ನಲವತ್ತೇಳು - ನೆಲಬಿಟ್ಟೇಳು - ನೆಲ ಉತ್ತೇಳು !

ನಲವತ್ತೇಳು - ನೆಲಬಿಟ್ಟೇಳು - ನೆಲ ಉತ್ತೇಳು !

 

ಸಾಕಾಗಿತ್ತು ಬ್ರಿಟಿಷರಿಂದ ನಿತ್ಯಗೋಳು

ಕೊಗೆದ್ದಿತ್ತು ’ಬಿಳಿಯನೇ ನೆಲ ಬಿಟ್ಟೇಳು’

ಮೂಡಿತ್ತು ಆಗಸ್ಟ್ ಹದಿನೈದು ನಲವತ್ತೇಳು

ಓಡಿದ್ದನಂದು ಬಿಳಿಯ ಎಬ್ಬಿಸಿ ಧೂಳು

 

ಅಂದಿನಿಂದ ಕಳೆದಿರಲು ಒಂದೊಂದೇ ಸಂವತ್ಸರಗಳು

ಮತ್ತೆ ಭಾರತದಿ ಎದ್ದಿದೆ, ಇಳಿದಿದ್ದ ಬಿಳಿಯನ ಧೂಳು

ಅಧಿಕಾರಕ್ಕೇ ಲಗ್ಗೆ ಇಡುವಲ್ಲಿ ಹಾಕಿವೆ ದಾಪುಗಾಲು

ದೇಶ ನಲುಗುತಿದೆ ಮಗದೊಮ್ಮೆ ಆಡಿಸಲಾರದೆ ಕೈಕಾಲು

 

ದೇಶದ ಪ್ರಗತಿಗೆ ದುಡಿದಿವೆ ಹತ್ತು ಹಲವು ಸಂಘಗಳು

ಪ್ರತಿ ಮುನ್ನಡೆಗೂ ರಾಜಕಾರಣದ್ದೇ ಅಡ್ಡಿ ಆತಂಕಗಳು

ಉಳುವ ಕೈಗಳು ತೊರೆದು ಭೂಮಿಯ ಹೊತ್ತಿವೆ ಮರಳು

ಗದ್ದೆಗಳ ಮೇಲೆ ಬಿದ್ದಿಹುದು ಕಾಂಕ್ರೀಟಿನ ಕರಿ ನೆರಳು

 

ವರುಷಗಳು ಉರುಳಿವೆ ಅರವತ್ತೇಳು

ಸ್ವತಂತ್ರದ ಹೆಸರಲ್ಲಿ ಸ್ವಚ್ಚಂದಗಳು

ಜಾತಿಗಳಾಗಿವೆ ಮತಗಳ ಬ್ಯಾಂಕುಗಳು

ಕೇಳುವವರಿಲ್ಲ ಬಡವ ಹಸಿವಿನ ಗೋಳು

 

ನಗರೀಕರಣ ಕತ್ತರಿಸಿದೆ ಭೂತಾಯಿಯ ಕರುಳು

ಹಸಿರು ನುಂಗಿದೆ ಗಗನ ಚುಂಬಿಸೋ ಕಟ್ಟಡಗಳು

ಪ್ರಗತಿಯ ಹೆಸರಲ್ಲಿ ಎಲ್ಲೆಲ್ಲೂ ವಿದೇಶೀ ವಸ್ತುಗಳು

ಕೊಳ್ಳುವವರಿಲ್ಲದೆ ಸೊರಗಿದೆ ಸ್ವದೇಶೀ ಉತ್ಪನ್ನಗಳು

 

ಭೂತಾಯಿಯ ಸೇವೆಗಿಲ್ಲ ಆಳುಕಾಳು

ಅರಣ್ಯರೋದನ ಅಳಿದುಳಿದ ರೈತರ ಗೋಳು

’ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ನೀ ಕೇಳು

ಮಣ್ಣಿನ ಮಗನೇ ಇನ್ನಾದರೂ ನೆಲ ಉತ್ತು ಏಳು !

 

 

Comments

Submitted by BRS Thu, 08/22/2013 - 13:29

ಭಲ್ಲೆಯವರೆ ಪದ್ಯ ಚೆನ್ನಾಗಿದೆ. ನೀವೇಕೆ ಒಂದಷ್ಟು ಭೂಮಿ ಸಂಪಾದಿಸಿ ರೈತರಾಗಬಾರದು? ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ನೀ ಕೇಳು ಮಣ್ಣಿನ ಮಗನೇ ಇನ್ನಾದರೂ ನೆಲ ಉತ್ತು ಏಳು! ಕೇಳಲು ಚೆನ್ನಾಗಿದೆ!

ಧನ್ಯವಾದಗಳು ಸಾರ್ ... ಭೂಮಿ ಖರೀದಸಲು ಬಿಟ್ಟಿದ್ರೆ ತಾನೇ ರಾಜಕಾರಣಿಗಳು ಭೂಮಿಯನ್ನು? ಅಲ್ಲದೇ ಈ ಕರೆ ರೈತಾಪಿ ಮಕ್ಕಳಿಗೆ ... ನಮ್ಮದು ಸಾಹಿತ್ಯ ಕೃಷಿ ಮಾತ್ರ :-)
Submitted by venkatb83 Sat, 08/24/2013 - 16:31

"ವರುಷಗಳು ಉರುಳಿವೆ ಅರವತ್ತೇಳು ಸ್ವತಂತ್ರದ ಹೆಸರಲ್ಲಿ ಸ್ವಚ್ಚಂದಗಳು ಜಾತಿಗಳಾಗಿವೆ ಮತಗಳ ಬ್ಯಾಂಕುಗಳು ಕೇಳುವವರಿಲ್ಲ ಬಡವ ಹಸಿವಿನ ಗೋಳು" ;((( ಭಲ್ಲೆ ಅವರೇ ಗದ್ಯ ಅಲ್ಲದೇ ಪದ್ಯದಲ್ಲೂ ನೀವ್ ಸೂಪರ್ ಮಾರರೆ..! ’ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ನೀ ಕೇಳು >>>ನಿಜ‌... ಮಣ್ಣಿನ ಮಗನೇ ಇನ್ನಾದರೂ ನೆಲ ಉತ್ತು ಏಳು ! ಶ್ಹುಭವಾಗಲಿ \|