“ಎಲ್ಲರಿಗಾಗಿ ವೇದ”-1

“ಎಲ್ಲರಿಗಾಗಿ ವೇದ”-1

 

ವೇದದಲ್ಲಿ ಹೇಳಿರುವ ಸಂಧ್ಯೋಪಾಸನೆ ಬಗ್ಗೆ ಬರೆಯಬೇಕಾಗಿದೆ, ಆದರೆ ಸಂಧ್ಯೋಪಾಸನೆ ಎಂದೊಡನೆ “ಇದು ಜನಿವಾರ ಹಾಕಿಕೊಂಡಿರುವ ಹಿಂದು ಸಮಾಜದ ಒಂದು ವರ್ಗಕ್ಕೆ” ಎಂಬ ಭಾವನೆ ಬರುವುದು ಸಹಜ. ಕಾರಣ ಅದೆಷ್ಟೋ ಶತಮಾನಗಳಿಂದ ಹಿಂದು ಸಮಾಜದಲ್ಲಿ ಜಾತಿ ಪದ್ದತಿ ರೂಢಿಯಲ್ಲಿ ಬಂದು ಬಿಟ್ಟಿದೆ.ಅದು ಹೇಗೆ ಬಂತೋ,ಅದರ ಬಗ್ಗೆ ನಾನು ತಲೆಕೆಡಸಿಕೊಳ್ಳಲಾರೆ. ಆದರೆ ಒಂದು ಮಾತು ಸತ್ಯ.ವೇದದಲ್ಲಿ ಜಾತಿಯ ತಾರತಮ್ಯವಿಲ್ಲ. ವೇದವು ಮನುಕುಲದ ಅಭ್ಯುದಯಕ್ಕಾಗಿ ಎಂದು ವೇದವು ಸಾರಿ ಸಾರಿ ಹೇಳುತ್ತಿದೆ.ಆದರೆ ಕಳೆದ ಮೂರ್ನಾಲ್ಕು ಶತಮಾನಗಳ ಚರಿತ್ರೆಯನ್ನು ಅವಲೋಕಿಸಿದರೆ ಭಾರತದಲ್ಲಿ ಜಾತಿ ಪದ್ದತಿ ಬಲು ಗಟ್ಟಿಯಾಗಿ ಬೇರು ಬಿಟ್ಟಿರುವುದು ನಿಜ. ಮೇಲು-ಕೀಳು ಭಾವನೆಯು ಹಿಂದುಸಮಾಜದಲ್ಲಿ ದೊಡ್ದ ರಾದ್ಧಾಂತವನ್ನೇ ಮಾಡಿಬಿಟ್ಟಿದೆ. ಇದರಿಂದಾಗಿ ಹಿಂದುಸಮಾಜವು ನೂರಾರು ಜಾತಿಗಳಲ್ಲಿ ಹರಿದುಹಂಚಿಹೋಗಿರುವುದು ಸುಳ್ಳಲ್ಲ. ಜಾತಿ ವ್ಯವಸ್ಥೆ ಬಂದ ಪರಿಣಾಮ ಸ್ಪೃಶ್ಯ-ಅಸ್ಪೃಶ್ಯ ಭಾವನೆ, ಜಾತಿಯಕೇರಿಗಳು, ನಡವಳಿಕೆ, ಆಹಾರಪದ್ದತಿ ಎಲ್ಲವೂ ವೆತ್ಯಾಸವಾಗಿ ವೇದಧರ್ಮವು ನಶಿಸಿರುವ ಚಿತ್ರಣ ನಮ್ಮ ಕಣ್ ಮುಂದಿದೆ.