ನೂರು ವರ್ಷಗಳಿಗೂ ಮೀರಿ ಬದುಕೋಣ

ನೂರು ವರ್ಷಗಳಿಗೂ ಮೀರಿ ಬದುಕೋಣ

 

ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ

ಸರಿಸರಿದು ಸಾಗಿ ಬರುತಿಹುದು ಸಾವು |

ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ

ಜಾಣರಲಿ ಜಾಣರು ಬದುಕುವರು ಮೂಢ ||

     ಸಾವಿಲ್ಲದ ಜೀವಿಗಳು ಯಾವುದಾದರೂ ಇವೆಯೇ? ಜೀವಿಗಳಿಗೆಲ್ಲಾ ಸಾವು ಖಚಿತವೆಂಬ ಸರಳ ಸತ್ಯವನ್ನು ತಿಳಿಯದವರು, ಒಪ್ಪದವರು ಯಾರಾದರೂ ಇದ್ದಾರೆಯೇ? ಯಾವುದೇ ಸಿದ್ಧಾಂತ, ತತ್ವ, ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು, ಆದರೆ ಎಲ್ಲರೂ ಸಾಯುತ್ತಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಸಾಯುವುದು ಗೊತ್ತಿದ್ದರೂ ಮನುಷ್ಯರು ಚಿರಂಜೀವಿಗಳಂತೆ ವರ್ತಿಸಿ, ಎಲ್ಲವೂ ಬೇಕು, ತಮಗೊಬ್ಬರಿಗೇ ಬೇಕು ಎಂದು ಏಕೆ ಹಪಹಪಿಸುತ್ತಾರೆಂಬುದು ಚೋದ್ಯವೇ ಸರಿ. ಆಳವಾಗಿ ತರ್ಕಿಸುತ್ತಾ ಹೋದರೆ 'ಬೇಕು' ಎಂಬುದು ಪ್ರತಿ ಜೀವಿಯ ಅಂತರ್ಗತ ಸ್ವಭಾವವೆಂಬುದನ್ನು ಒಪ್ಪಲೇಬೇಕು. ಈಗ ಇರುವ ಸ್ಥಿತಿಗಿಂತ ಮೇಲೇರಬೇಕು ಎಂಬ ಪ್ರಬಲ ಇಚ್ಛೆ ಎಲ್ಲರಿಗೂ ಸಹಜ. ಈ 'ಬೇಕು' ಅನ್ನುವುದು ಯಾವ ಹಂತದಲ್ಲೇ ಆಗಲಿ, 'ಸಾಕು' ಎಂಬ ಭಾವನೆ ಮೂಡಲು ಬಿಡುವುದಿಲ್ಲ. ಅಂದುಕೊಂಡಿದ್ದಂತೆ ಬಯಸಿದ್ದು ಸಿಕ್ಕಿದ ತಕ್ಷಣದಲ್ಲೇ ಅದಕ್ಕಿಂತ ಮೇಲಿನ 'ಬೇಕು' ಧುತ್ತೆಂದು ಆ ಸ್ಥಾನವನ್ನು ಆಕ್ರಮಿಸಿಬಿಡುತ್ತದೆ. ಮನುಷ್ಯೇತರ ಜೀವಿಗಳಿಗಿಂತ ವಿವೇಚನೆ ಮಾಡುವ ಶಕ್ತಿ ಹೊಂದಿರುವ ಮಾನವಜೀವಿಗಳಲ್ಲಿ ಈ 'ಬೇಕು'ವಿನ ಪ್ರಮಾಣ ಜಾಸ್ತಿ. ಈ 'ಬೇಕು'ವಿನಿಂದಲೇ ಜೀವಚಕ್ರ ತಿರುಗುತ್ತಿರುವುದು ಎನ್ನಬಹುದು. 'ಬೇಕು'ಗಳನ್ನು ಮೀರಿ ಯಾವುದೂ ಬೇಡವೆಂದು ವಿರಾಗಿಗಳಾದವರಿಗೂ ಮೋಕ್ಷ ಸಾಧಿಸಬೇಕೆಂಬ ದೊಡ್ಡ 'ಬೇಕು' ಇರುತ್ತದೆ. ಈ 'ಬೇಕು'ವಿಗಾಗಿಯೇ ಅವರು ಇತರ ಪ್ರಾಪಂಚಿಕ 'ಬೇಕು'ಗಳನ್ನು ದೂರಮಾಡಿರುತ್ತಾರೆ! 

     ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಒಂದು ಸತ್ಸಂಗದಲ್ಲಿ ಹೇಳಿದ ಪ್ರಸಂಗವಿದು: ಅವರು ಒಮ್ಮೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ರೋಗಿಗಳನ್ನು ಸಂತಯಿಸುವ ಸಲುವಾಗಿ ಹೋಗಿದ್ದಾಗ ರೋಗದಿಂದ ನರಳುತ್ತಿದ್ದ ಮುದುಕಿಯೊಬ್ಬಳು, "ಯಪ್ಪಾ, ನನಗೆ ನರಳಿ ನರಳಿ ಸಾಕಾಗಿ ಹೋಗಿದೆ. ಜೀವನ ಸಾಕು ಅನ್ನಿಸಿಬಿಟ್ಟಿದೆ. ದಯವಿಟ್ಟು ನನ್ನ ತಲೆಯ ಮೇಲೆ ಕೈಯಿಟ್ಟು ನನ್ನನ್ನು ಬೇಗ ಕರೆಸಿಕೊಳ್ಳಲು ದೇವರಲ್ಲಿ ಹೇಳಪ್ಪಾ" ಅಂದಳಂತೆ. ಆಕೆಯನ್ನು ಸಂತೈಸಿ ಮುಂದೆ ಹೋಗುತ್ತಿದ್ದಾಗ ಆಕೆ ಹಿಂದೆಯೇ ಧಾವಿಸಿ ಬಂದು, "ಯಪ್ಪಾ, ನಿಮಗೆ ದೊಡ್ಡ ಡಾಕ್ಟರು ತುಂಬಾ ಪರಿಚಯ ಅಂತೆ. ಅವರಿಗೆ ಹೇಳಿ ಒಳ್ಳೆಯ ಔಷಧಿ ಕೊಡಲು ಹೇಳಪ್ಪಾ" ಅಂದಳಂತೆ! ಇಲ್ಲಿ ಕಾಣುವುದೇನೆಂದರೆ ಸಾವನ್ನು ಮೀರಿ ಬದುಕಬೇಕೆಂಬ ಆಸೆ. ಇದು ಸಹಜ. ಜೀವ ಹೋಗಲು ಈಗಲೋ ಆಗಲೋ ಎನ್ನುತ್ತಿರುವಾಗಲೂ ಆ ಜೀವ ಬದುಕಲು ತುಡಿಯುತ್ತಿರುತ್ತದೆ. ಇಷ್ಟಾದರೂ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇರುತ್ತಾರೆ. ಬಹುಷಃ ಅದಕ್ಕೆ ಕಾರಣ ಈ ಜನ್ಮದಲ್ಲಿ ಸಿಗದಿದ್ದುದು ಮುಂದಿನ ಜನ್ಮದಲ್ಲಾದರೂ ಸಿಗಲಿ ಎಂಬ ಭಾವವೂ ಇದ್ದಿರಬಹುದು. ಬಡತನ, ಸಾಂಸಾರಿಕ ಸಮಸ್ಯೆಗಳು, ಇತ್ಯಾದಿಗಳಿಂದ ರೋಸಿಹೋದವರು, ಭಗ್ನಪ್ರೇಮಿಗಳು, ಮುಂತಾದವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಡೆದು, ಸಾಯುವುದರಿಂದ ಸಮಸ್ಯೆ ಪರಿಹಾರವಾಗುವುದೇ ಎಂದು ವಿಚಾರಿಸಿದರೆ ಅವರು ಬಹುಷಃ ಸಾಮಾನ್ಯವಾಗಿ ಏನು ಹೇಳಬಹುದೆಂದರೆ ಅವರು ಬಯಸಿದ್ದುದು ಈ ಜನ್ಮದಲ್ಲಿ ಸಿಗುವುದೇ ಇಲ್ಲವೆಂಬ ಭಾವದಿಂದ, ಅದು ಇಲ್ಲದೇ ಜೀವನ ವ್ಯರ್ಥವೆಂಬ ಕಾರಣದಿಂದ, ತಮ್ಮ ಸಮಸ್ಯೆಗೆ ಈ ಜನ್ಮದಲ್ಲಿ ಪರಿಹಾರ ಸಿಕ್ಕುವುದೇ ಇಲ್ಲವೆಂಬ, ಇತ್ಯಾದಿ ಕಾರಣಗಳನ್ನು ಕೊಟ್ಟಾರು. ಗಮನಿಸಬೇಕಾದುದೇನೆಂದರೆ, ಅವರ 'ಬೇಕು'ಗಳಿಗಾಗಿಯೇ ಅವರು ಸಾಯುತ್ತಾರೆ. ಏಕೆಂದರೆ ಅದು ಅವರಿಗೆ 'ಬೇಕಾಗಿದೆ'. ಇದು ಏನು ಸೂಚಿಸುತ್ತದೆ? ತಮಗೆ ಬೇಕೆನಿಸಿದಂತೆ ಬದುಕುವುದು ಅವರಿಗೆ ಬೇಕಿದೆ. 

