ತ೦ಜಾವೂರಿನಲ್ಲಿ ಬಾಲ್ಯ

ತ೦ಜಾವೂರಿನಲ್ಲಿ ಬಾಲ್ಯ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. 

ಶಿವಶಂಕರ್ ರಾಯರ ಬಗ್ಗೆ ಅವರ ಆಪ್ತ ಮಿತ್ರರಾದ . ವಿಠಲ ರಾವ್ ಅವರು ಬರೆದಿರುವ ಆತ್ಮೀಯ ಲೇಖನವನ್ನು ಪಡೆದು, ಸಂಪದಿಗರಿಗಾಗಿ ಈ ಮೊದಲು ಪ್ರಕಟಿಸಿದ್ದೇವೆ. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.

ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರ೦ತ ಪೆರಾಜೆ
ಪ್ರಕಾಶಕರು: ಮಿತ್ರಮಾಧ್ಯಮ

ತಮಿಳುನಾಡಿನ ತ೦ಜಾವೂರಿನಲ್ಲಿ ಕಳೆದ ನನ್ನ ಬಾಲ್ಯದ ದಿನಗಳ ನೆನಪು ಗಾಢವಾಗಿದೆ. ನಾಲ್ಕನೇ ವಯಸ್ಸಿನಿ೦ದ ಹನ್ನೊ೦ದನೇ ವಯಸ್ಸಿನವರೆಗೆ ನಾನು ಬೆಳೆದದ್ದು ತ೦ಜಾವೂರಿನಲ್ಲಿ. (೧೯೨೬ರಿ೦ದ ೧೯೩೩) ನನ್ನ ಪ್ರಾಥಮಿಕ ವಿದ್ಯಾಭ್ಯಾಸವು ಅಲ್ಲೇ ಆಯಿತು. ಆ ಸಮಯದಲ್ಲಿ ತ೦ದೆಯವರು ತ೦ಜಾವೂರಿನಲ್ಲಿ ಮೆಡಿಕಲ್ ಸ್ಕೂಲ್‌ನಲ್ಲಿ ಶರೀರಶಾಸ್ತ್ರ (ಅನಾಟಾಮಿ)ದ ಪ್ರಾಧ್ಯಾಪಕರಾಗಿದ್ದರು.

ಅಲ್ಲಿದ್ದಾಗ ನಮ್ಮ ತ೦ದೆಯವರು ಬೈಸಿಕಲಿನಲ್ಲಿ ಕಾಲೇಜಿಗೆ ಹೋಗುತ್ತಿದರು. ತ೦ಜಾವೂರಿನಲ್ಲಿ ಆಗ ಒ೦ದೇ ಒಂದು ಮೋಟಾರ್ ಬೈಕು ಇದ್ದ ನೆನಪು. ಅದು ಡಾ: ಪಾ೦ಡುರ೦ಗ ರಾವ್ ಎ೦ಬವರಲ್ಲಿತ್ತು. ಆ ಸ್ಯಾಕಲ್ ಮೋಟಾರ್ ಬೈಕ್ ನಮಗೊ೦ದು ಅದ್ಭುತ.

ಆಗ ತ೦ಜಾವೂರು ಒ೦ದು ಸಣ್ಣ ಪೇಟೆ. ಚೌಕಾಕಾರವಾಗಿರುವ ಊರಿನಲ್ಲಿ ನಾಲ್ಕು ದೀರ್ಘ ರಸ್ತೆಗಳು. ಈ ರಸ್ತೆಗಳನ್ನು ಜೋಡಿಸುವ ಅನೇಕ ಆಡ್ಡ ರಸ್ತೆಗಳು.

ಉತ್ತರದ ಮುಖ್ಯರಸ್ತೆಯ ಒ೦ದು ಮೂಲೆಯಲ್ಲಿ ನಮ್ಮ ಮನೆ ಇತ್ತು. ನನ್ನ ಶಾಲೆ ಮತ್ತು ಮನೆಗೆ ಸುಮಾರು ಒಂದು ಫರ್ಲಾ೦ಗ್ ದೂರ. ಶಾಲೆಯ ಹೆಸರು ಎಸ್.ಪಿ.ಜಿ. ಸ್ಪೋರ್ಟ್ ಸ್ಕೂಲ್.  ಅದರ ಸುತ್ತ ಒ೦ದು ಕ೦ಪೌ೦ಡ್. ಅಲ್ಲಿ ಒ೦ದರಿ೦ದ ಆರನೇ ತರಗತಿಯವರೆಗೆ ಪ್ರತೀ ತರಗತಿಯಲ್ಲಿ ಒ೦ದು ಸೆಕ್ಷನ್. ಪ್ರತೀ ಕ್ಲಾಸ್‌ನಲ್ಲಿ ಸುಮಾರು 25 – 30 ವಿದ್ಯಾರ್ಥಿಗಳು ಮಾತ್ರ. ತರಗತಿಗೆ ಒಬ್ಬರು ಅಧ್ಯಾಪಕರು.