ಶ್ರೀಮಂತರು ಮತ್ತು ಮೇಲ್ವರ್ಗದವರು ಬಡವರನ್ನು ಹಿಂದುಳಿದವರನ್ನು  ಅಮಾನುಶವಾಗಿ ನಡೆಸಿಕೊಂಡಿರುವುದು ವೈದಿಕ ಧರ್ಮದ ಅವನತಿಯ ಕನ್ನಡಿಯಾಗಿದೆ.ಈ ಎಲ್ಲಾ ಸತ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡೇ ನಿಜವಾದ ವೇದಧರ್ಮದ ಬಗ್ಗೆ ವಿಚಾರ ಮಾಡೋಣ. ವೇದದಲ್ಲಿ ಮಾನವರೆಲ್ಲರೂ ಸಮಾನರೆಂದು ಸಾರಿ ಸಾರಿ ಹೇಳಿದೆ. ಆ ಮಂತ್ರಗಳ ಬಗ್ಗೆಯೂ ವಿಚಾರ ಮಾಡೋಣ.ವರ್ಣಾಶ್ರಮದ ಬಗ್ಗೆ ವಿವರಿಸಲಾಗಿದೆ. ಅದರ ಬಗ್ಗೆಯೂ ವಿಚಾರ ಮಾಡೋಣ. ವರ್ಣಾಶ್ರಮವೆಂದೊಡನೆ ಬ್ರಾಹ್ಮಣ-ಶೂದ್ರ ಪದಗಳ ಪ್ರಯೋಗವನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ವಾಗ್ರಹದಿಂದ ಯೋಚಿಸಬಾರದೆಂದು ಮನವಿ ಮಾಡುತ್ತಾ ಮುಂದಿನ ವಿಚಾರಗಳಲ್ಲಿ ಓದುಗರಿಗೆ ಒಪ್ಪಿಗೆ ಇಲ್ಲದಿದ್ದರೆ ಸಕಾರಣವಾಗಿ “ನಾನು ಇದನ್ನು ಒಪ್ಪಲಾರೆ,ಎಂದು ತಿಳಿಸಬಹುದು” ಶ್ರೀ ದಯಾನಂದ ಸರಸ್ವತಿಗಳು ಬರೆದಿರುವ ವೇದಭಾಷ್ಯದ ಆಧಾರದಲ್ಲಿ ಇನ್ನು ಮುಂದೆ ಕೆಲವು ವಿಚಾರಗಳನ್ನು ಹೇಳುತ್ತಾ ಮುಂದುವರೆಯುವೆ.

