ಅಕ್ಕನ‌ ಮದುವೆ(ನೀಳ್ಗತೆ)‍ ‍‍‍‍‍‍‍‍‍‍‍‍‍‍‍‍..ಭಾಗ‌ 1

ಅಕ್ಕನ‌ ಮದುವೆ(ನೀಳ್ಗತೆ)‍ ‍‍‍‍‍‍‍‍‍‍‍‍‍‍‍‍..ಭಾಗ‌ 1

         ಐದನೆಯ ತರಗತಿಯಲ್ಲಿದ್ದ ಪುಟ್ಟ ಶಾಲೆಯೊಳಗೆ ಕುಳಿತು ಬ್ಯಾಗಿನಲ್ಲಿಟ್ಟುಕೊಂಡಿದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನಿಗೆ ಒಂದು ಕಡೆ ಅಕ್ಕನ ಮದುವೆಗಾಗಿ ಅಪ್ಪ ಹೊಲಿಯಲು ಹಾಕಿದ್ದ ಹೊಸಬಟ್ಟೆಯನ್ನು ತೊಡುವ ಸಂಭ್ರಮವಾದರೆ ಇನ್ನೊಂದು ಕಡೆ ಚಿಕ್ಕಂದಿನಿಂದಲೂ ತನ್ನನ್ನು ಕೈಹಿಡಿದುಕೊಂಡು ಎಲ್ಲಿಗೆ ಹೋದರೂ ಕರೆದುಕೊಂಡು ಹೋಗುತ್ತಿದ್ದ, ತನಗೆ ಅನ್ನ ಮಾಡಿ ಉಣಿಸಿ  ಅವಳೇ ಒಗೆದಿದ್ದ ಇಸ್ಕೂಲಿನ ಯೂನಿಫಾರ್ಮ ಬಟ್ಟೆ ತೊಡಿಸಿ ತಲೆ ಬಾಚಿ ಇಸ್ಕೂಲಿಗೆ ಕಳುಹಿಸುತಿದ್ದ, ತಿಳಿಯದ ಗಣಿತದ ಲೆಕ್ಕಗಳನ್ನು ಮಾಡಿಕೊಡುತಿದ್ದ ಅಕ್ಕ ತನ್ನನ್ನು ಬಿಟ್ಟು ಬೇರೆಯ ಮನೆಗೆ ಹೋಗುತ್ತಾಳೆ ಎನ್ನುವ ದುಃಖವೂ ಮನಸ್ಸಿನಲ್ಲಿ ಮೂಡಿತ್ತು. ತನ್ನ ಸ್ನೇಹಿತ ಮಂಜನಿಗೆ ಕೊಡಬೇಕೆಂದು ಅಪ್ಪನ ಬಳಿ ಕೇಳಿ ತಂದಿದ್ದ ಲಗ್ನಪತ್ರಿಕೆ ಯಾಕೋ ನನ್ನ ಬಳಿಯೇ ಇರಲಿ ಎನಿಸಿ ಶಾಲೆ ಬಿಟ್ಟ ಮೇಲೆ ಮಂಜನಿಗೆ  ’ಮಂಜ.. ಭಾನುವಾರ ಯಡೂರು ದೇವಸ್ಥಾನದಲ್ಲಿ ನಮ್ಮಕ್ಕುನ ಮದುವೆ.. ಊರಿಂದ ಟೆಂಪೋ ಮಾಡಿದೀವಿ.. ಬಾರೋ..’ ಅಂತ ಬಾಯಿಮಾತಿನಲ್ಲಿಯೇ ಮದುವೆಗೆ ಕರೆದ ಪುಟ್ಟನಿಗೆ ಮಂಜ ‘ಬತ್ತೀನಿ ಕಣೋ..’ಅಂದ. ‘ಮರೀಬ್ಯಾಡ..’ ಎಂದು ಹೇಳಿ ಉತ್ಸಾಹದಿಂದ ಮನೆಯ ಕಡೆ ಹೊರಟ ಪುಟ್ಟ. 

