ಮೈಸೂರು ಅರಸರ ದೌರ್ಬಲ್ಯ - ಹೈದರಾಲಿಯ ಪ್ರಾಬಲ್ಯ

ಮೈಸೂರು ಅರಸರ ದೌರ್ಬಲ್ಯ - ಹೈದರಾಲಿಯ ಪ್ರಾಬಲ್ಯ

     ೧೮ನೆಯ ಶತಮಾನದ ಮಧ್ಯಭಾಗ  ಕರ್ನಾಟಕದ ಪಾಲಿಗೆ ಒಂದು ದುರದೃಷ್ಟಕರ ಅವಧಿಯೆನ್ನಬಹುದು. ಮೈಸೂರು ಸಂಸ್ಥಾನ ಅರಾಜಕತೆ ಮತ್ತು ಪಿತೂರಿಗಳಿಗೆ ಒಳಗಾಗಿ ಅಧಿಕಾರ ಕಳೆದುಕೊಂಡದ್ದು ಒಂದೆಡೆಯಾದರೆ, ಬಲಿಷ್ಠ ಸಂಸ್ಥಾನವಾಗಿದ್ದ ಕೆಳದಿ ಸಂಸ್ಥಾನದ ಆಳ್ವಿಕೆ ಸಹ ರಕ್ತಸಿಕ್ತ ಮತ್ತು ದುರಂತ ಅಂತ್ಯ ಕಂಡ ಸಮಯವದು. ಕನ್ನಡಿಗರ ಹೆಮ್ಮೆಯೆನಿಸಿದ್ದ ಈ ಎರಡೂ ಸಂಸ್ಥಾನಗಳ ನಾಶಕ್ಕೆ ಕಾರಣನಾದ ವ್ಯಕ್ತಿ ಒಬ್ಬನೇ! ಆತನೇ ಹೈದರಾಲಿ. ಮೈಸೂರು ಅರಸರ ದೌರ್ಬಲ್ಯ ಹೈದರಾಲಿಯ ಪ್ರಾಬಲ್ಯಕ್ಕೆ ಕಾರಣವಾಯಿತು. ಹೈದರಾಲಿಯ ತಂದೆ ಫತಾಹ್ ಮುಹಮದ್ ಕೋಲಾರದಲ್ಲಿ ಹುಟ್ಟಿದವನಾಗಿದ್ದು, ಕರ್ನಾಟಕದ ನವಾಬರ ಸೈನ್ಯದಲ್ಲಿ ೫೦ ಸೈನಿಕರ ಕಣ್ಗಾವಲು ಪಡೆಯ   ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದು, ನಂತರದಲ್ಲಿ ಮೈಸೂರು ಒಡೆಯರರ ಸೈನ್ಯಕ್ಕೆ ಸೇರಿ ಸೈನ್ಯದಲ್ಲಿ ಉನ್ನತ ಹುದ್ದೆ ಗಳಿಸಿದವನು. ಇವರ ಮೂಲ ವಂಶದ ಬಗ್ಗೆ ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಪರ್ಷಿಯಾ ಮೂಲವಂಶಸ್ಥರೆಂದು ಒಂದು ವರದಿಯಿದ್ದರೆ, ಆಫ್ಘಾನಿಸ್ತಾನದ ಮೂಲದವರೆಂದು, ಅರಬರ ಖುರೇಷಿ ವಂಶಸ್ಥರೆಂದು ಸಹ ಹೇಳುತ್ತಾರೆ. ಫತಾ ಮುಹಮ್ಮದನ ಸೇವೆಯನ್ನು ಮೆಚ್ಚಿ ಒಡೆಯರರು ಬೂದಿಕೋಟೆಯನ್ನು ಆತನಿಗೆ ಜಹಗೀರಾಗಿ ನೀಡಿದ್ದು, ಅವನು ಅಲ್ಲಿನ ನಾಯಕನಾಗಿ ನೇಮಿತಗೊಂಡಿದ್ದನು. ಆ ಸಮಯದಲ್ಲಿ (ಸುಮಾರು ೧೭೧೭-೨೨ರಲ್ಲಿ) ಜನಿಸಿದ ಹೈದರಾಲಿ ಫತಾ ಮುಹಮ್ಮದನ ಐದನೆಯ ಮಗ ಹಾಗೂ ಮೂರನೆಯ ಹೆಂಡತಿಯ ಎರಡನೆಯ ಮಗನಾಗಿದ್ದನು. ಫತಾ ಮುಹಮದ್ ಕಾಳಗವೊಂದರಲ್ಲಿ ಮೃತನಾದ ನಂತರದಲ್ಲಿ ಆರ್ಕಾಟ್ ನವಾಬರ ಸೈನ್ಯಕ್ಕೆ ಸೋದರ ಶಾಬಾಜನೊಂದಿಗೆ ಸೇರಿದ ಹೈದರಾಲಿ ಅಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ. ನಂತರ ಶ್ರೀರಂಗಪಟ್ಟಣಕ್ಕೆ ಬಂದು ಅಲ್ಲಿ ಒಡೆಯರರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಹೈದರನ ಚಿಕ್ಕಪ್ಪನ ಮೂಲಕ ಇಮ್ಮಡಿ ಕೃಷ್ೞರಾಜ ಒಡೆಯರರ ಪ್ರಧಾನ ಅಮಾತ್ಯ, ಸೇನಾಧಿಪತಿ ಮತ್ತು ವಾಸ್ತವಿಕ ಆಳ್ವಿಕೆ ನಡೆಸುತ್ತಿದ್ದ ದೇವರಾಜ ಅರಸು ಮತ್ತು ಅವನ ಸಹೋದರ ನಂಜರಾಜ ಅರಸರ ಪರಿಚಯ ಮಾಡಿಕೊಂಡು, ಒಡೆಯರರ ಸೈನ್ಯದಲ್ಲಿ ಸೇರಿಕೊಂಡರು. ೧೦೦ ಅಶ್ವಾರೋಹಿಗಳು ಮತ್ತು ೨೦೦೦ ಪದಾತಿಗಳ ಮುಖ್ಯಸ್ಥನಾದ ಶಾಬಾಜನ ಕೈಕೆಳಗೆ ಹೈದರ್ ಸೇವೆ ಸಲ್ಲಿಸಿದ.

