ಶಿಲುಬೆ

ಶಿಲುಬೆ

ಬರಹ

ಧಾರ್ಮಿಕ ಸಂಕೇತಗಳ ಪ್ರಸ್ತಾಪ ಬಂದಾಗ ಶಿಲುಬೆಯನ್ನು ಕ್ರೈಸ್ತಧರ್ಮದೊಂದಿಗೆ ವಿಶೇಷವಾಗಿ ಗುರುತಿಸಲಾಗುತ್ತದೆ. ಹಾಗೆ ನೋಡಿದರೆ ಶಿಲುಬೆಗುರುತು ಒಂದು ಮೂಲಭೂತ ವಿನ್ಯಾಸವಾಗಿದ್ದು ಕುಂಬಾರಕಲೆಯಲ್ಲಿ, ನೆಯ್ಗೆಯಲ್ಲಿ, ಕೆತ್ತನೆಯಲ್ಲಿ, ಚಿತ್ರಕಲೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಲೇ ಇರುವುದನ್ನು ಕಾಣುತ್ತೇವೆ. ಅದನ್ನು ಅಲಂಕಾರಕ್ಕಾಗಲೀ ಗುರುತಿಗಾಗಲೀ ಬಳಸಿರುವ ಸಾಧ್ಯತೆ ಇರುತ್ತದೆ.
ಜನರ ಗಮನವನ್ನು ಸುಲಭವಾಗಿ ಸೆಳೆಯಲು ಸ್ತಂಭದ ಮೇಲೆ ಬರೆಯುವ, ಸ್ತಂಭದ ತುದಿಯಲ್ಲಿ ಬಾವುಟ ಹಾರಿಸುವ, ಸ್ತಂಭದ ತುದಿಯಲ್ಲಿ ದೀಪ ಬೆಳಗುವ ಪರಿಪಾಠ ಮೊದಲಿನಿಂದಲೂ ಇದೆ. ನಮ್ಮ ಗುಡಿಗಳ ಮುಂದಿನ ಗರುಡಗಂಬ, ಮುಖ್ಯಸ್ಥಳಗಳಲ್ಲಿನ ಧ್ವಜಸ್ತಂಭ, ದಾರಿ ಸೂಚಿಸುವ ಕೈಮರ ಇವುಗಳನ್ನು ಮಾತ್ರವಲ್ಲದೆ ರಾಜನ ಗುರುತಿಗೆ ತೆರೆದು ಹಿಡಿಯುವ ಬೆಳ್ಗೊಡೆ, ರಥದ ಮೇಲಿನ ಬಾವುಟ, ದೇವಾಲಯಗಳ ಗೋಪುರ ಮುಂತಾದವುಗಳನ್ನು ಉದಾಹರಿಸಬಹುದು. ಹಿಂದೆ ಶಿಲುಬೆಯು ಇಂಥ ಗೌರವಯುತ ಲಾಂಛನವಾಗಿರದೆ ಯಕಶ್ಚಿತ್ ನೇಣುಗಂಬದಂತೆ ಅಪಮಾನದ ಲಾಂಛನವಾಗಿತ್ತು. ಆದರೆ ಕ್ರಿಸ್ತನನ್ನು ಶಿಲುಬೆಗೆ ಹಾಕಿದ ನಂತರ ಅದು ನೇಣುಗಂಬದ ಸ್ಥಾನವನ್ನು ಕಳೆದುಕೊಂಡು ಪೂಜ್ಯ ಲಾಂಛನವಾಗಿ ಮಾರ್ಪಟ್ಟಿದೆ. ಇಂದು ಕ್ರೈಸ್ತರನ್ನು ಶಿಲುಬೆಯಿಂದ ಗುರುತಿಸುವ ಪರಿಪಾಠ ತಾನೇ ತಾನಾಗಿ ಬಳಕೆಗೆ ಬಂದುಬಿಟ್ಟಿದೆ.