ಋಗ್ವೇದದ ಒಂದು ಮಂತ್ರ ಹೀಗಿದೆ?

 

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋಮಧ್ಯಮಾಸೋ ಮಹಸಾ ವಿ ವಾವೃಧು: |

ಸುಜಾತಾಸೋ ಜನುಷಾ ಪೃಷ್ನಿಮಾತರೋ ದಿವೋ ಮರ್ಯಾ ಆ ನೋ ಅಚ್ಚಾ ಜಿಗಾತನ ||

[ಋಕ್ ೫.೫೯.೬]

ಅರ್ಥ:-

ಅಜ್ಯೇಷ್ಠಾ: = ಹಿರಿತನವಿಲ್ಲ

ಅಕನಿಷ್ಠಾಸ = ಕನಿಷ್ಠರಲ್ಲ

ಅದ್ಭಿದ: = ಭೂಮಿಯನ್ನು ಸೀಳಿ ಮೇಲೆ ಬಂದವರು

ಅಮಧ್ಯಮಾಸ: = ಮಧ್ಯಮರೂ ಅಲ್ಲ

ಜನುಷಾ = ಹುಟ್ಟಿದಾಗಿನಿಂದಲೂ

ಸುಜಾತಾಸ: = ಉತ್ತಮರು

ಪೃಶ್ನೀಮಾತರ: = ಭೂತಾಯಿಯ ಮಕ್ಕಳು

ದಿವ: =ಇಚ್ಚೆ ಮಾಡುವವರೂ

ಮರ್ಯಾ: = ಮನುಷ್ಯರು

ಸಹಸಾ = ಬಲದಿಂದ

ವಿ ವಾವೃಧು: = ಅತಿಶಯ ವೃದ್ಧಿಹೊಂದುವರು

ತೇ = ಅವರು

ನ: = ನಮ್ಮ

ಅಚ್ಚಾ = ಉತ್ತಮರೀತಿಯಿಂದ

ಆ,  ಜಿಗಾತನ = ಗುಣಗಾನ ಮಾಡುವರು

ಭಾವಾರ್ಥ:-

ಮನುಷ್ಯರಲ್ಲಿ ಯಾರೂ ದೊಡ್ದವರೂ ಅಲ್ಲ, ಚಿಕ್ಕವರೂ ಅಲ್ಲ, ಮಧ್ಯಮರೂ ಅಲ್ಲ.ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು. ಭೂಮಿಯನ್ನು ಸೀಳಿ ಮೇಲೆ ಬಂದ ಇವರು ಭೂತಾಯಿಯ ಮಕ್ಕಳು.ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು.

ಈ ಮಂತ್ರದಲ್ಲಿ ವೇದವು ಎಲ್ಲಾ ಮನುಷ್ಯರನ್ನೂ ಸಮಾನರೆಂದು ಸ್ಪಷ್ಟವಾದ ಪದಗಳಲ್ಲಿ ಹೇಳಿದೆ “ಹುಟ್ಟಿನಿಂದ ಎಲ್ಲರೂ ಉತ್ತಮರೇ, ಅವರ ಗುಣ ಸ್ವಭಾವ, ನಡವಳಿಕೆಯಿಂದ ಏಳಿಗೆಹೊಂದಬಲ್ಲರು” ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಎಂದು ವೇದವು ಸಾರಿ ಹೇಳುತ್ತದೆ.ಮುಂದಿನ ಮಂತ್ರವನ್ನು ನೋಡೋಣ.

ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧು: ಸೌಭಗಾಯ|

ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುದ್ಭ್ಯ: ||

[ಋಕ್ ೫.೬೦.೫]

