ಪ್ರತಿ ಬಾರಿಯೂ ಡಾಕ್ಟರ್ ಗಳು ನನ್ನನ್ನು ಕೇಳುವ ಪ್ರಶ್ನೆ: ಓಹ್! ನಿಮ್ಮ ತಂದೆ ಈ ಬಾರಿಯೂ ಬದುಕಿಬಿಟ್ಟರೆ...?!

ಪ್ರತಿ ಬಾರಿಯೂ ಡಾಕ್ಟರ್ ಗಳು ನನ್ನನ್ನು ಕೇಳುವ ಪ್ರಶ್ನೆ: ಓಹ್! ನಿಮ್ಮ ತಂದೆ ಈ ಬಾರಿಯೂ ಬದುಕಿಬಿಟ್ಟರೆ...?!

 

ಮೊನ್ನೆ ಮೊನ್ನೆ, ನಮ್ಮ ಅಕ್ಕನ ಮಗಳ ಮದುವೆಗೆ ಕೊಳ್ಳೇಗಾಲದಲ್ಲಿರುವ ವಾಸವಿ ಮಹಲ್ ಗೆ ಮದುವೆಯ ಮೊದಲ ದಿನದ ಸಂಜೆ ಹೋದ ತಕ್ಷಣವೇ ಒಂದಷ್ಟು ಕೆಲಸ ಗೊತ್ತು ಮಾಡಿದರು. ಅದರಲ್ಲಿ ಪ್ರಮುಖವಾಗಿ ತಿಂಡಿ, ಅಡುಗೆ ಸಾಮಾನುಗಳನ್ನು ಇಟ್ಟಿದ್ದ ಕೋಣೆಯನ್ನು ಕಾಯುವುದು. ನಮ್ಮ ಕುಟುಂಬವರ್ಗದಲ್ಲಿಯೇ ನಾನು ಅತಿ ಹೆಚ್ಚು ಸಂಭಾವಿತ ಮತ್ತು ಮೃದು ಎಂಬ ಹುಚ್ಚು ಕಲ್ಪನೆ ಎಲ್ಲರಲ್ಲಿದೆ. ಆದುದರಿಂದ ನಾನು ಕೆಲಸ ಮಾಡಿದಂತೆಯೂ ಇರಬೇಕು ಮತ್ತು ಆರಾಮವಾಗಿಯೂ ಇರಬೇಕು, ಅಷ್ಟು ನಾಜೂಕಾಗಿ ನೋಡಿಕೊಳ್ಳುವುದೇ ಹೆಚ್ಚು. ‘ನೀರು ಹೊರುವವರು ಅವರಾದರೆ ನಾನು ನಲ್ಲಿ ತಿರುಗಿಸಲು ನಿಂತಂತೆ!’ ಅದೇನೇ ಇರಲಿ, ಈ ಮದುವೆ ನಡೆಯುವ ಶ್ರಮದಲ್ಲಿ ನನ್ನದೂ ಅಳಿಲು ನೆನಪಿರಲಿ, ಸಂಬಂಧಪಟ್ಟವರಿಗೆ ಪ್ರಸಾರವಾಗಲಿ ಎಂಬ ಉದ್ದೇಶದಿಂದ ಒಂದಷ್ಟು ಅದು ಇದು ಮಾಡಿದೆ. ಇದ್ದಕ್ಕಿದ್ದಂತೆ ನಮ್ಮ ತಂದೆ ನೆನಪಾದರು. ‘ಅಣ್ಣ ಬಂದಿಲ್ಲವೇ?’ ಎಂದು ನಮ್ಮ ಅಣ್ಣನನ್ನು ಕೇಳಿದೆ. (ನಮ್ಮ ತಂದೆಯನ್ನು ಅಣ್ಣನೆಂದೇ ಕರೆಯುವ ವಾಡಿಕೆ ನಮ್ಮದು). ‘ಬಂದಿದ್ದಾರೆ, ಮೇಲೆ ರೂಂ ನಂ 5ನಲ್ಲಿದ್ದಾರೆ’ ಎಂದ ಅಣ್ಣ.