ಆದರೂ ವಿಶ್ವದ ಹಲವು ಧರ್ಮ ಮತ್ತು ಸಂಸ್ಕೃತಿಗಳಲ್ಲಿ ಶಿಲುಬೆಯ ಬಳಕೆ ಹಾಸುಹೊಕ್ಕಾಗಿದೆ. ಶಿಲುಬೆಯಾಕೃತಿಯು ಪುರಾತನ ಈಜಿಪ್ಟ್ ನಾಡಿಗರಿಗೆ ಜೀವಂತಿಕೆಯ ಸಂಕೇತವಾಗಿತ್ತು. ಚಕ್ರದೊಂದಿಗೆ ಮಿಳಿತವಾಗಿದ್ದ ಶಿಲುಬೆಯನ್ನು ಅನಂತತೆಗೆ ಹೋಲಿಸಲಾಗುತ್ತಿತ್ತು. ಗ್ರೀಕ್ ಶಿಲುಬೆಯು ಸೃಷ್ಟಿಭೂತಗಳಾದ ಭೂಮಿ, ಬೆಂಕಿ, ಗಾಳಿ ಮತ್ತು ನೀರು ಇವುಗಳ ಅಮರತ್ವವನ್ನು ಸಾರುತ್ತಿತ್ತು. ಸ್ವಸ್ತಿಕ ಶಿಲುಬೆಯಂತೂ ದೇಶಕಾಲಗಳೆನ್ನದೆ ತನ್ನ ಸಂಕೇತವನ್ನು ಮೆರೆದಿದೆ. ಬಲಕ್ಕೆ ಬಾಗಿದ ಅಂಚುಗಳುಳ್ಳ ಸ್ವಸ್ತಿಕ ಶಿಲುಬೆಯು ಸೂರ್ಯ, ಬೆಂಕಿ, ಜೀವ ಮತ್ತು ಅದೃಷ್ಟಗಳನ್ನು ಪ್ರತಿನಿಧಿಸಿವೆ. ಬೌದ್ಧ ಧರ್ಮದಲ್ಲಿ ಇದು ನಿರ್ವಾಣವನ್ನು ಸೂಚಿಸಿದರೆ, ಜೈನ ಧರ್ಮದಲ್ಲಿ ಏಳನೆಯ ತೀರ್ಥಂಕರನ ಸಂಕೇತವಾಗಿದೆ. ಎಡಕ್ಕೆ ಬಾಗಿದ ಅಂಚುಗಳುಳ್ಳ ಸ್ವಸ್ತಿಕವು ಹಿnದೂಗಳಿಗೆ ಅಂಧಕಾರದ, ತಂತ್ರದ ಹಾಗೂ ಕಾಳಿಯ ಸಂಕೇತವಾಗಿದೆ. ಸ್ವಲ್ಪ ಬಲಕ್ಕೆ ವಾಲಿಕೊಂಡ ಸ್ವಸ್ತಿಕವು ಜರ್ಮನ್ ನಾಜಿಗಳ ಲಾಂಛನವಾಗಿತ್ತು.
ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಶಿಲುಬೆಗೆ ಅವಮಾನಕರ ದುಃಸ್ಥಿತಿ ಪ್ರಾಪ್ತವಾಗಿತ್ತು. ಕೆಳದರ್ಜೆಯ ಪಾತಕಿಗಳನ್ನು ಗಲ್ಲಿಗೇರಿಸುವುದಕ್ಕಾಗಿ ಇದನ್ನು ಬಳಕೆಗೆ ತಂದುದರಿಂದ ಶಿಲುಬೆಯಾಕೃತಿಯು ಅಮಂಗಳದ ಸಂಕೇತವೆನಿಸಿತ್ತು. ಅಂಥ ಅಪಮಾನದ ಸಾವಿಗೆ ಯೇಸುಕ್ರಿಸ್ತನನ್ನು ದೂಡಿದ ನಂತರ ಆ ಶಿಲುಬೆ ಪವಿತ್ರ ಪಾವನ ಸಂಕೇತವಾಗಿ ಮಾರ್ಪಟ್ಟು ಈ ಎರಡು ಸಾವಿರ ವರ್ಷಗಳಿಂದೀಚೆಗೆ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವಾಗಿ ಪರಿಭಾವಿಸುವ ಚಿಹ್ನೆಯಾಗಿದೆ. ಅದನ್ನು ವಿವಿಧ ರೀತಿಗಳಲ್ಲಿ ಕಲಾತ್ಮಕವಾಗಿ ಕುಸುರಿ ಕೆಲಸಗಳಿಂದಲೂ ಕೆತ್ತನೆಗಳಿಂದಲೂ ಅಲಂಕರಿಸಿ ಆಭರಣಗಳಂತೆ ಬಳಸುತ್ತಿರುವುದನ್ನೂ ನೋಡುತ್ತಿದ್ದೇವೆ.