ಬಯಸಿದರು ಸಾವೆ ಬಯಸದಿದ್ದರು ಸಾವೆ

ಬೇಡವೆಂದರೆ ನೀನು ಬರದಿಹುದೆ ಸಾವು |

ಬೇಡದಿರು ಮನವೆ ಬೇಡದಿಹ ಸಾವ

ಅಡ್ಡದಾರಿಯಲಿ ನುಗ್ಗದಿರು ಮೂಢ ||

     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ಅದು ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 

ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |

ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮.)

     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.

     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಲಾಗುವುದೇ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನನ ಉದಾಹರಣೆ ಕೊಡಬಹುದು. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಅವನಿಗೆ ಸಾಯುವವರೆಗೂ ಇತ್ತು. ಅವನ ಆತ್ಮವಿಶ್ವಾಸ ಮೆಚ್ಚುವಂತಹದು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ.  ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, "ಆಶಾವಾದವೇ ಜೀವನ, ನಿರಾಶಾವಾದವೇ ಮರಣ". ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವವರ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ರಷ್ಯಾ, ಜಪಾನ್ ಮುಂತಾದ ದೇಶಗಳಲ್ಲಿ ೧೯೦ ವರ್ಷಗಳವರೆಗೂ ಜೀವಿಸಿದ್ದವರು ಇದ್ದರು. ಈಗಲೂ ನೂರು ವರ್ಷಗಳನ್ನು ಮೀರಿ ಜೀವಿಸಿರುವ ಹಲವರು ನಮ್ಮ ನಡುವೆ ಇದ್ದಾರೆ. ಸ್ವಾಮಿ ಶ್ರದ್ಧಾನಂದರ ಶಿಷ್ಯರಾದ, ಅದಮ್ಯ ಜೀವನೋತ್ಸಾಹದ ಚಿಲುಮೆ, ನಾಲ್ಕು ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಚತುರ್‍ವೇದಿ ಎಂಬ ಸಾರ್ಥಕ ಹೆಸರನ್ನು ಪಡೆದಿರುವ, ವೇದದ ಸಾರ ಮತ್ತು ಉದ್ದೇಶಗಳನ್ನು ಈಗಲೂ ಸಾರುತ್ತಿರುವ, ನಿಜಬದುಕು ಸಾಗಿಸುತ್ತಿರುವ ಬೆಂಗಳೂರಿನ ೧೧೭ ವರ್ಷಗಳ ಅನುಪಮ ಸಾಧಕ ಮಾರ್ಗದರ್ಶಿ ಪಂ. ಸುಧಾಕರ ಚತುರ್‍ವೇದಿಯವರು ಇಚ್ಛಾಶಕ್ತಿಗೆ ಜ್ವಲಂತ ಉದಾಹರಣೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ, ಅಲ್ಲಿ ಹುತಾತ್ಮರಾದವರ ಸಾಮೂಹಿಕ ಸಂಸ್ಕಾರಕಾರ್ಯದಲ್ಲಿ ಭಾಗಿಯಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಸುಮಾರು ೧೪ ವರ್ಷಗಳ ಕಾಲ ಸೆರೆವಾಸ ಕಂಡಿದ್ದ, ಈಗಲೂ ಸತ್ಸಂಗಗಳನ್ನು ನಡೆಸುತ್ತಾ, ನೂರಾರು ಅಂತರ್ಜಾತೀಯ ವಿವಾಹಗಳನ್ನು ಮಾಡಿಸಿರುವ, ರೂಢಿಗತ ಅಂಧ ಸಂಪ್ರದಾಯಗಳನ್ನು ವಿರೋಧಿಸಿ ವೇದದ ಬೆಳಕಿನಲ್ಲಿ ಸತ್ಯಾನ್ವೇಷಣೆಗೆ ಕರೆ ಕೊಡುತ್ತಿರುವ, ನಿಜವಾಗಿ ಬದುಕಲು ಪ್ರೇರಿಸುತ್ತಿರುವ ಅವರ ಬದುಕು ಅನುಸರಣೀಯ. 