ಮೆಟ್ಟಿಲು ಹತ್ತಿ ರೂಂ ನಂ 5ಗೆ ಹೋದಾಗ ನಮ್ಮ ತಂದೆ ಮಗುವಿನ ತರಃ ಅವಚಿಕೊಂಡು ಮಲಗಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಇನ್ನೂ ಕೃಶವಾದಂತೆ ಕಂಡರು. ತಲೆಗೆ ದಿಂಬು ಮತ್ತು ಹೊದೆಯಲು ರಗ್ಗಿರಲಿಲ್ಲ. ಅಷ್ಟಕ್ಕೇ ಅಲ್ಲಿಗೆ ಬಂದ ಮತ್ತೊಬ್ಬ ಅಣ್ಣನಿಗೆ ‘ಒಂದು ದಿಂಬು, ರಗ್ಗಿನ ವ್ಯವಸ್ಥೆ ಮಾಡುವುದಲ್ಲವೇ? ಅಣ್ಣನಿಗೆ ಅದೆಷ್ಟೇ ಸೆಖೆಯಾದರೂ ತಲೆಗೆ ದಿಂಬು ಮತ್ತು ಮೈಗೆ ರಗ್ಗು ಹೊದಿಸಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲವೆಂಬುದು ಗೊತ್ತಿಲ್ಲವೇ?’ ಎಂದೆ. ಅದಕ್ಕವನು ‘ಹೌದಲ್ಲವೇ, ಈಗಲೇ ವ್ಯವಸ್ಥೆ ಮಾಡುತ್ತೇನೆ ಎಂದವನಿಗೆ ದಿಂಬು ಸಿಗದೆ, ಕೊನೆಗೆ ಅಡುಗೆ ಮನೆಗೆ ಹೋಗಿ ಊಟಕ್ಕೆಂದು ಇಟ್ಟಿದ್ದ ಒಂದು ಪೇಪರ್ ರೋಲ್ ತಂದು ಹಾಸಿಗೆ ಕೆಳಗಿಟ್ಟು ಎತ್ತರ ಮಾಡಿ ತಾತ್ಕಾಲಿಕವಾಗಿ ತಲೆಗೆ ದಿಂಬೊಂದು ಒತ್ತಿಕೊಂಡಂತೆ ಮಾಡಿದ. ಮಲಗಿದ್ದ ಅಣ್ಣನನ್ನು ಎಬ್ಬಿಸಿದೆ. ನನ್ನನ್ನು ನೋಡಿದ್ದೆ ‘ಅಯ್ಯಾ, ಈಗ್ ಬಂದಾ? ಸೌಖ್ಯಾನಾ?’ ಎಂದು ಹೇಳುವುದರ ಜೊತೆಗೆ ನಾನು ಯಾವಾಗಲೂ ಅವರಿಂದ ನಿರೀಕ್ಷಿಸುವ ನನಗೆ ಅತಿಹೆಚ್ಚು ಚಿರಪರಿಚಿತ ಮಾತಾದ ‘ಯಾವುದಾದರೂ ಬುಕ್ ತಂದಿದ್ಯಾ?’ ಎಂಬ ಮಾತು ಅಂದುಕೊಂಡಂತೆ ಹೊರಬಂತು. ‘ತರಂಗ, ಕರ್ಮವೀರದ ಜೊತೆಗೆ ಇಂದಿನ ವಿಜಯ ಕರ್ನಾಟಕ ಪೇಪರ್ ಇದೆ, ತಗೋ’ ಎಂದೊಡನೆ ಹಸಿದಿದ್ದ ಮಗುವೊಂದು ಹಾಲಿಗೋಸ್ಕರ ತಾಯಿಯ ಎದೆಯನ್ನು ಆತುರಾತುರವಾಗಿ ಕಚ್ಚಿಕೊಳ್ಳುವಂತೆ ಕೈಯೂರಿ ಎದ್ದು ಕುಳಿತುಕೊಂಡರು. ಕೆಮ್ಮಿ ಕೆಮ್ಮಿ ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ‘ಇದೊಂದೇ ಕಣಯ್ಯ, ನನಗಿನ್ನೇನೂ ತೊಂದರೆಯಿಲ್ಲ, ಕಫ ಒಂದು ಹೋಗಿಬಿಟ್ಟರೆ ಸಾಕು’ ಎಂದು ಪುಸ್ತಕದೆಡೆಗೆ ಕಣ್ಣಾಡಿಸಿದರು.

