ಹುಟ್ಟುಹಬ್ಬದ ಮುಂಜಾನೆ!

ಹುಟ್ಟುಹಬ್ಬದ ಮುಂಜಾನೆ!

ನಿದ್ದೆ ಮಾಡ್ತಿದ್ದೆ. ಸೊಗಸಾದ ನಿದ್ದೆ. ಒಳ್ಳೆಯ ಕನಸು. ಬಸ್ ಸ್ಟಾಂಡಿನಲ್ಲಿ ನಾನೊಬ್ಬನೇ ಬಸ್ಸಿಗೆ ಕಾದು ನಿಂತಿದ್ದು. ಕನಸಿನಲ್ಲೂ ಏರ್ಪೋರ್ಟ್’ನಲ್ಲಿ ಇರೋ ಹಾಗೆ ಕನಸು ಬೀಳಲಿಲ್ಲ ! ಹೋಗ್ಲಿ ಬಿಡಿ, ಪಾಲಿಗೆ ಬಂದದ್ದು ಪಂಚಾಮೃತ!

ಕನಸಿನಲ್ಲಿ ಬಸ್ ಬಂತು. ನನಗೆಂದೇ ಮಾಡಿಸಿದ ಬಸ್ ಇರಬೇಕು. ಟಿಕೆಟ್ ಟಿಕೆಟ್ ಎಂದು ಕೇಳಿಕೊಂಡೂ ಯಾರೂ ಬರಲಿಲ್ಲ. ಯಾಕೆ ಅಂದರೆ ಏನ್ ಹೇಳಲಿ ಸಿವಾ? ಹೇಳಿದ್ನಲ್ಲಾ ಇಡೀ ಬಸ್ಸಿಗೆ ನಾನೊಬ್ನೇ ಅಂತ. ಈಗ ನೀವು ನಿಮ್ಮ ಚಾರ್ಟರ್ ಫ್ಲೈಟ್’ನಲ್ಲಿ ಏರುತ್ತೀರ ಅಂದುಕೊಳ್ಳಿ ... ಸುಮ್ಮನೆ ಅಂದುಕೊಳ್ಳೀ, ಎಲ್ಲಿಗೆ ಅಂತ ಯಾರಾದ್ರೂ ಕೇಳ್ತಾರಾ? ಹಾಗೇ ಇದೂ. ಸಿಕ್ಕ ಪ್ರತಿ ಸಿಗ್ನಲ್ಲೂ ಹಸಿರೇ. ಇದ್ದದ್ದೊಂದೇ ದೀಪ ನೋಡಿ ಅದಕ್ಕೆ. ಕೇವಲ ಹತ್ತು ನಿಮಿಷದಲ್ಲಿ ಯಲಹಂಕದಿಂದ ಸಿಟಿ ಬಸ್ ಸ್ಟ್ಯಾಂಡ್’ಗೆ ಬಂದಿಳಿದೆ. 

ನೆಲಕ್ಕೆ ಕಾಲಿಟ್ಟಂತೇ, ಟ್ರೈನ್ ಒಂದು ಬಂದು ನಿಂತಿತು. ಆದ್ರೆ ನನಗೇ ಯಾಕೋ ಸಂಕೋಚ. ಬ್ಯಾಡ ಬಿಡಿ, ನಾನು ಅವೆನ್ಯೂ ರೋಡಿಗೆ ಹೋಗಬೇಕು, ಆಟೋದಲ್ಲಿ ಹೋಗ್ತೀನಿ, ತಾವು ಹೊರಡಿ ಎಂದು ಕಳಿಸಿಕೊಟ್ಟೆ. ’ಆಟೋ’ ಅಂದು ಮುಗಿಸೋಷ್ಟರಲ್ಲಿ ಆಟೋದವನು ಬಂದು ನಿಂತ. ಮೀಟರ್ ಇಲ್ಲದ ಆಟೋ. ಅಲ್ಲಿಗೆ ಹೋಗಿ ಇಳಿಯುವಾಗ ಸರಿಯಾಗಿ ಪೀಕುಸುತ್ತಾನೆ ಎಂದುಕೊಂಡೇ ಹತ್ತಿದೆ. ಆಟೋ ಹೊರಡಲೇ ಇಲ್ಲ. "ಯಾಕಪ್ಪ" ಅಂದೆ. ಅವನು ನಕ್ಕು "ಆಟೋದಲ್ಲಿ ಸ್ಟಾಂಡಿಂಗ್ ಇಲ್ಲ. ಕೂತುಕೊಳ್ಳಿ ಸಾರ್ ಅಂದ". ಆಟೋದಲ್ಲಿ ನಿಂತಿದ್ದೆನಾ? ಏನ್ ಮಜಾ ನೋಡಿ ಕನಸು! ಸರಿ ಅಂತ ಕೂತು ’ಅವೆನ್ಯೂ ರೋಡ್’ ಅಂದೆ. "ಗೊತ್ತು ಸಾರ್" ಅನ್ನೊದೇ?  ಆಟೋ ಸಾಗಿತು.

ಹೊರಟಿದ್ದಷ್ಟೇ ಭಾಗ್ಯ  ಆಟೋ ಎತ್ತ ಹೋದರೂ ’ನೋ ಎಂಟ್ರಿ’ ಅಥವಾ ’ಒನ್-ವೇ’ ಹಾದಿಗಳೇ ! ಹತ್ತು ನಿಮಿಷ ಸುತ್ತು ಹೊಡೆದರೂ ಸ್ಟೇಷನ್’ನಿಂದ ಸಂಗಂ’ವರೆಗೂ ಬಂದಿದ್ವಿ ಅಷ್ಟೇ. ಸಿಕ್ಕಾಪಟ್ಟೆ ರೇಗಿತು. ಮೈ ಥರಗುಟ್ಟೋ ಅಷ್ಟು. ಒಮ್ಮೆ ... ಮತ್ತೊಮ್ಮೆ ... ಮಗದೊಮ್ಮೆ

ಮೂರು ಬಾರಿ ಅದುರಿದ ಮೇಲೆ ಅರಿವಾಯ್ತು ಅದು ಸಿಟ್ಟಿನ ಮೈ ಅದುರುವಿಕೆ ಅಲ್ಲಾ, ಬದಲಿಗೆ ನನ್ನ ಐ-ಫೋನ್ ಅಂತ !!!

