋಣ. ತಮಿಳ್ನಾಡಿನಲ್ಲಿ ಗಣನೀಯ ಪ್ರಮಾಣದ ಅಂತರ್ಜಲ ಮೂಲಗಳಿದ್ದು ಅವು ಕೃಷಿಗಾಗಿ ೩೦ ಟಿಎಂಸಿಯಷ್ಟು ನೀರು ಒದಗಿಸಬಲ್ಲವು. ಅದಲ್ಲದೆ, ಈಶಾನ್ಯ ಮಳೆಮಾರುತದಿಂದ ತಮಿಳ್ನಾಡಿಗೆ ಉತ್ತಮವಾಗಿ ಮಳೆಯಾಗುತ್ತದೆ; ಆದರೆ ಕರ್ನಾಟಕಕ್ಕೆ ಇದು ಲಭ್ಯವಿಲ್ಲ. ಕರ್ನಾಟಕದ ಜಲಾಶಯಗಳಲ್ಲಿ ಸಪ್ಟಂಬರ್ ೨೦೧೨ರಲ್ಲಿದ್ದ ನೀರಿನ ಪರಿಮಾಣ ಕೇವಲ ೬೯ ಟಿಎಂಸಿ. ಇದು ಮುಂದಿನ (೨೦೧೩ರ) ಬೇಸಗೆಯ ವರೆಗೆ ಕುಡಿಯುವ ನೀರು ಮತ್ತು ಕೃಷಿಕರ ಬೆಳೆಗಳಿಗೆ ನೀರಾವರಿ ಒದಗಿಸಲಿಕ್ಕೂ ಸಾಲದು.
ಇದ್ಯಾವುದನ್ನೂ ಪರಿಗಣಿಸದೆ, ತಮಿಳ್ನಾಡು ಸರಕಾರದ ಒತ್ತಡ ತಂತ್ರಕ್ಕೆ ಮಣಿದು, "ಕರ್ನಾಟಕದ ಕಾವೇರಿ ನದಿ ಜಲಾಶಯಗಳಿಂದ ತಮಿಳ್ನಾಡಿಗೆ ನೀರು ಬಿಡಬೇಕೆಂದು" ಪ್ರಧಾನಮಂತ್ರಿ ಮನಮೋಹನಸಿಂಗ್ ಸಪ್ಟಂಬರ್ ೨೦೧೨ರಲ್ಲಿ ಆದೇಶಿಸಿದರು. ಪುನಃ ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಇದರ ವಿರುದ್ಧ ಹೋರಾಟದ ಹುಯಿಲೆದ್ದಿತು. ರೈತಸಂಘಟನೆಗಳ ಮುಖಂಡರೂ, ರಾಜಕೀಯ ಮುಂದಾಳುಗಳೂ, ರೈತರೂ ಸೇರಿದಂತೆ ಜನರೆಲ್ಲ ಒಂದಾಗಿ ಪ್ರತಿಭಟನೆಗೆ ಎದ್ದು ನಿಂತರು. "ಕರ್ನಾಟಕ ಸರಕಾರ ರಾತ್ರೋರಾತ್ರಿ ನೀರು ಬಿಡುತ್ತದೆ. ಅದಕ್ಕಾಗಿ ನಮ್ಮ ಜಲಾಶಯದ ನೀರನ್ನು ನಾವೇ ಕಾಯುತ್ತೇವೆ" ಎಂದು ಜನಸಮುದಾಯ ಕೃಷ್ಣರಾಜಸಾಗರ ಅಣೆಕಟ್ಟಿನ ಪ್ರವೇಶದ್ವಾರದಲ್ಲಿ ರಾತ್ರಿಯ ಹೊತ್ತಿನಲ್ಲಿ ಜಮಾಯಿಸಿತು. ಮಾದೇಗೌಡರಂತಹ ಮುಂದಾಳುಗಳು ಉಪವಾಸ ಸತ್ಯಾಗ್ರಹ ಆರಂಭಿಸಿದರು. ನೂರಾರು ರೈತರು ನದಿಯ ಪಾತ್ರಕ್ಕೆ ಧುಮುಕಿ, "ಅಣೆಕಟ್ಟಿನಿಂದ ನೀರು ಬಿಟ್ಟರೆ ಬಲಿದಾನ ಮಾಡುವುದಾಗಿ" ಸಡ್ಡು ಹೊಡೆದರು. ಆ ಪ್ರತಿಭಟನಾಕಾರರ ಆಕ್ರೋಶದ ಫೋಟೋಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ. "ತಡರಾತ್ರಿ ಕೆಆರ್ಎಸ್, ಕಬಿನಿಯಿಂದ ತಮಿಳುನಾಡಿಗೆ ನೀರು, ಕಾವೇರಿ ಕಣ್ಣೀರು", ಮತ್ತು "ಕಟ್ಟೆ ಒಡೆದ ಕಾವೇರಿ ರೈತರ ಸಿಟ್ಟು" ಎಂಬ ಅಕ್ಟೋಬರ್ ೨೦೧೨ರ ಮೊದಲ ವಾರದ ವಾರ್ತಾಪತ್ರಿಕೆಗಳ ಮುಖಪುಟದ ಸುದ್ದಿಗಳು ಸಮಸ್ತ ಕನ್ನಡಿಗರನ್ನು ಬಡಿದೆಬ್ಬಿಸುವಂತಿವೆ.