     ೧೭೪೮ರಲ್ಲಿ ಹೈದರಾಬಾದಿನ ನಿಜಾಮ ಖಮರುದ್ದಿನ್ ಖಾನ್ ಅಸಫ್ ಜಾ೧ ಮೃತನಾದಾಗ ಉತ್ತರಾಧಿಕಾರಕ್ಕಾಗಿ ಆತನ ಮಗ ನಾಸಿರ್ ಜಂಗ್ ಮತ್ತು ದಾಯಾದಿ ಮುಜಫ್ಫರ್ ಜಂಗ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದನ್ನು ಎರಡನೆಯ ಕರ್ನಾಟಕ ಕದನವೆಂದು ಕರೆಯುತ್ತಾರೆ. ಸ್ಥಳೀಯ ಪಾಳೆಯಗಾರರಲ್ಲದೆ ಬ್ರಿಟಿಷರು ಮತ್ತು ಫ್ರೆಂಚರೂ ಸಹ ಇದರಲ್ಲಿ ಭಾಗಿಯಾಗಿದ್ದರು. ನಂಜರಾಜ ಅರಸನ ನಾಯಕತ್ವದಲ್ಲಿ ದೊಡ್ಡ ಮೈಸೂರು ಸೈನ್ಯವೇ ನಾಸಿರ್ ಜಂಗನ ಪರವಾಗಿ ಹೊರಟಿತ್ತು. ದೇವನಹಳ್ಳಿಗೆ ಬಂದು ಮುಜಫ್ಫರ್ ಜಂಗನ ಸೈನ್ಯದ ಹಿಡಿತದಲ್ಲಿದ್ದ ದೇವನಹಳ್ಳಿ ಕೋಟೆಯನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಮೈಸೂರು ಸೈನ್ಯವೂ ಸೇರಿತ್ತು. ಎಂಟು ತಿಂಗಳುಗಳ ಕಾಲ ನಡೆದ ಈ ಕೋಟೆಯ ಯಶಸ್ವಿ ಗ್ರಹಣ ಕಾರ್ಯದಲ್ಲಿ ಹೈದರ್ ಸೋದರರು ತೋರಿದ ಪರಾಕ್ರಮಕ್ಕೆ ಮೆಚ್ಚಿ ಅವರಿಗೆ ಹೆಚ್ಚಿನ ಅಧಿಕಾರ ವಹಿಸಿಕೊಡಲಾಯಿತು. ೧೭೫೫ರ ವೇಳೆಗೆ ಹೈದರಾಲಿ ೩೦೦೦ ಪದಾತಿಗಳ ಮತ್ತು ೧೫೦೦ ಅಶ್ವಾರೋಹಿಗಳ ಪಡೆಯ ನಾಯಕನಾಗಿದ್ದ. ಅಲ್ಲದೆ ತನ್ನ ಗುರಿಯ ಸಾಧನೆಗಾಗಿ ಲೂಟಿಕಾರ್ಯದಲ್ಲೂ ತೊಡಗಿ ತನ್ನ ಬಲವನ್ನು ಮತ್ತು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದನೆಂದು ಹೇಳುತ್ತಾರೆ. ಅದೇ ವರ್ಷ ಆತನನ್ನು ದಿಂಡಿಗಲ್ಲಿನ ಫೌಜುದಾರನನ್ನಾಗಿಯೂ ನೇಮಿಸಲಾಯಿತು. ಆಗ ತನ್ನ ಸೈನ್ಯದ ತರಬೇತಿ ಮತ್ತು ಸಂಘಟನೆಯ ಸಲುವಾಗಿ ಫ್ರೆಂಚ್ ಸಲಹೆಗಾರರನ್ನೂ  ಉಳಿಸಿಕೊಂಡಿದ್ದ. ಜೊತೆಜೊತೆಗೆ ಫ್ರೆಂಚರ ಸೇವೆಯನ್ನೂ ಮಾಡಿದ್ದ ಹೈದರಾಲಿ ಮುಜಫ್ಫರ್ ಜಂಗ್ ಮತ್ತು ಚಂದಾ ಸಾಹೇಬರನ್ನೂ ಭೇಟಿಯಾಗಿದ್ದನೆಂದು ನಂಬಲಾಗಿದೆ. ನವಾಬ  ಮುಹಮ್ಮದ್ ಅಲಿಖಾನ್ ವಲ್ಲಾಜಾನನ್ನು ನಂಬದ ಹೈದರಾಲಿ ಆತನನ್ನು ದ್ವೇಷಿಸತೊಡಗಿದ್ದ. ನಂತರದ ವರ್ಷಗಳಲ್ಲಿ ಬ್ರಿಟಿಷರೊಂದಿಗೆ ಒಳ ಒಪ್ಪಂದಗಳನ್ನು ಮಾಡಿಕೊಳ್ಳಲು ಹೈದರಾಲಿಗೆ ಮುಹಮ್ಮದ್ ಅಲಿಖಾನ್ ವಲ್ಲಾಜಾ ಪರಿಣಾಮಕಾರಿಯಾಗಿ ಅಡ್ಡಿಯಾದನೆಂದು ಹೈದರಾಲಿ ದೂರುತ್ತಿದ್ದ.