Vibrate Mode’ನಲ್ಲಿ ಇತ್ತು, ಹಾಗಾಗಿ ಅದು ಅದರುವಿಕೆ ... ನಿದ್ರಾಭಂಗವಂತೂ ಆಯ್ತು. ಮತ್ತೊಮ್ಮೆ ದೇಹ ಅದುರಿತು. ಒಹೋ! ಸೊಂಟಕ್ಕೇ ಬಿಗಿದುಕೊಂಡು ಮಲಗಿಬಿಟ್ನಾ?

ಮಗ್ಗುಲಿಗೆ ತಿರುಗಿ ಕ್ಲಿಪ್’ಗೆ ಚುಚ್ಚಿಕೊಂಡಿರಬಹುದಾದ ಫೋನ್ ಎಳೆದೆ. ಇದ್ರಲ್ವೇ ಕೈಗೆ ಬರೋದಕ್ಕೆ? ನೈಟ್ ಡ್ರೆಸ್’ಗೆ ಫೋನು ನೇತು ಹಾಕಿಕೊಂಡಿರಲಿಲ್ಲ !!! ಆದರೆ ದೇಹದ ಮೇಲೆ ಫೋನ್ ನೇತುಹಾಕಿಕೊಳ್ಳುವ ಬಲಭಾಗ ಅದುರಿತ್ತಿತ್ತು. ಬೆಚ್ಚಿಬಿದ್ದು ಧಿಗ್ಗನೆ ಎದ್ದೆ. ಮಲಗಿದ್ದಾಗ ಫೋನು ದೇಹಕ್ಕೆ ಒತ್ತಿಕೊಂಡು ದೇಹದ ಒಳಗೇ ಹೂತು ಹೋಗಿದೆ ಅನ್ನೋದು ಖಾತ್ರಿಯಾಯ್ತು!

ಧಡಾರನೆ ಎದ್ದು ನಿಂತವಗೆ ಅರ್ಥವಾಯ್ತು ದೇಹದ ಮೇಲೆ ಫೋನು ಇಲ್ಲ. ಆದರೆ ಅದರುವಿಕೆ ಮಾತ್ರ ಇನ್ನೂ ನಿಂತಿಲ್ಲ. ಇರಲಿ ಕ್ಲಿಪ್ ಇಟ್ಕೊಳ್ಳೋ ಜಾಗವನ್ನು ಒಮ್ಮೆ ಮೆಲ್ಲನೆ ಮುಟ್ಟಿ, ’ಹಲೋ’ ಅಂದೆ. ಆ ಕಡೆಯಿಂದ "ಹಲೋ, ಏನು ಮಲಗಿಬಿಟ್ಟಿದ್ರಾ? ಇಷ್ಟು ಹೊತ್ತು ಆಯ್ತು ಕಾಲ್ ರಿಸೀವ್ ಮಾಡೋದಕ್ಕೆ?" ಅಂತ ಆಂಗ್ಲದಲ್ಲಿ ಕೇಳಿದರು / ಬೈದರು. ನನಗೆ ಬೆಳಿಗ್ಗೆ ಬೆಳಿಗ್ಗೆ ಕಾಫೀ ಕುಡಿಯೋ ತನಕ ಇಂಗ್ಲೀಷಿನಲ್ಲಿ ಮಾತು ಬರೋಲ್ಲ. ಹಾಗಾಗಿ ಕನ್ನಡಲ್ಲೇ ಉತ್ತರಿಸಿದೆ. ನನ್ನ ಮಾತು ಮುಗಿದ ಮೇಲೆ ಆಂಗ್ಲದಲ್ಲಿ ಅವರೆಂದರು ’ನಿಮ್ಮ ಮಾತು ನನಗೇನೂ ಅರ್ಥವಾಗಲಿಲ್ಲ’ ಅಂತ. ಹೀಗೇ  ಒಂದೆರಡು ನಿಮಿಷಗಳ ಮಾತು ಕತೆ ಆದ ಮೇಲೆ, ಮತ್ತೊಮ್ಮೆ ಲೈಟಾಗಿ ಪಕ್ಕಕ್ಕೆ ಬಡಿದು ಫೋನ್ ಆಫ್ ಮಾಡಿದೆ. ಆ ಕಡೆಯವರಿಗೆ ನಾನು ರಾಂಗ್ ಪರ್ಸನ್ನು ! ಬೇರೆ ಯಾರನ್ನೋ ಎಬ್ಬಿಸಲು ಹೋಗಿ ನನ್ನನ್ನು ಎಬ್ಬಿಸಿದ್ದರು. ಹಾಗಂತ ಅವರೇ ಉವಾಚ !!

ಹಾಗೇ ಮಂಚದ ಮೇಲೆ ಕೂತು ಬಿಳೀ ಗೋಡೆಯನ್ನು ನೋಡುತ್ತ ಅಂದುಕೊಂಡೆ, ನಾನು ಐವತ್ತೋ ನೂರೋ ವರ್ಷ ಮಲಗಿದ್ದಿರಬೇಕು. ಕಾಲ ಬಹಳಾ ಮುಂದೆ ಹೋಗಿರಬಹುದು. ಫೋನ್ ಅನ್ನೋದು ಈಗ ದೇಹದ ಅವಿಭಾಜ್ಯ ಅಂಗ. ಲಿವರ್ ಪಕ್ಕ ಸ್ವಲ್ಪ ಪಾತಿ ಮಾಡಿ ಫೋನ್ ಹುದುಗಿಟ್ಟಿದ್ದಾನೆ ಭಗವಂತ. ಮಾನವನ ಹಳೇ ದೇಹವನ್ನು upgrade ಮಾಡಿದ್ದಾನೆ ಆ ಸೃಷ್ಟಿಕರ್ತ. ಯಾವುದೋ ಒಂದು Cut-off date’ನಿಂದ ಸದ್ಯದಿ ಬದುಕಿರುವ ಮತ್ತೆ ಮುಂದೆ ಹುಟ್ಟುವ ಎಲ್ಲ ಮಾನವರಿಗೂ ಒಂದೊಂದು ಫೋನು ದೇಹದೊಳಗೆ ತುರುಕಿರಬೇಕು. ನನಗೆ ಮೊದಲೇ ಗೊತ್ತಿತ್ತು ಸ್ಟೀವ್ ಜಾಬ್ಸ್ ಮೇಲಿನ ಲೋಕಕ್ಕೆ ಅಲ್ಲೂ ಏನೋ ನೆಡೆಸುತ್ತಾನೆ ಅಂತ. ಇಲ್ದಿದ್ರೆ ಹೀಗೆಲ್ಲಾ ಹ್ಯಾಗೆ ಆಗುತ್ತೆ ಅಲ್ವೇ? 

