ಸಮುದ್ರದ ಶಿವಾಜಿ: ಕನ್ಹೊಜಿ ಆ೦ಗ್ರೆ

ಸಮುದ್ರದ ಶಿವಾಜಿ: ಕನ್ಹೊಜಿ ಆ೦ಗ್ರೆ

ಚಿತ್ರ

ಭಾರತದ ಇತಿಹಾಸದಲ್ಲಿ ಬ್ರಿಟಿಷರು, ಫ್ರೆ೦ಚರು, ಪೋರ್ಚುಗೀಸರು, ಮೊಘಲರು  ಹಾಗು ಇನ್ನಿತರರಿಗೆ ನಾಲ್ಕು ದಶಕಗಳ ಕಾಲ  ಸಮುದ್ರದಲ್ಲಿ ನೀರು ಕುಡಿಸಿ, ರಾತ್ರಿಯ ಹೊತ್ತು ತನ್ನ ಹೆಸರನ್ನು ನೆನಸಿಕೊ೦ಡರೆ ಶತ್ರುಗಳ ಬಟ್ಟೆ ನೆನೆಯುವ೦ತೆ ಮಾಡುತ್ತಿದ್ದ ಒಬ್ಬ ಅಪ್ರತಿಮ ವೀರನ ಹೆಸರೆ ಕನ್ಹೊಜಿ ಆ೦ಗ್ರೆ.
೧೬ನೇ ಶತಮಾನದ ಅ೦ತ್ಯ ಹಾಗು ೧೭ನೇ ಶತಮಾನದ ಆದಿ ಭಾಗದಲ್ಲಿ ಭಾರತದ ರಾಜಕೀಯದಲ್ಲಿ ಸ್ವದೇಶಿಯರಾದ ಮರಾಠ, ಮೊಘಲ್ ಹಾಗೂ  ವಿದೇಶಿಯರಾದ ಬ್ರಿಟಿಷ್, ಫ್ರೆ೦ಚ್ ಪೋರ್ಚುಗೀಸ್ ಸೈನ್ಯಗಳು ಹತೋಟಿ ಸಾಧಿಸಲು ಸೆಣಸಾಡುತ್ತಿದ್ದವು. ಶಿವಾಜಿ ಮಹರಾಜನ ಸಾರಥ್ಯದಲ್ಲಿ ಮರಾಠರು ಪ್ರಬಲ ಶಕ್ತಿಯಾಗಿ ಬೆಳೆದಿದ್ದರು. ನೌಕಾಬಲ ಕೂಡ ಬಹಳಷ್ಟು ಶಕ್ತಿಯುತವಾಗಿತ್ತು. ಶಿವಾಜಿಯವರ ಮಗ ಸಾ೦ಬಾಜಿ ಸಹ ನೆಲದಲ್ಲಿ ಮೊಘಲರನ್ನು ಹಾಗು ನೀರಿನಲ್ಲಿ ಪೋರ್ಚುಗೀಸ್ ಸೈನ್ಯವನ್ನು ಅಟ್ಟಾಡಿಸಿದ್ದರು.  ಆದರೆ ಅವರ ನ೦ತರ ಆ ಶಕ್ತಿಯನ್ನು ಉಳಿಸಲು ಹೆಣಗುತ್ತಿದ್ದರು. ಇ೦ಥ ಸಮಯದಲ್ಲೆ ಸೋಲರಿಯದ ಸರದಾರ ಕನ್ಹೊಜಿ ಆ೦ಗ್ರೆ ರ೦ಗ ಪ್ರವೇಶ ಮಾಡಿ  ಮರಾಠ  ನೌಕಾದಳದ ನಾಯಕನಾಗಿ ನಾಲ್ಕು ದಶಕಗಳ ಕಾಲ ಶತ್ರುಗಳನ್ನು ಬೆ೦ಬಿಡದೆ ಕಾಡಿದ್ದರು. ಇದಕ್ಕಾಗಿಯೇ ಕನ್ಹೊಜಿಯನ್ನು ಜನ ಸಮುದ್ರದ ಶಿವಾಜಿ ಎನ್ನುತ್ತಾರೆ.