  ಪುಟ್ಟನಿಗೆ ಅಕ್ಕನಂತೆಯೇ ಯಡಿಯೂರಿನಲ್ಲಿ ಪಿಯೂಸಿ ಮುಗಿಸಿದ್ದ ಊರಿನ ಆಕೆಯ ಸ್ನೇಹಿತೆಯರೆಲ್ಲರೂ ಕಾಲೇಜು ಓದಲು ಕುಣಿಗಲ್ಲಿಗೆ ಹೋಗಿ ಬರುತ್ತಿರುವುದು ತಿಳಿದಿತ್ತು. ‘ಅಕ್ಕನೂ ಕಾಲೇಜಿಗೆ ಹೋಗಿ ಬರ್ಲಿ ಬಿಡವ್ವೋ..’ ಎಂದ ಅವನ ಮಾತಿಗೆ ಅವ್ವ, ‘ನಾವೇನು ಕುಬೇರುನ ಮೊಮ್ಮಕ್ಕಳಾ.. ಹೆಂಗೋ ಅವಳಿಗೊಂದು ಮದ್ವೆ ಆಗಿ ನಾಲೋರಂತೆ ಸಂಸಾರ ಮಾಡ್ಕಂಡಿದ್ರೆ ಸಾಕು’ ಎಂದು ಹೇಳಿ ನಿಟ್ಟುಸಿರುಬಿಟ್ಟಿದ್ದು ಯಾಕೆಂದು ಪುಟ್ಟನಿಗೆ ತಿಳಿದಿರಲಿಲ್ಲ. ಆದರೆ ಅಕ್ಕ ಯಡಿಯೂರಿನಲ್ಲಿ ಆಟೋ ಓಡಿಸುತ್ತಿದ್ದ ಕೊನೆಯ ಮನೆ ರಾಜಣ್ಣನ ಜೊತೆ ಆಗಾಗ ನಗುತ್ತಾ ಮಾತನಾಡುತ್ತಾ ನಿಂತಿರುತ್ತಿದ್ದುದು ಕಂಡು ಅವಳು ಅವನನ್ನೇ ಮದುವೆಯಾಗುತ್ತಾಳೇನೋ ಎಂಬ ಸಂಶಯ ಅವನಿಗೆ ಬಂದಿತ್ತು. ಆಗೊಮ್ಮ ಈಗೊಮ್ಮೆ ರಾಜಣ್ಣ ಅವನ ಆಟೋದಲ್ಲಿ ತನ್ನನ್ನು ಕುಳ್ಳಿರಿಸಿಕೊಂಡು ಊರಿನಿಂದ ಮಾಗಡಿಪಾಳ್ಯ ಕ್ರಾಸಿನ ರಸ್ತೆಯವರೆಗೂ ಕರೆದುಕೊಂಡು ಹೋಗುತ್ತಿದ್ದುದು ಪುಟ್ಟನಿಗೂ ಖುಷಿ ಕೊಡುವ ವಿಚಾರವೇ ಆಗಿತ್ತು. ರಾಜಣ್ಣ ಒಂದು ದಿನ ‘ಏನೋ ಪುಟ್ಟ.. ನಿಮ್ಮಕ್ಕನಿಗೆ ಯಾವ ಹೂವು ಇಷ್ಟಾನೋ..’ ಎಂದು ಕೇಳಿದಾಗ ಪುಟ್ಟನಿಗೆ  ತನ್ನ ಅಕ್ಕನಿಗೆ ಯಾವ ಹೂವು ಇಷ್ಟವೆಂದು ಸರಿಯಾಗಿ ತಿಳಿದಿರಲಿಲ್ಲ. ಸುಮ್ಮನೆ ಅವಳಿಗೆ ಯಾವಾಗಲೂ ಕನಕಾಂಬರ ಹೂವು ಕಂಡರೆ ತುಂಬಾ ಇಷ್ಟ ಅಂತ ಹೇಳಿದ್ದ. ಮಾರನೇ ದಿನ ಪುಟ್ಟ ಇಸ್ಕೂಲಿನಿಂದ ಬಂದಾಗ ದಾರಿಯಲ್ಲಿ ಕಾಯುತಿದ್ದ ರಾಜಣ್ಣ ಪೇಪರಿನಲ್ಲಿ ಸುತ್ತಿದ್ದ  ಕನಕಾಂಬರ ಹೂವನ್ನು ‘ನಿಮ್ಮಕ್ಕನಿಗೆ ಕೊಡು..’  