 

ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು

ಹೇಡಿ ಸಾಯುವನು ವೀರನೂ ಸಾಯುವನು |

ದೇವ ನಿಯಮವಿದು ಎಲ್ಲರೂ ಸಾಯುವರು

ಬದುಕಿ ಸಾಯುವರ ನೆನೆಯೋ ಮೂಢ ||

     ಎಲ್ಲರೂ ಸಾಯುತ್ತಾರೆ, ಆದರೆ ಎಲ್ಲರೂ ಬದುಕುತ್ತಾರೆಯೇ ಎಂಬುದು ಕೇಳಬೇಕಾದ ಪ್ರಶ್ನೆ. ಬದುಕುವ ರೀತಿಯಲ್ಲಿ ಬದುಕಿದವರು ಸತ್ತ ಮೇಲೂ ಬದುಕಿರುತ್ತಾರೆ. ನೂರಾರು ವರ್ಷಗಳ ನಂತರವೂ, ಇಂದಿಗೂ ನಾವು ನೆನಪಿಸಿಕೊಳ್ಳುವ, ಗೌರವಿಸುವ, ದೇವರಂತೆ ಕಾಣುವ ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ವಿವೇಕಾನಂದ, ಬುದ್ಧ, ಬಸವ, ಮುಂತಾದ ನೂರಾರು, ಸಾವಿರಾರು ಮಹಾನ್ ವ್ಯಕ್ತಿಗಳು ಈ ಮಾತಿಗೆ ಪುಷ್ಟಿ ಕೊಡುತ್ತಾರೆ. ಹೇಗೋ ಹುಟ್ಟಿ, ಹೇಗೋ ಬದುಕಿ, ಹೇಗೋ ಕಂತೆ ಒಗೆದು ಹೋಗುವ ಸಾಮಾನ್ಯರ ನೆನಪು ಅವರ ಮಕ್ಕಳು, ಮೊಮ್ಮಕ್ಕಳುಗಳಿಗೇ ಇರುವುದಿಲ್ಲ ಅಲ್ಲವೇ? ಮಸುಕಾಗಿ ಮರೆಯಾಗುವುದಕ್ಕಿಂತ ಜ್ಯೋತಿಯಾಗಿ ಉರಿದು ನೆನಪು ಉಳಿಸುವುದು ಉತ್ತಮ. ಯೋಗ್ಯವಾಗಿ ಬದುಕಬೇಕೆಂಬ ಮಾರ್ಗದರ್ಶನ ನೀಡುವುದೇ ಸಾವು ಎಂಬುದನ್ನು ಮರೆಯಬಾರದು. ಭಗತ್ ಸಿಂಗ್, ರಾಜಗುರು, ಸುಖದೇವರಂತೆ, ಚಂದ್ರಶೇಖರ ಆಜಾದರಂತೆ ಇನ್ನೊಬ್ಬರ ಬದುಕಿಗಾಗಿ, ಒಳಿತಿಗಾಗಿ ಸಾಯಲು ಸಿದ್ಧರಿರುವವರ, ಸಾಯುವವರ ಬದುಕುಗಳು ಬದುಕಬೇಕಾದ ರೀತಿಗೆ ಉದಾಹರಣೆಗಳು. ಯಜುರ್ವೇದದ ಈ ಮಂತ್ರ ಮಾನವರು ಬದುಕಬೇಕಾದ ರೀತಿಗೆ ಅದ್ಭುತ ಮಾರ್ಗದರ್ಶಿಯಾಗಿದೆ:

 "ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಂ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ ||"

     ಅರ್ಥ: ಶುಭವ ನೋಡುತಲಿ, ಶುಭವ ಕೇಳುತಲಿ, ಶುಭವ ನುಡಿಯುತಲಿ ನೂರ್ಕಾಲ ಬಾಳೋಣ. ದೈನ್ಯತೆಯಿಲ್ಲದೆ ಸ್ವಾಭಿಮಾನದಿಂದ ಸ್ವತಂತ್ರರಾಗಿ ನೂರ್ಕಾಲ ಬಾಳೋಣ. ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಬಾಳಿಕೊಂಡಿರೋಣ.

-ಕ.ವೆಂ.ನಾಗರಾಜ್.

 

Comments

Submitted by nageshamysore Thu, 09/19/2013 - 20:03

ಕವಿಗಳೆ, ದ್ವಂದ್ವಗಳ ನಡುವಿನ ಬದುಕಲಿ ಸಾರ್ಥಕತೆಗೆ ಹುಡುಕುವುದೆ ಜೀವನವಲ್ಲವೆ? ಬೇಕು ಬೇಡಗಳ ದ್ವಂದ್ವ ಸಾವು ಬದುಕುಗಳ ದ್ವಂದ್ವ ದ್ವಂದ್ವಗಳೆ ಬಾಳಿನ ಬಂಧ ಬಿಡಿಸಲ್ಹೆಣಗಿ ತೆರೆ ಜ್ಞಾನಕದ!   ಧನ್ಯವಾದಗಳೊಂದಿಗೆ  ನಾಗೇಶ ಮೈಸೂರು
Submitted by H A Patil Fri, 09/20/2013 - 19:57

ಕವಿ ನಾಗರಾಜ ರವರಿಗೆ ವಂದನೆಗಳು ನೂರು ವರ್ಷಗಳ ಮೀರಿ ಬದುಕೋಣ ಲೇಖನ ಓದಿದೆ, ಮಾನವನ ಗುಣ ವಿಶೇಷಗಳನ್ನು ಬಹಳ ಚೆನ್ನಾಗಿ ಅರ್ಥಗರ್ಭಿತವಾಗಿ ಅನಾವರಣ ಗೊಳಿಸಿದ್ದೀರಿ. ಮನುಷ್ಯ ಪಂಚ ಕರ್ಮೇಂದ್ರಿಯಗಳ ದಾಸನಾಗಿ ಬದುಕುತ್ತಿದ್ದಾನೆ, ಪಂಚ ಜ್ಞಾನೇಂದ್ರಿಯಗಳ ಸೂಕ್ಷ್ಮ ಅರಿವು ಇಲ್ಲ ಜೊತೆಗೆ ಆತ್ಮದ ಕೂಗಿಗೆ ಆತ ಓಗೊಡುತ್ತಿಲ್ಲ, ಆತ್ಮ ಸಾಕ್ಷಿಯೆನ್ನುವುದಕ್ಕೆ ನಾವು ಬೆಲೆ ಕೊಡದಿದ್ದಾಗ ನಾವು ಆಶೆಗಳ ಬೆನ್ನು ಹತ್ತುತ್ತೇವೆ, ಅವುಗಳ ಈಡೇರಿಕೆಗೆ ಅಮಾಯಕರನ್ನು ತುಳಿಯುವ ನಾವು ಮೇಲೆದ್ದು ಬರುವುದಕ್ಕೆ ಪ್ರಯತ್ನಿಸುತ್ತೇವೆ. ಇದಕ್ಕೆ ಮದ್ದು ಆಧ್ಯಾತ್ಮ ಚಿಂತನೆ ಮತ್ತು ಪರಿಪಾಲನೆ ಅದು ಈಗ ಯಾರಿಗೂ ಬೇಕಾಗಿಲ್ಲ, ಹೀಗಾಗಿ ಇಂತಹ ದಯನೀಯ ಸ್ಥಿತಿ ನಮ್ಮದು. ಒಳ್ಳೆಯ ಲೇಖನ ನೀಡಿದ್ದೀರಿ ಧನ್ಯವಾದಗಳು.
Submitted by partha1059 Fri, 09/20/2013 - 20:08