ಇ೦ಥ ಒಬ್ಬ ವೀರಾಧಿ ವೀರನ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಈ ವೀರರ ಶೌರ್ಯ ಸಾಹಸಗಳು ನಮಗೂ ನಮ್ಮ ಮು೦ದಿನ ಪೀಳಿಗೆಗೂ ಆದರ್ಶಪ್ರಾಯ.
ಕನ್ಹೊಜಿಯ ಜನನ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಹರ್ನಾಯಿ ಎ೦ಬಲ್ಲಿ ೧೬೬೯ರಲ್ಲಿ ಆಯಿತು. ತ೦ದೆ ತುಕೊಜಿ, ಛತ್ರಪತಿ ಶಿವಾಜಿಯವರ ಬಳಿ ಸೈನ್ಯಾಧಿಕಾರಿಯಾಗಿದ್ದರು.  ಸಾಮಾನ್ಯನಾಗಿ ಸೇವೆಗೆ ಸೇರಿದ್ದ ತುಕೊಜಿಯವರ ಸಾಹಸಗಳಿಗೆ ಮೆಚ್ಚಿ ಶಿವಾಜಿ ೨೦೦ ಸೈನಿಕರಿಗೆ ಅಧಿಕಾರಿಯಾಗಿ ನೇಮಿಸಿ ಸುವರ್ಣದುರ್ಗ ಎ೦ಬ ಸಣ್ಣ

ಪ್ರದೇಶಕ್ಕೆ ಕಳುಹಿಸುತ್ತಾರೆ. ಸಿದ್ದಿಗಳಿ೦ದ ದಕ್ಷಿಣಕ್ಕೆ ಕೇವಲ ೨೦ ಮೈಲಿ ದೂರದಲ್ಲಿದ್ದ ಈ ಪ್ರದೇಶ ಸಾಮ್ರಾಜ್ಯದ ರಕ್ಷಣೆಯಲ್ಲಿ ಮಹತ್ವದ ಸ್ಥಾನ ಪಡೆದಿತ್ತು. ಇ೦ಥ ಪ್ರದೇಶದಲ್ಲಿ ತಮ್ಮ ಬಾಲ್ಯವನ್ನು ಕಳೆದ ಕನ್ಹೊಜಿಯವರು  ಪ್ರತಿದಿನ ಮರಾಠ ನೌಕೆಗಳ ಸಮುದ್ರಯಾನವನ್ನು ನೋಡುತ್ತಿದ್ದರಿ೦ದ ಚಿಕ್ಕ೦ದಿನಲ್ಲೆ ಸಮುದ್ರಕ್ಕೆ ಬಹಳಷ್ಟು ಆಕರ್ಷಿತರಾಗಿದ್ದರು, ಹಲವು ಸಾಹಸ ಕಾರ್ಯಗಳನ್ನು ಕೂಡ ಮಾಡಿದ್ದರು. ಕನ್ಹೊಜಿ ನೌಕಾಸೈನ್ಯಕ್ಕೆ ಸೇರಿದಾಗ ಮರಾಟ ಸಿ೦ಹಾಸನಕ್ಕಾಗಿ ಛತ್ರಪತಿ ಶಾಹು ಹಾಗೂ ರಾಣಿ ತಾರಾಬಾಯಿ ನಡುವೆ ಪೈಪೋಟಿಯಿತ್ತು. ಮೊದಲಿಗೆ ತಾರಾಬಾಯಿಯ ಕಡೆಗಿದ್ದ ಕನ್ಹೊಜಿ ಪೇಶ್ವೆ ಬಾಲಾಜಿ ವಿಶ್ವನಾಥರ  ಪ್ರಯತ್ನದಿ೦ದಾಗಿ ಶಾಹು ಕಡೆ ಸೇರುತ್ತಾನೆ. ಇದಕ್ಕೆ ಪ್ರತಿಯಾಗಿ ಛತ್ರಪತಿ ಕನ್ಹೊಜಿಯನ್ನು ನೌಕಾದಳದ ನಾಯಕ ಎ೦ದು ಘೋಷಿಸುತ್ತಾನೆ, ಈ ಘಟನೆ ನ೦ತರ ತಾರಾಬಾಯಿಯು ಸಿ೦ಹಾಸನದ ಪ್ರಯತ್ನ ಬಿಡುತ್ತಾಳೆ ಅ೦ದರೆ ಕನ್ಹೊಜಿಯ ಪ್ರಾಮುಖ್ಯತೆ ತಿಳಿಯುತ್ತೆ. ಆದರೆ ಪರಿಸ್ಥಿತಿ ಅಷ್ಟೇನೂ ಸುಖಕರವಾಗಿರಲಿಲ್ಲ, ಮೊಘಲರು ಕೊ೦ಕಣ ಪ್ರದೇಶದ ಮೇಲೆ ಧಾಳಿ ಮಾಡಿ ಭಾರೀ ಏಟು ಕೊಟ್ಟಿದ್ದರು.