ಅಂತ ಹೇಳಿ ಅವನ ಕೈಯಲ್ಲಿ ಕೊಟ್ಟಿದ್ದ. ರಾಜಣ್ಣ ಕೊಟ್ಟಿದ್ದ ಹೂವನ್ನು ಕೈಯಲ್ಲಿಯೇ ಹಿಡಿದುಕೊಂಡು ಬಂದ ಪುಟ್ಟ ‘ಅಕ್ಕೋ.. ತಗೋಳೇ ರಾಜಣ್ಣ ಕೊಟ್ಟ..’ ಎಂದಾಗ ಅಕ್ಕ ಗಾಬರಿಯಾಗಿ ‘ಅವ್ವುಂಗೇನಾದ್ರೂ ಗೊತ್ತಾದ್ರೆ ಇಬ್ರುಗೂ ಗಾಚಾರ ಬಿಡಿಸಿಬುಡ್ತಾಳೆ.. ಮೊದ್ಲು ಓಡೋಗಿ ಅವ್ನಿಗೇ ವಾಪಸ್ ಕೊಟ್ಬುಟ್ಟು ಬರೋಗು..’ ಅಂದಳು. ಪುಟ್ಟ ಬ್ಯಾಗನ್ನು ನಡುಮನೆಯಲ್ಲಿ ಬಿಸಾಕಿ ಓಡಿಹೋಗಿ ‘ಅಕ್ಕುಂಗೆ ಬ್ಯಾಡ್ವಂತೆ ತಗೋಳಪ್ಪ..’ಅಂತ ಹೇಳಿ ಹೂವನ್ನು ಅವನ ಆಟೋದಲ್ಲಿಟ್ಟು  ‘ಯಾಕಂತೋ..’ ಅಂದ ರಾಜಣ್ಣನಿಗೆ ‘ನಂಗೊತ್ತಿಲ್ಲಪ್ಪ ..’ ಅಂದವನೇ ಓಡಿ ಬಂದಿದ್ದ. ಅಂದೇ ಕಡೆಯ ದಿನವಾಗಿತ್ತು. ಮತ್ತೆ ಅಕ್ಕ ರಾಜಣ್ಣನೊಂದಿಗೆ ಮಾತನಾಡುವುದನ್ನು ಪುಟ್ಟ ನೋಡಿರಲೇ ಇಲ್ಲ.
  ಇದಾದ ಸುಮಾರು ದಿನಗಳ ಬಳಿಕ ಒಂದು ದಿನ ರಾತ್ರಿ ಎಲೆಕ್ಟ್ರಿಕ್ ದೀಪದ ಮಂಕು ಬೆಳಕಲ್ಲಿ ಪುಟ್ಟ ಶಾಲೆಯಲ್ಲಿ ಗಣಿತದ  ಮೇಷ್ಟ್ರು ಕೊಟ್ಟಿದ್ದ ಯಾವುದೋ ಲೆಕ್ಕಗಳು ಅರ್ಥವಾಗದೇ ತಲೆಕೆರೆದುಕೊಂಡು ಕುಳಿತಿದ್ದ. ಅಕ್ಕ ನಿಂಗೆಷ್ಟು ಬರ್ತದೋ ಮೊದ್ಲು ಮಾಡು  ಬರದೇ ಇದ್ರೆ ಆಮೇಲೆ ನಾನು ಹೇಳಿಕೊಡ್ತೀನಿ ಅಂತ ಹೇಳಿದ್ದಳು. ಇವನು ಲೆಕ್ಕದ ಬಗ್ಗೆ ತಲೆಕೆಡಿಸಿಕೊಂಡಿರುವಾಗ ಮನೆಯೊಳಗೆ ಬಿಳಿಯ ಪ್ಯಾಂಟು ಬಿಳಿಯ ಜುಬ್ಬಾ ತೊಟ್ಟಿದ್ದ ಕಪ್ಪನೆಯ ಕುಳ್ಳಗಿನ ಆಸಾಮಿಯೊಬ್ಬ  ಬಗಲಿಗೆ ಬ್ಯಾಗು ತಗುಲಿಹಾಕಿಕೊಂಡು ಬಂದ.  ಅವ್ವ ಅವನಿಗೆ ಚಾಪೆ ಹಾಸಿ ‘ಕುತ್ಕೊಳಣ್ಣಾ..’ ಎಂದು ಹೇಳಿ ಕಾಫಿ ಮಾಡಿಕೊಟ್ಟಿದ್ದಳು. ಅಷ್ಟರಲ್ಲಿ ಅಪ್ಪನೂ ಬಂದು ಅವನನ್ನು ‘ಚೆನ್ನಾಗಿದೀರಾ..’ ಎಂದು ಕೇಳಿ ಪಕ್ಕದಲ್ಲಿಯೇ ಕುಳಿತುಕೊಂಡ.