ನಮ್ಮ ತಂದೆಯ ಮೂಲಕ ನಾನು ಯಾವಾಗಲೂ ಅಳವಡಿಸಿಕೊಳ್ಳಲು ತುಡಿಯುವ ಒಂದು ಪ್ರಮುಖಾಂಶವೆಂದರೆ ಸದಾ ಏನಾದರೊಂದು ಓದುತ್ತಿರುವುದು. ಹಸಿವಿನ ಕೋಳಿಯೊಂದು ನೆಲ ಬೆದಕಿದಂತೆ ಪುಸ್ತಕಗಳಿಗೆ ಹುಡುಕಾಡುತ್ತಿರುತ್ತಾರೆ. ದಿನಪತ್ರಿಕೆಯೊಂದು, ಅದಾವ ಗಳಿಗೆಯಲ್ಲಿಯೇ ಅವರ ಕೈಗೆ ದೊರಕಿದರೂ ಒಂದು ಕಡೆಯಿಂದ ಪ್ರತಿ ಅಕ್ಷರವನ್ನೂ ಓದುತ್ತಾರೆ. ನಿನ್ನೆ ಮೊನ್ನೆ ಪತ್ರಿಕೆಗಳು ದೊರೆತರೂ ಅಷ್ಟೇ ಆಸ್ಥೆಯಿಂದ ಓದಿಕೊಳ್ಳುತ್ತಾರೆ. ಅವರ ಅಕ್ಕಪಕ್ಕದಲ್ಲಿ ಯಾವುದಾದರೂ ಪುಸ್ತಕ ಬಿದ್ದಿದ್ದರೆ ಅದು ಎಷ್ಟೇ ಹಳೆಯದಾದರೂ, ಎಲ್ ಕೆ ಜಿ, ಯೂ ಕೆ ಜಿ ಹೊತ್ತಿಗೆಗಳಾದರೂ ಅಷ್ಟೇ ಆಸ್ಥೆಯಿಂದ ಸಂಪೂರ್ಣವಾಗಿ ಓದಿ ಮುಗಿಸಿಟ್ಟಿರುತ್ತಾರೆ. ಜಟಿಲ ವಿಚಾರಗಳನ್ನು ಬಾಳೆಹಣ್ಣಿನಿಂದ ಸಿಪ್ಪೆ ತೆಗೆದಷ್ಟು ಸುಲಭವಾಗಿ ಎಲ್ಲರ ಮುಂದೆ ಮಂಡಿಸುವುದನ್ನು ಕಾಣುತ್ತಿರುತ್ತೇನೆ. ಕೆಲವು ವಿಚಾರಗಳನ್ನು ನೋಟ್ ಬುಕ್ಕೊಂದರಲ್ಲಿ ಗುರುತು ಹಾಕಿಟ್ಟುಕೊಳ್ಳುತ್ತಾರೆ. ಅಷ್ಟೇ ವಿಚಾರಗಳನ್ನೂ ತಿಳಿದುಕೊಂಡಿರುವುದಲ್ಲದೇ ಅನೇಕರ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸಬಲ್ಲರು. ಅವರು ಪುಸ್ತಕ-ಪತ್ರಿಕೆಗಳನ್ನು ಓದುವಾಗ ಈ ಪ್ರಪಂಚದಿಂದಲೇ ತಮ್ಮನ್ನು ತಾವು ವಿಭಜಿಸಿಕೊಂಡಿರುವವರೇನೋ ಎಂದೆನಿಸುತ್ತದೆ. ಹೂವಿನಿಂದ ಮಧುವನ್ನು ಹೀರಿಕೊಳ್ಳುವ ಹುಳುವಿನಂತೆ ಮಗ್ನರಾಗಿರುತ್ತಾರೆ. ಅಧ್ಯಾತ್ಮಕ್ಕೆ ಸಂಬಂಧ ಪಟ್ಟಂತೆ ಅವರ ಬಳಿ ಇರುವಷ್ಟು ಪುಸ್ತಕಗಳು, ಅದರಲ್ಲೂ ಅಪರೂಪವೆನಿಸಿಕೊಳ್ಳುವ ಪುಸ್ತಕಗಳು, ನಾನು ಕಂಡಂತೆ ಬೇರೆ ಯಾರ ಬಳಿಯೂ ಇಲ್ಲ. ಅವರನ್ನು ಕಾಣಲು ಹೋದಾಗ “ಅಯ್ಯಾ.. ಯಾವ್ದಾದ್ರೂ ಬುಕ್ ತಂದಿದ್ಯಾ…?” ಅಂತ ಕೇಳೋದು ಎಂದಿಗೂ ಮರೆಯುವುದಿಲ್ಲ. ಜೊತೆಗೆ, ಅವರೂ ಅನೇಕ ತತ್ತ್ವಪದ, ಕೀರ್ತನೆಗಳನ್ನು ರಚಿಸಿ ರಾಗ ಸಂಯೋಜಿಸಿದ್ದಾರೆ ಕೂಡ. ಒಳ್ಳೆಯ ಹಾಡುಗಾರರು ಮತ್ತು ನಿರರ್ಗಳವಾಗಿ ಹಾರ್ಮೋನಿಯಂ ನುಡಿಸಬಲ್ಲರು. ಈ ಇಳಿ ವಯಸ್ಸಿನಲ್ಲೂ ಅವರು ಹಾರ್ಮೋನಿಯಂ ನುಡಿಸುವ ರೀತಿಯೇ ನನಗೆ ಸೋಜಿಗ. ಹಾಡುಗಾರ ಹಾರ್ಮೋನಿಯಂಗೆ ಹೊಂದಿಕೊಳ್ಳದಿದ್ದರೆ, ಅಣ್ಣನೇ ಅವರ ಹಿಂದೆ ಓಡಿ ಓಡಿ ಎಲ್ಲವನ್ನೂ ಅಚ್ಚುಕಟ್ಟಾಗಿ ಮುಗಿಸಿದಂತಿರುತ್ತದೆ. ಮೊನ್ನೆ ‘ಅನಿಸುತಿದೆ ಯಾಕೋ ಇಂದು’ ಹಾಡನ್ನು ಇಂದಿನ ಯುವಕರೂ ನಾಚುವಂತೆ ನುಡಿಸುತ್ತಿದ್ದದ್ದು ಕಂಡು ಅಣ್ಣನಿಗೆ ಖಂಡಿತಾ ವಯಸ್ಸಾಗಿಲ್ಲವೆಂದೆನಿಸಿತು. ಆದರೆ ಅವರ ಈಗಿನ ವಯಸ್ಸು ಸರಿ ಸುಮಾರು 80 ರಿಂದ 85 ವರ್ಷ. ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯುತ್ತಮವಾಗಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಳ್ಳುವ ಜಾಣ್ಮೆಯಿದೆ. ಉತ್ತಮ ಹಾಡುಗಾರರು, ಹಾರ್ಮೋನಿಯಂ ವಾದಕರು, ಉತ್ತಮ ನಾಟಕ ನಿರ್ದೇಶಕರು.