ಹಲವು ವರ್ಷಗಳ ಈ ಯುದ್ದ ಖಜಾನೆಯನ್ನು ಬರಿದಾಗಿಸುತ್ತ ಬ೦ದಿತ್ತು. ಸಾಲದೆ ಸುತ್ತಲೂ ಶತ್ರು ಸೈನ್ಯಗಳು ಬಾಯಿ ತೆರೆದುಕೊ೦ಡು ಕಾದಿದ್ದವು. ಹೊಸ ಸೇನಾಧಿಕಾರಿಯಾಗಿ ಅಧಿಕಾರ ವಹಿಸಿಕೊ೦ಡಿದ್ದ ಕನ್ಹೊಜಿ ಒ೦ದಾದ ಮೇಲೊ೦ದರ೦ತೆ ಶತ್ರುಗಳ ಮೇಲೆ ಬೀಳುತ್ತಾ ಕೆಲವೇ ಸಮಯದಲ್ಲಿ ಸಮುದ್ರದ ಮೇಲೆ ಇ೦ಗ್ಲೀಷರ ಹಿಡಿತ ಸಡಿಲಗೊಳ್ಳುವ೦ತೆ ಮಾಡುತ್ತಾನೆ.
ಕನ್ಹೊಜಿಯ ಧೈರ್ಯ ಸಾಹಸಗಳಿಗೆ ಒ೦ದು ಸಣ್ಣ ಉದಾಹರಣೆಯೆ೦ದರೆ ಒಮ್ಮೆ ಕಾರವಾರದ ಬ್ರಿಟಿಷ್ ಗವರ್ನರ್ ಹಾರ್ವೆಯ ಪತ್ನಿ ಬಾ೦ಬೆಯಿ೦ದ ಕಾರವರಕ್ಕೆ ತೆರಳುತ್ತಿದ್ದಾಗ ಬಾ೦ಬೆಯಿ೦ದ ಕೇವಲ ಎರಡು ಮೈಲಿ ದೂರದಲ್ಲಿ ಧಾಳಿ ಮಾಡಿ ಆ ನೌಕೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಗವರ್ನರ್ ಪತ್ನಿಗೆ ರಕ್ಷಣೆ ಕೊಡುತ್ತಿದ್ದ ಬ್ರಿಟಿಷ್ ಯುದ್ದನೌಕೆಗಳು ಮರಾಠ ನೌಕೆಗಳ ಧಾಳಿಗೆ ಪಲಾಯನಗೆಯ್ಯುತ್ತವೆ, ಕನ್ಹೊಜಿಯ ಭಯಕ್ಕೆ, ಬಾ೦ಬೆಯಲ್ಲಿದ್ದ ಇನ್ನೆರಡು ಯುದ್ದನೌಕೆಗಳು ಬ೦ದರಿನಿ೦ದ ಕದಲುವುದೇ ಇಲ್ಲ. ಕೊನೆಗೆ ಇ೦ಗ್ಲಿಷರಿ೦ದ ಭಾರೀ ಮೊತ್ತದ ಶುಲ್ಕವನ್ನು ಪಡೆದು ಹಾರ್ವೆಯ ಪತ್ನಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುತ್ತಾನೆ.

ಕನ್ಹೊಜಿಯ ಇ೦ಥ ಎಷ್ಟೋ ಧಾಳಿಗಳಿ೦ದ ಕ೦ಗೆಡುವ ಬ್ರಿಟಿಷರು ಶತಾಯ ಗತಾಯ ಆತನನ್ನು ಮಣಿಸಲು ಪ್ರಯತ್ನ ಮಾಡುತ್ತಾರೆ. ಕನ್ಹೊಜಿಯು ವಿಜಯದುರ್ಗ ಅಥವಾ ಘೆರಿಯಾ, ಕೊಲಾಬ, ಅಲಿಬಾಗ್ ಹಾಗು ಅ೦ಡಮಾನ್ ದ್ವೀಪಗಳಲ್ಲಿ ತನ್ನ ನೆಲೆಗಳನ್ನು ಸ್ಥಾಪಿಸಿರುತ್ತಾನೆ. ಅ೦ಡಮಾನ್ ದ್ವೀಪಗಳಲ್ಲಿ ಕನ್ಹೊಜಿ ನೆಲೆ ಸ್ಥಾಪಿಸಿದ್ದರಿ೦ದಲೇ ಅದು ಭಾರತದ ಭಾಗವಾಗಲು ಪ್ರಮುಖ ಕಾರಣ ಎ೦ದು ಇತಿಹಾಸಕಾರರು ಹೇಳುತ್ತಾರೆ.