"ಸ್ಯಾಂಡಿ" ಚಂಡಮಾರುತದ ಪರಿಣಾಮದಿಂದಾಗಿ ನವಂಬರ್ ೨೦೧೨ರ ಮೊದಲವಾರಗಳಲ್ಲಿ ತಮಿಳ್ನಾಡಿನಲ್ಲಿ ಧಾರಾಕಾರ ಮಳೆಯಾಗಿದೆ. ಆದರೂ "ಕಾವೇರಿ ಉಸ್ತುವಾರಿ ಸಮಿತಿ"ಯು ನವಂಬರ್ ೧೫, ೨೦೧೨ರ ಮುನ್ನ ತಮಿಳ್ನಾಡಿಗೆ ೫.೯೩ ಟಿಎಂಸಿ ನೀರು ಬಿಡಬೇಕೆಂದು ಕರ್ನಾಟಕಕ್ಕೆ ಸೂಚಿಸಿದೆ!
ಕರ್ನಾಟಕದ ನದಿನೀರಿನ ಸಮಸ್ಯೆ ಸಂಕೀರ್ಣವಾದದ್ದು. ಕಾವೇರಿ ಮತ್ತು ಕೃಷ್ಣಾ ನದಿಗಳು ನಮ್ಮ ಕರ್ನಾಟಕದಲ್ಲಿ ಹುಟ್ಟಿ ಪಕ್ಕ ರಾಜ್ಯಗಳಿಗೆ ಹರಿಯುತ್ತಿರುವ ಕಾರಣ, ಅವುಗಳ ನೀರಿನ ಹಂಚಿಕೆಯ ವಿವಾದ ಮತ್ತೆಮತ್ತೆ ತಲೆಯೆತ್ತುತ್ತಲೇ ಇರುತ್ತದೆ. ರಾಜಕಾರಣಿಗಳಿಗಂತೂ ಇಂತಹ ವಿವಾದಗಳು ಯಾವಾಗಲೂ ಇರಬೇಕು. ತಮ್ಮ ರಾಜ್ಯದ ಜನರಿಗಾಗಿ ತಾವು "ಹೋರಾಡುತ್ತಿದ್ದೇವೆ" ಎಂದು ತೋರಿಸಿಕೊಳ್ಳಲಿಕ್ಕಾಗಿ ಇಂತಹ ವಿವಾದಗಳನ್ನು ಅವರು ಜೀವಂತವಾಗಿ ಇಡಲು ಬಯಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸುವ ಇಂತಹ ಸಮಸ್ಯೆಗಳು ಎಲ್ಲ ರಾಜಕೀಯ ಪಕ್ಷಗಳಿಗೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬೇಕು. ಅದೇ ರೀತಿಯಲ್ಲಿ, ಕೇಂದ್ರ ಸರಕಾರಕ್ಕೆ ತಮಿಳುನಾಡಿನ ಹಾಗೂ ಆಂಧ್ರಪ್ರದೇಶದ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ. ಅದಕ್ಕಾಗಿ, ಕರ್ನಾಟಕಕ್ಕೆ ನದಿ ನೀರಿನ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕೇಂದ್ರ ಸರಕಾರವು ಮುಂದಾಗುವುದಿಲ್ಲ. ಯಾಕೆಂದರೆ, ಅದನ್ನು ಸರಿಪಡಿಸಿದರೆ ಆ ಎರಡು ರಾಜ್ಯ ಸರಕಾರಗಳ ಬೆಂಬಲವನ್ನು ಕೇಂದ್ರ ಸರಕಾರದಲ್ಲಿ ಅಧಿಕಾರ ಹಿಡಿದಿರುವ ರಾಜಕೀಯ ಪಕ್ಷವು ಕಳೆದುಕೊಳ್ಳುತ್ತದೆ. ಹಾಗಾಗಿ, ಬ್ರಿಟಿಷರು ಮಾಡಿದಂತೆ, ಕೇಂದ್ರ ಸರಕಾರವೂ ನದಿನೀರಿನ ಹಂಚಿಕೆಯಲ್ಲಿ ಕರ್ನಾಟಕದ ನ್ಯಾಯಸಮ್ಮತ ಹಕ್ಕನ್ನು ಮಾನ್ಯ ಮಾಡುವುದಿಲ್ಲ.
ಸರಕಾರಗಳ ಇಂತಹ ಆಟಗಳನ್ನು ಮಾನ್ಯ ಡಿ. ವಿ. ಗುಂಡಪ್ಪನವರು ತಮ್ಮ ಒಂದು ಮುಕ್ತಕದಲ್ಲಿ ಮನಮುಟ್ಟುವಂತೆ ಬಿಂಬಿಸಿದ್ದಾರೆ:
ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು
ಉರುಳದಿಹುದಚ್ಚರಿಯೊ! - ಮಂಕುತಿಮ್ಮ
- ಅಡ್ಡೂರು ಕೃಷ್ಣ ರಾವ್