ತಿಂದೂ ಹೋದ, ಕೊಂಡೂ ಹೋದ!

ತಿಂದೂ ಹೋದ, ಕೊಂಡೂ ಹೋದ!

     ಹಾಸನದ ಜಿಲ್ಲಾ ಪತ್ರಿಕೆ 'ಜನಮಿತ್ರ'ದಲ್ಲಿ ಪ್ರತಿ ಸೋಮವಾರ ನನ್ನ 'ಚಿಂತನ' ಅಂಕಣ ಮತ್ತು 'ಜನಹಿತ'ದಲ್ಲಿ ಪ್ರತಿ ಬುಧವಾರ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿ 'ಜನಕಲ್ಯಾಣ' ಅಂಕಣ ಪ್ರಕಟವಾಗುತ್ತಿದೆ. 'ಜನಹಿತ'ದಲ್ಲಿ ಪ್ರಾರಂಭದಲ್ಲಿ ಇಲಾಖಾ ವಿಚಾರಣೆಗಳಿಗೆ ಸಂಬಂಧಿಸಿ ಲೇಖನಮಾಲೆ ಪ್ರಕಟವಾಗಿತ್ತು. ಅದನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ. ಒಂದೆರಡು ಲೇಖನಗಳು ಹಿಂದೆ 'ಸಂಪದ'ದಲ್ಲಿ ಪ್ರಕಟಿತವಾಗಿದ್ದು, ಅದನ್ನು ಪತ್ರಿಕೆಯ ಸಲುವಾಗಿ ಪರಿಷ್ಕರಿಸಿ ಬರೆದಿದ್ದೆ. ನಿಮ್ಮ ಅವಗಾಹನೆಗಾಗಿ ಇದೋ ಇಲ್ಲಿ:

     ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗದ ಮತ್ತು ಇಂತಹ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ನೌಕರರಿಗೆ ಅವರ ಮೇಲಾಧಿಕಾರಿಯಿಂದ ಕಾರಣ ಕೇಳಿ ನೋಟೀಸು ಕೊಡಲಾಗುತ್ತದೆ. ನೋಟೀಸಿಗೆ ನೌಕರ ಕೊಡುವ ಉತ್ತರ ಸಮರ್ಪಕವಿರದಿದ್ದಲ್ಲಿ/ ಉತ್ತರವನ್ನೇ ಕೊಡದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಪ್ರಾಧಿಕಾರಕ್ಕೆ ಕಛೇರಿಯ ಅಧಿಕಾರಿ ಪೂರಕ ವಿವರಗಳು, ದಾಖಲಾತಿಗಳೊಂದಿಗೆ ವರದಿ ಕೊಡುತ್ತಾರೆ. ಶಿಸ್ತು ಪ್ರಾಧಿಕಾರಿ ಅದನ್ನು ಪರಿಶೀಲಿಸಿ ಕ್ರಮ ಅಗತ್ಯವೆನಿಸಿದರೆ ಆಪಾದನೆಗಳು, ಆಪಾದನೆಗಳ ಪೂರ್ಣ ವಿವರಗಳು, ಸಮರ್ಥಿಸುವ ದಾಖಲೆಗಳ ಪಟ್ಟಿ. ಸಾಕ್ಷಿಗಳ ಪಟ್ಟಿಗಳೊಂದಿಗೆ ನೌಕರನಿಗೆ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದೆಂದು ಕಾರಣ ಕೇಳಿ ನೋಟೀಸು ಕೊಡುತ್ತಾರೆ. ನೌಕರನ ಉತ್ತರ ಸಮರ್ಪಕವಿರದಿದ್ದಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಿ ವಿಚಾರಣಾಧಿಕಾರಿಯನ್ನು ಮತ್ತು ಪ್ರಕರಣವನ್ನು ಸರ್ಕಾರದ ಪರವಾಗಿ ಮಂಡಿಸಲು ಮಂಡನಾಧಿಕಾರಿಯನ್ನು