     ಹೈದರಾಬಾದಿನ ನಿಜಾಮರಿಂದ ಮತ್ತು ಮರಾಠರಿಂದ ದಾಳಿಗಳಾಗುವ ಸಾಧ್ಯತೆಯಿದ್ದುದರಿಂದ ಹೈದರಾಲಿಯನ್ನು ದೇವರಾಜಅರಸನಿಗೆ ಸಹಾಯ ಮಾಡುವ ಸಲುವಾಗಿ ಕರೆಸಲಾಯಿತು. ಆಗ ಮೈಸೂರಿನ ಸೈನ್ಯ ಅಸ್ತವ್ಯಸ್ತವಾಗಿದ್ದು ಸಂಬಳ ಪಾವತಿ ವಿಷಯದಲ್ಲಿ ದಂಗೆಯೇಳುವ ಹಂತದಲ್ಲಿತ್ತು. ದಾಳಿಗಳಾಗುವ ಅಪಾಯದಿಂದ ದೇವರಾಜಅರಸು ಪಾರಾದ. ಹ್ಶೆದರ್ ಸೈನ್ಯದವರಿಗೆ ಸಂಬಳ ಪಾವತಿಗೆ ವ್ಯವಸ್ಥೆ ಮಾಡಿದ್ದಲ್ಲದೆ ದಂಗೆ ಎಬ್ಬಿಸಲು ಸಂಚು ಮಾಡಿದ್ದವರನ್ನು ಬಂಧಿಸಿದ. ನಂತರ ಮಲಬಾರಿನ ನಾಯರರ ವಿರುದ್ಧದ ದಾಳಿಗಳಿಗೆ ಮೈಸೂರು ಸೈನ್ಯದ ನಾಯಕತ್ವ ವಹಿಸಿದ. ಇದರಲ್ಲಿ ಆತನ ಪಾತ್ರದ ಬಗ್ಗೆ ಮೆಚ್ಚಿದ ಕಿರಿಯ ದೊರೆ ಇಮ್ಮಡಿ ಕೃಷ್ೞರಾಜ ಒಡೆಯರರಿಂದ ಹೈದರಾಲಿಗೆ ಫತಾ ಹೈದರ್ ಬಹಾದುರ್ ಅಥವ ನವಾಬ್ ಹೈದರ್ ಅಲಿಖಾನ್ ಎಂಬ ಬಿರುದಿನೊಂದಿಗೆ ಬೆಂಗಳೂರಿನ ಜಹಗೀರು ಸಹ ಸಿಕ್ಕಿತು. ೧೭೫೮ರಲ್ಲಿ ಮರಾಠರ ಬೆಂಗಳೂರು ಕೋಟೆಯ ಮುತ್ತಿಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ ಹೈದರ್ ೧೭೫೯ರ ಹೊತ್ತಿಗೆ ಪೂರ್ಣ ಮೈಸೂರು ಸೈನ್ಯದ ಹಿಡಿತ ಸಾಧಿಸಿದ್ದ. ಮರಾಠರೊಂದಿಗಿನ ಸತತ ಕಿರುಕುಳಗಳಿಂದಾಗಿ ಮೈಸೂರು ಸಂಸ್ಥಾನದ ಖಜಾನೆ ಹೆಚ್ಚುಕಡಿಮೆ ದಿವಾಳಿಯ ಹಂತದಲ್ಲಿತ್ತು. ಇದರಿಂದಾಗಿ ದೇವರಾಜಅರಸನ ನಿಧನಾನಂತರದಲ್ಲಿ ಮಂತ್ರಿಯಾಗಿದ್ದ ನಂಜರಾಜರಸನನ್ನು ರಾಜಮಾತೆ ಗಡೀಪಾರು ಮಾಡಬೇಕಾದ ಅನಿವಾರ್ಯತೆ ಬಂದೊದಗಿತು. ಆಸ್ಥಾನದಲ್ಲಿ ತನಗಿದ್ದ ಪ್ರಭಾವದಿಂದ ಇದನ್ನು ತನ್ನ ಪರವಾಗಿ ಬಳಸಿಕೊಂಡ ಚಾಣಾಕ್ಷ ಹ್ಶೆದರ್. ಹೈದರಾಲಿ ನಿರಕ್ಷರಕುಕ್ಷಿಯಾಗಿದ್ದರೂ ವ್ಯವಹಾರ ಚತುರ ಮತ್ತು ಚಾಣಾಕ್ಷನಾಗಿದ್ದ. ತನ್ನ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಖಂಡೇರಾವ್ ಎಂಬುವನನ್ನು ನೇಮಿಸಿಕೊಂಡಿದ್ದ. ಖಂಡೇರಾವ್ ಕರಾರುವಾಕ್ಕಾಗಿ ಲೆಕ್ಕಪತ್ರಗಳನ್ನು ಲೆಕ್ಕವಿಡುವ ಪದ್ಧತಿಯಿಂದ ಲೂಟಿ ಮಾಡಿದ ಹಣಕಾಸು, ಆಭರಣಗಳು, ವಸ್ತುಗಳು ಸೇರಿದಂತೆ ಎಲ್ಲದರ ಲೆಕ್ಕಗಳನ್ನು ಸರಿಯಾಗಿ ಇಡುವ ಮತ್ತು ಪರಿಶೀಲನೆ ಮಾಡುವ ರೀತಿಯಿಂದ ಯಾವುದೇ ಕಣ್ಣುತಪ್ಪಿಸುವ, ಮೋಸ ಮಾಡುವ ಅವಕಾಶ ಯಾರಿಗೂ ಇರಲಿಲ್ಲ. ಹೈದರಾಲಿಯ ಸಂಪತ್ತು ವೃದ್ಧಿ ಮತ್ತು ರಕ್ಷಣೆಗೆ ಆತನಿಂದ ಬಹಳ ಉಪಕಾರವಾಗಿದ್ದು, ಆತ ಅಧಿಕಾರದಲ್ಲಿ ಮೇಲೆ ಬರಲು ಇದೂ ಪ್ರಮುಖ ಪಾತ್ರ ವಹಿಸಿತ್ತು.

