ಗಣೇಶ ಬಂದ..`ಸಕ್ಕರೆ' ತಂದ..!

ಗಣೇಶ ಬಂದ..`ಸಕ್ಕರೆ' ತಂದ..!

ಪ್ರೀತಿಯಲ್ಲಿ ಮೊದಲ ಮುತ್ತಿಗೆ ಕರೆಂಟ್ ಹೊಡೆದ ಹಾಗೆ ಆಗುತ್ತದೆ. ಆದ್ರೆ, ನಿಮ್ಮ ಮುತ್ತಿಗೆ ನನಗೇನೂ ಆಗಲಿಲ್ಲ. ನಿಮ್ಮದೇ ಫ್ಯೂಜ್ ಹಾರಿ ಹೋಯಿತ್ತಲ್ಲ. ನಾವು ನಮ್ಮ ಪ್ರೀತಿಯನ್ನ ಯಾರ ಜತೆ ಹಂಚಿಕೊಳ್ಳುತ್ತೇವೆ ಅನ್ನೋದು ಇಪಾರ್ಟೆಂಟ್.  ನಾನು ಏನೋ ಕೇಳಿದೆ. ನೀವು ಕೊಡಲೇಯಿಲ್ಲ. ಏನೂ. ಸಕ್ಕರೆನಾ..?. ಹಾಗೆ ಸಂಭಾಷಣೆ ಸಾಗುತ್ತವೆ. ಒಮ್ಮೆ ನೀವು ಸಕ್ಕರೆ ಚಿತ್ರ ಟ್ರೈಲರ್  ಕೇಳ್ತಾ ಹೋದ್ರೆ ಇಂತಹ ಹಲವು ಮಜವಾದ ಮಾತು ಖುಷಿಕೊಡುತ್ತವೆ.  ಸಕ್ಕರೆ ಅನ್ನೋ ಈ  ಶೀರ್ಷಿಕೆನೂ ಮಜವಾಗಿಯೆ ಇದೆ.ಈಗಾಗಲೇ ಕನ್ನಡದ ಮಟ್ಟಿಗೆ ಬೇಜಾನ್ ಚಿತ್ರ-ವಿಚತ್ರ ಶೀರ್ಷಿಕೆ ಬಂದಿವೆ. ಚಿತ್ರವೂ ತೆರೆ ಕಂಡಿವೆ. ಸಕ್ಕರೆ ಹಾಗಲ್ಲ. ಬುದ್ದಿವಂತರೇ ಸೇರಿ ಸಕ್ಕರೆ ಮಾಡುತ್ತಿದ್ದಾರೆ. ಸದಭಿರುಚಿಯ ಧಾರವಾಹಿಗಳನ್ನ ಕಟ್ಟಿಕೊಟ್ಟ ಬಿ.ಸುರೇಶ್ ಗೊತ್ತಲ್ಲ. ಅವ್ರು ಸಕ್ಕರೆ ನಿರ್ಮಾಪಕರು. ಪತ್ನಿ ಶೈಲಜಾ ಜೊತೆಗೇ ಇದ್ದಾರೆ. ಇವರ ಸಕ್ಕರೆಯ ಕನಸನ್ನ ನನಸಾಗಿಸಿರೋದು ಅಭಯ್ ಸಿಂಹ. ಗುಬ್ಬಚ್ಚಿಗಳು, ಶಿಕಾರಿ ಸಿನಿಮಾ ಕೊಟ್ಟ ಯುವ ನಿರ್ದೇಶಕ ಈ ಅಭಯ್...

