ಹುಟ್ಟುಹಬ್ಬದ ನಮಸ್ತೆ..

ಹುಟ್ಟುಹಬ್ಬದ ನಮಸ್ತೆ..

ಕಾದಂಬರಿ, ಧಾರಾವಾಹಿ, ಚಂದಮಾಮ, ಬಾಲಮಿತ್ರಗಳನ್ನೋದಿಕೊಂಡಿದ್ದ ದಿನಗಳಲಿ, ಸಾಹಿತ್ಯಿಕ ಹೊಸ ಆಯಾಮವೊಂದರತ್ತ ಗಮನ ಸೆಳೆದು, ಕಾತರಿಸಿ ಕಾದು ಕೂತಿರುವಂತಹ ಬರಹಗಳಿಂದ ಬಡಿದೆಬ್ಬಿಸಿದ ಬರಹಗಾರ ತೇಜಸ್ವಿಯವರು. ಆ ದಿನಗಳ ಕಾತರ ಎಷ್ಟರ ಮಟ್ಟಿಗಿತ್ತು ಎಂದರೆ, ಪುಸ್ತಕ ಪ್ರಕಾಶನದಿಂದ ಪರಿಸರ ಕಥೆಗಳು ಮತ್ತಿತರ ಸರಣಿ ಬರುತ್ತಿದ್ದಾಗ, ಕಾಯುವ ಸಹನೆಯಿಲ್ಲದೆ - ಸಾವಿರ ರೂಪಾಯಿ ಅಡ್ವಾನ್ಸಾಗಿ ಕಳಿಸಿ, ಪುಸ್ತಕ ಸಿದ್ದವಾಗುತ್ತಿದ್ದ ಹಾಗೆ ನೇರ ಕಳಿಸಿ ಎಂದು ಹಣ ಕಳಿಸುವಷ್ಟು.. ಆ ಪುಸ್ತಕಗಳು ಮತ್ತು ಅದರ ಸಂಬಂದಪಟ್ಟ ಹಣದ ಲೆಕ್ಕಾಚಾರವೂ ಅಷ್ಟೆ ಕರಾರುವಾಕ್ಕಾಗಿ ಪುಸ್ತಕದ ಜತೆಯ ಪೋಸ್ಟ್ ಕಾರ್ಡಿನಲ್ಲಿ ಬಂದು ಸೇರುತ್ತಿತ್ತು.

 

ಆ ಮೂಡಿಗೆರೆಯ ಮಾಂತ್ರಿಕನಿಗೊಂದು ನೆನಪಿನ ನಮನ ಸಲಿಸುವ ಪುಟ್ಟ ಕವನ - ಹುಟ್ಟು ಹಬ್ಬದ ದಿನದ ನೆಪದಲಿ.

ಹುಟ್ಟುಹಬ್ಬದ ನಮಸ್ತೆ..
_____________________________

ಪೂಚಂತೆ ಯಾರಂತೆ? ನಿಮಗೇನಾದರು ಗೊತ್ತೆ?
ಲಿಂಗ ಬಂದಾ ನೋಡಿ, ಅವನಿಗೆ ಗೊತ್ತಿರುವ ಕಥೆ..

ಅಬಚೂರಿನ ಪೋಸ್ಟಾಫೀಸಿಗೆ ಹಾಕಿದ್ದೆಷ್ಟು ಪತ್ರ
ಹೊಡೆದ ಹಂದಿ ಹೊತ್ತೊಡಿದ್ದು ನೆನಪಲಿನ್ನು ಮಿತ್ರ!

ಯಾರಪ್ಪಾ ಈ ಕರ್ವಾಲೊ - ಮೂಡಿಗೆರೆನೊ, ನೈನಿತಾಲೊ
ಹಾರುವ ಅಳಿಲೆ ಬಂತಲ್ಲೊ, ಮನಗಳಲೆ ವಿಜ್ಞಾನದ ಗುಲ್ಲೊ..

ಶಿಕಾರಿ ಬೇಟೆ ಆಡಿದ ಕಾಡು, ಜಿಗುಟು ಲಂಟಾನದ ಮೇಡು
ಸುತ್ತಿ ಸುಳಿದೆಲ್ಲ ಕಿವಿಯೊಡಗೂಡಿ, ಈಗೆಲ್ಲ ಖಾಲಿ ಜಾಡು..

ಚಿದಂಬರ ರಹಸ್ಯದ ಸ್ವರೂಪ, ಒಗಟು ಜುಗಾರಿಕ್ರಾಸು
ಎಣ್ಣೆಹೊಳೆಯಲೆ ತೇಲಿಸಿದರೂ, ನಪಾಸಿಗರು ಟೈಮ್ಪಾಸು!

ಅಜ್ಞಾನಿಗಳಿಗೆ ವಿಜ್ಞಾನ ಕನ್ನಡ ಪುಸ್ತಕದಲೆ ಪರಿಸರ
ಪುಸ್ತಕ ಪ್ರಕಾಶನದಿಂದಾಗ ಬಂತೆಷ್ಟೊಂದು ಸರಸರ..

ಅಲೆಮಾರಿಯಾಗಿ ಅಂಡಮಾನಿನಲಿ, ಸೋಮಾರಿಯ ಗಾಳ
ಹಿಡಿದಿದ್ದೆಷ್ಟೊ ಮೀನು, ಒಂದೊಂದು ಸಾಹಿತ್ಯದ ಹವಳ..

ಪರಲೋಕದವರು ಬಿಡಲಿಲ್ಲ, ಹಾರುವ ತಟ್ಟೆಯನಟ್ಟಿ
ಹಕ್ಕಿಗಳ ಹಿಡಿದಂತೆ ಚಿತ್ರದೆ, ಚಿತ್ರಪಟವಾಗಿಸಿ ಗಟ್ಟಿ..

ಯಾರೀ ನಿಗೂಢ ಮನುಷ್ಯ, ಕನ್ನಡದಾ ತಬರ
ತಬ್ಬಲಿ ತಾ ಬಲಿಯಾಗ್ಹೋಯ್ತೆ ಸಾಹಿತ್ಯದ ಸಾಗರ..

ಪೂಚಂತೆ ಯಾರಂತೆ? ಹುಟ್ಟು ಹಬ್ಬದ ನಮಸ್ತೆ...
ಗೊತ್ತಾಗಬೇಕೇಕಂತೆ, ಅವರ ಕಥೆಗಳೆ ಕಥೆ  ಬರೆಯುತ್ತೆ..

 

 

Comments