ನೇಮಿಸುತ್ತಾರೆ. ವಿಚಾರಣಾಧಿಕಾರಿ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ಆರೋಪಗಳು ರುಜುವಾತಾದವೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ. ಆರೋಪಗಳು ರುಜುವಾತಾಗಿದ್ದರೆ, ವಿಚಾರಣಾಧಿಕಾರಿಯ ಆದೇಶದ ಪ್ರತಿಯೊಂದಿಗೆ ನೌಕರನಿಗೆ ಸೂಕ್ತ ಶಿಕ್ಷೆ ನೀಡಬಾರದೇಕೆಂಬ ಬಗ್ಗೆ ಪುನಃ ನೋಟೀಸು ನೀಡಿ, ಆತನಿಂದ ಬರುವ ಉತ್ತರ ಗಮನಿಸಿ ಶಿಕ್ಷೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ದೀರ್ಘ ಅವಧಿ ಬೇಕೆಂಬುದು ಯಾರಿಗೂ ಅರ್ಥವಾಗುತ್ತದೆ. ಆರೋಪಗಳು ಗುರುತರವಾಗಿದ್ದರೆ, ನೌಕರನನ್ನು ಅಮಾನತ್ತಿನಲ್ಲಿರಿಸಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕೆಲವು ತಿಂಗಳ ನಂತರ ಅವನನ್ನು ಪುನಃ ಸೇವೆಗೆ ತೆಗೆದುಕೊಂಡು ಬೇರೆ ಕಛೇರಿಗೆ ನಿಯೋಜಿಸುತ್ತಾರೆ. ಎಚ್ಚರಿಕೆ ನೀಡುವುದು, ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯುವುದು, ಹಿಂಬಡ್ತಿ ನೀಡುವುದು, ಇತ್ಯಾದಿಗಳು ಸೇರಿದಂತೆ ಸೇವೆಯಿಂದ ವಜಾಗೊಳಿಸುವ ಶಿಕ್ಷೆ ನೀಡಲೂ ಶಿಸ್ತು ಪ್ರಾಧಿಕಾರಿಗೆ ಅಧಿಕಾರವಿರುತ್ತದೆ.

     ಸರ್ಕಾರದ ಇಲಾಖೆಗಳಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು, ಸುಗಮ, ಜನಪರ ಆಡಳಿತ ನೀಡಲು ಇಲಾಖಾ ವಿಚಾರಣೆಗಳು ಪ್ರಮುಖ ಪಾತ್ರ ವಹಿಸಬಲ್ಲವು. ದೌರ್ಭಾಗ್ಯವಶಾತ್ ಭ್ರಷ್ಟಾಚಾರದ ಕರಿನೆರಳು ಬಿದ್ದು ಇವು ಕೇವಲ ಅರ್ಥಹೀನ ಪ್ರಕ್ರಿಯೆಗಳಾಗಿಬಿಟ್ಟಿರುವುದು ದುರ್ದೈವ. ಎಲ್ಲಾ ಇಲಾಖಾ ವಿಚಾರಣೆಗಳೂ ಹೀಗಾಗಿವೆ ಎನ್ನಲಾಗದಿದ್ದರೂ ಅರ್ಥಪೂರ್ಣ ವಿಚಾರಣೆಗಳು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದು. ಇಲಾಖಾ ವಿಚಾರಣೆ ವ್ಯರ್ಥವೆನಿಸಿದ ಕೆಲವು ಪ್ರಸಂಗಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.

ತಿಂದೂ ಹೋದ, ಕೊಂಡೂ ಹೋದ!

     ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ರ್ಶೀಕೆಗಳಿಗೆ ಜಮಾ ಮಾಡಲು ಬ್ಯಾಂಕ್ ಚಲನ್ನುಗಳನ್ನು ಬರೆದು ಶಿರಸ್ತೇದಾರರಿಂದ ಮೇಲುಸಹಿ ಮಾಡಿಸಿಕೊಳ್ಳುತ್ತಿದ್ದ. ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಿದ್ದ ಅವನು ಧಾರಾಳಿಯೂ ಆಗಿದ್ದರಿಂದ ಎಲ್ಲರಿಗೂ ಅವನು ಆಪ್ತನೆನಿಸಿದ್ದ. ಹಣ ಬ್ಯಾಂಕಿಗೆ ಜಮಾ ಆದಮೇಲೆ ತಾಲ್ಲೂಕು ಕಛೇರಿಯ ಡಿಸಿಬಿ (ಡಿಮ್ಯಾಂಡ್-ಕಲೆಕ್ಷನ್-ಬ್ಯಾಲೆನ್ಸ್ = ಬೇಡಿಕೆ-ವಸೂಲಿ-ಶಿಲ್ಕು) ವಹಿಯಲ್ಲಿ ವಿವರ ಬರೆಯುತ್ತಿದ್ದ. ಕಛೇರಿ ಗುಮಾಸ್ತರು ಅದನ್ನು ಖಜಾನೆಯಿಂದ ಬರುವ ಶೆಡ್ಯೂಲುಗಳೊಂದಿಗೆ ತಾಳೆ ನೋಡಬೇಕಾದುದು ಕ್ರಮವಾದರೂ, ಖಜಾನೆಯಿಂದ ಶೆಡ್ಯೂಲುಗಳು ತಿಂಗಳುಗಳು ತಡವಾಗಿ ಬರುತ್ತಿದ್ದುದರಿಂದ ತಾಳೆ ನೋಡುವ ಕೆಲಸ ಸಾಮಾನ್ಯವಾಗಿ ಆಗುತ್ತಿರಲಿಲ್ಲ. ದಫ್ತರ್ ತನಿಖೆ ಮಾಡುವಾಗಲೋ, ಲೆಕ್ಕ ಪರಿಶೋಧನೆ ಮಾಡುವಾಗಲೋ ವ್ಯತ್ಯಾಸವಿದ್ದರೆ ಪರಿಶೀಲಿಸಿ ನೋಡುತ್ತಾರೆ. ಸಾಮಾನ್ಯವಾಗಿ ಯಾವುದೋ ಲೆಕ್ಕ ಶೀರ್ಷಿಕೆಗೆ ಹೋಗಬೇಕಾದ ಹಣ ಇನ್ನು ಯಾವುದೋ ಶೀರ್ಷಿಕೆಗೆ ಜಮಾ ಆಗಿ ವ್ಯತ್ಯಾಸವಾಗುತ್ತಿರುತ್ತದೆ. ಕಂದಾಯ ಲೆಕ್ಕ ಪರಿಶೀಲಕರು ಎಲ್ಲಾ ಗ್ರಾಮಲೆಕ್ಕಿಗರುಗಳ ಲೆಕ್ಕವನ್ನು ಪರಿಶೀಲಿಸುವುದಿಲ್ಲ. ಪರಿಶೀಲನಾ ಅವಧಿಯಲ್ಲಿ ಲಭ್ಯವಿರುವವರ ಲೆಕ್ಕಗಳನ್ನು ಮಾತ್ರ ಪರಿಶೀಲಿಸುತ್ತಾರೆ. ಜಾಣ ಖಲಂದರ್ ಆ ಕಛೇರಿಯಲ್ಲಿ ೪-೫ ವರ್ಷಗಳಿಂದ ಕೆಲಸ ಮಾಡಿದ್ದರೂ ಆ ಅವಧಿಯಲ್ಲಿ ಒಮ್ಮೆಯೂ ಅವನ ಲೆಕ್ಕ ಪರಿಶೋಧನೆ ಆಗದಂತೆ ನೋಡಿಕೊಂಡಿದ್ದ. ಖಲಂದರನ ಮಿತ್ರ ಗ್ರಾಮಲೆಕ್ಕಿಗನ, ಅವನ ಹೆಸರು ರಮೇಶ ಎಂದಿರಲಿ, ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒಂದು ತಿಂಗಳ ಕಂದಾಯದ ಹಣ ಖಜಾನೆಯ ಲೆಕ್ಕದಲ್ಲಿ ಜಮಾ ಆಗದೆ ಇರುವುದು