ಕ್ರೈಸ್ತಧರ್ಮದ ಈ ಶಿಲುಬೆಯು ಎಲ್ಲಾ ಕಡೆ ಒಂದೇ ರೀತಿಯಾಗಿಲ್ಲ. ಕಾಲ ಮತ್ತು ದೇಶಗಳು ಬದಲಾದಂತೆ ಶಿಲುಬೆಯ ಆಕಾರವೂ ಬದಲಾಗುತ್ತಾ ಬಂದಿತು. ಟಾವು ಶಿಲುಬೆಯು ಗ್ರೀಕ್ ಅಕ್ಷರ T ಆಕಾರದಲ್ಲಿದ್ದರೆ ಸಾಲ್ಟೇರ್ ಶಿಲುಬೆಯು ಇಂಗ್ಲಿಷಿನ X ಆಕಾರದಲ್ಲಿದೆ. ಲ್ಯಾಟಿನ್ ಶಿಲುಬೆಯಲ್ಲಿ ಅಡ್ಡಪಟ್ಟಿಯು ಲಂಬಪಟ್ಟಿಗಿಂತ ಚಿಕ್ಕದಾಗಿದ್ದು ಮೇಲಕ್ಕೆ ಏರಿದ್ದರೆ, ಗ್ರೀಕ್ ಶಿಲುಬೆಯಲ್ಲಿ ಅಡ್ಡ ಮತ್ತು ಲಂಬಪಟ್ಟಿಗಳೆರಡೂ ಸಮಾನವಾಗಿರುತ್ತವೆ. ರಷ್ಯನ್ ಶಿಲುಬೆಯಲ್ಲಿ ವಿವಿಧ ಗಾತ್ರದ ಎರಡು ಅಡ್ಡಪಟ್ಟಿಗಳಿರುತ್ತವೆ. ಅದನ್ನೇ ಹೋಲುವ ಪೋಪರ ಶಿಲುಬೆಯಲ್ಲಿ ಮೇಲ್ತುದಿಯಲ್ಲೂ ಒಂದು ಚಿಕ್ಕ ಅಡ್ಡಪಟ್ಟಿಯನ್ನೂ ಕಾಣಬಹುದು. ಮಾಲ್ಟೀಸ್ ಶಿಲುಬೆಯು ಗ್ರೀಕ್ ಶಿಲುಬೆಯೇ ಆದರೂ ಶಿಲುಬೆಯ ಮಧ್ಯಭಾಗದಿಂದ ಎರಡು ಕವಲುಗಳು ಇಂಗ್ಲಿಷಿನ V ಆಕಾರದಲ್ಲಿ ಹೊರಟು ಅಡ್ಡ ಪಟ್ಟಿಯ ಎರಡು ತುದಿಗಳನ್ನು ಸೇರುತ್ತವೆ. ಸೆಲ್ಟಿಕ್ ಶಿಲುಬೆಯು ಲ್ಯಾಟಿನ್ ಶಿಲುಬೆಯನ್ನೇ ಹೋಲುವುದಾಗಿದ್ದರೂ ಅಡ್ಡಲಂಬಗಳ ಕೂಡುಸ್ಥಳದ ಸುತ್ತ ಒಂದು ಚಕ್ರ ಇರುತ್ತದೆ. ಇದನ್ನು ಲ್ಯಾಟಿನ್ ಭಾಷೆಯಲ್ಲಿ crux ansata (ಕ್ರುಸ್ ಅನ್ಸತ) ಎನ್ನುತ್ತಾರೆ. ಸ್ವಸ್ತಿಕ ಶಿಲುಬೆಯು ಗ್ರೀಕ್ ಶಿಲುಬೆಯನ್ನೇ ಹೋಲುವುದಾಗಿದ್ದರೂ ಪಟ್ಟಿಗಳ ಕೊನೆಗಳು ಬಾಗಿರುತ್ತವೆ.