ಅಭಯ್ ಸಿನಿಮಾ ಪ್ರೀತಿ ತಾಜಾ ಆಗಿದೆ. ಯುವ ಮನಸ್ಸುಗಳ ತುಡಿತಕ್ಕೆ ಬೇಗ ಸ್ಪಂಧಿಸುತ್ತದೆ. ಕಲಾತ್ಮಕ ಕಲಾವಂತಿಕೆ ಇರೋದ್ರಿಂದ, ಕಮರ್ಷಿಯಲ್ ಸಿನಿಮಾವೊಂದಕ್ಕೆ ಕಲಾತ್ಮಕ ಚೌಕಟ್ಟು ಕಟ್ಟಿಕೊಟ್ಟಿದ್ದಾರೆ. ಆದ್ರೆ, ನೀವು ಇಲ್ಲಿ ಹುಡುಕುತ್ತಾ ಹೋದ್ರೆ, ನಿಮಗೆ ತುಂಟ ಗಣೇಶ ಎದುರಾಗುತ್ತಾರೆ. ಮುಂಗಾರು ಮಳೆಯಲ್ಲಿ ಎಲ್ಲರ ಹೃದಯ ಕದ್ದ ಈ ಪ್ರೀತಂ ಸಕ್ಕರೆಯಲ್ಲಿ  ರಾಜ..

ಮಳೆ ಹುಡುಗ ಗಣೇಶ್; ಗಣೇಶ್ ಗೆ ಈಗ ಒಂದು ಗೆಲುವು ಬೇಕಾಗಿದೆ. ಆಟೋರಾಜ ಚಿತ್ರದಲ್ಲಿ ಅಪೇಕ್ಷೆಯಿತ್ತು. ಪ್ರೇಕ್ಷಕರು ಅದನ್ನ ಅಷ್ಟಕಷ್ಟೆ ಕೊಟ್ಟರು. ಸಕ್ಕರೆ ಎಲ್ಲವನ್ನೂ ಮೀರೋ ಹಾಗಿದೆ. ಭರವಸೆ ಇರೋದು ಗಣೇಶ್ ಅಭಿನಯದ ಮೇಲೆ ಅಲ್ಲ. ನಿರ್ದೇಶಕ ಅಭಯ ಪ್ರತಿಭೆ ಬಗ್ಗೆ. ತುಂಬಾ ಓದಿಕೊಂಡಿರೋ ಹಾಗೆ ಕಾಣೋ ಅಭಯ್. ಸಕ್ಕರೆಯನ್ನ ಇತ್ತ ತುಂಬಾ ಸ್ವೀಟೂ  ಅಲ್ಲ. ಅತ್ತ ತುಂಬಾ ಸಪ್ಪೇನೂ ಅಲ್ಲ. ಹಾಗೆ ಎರಡೂ ಹೆಚ್ಚಲ್ಲದ ರೀತಿಯಲ್ಲಿ ಒಂದು ಸುಂದರ ಚಿತ್ರ ಮಾಡಿಕೊಟ್ಟಿದ್ದಾರೆ. ಜಯಂತ್  ಅವರು ಹೇಳೋ ಹಾಗೆ, ಮಧುರ ಅನುಭವದ ಚಿತ್ರ ಇದಾಗಲಿದೆ..

ಗಣೇಶ್ ಬಾಳಲ್ಲಿ ದೀಪ ಹಚ್ಚೋ ಸನ್ನಿಧಿ; ದೀಪಾ ಸನ್ನಿಧಿ. ಅತಿಲೋಕ ಸುಂದರಿನೂ ಅಲ್ಲ. ತೀರಾ ಸೀದಾ-ಸಾದಾ ಹುಡುಗಿನೂ ಅಲ್ಲ. ಆದ್ರೂ ಏನೋ ಸೆಳೆತ ಮುಖದಲ್ಲಿದೆ. ಹಾಗಿರೋ ದೀಪಾ, ಈಗಾಗಲೇ  ಪುನೀತ್ ರಾಜ್ ಕುಮಾರ್. ದರ್ಶನ್  ರಂತಹ ನಟರ ಜತೆ ಅಭಿನಯಿಸಿದ್ದಾಎ.  ಗಣೇಶ್ ಜೊತೆಗೆ ಅಭಿನಯಿಸೋ ಅವಕಾಶ ಈಗ ಬಂದಿದೆ. ಇದನ್ನ ಅಷ್ಟೇ ಸಮರ್ಥವಾಗಿ ನಿಭಾಯಿಸಿರೋದು ಕಂಡು ಬರುತ್ತಿದೆ. ಮೂರು ಶೇಡ್ ಇರೋ ಪಾತ್ರದಲ್ಲಿ ದೀಪಾ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿನಯಕ್ಕೆ ತುಂಬಾನೆ ಜಾಗ ಇರೊದ್ರಿಂದ, ಸಕ್ಕರೆಯಲ್ಲಿ ದೀಪಾ ಒಳ್ಳೆ ಅಭಿನಯ ನಿರೀಕ್ಷಿಸಬಹುದು.