  ಬಂದ ಆಸಾಮಿ ಕಾಫಿ ಕುಡಿದು ನಿಧಾನವಾಗಿ ಮಾತಿಗೆ ಆರಂಭಿಸಿದ್ದ. ‘ಏವನ್ ಕುಟುಂಬದ ಹುಡುಗ. ಒಬ್ನೇ ಮಗ. ಬೆಂಗಳೂರಲ್ಲಿ ಸಣ್ಣುದೊಂದು ಬಿಸಿನೆಸ್ ಮಾಡ್ಕಂಡಿದಾನೆ... ಸ್ವಂತ ಮಹಡಿ ಮನೆ ಐತೆ. .ಮೇಲ್ಗಡೆ ಅವ್ರು ಇದ್ಕಂಡು ಕೆಳಗೆ ಬಾಡಿಗೆ ಕೊಟ್ಟಿದಾರೆ.  ಒಳ್ಳೇ ಜನ.. ನಿಮ್ಮುಡುಗೀನ ರಾಣಿಯಂಗೆ ನೋಡ್ಕೋತಾರೆ.. ಹೂಂ ಅಂದ್ರೆ ಕರ್ಕಂಡು ಬತ್ತೀನಿ..’ ಅಂತ ಕೇಳಿದಾಗ ಅವ್ವ ‘ಅಣ್ಣೋ.. ನಮಗೇನು ಗೊತ್ತಾಯ್ತದೆ.. ಕಾಲದಿಂದ ನೀವು ನಮ್ಮನ್ನ ನೋಡಿರೋರು.. ಒಂದು ಜಗಳಕ್ಕೋದೋರಲ್ಲ.. ಗುದ್ದಾಟುಕ್ಕೋದೋರಲ್ಲ..  ಏನೋ ಆ ಪರಮಾತ್ಮುನ ದಯೆಯಿಂದ ನಮ್ಮ ಮಗಳು ಸುಖವಾಗಿದ್ರೆ ನಮಗೆ ಅದೇ ಸಾಕು.. ನಿಮ್ಮದೇ ಎಲ್ಲಾ ತೀರ್ಮಾನ’ ಅಂದಳು. ಅಪ್ಪನೂ ಹೌದೆನ್ನುವಂತೆ ತಲೆಯಾಡಿಸಿದ್ದ. ಪುಟ್ಟನಿಗೆ ಬೆಂಗಳೂರಿನ ಹೆಸರು ಕೇಳಿ ತುಸು ಬೇಸರವಾಯಿತು. ಬೆಂಗಳೂರು ಅಷ್ಟೊಂದು ದೂರ, ಇಲ್ಲೇ ಹತ್ರ ಆಗಿದ್ರೆ ಆವಾಗಾವಾಗ ಹೋಗಿ ಅಕ್ಕುನ್ನ ನೋಡಿಕೊಂಡು ಬರಬಹುದಿತ್ತು ಅಂತ ಅವನಿಗೆ ಅನ್ನಿಸಿತು. ಅಕ್ಕನಿಗೆ ಇಷ್ಟವಾಗಿರಬಹುದೇನೋ ಎಂದುಕೊಂಡು ಎದ್ದವನೇ ಅಡುಗೆ ಮನೆಯಲ್ಲಿ ಗೋಡಗೊರಗಿ ನಿಂತಿದ್ದ  ಅಕ್ಕನ ಬಳಿ ಹೋಗಿ ‘ಅಕ್ಕೋ.. ಕೇಳಿಸ್ಕಂಡಾ..’ ಅಂದಿದ್ದಕ್ಕೆ ಅವಳು ನಾಚುತ್ತಾ ‘ಹೂಂ..’ ಅಂದಿದ್ದು ಕಂಡು ಪುಟ್ಟನಿಗೆ ಸೋಜಿಗವಾಯಿತು. 