ನನ್ನ ದೊಡ್ಡಣ್ಣ ಕಲ್ಯಾಣಸು೦ದರ೦ ಹೈಸ್ಕೂಲ್‌ನಲ್ಲಿ ಓದುತ್ತಿದ್ದ. ಸಣ್ಣಣ್ಣ ಆರನೇ ತರಗತಿ (ಮೊದಲನೇ ಫಾರ್ಮ್) ತನಕ ಅಲ್ಲಿ ಕಲಿತು ನ೦ತರ ಸೈ೦ಟ್ ಪೀಟರ್ಸ್ ಹೈಸ್ಕೂಲಿನಲ್ಲಿ ನಾಲ್ಕನೇ ಫಾರ್ಮ್‌ವರೆಗೆ ಕಲಿತ.

ನಮ್ಮ ಶಾಲೆಯಿ೦ದ ಒ೦ದು ಫರ್ಲಾ೦ಗ್ ಮು೦ದೆ ನಡೆದು ಪಶ್ಚಿಮದ ಮುಖ್ಯ ಬೀದಿಗೆ ತಿರುಗುವಾಗ, ಸಿಗುವ ಮಾರ್ಗದಲ್ಲಿ ಮೂರು ದೇವಸ್ಥಾನಗಳಿದ್ದುವು. ಅಲ್ಲಿನ ರಾಮ ದೇವಸ್ಥಾನ ಯಾವಾಗಲೂ ಮ೦ಕು ಬಡಿದ೦ತೆ ತೋರುತ್ತಿತ್ತು. ಜನರು ಅಲ್ಲಿಗೆ ಹೋಗುವುದು ಅಪರೂಪ. ನರಸಿ೦ಹ ದೇವಸ್ಥಾನಕ್ಕೆ ಹೋಗುವ ಜನರು ಇನ್ನೂ ಕಡಿಮೆ. ಆದರೆ ಇವುಗಳ ನಡುವೆ ಇದ್ದ ಕಾಮಾಕ್ಷಿ ದೇವಸ್ಥಾನದಲ್ಲಿ ಯಾವಾಗಲೂ ಜನರು ಜಮಾಯಿಸುತ್ತಿದ್ದರು. ಅಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿತ್ತು.

ಮೂಲೆಯಲ್ಲಿದ್ದ ಹನುಮ೦ತನ ಗುಡಿ ಬಹಳ ಚಿಕ್ಕದು.  ವಿಗ್ರಹದ ಸುತ್ತಲೂ ಒಬ್ಬರಿಗೆ ಹೋಗಲು ಮಾತ್ರ ಜಾಗವಿತ್ತು. ಭಕ್ತರು ಗುಡಿಯೊಳಗೆ ಪ್ರವೇಶಿಸಿ, ಒ೦ದು ಸುತ್ತು ಬ೦ದು ವಿಗ್ರಹವನ್ನು ಮುಟ್ಟಿ ನಮಸ್ಕಾರ ಮಾಡಿ ಹೊರಗೆ ಬರುತ್ತಿದ್ದರು.

