ಮುಹೂರ್ತ

ಮುಹೂರ್ತ

‘ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ
ಬೆಳಕಾಗಲಿ ತಂಪಾಗಲಿ ನಿನ್ನೊಲುಮೆ ಅರಮನೆ'

ಈ ಹಾಡು ಕೇಳುತ್ತಿದ್ದಂತೆ ಆತನಿಗೆ ಮನಸ್ಸಿನಲ್ಲಿ ಒಂದು ರೀತಿ ನೋವು ಮತ್ತು ಖುಷಿಯಾಯಿತು. 
ಮಧುರ ಯಾತನೆ ಎಂಬಂತೆ. 

ಆತ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ, ಆಕೆ ಇನ್ನೂ ಓದುತ್ತಿದ್ದಳು. 
ಇಬ್ಬರೂ ಪ್ರೇಮಿಸಿದರು, ಈತನ ಗುಣ ಪ್ರತಿಭೆ ಆಕೆಯನ್ನು ಆಕರ್ಷಿಸಿತು. 
ಆಕೆಯ ಒಳ್ಳೆಯತನ ಸೌಂದರ್ಯಕ್ಕೆ ಈತ ಸೋತ. ಪ್ರಪಂಚವನ್ನೇ ಗೆಲ್ಲಬಲ್ಲಂತ ಪ್ರತಿಭಾವಂತ. 
ಪ್ರಾರಂಭದಲ್ಲಿ ಒಬ್ಬರಿಗೊಬ್ಬರು ಹೂವು ಮಕರಂದದಂತೆ ಅನ್ಯೋನ್ಯವಾಗಿದ್ದರು. 
ಮುಂದುವರೆದಂತೆ ಒತ್ತಡ ಹೆಚ್ಚಾಯಿತು. ಪ್ರೀತಿ ಭಾರವಾಯಿತು. 
ಒಳ್ಳೆಯ ಉದ್ಯೋಗದಲ್ಲಿದ್ದ ಆತನಿಗೆ ಸಂಬಂಧಿಕರಿಂದ ಮದುವೆಯಾಗಲು ಒತ್ತಡ ಹೆಚ್ಚಾಯಿತು. 
ಒತ್ತಡಕ್ಕೆ ಸಿಲುಕಿಕೊಂಡ ಆತ ದಿಕ್ಕು ತೋಚದಾದ. 
ಎಲ್ಲಾ ವಿಚಾರವನ್ನು ಮನೆಗೆ ಮುಟ್ಟಿಸಿ ಒಪ್ಪಿಗೆ ಪಡೆದುಕೊಳ್ಳಲು ವಿಫಲಳಾದ ಆಕೆಯೂ ಗೊಂದಲಕ್ಕೆ ಬಿದ್ದಳು. 
ಇಬ್ಬರ ನಡುವೆ ಪ್ರೀತಿಯೆಂಬುದು ಪವಿತ್ರವಾಗಿದ್ದರೂ ಈ ಎಲ್ಲಾ ಗೊಂದಲದಿಂದ ಆಕೆಗೆ ತನ್ನ ಓದು ಸರಾಗಗೊಳಿಸಿಕೊಳ್ಳುವುದು ಕಷ್ಟವಾಯಿತು. 
ಆತ ಗೊಂದಲಕ್ಕೊಳಗಾದವನೇ ತನ್ನ ಕೆಲಸ ಬಿಟ್ಟುಬಿಟ್ಟ. 
ಇದ್ದ ಅಲ್ಪ ಸ್ವಲ್ಪ ದುಡ್ಡನ್ನೂ ಕಳೆದುಕೊಂಡ. ತನ್ನ ಪ್ರತಿಭೆ ಕುಂಟಿತಗೊಂಡಿತೇ ಹೊರತು, ಬೆಳೆಸಿಕೊಳ್ಳಲಾಗಲಿಲ್ಲ. 
ಕಣ್ಣಮುಂದೆಯೇ ಎಲ್ಲವೂ ಕೈಜಾರಿ ಹೋಯಿತು. 