  ಅದಾದ ನಾಲ್ಕು ದಿನದ ನಂತರ ಅಕ್ಕನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂದು ಬೆಳ್ಳಂಬೆಳಿಗ್ಗೆಯೇ ಚಿಕ್ಕವ್ವ-ಚಿಕ್ಕಪ್ಪ ಮನೆಗೆ ಬಂದಿದ್ದರು.  ಅವ್ವ ಮತ್ತು ಚಿಕ್ಕವ್ವ ಅಡಿಗೆ ಮನೆಯಲ್ಲಿ ಓಡಾಡಿಕೊಂಡು ಏನೇನೋ ಮಾಡುತಿದ್ದರು. ಉಪ್ಪಿಟ್ಟಿನ ವಾಸನೆ ಪುಟ್ಟನ ಮೂಗಿಗೆ ಘಮ್ಮೆಂದು ಅಡರಿತು. ಅಕ್ಕ ಸ್ನಾನ ಮಾಡಿ ಚಿಕ್ಕವ್ವನ ರೇಸಿಮೆ ಸೀರೆ ಉಟ್ಟಿದ್ದಳು. ಮನೆಯಲ್ಲಿಯೇ ಇರೋಣವೆಂದು ಅವನಿಗೆ ಮನಸ್ಸಾದರೂ ಇಸ್ಕೂಲಿನಲ್ಲಿ ಗಣಿತದ ಮೇಷ್ಟ್ರು ಯಾಕೋ ಬದ್ಮಾಷ್ ಕ್ಲಾಸಿಗೆ ಬಂದಿರಲಿಲ್ಲ ಅಂತ ಬಯ್ಯುತ್ತಾರೆ ಎಂದು ಭಯವಾಗಿ ಬ್ಯಾಗು ತಗುಲಿ ಹಾಕಿಕೊಂಡು ಇಸ್ಕೂಲಿಗೆ ಹೋದರೂ ಮನಸ್ಸೆಲ್ಲಾ ಮನೆಯಲ್ಲಿಯೇ ಇತ್ತು. ಸಾಯಂಕಾಲ ಇಸ್ಕೂಲಿನಿಂದ ಓಡೋಡಿಬಂದವನೇ ‘ಅಕ್ಕೋ... ಭಾವ ಹೆಂಗವ್ನೆ’ ಎಂದು ಅಕ್ಕನನ್ನು ಕೇಳಿದ. ‘ಚೆನ್ನಾಗವ್ನೆ.. ಆದ್ರೆ ತಲೆ ಮೇಲೆ ಎರಡು ಕೊಂಬಿದಾವೆ..’ ಅಂತ ಹೇಳಿ ಅಕ್ಕ ಬಾಯಿ ತುಂಬಾ ನಕ್ಕಿದ್ದು ಕಂಡು ಪುಟ್ಟನಿಗೆ ಅಕ್ಕ ಮದುವೆಗೆ ರೆಡಿಯಾಗಿಬುಟ್ಟವಳೆ ಅನ್ನಿಸಿ ಹೊಟ್ಟೆಕಿಚ್ಚಾಯಿತು. ರಾತ್ರಿ ಊಟ ಮಾಡಿದ ನಂತರ ಅಪ್ಪ ಮತ್ತು ಅವ್ವ ಇಬ್ಬರೂ ಎಲೆ ಅಡಿಕೆ ಹಾಕಿಕೊಂಡು ಬಂದು ಪಡಸಾಲೆಯಲ್ಲಿ ಸಮಾಧಾನವಾಗಿ ಕುಳಿತು ತಿಟ್ಟಿನ ಹತ್ತಿರ ತಕ್ಕಲು ಬಿದ್ದಿದ್ದ ಒಂದು ಎಕರೆ ಹೊಲವನ್ನು ಮಾರಿಬಿಡಾನ ಎಂದು ಮಾತನಾಡಿಕೊಂಡಿದ್ದು  ಕೇಳಿಸಿತು.