ನನ್ನ ಜೀವನದ ಅವಿಭಾಜ್ಯ ಅಂಗ ಎಂದರೆ ’ಸೀನು’. ಮಾರ್ನಿಂಗ್ ಕಾಫಿ ಅನ್ನೋ ರೀತಿಯಲ್ಲಿ ’ಮಾರ್ನಿಂಗ್ ಸೀನು’. ನನಗೆ ಬೆಳಿಗ್ಗೆ ಬೆಳಿಗ್ಗೆ ಸೀನು ಬರುತ್ತೆ, ಅಲ್ಲಲ್ಲ, ಸೀನುಗಳು ಬರುತ್ವೆ. ಲೈನಾಗಿ ಒಂದು ಹತ್ತು ಸೀನು ಸೀನಿದಾಗ ಇಡೀ ಬೀದಿಯೇ ಎಚ್ಚರವಾಗುತ್ತೆ. ನೀವಿರೋ ತನಕ ನಾವು ಅಲಾರಂ ಇಟ್ಟುಕೊಳ್ಳೋಲ್ಲ ಅಂದಿದ್ದಾರೆ ಬೀದಿಯ ಜನ.  ನನಗೊಂದು ಮಹತ್ತರವಾದ ಆಸೆ ಇದೆ. ಸೀನುವಾಗ ಕಣ್ಣು ಬಿಟ್ಟುಕೊಂಡೇ ಜೋರಾಗಿ ಸೀನಿ ಗಿನ್ನೆಸ್ಸ್ ದಾಖಲೆ ಮಾಡಬೇಕೂ ಅಂತ. ಈವರೆಗೂ ಆಗಿರಲಿಲ್ಲ. ರಷ್ ರೋಡಿನಲ್ಲಿ ಗಾಡಿ ಓಡಿಸುವಾಗ ಸೀನು ಬಂದಾಗ ಎಷ್ಟೋ ಬಾರಿ ಅಂದುಕೊಂಡಿದ್ದೀನಿ, ಕಣ್ಣು ಯಾಕೆ ಮುಚ್ಚುತ್ತೆ? ಅಂತ. ನಾನು ಕಣ್ಣು ಮುಚ್ಚಿದ್ದಾಗ ಯಾರಿಗಾದರೂ ಗುದ್ದಿದರೆ ಏನು ಗತಿ? ಕೋರ್ಟ್’ನಲ್ಲಿ ಲಾಯರ್ರೋ ಜಡ್ಜ್ ಮುಂದೇನೋ ನಿಂತು ’ನನಗೆ ಸೀನು ಬಂತು, ಕಣ್ಣು ಮುಚ್ಚಿತು. ಹಾಗಾಗಿ ಗುದ್ದಿದೆ’ ಅಂದರೆ ಬಿಡ್ತಾರಾ ಸ್ವಾಮೀ?

ಇರಲಿ, ಇಂದೂ ಹಾಗೇ ಮಾರ್ನಿಂಗ್ ಸೀನು ಬಂತು. ಆದರೆ ಒಂದೇ ಸೀನಿಗೆ ನಿಂತೇ ಹೋಯ್ತು. ಅದೂ ಅಲ್ಲದೇ ನಾನು ಕಣ್ಣು ಬಿಟ್ಟುಕೊಂಡೇ ಸೀನಿದ್ದೆ. ಆದರೆ ಸೀನಿದಾಗ ಬಂದ ಸದ್ದು, ಮತ್ತು ಸೀನು ಬರುವ ಮೊದಲಿಗೆ ದೇಹದ ಒಳಗಾದ ಅನುಭವ ಕೊಂಚ ಬೇರೆ ರೀತಿ ಇತ್ತು. ಬಂದ ಸೀನು, ಕೆಮ್ಮಿನ ರೂಪದಲ್ಲಿ ಬಂತು ಆದರೆ ಕೆಮ್ಮಲ್ಲ, ಬದಲಿಗೆ ಸೀನು. ಇದು ಭಗವಂತನ ಎರಡನೇ ಅಪ್ಗ್ರೇಡ್ ಇರಬೇಕು ! ಹೊಸ ಮಾಡಲ್ ರಿಲೀಸ್ ಮಾಡಿದಾಗ ಅದರ ಆಕಾರ ಕೊಂಚ ಬದಲಿಸುತ್ತಾರಲ್ಲ ಗಾಡಿ ತಯಾರಿ ಮಾಡುವವರು ಹಾಗೆ. ನಾನಿದಕ್ಕೆ ’ಕೆಮ್-ಸೀನು’ ಅಂತ ಹೆಸರಿಟ್ಟು ಪೇಟಂಟ್ ಮಾಡುವವನಿದ್ದೇನೆ. ಹಾಗಾದರೂ ಸ್ವಲ್ಪ ದುಡ್ಡು ಮಾಡೋಣ. ಏನಂತೀರಾ?

