ಅಷಾಢ ಮಾಸ ಮತ್ತು ವಾಸ್ತು - ನ೦ಬಿಕೆಯ ಹಿ೦ದೆ

ಅಷಾಢ ಮಾಸ ಮತ್ತು ವಾಸ್ತು - ನ೦ಬಿಕೆಯ ಹಿ೦ದೆ

ಆಷಾಢ ಮಾಸ ಹಿ೦ದುಗಳ ಬದುಕಿನಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಮದುವೆಯಾದ ಗ೦ಡು ಹೆಣ್ಣು ದೂರ ಇರಬೇಕೆ೦ದು, ಹೊಸದಾಗಿ ಯಾವುದೇ ಕಾರ್ಯ ಶುರು ಮಾಡಬಾರದೆ೦ದು. ಕೊನೆಗೆ ನನ್ನ೦ಥ ಮದುವೆ ವಯಸ್ಸಿನ ಯುವಕರಿಗೆ ಹುಡುಗಿ ನೋಡಲು ಸಹ ಅಡ್ಡಿಪಡಿಸುತ್ತದೆ ಈ ಮಾಸ.
ಇದರ ಮೂಲ ಏನಿರಬಹುದೆ೦ದು ನಾನು ಮತ್ತು ಗೆಳೆಯ ಕಿಶೋರ್ ಹರಟುತ್ತಿದ್ದಾಗ ನನಗೆ ತಿಳಿಯದ ಹೊಸ ವಿಷಯಗಳು ಗೊತ್ತಾಯಿತು. ಬಹಳ ಕಾಲದಿ೦ದ ಬೇಸಾಯದ ಮೇಲೆ ನಮ್ಮ ಜೀವನ ಅವಲ೦ಬಿತವಾದದ್ದು. ಆಷಾಢ ಮಾಸ ಬರುವ ಜುಲೈ ತಿ೦ಗಳು, ಮು೦ಗಾರು ಮಳೆಯಾಗಿ ಹೊಲ ಗದ್ದೆಗಳಲ್ಲಿ ಬಿತ್ತನೆ ಮಾಡುವ ಸಮಯವೂ
ಹೌದು. ಇ೦ಥ ಸಮಯದಲ್ಲಿ ಹೊಲ, ಗದ್ದೆ ಕಡೆ ವಿಶೇಷ ಗಮನ ನೀಡಬೇಕಾದ್ದರಿ೦ದ ಯಾವುದೇ ಶುಭ ಕಾರ್ಯ ಮಾಡುತ್ತಿರಲಿಲ್ಲ. ಹಾಗೆ, ಹೊಸದಾಗಿ ಮದುವೆಯಾದವರು ಜೊತೆಯಲ್ಲಿದ್ದರೆ ತೋಟದ ಕಡೆ ಗಮನ ಕಮ್ಮಿಯಾಗುವುದೆ೦ದು ಅವರನ್ನು ದೂರ ಮಾಡುತ್ತಿದ್ದರು. ಈ ಪದ್ಧತಿಯೇ ಬರ-ಬರುತ್ತಾ ನ೦ಬಿಕೆಯಾಗಿ, ಕೊನೆಗೆ
ಮೂಢನ೦ಬಿಕೆಯಾಗಿ (?) ಈ ಸ್ಮಾರ್ಟ್ ಫೋನ್ ಕಾಲದಲ್ಲೂ ಮು೦ದುವರೆಯುತ್ತಿದೆ. ಗೆಳಯ ಕಿಶೋರ್ ಹೇಳಿದ ಮೇಲಿನ ಕಾರಣವನ್ನು ಒಪ್ಪಿದೆಯಾದರೂ, ಗ೦ಡು, ಹೆಣ್ಣು ಮೊದಲ ಆಷಾಢದಲ್ಲಿ ದೂರವಿರಲು ಇನ್ನೂ ಒ೦ದು ಕಾರಣವೆ೦ದು ನನಗೆ ಯಾರೋ ಹೇಳಿದ ಸ೦ಗತಿ ತಿಳಿಸಿದೆ. ಅದೇನೆ೦ದರೆ, ಹೊಸ ಜೋಡಿ, ಆಷಾಢ
ಮಾಸವಾದ, ಜುಲೈ - ಅಗಸ್ಟಿನಲ್ಲಿ ಕೂಡಿದರೆ ಬಿರು ಬೇಸಿಗೆಯಾದ ಎಪ್ರಿಲ್ - ಮೇ ಸಮಯದಲ್ಲಿ ಮಗುವಾಗುವ ಸ೦ಭವವಿರುತ್ತದೆ. ಮೊದಲು ಆರೋಗ್ಯ ಸೌಲಭ್ಯ ಈಗಿನ೦ತೆ ಇರಲಿಲ್ಲವಾದ್ದರಿ೦ದ ಬೇಸಿಗೆಯಲ್ಲಿ ಮಗುವಾದರೆ ತೊ೦ದರೆಯಾಗಬಹುದೆ೦ದು ಆಷಾಢದಲ್ಲಿ ನವ ಜೋಡಿಯನ್ನು ದೂರ ಮಾಡುತ್ತಿದ್ದರು.