  ಅಕ್ಕನಿಗೆ ಮದುವೆ ಗೊತ್ತಾದ ಮೇಲೆ ಒಂದು ದಿನ ಅಪ್ಪ ಮತ್ತು ಚಿಕ್ಕಪ್ಪ ಇಬ್ಬರೂ ಒಗೆದು ಮಡಿ ಮಾಡಿದ್ದ ಶರಟು ಪಂಚೆಗಳನ್ನು ಧರಿಸಿ ಬೆಂಗಳೂರಿಗೆ ಹೊರಟಿದ್ದರು. ಅಪ್ಪ ಕೈಯಲ್ಲಿ ಖಾಕಿ ಕೈಚೀಲವನ್ನು ಸುತ್ತಿ ಹಿಡಿದುಕೊಂಡಿದ್ದ. ಅವರು ಹೊರಡುವಾಗ ಅವ್ವ ‘ಜಾಪಾನ.. ಎಲ್ಲಾದ್ರೂ ಉದುರಿಸಿಬುಟ್ಟೀಯಾ..’ ಎಂದು ಎರಡೆರಡು ಬಾರಿ ಅಪ್ಪನನ್ನು ಎಚ್ಚರಿಸಿದ್ದಳು. ಅಪ್ಪ ಮತ್ತು ಚಿಕ್ಕಪ್ಪ ಮನೆಯಿಂದ ಹೋದ ಮೇಲೆ ಪುಟ್ಟನಿಗೆ ಕುತೂಹಲವಾಗಿ ‘ಅವ್ವೋ.. ಅದೇನವ್ವೋ.. ಅಪ್ಪ ಬ್ಯಾಗಲ್ಲಿ ಸುತ್ಕಂಡು ತಗಂಡೋಗಿದ್ದು’ ಎಂದು ಕೇಳಿದ. ‘ನಿಮ್ಮ ಭಾವುಂಗೆ ವಾಚು, ಉಂಗುರ, ಕತ್ತಿಗೆ ಚೈನು, ಬಟ್ಟೆ, ಹೊಸ ಬೈಕು ಎಲ್ಲಾ ತಗಳ್ಳಕ್ಕೆ ದುಡ್ಡು ಕಣೋ ಮಗಾ..’ಎಂದ ಅವ್ವನ ಮಾತು ಕೇಳಿ ಪುಟ್ಟನಿಗೆ ‘ಅದುಕ್ಕೆಲ್ಲಾ ನಾವೇ ದುಡ್ಡು ಕೊಡಬೇಕಾ..’ ಎನಿಸಿದರೂ ಮತ್ತೆ ಅವ್ವನನ್ನು ಪ್ರಶ್ನೆ ಕೇಳಲಿಲ್ಲ. 
  ಮದುವೆಯ ದಿನ ಮಂಜ ಹೇಳಿದಂತೆ ಬಂದಿದ್ದ. ಪುಟ್ಟ ಹೊಸ ಪ್ಯಾಂಟು ಶರಟು ತೊಟ್ಟು ಯಾವುದೋ ಸಂಭ್ರಮದಿಂದ  ಅವನ ಜೊತೆ ಓಡಾಡುತಿದ್ದ. ಅಕ್ಕನ ಜೊತೆ ಅವಳ ಕಾಲೇಜು ಸ್ನೇಹಿತೆಯರು ಮತ್ತು ಊರಿನ ವಾರಿಗೆಯ ಹುಡುಗಿಯರು ಇದ್ದರು. ಇದರಿಂದಾಗಿ ಪುಟ್ಟನಿಗೆ ಅವಳ ಜೊತೆ ಹೆಚ್ಚು ಸಮಯ ಕಳೆಯುವುದು ಸಾಧ್ಯವಾಗಲಿಲ್ಲ. ಅಲ್ಲಿಯವರಗೆ ಭಾವವನ್ನು ನೋಡಿರದ ಪುಟ್ಟನಿಗೆ ಭಾವ ಪರವಾಗಿಲ್ಲ.. ರಾಜಣ್ಣನಷ್ಟೇನು ಚೆನ್ನಾಗಿಲ್ಲ ಅನ್ನಿಸಿತು. ಮದುವೆಗೆ ಬಂದ ರಾಜಣ್ಣ ಪುಟ್ಟನಿಗೆ ಮುಖ ಕೊಟ್ಟು ಮಾತನಾಡಿಸದಿದ್ದುದು ಕಂಡು ಅವನಿಗೆ ಒಂದು ತರ ಆಯಿತು. ವಾಲಗ ಡೋಲಿನ ಸದ್ದಿನ ನಡುವೆ ಅಕ್ಕ ತಲೆ ತಗ್ಗಿಸಿ ಭಾವನಿಂದ ತಾಳಿ ಕಟ್ಟಿಸಿಕೊಂಡಿದ್ದನ್ನು ನೋಡಿ  ‘ಅಕ್ಕ ಇನ್ನು ನಮ್ಮನ್ನೆಲ್ಲಾ ಬಿಟ್ಟು ಭಾವನ ಮನೆಗೆ ಹೊರಡುತ್ತಾಳೆ’ ಎಂದು  ಅನಿಸಿ ಏನನ್ನೋ ಕಳೆದುಕೊಂಡಂತೆ ಭಾಸವಾಗತೊಡಗಿತು. 
