ಮಾತು ಮುಗಿಸಿದರು ಮಾತುಗಾರ..!
ಅದು ಆಕಾಶವಾಣಿ. ಬೆಳ್ಳಗ್ಗೆ 7 ಗಂಟೆ ಸುಮಾರು. `ಒಂದು ಮಾತು, ಎ.ಎಸ್ ಮೂರ್ತಿಯವರಿಂದ. ಹೀಗೆ ಉದ್ಘೋಷಕರ ಧ್ವನಿಯಲ್ಲಿ ಕಾರ್ಯಕ್ರಮದ ಪುಟ್ಟ ವಿವರಣೆ ದೊರೆಯುತ್ತಿತ್ತು. 7 ಗಂಟೆ ಹೊಡೆದು ಒಂದಷ್ಟು ಸಕೆಂಡ್ ಕಳೆಯೊ ಹೊತ್ತಿಗೆ, ಕಂಚಿನ ಕಂಠ ಧ್ವನಿ ಕೇಳುಗರ ಮನತಟ್ಟುತ್ತಿತ್ತು. ಅಷ್ಟು ಶಕ್ತಿಯುವಾತ ಮಾತುಗಳವು. ಈಗ ಮೊನಚು ಮಾತಿನ ಆ ಧ್ವನಿ ಪಂಚಭೂತಗಳಲ್ಲಿ ನೀಲವಾಗಿದೆ...
ಹೌದು..! ಪತ್ರಕರ್ತ, ರಂಗಕರ್ಮಿ,ಬೀದಿ ನಾಟಕದ ರೂವಾರಿ, ಮಕ್ಕಳ ಮನಸ್ಸಿಗೆ ಪ್ರತಿಭೆಯ ಬಿಂಬ ಹಿಡಿದ ಬಿಂಬದ ಸ್ಥಾಪಕ ಎ.ಎಸ್. ಮೂರ್ತಿ, 18-12-12 ಬೆಳಿಗ್ಗೆ 8.30 ರ ವೇಳೆ ಕೊನೆಯುಸಿರೆಳೆದಿದ್ದಾರೆ. 84 ವರ್ಷ ತುಂಬು ಜೀವನ ಮಾಡಿದ ಎ.ಎಸ್.ಮೂರ್ತಿಗಳು ಇಡೀ ಬದುಕನ್ನ ತುಂಬಾ ಅನುಭವಿಸಿದವರು. ದೇಹದಲ್ಲಿ ಚೈತನ್ಯ ಇರೋವರೆಗೂ ಮೂರ್ತಿಗಳು ದುಡಿದಿದ್ದಾರೆ. ಪತ್ರಿಕೆಗಳಿಗೆ ಲೇಖನ ಬರೆದುಕೊಟ್ಟಿದ್ದಾರೆ. ಸಿನಿಮಾ ಮೇಲಿನ ಪ್ರೀತಿಯಿಂದ ಎದ್ದೇಳು ಮಂಜುನಾಥ್ ಚಿತ್ರದಲ್ಲೂ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೇ ಕೊನೆ ಅನಿಸುತ್ತದೆ. ಆ ಮೇಲೆ ಮೂರ್ತಿಗಳು ಡಲ್ ಆದರು.
ತಮ್ಮ ಅಭಿನಯ ತರಂಗದ ವಿದ್ಯಾರ್ಥಿಗಳನ್ನ ಜೊತೆ ಮಾಡಿಕೊಂಡು ಪ್ರೆಸ್ ಮೀಟ್ ಗೆ ಬರುತ್ತಿದ್ದರು. ಎಂದಿನಂತೆ ತಮ್ಮ ಮೊನಚಾದ ಮಾತಿನಲ್ಲಿಯೇ ಪ್ರಶ್ನಿಸುತ್ತಿದ್ದರು. ಉತ್ತಮ ನಟನೆ ಮತ್ತು ಉತ್ತಮ ಪ್ರತಿಭೆ ಇದ್ದರೆ, ಅಂತಹ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಿದ್ದರು. ಇದಾದ ಬಳಿಕ ಎಂದಿನಂತೆ ರಂಗಭೂಮಿ ಮಾತು. ಅಭಿನಯ ತರಂಗದಲ್ಲಿ ಕಲಾ ಸೇವೆಯಲ್ಲಿ ಕಳೆದು ಹೋಗುತ್ತಿದ್ದರು.