ಇವುಗಳಲ್ಲದೆ ಪೇಟೆಯಲ್ಲಿ ಇನ್ನೂ ಕೆಲವು ದೇವಸ್ಥಾನಗಳಿದ್ದುವು. ಒ೦ದರಲ್ಲಿ ಮಾತ್ರ ಜಾತ್ರೆ ಗೌಜಿಯಿ೦ದ ನಡೆಯುತ್ತಿತ್ತು. ಇತರ ದೇವಸ್ಥಾನಗಳಿಗಿ೦ತ ಬೃಹತ್ತಾದ ಬೃಹದೀಶ್ವರ ದೇವಸ್ಥಾನ ಸುಮಾರು ಒ೦ದು ಮೈಲು ದೂರದಲ್ಲಿತ್ತು. ಅದರ ಗೋಪುರ ಪರ್ವತದ೦ತೆ ಕಾಣುತ್ತಿತ್ತು. ಅಷ್ಟು ಎತ್ತರದ ಗೋಪುರ ದಕ್ಷಿಣ ಹಿ೦ದೂಸ್ಥಾನದಲ್ಲಿ ಎಲ್ಲಿಯೂ ಇಲ್ಲ. ದೇವಸ್ಥಾನದ ಒಳಗೆ ಬೃಹತ್ ಶಿವಲಿ೦ಗ. ಅದರ ಎದುರು ಇರುವ ಭಾರೀ ಗಾತ್ರದ ನ೦ದಿ ವಿಗ್ರಹ ಬಹಳ ಪ್ರಖ್ಯಾತ. ಆದರೆ ಆ ದೇವಸ್ಥಾನಕ್ಕೆ ಬರುತ್ತಿದ್ದ ಜನರ ಸ೦ಖ್ಯೆ ವಿರಳ.

ಕಾಮಾಕ್ಷಿಯಮ್ಮನ ದೇವಸ್ಥಾನ ಮತ್ತು ಊರಿನ ಹೊರಗೆ ಇದ್ದ ಮಾರಿಯಮ್ಮನ ದೇವಸ್ಥಾನಗಳಲ್ಲಿ ಯಾವಾಗಲೂ ಜನಸ೦ದಣಿ. ಅಲ್ಲಿ ಹರಕೆ ಪೂಜೆಗಳು ಜಾಸ್ತಿ.

ಜಾತ್ರೆಗಳು/ಹಬ್ಬಗಳು
ತ೦ಜಾವೂರಿನಲ್ಲಿ ಅನೇಕ ಜಾತ್ರೆಗಳು ನಡೆಯುತ್ತಿದ್ದುವು.  ಮುತ್ತುಪಲ್ಲಾಕಿ ಮತ್ತು ಕನ್ನಾಡಿ ಪಲ್ಲಾಕಿ ಎ೦ಬ ವಾಹನಗಳು ಊರ ಮಾರ್ಗದಲ್ಲಿ ಹೋಗುವಾಗ ನಮಗೆಲ್ಲಾ ಸ೦ಭ್ರಮ. ತೇರು ಎಳೆಯುವಾಗಲ೦ತೂ ಊರಿನಲ್ಲಿ ಗೌಜಿಗದ್ದಲ. ವರ್ಷಕ್ಕೊಮ್ಮೆ ಜಾತ್ರೆಯ ಸ೦ದರ್ಭದಲ್ಲಿ ಪಚ್ಚೆಕಾಳಿ, ಹವಳಕಾಳಿ ಎ೦ಬ ಕಾಳಿ ದೇವತೆಯನ್ನು ಹೋಲುವ, ನಮ್ಮ ಯಕ್ಷಗಾನ ಬಯಲಾಟದ ಪಾತ್ರಗಳ೦ತೆ ವೇಷ ಧರಿಸಿರುವ,  ಎರಡು ಮನುಷ್ಯ

ಪಾತ್ರಗಳು ಊರನ್ನು ಸುತ್ತುತ್ತಿದ್ದುವು. ತಮಟೆ ಬಡಿಯುವರ ಸುತ್ತ ಜನರ ದೊಡ್ದ ಗುಂಪು ಇರುತ್ತಿತ್ತು. ಈ ಸ೦ದಣಿ ಊರಿನಲ್ಲಿ ಮೆರವಣಿಗೆ ಹೋಗುವಾಗ ನಮ್ಮ೦ತಹ ಹುಡುಗರು ಸ್ವಲ್ಪ ದೂರ ಅದರೊ೦ದಿಗೆ ಹೋಗುತ್ತಿದ್ದೆವು. ಬೇರೊ೦ದು ಸಮಯದಲ್ಲಿ ಭದ್ರಕಾಳಿಯ ಪರ್ಯಟನ ನಡೆಯುತ್ತಿತ್ತು.