ಗ್ರೀಕ್ ಭಾಷೆಯಲ್ಲಿ ಕ್ರಿಸ್ತೋಸ್ (ΧΡΙΣΤOΣ) ಎಂಬ ಪದದ ಮೊದಲಕ್ಷರಗಳಾದ 'ಚಿ' (Χ) ಮತ್ತು 'ರೋ' (Ρ) ಇವುಗಳನ್ನು ಸಂಗಮಿಸಿ ಮಾಡಿದ ಲಾಂಛನವನ್ನು ಪೂಜಾವಸ್ತ್ರ, ಪೂಜಾಪಾತ್ರೆ ಹಾಗೂ ಪ್ರಸಾದ ಸಂಪುಟ ಇತ್ಯಾದಿಗಳ ಮೇಲೆ ಕಾಣುತ್ತೇವೆ. ಈ ಲಾಂಛನವು ಮೊದಲ ಕ್ರೈಸ್ತರ ಹಾಗೂ ಬೈಜಾಂಟೈನ್ ಕಲೆಯ ಪ್ರಾತಿನಿಧಿಕ ಸಂಕೇತವಾಗಿದೆ. ಅದೇ ರೀತಿ ಶಿಲುಬೆಯೂ ಕ್ರೈಸ್ತ ಧರ್ಮದ ಒಂದು ಪ್ರಮುಖ ಚಿಹ್ನೆಯಾಗಿದೆ. ಬಲಗೈಯಿಂದ ಶಿಲುಬೆ ಗುರುತು ಹಾಕುವುದು, ವಿಶ್ವಾಸವನ್ನು ವ್ಯಕ್ತಪಡಿಸುವುದರ ಹಾಗೂ ಪವಿತ್ರೀಕರಿಸುವುದರ ಸಂಕೇತವಾಗಿದೆ. ಮೊದ ಕ್ರೈಸ್ತರು ಶಿಲುಬೆಗಳನ್ನು ಕೈಗಳಲ್ಲಿ ಹಿಡಿದುಕೊಂಡೇ ಓಡಾಡುತ್ತಿದ್ದರಂತೆ. ಕ್ರಮೇಣ ಅವು ಪೂಜಾಪೀಠಗಳನ್ನೂ ಬೀದಿಬದಿಯ ಪೂಜಾಮಂಟಪಗಳನ್ನೂ ಅಲಂಕರಿಸಿದವು. ಸನ್ಯಾಸಿ ಸನ್ಯಾಸಿನಿಯರ ಕುತ್ತಿಗೆಯಲ್ಲೂ ನೇತಾಡತೊಡಗಿದವು. ಶಿಲುಬೆಯಾಕಾರದ ತಳಹದಿಯಲ್ಲೇ ಚರ್ಚುಗಳನ್ನೂ ಕಟ್ಟಲಾತು.
ಒಂದು ಕೇಂದ್ರಬಿಂದುವಿನಿಂದ ಹೊರಟ ನಾಲ್ಕು ತ್ರಿಭುಜಾಕೃತಿಗಳು ಶಿಲುಬೆಯಾಕೃತಿ ಹೊಂದಿರುವುದನ್ನು ಹಲವೆಡೆ ಕಾಣುತ್ತೇವೆ. ಅವು ಗ್ರೀಕ್ ಶಿಲುಬೆಯ ಹೋಲಿಕೆಯಾಗಿದ್ದು ಅವು ಭಾರತಕ್ಕೆ ಬಂದುದು ಇತ್ತೀಚೆಗೆ ಎಂದು ಹೇಳಬಹುದು. ಇಂಡಿಯಾ ದೇಶಕ್ಕೆ ಜಲಮಾರ್ಗವನ್ನು ಕಂಡು ಹಿಡಿಯುವ ಮೊದಲು ಧರ್ಮಪ್ರಚಾರಕರೆಲ್ಲ ನೆಲಮಾರ್ಗವಾಗಿಯೇ ಬರಬೇಕಿತ್ತು. ಹಾಗೆ ಅವರು ಬಂದಿದ್ದಲ್ಲಿ ಗ್ರೀಕ್ ಸಂಸ್ಕೃತಿಯು ಹರಡಿದ್ದ ಪ್ರದೇಶಗಳನ್ನು ಹಾದು ಬರಬೇಕಿತ್ತಷ್ಟೆ. ಅಂದರೆ ಪೋರ್ತುಗೀಜರು ಇಂಡಿಯಾಕ್ಕೆ ಬರುವ ಮುನ್ನ ನೆಲಮಾರ್ಗವಾಗಿ ಯಾರೂ ಧರ್ಮಪ್ರಚಾರಕ್ಕಾಗಿ ಬರಲಿಲ್ಲ ಎಂದು ಹೇಳಬೇಕಾಗುತ್ತದೆ.