ಅರ್ಥ:-

ಸ್ವಪಾ: = ಶ್ರೇಷ್ಠ ಕರ್ಮಠನು

ಯುವಾ = ಯುವಕನು

ರುದ್ರ: = ಅನ್ಯರನ್ನು ರೋದಿಸುವವನು

ಪಿತಾ = ಪಾಲನೆ ಮಾಡುವವನು

ಏಷಾಂ = ಈ ಎಲ್ಲರ

ಸುದುಘಾ = ಇಷ್ಟಾರ್ಥ ಪೂರ್ಣಗೊಳಿಸುವವಳು

ಸುದಿನಾ = ಉತ್ತಮ ದಿನದಿಂದ

ಪೃಶ್ನಿ: = ವಿಶಾಲ ಬುದ್ಧಿಯ ಭೂಮಾತೆ

ಮರುದ್ಭ್ಯ: = ಮನುಶ್ಯರಿಗೆ 

ಅಜ್ಯೇಷ್ಠಾ: = ಹಿರಿತನವಿಲ್ಲದೇ

ಅಕನಿಷ್ಠಾಸ: = ಕಿರಿತನವಿಲ್ಲದೇ

ಏತೇ = ಇವರೆಲ್ಲರೂ

ಭ್ರಾತರ: = ಸೋದರರು

ಸೌಭಗಾಯ = ಸೌಭಾಗ್ಯಪ್ರಾಪ್ತಿಗಾಗಿ

ಸಂ ವಾವೃಧು: = ಚೆನ್ನಾಗಿ ಪ್ರಯತ್ನಿಸುವರು

ಭಾವಾರ್ಥ:-

ಯಾವ ಮನುಷ್ಯನು ಬಾಲ್ಯ ಮತ್ತು ಕೌಮಾರ್ಯಗಳಲ್ಲಿ ವಿದ್ಯಾರ್ಜನೆ ಮಾಡಿಕೊಂಡು ಉತ್ತಮ ಗುಣಕರ್ಮ ಸ್ವಭಾವವನ್ನು ಅಳವಡಿಸಿಕೊಂಡು ಉತ್ತಮ ಗುಣವತೀ ಕನ್ಯೆಯೊಡನೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಕರ್ಮಾನುಷ್ಠಾನದಲ್ಲಿ ತೊಡಗುತ್ತಾನೋ ಅವನು ಐಶ್ವರ್ಯವನ್ನೂ ಆನಂದವನ್ನೂ ಅನುಭವಿಸುತ್ತಾನೆ.ಇವರಲ್ಲಿ ದೊಡ್ದವ ಚಿಕ್ಕವ ಎಂಬ ಭೇದವಿಲ್ಲ, ಇವರೆಲ್ಲರೂ ಸೋದರರು.

ಇವೆರಡೂ ಮಂತ್ರಗಳು ಒಂದು ವಿಚಾರವನ್ನಂತೂ ಸ್ಪಷ್ಟಪಡಿಸುತ್ತವೆ. ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ. ಎಲ್ಲರೂ   ಭೂತಾಯಿಯ ಮಕ್ಕಳಾದ ಮೇಲೆ, ಪರಸ್ಪರ ಸೋದರರು. ಯಾರೂ ದೊಡ್ಡವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ. ಆದರೆ ತಮ್ಮ ತಮ್ಮ ಗುಣ ಸ್ವಭಾವದಿಂದ ನಡವಳಿಕೆಯಿಂದ ಯಾರು ಬೇಕಾದರೂ ಏಳಿಗೆಯನ್ನು ಹೊಂದಬಹುದು. ವೇದದ ಕರೆ ಹೀಗಿರುವಾಗ  ಮನುಷ್ಯರಲ್ಲಿ ಮೇಲು-ಕೀಳು ಭವನೆ ವೇದ ವಿರೋಧಿಯಷ್ಟೇ ಅಲ್ಲ, ಅದು ಮನುಷ್ಯತ್ವದ ವಿರೋಧಿಯೂ ಕೂಡ.

ಅಥರ್ವ ವೇದದ ಒಂದು ಮಂತ್ರವನ್ನು ನೋಡೋಣ.

ಸಮಾನೋ ಮಂತ್ರ: ಸಮಿತಿ: ಸಮಾನೀ

ಸಮಾನಂ ವ್ರತಂ ಸಹಚಿತ್ತಮೇಷಾಮ್

ಸಮಾನೇನ ವೋ ಹವಿಷಾ ಜುಹೋಮಿ

ಸಮಾನಂ ಚೇತೋ ಅಭಿಸಂವಿಶಧ್ವಮ್ ||

[ಅಥರ್ವ ೬.೬೪.೨]

ಅರ್ಥ:-

ಮಂತ್ರ: ಸಮಾನ: = ಮಂತ್ರವು ಸಮಾನವಾಗಿರಲಿ

ಸಮಿತಿ ಸಮಾನೀ = ಸಮಿತಿಯು ಸಮಾನವಾಗಿರಲಿ

ವ್ರತಮ್ ಸಮಾನಮ್ = ವ್ರತವೂ ಸಮಾನವಾಗಿರಲಿ

ಏಷಾ ಚಿತ್ತಂ ಸಹ = ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ

ವ: = ನಿಮ್ಮೆಲ್ಲರಿಗೂ

ಸಮಾನೇನ ಹವಿಷಾ = ಸಮಾನವಾದ ಖಾದ್ಯ ಪೇಯಗಳನ್ನೇ

ಜುಹೋಮಿ = ದಾನಮಾಡುತ್ತೇನೆ

ಸಮಾನಂ ಚೇತ: = ಸಮಾನವಾದ ಚೈತನ್ಯದಲ್ಲಿಯೇ

ಅಭಿ ಸಂ ವಿಶಧ್ವಂ = ಎಲ್ಲೆಡೆಯಿಂದಲೂ ಪ್ರವೇಶಿಸಿರಿ

 