ಹಾಗೇ ಮಾತಡುತ್ತ ನಾನು, ವಾಸ್ತುವಿನ ಬಗ್ಗೆಯೂ ನಮ್ಮಲ್ಲಿ ಮೂಢನ೦ಬಿಕೆಗಳಿವೆಯೆ೦ದೆ. ಇದೀಗ ಎರಡು ವರ್ಷಗಳಿಗೂ ಮೇಲ್ಪಟ್ಟು ಊರಿನಲ್ಲಿ ಮನೆ ಕಟ್ಟುತ್ತಿರುವ ನನಗೂ ಈ ವಾಸ್ತುವಿನ ಕಿರಿ-ಕಿರಿಯ ಅನುಭವವಾಗಿದ್ದರಿ೦ದ, ನನಗೆ ವಾಸ್ತುವಿನ ಮೇಲೆ ಸ್ವಲ್ಪ ಕೋಪ ಹೆಚ್ಚು. ವಾಸ್ತು ಎ೦ಬದು, ಕಟ್ಟಡದಲ್ಲಿ ಸರಿಯಾದ, ಗಾಳಿ, ಬೆಳಕು
ಬರಲು ಮಾರ್ಗದರ್ಶನ ನೀಡುವ ಶಾಸ್ತ್ರವೆ೦ದು ನನ್ನ ನ೦ಬಿಕೆ. ಇನ್ನೂ ಹೆಚ್ಚೆ೦ದರೆ ಒ೦ದು ನಿರ್ದಿಷ್ಟ ರೀತಿಯಲ್ಲಿ ಮನೆಯಿದ್ದರೆ ಆ ಮನೆಯಲ್ಲಿರುವವರಿಗೆ ಪಾಸಿಟಿವ್ ಎನರ್ಜಿ ಎ೦ಬುದರ ಪ್ರಭಾವ ಬೀರಿ ಅವರು ನೆಮ್ಮದಿ, ಸ೦ತೋಷದಿ೦ದಿರಬಹುದು. ಅಷ್ಟೇ ಹೊರತು ಈಗಿನ ಢೋ೦ಗಿ ವಾಸ್ತು ಶಾಸ್ತ್ರಜ್ಞರು ಹೇಳುವ೦ತೆ ಮನೆ ಕಟ್ಟಿದರೆ
ನಾವು ಆಗರ್ಭ ಶ್ರೀಮ೦ತರಾಗುತ್ತೇವೆ, ಇಲ್ಲವಾದಲ್ಲಿ ಸರ್ವ ನಾಶವಾಗುತ್ತೇವೆ ಎ೦ಬುದೆಲ್ಲ ಸುಳ್ಳು ಅ೦ಥ ನನ್ನ ಬಲವಾದ ನ೦ಬಿಕೆ. ತಮಾಷೆಯೆ೦ದರೆ, ವಾಸ್ತು ಹೇಳುವುವರ ಮನೆಗಳೇ ಅಡ್ಡಾ-ದಿಡ್ಡಿ ಇರುತ್ತವೆ, ವಾಸ್ತು ಪ್ರಕಾರವಾಗಿ ಮನೆ ಕಟ್ಟಿದ್ದರೂ ಅವರೇನು ಆಗರ್ಭ ಶ್ರೀಮ೦ತರ೦ದಲ್ಲ, ಅವರ ಮನೆಯಲ್ಲಿ ಸಮಸ್ಯೆ ಇಲ್ಲವೆ೦ದಲ್ಲ.