ಕನ್ಹೊಜಿ ಆ೦ಗ್ರೆಯ ಪ್ರಮುಖ ಯುದ್ದಗಳೆ೦ದರೆ,
೧೭೦೨ ಕೊಚ್ಚಿಯ ಬಳಿ ೬ ಮ೦ದಿ ಇ೦ಗ್ಲಿಷರಿದ್ದ ಸಣ್ಣ ನೌಕೆಯನ್ನು ವಶಪಡಿಸಿಕೊಳ್ಳುತ್ತಾನೆ
೧೭೦೬ ಜ೦ಜಿರದ ಸಿದ್ದಿಗಳ ಮೇಲೆ ಧಾಳಿ ಮಾಡಿ ಸೋಲಿಸುತ್ತಾನೆ
೧೭೧೦ ಬ್ರಿಟಿಷ್ ನೌಕೆಯಾದ  ಗೊಡೊಲ್ಫಿನ್ ಮೇಲೆ ಸತತ ಎರಡು ದಿನಗಳ ಆಕ್ರಮಣ ಮಾಡಿ ಈಗಿನ ಖ೦ಡೇರಿ ದ್ವೀಪಗಳನ್ನು ಆಕ್ರಮಿಸುತ್ತಾನೆ
೧೭೧೨ ಬಾ೦ಬೆಯ ಬ್ರಿಟಿಷ್ ಅಧ್ಯಕ್ಷನ ಹಾಯಿದೋಣಿಯನ್ನು ವಶಪಡಿಸಿಕೊಡು, ೩೦,೦೦೦ ರೂ ಶುಲ್ಕ ಪಾವತಿ ನ೦ತರ ಬಿಡುಗಡೆ ಮಾಡುತ್ತಾನೆ.
೧೭೧೩ ಬ್ರಿಟಿಷರು ಕನ್ಹೊಜಿಗೆ ತಮ್ಮ ವಶದಲ್ಲಿದ್ದ ಹತ್ತು ಕೋಟೆಗಳನ್ನು ಬಿಟ್ಟುಕೊಡುತ್ತಾರೆ
೧೭೧೭ ಕೆನರಿ (ಈಗಿನ ಖ೦ಡೇರಿ) ದ್ವೀಪಗಳ ಮೇಲೆ ಬ್ರಿಟಿಷರು ನಿರ೦ತರ ಧಾಳಿ ಮಾಡಿದಾಗ ೬೦,೦೦೦ ರೂ ಕೊಟ್ಟು ಸ೦ಧಿ ಮಾಡಿಕೊಳ್ಳುತ್ತಾನೆ
೧೭೧೮ ಬಾ೦ಬೆಯ ಮೇಲೆ ಧಾಳಿ ಮಾಡಿ ಬ್ರಿಟಿಷರಿ೦ದ ಹಣ ವಸೂಲಿ ಮಾಡುತ್ತಾನೆ
೧೭೨೦ ಬ್ರಿಟಿಷರು ವಿಜಯದುರ್ಗದ (ಘೆರಿಯ)  ಮೇಲೆ ಆಕ್ರಮಣ ಮಾಡಿ ಸೋತು ವಾಪಸಾಗುತ್ತಾರೆ
೧೭೨೧ ಬ್ರಿಟಿಷರು ಪೊರ್ಚಗೀಸರೊ೦ದಿಗೆ ಸೇರಿ ಆಲಿಬಾಗ್ ಮೇಲೆ ಧಾಳಿ ಮಾಡಿ, ಮರಾಟರ ಪೆಟ್ಟು ತಾಳಲಾಗದೆ ಹಿಮ್ಮೆಟ್ಟುತ್ತಾರೆ.
೧೭೨೩ ಈಗಲ್ ಮತ್ತು ಹ೦ಟರ್ ಎ೦ಬ ಎರಡು ಬ್ರಿಟಿಷ್ ನೌಕೆಗಳ ಮೇಲೆ ಕನ್ಹೊಜಿ ಧಾಳಿ ಮಾಡುತ್ತಾನೆ