ಭಾವಾರ್ಥ :-

ನಿಮ್ಮೆಲ್ಲರ ಮಂತ್ರವು ಸಮಾನವಾಗಿರಲಿ, ನಿಮ್ಮ ಸಮಿತಿಯು ಸಮಾನವಾಗಿರಲಿ, ವ್ರತವೂ ಸಮಾನವಾಗಿರಲಿ,ನಿಮ್ಮೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ, ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯ ಪೇಯಗಳನ್ನೇ ದಾನಮಾಡುತ್ತೇನೆ.ಸಮಾನವಾದ ಚೈತನ್ಯದಿಂದ ಎಲ್ಲೆಡೆಯಿಂದಲೂ ಪ್ರವೇಶಿಸಿರಿ.ವೇದದಲ್ಲಿ ಪುನ: ಪುನ: ಹೇಳಿರುವ ಸಮಾನತೆಯ ಮಾತುಗಳನ್ನು ಗಮನಿಸಿದಾಗ ಭಗವಂತನೆದುರು ಎಲ್ಲರೂ ಸಮಾನರೆಂದು ಭಗವಂತನೇ ಸ್ವತ: ಹೇಳಿದ್ದರೂ ಇತ್ತೀಚೆಗೆ ರೂಢಿಗೆ ಬಂದ ತಾರತಮ್ಯದಿಂದಾಗಿ  ವೇದವನ್ನು ತಿಳಿಯದ ವಿಚಾರವಂತರೆನಿಸಿಕೊಂಡವರೂ ಕೂಡ ಸಮಾಜದಲ್ಲಿರುವ ತಾರತಮ್ಯಕ್ಕೆ ವೇದವನ್ನು ಹೊಣೆಮಾಡುವುದು ಅದೆಷ್ಟು ಸರಿ? ಎಂಬುದನ್ನು ಓದುಗರು ಗಮನಿಸಬೇಕು. ಈಗಲೂ ಸ್ಪೃಶ್ಯಾ-ಅಸ್ಪೃಶ್ಯ, ಮೇಲು-ಕೀಳು ತಾರತಮ್ಯ ಮಾಡುವವರನ್ನು ವೇದ ವಿರೋಧಿಗಳೆಂದು ಹೇಳದೆ ವಿಧಿಯಿಲ್ಲ.

Rating
No votes yet

Comments

Submitted by makara Thu, 05/23/2013 - 19:09

"ಬೆಟ್ಟದ ಬಳಿ ಒಬ್ಬನು ಹೋಗಲಾಗದಿದ್ದರೆ, ಬೆಟ್ಟವನ್ನೇ ಅವನ ಬಳಿ ತೆಗೆದುಕೊಂಡು ಬಂದಂತೆ" ವೇದವನ್ನು ಅರಿಯಲು ಎಲ್ಲರಿಂದಲೂ ಸಾಧ್ಯವಿಲ್ಲ ಆದ್ದರಿಂದ ಅವರ ಮಟ್ಟಕ್ಕೇ ವೇದವನ್ನು ವಿವರಿಸುವ ಉತ್ತಮ ಪ್ರಯತ್ನ ಇದಾಗಿದೆ. ನಿಮ್ಮ ಈ ಕಾರ್ಯವು ಸ್ತುತ್ಯಾರ್ಹವಾಗಿದೆ ಶ್ರೀಧರ್ ಸರ್. ಇದನ್ನು ಸಂಪದದಲ್ಲಿ ಪ್ರಕಟಿಸಿ ಹೆಚ್ಚಿನ ಓದುಗರು ಇದರ ಪ್ರಯೋಜನ ಪಡೆಯುವಂತೆ ಮಾಡುತ್ತಿದ್ದೀರ. ಅದಕ್ಕಾಗಿ ಸಂಪದಿಗರೆಲ್ಲರ ಪರವಾಗಿ ನಿಮಗೆ ನನ್ನ ಧನ್ಯವಾದಗಳು.