ಯೆಹೂದ್ಯರು ಪ್ರತಿಮಾರಾಧನೆಗೆ ಇಂಬುಗೊಡುತ್ತಿರಲಿಲ್ಲವಾದ್ದರಿಂದ ಪ್ರಾರಂಭಿಕ ಶಿಲುಬೆಗಳಲ್ಲಿ ಯೇಸುಕ್ರಿಸ್ತನ ದೇಹವನ್ನು ಲಗತ್ತಿಸುತ್ತಿರಲಿಲ್ಲ. ಯೇಸುಕ್ರಿಸ್ತ ಪುನರುತ್ಥಾನವಾದ ನಂತರ ಶಿಲುಬೆ ಬರಿದೇ ಆಯಿತು ಎಂಬುದನ್ನೂ ಅದು ಸೂಚಿಸುತ್ತದೆ. ಕೆಲವು ಶಿಲುಬೆಗಳಲ್ಲಿ ಕುರಿಮರಿಯ ಚಿತ್ರವಿರುವುದನ್ನೂ ನೀವು ಗಮನಿಸಿರಬಹುದು. ಚೊಚ್ಚಲ ಕುರಿಮರಿಯನ್ನು ದೇವರಿಗೆ ಬಲಿಕೊಡುವುದು ಇಸ್ರಯೇಲರಲ್ಲಿ ನಡೆದು ಬಂದ ಪದ್ಧತಿ. ಅಂತೆಯೇ ಕ್ರಿಸ್ತನನ್ನು ಬಲಿಪಶುವಾಗಿ ಚಿತ್ರಿಸಿದ ಪರಿಯಿದು. ಏಳನೆಯ ಶತಮಾನದಿಂದೀಚೆಗೆ ಕ್ರಿಸ್ತನ ಆಳೆತ್ತರದ ಪ್ರತಿಮೆಗಳನ್ನು ಮಾಡಿ ಮೆರುಗಿನ ವಸ್ತ್ರಗಳಿಂದ ಅಲಂಕರಿಸಿ ಶಿಲುಬೆಯ ಬದಿಯಲ್ಲಿ ನಿಲ್ಲಿಸುವ ಪರಿಪಾಠ ಮೊದಲಾಯಿತು. ಕ್ರಮೇಣ ಕ್ರಿಸ್ತನ ಯಾತನೆ ಮತ್ತು ಸಾವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಲುವಾಗಿ ಕ್ರಿಸ್ತನ ದೇಹವನ್ನು ನೈಜತೆಗೆ ಅತ್ಯಂತ ಹತ್ತಿರವಾಗಿ ರೂಪಿಸುವ ಪದ್ಧತಿ ಬೆಳೆದುಬಂತು.
ಮೈಸೂರು ಸೀಮೆಗೆ ಇಟಾಲಿಯನ್ ಜೆಸ್ವಿತರು ಬಂದ ನಂತರ ನಮ್ಮಲ್ಲಿ ಕ್ರೈಸ್ತ ಧರ್ಮದ ಪ್ರಚಾರ ವ್ಯವಸ್ಥಿತವಾಗಿ ನಡೆಯಿತೆನ್ನಬಹುದು. ಅವರ ಕಾಲದಲ್ಲಿ ಊರಿಂದೂರಿಗೆ ಪ್ರಚಾರಗೈಯುತ್ತ ಸಾಗುವಾಗ್ಗೆ ಇಂಥಲ್ಲಿ ಪ್ರಚಾರ ಕಾರ್ಯ ಯಶಸ್ವಿಯಾಗಿ ಮುಗಿದಿದೆ ಎನ್ನುವುದನ್ನು ಸೂಚಿಸಲು ಅವರು ಶಿಲುಬೆಕಲ್ಲೊಂದನ್ನು ಅಲ್ಲಿ ನೆಡುತ್ತಿದ್ದರು. ಅವುಗಳಿಲ್ಲಿ ಹೆಚ್ಚಿನವು ಲ್ಯಾಟಿನ್ ಶಿಲುಬೆಗಳೇ ಆಗಿವೆ.