     ಹೈದರಾಲಿ ಮೇಲೆ ಬರುತ್ತಿದ್ದ ರೀತಿಯಿಂದ ರಾಜಮಾತೆ ಆತಂಕಿತಳಾಗಿದ್ದು, ಹೀಗೆಯೇ ಮುಂದುವರೆದರೆ ಅಧಿಕಾರಚ್ಯುತಿಯಾಗುವ ಸಂಭವ ಆಕೆಗೆ ಕಾಣಿಸುತ್ತಿತ್ತು. ಹೀಗಾಗಿ ೧೭೬೦ರಲ್ಲಿ ಖಂಡೇರಾಯನನ್ನು ಬಳಸಿಕೊಂಡು ಹೈದರನನ್ನು ಹೊರಹಾಕುವ ಸಂಚು ರೂಪಿತವಾಯಿತು. ಹ್ಶೆದರ್ ಅವಸರವಾಗಿ ಶ್ರೀರಂಗಪಟ್ಟಣವನ್ನು ಗೃಹಬಂಧನದಲ್ಲಿದ್ದ ಮಗ ಟಿಪ್ಪುಸುಲ್ತಾನ್ ಸೇರಿದಂತೆ ತನ್ನ ಸಂಸಾರವನ್ನು ಅಲ್ಲೇ ಬಿಟ್ಟು ಓಡಿಹೋಗಬೇಕಾಯಿತು. ಇದರಿಂದ ಹೈದರಾಲಿಗೆ ಹಿನ್ನಡೆಯಾಯಿತು. ತನ್ನ ಸೋದರ ಸಂಬಂಧಿ ಮಕ್ದುಮ್ ಆಲಿಯ ಸಹಕಾರದಿಂದ ಬಲ ವೃದ್ಧಿಸಿಕೊಂಡ ಆತ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರ ಸಹಾಯದಿಂದ ಶ್ರೀರಂಗಪಟ್ಟಣದೆಡೆಗೆ ಧಾವಿಸಿದ. ಆದರೆ, ಅಲ್ಲಿಗೆ ತಲುಪುವ ಮುನ್ನವೇ ೧೧೦೦೦ ಸೈನಿಕರ ಬಲದಿಂದ ಅವನನ್ನು ಎದುರಿಸಿದ ಖಂಡೇರಾಯನ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು. ಗಡೀಪಾರಾಗಿದ್ದ ನಂಜರಾಜರಸನ ಸಹಾಯ ಕೋರಿದ ಹೈದರನಿಗೆ ನಂಜರಾಜರಸ ತನ್ನ ಸೈನ್ಯವನ್ನೂ ಒದಗಿಸಿದ್ದಲ್ಲದೆ ದಳವಾಯಿ ಪಟ್ಟವನ್ನೂ  ವಹಿಸಿಕೊಟ್ಟನು. ಉತ್ತೇಜಿತನಾದ ಹೈದರ್ ಪುನಃ ಶ್ರೀರಂಗಪಟ್ಟಣದ ಮೇಲೇರಿ ಬಂದನು. ಸೈನ್ಯಗಳು ಮುಖಾಮುಖಿಯಾದಾಗ ಹೈದರ್ ನಡೆಸಿದ ಕುತಂತ್ರ ಫಲ ಕೊಟ್ಟಿತು. ಖಂಡೇರಾಯನ ಸೈನ್ಯದ ಪ್ರಮುಖ ಅಧಿಕಾರಿಗಳೊಂದಿಗೆ ಖಂಡೇರಾಯನನ್ನು ಹೈದರಾಲಿಗೆ ಹಿಡಿದುಕೊಡಲು ನಂಜರಾಜರಸನೊಂದಿಗೆ  ಒಪ್ಪಂದವಾಗಿರುವಂತೆ ಸೃಷ್ಟಿಸಿದ ಪತ್ರಗಳು ಖಂಡೇರಾಯನಿಗೆ ತಲುಪುವಂತೆ ಮಾಡಲಾಯಿತು. ಈ ಸಂಚಿನಿಂದ ಭಯಗೊಂಡ ಖಂಡೇರಾವ್ ಶ್ರೀರಂಗಪಟ್ಟಣಕ್ಕೆ ಓಡಿದ. ನಾಯಕನಿಲ್ಲದ ಸೈನ್ಯದೊಂದಿಗೆ ಸೆಣಸುವುದು ಕಷ್ಟವಾಗಲಿಲ್ಲ. ಹೈದರನಿಗೆ ಜಯವಾದ ನಂತರ ನಡೆದ ಮಾತುಕತೆಗಳ ಪರಿಣಾಮವಾಗಿ ಮೈಸೂರಿನ ಸಂಪೂರ್ಣ ಸೈನ್ಯದ ನಿಯಂತ್ರಣ ಹೈದರಾಲಿಗೆ ದಕ್ಕಿತು.

      ಮನೆಯ ಯಜಮಾನನ ಕೃಪೆಯಿಂದ ವಾಸಿಸಲು ಪಡೆದಿದ್ದ ಮನೆಯ ಯಜಮಾನಿಕೆಯನ್ನು ಕ್ರಮೇಣ ಆಶ್ರಯ ಪಡೆದವನೇ ಪಡೆದರೆ ಹೇಗಿರುತ್ತದೋ ಹಾಗೆಯೇ ಇಲ್ಲಿಯೂ ಆಯಿತೆನ್ನಬಹುದು. ದೂರದಲ್ಲಿರುವ ಮತ್ತು ಎದುರಿನಲ್ಲಿರುವ ಶತ್ರುವನ್ನು ಎದುರಿಸಬಹುದು. ಆದರೆ ಜೊತೆಯಲ್ಲೇ ಇದ್ದು ತಂತ್ರ-ಕುತಂತ್ರಗಳಿಂದ ಮೇಲೆ ಬರುವ ಹಿತಶತ್ರುಗಳನ್ನು ಎದುರಿಸುವುದು ಕಷ್ಟವೇ ಸರಿ. ಮೈಸೂರು ಸಂಸ್ಥಾನದ ರಾಜಮಾತೆ ಮತ್ತು ಸಂಸ್ಥಾನಕ್ಕೆ ನಿಷ್ಠರಾದವರು ಎದುರಿಸಿದ್ದ ಪರಿಸ್ಥಿತಿ ಇದೇ ಆಗಿತ್ತು. ಖಂಡೇರಾಯನನ್ನು ವಶಕ್ಕೊಪ್ಪಿಸುವುದೂ ಒಪ್ಪಂದದಲ್ಲಿ ಸೇರಿದ್ದರಿಂದ, ಅವನನ್ನು ವಶಕ್ಕೆ ಪಡೆದ ಹೈದರ್ ಬೆಂಗಳೂರಿನಲ್ಲಿ ಸೆರೆಯಲ್ಲಿರಿಸಿದ. ಖಂಡೇರಾಯನ ಬಂಧನದ ರೀತಿಯ ಬಗ್ಗೆ Maistre de La Tour ತನ್ನ The History of Hyder Shah, Alias Hyder Ali Kan Bahadur  ಎಂಬ ಪುಸ್ತಕದಲ್ಲಿ   ಈ ರೀತಿ ಹೇಳಿದ್ದಾನೆ: “By virtue of his power as regent, Hyder spared his life and commuted  his  punishment into that of being shut up in an iron cage in the middle of  the most public place of Bangalore; where it is still to be seen, with the bones of this unhappy favourite, who lived two years in the cage, exposed to the insults of a populace that adored Hyder”.   ಹೈದರ್ ತನ್ನ ರಾಜಕೀಯ ಬಂದಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದ ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಷ್ಟೆ. ಒಟ್ಟಾರೆಯಾಗಿ, ೧೭೬೧ರಲ್ಲಿ ಅನಧಿಕೃತವಾಗಿ ಮೈಸೂರು ಸಂಸ್ಥಾನದ ಆಡಳಿತ ಹೈದರಾಲಿಯ ಕೈಗೆ ಬಂದು ಮೈಸೂರಿನ ಅನಭಿಷಿಕ್ತ ದೊರೆಯಾಗಿ ಆಳತೊಡಗಿದ. ಇದಾದ ಐದು ವರ್ಷಗಳಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ದೇಹಾವಸಾನ ೨೫-೪-೧೭೬೬ರಲ್ಲಿ ಶ್ರೀರಂಗಪಟ್ಟಣದಲ್ಲಿ ಆಯಿತು. ನಂತರದಲ್ಲಿ ಮೈಸೂರು ಸುಲ್ತಾನರ ಆಡಳಿತ ಘೋಷಣೆ ಮಾಡಿ ತನ್ನನ್ನು ಸುಲ್ತಾನ್ ಹೈದರ್ ಅಲಿಖಾನ್ ಎಂದು ಹೆಸರಿಸಿಕೊಂಡ. ಹೈದರಾಬಾದಿನ ನಿಜಾಮರೊಂದಿಗೆ ವ್ಯವಹರಿಸುವಾಗ ಆತ ಎಚ್ಚರಿಕೆಯಿಂದಿರುತ್ತಿದ್ದ, ಏಕೆಂದರೆ ಮುಘಲರ ಅಧಿಕೃತ ಫರ್ಮಾನಿನಂತೆ ದಕ್ಷಿಣ ಭಾರತದ ಎಲ್ಲಾ ಮುಸ್ಲಿಮ್ ಆಡಳಿತದ ಪ್ರದೇಶಗಳಿಗೆ ಹೈದರಾಬಾದ್ ನಿಜಾಮರೇ ಪ್ರಮುಖರೆಂದು ಹೇಳಲಾಗಿತ್ತು. ನಂತರದ ಕೆಲವು ವರ್ಷಗಳಲ್ಲಿ ಉತ್ತರ ಭಾಗದಲ್ಲೂ ತನ್ನ  ರಾಜ್ಯದ ವಿಸ್ತಾರ ಮಾಡಿದ. 