Submitted by hariharapurasridhar Thu, 05/23/2013 - 19:54

In reply to by makara

ನಿಜಸಂಗತಿ ಎಂದರೆ ಈಗಾಗಲೇ ಕಳೆದ 28ವಾರಗಳಿಂದ ಪ್ರತೀ ಭಾನುವಾರ ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ "ಎಲ್ಲರಿಗಾಗಿ ವೇದ " ಕಾಲಂ ಅಡಿಯಲ್ಲಿ 28 ಲೇಖನ ಪ್ರಕಟವಾಗಿದೆ. ಸಂಪದದಲ್ಲಿ ಜೊತೆ ಜೊತೆಗೇ ಪ್ರಕಟಿಸಬಹುದಿತ್ತು. ನನ್ನ ಹಿಂದಿನ ಅನುಭವಗಳಿಂದ ಸ್ವಲ್ಪ ಅನುಮಾನಿಸಿದೆ. ಇನ್ನು ಮುಂದಿನ ಲೇಖನಗಳನ್ನು ಇಲ್ಲೂ ಪ್ರಕಟ ಮಾಡುವ ಧೈರ್ಯ ಮಾಡುವೆ. ಇದರ ಹಿಂದಿನ ಲೆಖನಗಳನ್ನು http://janamitra.epapertoday.com/ ಕೊಂಡಿಯಲ್ಲಿ ನೋಡಬಹುದು. ಈ ಕೊಂದಿ ತೆರೆದಾಗ ಅಲ್ಲಿರುವ ಕ್ಯಾಲೆಂಡರ್ ನಲ್ಲಿ ಹಿಂದಿನ ಭಾನುವಾರಗಳನ್ನು ಕ್ಲಿಕ್ಕಿಸಿ ತೆರೆಯುವ ಪತ್ರಿಕೆಯಲ್ಲಿ 3ನೇ ಪುಟ ಕ್ಲಿಕ್ಕಿಸಿದರೆ ಲೇಖನ ಲಭ್ಯ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

Submitted by ಗಣೇಶ Fri, 05/24/2013 - 00:37

ಹರಿಹರಪುರಶ್ರೀಧರ್ ಅವರೆ, ನಿಮ್ಮ ಆಶಯವೇನೋ ಉತ್ತಮವೇ. ಕೆಲವೊಂದು ಡೌಟು->>ಅ?ದ್ಭಿದ: = ಭೂಮಿಯನ್ನು ಸೀಳಿ ಮೇಲೆ ಬಂದವರು! ಭೂಮಿಯನ್ನು ಸೀಳಿ ಮೇಲೆ ಬಂದವು ಗಿಡ ಮರಗಳು. ಮನುಷ್ಯರಲ್ಲ. ಬೇರೇನಾದರೂ ಅರ್ಥವಿರಬಹುದೇ?>>ಈಗಲೂ ಸ್ಪೃಶ್ಯಾ-ಅಸ್ಪೃಶ್ಯ, ಮೇಲು-ಕೀಳು ತಾರತಮ್ಯ ಮಾಡುವವರನ್ನು ವೇದ ವಿರೋಧಿಗಳೆಂದು ಹೇಳದೆ ವಿಧಿಯಿಲ್ಲ.-ಬ್ರಾಹ್ಮಣರಲ್ಲೇ ಈ ಮೇಲು ಕೀಳು ತಾರತಮ್ಯ ಜಾಸ್ತಿ ಇರುವುದು ಎಂದಲ್ಲವೇ ಗಲಾಟೆ. ವೇದ ಪಾರಂಗತರೂ ಅವರೇ..ವೇದ ವಿರೋಧಿಗಳೂ ಅವರೇ.:)