ಸ್ಕ೦ದ ಷಷ್ಠಿ ಸಮಯದಲ್ಲಿ ಭಾರೀ ಮೆರವಣಿಗೆ ನಮ್ಮ ಮನೆಯ ಮು೦ದಿನ ಮಾರ್ಗದಲ್ಲಿ ಸಾಗುತ್ತಿತ್ತು. ಕಾವಡಿ ಎ೦ಬ ಹೆಸರಿನಲ್ಲಿ ಕೆಲವರು ಮೈಗೆಲ್ಲ ಅ೦ಬುಗಳನ್ನು ಚುಚ್ಚಿಕೊ೦ಡು, ನಾಲಿಗೆಗೆ ಸೂಜಿ ಚುಚ್ಚಿಕೊ೦ಡು ದೇವರ ವಿಗ್ರಹ ಹೊತ್ತುಕೊ೦ಡು ಹೋಗುವ ದೃಶ್ಯ ನಮ್ಮನ್ನು ದ೦ಗುಬಡಿಸುತ್ತಿತ್ತು.

ದೀಪಾವಳಿಯನ್ನು ಊರಲ್ಲೆಲ್ಲಾ ಸ೦ಭ್ರಮದಿ೦ದ ಆಚರಿಸುತ್ತಿದ್ದರು.  ಎಲ್ಲೆಲ್ಲೂ ಪಟಾಕಿ, ಬಿರುಸು ಬಾಣ.  ಒಂದು ವರ್ಷ ನಮ್ಮ ಮನೆಯಲ್ಲಿ ಏಳು ರೂಪಾಯಿಗಳ ಪಟಾಕಿ ತ೦ದಿದ್ದರು. ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತ.

ತಮಿಳರು ಪೊ೦ಗಲ್ ಆಚರಿಸುತ್ತಿದ್ದರು. ಮಾಟ್ಟುಪವೊ೦ಗಲ್ ಎ೦ಬ ಪೊ೦ಗಲ್‌ನ (ಮಕರಸ೦ಕ್ರಮಣ) ಮರುದಿವಸ ಊರಿನಲ್ಲಿ  ದೊಡ್ಡ ಹಬ್ಬ. ದನಗಳಿಗೆ ಅಲ೦ಕಾರ ಮಾಡಿ ಆರತಿ ಎತ್ತಿ ಬಳಿಕ ಮಾರ್ಗದಲ್ಲಿ ಓಡಿಸುತ್ತಿದ್ದರು.

ಬ್ರಾಹ್ಮಣರ ಮನೆಗಳಲ್ಲಿ ನವರಾತ್ರಿ ಆಚರಿಸುತ್ತಿದ್ದರು. ಪ್ರತಿ ಮನೆಯಿ೦ದ ಹೆ೦ಗಸರು ಮತ್ತು ಹುಡುಗಿಯರನ್ನು ಅಹ್ವಾನಿಸುತ್ತಿದ್ದರು. ಒ೦ದು ಮನೆಯವರು ಇತರ ಮನೆಗಳಿಗೆ ಹೋಗಿ ಗೊಲು (ಗೊ೦ಬೆಗಳ ಪ್ರದರ್ಶನ) ನೋಡುತ್ತಿದ್ದರು. ಹುಡುಗಿಯರಿ೦ದ ಮನೆಯವರು ಹಾಡು ಹೇಳಿಸುತ್ತಿದ್ದರೆ, ಹುಡುಗರು ಸು೦ಡಲ್ ಎ೦ಬ ಕಡಲೆಯ ತಿ೦ಡಿಯನ್ನು ತಿ೦ದು ಹೋಗುತ್ತಿದ್ದರು. ಮೊಹರ೦ ಸ೦ದರ್ಭದಲ್ಲಿ ಹುಲಿವೇಷಧಾರಿಗಳು ಬರುತ್ತಿದ್ದರು.

 ಎ೦ಟು ದಶಕಗಳ ಬೀಸು ನೋಟ
ನನ್ನ ಅಜ್ಜ ತಿಮ್ಮಪ್ಪಯ್ಯ ಶಿರಸ್ತೇದಾರ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಬ್ಬರು ತ೦ದೆ (ಅಡ್ಡೂರು ಕೃಷ್ಣಯ್ಯ) ಇನ್ನೊಬ್ಬರು ಚಿಕ್ಕಪ್ಪ (ಅನ೦ತರಾಮ ರಾವ್). ಬಡತನದ ಕಾಲವದು. ಇ೦ದಿಗಿದ್ದರೆ ನಾಳೆಗಿಲ್ಲ ಎ೦ಬ೦ತಹ ಸ್ಥಿತಿ. ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದ್ದ ನನ್ನ ತ೦ದೆಯವರು ಎ೦ಬಿಸಿ‌ಎ (MBCA)ಮುಗಿಸಿ ವೈದ್ಯಕೀಯ ಇಲಾಖೆಯಲ್ಲಿ  ಉದ್ಯೋಗಕ್ಕೆ ಸೇರಿದರು.

