ಎಲ್ಲರೂ ಬೇಕು!
ಚುನಾವಣೆಯಲ್ಲಿ, ಮನಸ್ಸಿಗೊಪ್ಪುವ ಅಭ್ಯರ್ಥಿ ಇಲ್ಲವೆನಿಸಿದರೆ, ಯಾರೂ ಇಲ್ಲ ಎಂದು ಬರೆದುಕೊಡುವ ಆಯ್ಕೆಯೂ ಮತದಾರನಿಗಿದೆ ಎಂದು ಮಾಧ್ಯಮಗಳು, ತಲೆಗೆ ಹುಳ ಬಿಟ್ಟವು. ನಾಲ್ಕಾರು ಉತ್ಸಾಹಿಗಳು 'ಸೈ' ಎಂದು ಹೊರಟರು. ಬಹುತೇಕರಿಗೆ ನಿರಾಶೆ ಕಾದಿತ್ತು. ಈ ಹೊಸ ತಲೆನೋವಿನ ನಮೂನೆ, ಮತಗಟ್ಟೆಗಳಲ್ಲಿ ಸಾಮಾನ್ಯವಾಗಿ ಲಭ್ಯವಿರಲಿಲ್ಲ. ಈ ಅಯ್ಕೆಯೇ ಅರ್ಥವಿಲ್ಲದ್ದು. ನಾನು ವೋಟ್ ಮಾಡಲು ಹೋದಾಗ, ಬೇಕಾದ ಕನಿಷ್ಠ ಐವರು ಅಭ್ಯರ್ಥಿಗಳ ಹೆಸರು ಯಂತ್ರದಲ್ಲಿತ್ತು. ಹಾಗಂತ, ಎಲ್ಲರೂ ಬೇಕು ಎಂದು ಬರೆದುಕೊಡುವ ಅವಕಾಶವಿರುತ್ತದೆಯೇ; ಪ್ರಯೋಜನವಾಗುತ್ತದೆಯೇ? 'ಯಾರೂ ಬೇಡ' ಎನ್ನುವ ಕ್ಷಣಿಕ ಆವೇಶದಿಂದಲೂ ಅಷ್ಟೆ, ಕೊಳೆತು ನಾರುವ ರಾಜಕೀಯದ ತಿದ್ದಾಣಿಕೆಗೆ ಪರಿಹಾರವನ್ನೇನೂ ನೀಡಲಾರದು.
ಫಲಿತಾಂಶದ ನಂತರ ಯಾವುದಾರೊಂದು ನಿರ್ದಿಷ್ಟ ಪಕ್ಷ ಆಡಳಿತಕ್ಕೆ ಬರುತ್ತದೆಯೇ? ಮನಸ್ತಾಪ-ಭಿನ್ನಾಭಿಪ್ರಾಯಗಳಿಂದ ಅದು ಛಿದ್ರವಾಗುವುದೇ ಇಲ್ಲವೇ? ಹಲವಾರು ಬೆರಕೆಗಳ ದುರ್ಮಿಶ್ರ ಸರಕಾರವೇ ಹುಟ್ಟಿಬರುತ್ತದೆಯೇ? ಈ ಸಂದಿಗ್ಧದಲ್ಲಿ, 'ಯಾರೂ ಬೇಡ’ ಎಂದು ಸಾರುವ ಹಕ್ಕು, ಮತದಾರನಿಗೆ, ಹುಂಜದ ತಲೆಯ ಜುಟ್ಟೇನು ಆಗಲಾರದು!
Comments
ಸದ್ಯ ಇರುವ ಕಾನೂನಿನ ಪ್ರಕಾರ
ಸದ್ಯ ಇರುವ ಕಾನೂನಿನ ಪ್ರಕಾರ 'ಯಾರೂ ಇಲ್ಲ' ಎಂದು ಬರೆದುಕೊಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಪ್ರಯೋಜನಕಾರಿ ಆಗಬೇಕಾದರೆ ಇಂಥ ಒಂದು ಅವಕಾಶ ಮತಯಂತ್ರದಲ್ಲಿ ಮತದಾರ ಒಂದು ಆಯ್ಕೆಯಾಗಿ ಚಲಾಯಿಸುವಂತೆ ಇರಬೇಕು ಮತ್ತು ಈ ರೀತಿಯ 'ಯಾರೂ ಬೇಡ' ಮತಗಳು ಒಟ್ಟು ಚಲಾವಣೆಯಾದ 50%ಕ್ಕಿಂತ ಹೆಚ್ಚಾದರೆ ಆ ಕ್ಷೇತ್ರದಲ್ಲಿ ಮರುಮತದಾನ ನಡೆಸುವ ಅವಕಾಶವಿರುವ ಕಾನೂನು ತಿದ್ದುಪಡಿ ಆಗಬೇಕು. ಹಾಗೆ ಮರುಮತದಾನ ನಡೆಸುವ ಸಂದರ್ಭದಲ್ಲಿ ಮೊದಲು ಚುನಾವಣೆಗೆ ನಿಂತಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಮರುಚುನಾವಣೆಗೆ ಸ್ಪರ್ಧಿಸುವ ಅವಕಾಶ ಇರಬಾರದು. ಹೀಗಾದಾಗ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಗರಿಷ್ಠ ಎಚ್ಚರಿಕೆಯನ್ನು ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೆ ಇದು ದುಬಾರಿಯಾಗುತ್ತದೆ. ಅಂಥ ಸಂದರ್ಭಗಳಲ್ಲಿ ಎರಡು ಸಲ ಚುನಾವಣೆ ನಡೆಸಬೇಕಾಗುತ್ತದೆ ಮಾತ್ರವಲ್ಲ ಮತದಾರರೂ ಎರಡು ಸಲ ಮತ ಚಲಾಯಿಸಲು ಹೋಗಬೇಕಾಗುತ್ತದೆ. ರಾಜಕಾರಣಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕಾದರೆ ಇಂಥ ಕಾನೂನು ತಂದರೆ ಒಳ್ಳೆಯದೇ. ಆದರೆ ಇಂಥ ವ್ಯವಸ್ಥೆಗೆ ಮತದಾರರು ಸಿದ್ಧವಾಗಿದ್ದಾರಾ ಎಂಬುದೂ ಮುಖ್ಯವಾಗುತ್ತದೆ. ಇದು ಯಶಸ್ವಿಯಾಗಬೇಕಾದರೆ ಪ್ರಬುದ್ಧ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕಾಗುತ್ತದೆ. ಇಲ್ಲದಿದ್ದರೆ ಹೆಚ್ಚಿನ ಪ್ರಯೋಜನವೇನೂ ಇಲ್ಲ.