  ಮದುವೆ ಮುಗಿದು ಎಲ್ಲರೂ ಊಟಮಾಡಿ ಹೊರಟು ಹೋದ ಮೇಲೆ ಅಕ್ಕ, ಭಾವನ ಜೊತೆ ಹೊರಡಲು ಸಿದ್ಧವಾದಳು. ಬೆಂಗಳೂರಿನಿಂದ ಬಸ್ಸು ಮಾಡಿಕೊಂಡು ಬಂದಿದ್ದ ಭಾವನ ಕಡೆಯವರು ಎಲ್ಲರೂ ಆಗಲೇ ಬಸ್ಸಿನಲ್ಲಿ ಕುಳಿತಿದ್ದರು. ಅಕ್ಕನನ್ನು ಕಳುಹಿಸಲು ಅಲ್ಲಿ ನಿಂತಿದ್ದ ಚಿಕ್ಕಮ್ಮ-ಚಿಕ್ಕಪ್ಪ, ಅತ್ತೆ-ಮಾವ ಮತ್ತು ತಾತ-ಅಜ್ಜಿಯರಿಗೆಲ್ಲಾ ಕಾಲಿಗೆ ಬಿದ್ದ ಅಕ್ಕ ಕೊನೆಯದಾಗಿ ಅವ್ವ-ಅಪ್ಪನ ಬಳಿ ಬಂದಳು. ಕಾಲಿಗೆ ಬಿದ್ದ ಅಕ್ಕನನ್ನು ಎತ್ತಿ ತಬ್ಬಿಕೊಂಡ ಅವ್ವ ‘ಒಳ್ಳೇ ಹೆಸ್ರು ತರಬೇಕು ಕಣವ್ವಾ..’ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಾಗ ಪುಟ್ಟನಿಗೂ ಅಳು ತಡೆಯಲಾಗಲಿಲ್ಲ. ಅಪ್ಪ ಹೆಗಲ ಮೇಲಿದ್ದ ಹೊಸ ಟವೆಲನ್ನ ಬಾಯಿಯಲ್ಲಿ ಬಿಗಿಯಾಗಿ ಕಚ್ಚಿ ಹಿಡಿದು ನಿಂತಿದ್ದ.  ಅಕ್ಕ ಕಾಲಿಗೆ ಬೀಳುವ ಮುಂಚೆಯೇ ಅವಳನ್ನು ಹಿಡಿದು ಮೇಲೆತ್ತಿ ತಲೆಸವರಿದವನು ಏನೂ ಮಾತನಾಡಲೇ ಇಲ್ಲ. ಸುರಿಯುತ್ತಿದ್ದ ಕಣ್ಣೀರನ್ನು ಮುಂಗೈಯಲ್ಲಿ ಒರೆಸಿಕೊಂಡ ಅಕ್ಕ ಪುಟ್ಟನ ಬಳಿಗೆ ಬಂದು ‘ಚೆನ್ನಾಗಿ ಓದ್ಕೋ..’ ಅಂದಾಗ ಪುಟ್ಟ ಅಳುತ್ತಾ ಊ.. ಊ.. ಅಂತ ತಲೆಯಲ್ಲಾಡಿಸಿದ. ‘ಬೆಂಗಳೂರಿಗೆ ಹೋದ ಮ್ಯಾಲೆ ನನ್ನುನ್ನ ಮರ್ತುಬಿಡಬ್ಯಾಡ..’ ಎಂದು ಹೇಳಬೇಕೆಂದುಕೊಂಡ ಪುಟ್ಟನಿಗೆ ಗಂಟಲು ಕಟ್ಟಿದಂತಾಗಿ  ಮಾತನಾಡಲು ಆಗಲೇ ಇಲ್ಲ. ಅಷ್ಟರಲ್ಲಿ ‘ಟೈಮಾಯ್ತು.. ಎಷ್ಟೊತ್ತು ಕಾಯೋದು..’ ಎಂದು ಕೂಗಿಕೊಳ್ಳುತ್ತಿದ್ದ ಭಾವನ ಅಮ್ಮನ ಧ್ವನಿ ಕೇಳಿ ಅಕ್ಕ ಸರಸರನೆ ನಡೆದು ಹೋಗಿ ಬಸ್ಸು ಹತ್ತಿ ಕುಳಿತಳು.
                                                                 (ಮುಂದುವರಿಯುವುದು...)