     ವಿಜಯನಗರದ ಸಾಮಂತ ಸಂಸ್ಥಾನವಾಗಿ ೧೩೯೯ರಿಂದ ೧೫೫೩ರವರೆಗೆ ಇದ್ದ ಮೈಸೂರಿನ ಅರಸೊತ್ತಿಗೆ, ಸ್ವತಂತ್ರವಾಗಿ ೧೫೫೩ರಿಂದ ೧೭೬೬ರವರೆಗೆ ವಿಜೃಂಭಿಸಿದ್ದು, ಈ ಕಾಲದಲ್ಲಿ ಕನ್ನಡನಾಡು ವೈಭವಯುತವಾಗಿ ಬೆಳಗಿತ್ತು. ಅನಧಿಕೃತವಾಗಿ ೧೭೬೧ರಲ್ಲಿ ಹೈದರಾಲಿ ಹಿಡಿತಕ್ಕೆ ಬಂದ ಈ ಅರಸೊತ್ತಿಗೆ, ೧೭೬೬ರಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ನಿಧನದೊಂದಿಗೆ ಅದಿಕೃತವಾಗಿ ಆತನ ತೆಕ್ಕೆಗೆ ಬಂದಿತು. ನಂತರ ಒಡೆಯರರ ಉತ್ತರಾಧಿಕಾರಿಗಳು ಸ್ವತಂತ್ರವಾಗಿ ಸಂಸ್ಥಾನದ ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಅವರ ದೌರ್ಬಲ್ಯವಲ್ಲದೇ ಮತ್ತೇನೂ ಅಲ್ಲ. ೧೭೬೧ರಿಂದ ೧೭೯೬ರವರೆಗೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಅಧೀನತೆಯಲ್ಲಿ ಇದ್ದ ಅರಸು ಮನೆತನದವರೆಂದರೆ, ಇಮ್ಮಡಿ ಕೃಷ್ೞರಾಜ ಒಡೆಯರ್ (೧೭೩೪-೧೭೬೬), ನಂಜರಾಜ ಒಡೆಯರ್ (೧೭೬೬-೧೭೭೨), ೭ನೆಯ ಚಾಮರಾಜ ಒಡೆಯರ್(೧೭೭೨-೧೭೭೬) ಮತ್ತು ೮ನೆಯ ಚಾಮರಾಜ ಒಡೆಯರ್(೧೭೭೬-೧೭೯೬). ನಂತರದಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿದ್ದವರೆಂದರೆ, ಮುಮ್ಮಡಿ ಕೃಷ್ೞರಾಜ ಒಡೆಯರ್(೧೭೯೯-೧೮೬೮), ೯ನೆಯ ಚಾಮರಾಜ ಒಡೆಯರ್ (೧೮೮೧-೧೮೯೪), ನಾಲ್ಮಡಿ ಕೃಷ್ೞರಾಜ ಒಡೆಯರ್ (೧೮೯೪-೧೯೪೦) ಮತ್ತು ಜಯಚಾಮರಾಜ ಒಡೆಯರ್(೧೯೪೦-೧೯೫೦).

     ಹೈದರಾಲಿಗೆ ಓದು-ಬರಹ ಬರುತ್ತಿರಲಿಲ್ಲವಾದರೂ ಆತ ಒಬ್ಬ ನಿಪುಣ ಯೋಧ. ಸಂದರ್ಭ, ಪರಿಸ್ಥಿತಿಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಕುಶಲ ಚಾಣಾಕ್ಷ. ಬ್ರಿಟಿಷರ ವಿರುದ್ದವಾಗಿ ಫ್ರೆಂಚರೊಂದಿಗೆ ಕೈಜೋಡಿಸಿದ್ದವನು. ತನ್ನ ಅನುಕೂಲಕ್ಕೆ ತಕ್ಕಂತೆ ಕೆಲವು ಸಂದರ್ಭದಲ್ಲಿ ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಆತನ ಇಚ್ಛೆ ಮಾತ್ರ ಕೈಗೂಡಲಿಲ್ಲ. ಆತ ಪರ್ಷಿಯನ್, ಕನ್ನಡ, ತೆಲುಗು, ಹಿಂದೂಸ್ತಾನಿ, ಮರಾಠಿ ಮತ್ತು ತಮಿಳು ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲವನಾಗಿದ್ದ. ಸಾಂಪ್ರದಾಯಿಕ ಮುಸಲ್ಮಾನರಂತೆ ಗಡ್ಡ ಬಿಡದಿದ್ದ ಆತ ಗಿಡ್ಡ ಮೂಗು, ದಪ್ಪ ಕೆಳತುಟಿ ಹೊಂದಿದ್ದವನಾಗಿದ್ದು, ಸುಂದರನಲ್ಲದಿದ್ದರೂ ಆತ್ಮವಿಶ್ವಾಸ ಅವನಲ್ಲಿ ಎದ್ದು ಕಾಣುತ್ತಿತ್ತು. ಡಿಸೆಂಬರ್ ೧೭೮೨ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಆತನ ಅಂತ್ಯವಾಯಿತು. 

-ಕ.ವೆಂ.ನಾಗರಾಜ್.