ಕಂಡುಬಂದಿತ್ತು. ಖಿರ್ದಿಯಲ್ಲಿ ಮಾತ್ರ ಹಣ ಬ್ಯಾಂಕಿಗೆ ಸಂದಾಯವಾದ ಕುರಿತು ಬ್ಯಾಂಕಿನ 'ಕ್ಯಾಶ್ ರಿಸೀವ್ಡ್' ಸೀಲು ಇತ್ತು. ಅನುಮಾನದಿಂದ ಬ್ಯಾಂಕಿನಲ್ಲಿ ವಿಚಾರಿಸಿದಾಗ ಆ ಮೊಬಲಗು ಬ್ಯಾಂಕಿಗೆ ಜಮಾ ಆಗಿಲ್ಲದುದು ಖಚಿತವಾಗಿತ್ತು. ರಮೇಶನಿಗೆ ನೋಟೀಸು ಕೊಟ್ಟು ವಿಚಾರಿಸಿದಾಗ ತಾನು ಒಂದು ವಾರ ರಜೆಯಲ್ಲಿದ್ದುದರಿಂದ ಹಣವನ್ನು ಮಿತ್ರ ಖಲಂದರ್ ಮೂಲಕ ಬ್ಯಾಂಕಿಗೆ ಕಟ್ಟಿಸಿದ್ದಾಗಿ ತಿಳಿಸಿದ್ದ. ಶಿರಸ್ತೇದಾರರಿಗೆ ಅನುಮಾನ ಬಂದು ಖಲಂದರನ ಖಾತೆ-ಖಿರ್ದಿಗಳನ್ನು ಪಡೆದು ಪರಿಶೀಲಿಸಿದಾಗ ಖಲಂದರ್ ಕಛೇರಿಗೆ ಬಂದ ಮೊದಲ ಎರಡು ತಿಂಗಳ ಹಣ ಹೊರತುಪಡಿಸಿ ನಂತರದ ಯಾವುದೇ ತಿಂಗಳ ಹಣ ಸರ್ಕಾರಕ್ಕೆ ಜಮಾ ಅಗಿರದೇ ಇದ್ದುದು ಗೊತ್ತಾಯಿತು. ಅವನೇ ಬ್ಯಾಂಕಿನ ಖೋಟಾ ಸೀಲು ಮಾಡಿಸಿಕೊಂಡು ಹಣ ಜಮಾ ಆದ ಬಗ್ಗೆ ಖಿರ್ದಿಯಲ್ಲಿ ಒತ್ತುತ್ತಿದ್ದುದು ಗೊತ್ತಾಗಿಹೋಯಿತು. ಬಹಳ ದೊಡ್ಡ ಮೊತ್ತದ ಹಣ ಲಪಟಾವಣೆಯಾಗಿತ್ತು. ಮಿತ್ರ ರಮೇಶನ ಹಣವನ್ನೂ ಬ್ಯಾಂಕಿಗೆ ಜಮಾ ಮಾಡದೇ ತನ್ನ ಖೋಟಾ ಸೀಲು ಒತ್ತಿದ್ದರಿಂದ ಈ ಹಗರಣ ಬೆಳಕಿಗೆ ಬಂದಿತ್ತು. ಜಿಲ್ಲಾಧಿಕಾರಿಯವರಿಗೆ ವರದಿ ಹೋಯಿತು. ಗ್ರಾಮಲೆಕ್ಕಿಗ, ಆ ಐದು ವರ್ಷಗಳಲ್ಲಿ ಕೆಲಸ ಮಾಡಿದ್ದ ಡಿಸಿಬಿ ಗುಮಾಸ್ತರುಗಳು, ರೆವಿನ್ಯೂ ಇನ್ಸ್ ಪೆಕ್ಟರುಗಳು, ಶಿರಸ್ತೇದಾರರುಗಳ ಮೇಲೆ ಇಲಾಖಾ ವಿಚಾರಣೆ ನಡೆಸಲಾಯಿತು. ಸುಮಾರು ೨-೩ ವರ್ಷಗಳ ಕಾಲ ವಿಚಾರಣೆ ನಡೆದು ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿದರು. ಖಲಂದರನನ್ನು ಸೇವೆಯಿಂದ ವಜಾ ಮಾಡಲಾಯಿತು. ಗುಮಾಸ್ತರುಗಳ, ರೆವಿನ್ಯೂ ಇನ್ಸ್ ಪೆಕ್ಟರುಗಳ ಎರಡೆರಡು ವಾರ್ಷಿಕ ಇಂಕ್ರಿಮೆಂಟುಗಳನ್ನು, ಶಿರಸ್ತೇದಾರರ ೪ ವಾರ್ಷಿಕ ಇಂಕ್ರಿಮೆಂಟುಗಳನ್ನು ತಡೆಹಿಡಿದು ಆದೇಶವಾಯಿತು. ಅವರುಗಳ ಬಡ್ತಿಗೂ ಇದರಿಂದ ತೊಂದರೆಯಾಯಿತು.