ಇಷ್ಟೆಲ್ಲವಿದ್ದರೂ, ತಮ್ಮ ಪ್ರತಿಭೆಯನ್ನು ಓರೆಗಚ್ಚಿ ಯಾಕೋ ಬೆಳಕಿಗೆ ತಂದುಕೊಳ್ಳಲು ಅವರು ಇಚ್ಚಿಸಲಿಲ್ಲ. “ನಲ್ಲತಂಗಿ” ಹರಿಕಥೆ ವಿದ್ವಾಂಸರಾದ ಗುರುರಾಜ್ ನಾಯ್ಡು ಮತ್ತು ಮೈಸೂರ್ ಲೋಕೇಶ್ ರವರು ತುಂಬಾ ಆಪ್ತರಾಗಿದ್ದ ಕಾಲವೊಂದಿತ್ತು. ಅವರಷ್ಟೇ ಪ್ರತಿಭಾವಂತರಾಗಿದ್ದರೂ ಯಾಕೋ ಅವರ ಜಾಡನ್ನು ಹಿಡಿಯಲಿಲ್ಲವೆಂಬುದು ನನ್ನ ಪ್ರಕಾರ ದುರಂತವೇ ಸರಿ. ಡಾ. ರಾಜ್ ರವರೂ ಮೊದಲು ಪರಿಚಯವಿದ್ದು ಇವರ ನಾಟಕ ನಿರ್ದೇಶನಗಳನ್ನು ಮೆಚ್ಚಿಕೊಂಡಿದ್ದರಂತೆ. ಆ ಪರಿಚಯವನ್ನು ತಮ್ಮ ಪ್ರತಿಭೆ ಪಸರಿಸಿಕೊಳ್ಳಲು ಉಪಯೋಗಿಸಿಕೊಳ್ಳಬಹುದಿತ್ತು.