ಆಧಾರ: 1. http://en.wikipedia.org/wiki/Hyder_Ali

2. http://en.wikipedia.org/wiki/Krishnaraja_Wodeyar_II

3. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)

 

 

Comments

Submitted by kavinagaraj Sat, 12/07/2013 - 12:50

In reply to by hariharapurasridhar

ಅನಗತ್ಯವಾಗಿ ಹೈದರ್ ಮತ್ತು ಟಿಪ್ಪೂರವರನ್ನು ಜಾತ್ಯಾತೀತತೆಯ ಸಂಕೇತವೆಂದು ಜ್ಞಾನಪೀಠಿಗಳು ಹೊಗಳುತ್ತಿದ್ದುದನ್ನು ಕಂಡು ಸತ್ಯ ತಿಳಿಯಲು ಪ್ರಯತ್ನಿಸಿದ ಕಾರಣ ಈ ಬರಹ. ಧನ್ಯವಾದ, ಶ್ರೀಧರ್.

Submitted by H A Patil Fri, 11/29/2013 - 18:54

ಕವಿ ನಾಗರಾಜ ರವರಿಗೆ ವಂದನೆಗಳು
ನಮಗೆ ಹೈದರಾಲಿ ಮತ್ತು ಟಿಪ್ಪು ಸುಲ್ತಾನರನ್ನು ಬಿಟ್ಟರೆ ಅವರ ಮೂಲದ ಮಾಹಿತಿ ಗೊತ್ತಿರಲೆ ಇಲ್ಲ, ಅವರ ವಂಶದ ಮೂಲ ವಿವರ ಗಳೊಂದಿಗೆ ಅವರ ಬೆಳವಣಿಗೆಯ ಪಥವನ್ನು ಸಂಕ್ಷೀಪ್ತವಾಗಿ ವಿವರಸಿದ್ದೀರಿ, ನಿಮ್ಮ ಅಧ್ಯನದ ಹರವು ಗಹನವಾದುದು, ಮೈಸೂರು ಒಡೆಯರ ಸ್ಥಿತಿ ಮತ್ತು ಹೈದರಾಲಿಯ ಮಹತ್ವಾಕಾಂಕ್ಷೆಯನ್ನು ಮನ ಮುಟ್ಟುವಂತೆ ವಿವರಿಸಿದ್ದೀರಿ ಧನ್ಯವಾದಗಳು.

Submitted by kavinagaraj Sat, 12/07/2013 - 12:52

In reply to by H A Patil

ಧನ್ಯವಾದಗಳು, ಪಾಟೀಲರೇ. ಹೈದರಾಲಿಯ ಮಹತ್ವಾಕಾಂಕ್ಷೆಗೆ ನೀರೆರೆದವರು ನಮ್ಮವರೇ ಎಂಬುದು ಗಮನಾರ್ಹ. ಜಯಚಂದ್ರರ ಸಂತತಿ ಇಂದೂ ಮುಂದುವರೆದಿದೆ. ನಿಜವಾದ ಅಪಾಯ ನಮ್ಮವರಿಂದಲೇ!!

Submitted by nageshamysore Sat, 11/30/2013 - 02:49

ಕವಿ ನಾಗರಾಜರೆ, ಟಿಪ್ಪುವಿನ ಬಗ್ಗೆ ತುಸು ಹೆಚ್ಚು ಓದಿ ಅರಿವಿತ್ತಾದರೂ ಹೈದರಾಲಿಯ ಕುರಿತು ಹೆಚ್ಚು ವಿವರ ತಿಳಿದಿರಲಿಲ್ಲ. ತಮ್ಮ ಲೇಖನದಿಂದ ಅದೆಲ್ಲಾ ಹಿನ್ನಲೆ ತಿಳಿದುಬಂತು, ಧನ್ಯವಾದಗಳು.

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by Amaresh patil Tue, 12/03/2013 - 19:30

ನಾಗರಾಜರವರೆ, ಹೈದರಾಲಿಯವರ ಗುಣ ಆವಗುಣಗಳನ್ನು ಇತಿಹಾಸದಿಂದ ಹುಡುಕಿತೆಗೆದು ನಿಖರವಾದ ದಿನಾಂಕಗಳೊಂದಿಗೆ ಪ್ರಸ್ತುತ ಪಡಿಸಿದ್ದಿರಿ, ಹೈದರಾಲಿಯವರನ್ನು ಮೀರಿಸುವ ಕುತಂತ್ರಿಗಳು ಇಂದುಕೂಡಾ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೈದರಾಲಿಯವರು ನೀರಕ್ಷರಿಯಾದರು ರಾಜಕಿಯ ಚತುರಾರಿಗದ್ದರು ಹಾಗೂ ಮಹಾತ್ವಕಾಂಕ್ಷಿಯಾಗಿದ್ದರು ಎನ್ನುವದನ್ನು ಉಲ್ಲೇಖಿಸಿದ್ದಿರಿ ಆವರಾದರೋ ತಮ್ಮನ್ನು ನಂಬಿದ ಒಂದು ಪ್ರಭಲ ಕುಟುಂಬಕ್ಕೆ ದ್ರೋಹವೆಸಗಿದ್ದಾರೆ, ಆದರೆ ಈಗಿನ ರಾಜರಾದ ಕೆಲ ಬ್ರಷ್ಟ ಚುನಾಹಿತ ಪ್ರತಿನಿಧಿಗಳು ತಮ್ಮನ್ನು ಚುನಾಯಿಸಿದ ಜನಸಾಮಾನ್ಯರಿಗೆ ನಿರಂತರ ದ್ರೋಹವೆಸಗುತ್ತಿದ್ದಾರೆ ಖಂಡಿತ ನಾವು ಜನಸಾಮಾನ್ಯರು ಇತಿಹಾಸದಿಂದ ಪಾಠಕಲಿಯೋಣ
ನಿಮ್ಮ ಲೇಖನ ತುಂಬಾಸೋಗಸಾಗಿದೆ ಹಾಗೆ ಕರ್ನಾಟಕದ ಇತಿಹಾಸದಲ್ಲಿ ಬರುವ ಅನೆಕ ರಾಜಮನೆತನಗಳ ಇತಿಹಾಸದ ಬಗ್ಗೆ ಬರೆಯಿರಿ ಧನ್ಯವಾಧಗಳು.