ಕವಿನಾಗರಾಜರೆ ನಮಸ್ಕಾರಗಳು ಎಲ್ಲವೂ ನಿಜ ಒಪ್ಪುವೆ , ಎಷ್ಟು ವರ್ಷ ಇದ್ದರೇನು , ಇನ್ನು ಉಳಿದಿಹುದೇನು, ದಿನವು ಅದೆ ಹಗಲು ಅದೇ ಕರ್ಮಚಕ್ರ, ಸಂಬಂಧಗಳ ನಡುವೆ ಘರ್ಷಣೆ, ಅದೆ ಹೋರಾಟ. ಅದೆ ಬದುಕು, ಬದುಕಿಗಾಗಿ ಒಂದು ಕೆಲಸ ವೃತ್ತಿ, ಅದರ ನಿರ್ವಹಣೆ, ನಮ್ಮ ಚಿಂತನೆಗೂ ಬದುಕಿಗೂ ಸಂಬಂಧವೆ ಎಲ್ಲವೇನೊ ಎನ್ನುವಂತೆ ಸದಾ ಇರುತ್ತೇವೆ. ನೂರು ವರ್ಷವಿದ್ದರೂ ಅಷ್ಟೆ , ಅರವತ್ತು ಅಷ್ಟೆ ನೂರ ಇಪ್ಪತ್ತು ಇದ್ದರೂ ಅಷ್ಟೆ ವ್ಯತ್ಯಾಸವೇನಿದೆ . ಇನ್ನೂ ಐವತ್ತು ವರುಷವಿದ್ದರೂ ಅಷ್ಟೆ ಈಗ ಮಾಡುತ್ತಿರುವದಕ್ಕಿಂತೆ ಹೆಚ್ಚೇನು ಮಾಡಲಾರೆ ಅನ್ನುವ ಭಾವದಿಂದ ಹೊರಬರುವುದು ಕಷ್ಟವೆ
Submitted by Premashri Sat, 09/21/2013 - 16:20

In reply to by partha1059

ಸಾವು ಬಂದಾಗ ಸಂತೋಷದಿಂದ ಹೋಗೋಣ ಅಲ್ಲಿಯವರೆಗೆ ಇಚ್ಛಾಶಕ್ತಿಯ ಬಲದಿ ಬದುಕನು ಸಾರ್ಥಕಗೊಳಿಸುತ ಸಂತಸದಿಂದ ಬಾಳೋಣ
Submitted by kavinagaraj Mon, 09/23/2013 - 10:44

In reply to by partha1059

ಪಾರ್ಥರಿಗೆ ನಮಸ್ಕಾರ. ಈ ಬದುಕಿಗೆ ನಾವೇ ಕಾರಣರಾಗಿದ್ದರೆ ನೀವು ಹೇಳುವುದು ಸರಿ. ಬದುಕುವುದು ಕಷ್ಟ, ಅರ್ಥವಿಲ್ಲವೆಂದು ಯಾರೂ ಸಾಯಬಯಸುವುದಿಲ್ಲ. ಹೀಗಿರುವಾಗ ಒಳ-ಹೊರಗುಗಳಿಗೆ ಸಮನ್ವಯ ಕಾಣಲು ತುಡಿಯುವುದೇ ನಿಜಜೀವವಾದೀತು!!