ಆಕೆಯೂ ಕಷ್ಟಕ್ಕೆ ಬಿದ್ದಳು, ಪ್ರತಿಯೊಂದಕ್ಕೂ ಆತನನ್ನೇ ನೆಚ್ಚಿಕೊಳ್ಳುತ್ತಿದ್ದವಳಿಗೆ ಈಗ ಆತ ತನ್ನಿಂದ ದೂರವಾಗುತ್ತಿದ್ದಾನೆ ಎಂದುಕೊಂಡಳು. 
ಮತ್ತೂ ಗೊಂದಲಕ್ಕೆ ಬಿದ್ದಳು. ಮನೆಯವರ ಕಣ್ಗಾವಲು ಹೆಚ್ಚಾಯಿತು. 
ಒಂದು ದಿನ ಇದೇ ವಿಚಾರವಾಗಿ ಇಬ್ಬರಿಗೂ ಮಾತಿಗೆ ಮಾತು ನಡೆಯಿತು.
‘ನಾನು ನಿನ್ನ ಸಹವಾಸದಿಂದ ಸಂಪೂರ್ಣವಾಗಿ ಹಾಳಾದೆ, ನಮ್ಮ ಕುಟುಂಬ ನನ್ನನ್ನೇ ನಂಬಿ ಕೂತಿದೆ’ ಎಂದ ಆತ.
‘ನೀನೊಬ್ಬ ನನ್ನ ಜೀವನದಲ್ಲಿ ಬರದಿದ್ದರೆ ನಾನು ಎಷ್ಟು ಸುಖವಾಗಿರುತ್ತಿದ್ದೆ, ಓದಲೂ ಆಗದೆ, ಬದುಕಲೂ ಆಗದೆ ಸಾಯುತ್ತಿದ್ದೇನೆ, ಒಬ್ಬಳೇ ಮಗಳಾದ ನನ್ನನ್ನೂ ನನ್ನ ತಂದೆ ತಾಯಿ ಕಾದು ಕುಳಿತಿದ್ದಾರೆ’ ಎಂದಳಾಕೆ.
‘ಇಷ್ಟೆಲ್ಲಾ ಅಪವಾದ ಕೇಳಿಕೊಂಡು ನಿನ್ನೊಡನೆ ನಾನಿರಲಾರೆ, ನಿಮ್ಮ ತಂದೆ ತಾಯಿ ನನಗಿಂತಲೂ ಒಳ್ಳೆಯ ಹುಡುಗನನ್ನು ನಿನಗೆ ಹುಡುಕಬಲ್ಲರು, ಅವನನ್ನೇ ಮದುವೆಯಾಗಿ ಸುಖವಾಗಿರು' ಎಂದು ಆತ ರೇಗಿಕೊಂಡ. 
‘ನಿನಗೇನು ಕಡಿಮೆ ಹೇಳು, ನಿನ್ನ ಸಂಬಂಧಿಕರೆಲ್ಲಾ ನಿನಗೆ ಹೆಣ್ಣು ನೀಡಿ ಪಾದ ತೊಳೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ, ನನಗಿಂತ ಒಳ್ಳೆಯ ಹುಡುಗಿ ಸಿಗಬಲ್ಲಳು, ಮದುವೆಯಾಗಿ ಸುಖದಿಂದಿರು’ ಎಂದವಳೇ ಅಲ್ಲಿಂದ ಹೊರಟುಬಿಟ್ಟಳು. 
ಇಬ್ಬರೂ ತಮ್ಮ ತಮ್ಮ ಮೊಬೈಲ್ ಸಂಖ್ಯೆ ಬದಲಿಸಿಕೊಂಡರು. 
ಆತನಿಗೆ ಮದುವೆಯಾಯಿತು ಎಂಬ ಸುದ್ದಿಯನ್ನು ಆತನ ಗೆಳೆಯನಿಂದ ಕೇಳಲ್ಪಟ್ಟಳು. ಆಕೆಗೂ ಮದುವೆಯಾಯಿತು ಎಂಬ ಸುದ್ದಿಯನ್ನು ಆಕೆಯ ಗೆಳತಿ ಆತನಿಗಾಗಿ ಹೊತ್ತು ತಂದಿದ್ದಳು. 