Submitted by kavinagaraj Sat, 12/07/2013 - 12:56

In reply to by Amaresh patil

ನೀವನ್ನುವುದು ನಿಜ, ಅಮರೇಶರೇ. ಟಿಪ್ಪೂ ವಿಶ್ವವಿದ್ಯಾಲಯ ಆಗಬೇಕು, ಸಂಸ್ಕೃತ ವಿಶ್ವವಿದ್ಯಾಲಯ ಆಗಬಾರದು ಅನ್ನುತ್ತಿರುವವರು ಟಿಪ್ಪು ಪ್ರಶಸ್ತಿ ವಿಜೇತರಾದ ನಮ್ಮ ಜ್ಞಾನಪೀಠಿಗಳೇ ಅನ್ನುವುದು ಗಮನಾರ್ಹ.

Submitted by abdul Sat, 12/07/2013 - 20:52

ಹೈದರಲಿ, ಟಿಪ್ಪೂ ಸುಲ್ತಾನ್ ದೇಶ ಕಂಡ ಅಪ್ರತಿಮ ವೀರರು. ಟಿಪ್ಪೂ ದೇಶನಿಷ್ಠೆ ಅನುಕರಣೀಯ ಮಾತ್ರವಲ್ಲ ಆದರ್ಶ ಕೂಡಾ. ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ವಿದೇಶೀಯರ ಬೆಂಬಲ ಯಾಚಿಸಿ ಆ ಬೆಂಬಲ ಸಿಗದೇ ಇದ್ದಾಗ ಬೆರಳೆಣಿಕೆ ಯಷ್ಟು ಸೈನಿಕರನ್ನು ಕಟ್ಟಿ ಕೊಂಡು ಹೋರಾಡಿ ರಣರಂಗದಲ್ಲಿ ಹುತಾತ್ಮನಾದ ಟಿಪ್ಪೂ ವನ್ನು ಎಷ್ಟು ಸ್ಮರಿಸಿದರೂ ಸಾಲದು. ಟಿಪ್ಪೂ ರವರ ರಾಷ್ಟ್ರ ನಿಷ್ಠೆಯನ್ನು ಪ್ರಯತ್ನಿಸುವವರೂ ನಮ್ಮ ದೇಶದಲ್ಲಿರುವುದು ದುಃಖಕರ.

ಹೈದರಲಿ ಚರಿತ್ರೆ ಎಷ್ಟು ಸತ್ಯವೋ ಗೊತ್ತಿಲ್ಲ. ಬರಹ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗಿದೆ. ಅಂತೆ ಕಂತೆ ಗಳನ್ನು ಅವಲಂಬಿಸಿದ ಈ ಬರಹವನ್ನ ನುರಿತ ಬರಹಗಾರರೊಬ್ಬರಿಂದ ನಿರೀಕ್ಷಿಸಿರಲಿಲ್ಲ.

ಕೆಳಗಿನ ಉದಾಹರಣೆ ಗಮನಿಸಿ..

"ತನ್ನ ಗುರಿಯ ಸಾಧನೆಗಾಗಿ ಲೂಟಿಕಾರ್ಯದಲ್ಲೂ ತೊಡಗಿ ತನ್ನ ಬಲವನ್ನು ಮತ್ತು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದನೆಂದು 'ಹೇಳುತ್ತಾರೆ'.

"ಫ್ರೆಂಚರ ಸೇವೆಯನ್ನೂ ಮಾಡಿದ್ದ ಹೈದರಾಲಿ ಮುಜಫ್ಫರ್ ಜಂಗ್ ಮತ್ತು ಚಂದಾ ಸಾಹೇಬರನ್ನೂ ಭೇಟಿಯಾಗಿದ್ದನೆಂದು 'ನಂಬ'ಲಾಗಿದೆ".

ಹೈದರಾಲಿ ತನ್ನ ಪರಾಕ್ರಮ, ಚಾಣಕ್ಷತನದಿಂದ ರಾಜನಾದ. ಲೂಟಿ, ಕಳ್ಳತನಗಳನ್ನು ತಡೆಯಲು ಖಂಡೇರಾವ ನನ್ನು ನೇಮಕ ಮಾಡಿದ. ಸೈನಿಕರಿಗೆ ಸಂಬಳ ಕೊಡದೆ ದ್ರೋಹ ಮಾಡಿದವರನ್ನು ಮೂಲೆ ಗುಂಪು ಮಾಡಿದ. ಇವು ಈ ಬರಹದಲ್ಲಿ ಅಡಕವಾದ ಅಂಶಗಳು. ಇನ್ನು,ಹೈದರಾಲಿ ಯವರ ತಂದೆ ಕೋಲಾರದವರು, ಹೈದರಾಲಿ ಕನ್ನಡಿಗ. ಹೈದರಾಲಿ ಯವರ ಹೆಸರು "ಬೇರೆ" ಅಥವಾ "ಅನ್ಯ" ವಾಗಿ ತೋರುವ ಕಾರಣ ಅವರಿಗೆ ಕರ್ನಾಟಕದ ಅರಸನಾಗುವ ಯೋಗ್ಯತೆ ಇಲ್ಲ ಎನ್ನುವಂತೆ ಇದೆ ಈ ಲೇಖನ. ಅವನ್ಯಾವನೋ ಪರಂಗಿ ಬರೆದ ಇತಿಹಾಸದ ಎಳೆ ಹಿಡಿದು ಕೊಂಡು ಬರೆಯುತ್ತಾ ಹೋದರೆ ಅದೇ 'ಒಡೆದು ಆಳುವ ನೀತಿ' ಗೆ ಹಾಲೆರೆಯುವ ಪರಿಸ್ಥಿತಿ ಮತ್ತೊಮ್ಮೆ ಬರುತ್ತದೆ. ಸಮಯ ಸಿಕ್ಕಾಗ ಯಾವ ಯಾವ ರೀತಿ ಪರಂಗಿ ಇತಿಹಾಸ್ಯಕಾರ ನಮ್ಮ ಇತಿಹಾಸ ತಿರುಚಿ, ಹಿಂದೂ ಮುಸ್ಲಿಮರ ಮಧ್ಯೆ ಒಡಕು ತಂದ ಎನ್ನುವುದರ ಕುರಿತು ಮುಂದೊಂದು ದಿನ ಬರೆಯುತ್ತೇನೆ. ಧನ್ಯವಾದಗಳು, ನಾಗರಾಜರಿಗೆ.