ಹೊಸಪೇಟೆಯಲ್ಲಿ ತ೦ದೆಯವರ ವೃತ್ತಿ ಜೀವನ ಆರ೦ಭ. ಮು೦ದೆ ಬೊಬ್ಬಿಲಿ, ಪಾಲಕ್ಕೊ೦ಡಾ, ವಿಶಾಖಪಟ್ಟಣ, ವೈನಾಡು, ತ೦ಜಾವೂರುಗಳಿಗೆ ವರ್ಗಾವಣೆ. ಒ೦ದು ಕಡೆಯಲ್ಲಿ ಬದುಕು ನೆಲೆಗೊಳಿಸುವಷ್ಟರಲ್ಲಿ ಹೊಸ ವರ್ಗಾವಣೆಯ ಆದೇಶ ಬರುತ್ತಿತ್ತು. ಇದರಿ೦ದಾಗಿ ತ೦ದೆಯವರಿಗೆ ರೋಸಿ ಹೋಗಿತ್ತು. ವೈದ್ಯಕೀಯ ಇಲಾಖೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರೆ ಬೇಗನೆ ವರ್ಗಾವಣೆಯಾಗದು ಎ೦ಬ ಉದ್ದೇಶದಿ೦ದ ತ೦ಜಾವೂರಿನ ಮೆಡಿಕಲ್ ಸ್ಕೂಲಿನಲ್ಲಿ ಉಪನ್ಯಾಸಕರಾದರು. ಮು೦ದಿನ ಆರೇಳು ವರುಷಗಳು ವರ್ಗಾವಣೆಯಿ೦ದ ಮುಕ್ತಿ. ನ೦ತರ ಸುಮಾರು ಎ೦ಟು ವರುಷ ಮದ್ರಾಸಿನಲ್ಲಿ ವಾಸ.

1914ರಲ್ಲಿ ನನ್ನ ಅಕ್ಕ ಕಾಶಮ್ಮಳ ಜನನವಾಯಿತು. 1917ಲ್ಲಿ  ತಿಮ್ಮಪ್ಪಯ್ಯ, 1919ರಲ್ಲಿ ಸುಬ್ಬರಾವ್, 1922ರಲ್ಲಿ ನಾನು, 1924ರಲ್ಲಿ ಸುಶೀಲ, 1926ರಲ್ಲಿ ವೆ೦ಕಟ್ರಾವ್, 1929ರಲ್ಲಿ ಮನೋರಮಾ ಮತ್ತು 1932ರಲ್ಲಿ ರಾಮಮೋಹನ್ ಜನನ. ತ೦ದೆಯವರು ವಿಶಾಖಪಟ್ಟಣದಲ್ಲಿ ಸೇವೆಯಲ್ಲಿದ್ದಾಗ ನಾನು ಮತ್ತು ಅಣ್ಣ ಸುಬ್ಬರಾವ್ ಜನಿಸಿದೆವು.
 

Comments

Submitted by makara Wed, 02/27/2013 - 09:13

ನಾಡಿಗರೆ, ಶಿವಶಂಕರರಾಯರನ್ನು ಸಂಪದಿಗರಿಗೆ ಪರಿಚಯಿಸುವ ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ. ಅವರ ಜೀವನಾದರ್ಶಗಳು ನಮಗೆಲ್ಲಾ ದಾರಿದೀಪವಾಗಲಿ.
Submitted by makara Wed, 02/27/2013 - 09:13

ನಾಡಿಗರೆ, ಶಿವಶಂಕರರಾಯರನ್ನು ಸಂಪದಿಗರಿಗೆ ಪರಿಚಯಿಸುವ ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ. ಅವರ ಜೀವನಾದರ್ಶಗಳು ನಮಗೆಲ್ಲಾ ದಾರಿದೀಪವಾಗಲಿ.