ಆತ ಛಲದಿಂದ ಬದುಕಿದ, ವಿಶ್ವಮಟ್ಟದ ಹೆಸರು ಮಾಡಿದ, ತನ್ನಭಿಲಾಶೆ ಈಡೇರಿಸಿಕೊಂಡ. 
ಆಕೆಯೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡವಳೇ ತಂದೆ ತಾಯಿಯನ್ನು ಅಕ್ಕರೆಯಿಂದ ಸಾಕಿಕೊಂಡಳು. 
ಹೀಗೆ, ಒಮ್ಮೆ ಆತ ಆಕೆಯ ಹೊಸ ನಂಬರ್ ಪಡೆದುಕೊಂಡವನೇ ಫೋನಾಯಿಸಿದ. 
ಆಕೆ ತುಂಬಾ ಖುಷಿಯಿಂದಲೇ ಮಾತನಾಡಿದಳು. 
ಎಂಟು ಮತ್ತು ಒಂಬತ್ತು ವರ್ಷದ ಮಕ್ಕಳನ್ನು ಪರಿಚಯಿಸಿ ಮಾತನಾಡಿಸಿ, ತನ್ನ ಕಂದಮ್ಮಗಳು ಎಂದಳು. 
ನನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿ ಬರಬೇಕಾಗಿದ್ದ ಮಕ್ಕಳ ಮಾತು ಕೇಳಿ ಆತ ಮರುಗಿದ, ಆತನೂ ಒಂದೆರಡು ಮಕ್ಕಳನ್ನು ಆಕೆಗೆ ಮಾತನಾಡಿಸಿ ನಿನ್ನ ಹೊಟ್ಟೆಯಲ್ಲಿ ಹುಟ್ಟಬೇಕಾಗಿತ್ತು ಬದಲಾಗಿ ಇವಳ ಹೊಟ್ಟೆಯಲ್ಲಿ ಹುಟ್ಟಿವೆ ಎಂದ. 
ತಾನೇ ಹೆರಬೇಕಾಗಿದ್ದ ಮಕ್ಕಳೊಡನೆ ಮಾತನಾಡಿದ ಆಕೆ ತನಗರಿಯದಂತೆ ಕಣ್ಣೀರು ಸುರಿಸಿದಳು. 

‘ನೀನು ಅಂದುಕೊಂಡಂತೆ ಸಾಧಿಸಿ ವಿಶ್ವಮಟ್ಟಕ್ಕೆ ಬೆಳೆದದ್ದು ನನಗೆ ಖುಷಿಯಾಯಿತು, ನನ್ನೊಡನೆ ಕುಳಿತಿದ್ದರೆ ಬರಿ ಕಷ್ಟ ಗೊಂದಲದಲ್ಲಿಯೇ ಸಾಯಬೇಕಾಗಿರುತ್ತಿತ್ತು’ ಎಂದಳು ಆಕೆ. 
‘ಇರಲಿ ಬಿಡು, ನೀನೂ ಅಷ್ಟೆ, ಓದಿ ಬೆಳೆದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಹೆತ್ತವರನ್ನು ತಣ್ಣಗೆ ಇಟ್ಟಿದ್ದೀಯ, ನನ್ನ ಜೊತೆ ಒಡನಾಟ ಮುಂದುವರೆಸಿದ್ದರೆ ಇವೆಲ್ಲಾ ಸಾಧ್ಯವಾಗುತ್ತಿರಲಿಲ್ಲ’ ಎಂದ ಆತ.
‘ಒಮ್ಮೆ ನಿನ್ನನ್ನು ನೋಡಬೇಕಲ್ಲ’ ಎಂದಳಾಕೆ. 
‘ನಾನೂ ಕೂಡ ನಿನ್ನನ್ನು ನೋಡಬೇಕು’ ಎಂದನಾತ.
‘ನಿನ್ನ ಹೆಂಡತಿ ಮಕ್ಕಳೊಂದಿಗೆ ಬಾ’ ಎಂದಳು.
‘ನಿನ್ನ ಗಂಡ ಮಕ್ಕಳನ್ನು ಕರೆದುಕೊಂಡು ಬಂದರೆ ಮಾತ್ರ’ ಎಂದನಾತ. 