ಕೆಮ್-ಸೀನಿದ್ದಾಯ್ತು. ಇನ್ನೂ ಮುಖ ತೊಳೆಯೋ ಮನಸ್ಸಾಗಲಿಲ್ಲ. ಅದೂ ಅಲ್ದೇ  ನೆನ್ನೆಯಿಂದ ಯಾವುದೋ ಈ-ಮೈಲ್’ಗೆ ಕಾದಿದ್ದೆ. ’ನೆನ್ನೆಯಿಂದ’ ಅನ್ನೋದರ ಬದಲಿಗೆ, ನಾನು ಏಳೋ ಮುನ್ನ ಮಲಗಿದ್ದೆನಲ್ಲ ಆ ದಿನ ರಾತ್ರಿ ಒಂದು ಈ-ಮೈಲ್’ಗಾಗಿ ಕಾದಿದ್ದೆ. ಮೊದಲು ಅದನ್ನು, ನೋಡಿ, ನಂತರ ಮುಖ-ಮೂತಿ ತೊಳೆದು ಫೇಸ್ಬುಕ್ ನೋಡೋಣ ಅಂದುಕೊಂಡು ಎದ್ದೆ. ಮನಸ್ಸು ಪಾಸ್-ವರ್ಡ್ ಕೇಳಿತು. ಮನದಲ್ಲೇ ಪಾಸ್-ವರ್ಡ್ ಗುನುಗುನಿಸಿದೆ. ಗೋಡೆ ಎಂಬ ಬಿಳೀ ಪರದೆಯ ಮೇಲೆ ’ಬಹಳ ಕಾಲ ಬಳಸದೆ ನಿಮ್ಮ ಅಕೌಂಟ್ ಸತ್ತು ಸುಣ್ಣ ಆಗಿದೆ’ ಅಂತ ಮೆಸೇಜ್ ಬಂತು. ಟೆಕ್ನಾಲಜಿಯಲ್ಲಿ ಈ ಪಾಟಿ ಬದಲಾವಣೆ ಆಗಿರಬೇಕಾದರೆ ಈ-ಮೈಲ್ ಪಾಸ್ವರ್ಡ್ ಇನ್ನೂ ಬದಲಾಗದೆ ಇದ್ದೀತೇ?

ಈಗ ಆಗಿದ್ದೇನು? ನಾನು ಮನಸ್ಸಿನಲ್ಲಿ ಪಾಸ್ವರ್ಡ್ ಹೇಳಿಕೊಂಡಿದ್ದಕ್ಕೆ ಗೋಡೆಯೇ ಸ್ಕ್ರೀನ್ ಆಯ್ತು. ಓಹೋ! ಗೂಗಲ್ ಇನ್ನೂ ಬದುಕಿದ್ದರೆ, ದೇಶದಲ್ಲಿ ಎಲ್ಲೆಲ್ಲಿ ಏನೇನ್ ನೆಡೀತಿದೆ ಅಂತ ’ಗೂಗಲ್ ನ್ಯೂಸ್’ ಅನ್ನು ಮನದಲ್ಲಿ ತಂದುಕೊಂಡೆ. ಗೂಗಲ್ ಮಾದರಿಯದ್ದೇ ಯಾವುದೋ ಸ್ಚ್ರೀನ್ ಕಾಣಿಸಿತು. ಮೊದಲ ನ್ಯೂಸ್ ಲೈನ್ ನೋಡಿ ಮಂಚದಿಂದ ಕೆಳಗೆ ಬೀಳುವವನಿದ್ದೆ. "ಮುಂದಿನ ಶುಕ್ರವಾರ ’ಧೂಮ್-೨೫’ ಜಗತ್ತಿನಾದ್ಯಂತ ಎಲ್ಲರ ಮನೆಯಲ್ಲೂ ಒಮ್ಮೆಲೇ ರಿಲೀಸ್ ಆಗುತ್ತಿದೆಯಂತೆ". ಧೂಮ್-೨೫ ! ಅಯ್ಯಯ್ಯಪ್ಪ!! ಮನೆಮನೆಯಲ್ಲಿ ರಿಲೆಸ್ ಅಂದ್ರೆ ಸಿನಿಮಾ ಮಂದಿರಗಳು ಏನಾದವು?

ಘನ ಬೆಂಗಳೂರಿನ ’ಕಪಾಲಿ’ ಚಿತ್ರಮಂದಿರ ನೆನಪಾಯ್ತು. ಅದರ ಬಗ್ಗೆ ವಿಷಯ ಮೂಡಿಬಂತು. ಅಯ್ಯೋ ಶಿವನೇ?  ಕಪಾಲಿ ಚಿತ್ರಮಂದಿರ ಇಂದು ಉತ್ತರಭಾರತೀಯ ಕಾಪಾಲಿಕರ ಮಠವಾಗಿದೆಯಂತೆ! ಇನ್ನು ಮೇನಕಾ ಚಿತ್ರಮಂದಿರ ಇಂದ್ರಸಭ ಮಠವಂತೆ. ನಿತ್ಯಾನಂದರ ಪೀಳಿಗೆಯವರದಂತೆ !! ಸಾಕು ಎನ್ನಿಸಿತು. ಊರ್ವಷಿ ಚಿತ್ರಮಂದಿರ ನೈಟ್ ಕ್ಲಬ್ ಆಗಿರಬಹುದು ಎಂದು ಆ ಆಲೋಚನೆ ಅಲ್ಲಿಗೇ ನಿಲ್ಲಿಸಿದೆ.

ನಮ್ಮ ಘನ ವಿಧಾನಸೌಧ ಹೇಗಿರಬಹುದು ಎಂಬ ಕೆಟ್ಟ ಕುತೂಹಲ ಮೂಡಿತು. ನನ್ನ ಬಿಳೀ ಗೋಡೆ ಮೇಲೆ ಟಿವಿ ಮೂಡಿಬಂತು. ಅಂದರೆ ಈಗ ಎಲ್ಲ ಲೈವು! ಅರ್ರೇ! ಇದ್ಯಾವುದೋ ಪೌರಾಣಿಕ ಸೀರಿಯಲ್ ಇದ್ದ ಹಾಗಿದೆ. ವಿಧಾನಸೌಧದ ಅರಮನೆಯಂತೆ ಕಂಗೊಳಿಸುತ್ತಿದೆ. ಸೌಧದ ಸುತ್ತಲೂ ಎಲ್ಲೆಲ್ಲೂ ಕತ್ತಿ ಹಿರಿದು ಓಡಾಡುತ್ತಿರುವ ಸೈನಿಕರು. ಇದು ಸೀರಿಯಲ್ಲೋ ಲೈವೋ ಕನ್ಫ್ಯೂಸ್ ಆಗ್ತಿದೆ. ನಮ್ ಟೈಮಲ್ಲೇ ವಾಸಿ  ಹೊರ ಜಗತ್ತಿಗೆ ಕಾಣಿಸದಿರಲಿ ಅಂತ ಲಾಂಗ್’ಗಳನ್ನು ಶರಟಿನೊಳಗೆ ಸಿಕ್ಕಿಸಿಕೊಳ್ಳುತ್ತಿದ್ದರು. ಈಗ ನೋಡಿದರೆ ಎಲ್ಲ ರಾಜಾರೋಷ.