ಸಕ್ಕರೆಯ ಸವಿ..ಸವಿ. ಹಾಡು; ಸಕ್ಕರೆಗೆ ಸಿಹಿ ಹಾಡು ಬರೆದಿರೋದು ಜಯಂತ್. ಮಧುರ ಸ್ಪರ್ಶದ ಪದಗಳನ್ನೇ ಬಳಸಿಕೊಂಡು, ಅತ್ಯುತ್ತಮ ಭಾವ ಗೀತೆ ಲಕ್ಷಣಗಳಿರೋ ಹಾಡನ್ನ ರಚಿಸಿಕೊಟ್ಟಿದ್ದಾರೆ. ಯೋಗರಾಜ್ ಭಟ್ಟರ  ರಚನೆನೂ ಈಗ ಚಾಲ್ತಿಯಲ್ಲಿದೆ. ಅದರಂತೆ, ಭಟ್ಟರ ಒಂದೆರಡು ಹಾಡುಗಳು ಇಲ್ಲಿವೆ. ವಿ.ಹರಿಕೃಷ್ಣರ ಸಂಗೀತ ಸಕ್ಕರೆಗೆ ಇರೋದ್ರಿಂದ ಟ್ರೆಂಡಿ ಗೀತೆಗಳನ್ನೇ ಕೇಳಬಹುದಾಗಿದೆ.

ಸಕ್ಕರೆ ಚಿತ್ರದ ಎಳೇ ಏನೂ; ಅಭಯ್ ಸಿಂಹ ಹೇಳೊ ಹಾಗೆ, ಇದು ಸಕ್ಕರೆಯ ಅಕ್ಕರೆ ಸಿನಿಮಾ. ಪಕ್ಕದ ಮನೆ ಹುಡುಗಿಯ ಬಳಿ,ಸಕ್ಕರೆ ಕೇಳ್ತಾರಂತೆ ಗಣೇಶ್. ಆಗ ಹುಡುಗಿ ಏನೋ ತಪ್ಪು ತಿಳಿಯುತ್ತಾಳೆ. ಬಳಿಕ ಸಕ್ಕರೆ ಕೊಡ್ತಾಳೊ ಇಲ್ಲವೋ. ಮಾತು ಬೇರೆ. ಮೊದಲೇ ಎರಡು ಭಾರಿ ಲವ್ ಫೇಲ್ಯೂವರ್ ಆಗಿರೋ ದೀಪಾ ಹಿಂದೆ ಬಿಳ್ತಾರಂತೆ ಗಣೇಶ್. ಬಳಿಕ ಏನ್ ಆಗುತ್ತದೆ. ಇದನ್ನ ತೆರೆ ಮೇಲೆ ನೋಡಿ ಎಂದು ಸುಮ್ಮನಾಗುತ್ತಾರೆ ಅಭಯ್. ಇವರ ಈ ಮೌನವನ್ನ ತೆರೆ ಮೇಲೆ ನೋಡಲು ಇನ್ನು ಕೆಲವು ದಿನ ಕಾಯಬೇಕು. ಸದ್ಯ ಯುಟ್ಯೂಬ್ ನಲ್ಲಿ ಸಕ್ಕರೆ ಹಾಡುಗಳಿವೆ. ಒಂದೇ ಒಂದು ಟ್ರೈಲರ್ ಕೂಡ ಇದೆ. ಒಮ್ಮೆ ನೋಡಬಹುದು. ಹೆಚ್ಚು ಇಷ್ಟವಾದರೆ ಮತ್ತೆ..ಮತ್ತೆ ಹಾಡುಗಳನ್ನ ಕೇಳಬಹುದು...

-ರೇವನ್