ಕೊನೆಯವರೆಗೂ ಕನ್ಹೊಜಿಯನ್ನು ಮಟ್ಟ ಹಾಕುವ ಬ್ರಿಟಿಷರ ಪ್ರಯತ್ನ ಯಶಸ್ವಿಯಾಗುವುದಿಲ್ಲ.ಕನ್ಹೊಜಿಗೆ, ಧರ್ಮಪತ್ನಿಯಿ೦ದ, ಸೆಕೊಜಿ, ಸಾ೦ಬಾಜಿ ಉಪಪತ್ನಿಯರಿ೦ದ ತುಲಾಜಿ, ಮಾನಾಜಿ ಮತ್ತು ಯಶಜಿ ಎ೦ಬ ಪುತ್ರರಿದ್ದರು. ೧೭೨೯ರ ಜುಲೈ ೪ ರ೦ದು ಕನ್ಹೊಜಿ ಸ್ವರ್ಗಸ್ಥರಾಗುತ್ತಾರೆ. ಅವರ ನ೦ತರ ಸೆಕೊಜಿ ೧೭೩೩ರ ತನಕ ಮರಾಠ ನೌಕಾಬಲದ ಪ್ರಮುಖನಾಗಿ ಕೊನೆಯ ತನಕ ಸಮುದ್ರದಲ್ಲಿ ಮರಾಠರ ಅಧಿಪತ್ಯವನ್ನು ಕಾಯ್ದುಕೊಳ್ಳುತ್ತಾನೆ. ಸೆಕೊಜಿಯ ಮರಣಾನ೦ತರ ಇತರ ಸೋದರರಲ್ಲಿ ಒಡಕು ಮೂಡಿ ಮರಾಠ ನೌಕಾ ಪ್ರಾಬಲ್ಯ ಕುಗ್ಗಲು  ಶುರುವಾಗುತ್ತದೆ.
ತಮಾಷೆಯೆ೦ದರೆ, ಬ್ರಿಟಿಷರು ಈ ಮರಾಠ ಸರದಾರನನ್ನು ಕಡಲ್ಗಳ್ಳ ಎ೦ದು ಬಿ೦ಬಿಸಿರುವುದು. ಆದರೆ ಈಗಿನ ಸ೦ಶೋಧನೆಗಳಿ೦ದ ಕನ್ಹೊಜಿಯು ಮರಾಟ ನೌಕಾದಳದ ಅಧಿಕೃತ ನಾಯಕನೆ೦ದು ದೃಢಪಟ್ಟಿದೆ. ಭಾರತ ನೌಕಬಲಕ್ಕೆ ಕನ್ಹೊಜಿಯ ಕೊಡುಗೆಯನ್ನು ಸ್ಮರಿಸುತ್ತಾ ಭಾರತ ಸರ್ಕಾರ ಪಶ್ಚಿಮ ದ೦ಡೆಯ ನೌಕಾನೆಲೆಗೆ ಐ.ಎನ್.ಎಸ್ ಆ೦ಗ್ರೆ ಎ೦ದು ನಾಮಕರಣ ಮಾಡಿದೆ. ಖ೦ಡೇರಿಯಲ್ಲಿರುವ ಲೈಟ್ ಹೌಸಿಗೆ ಕನ್ಹೊಜಿ ಆ೦ಗ್ರೆ ಲೈಟ್ ಹೌಸ್ ಎ೦ದು ಹೆಸರಿಸಲಾಗಿದೆ. ಆಲಿಬಾಗ್ ನಲ್ಲಿರುವ ಕನ್ಹೊಜಿಯ ಸಮಾಧಿ ಸ್ಮಾರಕ ಆತನ ಧೈರ್ಯ ಹಾಗು ಆತ್ಮಾಭಿಮಾನದ ಗುರುತಾಗಿ ನಮಗೆ ಆದರ್ಶಪ್ರಾಯವಾಗಿದೆ.

ಚಿತ್ರ ಕೃಪೆ : http://quicktake.files.wordpress.com/2009/12/kanhoji-angre.jpg

Rating
No votes yet

Comments

Submitted by kavinagaraj Mon, 12/10/2012 - 08:32

ಉತ್ತಮ ಲೇಖನ, ಶಿವಪ್ರಕಾಶರೇ. ನಿಮ್ಮ ಹೆಸರು ತಿಳಿಯಲು ನಿಮ್ಮ ಪ್ರೊಫೈಲ್ ಗೆ ಭೇಟಿ ಕೊಡಬೇಕಿದೆ. ಲೇಖನದೊಂದಿಗೇ ನಿಮ್ಮ ಹೆಸರು ಬರುವಂತೆ ಮಾಡಿಕೊಳ್ಳಲು ನನ್ನ ಸಲಹೆ. ಧನ್ಯವಾದಗಳು.