’ರಾಜಾ’ ಎಂದ ಕೂಡಲೇ ಹೊರಗಿನ ನೋಟದಿಂದ ನೇರ ಒಳಗೆ ಹೊಕ್ಕಿತು ದೃಶ್ಯ. ಯಾರೋ ಸಿಂಹಾಸನದ ಮೇಲೆ ಕುಳಿತಿರುವಂತೆ ಇದೆ. ಸಿಂಹಾಸನದ ಎರಡೂ ಬದಿಯಲ್ಲಿ ಕುಳಿತಿರುವವರೆಲ್ಲ ಕಾವಿ ಉಟ್ಟವರು! ಅಲ್ಯಾರೋ ಭಟನೊಬ್ಬ ಏನೋ ಹೇಳ್ತಿದ್ದಾನೆ ಅಂತ ವಾಲ್ಯೂಮ್ ಎಂದೆ. ಈಗ ಹೊಸ ಜಗತ್ತು ಸ್ವಲ್ಪ ಅಡ್ಜಸ್ಟ್ ಆಗಿತ್ತು. ಆ ಭಟನ ಮಾತು ಕೇಳಿ ತಲೆ ತಿರುಗಿತು "ಪ್ರಭೂ, ಮೆಜಸ್ಟಿಕ್ ರಾಜ್ಯದಲ್ಲಿ ಮತ್ತೆ ಗಲಭೆ ನೆಡೆದಿದೆ. ಸಿಟಿ ಮಾರ್ಕೆಟ್ ರಾಜ್ಯದವರು ಅವೆನ್ಯೂ ರೋಡ್ ನಮ್ಮದು ಎಂದೂ ಮಜೆಸ್ಟಿಕ್ ರಾಜ್ಯದವರು ಅದು ನಮ್ಮದು ಎಂದು ಮತ್ತೆ ಗಲಾಟೆ ನೆಡೆದಿದೆ. ಅಷ್ಟೇ ಅಲ್ಲದೇ, ಚಾಮರಾಜಪೇಟೆ ರಾಜ್ಯದಲ್ಲಿನ ನೀರಿನ ಪೈಪಿನಿಂದ, ಗಾಂಧಿಬಜಾರ್ ರಾಜ್ಯದ ಟ್ಯಾಂಕಿಗೆ ನೀರು ಹೆಚ್ಚು ಹೋಗುತ್ತಿದೆಯೆಂಬ ಗಲಾಟೆಯಿಂದಾಗ ಸತ್ತವರ ಸಂಖ್ಯೆ ನೂರಕ್ಕೆ ಏರಿದೆ."

ಹುಚ್ಚು ಹಿಡಿಯುವುದೊಂದೇ ಬಾಕಿ. ಬೆಂಗಳೂರು ನಗರದ ಪ್ರಾಂತ್ಯಗಳೇ ರಾಜ್ಯಗಳಾಗಿವೆ ಎಂದರೆ ಕರ್ನಾಟಕ ರಾಜ್ಯದ ಗತಿ ಏನು? ಭಾರತಾಂಬೆ ಇನ್ನೂ ಇದ್ದಾಳೋ?

ಈ ಕಾವಿಧಾರಿಗಳು ಯಾರು? ಓ! ಖಾದಿಗಳೆಲ್ಲ ಕಾವಿಗಳಾಗಿದೆಯಂತೆ. ನಮ್ಮ ಕಾಲದಲ್ಲಿ ಬಿಳೀ ಬಟ್ಟೆಯವರು ಕಾವಿ ಬಟ್ಟೆಯವರನ್ನೇ ಹೆಚ್ಚು ಆಶ್ರಯ ಮಾಡುತ್ತಿದ್ದರು. ಬಿಳೀ ಬಟ್ಟೆ ಅವಶ್ಯಕತೆ ಇಲ್ಲ ಎಂದರಿತು, ಅವರನ್ನು ಉಡಾಯಿಸಿ ಕಾವಿಗಳೇ ಎರಡೂ ಕೆಲಸ ನೆರವೇರಿಸುತ್ತಿದ್ದಾರೆ. ಅಂದರೆ ಪ್ರಾಂತ್ಯದ ಪ್ರತಿನಿಧಿಗಳ ಬದಲು ಮಠಾಧೀಶರುಗಳು ಅಂತಾಯ್ತು. ಉನ್ನತ ಹುದ್ದೆ ಮಹರ್ಷಿ, ಬ್ರಹ್ಮರ್ಷಿ’ಗಳಿಗಾದರೆ, ಚಿಕ್ಕ ಖಾತೆಗಳು ’ಶ್ರೀ ಶ್ರೀ ಶ್ರೀ’ ಗಳಂತೆ.

ತಲೆ ಸಿಡಿದು ಹೋಳಾಗುವುದೊಂದೇ ಬಾಕಿ ಎನಗೆ !!

ನನ್ನ ಸ್ನೇಹಿತರು, ಮನೆ ಜನ, ಬಂಧು ಜನ ಹೇಗಿದ್ದಾರೆ? ಅದನ್ನು ತಿಳಿದುಕೊಳ್ಳು ಒಂದೇ ದಾರಿ. ಹೌದು, ನನ್ನವರನ್ನು ತೋರೋ ಫೇಸ್ಬುಕ್! ಈಗ ಅದು ಇನ್ನೂ ಇದೆಯೋ ಅಥವಾ ಬೇರೇನಾದರೂ ಬಂದಿದೆಯೋ?

"ಫೇಸ್ಬುಕ್" ಎಂದೆ  ಅದ್ಯಾವುದೋ ಪುಟ ತೆರೆದುಕೊಂಡಿತು. ಬಿಳೀ ಗೋಡೆಗಳು ಸ್ಕ್ರೀನ್’ಗಳಾಗಿರುವ ಈ ಯುಗದಲ್ಲಿ, ಮನೆ ಮನೆಯಲ್ಲಿ ನೇರವಾಗಿ ಸಿನಿಮಾ ರಿಲೀಸ್ ಆಗುವ ಈ ಸಂಭ್ರಮದಲ್ಲಿ, ಫೇಸ್ಬುಕ್ ಅಕೌಂಟ್ ಕೂಡ ಅದರೊಂದಿಗೇ ಬಿಟ್ಟೀ ಸರ್ವೀಸ್ ಕೊಡುತ್ತಿರಬೇಕು. ಏನಾದರೇನು? ಮೊದಲ ಪುಟದ ಮೊದಲ ಅಪ್ಡೇಟ್ ನೋಡಿ ಖುಷಿಯಾಯಿತು.

Happy Birthday ಅಂತ ಕಾಣಿಸಿತು. ನೀವು ಮರುಹುಟ್ಟಿದ್ದಕ್ಕೆ ಧನ್ಯವಾದಗಳು ಅನ್ನೋ ಮೆಸೇಜ್ ಬೇರೆ! ಇದ್ಯಾವುದೋ ಬುಕ್ಕಿಗೆ ಲಾಗ್-ಆನ್ ಆಗಿದ್ದಕ್ಕೆ ಮರುಹುಟ್ಟುಹಬ್ಬ ಅಂತಾರೆಯೇ? ಏನಾದರೇನು, ನನಗೆ ನಾನೇ ಹಾಡು ಹೇಳಿಕೊಳ್ಳುತ್ತೇನೆ ಎಂದುಕೊಂಡು "ಹ್ಯಾಪಿ ಬರ್ತಡೇ ಟೂ ಮೀ, ಹ್ಯಾಪಿ ಬರ್ತಡೇ ಟೂ ಮೀ, ಹ್ಯಾಪಿ ಬರ್ತಡೇ, ಹ್ಯಾಪಿ ಬರ್ತಡೇ, ಹ್ಯಾಪಿ ಬರ್ತಡೇ ಟೂ ಮೀ" ಎಂದು ಜೋರಾಗಿ ಹಾಡಿಕೊಂಡೆ.

"ಬೆಳಿಗ್ಗೇ ಬೆಳಿಗ್ಗೇನೇ ಶುರುವಾಯ್ತಾ ನಿಮ್ ತರಳೆ ? ಮನೆಯವರೆಲ್ಲ ಒಟ್ಟಿಗೆ ಹೇಳೋಣ ಅಂತ ಕಾದಿದ್ವಿ ಅಷ್ಟೇ. ನಾವೇನೂ ಮರೆತಿಲ್ಲ" ಎಂದು ಹುಸಿಗೋಪ ತೋರುತ್ತ ಒಳಗೆ ಬಂದ ನನ್ನ ಧರ್ಮಳ ಜೊತೆ ಮಿಕ್ಕೆಲ್ಲರೂ ನುಗ್ಗಿ ಬಂದರು. 

ಮನೆ ಮಂದಿ ಜೊತೆಗಿನ ಖುಷೀನಾಗೆ ಆ ಕನಸಿನ ಮಾತು ಅತ್ಲಾಗೆ ಬಿಟ್ ಹಾಕಿ ....

 

Comments

Submitted by venkatb83 Sat, 05/10/2014 - 16:05

ಭಲಾ ಭಲಾ ಭಲ್ಲೆ ಅವ್ರೆ ...
ಬಹು ದಿನಗಳ ನಂತರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಒಂದು ಬರಹ ಸಿಕ್ಕಿತು -ಸಂಪದ ಓಪನ್ ಮಾಡಿದ ಕೂಡಲೇ ನಿಮಮ ಬರಹ ಓದಿ -ಮತ್ತೋಮಎಂ ಮತ್ತೂ ಒಮ್ಮೆ ಓದಿ ನಕ್ಕು ನಕ್ಕು ಸುಸ್ತಾದೆ ..
ನಿಜ ಹೇಳಬೇಕೆಂದ್ರೆ ಈ ದಿನ ಪ್ರಸನ್ನವಾಗಿರಲಿದೆ...

ನೀವ್ ಬರಹದಲ್ಲಿ ಹೇಳಿದ ಹಲವು ಅಂಶಗಳು ಮುಂದೊಮ್ಮೆ ನಿಜವಾಗದಿರಲಿ....!!

ಶುಭವಾಗಲಿ

\|/

Submitted by swara kamath Sat, 05/10/2014 - 20:27

ಬಹಳ ಚನ್ನಾಗಿ ಬರೆದ ಈ ಲಘು ಧಾಟಿಯ ಹಾಸ್ಯ ಪ್ರಬಂಧ ಮನಸ್ಸಿಗೆ ಮುದವನ್ನುಂಟುಮಾಡಿತು ಭಲ್ಲೆಯವರೆ. ನಿಮ್ಮ ಲೇಖನ ಬರೆಯುವ ಈ ಪರಿಗೆ ನನ್ನ ಮನಸಾರೆ ಅಭಿನಂದನೆಗಳು. ,,,,,,,,, ರಮೇಶ ಕಾಮತ್

Submitted by bhalle Sat, 05/10/2014 - 23:58

In reply to by swara kamath

ನಮಸ್ಕಾರ ರಮೇಶ್ ಕಾಮತ್
ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ... ನನ್ನ ಹುಟ್ಟುಹಬ್ಬಕ್ಕೆ ನಿಮ್ಮ ಪ್ರತಿಕ್ರಿಯೆಯೇ ಕಾಣಿಕೆ :-)

Submitted by neela devi kn Mon, 05/12/2014 - 10:40

ಭಲ್ಲೆ ಯವರಿಗೆ ನಮಸ್ಕಾರಗಳು ತಮಗೆ (ತಡವಾಗಿ) ಹುಟ್ಟುಹಬ್ಬದ‌ ಶುಭಾಶಯಗಳು
ತಮ್ಮ‌ ಹಾಸ್ಯ‌ ಬರಹ‌ ಓದಿ ಸಂತೋಷವಾಯಿತು ...... ನೀಳಾ

ಸಂಪದ‌ದಲ್ಲಿ ಹಾಸ್ಯ‌ ಬರಹಗಳು ತುಂಬಾ ಕಮ್ಮಿಯಾಗುತ್ತಿದೆ. ಪ್ರತಿಕ್ರಿಯೆಯಲ್ಲಿ ಶ್ರೀಯುತ‌ ಗಣೇಶರವರ‌ ಹೆಸರು ನೋಡಿದೆ
ಅವರ‌ ಹಾಸ್ಯ‌ ಬರಹಗಳು ಸಹ‌ ಕಮ್ಮಿಯಗುತ್ತಿದೆ. ಶ್ರೀ ಬಂಡ್ರಿಯವರೂ ಸಹ‌ ಕಾಣಿಸುತ್ತಿಲ್ಲ‌

Submitted by bhalle Mon, 05/12/2014 - 18:47

In reply to by neela devi kn

ನಿಮ್ಮ ಆಶಯಕ್ಕೆ ಧನ್ಯವಾದಗಳು ನೀಳಾದೇವಿ'ಯವರೇ
ಎಲೆಕ್ಷನ್ ಸಮಯದೋಳ್ ರಾಜಕೀಯ ವ್ಯಕ್ತಿಗಳಿಂದಲೇ ದಿನನಿತ್ಯ ಹಾಸ್ಯ ರಸಾಯನ ದೊರೆಯುತ್ತಿರುವಾಗ ಬೇರೆ ಹಾಸ್ಯ ಬೇಕೆ ಅಂತ ಇರಬಹುದು!