ನಾ ಕಂಡಂತೆ ಅಣ್ಣ ಯಾವಾಗಲೂ ಸ್ಥಿತಪ್ರಜ್ಞರಾಗಿರುತ್ತಾರೆ. ಅವರು ಕುಗ್ಗಿದ್ದು ಮತ್ತು ಹಿಗ್ಗಿದ್ದು ನಾನು ಕಂಡೇ ಇಲ್ಲ. ತಮ್ಮ ಬಾಲ್ಯದಿಂದಲೂ ಕಷ್ಟವಿಲ್ಲದೇ ಬೆಳೆದವರು. ಆಗಿನ ಮಟ್ಟದಲ್ಲಿ ಚಿನ್ನಕ್ಕೇನು ಬರವಿರಲಿಲ್ಲ, ಮನೆಯಲ್ಲಿ ಮಂಕರಿಗಟ್ಟಲೇ ಚಿನ್ನವನ್ನಿರಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ನಮ್ಮಣ್ಣ ಚಿನ್ನವನ್ನೇ ಅಂಗಡಿಗೆ ಕೊಟ್ಟು ತಿಂಡಿ ತಿನ್ನುತ್ತಿದ್ದರಂತೆ. ಇಷ್ಟೆಲ್ಲಾ ಐಶ್ವರ್ಯ ಅಂತಸ್ತಿನ ತಳಹದಿಯಲ್ಲಿ ಬೆಳೆದರೂ (ಈಗ ಅವರ ಪಿತ್ರಾರ್ಜಿತದ ಒಂದು ರೂ ಆಸ್ತಿಯೂ ಉಳಿದಿಲ್ಲ) ಅವರು ಎಂದಿಗೂ ದರ್ಪ ತೋರಿಸಿದವರಲ್ಲ. ಯಾರನ್ನೂ ಏಕವಚನದಿಂದ ಮಾತನಾಡಿಸಿದವರಲ್ಲ, ಎದಿರುಗಿರುವವರು ಎಷ್ಟೇ ಚಿಕ್ಕವರಾಗಿರಲಿ ಅವರನ್ನು ಬಾಯಿ ತುಂಬಾ ‘ಅಣ್ಣಯ್ಯಾ’ ಎಂದೇ ಕರೆಯುತ್ತಾರೆ, ಹೆಣ್ಣು ಮಕ್ಕಳನ್ನು ‘ಅಮ್ಮಾ’ ಎಂದು ಕರೆಯುವುದು ಅವರ ಗೌರವಯುಕ್ತ ವಾಡಿಕೆ. ಜೊತೆಗೆ ಎಲ್ಲರಿಗೂ ಇರುವಂತೆ ಅವರಲ್ಲಿಯೂ ದೌರ್ಬಲ್ಯಗಳಿವೆ. ಇವರು ಬಿಟ್ಟರೂ, ಮೈಬಿಡದ ಚಟಗಳಿವೆ. ಮೂಲತಃ ಅವರು ಡ್ರಾಮಾಮಾಸ್ಟರ್, ರಾಮಾಯಣ, ಮಹಾಭಾರತದಂತಹ ಅನೇಕ ವಿಸ್ತೃತ ಮತ್ತು ಸ್ಥಳೀಯ ಪ್ರಹಸನಗಳನ್ನು ವೇದಿಕೆಗೆ ತಂದಿದ್ದಾರೆ. “ಸಿದ್ಧಪ್ಪಾಜಿಯ ಪವಾಡಗಳು” ಎಂಬ ನಾಟಕದಲ್ಲಿ ನನ್ನನ್ನು ಸೂತ್ರಧಾರಿ ಮತ್ತು ದೊಡ್ಡಮ್ಮತಾಯಿ ಪಾತ್ರಕ್ಕೆ ಹಾಕಿಕೊಂಡಿದ್ದು ಎಂದಿಗೂ ಹಸಿರು ನೆನಪು. “ಅಣ್ಣಾ, ನಿದ್ದೆ ಬರುತ್ತಿದೆ… ಮಲಗುತ್ತೇನೆ” ಎಂದು ಅತ್ತಿದ್ದು ನನಗಿನ್ನೂ ನೆನಪಿದೆ. ನಾನಾಗ ಎರಡನೇ ತರಗತಿಯಲ್ಲಿದ್ದೆ(1992). ಅವರು ನಡೆಸಿಕೊಡುತ್ತಿದ್ದ “ಶನಿ ಮಹಾತ್ಮೆ” ಹರಿಕಥೆ ಊರವರಿಗೆಲ್ಲಾ ಅಚ್ಚುಮೆಚ್ಚು. ತೂಕಡಿಸದೇ ಮನಸ್ಸಿಟ್ಟು ಎಲ್ಲರೂ ಆಲಿಸುತ್ತಿದ್ದರು. ನಡು ನಡುವೆ ಅವರು ಹೇಳುತ್ತಿದ್ದ ಕೆಲವು ಉಪಕಥೆಗಳು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿಬಿಡುತ್ತಿದ್ದವು. ಹತ್ತಿರ ಸುಳಿಯುತ್ತಿದ್ದ ಅಲ್ಪ ಸ್ವಲ್ಪ ನಿದ್ದೆಯೂ ದಿಕ್ಕೆಟ್ಟು ಓಡಿಹೋಗುತ್ತಿತ್ತು. ನಮ್ಮ ತಂದೆ ಜೊತೆ ನಾನೂ ಕೂಡ ಅನೇಕ ಬಾರಿ ತಬಲ ಭಾರಿಸಿದ್ದೇನೆ. ಉತ್ತಮ ಹಾಡುಗಾರರಾಗಿದ್ದ ಅವರಿಗೆ ಸದ್ಯಕ್ಕೆ ಗಂಟಲು ಕ್ಯಾನ್ಸರ್ ಬಂದು ಗಂಟಲು ಮುಚ್ಚಿಹೋಗಿದೆ…