ನಿಗದಿ ಪಡಿಸಿಕೊಂಡಿದ್ದ ಸ್ಥಳಕ್ಕೆ ಬಂದರು. ಆಕೆಯನ್ನು ನೋಡಿದ್ದೇ ಆತ ಗಾಬರಿಯಾದ. 
ಕುತ್ತಿಗೆಯಲ್ಲಿ ತಾಳಿ, ಕಾಲಿನ ಬೆರಳಿನಲ್ಲಿ ಉಂಗುರವಿರಲಿಲ್ಲ. 
ಒಬ್ಬಳೇ ಬಂದಿದ್ದಳು. 
‘ನಿನ್ನ ಗಂಡ ಮಕ್ಕಳೆಲ್ಲಿ?’ ಎಂದು ಕೇಳಿದನಾತ. 
‘ನಾನು ಮದುವೆ ಮಾಡಿಕೊಂಡಿಲ್ಲ' ಎಂದಳಾಕೆ
'ನೀನೇಕೆ ಒಂಟಿಯಾಗಿ ಬಂದಿರುವುದು' ಗಾಬರಿಯಿಂದ ಕೇಳಿದಳಾಕೆ. 
‘ನಾನೂ ಮದುವೆಯಾಗಿಲ್ಲ’ ಎಂದನಾತ. 
ಆಕೆಯ ಕಣ್ಣಿನಲ್ಲಿ ನೀರು ಜಿನುಗಿತು. ಆತನನ್ನು ಗಟ್ಟಿಯಾಗಿ ತಬ್ಬಿಕೊಂಡಳು. 
ಕೂಡಲೇ ಆತ ಅಮ್ಮನಿಗೆ ಫೋನಾಯಿಸಿ ‘ಅಮ್ಮ, ಇನ್ನುಮುಂದೆ ಕೊರಗಬೇಡ, ಮದುವೆಯಾಗುತ್ತಿದ್ದೇನೆ’ ಎಂದ.

ಇಬ್ಬರೂ ಸೋತು ಗೆದ್ದು, ಈಗ ಗೆದ್ದು ಸೋತರು..!

Comments

Submitted by ಮಮತಾ ಕಾಪು Fri, 11/30/2012 - 11:59

ಬದುಕಿನ ಉದ್ದೇಶ, ಗುರಿ ಇವೆರಡರ ಜತೆಗೆ ಪ್ರೀತಿಯಿದ್ದರೆ, ಪ್ರೇಮಿಗಳೆಲ್ಲರೂ ಗೆಲ್ಲಬಹುದು. ಪ್ರೇಮದ ಗುಂಗಿನಲ್ಲಿ ವಾಸ್ತವವನ್ನು ಮರೆತಾಗ ,ಬದುಕು, ಪ್ರೀತಿ ಎರಡರಲ್ಲೂ ಸೋಲನ್ನನುಭವಿಸಬೇಕಾಗುವುದು. ಬರಹ ಚೆನ್ನಾಗಿದೆ ಮೋಹನ್ ಅವರೆ ಅಭಿನಂದನೆಗಳು.