Submitted by ಗಣೇಶ Tue, 06/10/2014 - 00:06

In reply to by neela devi kn

>>..ಪ್ರತಿಕ್ರಿಯೆಯಲ್ಲಿ ಶ್ರೀಯುತ‌ ಗಣೇಶರವರ‌ ಹೆಸರು ನೋಡಿದೆ. ಅವರ‌ ಹಾಸ್ಯ‌ ಬರಹಗಳು ಸಹ‌ ಕಮ್ಮಿಯಗುತ್ತಿದೆ..
ನೀಳಾ ಅವರೆ,
ನನಗೂ ಅದೇ ಯೋಚನೆಯಾಗಿತ್ತು. ಭಲ್ಲೇಜೀಗೇ ಕಾಲ್ ಮಾಡಿ ವಿಚಾರಿಸಿದೆ. -" ನೋಡಿ ಗಣೇಶರೆ, ನಿಮ್ಮ ತಲೆಯಲ್ಲಿ ಬರೀ ಕೊಳಕೇ ತುಂಬಿದೆ! ಕೆರೆ, ಮೋರಿ, ಗಾರ್ಬೇಜ್ ಬಗ್ಗೆ ಯೋಚಿಸುತ್ತಿದ್ದರೆ ಹಾಸ್ಯವೆಲ್ಲಿ ಸಾಧ್ಯ? ಇದೆಲ್ಲಾ ವಿಷಯ ಬಿಟ್ಟು ರಾತ್ರಿ ಬೇಗನೆ ಹಾಯಾಗಿ ಮಲಗಿ.. ಕನಸು ಕಾಣಿ" ಎಂದು ಸಲಹೆ ನೀಡಿದರು. ಭಲ್ಲೇಜಿ ಒಂದರ ಹಿಂದೆ ಒಂದು ಹಾಸ್ಯ ಬರಹ ಬರೆಯುವ ರಹಸ್ಯ ಅವರ ಬಾಯಿಂದಲೇ ಬಂತು :)
ಯಾವಾಗಲೂ ರಾತ್ರಿ ೧೨ ಆದರೂ ಮಲಗದವನು, ೮ ಗಂಟೆಗೇ ಮಲಗಿದೆ! ಸೂಪರ್ ಹಾಸ್ಯ ಕನಸಲ್ಲಿ ಹೊಳೆದು, ಎಚ್ಚರವಾದಾಗ ಮರೆತು ಹೋದರೆ, ಎಂದು ಪೆನ್ನು ಕೈಯಲ್ಲಿ ಹಿಡಕೊಂಡು ಪೇಪರ್ ಮೇಲೆ ಕೈಯಿಟ್ಟು ಮಲಗಿದೆ.
ಕಣ್ಣು ಉರಿಯಲು ಪ್ರಾರಂಭಿಸಿತು! ಇನ್ನೇನು ಕನಸು ಬೀಳಬಹುದು ಕಾಣುತ್ತದೆ.. ಆಗ ಮೂಗೂ ಉರಿಯಲು ಪ್ರಾರಂಭಿಸಿತು!!
ಕಣ್ಣು ತೆರೆದು ನೋಡಿದರೆ ಮನೆಯಾಕೆ ಹಣೆ, ಮೂಗಿಗೆ ವಿಕ್ಸ್ ಹಚ್ಚುತ್ತಿದ್ದಳು- "ಎರಡು ದಿನ ಬಿಡದೇ ಮಳೆಯಲ್ಲಿ ನೆನೆದು ಬಂದಿರಲ್ಲಾ..ಅದಕ್ಕೇ ನಿಮಗೆ ತಲೆನೋವು ಬಂದಿದ್ದು. ಕರಿಮೆಣಸು ಕಷಾಯ ಕುದೀತಿದೆ. ಅದನ್ನು ಕುಡಿದು ಮಲಗಿ, ನಾಳೆಗೆ ಗುಣವಾಗುವುದು.." ಎಂದು ನನಗೆ ಮಾತನಾಡಲು ಅವಕಾಶ ಕೊಡದೇ ಹೇಳಿದಳು. ಬಿಸಿಬಿಸಿ ಕಷಾಯ ಕುಡಿದ ಮೇಲೆ ಇನ್ನೆಲ್ಲಿಯ ನಿದ್ರೆ..ಕನಸು.. ಭಲ್ಲೇಜಿ ಬೇರೇನಾದರೂ ಉಪಾಯವಿದ್ದರೆ ಹೇಳಿ..

Submitted by neela devi kn Tue, 06/10/2014 - 10:24

In reply to by ಗಣೇಶ

ಶ್ರೀಯುತ‌ ಗಣೇಶರವರೆ ನಮಸ್ಕಾರಗಳು ಈ ದಿನ‌ ಕರಿಮೆಣಸು ಕಷಾಯ ಕುಡಿದು ಮಲಗಿದಿರಿ ನಾಳೆ ಗಸ‌ ಗಸೆ ಪಾಯಸ‌ ಕುಡಿದು ಮಲಗಿ ಓಳ್ಳೆಯ‌ ಕನಸು ಬೀಳಬಹುದು ಶ್ರೀ ಭಲ್ಲೇಜೀ ಉಪಾಯ‌ ಸರಿಹೋಗಲಿಲ್ಲ‌ ಆದ್ದರಿಂದ‌ ಶ್ರೀ ನಾಗೇಶ್ ಮ್ಯೆಸೂರು ರವರ‌ ಪರಿಭ್ರಮಣ ಕತೆ ಅಲ್ಲ‌ ಕದಂಬರಿ ಅಲ್ಲ‌ ಗ್ರಂಥ‌ ಅಲ್ಲ‌ ಬ್ರುಹತ್ ಗ್ರಂಥ‌ ವನ್ನು ಒಂದನೇ ಭಾಗದಿಂದ‌ 23ನೇ ಭಾಗದ‌ ವರೆಗೆ ಓದಲು ಶುರು ಮಾಡಿ ನಂತರ‌ ನೋಡಿ
ನೀಳಾ