2008 ರಲ್ಲಿ ಅವರಿಗೆ ಗಂಟಲು ಕ್ಯಾನ್ಸರ್ ಎಂಬ ಮಾರಿ ಒಕ್ಕರಿಸಿದೆ ಎಂದು ತಿಳಿದಾಗ ನಾವೆಲ್ಲಾ ಬೆಚ್ಚಿ ನಿತ್ರಾಣರಾಗಿದ್ದೆವು. ಆಗಷ್ಟೇ ಎಂ.ಎಸ್ಸಿ ಮುಗಿಸಿ ಹೊರಬಂದು ಮೂರು ಕಾಸು ಕಾಣುವುದರಲ್ಲಿದ್ದ ನನಗೆ ಇದೊಂದು ಸವಾಲಾಗಿತ್ತು, ಜೊತೆಗೆ ತಿಂಗಳಿಗೆ ಕೇವಲ 800 ದುಡಿದು, ಅದರಲ್ಲಿ 500 ಊಟಕ್ಕೆ ಕಟ್ಟಿ, ಉಳಿದ 300 ರೂಗಳಲ್ಲಿ ಒಂದೊಂದು ರುಪಾಯಿಯನ್ನು ಗಮನವಿಟ್ಟು ಖರ್ಚು ಮಾಡಿ ಎಂ.ಎಸ್ಸಿ ಮುಗಿಸಿದ್ದ ನನಗೆ ದುಡ್ಡಿನ ವಿಚಾರದಲ್ಲಿ ಮತ್ತೂ ಕಷ್ಟ ಎದುರಾಯಿತು. ದುಡಿಯುವುದು ಬಾಯಿ ಮುಕ್ಕಳಿಸಲು ಆದರೆ, ತಿನ್ನುವುದಕ್ಕೆ ಅನ್ನವಿಲ್ಲವೆಂಬಂತಿತ್ತು ನನ್ನ ದುಡಿಮೆ. ನೆಪ ಮಾತ್ರಕ್ಕಷ್ಟೇ ಸಾರ್ವಜನಿಕ ಆಸ್ಪತ್ರೆಯಾದ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಗಂಟಲನ್ನೇ ಸುಟ್ಟು ಹಾಕುವ ‘ರೇಡಿಯೋ ಥೆರಪಿ’ ಚಿಕಿತ್ಸೆ ಕೊಡಿಸಲಾಯಿತು. ಅವರ ನಾಲಗೆ ಕೆನ್ನೆ ಎಲ್ಲಾ ಸುಟ್ಟುಹೋಗಿತ್ತು. ಬಾಯಿಗೆ ತೊಟ್ಟು ನೀರು ಹೋಗುತ್ತಿರಲಿಲ್ಲ. ಗ್ಲೂಕೋಸ್ ಸೂಜಿ ಚುಚ್ಚಲು ಎರಡೂ ಕೈಗಳಲ್ಲೂ ಜಾಗವೇ ಇಲ್ಲದೆ ಡಾಕ್ಟರ್ ಗಳು ನೋಯುವ ಗಾಯದ ಮೇಲೆಯೇ ವಿಧಿಯಿಲ್ಲದೆ ಬೆಚ್ಚುವ ದೇಹವನ್ನೂ ಲೆಕ್ಕಿಸದೆ ಚುಚ್ಚುತ್ತಿದ್ದರು.  ‘ಈ ರೋಗ ಬಂದವರು ಯಾರೂ ಬದುಕಿದ್ದಿಲ್ಲ, ಚಿಕಿತ್ಸೆ ಕೊಡಿಸಿ, ನೋವಿನಲ್ಲಿ ಸಾಯಿಸಬೇಡಿ’ ಎಂದು ಕೆಲವು ಹಿತೈಷಿಗಳು ಹೇಳಿದಾಗ ಅವರ ಮಾತನ್ನು ಎಲ್ಲೋ ಒಂದು ಕಡೆ ಯೋಚಿಸದೆ ಧಿಕ್ಕರಿಸಿಬಿಟ್ಟೆನೇನೋ ಎಂದೆನಿಸಿತ್ತು. ಅಷ್ಟಕ್ಕೇ ಸರಿಯಾಗಿ, ಇದೇ ರೋಗಕ್ಕೆ ಬಲಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಎಷ್ಟೋ ದಷ್ಟಪುಷ್ಠ ಯುವಕರು ಕಣ್ಣ ಮುಂದೆಯೇ ತೀರಿಕೊಂಡರು. ಇಷ್ಟೆಲ್ಲಾ ನೋವುಗಳ ನಡುವೆಯೂ, ಗಾಯದ ಮೇಲೇಯೇ ಸೂಜಿ ಚುಚ್ಚಿದರೂ ನಮ್ಮ ತಂದೆ ಸ್ವಲ್ವವೂ ಅಲುಗಾಡುತ್ತಿರಲಿಲ್ಲ. ಎದೆಯ ಮೇಲೆ ಕೈಯಿಟ್ಟು "ಶಿವ" ಎಂದುಕೊಂಡು ಸುಮ್ಮನಾಗಿಬಿಡುತ್ತಿದ್ದರು. ನಾವುಗಳು ಎದುರಿದ್ದರಂತು ನಗುಮೊಗದಿಂದಿಗೆ ನೋವನ್ನು ನುಂಗುತ್ತಿದ್ದರು.