ಕೇರಳದ ಕೋಡುಂಗಲ್ಲೂರಿನಲ್ಲಿ ಸಂತ ತೋಮಸರದೆಂದು ಹೇಳಲಾಗುವ ಸ್ಮಾರಕವಿದೆ. ಅಲ್ಲಿನ ಶಿಲುಬೆಯ ಪಟ್ಟಿಗಳ ಕೊನೆಯಲ್ಲಿ ಹೂದಳಗಳಿವೆ. ಶಿಲುಬೆಯ ಪೀಠವು ಅರ್ಧಚಂದ್ರಾಕೃತಿಯ ಪಟ್ಟಿಯ ಮೇಲೆ ಕುಳಿತಿದ್ದು ಆ ಪಟ್ಟಿಯ ಮೊನೆಗಳೂ ಹೂದಳಗಳನ್ನು ಧರಿಸಿವೆ. ಒಟ್ಟಾರೆ ಶಿಲುಬೆಯು ಹಡಗಿನ ಲಂಗರಿನಂತಿದೆ. ಮಲಯಾಳಿಗರ ಚರ್ಚ್ಗಳಲ್ಲಿ ಇಂದಿಗೂ ಈ ಪ್ರಕಾರದ ಶಿಲುಬೆಗಳನ್ನು ಕಾಣಬಹುದು.
ಆದರೆ ಕೇರಳದ ಕೊಚ್ಚಿಯಲ್ಲಿ ಕೂನಾನ್ ಕುರಿಶು ಎಂಬ ಲ್ಯಾಟಿನ್ ಶಿಲುಬೆ ಇದೆ. ನೂರಾರು ವರ್ಷಗಳ ಕಾಲ ವಿದೇಶೀ ಪಾದ್ರಿಗಳಿಗೆ ನಡೆದುಕೊಳ್ಳುತ್ತಿದ್ದ ಅಲ್ಲಿನ ಸ್ಥಳೀಯ ಕ್ರೈಸ್ತರು ಒಂದು ಸನ್ನಿವೇಶದಲ್ಲಿ ಆ ಪಾದ್ರಿಗಳ ವಿರುದ್ಧ ತಿರುಗಿ ಬಿದ್ದರಂತೆ. ಹೆಣ್ಣುಗಂಡೆನ್ನದೆ ಆ ಕ್ರೈಸ್ತರು ಅಲ್ಲಿನ ಪವಿತ್ರ ಶಿಲುಬೆಗೆ ಉದ್ದನೆಯ ಹಗ್ಗ ಕಟ್ಟಿ ಎಲ್ಲರೂ ಅದನ್ನು ಹಿಡಿದುಕೊಂಡು ನಾವು ಮಾತ್ರವಲ್ಲ ನಮ್ಮ ಸಂತಾನವೂ ಇನ್ನು ಮುಂದೆ ಈ ವಿದೇಶೀ ಪಾದ್ರಿಗಳಿಗೆ ನಡೆದುಕೊಳ್ಳುವುದಿಲ್ಲ, ನಮ್ಮ ಧಾರ್ಮಿಕ ವಿಚಾರಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡಿದರಂತೆ. ಈ ಹಗ್ಗ ಜಗ್ಗಾಟದಲ್ಲಿ ಆ ಶಿಲುಬೆಯು ಕೊಂಚ ಬಾಗಿತಂತೆ. ಕೊಚ್ಚಿಯ ಮಟ್ಟಾನ್ಚೇರಿಯ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಇಂದಿಗೂ ಆ ಶಿಲುಬೆಯನ್ನು ಕಾಣಬಹುದು. ಜನರು ಭಕ್ತಿಪೂರ್ವಕವಾಗಿ ಆ ಶಿಲುಬೆಗೆ ನಡೆದುಕೊಳ್ಳುತ್ತಾರೆ. ಮಲಯಾಳ ಭಾಷೆಯಲ್ಲಿ ಕೂನಾನ್ ಕುರಿಶು ಎಂದರೆ ಬಾಗಿದ ಶಿಲುಬೆ ಎಂದರ್ಥ.