Submitted by bhalle Thu, 06/12/2014 - 04:35

In reply to by neela devi kn

ನೀಳಾದೇವಿಯವರೇ
ಭಾರತದ ಪರ್ಯಟನೆ ಮುಗಿಸಿ, ಭಕ್ತರು ನಿದ್ದೆ ಮಾಡುವ ಮತ್ತು ಬೇಡಿಕೊಳ್ಳದ ಸಮಯವಾದ ಹನ್ನೆರಡಕ್ಕೆ ಬರುವ ಗಣೇಶ್'ಜಿ ಕೈಗೆ ನೀವು ಅಷ್ಟು ದಪ್ಪ ಗ್ರಂಥ ನೀಡಿದರೆ ಅದು ಹೋಗೋದು ತಲೆ ಕೆಳಗೆ ಖಂಡಿತ. ನಿಮ್ ಐಡಿಯ ಕೆಲಸ ಮಾಡೋದೂ ಅನುಮಾನ ನನಗೆ :-)))

Submitted by ಗಣೇಶ Sun, 06/15/2014 - 23:52

In reply to by bhalle

>>ಗಣೇಶ್'ಜಿ ಕೈಗೆ ನೀವು ಅಷ್ಟು ದಪ್ಪ ಗ್ರಂಥ ನೀಡಿದರೆ ಅದು ಹೋಗೋದು ತಲೆ ಕೆಳಗೆ ಖಂಡಿತ. :) :)
ನೀಳಾದೇವಿ ಮತ್ತು ಭಲ್ಲೇಜಿ, ನಾಗೇಶ್ ಅವರೂ ಸಹ ಹಿಂದೊಮ್ಮೆ ಒಂದು ಐಡಿಯಾ ಕೊಟ್ಟಿದ್ದರು- ಹೊಸತೇನಾದರು ಹೊಳೆದರೆ ಕೂಡಲೇ ಮೊಬೈಲಲ್ಲಿ ಸಂಗ್ರಹಿಸಿ ನಂತರ ಅದನ್ನ ಹಿಗ್ಗಿಸಿ ಕವನ ಇತ್ಯಾದಿ ಬರೆಯುವೆ ಅಂತ. ಅವರ ಐಡಿಯಾನೂ ಪ್ರಯತ್ನಿಸಿದ್ದೆ- ಯಾರದೋ sms ಬಂದಾಗ ನನಗೆ ಒಂದೆರಡು ಲೈನ್ ಕವನ ಹೊಳೆಯಿತು! ಅಲ್ಲೇ ಬರೆದು ಸೇವ್ ಮಾಡಿದ್ದೆ...
ಮುಂದೆ..
ಮರೆತೇ ಬಿಟ್ಟಿದ್ದೆ..
ಒಂದು ದಿನ..
ಆ ಕವನವೇ- ಕದನಕ್ಕೆ ಕಾರಣವಾಯಿತು :(
ಇಂತಹ ಐಡಿಯಾಗಳನ್ನೆಲ್ಲಾ ನನಗೆ ಕೊಡಬೇಡಿ.......:)

Submitted by bhalle Thu, 06/12/2014 - 04:35

In reply to by ಗಣೇಶ

ಗಣೇಶ್'ಜಿ ಅಡ್ಡಬಿದ್ದೆ :-)
ರಾಜಕೀಯದ ಕೊಳಕು ತಲೆಯಲ್ಲಿ ತುಂಬಿರೋದ್ರಿಂದ ಹಾಸ್ಯ ಬರ್ತಿಲ್ಲ ಅಂದಿದ್ದು ತಪ್ಪು ಅನ್ನಿಸುತ್ತಿದ್ದೆ ... ಗಬ್ಬು ನಾರೋ ಡಿಪಾರ್ಟ್ಮೆಂಟ್ ಒಂದರ ಬಗ್ಗೆ ಒಂದು ಸಣ್ಣ ಎಳೆಯನ್ನು ಮಾತ್ರ ಹಾಸ್ಯವಾಗಿ ತಿರುಚಿ ಒಂದು ಬರಹ ಸಿದ್ದವಾಗುತ್ತಿದೆ.
ಬಿಡುಗಡೆ ಮಾಡಲಿದ್ದೇನೆ. ಓದಿ ನೋಡಿ ಹೇಳಿ ಸರ್ !

Submitted by ಗಣೇಶ Sun, 06/15/2014 - 23:41

In reply to by bhalle

ಆಗಲೇ ಓದಿ ಪ್ರತಿಕ್ರಿಯೆ ನೀಡಿರುವೆ. ಗಬ್ಬು ನಾರೋ ಡಿಪಾರ್ಟ್ಮೆಂಟ್‌ನ ಸಣ್ಣ ಎಳೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ.:)

Submitted by Iynanda Prabhukumar Mon, 05/12/2014 - 12:42

ಕನಸು-ನನಸುಗಳ ಚಕ್ರಭ್ರಮಣದಲ್ಲಿ ಸಿಲುಕಿಕೊಂಡಂತೆ ಅನ್ನಿಸುವ ನಿಮ್ಮ ಹೊಸ ಬಗೆಯ ಹಾಸ್ಯಲೇಖನ ರಂಜಿಸಿತು. ಧನ್ಯವಾದಗಳು.

Submitted by Iynanda Prabhukumar Mon, 05/12/2014 - 19:57

In reply to by bhalle

ಅಯ್ಯೋ ನನ್ನ ಒಳ್ಳೇತನವೇ[=oh my goodness ;)]! ಒಂದು ಸಾಲಿನಲ್ಲಿ ಬರೆದ ನನ್ನ ಅನ್ನಿಸಿಕೆಯನ್ನು ಅದ್ಭುತ ವಿಶ್ಲೇಷಣೆಯೆಂದು ಉತ್ಪ್ರೇಕ್ಷಿಸಿಬಿಟ್ಟಿದ್ದೀರಿ!