ಈ ಚಿಕಿತ್ಸೆಯಲ್ಲಿ ನಮ್ಮ ತಂದೆಯ ದೇಹ ಕುಗ್ಗಿತೋ ಹೊರತು, ಮನಸ್ಸು ಕುಗ್ಗಿದ್ದು ಮಾತ್ರ ನಾನು ಕಾಣಲೇ ಇಲ್ಲ. ಬಾಯಿಯಲ್ಲಿ ತೊಟ್ಟು ನೀರು ಇಳಿಯದಿದ್ದರೂ ಡಝನ್ ಗಟ್ಟಲೇ ಮಾತ್ರೆ ನುಂಗುತ್ತಿದ್ದರು. ಮಾತ್ರೆ ನುಂಗುವಾಗ ದಳ ದಳನೆ ಸುರಿಯುತ್ತಿದ್ದ ಕಣ್ಣೀರನ್ನು ಕಡುಗೆಂಪು ಕಣ್ಣುಗಳಿಂದ ಅವರು ಒಸರಿಕೊಳ್ಳುತ್ತಿದ್ದ ಪರಿಸ್ಥಿತಿ ನನಗೆ ನಿಜಕ್ಕೂ ಯಾತನಾಮಯ. ಇಷ್ಟೆಲ್ಲವಾದ ನಂತರ, ಕೊನೆಗೊಂದು ದಿನ ಡಾಕ್ಟರ್ ‘ನಿಮ್ಮ ತಂದೆಯವರಿಗೆ, ವಯಸ್ಸಾಗಿದೆ, ಇನ್ನು ಚಿಕಿತ್ಸೆ ಮುಂದುವರಿಸಲಾಗುವುದಿಲ್ಲ, ಕ್ಯಾನ್ಸರ್ ಉಲ್ಬಣಗೊಳ್ಳುತ್ತಿದೆ,ಅಕ್ಟೋಬರ್ 2009ರೊಳಗೆ ತೀರಿಕೊಳ್ಳುತ್ತಾರೆ” ಎಂದು ಶರ ಬರೆದುಬಿಟ್ಟರು. ‘ಇಷ್ಟೆಲ್ಲಾ ದುಡ್ಡುಕೊಟ್ಟು ನೋವನ್ನು ಕೊಂಡುಕೊಂಡು ಹೊರಹೋಗುವಂತಾಯಿತಲ್ಲ’ ಎಂದು ತೀವ್ರ ಖಿನ್ನನಾಗಿದ್ದೆ. ಜೊತೆಗೆ ಟಿ.ಬಿ ಯೂ ಕೂಡಿಕೊಂಡಿತ್ತು. ಕೆಮ್ಮು ಮತ್ತು ಕಫ ಹೆಚ್ಚಾಯಿತು. ಎದೆ ಮೂಳೆಗಳೆಲ್ಲ ನೋವಿನಲ್ಲಿ ಬಿರಿದುಕೊಂಡವು.

ಅಚ್ಚರಿಯ ವಿಚಾರವೇನೆಂದರೆ, ನಮ್ಮ ತಂದೆ ಇನ್ನೂ ಗಟ್ಟಿಮುಟ್ಟಾಗಿ ಚೆನ್ನಾಗಿಯೇ ಇದ್ದಾರೆ. ವಯಸ್ಸು 85ನ್ನು ಸಮೀಪಿಸುತ್ತಿದ್ದರೂ ಅವರು ಕನ್ನಡಕವಿಲ್ಲದೆಯೇ ಓದ ಬಲ್ಲರು,ಅಕ್ಷರಗಳನ್ನು ಮುತ್ತು ಪೋಣಿಸಿದಂತೆ ಬರೆಯಬಲ್ಲರು. ಜೊತೆಗೆ ಮೈಲಿಗಟ್ಟಲೇ ನಡೆಯಬಲ್ಲರು. 

ಹಿಂದೊಮ್ಮೆ, ಸುಂಟರಗಾಳಿಗೆ ಸಿಲುಕಿಕೊಂಡು, ರಸ್ತೆಯ ಪಕ್ಕ ನೆಟ್ಟಿರುವ ಮೈಲುಗಲ್ಲಿಗೆ ಸೊಂಟ ಬಡಿದು ತೊಡೆಯ ಮೂಳೆಯನ್ನು ಮುರಿದುಕೊಂಡಿದ್ದರು. ಅವರಿವರ ಮಾತಿಗೆ ಸೋತು ಮೊದಲು ಆಯುರ್ವೇದಿಕ್ ಚಿಕಿತ್ಸೆ ಕೊಡಿಸಲಾಗಿತ್ತು. ಏನೂ ಪ್ರಯೋಜನವಾಗದೇ ಕುಳಿತಲ್ಲಿಯೇ ಕುಳಿತು ಒಂದಷ್ಟು ತಿಂಗಳು ತೀವ್ರ ತೊಂದರೆಯಿಂದ ನರಳಿದ್ದರು. ನಂತರ ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಮೂರು ತಿಂಗಳು ತಂಗಿದ್ದು, ಕೊನೆಗೆ ಮುರಿದಿದ್ದ ತೊಡೆಯ ಮೂಳೆಯ ತುದಿಯನ್ನು ತೆಗೆದು ಸ್ಟೀಲ್ ಚೆಂಡನ್ನು ಹಾಕಿದ್ದರು. ಸದ್ಯಕ್ಕೆ ಅವರಿಗೆ ಅದರ ಗಮನವೇ ಇಲ್ಲ. ಒಂದು ದಿನವೂ ನೋವು ಎಂದು ಹೇಳಲಿಲ್ಲ. ನಡೆಯಲಾಗದೇ ಮೂಲೆಯಲ್ಲವಚಿ ಕುಳಿತಿದ್ದ ದಿನಗಳನ್ನು ನೆನಪಿಸಿಕೊಂಡರೆ ನನ್ನ ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತದೆ. ಆದರೆ ಅವರಿಗೆ ಆ ನೆನಪೇ ಇಲ್ಲವೆನಿಸುತ್ತದೆ.