Submitted by hariharapurasridhar Sat, 05/25/2013 - 07:50

In reply to by ಗಣೇಶ

ಗಣೇಶ್ ಅವರೇ,
ನಿಮ್ಮ ಎಂದಿನಂತಿನ ಡೌಟಿಗೆ ನಿಮ್ಮಲ್ಲೇ ಉತ್ತರವಿದೆ, ಎಂದು ನನಗೆ ಅರಿವಿದೆ. ಎಲ್ಲಾ ಮಾತಿಗೂ ಭಾವಾರ್ಥ ಹುಡುಕದೆ ಪದಕ್ಕೆ ಅರ್ಥ ನೋಡಿದಾಗ ವಿಷಯದ ಭಾವ ಅರ್ಥವಾಗಲು ಸಾಧ್ಯವಿಲ್ಲ. ಇನ್ನು ಇಂದು ಪ್ರಚಲಿತ ವಿರುವ ಜಾತಿ ಬ್ರಾಹ್ಮಣ ವರ್ಗದ ಬಗ್ಗೆ ಇಲ್ಲಿ ನಾನು ಚರ್ಚೆ ಮಾಡುತ್ತಿಲ್ಲ. ಹಾಗೆ ನೋಡಿದರೆ ಈಗ ಪ್ರಚಲಿತವಿರುವ ಎಲ್ಲಾ ಜಾತಿಗಳಲ್ಲೂ ಹಲವು ದೋಷಗಳೂ,ಹಲವು ಉತ್ತಮ ಅಂಶಗಳೂ ಇದ್ದೇ ಇವೆ. ಮತ್ತೊಮ್ಮೆ ತಿಳಿಸ ಬಯಸುವೆ. ವೈದ್ಯನ ಮಗ ವೈದ್ಯನಾಗಬೇಕಾದರೆ ಅವನು MBBS ಓದಲೇ ಬೇಕು. ಇಂದಿನ ದಿನಗಳಲ್ಲಿ ವೇದವನ್ನು ಓದಿ ಪಾಂಡಿತ್ಯ ಪಡೆದವರಿಗಿಂತಲೂ ವೇದದ ಆಶಯದಲ್ಲಿ ನಡೆಯುವ ಬಹಳ ಜನರಿದ್ದಾರೆ. ಅವರ ಹೆಸರಿನ ಮುಂದೆ ವೇ.ಬ್ರ.ಶ್ರೀ ...ಮುಂತಾದ ಬಿರುದುಗಳಿಲ್ಲ. ದಯಮಾಡಿ ಬರಹದ ಆಶಯವನ್ನು ಅರ್ಥಮಾಡಿಕೊಂಡು ಆಸಕ್ತಿಯೇ ಇದ್ದರೆ ಕೊಟ್ಟಿರುವ ಕೊಂಡಿಯಲ್ಲಿ ನನ್ನ ಹಿಂದಿನ 28 ಲೇಖನಗಳನ್ನು ಓದಿದರೆ ನನ್ನ ಪ್ರಯತ್ನ ಏನೂ, ಎಂದು ಅರ್ಥವಾದೀತು.

Submitted by ಗಣೇಶ Mon, 05/27/2013 - 00:21

In reply to by hariharapurasridhar

ಹರಿಹರಪುರ ಶ್ರೀಧರ್ ಅವರೆ, >>ಎಲ್ಲಾ ಮಾತಿಗೂ ಭಾವಾರ್ಥ ಹುಡುಕದೆ ಪದಕ್ಕೆ ಅರ್ಥ ನೋಡಿದಾಗ ವಿಷಯದ ಭಾವ ಅರ್ಥವಾಗಲು ಸಾಧ್ಯವಿಲ್ಲ--> ಭಾವಾರ್ಥ ನೋಡಲು ಇದು ಕವನವಲ್ಲ. ಇದು ವೇದ. ದೇವರಿಂದ ಬಂದುದು. ಪ್ರತೀ ಶಬ್ದ ಶಬ್ದಕ್ಕೂ, ಅಕ್ಷರ ಅಕ್ಷರಕ್ಕೂ, ಅಲ್ಲಿ ಉಪಯೋಗಿಸಿದ ರೀತಿಗೂ ವಿಶೇಷ ಅರ್ಥವಿರಬಹುದು. ಲಲಿತಾ ಸಹಸ್ರನಾಮದಲ್ಲಿ ಶ್ರೀಧರ್‌ಜಿ ಅವರು ಒಂದು ಅಕ್ಷರ ತಪ್ಪಿದರೂ ತಿದ್ದಿ ಪುನಃ ಬರೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿರಬಹುದು. ತಮ್ಮ ಉದ್ದೇಶ, ಪ್ರಯತ್ನ ನನಗೆ ಅರ್ಥವಾಗಿದೆ. ನನ್ನಂತಹವರು ತಪ್ಪು ಹುಡುಕಲಾಗದಂತೆ ತಮ್ಮ ಲೇಖನ ಉತ್ತಮವಾಗಲಿ ಎಂಬುದು ನನ್ನ ಆಶಯ.