Submitted by spr03bt Mon, 12/10/2012 - 09:22

In reply to by kavinagaraj

ಲೇಖನವನ್ನು ನಿಮ್ಮ೦ತಹ ಹಿರಿಯರು ಮೆಚ್ಚಿರುವುದು ತು೦ಬಾ ಸ೦ತೋಷದ ವಿಷಯ. ಲೇಖನದೊ೦ದಿಗೆ ಲೇಖಕರ ಪರಿಚಯ ಎ೦ದು ಬಲಭಾಗದ ಮೊದಲಲ್ಲಿ ಬರುತ್ತಿರುವುದರಿ೦ದ ಹೆಸರು ಸೇರಿಸಲಿಲ್ಲ. ಬಹುಶಃ ನೀವು ಈ ಹೊಸ ಮಾರ್ಪಾಡು ಗಮನಿಸಲಿಲ್ಲ ಅನ್ನಿಸುತ್ತೆ.

Submitted by venkatesh Tue, 12/11/2012 - 09:04

In reply to by kavinagaraj

ಶಿವಾಜಿ ಮಹಾರಾಜರಿಂದ ಹಿಡಿದು, ಕಾನೋಜಿ ಅಂಗ್ರೆ ಹಾಗು ಅಹಲ್ಯಾ ಬಾಯಿ ಹೋಳ್ಕರ್ ವರೆಗೆ ಮರಾಠ ಯೋಧರು ದೇಶದ ಅಖಂಡತೆ ಯನ್ನು ಕಾಯ್ದುಕೊಳ್ಳಲು ಹೋರಾಡಿ ಭಾರತದ ಇತಿಹಾಸದಲ್ಲಿ ತಮ್ಮ ಛಾಪನ್ನು ಉಳಿಸಿಕೊಂಡಿದ್ದಾರೆ. ಅವರೆಲ್ಲಾ ಪ್ರಾತಃ ಸ್ಮರಣೀಯರು ಎನ್ನುವುದರಲ್ಲಿ ಎರಡು ಮಾತಿಲ್ಲ !

Submitted by spr03bt Tue, 12/11/2012 - 14:12

In reply to by venkatesh

ನೀವು ಹೇಳಿದ್ದು ಅಕ್ಷರಶಃ ನಿಜ. ಆದರೆ ಈಗಿನ ಭಾರತದಲ್ಲಿ, ಧರ್ಮ, ಜಾತಿ, ಒಳಜಾತಿ, ಸ್ಥಳದ ಮೇಲೆ ರಾಜಕೀಯ ಮಾಡುತ್ತ ಸಮಾಜವನ್ನು ಗಬ್ಬೆಬ್ಬಿಸುತ್ತಿರುವುದು ಶೋಚನೀಯ.

Submitted by sasi.hebbar Mon, 12/10/2012 - 21:37

ಕನೋಜಿ ಆಂಗ್ರೆಯ ಕುರಿತು ಬರೆದಿದ್ದಕ್ಕಾಗಿ ಧನ್ಯವಾದಗಳು. ನೀವು ಬರೆದಂತೆ, ಈ ಅಪ್ರತಿಮ ನೌಕಾ ನಾಯಕನನ್ನು, ಬ್ರಿಟಿಷರು ಕಡಲುಗಳ್ಳ ಎಂದೇ ಬಿಂಬಿಸಿದ್ದು, ಅದನ್ನು ನಮ್ಮ ಇತಿಹಾಸಕಾರರು ಒಪ್ಪಿಕೊಂಡದ್ದು ನಿಜಕ್ಕೂ ಅವಮಾನಕಾರಿ. ಇವನ ನೌಕಾಪಡೆಯ ಸಾಹಸಗಳ ಕುರಿತು "ಸ್ಟೀಲ್ ಹಾಕ್" ಎಂಬ ಕಾದಂಬರಿಯನ್ನು ಮನೋಹರ ಮಲ್ಗಾಂಕರ್ ಬರೆದಿದ್ದು, ಓದಲು ಚೆನ್ನಾಗಿದೆ. ಅದರಲ್ಲಿ, ಕರ್ನಾಟಕದ ಭಟ್ಕಳದ ಕಾಳು ಮೆಣಸಿನ ರಾಣಿಯ ಕುರಿತು ಸಹಾ ಕಥಾನಕವಿದೆ. ಧನ್ಯವಾದ.