ಬಿಡದ ಚಟ ಮತ್ತು ವೈದ್ಯರು ಹೇಳುವ ನಿಯಮಿತ ಆಹಾರ ಸೇವನೆಯನ್ನು ಕಡೆಗಣಿಸುವುದರಿಂದಲೋ ಏನೋ ಆಗಾಗ ಅವರು ಹುಷಾರು ತಪ್ಪುತ್ತಾರೆ. ಗಂಟಲುರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಡಾಕ್ಟರ್ ಮತ್ತು ಸಿಬ್ಬಂದಿ ವರ್ಗದವರು ಸುಮ್ಮನೆ ನಗುತ್ತಾರೆ. ಪ್ರತಿ ಬಾರಿಯೂ ‘ಈ ಬಾರಿ ಸಂದೇಹವಿದೆ, ಪರಿಸ್ಥಿತಿ ಮಿತಿ ಮೀರಿದೆ’ ಎಂದು ಹೇಳಿರುತ್ತಾರೆ. ಮತ್ತೆ ಹೋದಾಗ ‘ಓಹ್, ನಿಮ್ಮ ತಂದೆ ಈ ಬಾರಿಯೂ ಬದುಕಿಬಿಟ್ಟರೆ’ ಎಂದು ಹುಬ್ಬೇರಿಸುತ್ತಾರೆ. ಮಾತ್ರೆ, ಇಂಜಕ್ಷನ್ ಶಾಸ್ತ್ರವಾದ ಮೇಲೆ "ನಿಮ್ಮ ಕೇಸೊಂದು ನನಗೆ ಅರ್ಥವಾಗುತ್ತಿಲ್ಲ ಇವರೇ.." ಎಂದು ಹೇಳುವುದನ್ನು ಡಾಕ್ಟರ್ ಮರೆಯುವುದಿಲ್ಲ…!

Comments

Submitted by lpitnal@gmail.com Sun, 11/25/2012 - 11:12

ಆತ್ಮೀಯ ಮೋಹನ ರವರೇ, ಅಪ್ಪನ ಬಗ್ಗೆ ತುಂಬ ಚನ್ನಾಗಿ ಬರೆದಿದ್ದೀರಿ. ಹಣ್ಣು ಜೀವಗಳೇ ಹಾಗೆ, ಜೀವನವನ್ನು ಬಂದಂತೆ, ಯಾವುದೇ 'ಇಸಂ ಗೊಳಪಡದೇ, ಗೊಣಗದೇ, ಇದು ಹೀಗೇ ಎಂಬಂತೆ, ತಕರಾರಿಲ್ಲದೇ ಇಲ್ಲದೇ ಸಹಿಸಿಕೊಂಡದ್ದನ್ನು ನೋಡಿದ್ದೇನೆ. ಆ ಪೀಳಿಗೆಗೆ ಹಕ್ಕುಗಳಿಗಿಂತ ಕರ್ತವ್ಯವೇ ಮುಖ್ಯ. ಅಪ್ಪ ಅವರ ಒಡನಾಟಗಳು ಅದೆಷ್ಟು ಮೇರು ವ್ಯಕ್ತಿಗಳೊಂದಿಗೆ ಇದ್ದುವು ಎಂಬುದನ್ನು ತಿಳಿದರೆ, ಅವರ ವ್ಯಕ್ತಿತ್ವ ತಾನೇ ತಾನಾಗಿ ಅರ್ಥವಾಗುತ್ತದೆ, ಬಹು ಆಪ್ಯಾಯತೆಯ ಲೇಖನ. ಲೇಖನದಲ್ಲಿ, ' ಹಸಿದಿದ್ದ ಮಗುವೊಂದು ಹಾಲಿಗೋಸ್ಕರ ತಾಯಿಯ ಎದೆಯನ್ನು ಆತುರಾತುರವಾಗಿ ಕಚ್ಚಿಕೊಳ್ಳುವಂತೆ ಕೈಯೂರಿ ಎದ್ದು ಕುಳಿತುಕೊಂಡರು' ಹಾಗೂ '.ಹಸಿವಿನ ಕೋಳಿಯೊಂದು ನೆಲ ಬೆದಕಿದಂತೆ ಪುಸ್ತಕಗಳಿಗೆ ಹುಡುಕಾಡುತ್ತಿರುತ್ತಾರೆ.' ಸಾಲುಗಳು ಸೆರೆಹಿಡಿದವು, ತುಂಬ ಅಪ್ಯಾಯತೆಯ ಲೇಖನ. ಧನ್ಯವಾದಗಳು.