Submitted by hariharapurasridhar Mon, 05/27/2013 - 16:10

In reply to by ಗಣೇಶ

ನಿಮ್ಮ ಆಶಯ ಸರಿಯೆ. ಆದರೆ ನಾನು ತಪ್ಪು ಮಾಡಲಾರೆ ಎಂದು ಹೇಳುಲಾರೆ. ವೇದವನ್ನು ನನಗಿಂದ ಚೆನ್ನಾಗಿ ಬಲ್ಲವರು ಸರಳವಾಗಿ ಸತ್ಯವನ್ನು ಹೇಳಲು ಹೊರಟಿದ್ದರೆ ನಾನು ಕೇಳುತ್ತಿದ್ದೆ. ಆದರೆ ವೇದವನ್ನು ಚೆನ್ನಾಗಿ ಬಲ್ಲವರು ಸತ್ಯವನ್ನು ಬದಿಗಿರಿಸಿರುವುದರಿಂದ ನನ್ನಂತ ಸಾಮಾನ್ಯನು ಶಕ್ತಿಮೀರಿ ಪ್ರಯತ್ನ ಮಾಡಬೇಕಾಗಿ ಬಂದಿದೆ.

Submitted by ರಾಮಕುಮಾರ್ Mon, 05/27/2013 - 08:17

ಶ್ರೀ ಹರಿಹರಪುರ ಶ್ರೀಧರರವರೆ, ಎಲ್ಲರಿಗಾಗಿ ವೇದ ಅಂದಂತೆ ಎಲ್ಲರಿಗಾಗಿ ಮಂಟೆಸ್ವಾಮಿ ಕಾವ್ಯ, ಪಾಡ್ದನ,ವಚನ, ಜುಂಜಪ್ಪ ಜನಪದಮಹಾಕಾವ್ಯ ಎಂದರೆ ಒಪ್ಪಲು ರೆಡಿಯಿದ್ದೀರ?

Submitted by kavinagaraj Tue, 05/28/2013 - 14:35

In reply to by ರಾಮಕುಮಾರ್

ಎಲ್ಲರಿಗಾಗಿ ಎಂದು ಹೇಳುವ ಒಳ್ಳೆಯ ಮಾತುಗಳನ್ನು ಯಾರು ಹೇಳಿದರೂ ಕೇಳಿದರೆ ತಪ್ಪಿಲ್ಲ. ಅದನ್ನು ಮಂಟೆಸ್ವಾಮಿ, ಕನಕ, ಕಬೀರ, ಶಿಶುನಾಳ ಷರೀಫ, ಬಸವಣ್ಣ, ಶಂಕರರಷ್ಟೇ ಅಲ್ಲ, ಸಾಮಾನ್ಯರಲ್ಲಿ ಸಾಮಾನ್ಯರೆನಿಸಿದರೂ ಹೇಳಿರಲಿ!! ಒಪ್ಪುವುದು, ಕೇಳುವುದು, ಕೇಳದಿರುವುದು,. . . ಅವರವರಿಗೆ ಬಿಟ್ಟರಾಯಿತು.