ಇದೇ ಅಭಿನಯ ತರಂಗದಿಂದಲೇ ಪ್ರಕಾಶ್ ರೈ ರಂತಹ ಕಲಾವಿದರು ಹೊರ ಬಂದಿದ್ದಾರೆ. ಮುಕ್ತ ಧಾರವಾಹಿಯನ್ನ ನಿರ್ದೇಶಿಸಿದ್ದ ಟಿ.ಎನ್.ಸೀತಾರಮ್ ಕೂಡ ಅಭಿನಯ ತರಂಗದ ಮೊದಲ ಬ್ಯಾಚ್ ನ ಒಬ್ಬ ವಿದ್ಯಾರ್ಥಿ. ಇತ್ತೀಚಿಗೆ ರಾತ್ರೋ ರಾತ್ರಿ ಹೀರೋ ಆದ ಧೃವ ಸರ್ಜಾ ಇದೇ ಅಭಿನಯ ತರಂಗದ ಸ್ಟುಡೆಂಟ್. ಒಲವೆ ಮಂದಾರ ಸಿನಿಮಾದ ಡೈರೆಕ್ಟರ್ ಜಯತೀರ್ಥ, ಮೂರ್ತಿಗಳ ಶಿಷ್ಯ...ಹೀಗೆ ಮೂರ್ತಿಗಳ ಗರಡಿಯಲ್ಲಿ ಬೆಳೆದ ಪ್ರತಿಭೆಗಳ ಹೆಸರು ಹೇಳ್ತಾ ಹೋದ್ರೆ ಪಟ್ಟಿ ದೊಡ್ಡದಾಗುತ್ತದೆ.
ಊರಿಗೆ ಉಪಕಾರಿ, ಮನೆಗೆ ಮಾರಿ ಅನ್ನೋ ಹಾಗೆ ಮೂರ್ತಿಗಳು ಇರಲಿಲ್ಲ. ಮೇಲೆ ಹೇಳಿದ ಪ್ರತಿಭೆಗಳನ್ನ ಬೆಳೆಸೋದರ ಜೊತೆಗೆ ತಮ್ಮ ಮನೆಯಲ್ಲಿಯೇ ಕಲಾವಿದರನ್ನ ಸೃಷ್ಟಿಸಿದರು. ಮೊಮ್ಮಗಳಾದ ಗಾಯಕಿ ಎಂ.ಡಿ.ಪಲ್ಲವಿ ಅವ್ರಿಗೆ ನಾಟಕದ ಗೀಳು ಹಚ್ಚಿದ್ದು ಮೂರ್ತಿಗಳೇ. ಜೊತೆಗೆ ಇನ್ನಿತರ ಮೊಮ್ಮಕಳನ್ನೂ ಮೂರ್ತಿಗಳು, ಪ್ರತಿಭಾನ್ವಿತರನ್ನಾಗಿಯೇ ಮಾಡಿದ್ದಾರೆ. ಈಗ ಮಾತು ಮುಗಿದೆ. ಈರಣ್ಣ ಇಹಲೋಕ ಬಿಟ್ಟು ಎದ್ದು ಹೋಗಿದ್ದಾರೆ. ತಮ್ಮ ಎದುರು ಪ್ರತಿಭೆಯನ್ನ ತೋರಿದ ಮಕ್ಕಳ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
-ರೇವನ್ ಪಿ.ಜೇವೂರ್
- Log in to post comments
Comments
ದೂರವಾದರೂ ಅವರ ಧ್ವನಿ ಇನ್ನೂ
In reply to ದೂರವಾದರೂ ಅವರ ಧ್ವನಿ ಇನ್ನೂ by ಮಮತಾ ಕಾಪು
ರೇಡಿಯೋ ಆಕಾಶವಾಣಿಯಲ್ಲಿ ಮನೆಮಾತು
ರೇವನ್ ಪಿ. ಜೇವೂರ್ ಅವರಿಗೆ
In reply to ರೇವನ್ ಪಿ. ಜೇವೂರ್ ಅವರಿಗೆ by swara kamath
ಇವರ ಹಲವು ಜನ ಸಾಮನ್ಯರಿಗೆ
ಒಂದು ಅಪರೂಪದ ವ್ಯಕ್ತಿತ್ವದ