ನಮಸ್ತೆ, ಅಬ್ದುಲ್ಲರೇ. ಇಂತಹ ಒಂದೂ ಪ್ರತಿಕ್ರಿಯೆ ಬರಲಿಲ್ಲವೆಂದು ಆಶ್ಚರ್ಯವಾಗಿತ್ತು. ನನ್ನ ಲೇಖನದಲ್ಲಿ ನನ್ನದೇ ಎಂದು ಸೇರಿಸಿದ ಅಂಶಗಳು ಯಾವುದೂ ಇಲ್ಲ. ಆಧಾರಗಳ ಕುರಿತು ಉಲ್ಲೇಖಿಸಿರುವೆ. ನೀವೇ ಸ್ವತಃ ಪರಿಶೀಲಿಸಿ. ಬರೆಯಲೇಬೇಕೆಂದರೆ ಸತ್ಯ ಸಂಗತಿಗಳು ಎಲ್ಲರಿಗೂ ಒಪ್ಪಿತವಾಗಲಾರವು, ಏಕೆಂದರೆ ಸತ್ಯಸಂಗತಿಗಳು ಮತ್ತಷ್ಟು ಘೋರವಾಗಿವೆ. ಆ ಕುರಿತೂ ಸಹ ಮುಂದೊಮ್ಮೆ ಬರೆಯುವೆ. ಆಧಾರರಹಿತ ಸಂಗತಿಗಳನ್ನು ಬರೆಯುವ ಉದ್ದೇಶ ನನಗಿಲ್ಲ. ಇತಿಹಾಸವನ್ನು ಇತಿಹಾಸವಾಗಿಯೇ ನೋಡೋಣ. ಅದಕ್ಕೆ ಜಾತಿ/ಧರ್ಮದ ಸೋಂಕು ತಗಲಿಸದಿರೋಣ.

--ಹೈದರಲಿ, ಟಿಪ್ಪೂ ಸುಲ್ತಾನ್ ದೇಶ ಕಂಡ ಅಪ್ರತಿಮ ವೀರರು. ಟಿಪ್ಪೂ ದೇಶನಿಷ್ಠೆ ಅನುಕರಣೀಯ ಮಾತ್ರವಲ್ಲ ಆದರ್ಶ ಕೂಡಾ.
-ಇಬ್ಬರೂ ವೀರರೇ. ಎರಡನೇ ವಾಕ್ಯ ಮಾತ್ರ- ಟಿಪ್ಪೂ ಧರ್ಮನಿಷ್ಠೆ ಎಂದಾಗಬೇಕು. http://en.wikipedia.org/wiki/Religious_violence_in_India
http://voiceofdharma.org/books/tipu/ch04.htm
ರಾಜನಾದ ಮೇಲೆ ಆ ಕಾಲದಲ್ಲಿ ಯಾರನ್ನಾದರೂ ಕೊಲ್ಲುವುದು/ಉಳಿಸುವುದು ಆತನ ಮರ್ಜಿ. ಬೇರೆ ಜಾತಿಯವರಿಗೆ ಟ್ಯಾಕ್ಸ್, ತನ್ನವರಿಗೆ ರಿಯಾಯಿತಿ ಕೊಡುವುದೂ ಅವನಿಚ್ಛೆ. ಅದೇ ಈಗ..ಈ ಕಾಲದಲ್ಲಿ ಶಾದಿಭಾಗ್ಯ!? ಕೇವಲ ವೋಟಿಗಾಗಿ, ಒಂದು ಜಾತಿಯ ತುಷ್ಟೀಕರಣ ಮಾಡುವುದರಲ್ಲಿ ಈಗಿನ ರಾಜಕಾರಣಿಗಳು ಟಿಪ್ಪು/ಹೈದರ್‌ಗಿಂತ ಕಮ್ಮಿ ಇಲ್ಲ.
ವಾಕ್ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ.. ಹಿಂದೂ ದೇವತೆಗಳನ್ನು ನಿಂದಿಸುವಾಗಲೂ ಬಾಯಿಮುಚ್ಚಿ ಸುಮ್ಮನಿರುವ ನಮಗೆ ಟಿಪ್ಪು/ಹೈದರನ್ನು ಬೈಯುವ ಹಕ್ಕಿಲ್ಲ. ಆ ಕಾಲದಲ್ಲಿ ನಾವಿರುತ್ತಿದ್ದರೆ ಟಿಪ್ಪು ಹೇಳುವ ಮೊದಲೇ ಆತನ ಜಾತಿಗೆ ಕನ್ವರ್ಟ್ ಆಗಿರುತ್ತಿದ್ದ ಹೇಡಿಗಳಲ್ಲಿ ನಾವೇ ಮೊದಲಿರುತ್ತಿದ್ದೆವು. :(

Submitted by kavinagaraj Tue, 12/31/2013 - 10:15

In reply to by ಗಣೇಶ

ನಮಸ್ತೆ, ಗಣೇಶರೇ. ಹೈದರ್ ಮತ್ತು ಟಿಪ್ಪೂರವರು ಫ್ರೆಂಚರೊಡನೆ ಸಖ್ಯವಿದ್ದವರು ಮತ್ತು ಅವರ ಸಹಯೋಗದೊಂದಿಗೇ ಯುದ್ಧಗಳನ್ನು ನಡೆಸಿದವರು. ಮರಾಠರ ವಿರುದ್ಧವಾಗಿ ಬ್ರಿಟಿಷರ ಸಹಕಾರ ಪಡೆಯುವ ಅವರುಗಳ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ಅಕ್ಕಪಕ್ಕದ ರಾಜರುಗಳ ರಾಜ್ಯಗಳನ್ನು ಆಕ್ರಮಿಸಿಕೊಳ್ಳಲು ಮತ್ತು ಅವರೊಡನೆ ಇದ್ದ ಶತ್ರುತ್ವದ ಕಾರಣದಿಂದ ಬ್ರಿಟಿಷರು ಮತ್ತು ಫ್ರೆಂಚರ ಸಹಾಯ ಬಯಸಿದ ನಮ್ಮವರೇ ನಮ್ಮ ಸ್ವಾತಂತ್ರ್ಯಹರಣಕ್ಕೆ ಕಾರಣರಾದವರು. ಒಡೆದು ಆಳಲು ಪ್ರಶಸ್ತವಾದ ಸನ್ನಿವೇಶ ಒದಗಿಸಿದ್ದವರು ನಾವೇನೇ! ಇತಿಹಾಸದಲ್ಲಿ ಸಿಗಬೇಕಾದ ಪ್ರಾಶಸ್ತ್ಯ ಸಿಗದಿರುವ, ಸಂಗೊಳ್ಳಿ ರಾಯಣ್ಣನಂತೆಯೇ ಅಪ್ರತಿಮ ವೀರನಾಗಿದ್ಕದವನೊಬ್ಥನ ಕಥನವೊಂದನ್ನು ಮುಂದೊಮ್ಮೆ ಹಂಚಿಕೊಳ್ಳುವೆ.