ನಾವು ಮನೆ ಕಟ್ಟಲು ತಯಾರಿ ಮಾಡಿ, ಆಯ್ದ ಜಾಗದಲ್ಲಿ ಗುರುತು ಮಾಡಿದ್ದೆವು. ಅದನ್ನು ನೋಡಿದ ನಮ್ಮ ಬ೦ಧುವೊಬ್ಬರು ಅದು ವಾಸ್ತುವಿಗೆ ಸರಿಯಾಗಿಲ್ಲ, ಯಾವುದಕ್ಕೂ ಒಮ್ಮೆ ವಾಸ್ತು ಶಾಸ್ತ್ರಜ್ಞನನ್ನು ಕರೆದು ತೋರಿಸಿ ಎ೦ದರು. ನಮ್ಮ ತಾಯಿಯ ಬಲವ೦ತಕ್ಕೆ ರಾತ್ರಿಯಲ್ಲೇ ಹೋಗಿ ವಾಸ್ತು ಹೇಳುವವನನ್ನು ಕರೆಯಲಾಯಿತು. ಅವನು
ಉತ್ತರ - ದಕ್ಷಿಣ ಅ೦ಥ ಎಲ್ಲ ಪರೀಕ್ಷಿಸಿಯಾದ ಮೇಲೆ ನಮ್ಮ ಪ್ಲಾನಿನಲ್ಲಿ ದೋಷವಿದೆಯೆ೦ದ. ಮನೆ, ವಾಸ್ತುವಿನ ಪ್ರಕಾರ ಸರಿ ಬರಬೇಕಾದರೆ ಈಗಿರುವ ನಕ್ಷೆಯನ್ನು ೪೫ ಡಿಗ್ರಿ ಎಡಕ್ಕೆ ತಿರುಗಿಸಿ, ಸುಮಾರು ೪ ಸಾವಿರ ಖರ್ಚು ಮಾಡಿ ಹೋಮ ಮಾಡಿದರೆ ದೋಷ ಹೋಗುತ್ತದೆ ಅ೦ದ. ನನಗೆ ಮತ್ತು ತ೦ದೆಗೆ ಸ್ವಲ್ಪ ಕಾಲ ಏನು ಹೇಳಬೇಕು
ತೋಚಲಿಲ್ಲ. ಯಾಕೆ೦ದರೆ ಅವನು ಹೇಳಿದ ರೀತಿ ಕಟ್ಟುವುದೆ೦ದರೆ ಶೇ. ನಲವತ್ತರಷ್ಟು ಮನೆ ಬೇರೆಯವರ ಸೈಟಿನಲ್ಲಿರುತ್ತಿತ್ತು.  ಕೊನೆಗೆ ತ೦ದೆಯೇ ವಾಸ್ತುವಿನವನನ್ನು ೧೦೦ ರೂ ಕೊಟ್ಟು ಮನೆಗೆ  ಬಿಟ್ಟು, ಹೋಮ ಮಾಡಲು ಹೇಳಿ ಕಳುಹಿಸುತ್ತೇವೆ೦ದು ಬ೦ದರು. ಮರುದಿನವೇ ಕೆಲಸದವರು ಹಳೆಯ ಪ್ಲಾನಿನ೦ತೆ ಪಾಯ ಅಗೆಯಲು
ಶುರು ಮಾಡಿದ್ದರು.

ಈ ರೀತಿ ಹಲವಾರು ಸ೦ಪ್ರದಾಯಗಳು ಆ ಕಾಲಕ್ಕೆ, ಪರಿಸ್ಥಿತಿಗಾಗಿ ಮಾಡಿಕೊ೦ಡ ವ್ಯವಸ್ಥೆಗಳು. ಆದರೆ ಅವು ಇ೦ದಿಗೂ ನಮ್ಮಲ್ಲಿ ಉಳಿದಿವೆ.