ಫಿಲಿಪ್ಪೀನ್ಸ್ ದೇಶದಲ್ಲಿ ಕರೀ ಶಿಲುಬೆ ಉತ್ಸವವನ್ನು ಜಾತ್ರೆಯಂತೆ ಆಚರಿಸಲಾಗುತ್ತದಂತೆ. ಅಲ್ಲಿಗೆ ಕ್ರೈಸ್ತಧರ್ಮವನ್ನು ಪರಿಚಯಿಸಿದ ವಿದೇಶೀ ಪಾದ್ರಿಗಳು ಹಡಗಿನಲ್ಲಿ ಶಿಲುಬೆಯನ್ನು ಹೊತ್ತೊಯ್ಯುವಾಗ ಹಡಗಿಗೆ ಬೆಂಕಿ ಬಿದ್ದು ಹಲವಾರು ಸರಕು ಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆದರಂತೆ. ಬೆಂಕಿಯ ಜ್ವಾಲೆಗೆ ಸಿಲುಕಿ ಕಪ್ಪಗಾದರೂ ಹಾಳಾಗದ ಶಿಲುಬೆ ಎಲ್ಲರಿಗೂ ತುಂಬಾ ಪೂಜ್ಯ ಭಾವನೆ ಮೂಡಿಸಿತಂತೆ. ಇಂದಿಗೂ ಆ ದಿನವನ್ನು ಬ್ಲ್ಯಾಕ್ ನಜರೀನ್ ಉತ್ಸವವೆಂದು ಆಚರಿಸುತ್ತಿದ್ದಾರಂತೆ.

ನಮ್ಮ ಕನ್ನಡ ಕ್ರೈಸ್ತರಲ್ಲಿ ಶಿಲುಬೆ ಎಂಬ ಪದ ಕಷ್ಟತೊಂದರೆ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಮನೆಯ ಗೋಡೆಯಲ್ಲಿ ಶಿಲುಬೆ ನೇತುಹಾಕಿದರೆ ಆ ಮನೆಯಲ್ಲಿ ತಾಪತ್ರಯ ಯಾತನೆ ಹೆಚ್ಚು ಎಂಬ ನಂಬುಗೆಯಿದೆ. ಮದುವೆ ಮುಂತಾದ ಮಂಗಳಕರ ಸಂದರ್ಭಗಳ ಆಹ್ವಾನಪತ್ರಿಕೆಗಳಲ್ಲಿ ಶಿಲುಬೆ ಬಳಸುವುದಿಲ್ಲ. ಯಾರೂ ಶಿಲುಬೆಯನ್ನು ಉಡುಗೊರೆಯಾಗಿ ಕೊಡುವುದಿಲ್ಲ. ಆದರೆ ಸಾವು, ತಿಥಿ ಮುಂತಾದವುಗಳ ಸಂದರ್ಭಗಳಲ್ಲಿ ಕಪ್ಪುಶಿಲುಬೆಯ ಚಿತ್ರವನ್ನು ಯಥೇಚ್ಛವಾಗಿ ಬಳಸುತ್ತಾರೆ.

ಕೊನೆಯಲ್ಲಿ ಒಂದು ತರಲೆ ಮಾತು. “ಶಿಷ್ಯರೆನ್ನರಾಗಲು ನೀವು ಬಯಸ್ವಿರಾದರೆ ಶಿಲುಬೆ ನಿಮ್ಮ ಹೊತ್ತು ನನ್ನ ಹಿಂದೆ ಬನ್ನಿರಿ” ಎಂಬ ಯೇಸುಕ್ರಿಸ್ತರ ನುಡಿಗಳ ಬಗ್ಗೆ ಬೋಧನೆ ನೀಡಿದ ಸ್ವಾಮಿಗಳು ‘ಈಗ ಎಲ್ಲರೂ ನಿಮ್ಮ ನಿಮ್ಮ ಶಿಲುಬೆಗಳನ್ನು ಎತ್ತಿ ಹಿಡಿಯಿರಿ’ ಎಂದಾಗ ಯಾರೋ ಒಬ್ಬಾತ ತನ್ನ ಹೆಂಡತಿಯನ್ನು ಎತ್ತಿಹಿಡಿದು ‘ಸ್ವಾಮಿ ಈಕೆಯೇ ನನ್ನ ಶಿಲುಬೆ’ ಎಂದನಂತೆ.