     ವಜಾಗೊಂಡ ಖಲಂದರ್ ಸುಮ್ಮನೇ ಕೂರಲಿಲ್ಲ. ತನ್ನದೇ ಆದ ಒಂದು ಪೆಪ್ಪರಮೆಂಟ್ ತಯಾರಿಕಾ ಘಟಕ ಸ್ಥಾಪಿಸಿದ. ಅದೇ ಸಮಯಕ್ಕೆ ತನ್ನನ್ನು ಸೇವೆಯಿಂದ ವಜಾ ಮಾಡಿದ ಆದೇಶವನ್ನು ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿಯನ್ನೂ ಸಲ್ಲಿಸಿದ. ಪೆಪ್ಪರಮೆಂಟ್ ತಯಾರಿಕೆ ಮತ್ತು ಮಾರಾಟದಿಂದಲೂ ಒಳ್ಳೆಯ ಲಾಭ ಮಾಡಿದ ಅವನು ದೊಡ್ಡ ಬಂಗಲೆಯಂತಹ ಮನೆ ಕಟ್ಟಿಕೊಂಡು ಕಾರಿನಲ್ಲಿ ಸೂಟು ಬೂಟು ಧರಿಸಿ ಓಡಾಡತೊಡಗಿದ. ಉಚ್ಛನ್ಯಾಯಾಲಯದಲ್ಲಿ ೬-೭ ವರ್ಷಗಳು ವಿಚಾರಣೆ ನಡೆದು ಆ ಗ್ರಾಮಲೆಕ್ಕಿಗ ನಿರ್ದೋಷಿಯೆಂದು ತೀರ್ಮಾನವಾಗಿತ್ತು. ಇಲಾಖಾ ವಿಚಾರಣೆ ಸರಿಯಾಗಿ ನಡೆಸಿರಲಿಲ್ಲವೆಂದೂ, ಬ್ಯಾಂಕಿನವರನ್ನು ವಿಚಾರಣೆ ನಡೆಸಿಯೇ ಇಲ್ಲವೆಂದೂ, ತನ್ನ ಮುಗ್ಧತೆಯನ್ನು ಬ್ಯಾಂಕಿನವರು ದುರುಪಯೋಗಪಡಿಸಿಕೊಂಡಿದ್ದರೆಂದೂ ಅವನು ಮುಂದಿಟ್ಟ ವಾದವನ್ನು ಒಪ್ಪಿದ ನ್ಯಾಯಾಲಯ, ಸರ್ಕಾರ ಆರೋಪಗಳನ್ನು ಸಾಬೀತುಗೊಳಿಸುವಲ್ಲಿ ವಿಫಲವಾಗಿದೆಯೆಂದು, ಸರಿಯಾಗಿ ವಿಚಾರಣೆ ನಡೆಸಿಲ್ಲವೆಂದು ಹಾಗೂ ಅವನನ್ನು ಮರಳಿ ಸೇವೆಗೆ ತೆಗೆದುಕೊಂಡು ಹಿಂದಿನ ಪೂರ್ಣ ಅವಧಿಯ ವೇತನವನ್ನು ಪಾವತಿಸಲು ಮತ್ತು ಅಗತ್ಯವೆನಿಸಿದರೆ ಹೊಸದಾಗಿ ಇಲಾಖಾ ವಿಚಾರಣೆ ನಡೆಸಬಹುದೆಂದೂ ತಿಳಿಸಿತ್ತು. ಕಾರಿನಲ್ಲಿ ಟ್ರಿಮ್ಮಾಗಿ ಬಂದ ಖಲಂದರನನ್ನು ಜಿಲ್ಲಾಧಿಕಾರಿಯವರು ಸೇವೆಗೆ ತೆಗೆದುಕೊಳ್ಳಲೇಬೇಕಾಯಿತು ಮತ್ತು ಹಳೆಯ ಎಂಟು ವರ್ಷಗಳ ಸಂಬಳವನ್ನು ಅವನು ಕೆಲಸ ಮಾಡಿರದಿದ್ದರೂ ಅವನಿಗೆ ಕೊಡಲೇಬೇಕಾಯಿತು. ಅವನೋ ನಂತರದಲ್ಲಿ, ತನ್ನ ಪರವಾಗಿ ಇನ್ನೊಬ್ಬನನ್ನು ನೇಮಿಸಿಕೊಂಡು ಅವನಿಗೆ ತನ್ನ ಅರ್ಧ ಸಂಬಳ ಕೊಟ್ಟು ಬರವಣಿಗೆ ಕೆಲಸ ಮಾಡಿಸುತ್ತಿದ್ದ. ಸಂಬಳ ತೆಗೆದುಕೊಳ್ಳಲು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅವನು ಕಛೇರಿಗೆ ಹೋಗುತ್ತಿದ್ದ. ಕಛೇರಿಯಲ್ಲಿ ಕುಳಿತು ಮಾಡುವ ಕೆಲಸವಲ್ಲವಾದ್ದರಿಂದ ಮತ್ತು ತಕ್ಷಣದ ಮೇಲಿನ ಅಧಿಕಾರಿಗಳು ಮತ್ತು ಇತರರನ್ನು 'ಚೆನ್ನಾಗಿ' ನೋಡಿಕೊಳ್ಳುತ್ತಿದ್ದರಿಂದ ಹಾಗೂ ಸರ್ಕಾರಿ ಕೆಲಸಕ್ಕೆ ತೊಂದರೆಯಾಗದಿದ್ದುದರಿಂದ  ಇದಕ್ಕೆ ಯಾರಿಂದಲೂ ಅಡ್ಡಿ ಬರಲಿಲ್ಲ. ಜಿಲ್ಲಾಧಿಕಾರಿಯವರು ಹೊಸದಾಗಿ ಇಲಾಖಾ ವಿಚಾರಣೆ ನಡೆಸಲು ಹೊಸ ಆರೋಪ ಪಟ್ಟಿ ತಯಾರಿಸಲು ತಹಸೀಲ್ದಾರರಿಗೆ ಸೂಚಿಸಿದರು. ಹಳೆಯ ಕಡತಗಳನ್ನು ಪರಿಶೀಲಿಸಿ ಆರೋಪ ಪಟ್ಟಿ ತಯಾರಿಸಲು ನೋಡಿದರೆ ಸಂಬಂಧಿಸಿದ ಕಡತಗಳು, ದಾಖಲೆಗಳು ಸಿಗಲೇ ಇಲ್ಲ. ಹಿಂದಿನ ಇಲಾಖಾ ವಿಚಾರಣಾ ಕಡತದಿಂದಲೂ ಮುಖ್ಯವಾದ ಮೂಲ ದಾಖಲಾತಿಗಳೇ ಕಣ್ಮರೆಯಾಗಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ತಪ್ಪು ಹೊರಿಸುತ್ತಲೇ, ಪತ್ರ ವ್ಯವಹಾರಗಳನ್ನು ಮಾಡುತ್ತಲೇ ವರ್ಷಗಳು ಉರುಳಿದವು. ಖಲಂದರನ ಆದರಾತಿಥ್ಯಗಳಿಗೆ ಮರುಳಾದವರು ಅವನ ಸಹಕಾರಕ್ಕೆ ನಿಂತಿದ್ದರು.  ಕ್ರಮೇಣ ಎಲ್ಲರಿಗೂ ವಿಷಯ ಮರೆತೇ ಹೋಯಿತು. ಅವನೂ ಪೂರ್ಣ ಸೇವೆ ಸಲ್ಲಿಸಿ ಸೇವಾನಿವೃತ್ತನೂ ಆದ, ಪಿಂಚಣಿಯನ್ನೂ ಪಡೆದ ಎಂಬಲ್ಲಿಗೆ ವ್ಯರ್ಥ ಇಲಾಖಾ ವಿಚಾರಣಾ ಪ್ರಸಂಗಗಳ ಈ ಅಧ್ಯಾಯ ಮುಗಿದುದು.

-ಕ.ವೆಂ.ನಾಗರಾಜ್.