ಲೂಟಿಕೋರರಿಗಿದು ಸುಭಿಕ್ಷಕಾಲ

ಲೂಟಿಕೋರರಿಗಿದು ಸುಭಿಕ್ಷಕಾಲ

     ಹಣ ದುರುಪಯೋಗದ ಕಾರಣದಿಂದ ಸೇವೆಯಿಂದ ವಜಾಗೊಂಡಿದ್ದ ಗ್ರಾಮಲೆಕ್ಕಿಗನೊಬ್ಬ ಉಚ್ಛನ್ಯಾಯಾಲಯದಲ್ಲಿ ಇಲಾಖಾ ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲವೆಂದು ಮೇಲುಮನವಿ ಸಲ್ಲಿಸಿ, ಅದನ್ನು ನ್ಯಾಯಾಲಯವು ಎತ್ತಿಹಿಡಿದು ಅವನನ್ನು ಸೇವೆಗೆ ತೆಗೆದುಕೊಂಡು ಅಗತ್ಯವೆನಿಸಿದರೆ ಪುನರ್ವಿಚಾರಣೆ ನಡೆಸಲು ಆದೇಶಿಸಿದ್ದರೂ, ಪುನರ್ವಿಚಾರಣೆ ನಡೆಸದೆ ಆತ ವಜಾಗೊಂಡ ನಂತರದಿಂದ ನ್ಯಾಯಾಲಯದ ಆದೇಶವಾಗುವವರೆಗಿನ ಎಂಟು ವರ್ಷಗಳ ಸಂಬಳವನ್ನು ಆತ ಕೆಲಸ ಮಾಡಿರದಿದ್ದರೂ ಧಾರೆಯೆರೆದುದಲ್ಲದೆ, ನಿರಾತಂಕವಾಗಿ ವಯೋನಿವೃತ್ತಿಯಾಗುವವರೆಗೆ ಮುಂದಿನ ಸೇವೆ ಪೂರ್ಣಗೊಳಿಸಿ ಪಿಂಚಣಿ ಮತ್ತಿತರ ಸೌಲಭ್ಯಕ್ಕೆ ಪಾತ್ರನನ್ನಾಗಿಸಿದ ಅಸಮರ್ಪಕ ಆಡಳಿತದ ಕುರಿತು ಹಿಂದಿನ ಲೇಖನದಲ್ಲಿ ವಿವರಿಸಲಾಗಿತ್ತು. ಈಗ ಸಾರ್ವಜನಿಕ ವಿತರಣೆಗೆ ಮೀಸಲಾಗಿದ್ದ ಟನ್ನುಗಟ್ಟಲೆ ಆಹಾರ ಪದಾರ್ಥಗಳನ್ನು ಲೂಟಿ ಹೊಡೆದು ಜೇಬು ತುಂಬಿಸಿಕೊಂಡಿದ್ದ ಅಧಿಕಾರಿಗಳು ದಾಖಲೆ ಸಹಿತ ಸಿಕ್ಕಿಬಿದ್ದರೂ ಶಿಕ್ಷೆಯಾಗದೆ ತಪ್ಪಿಸಿಕೊಂಡುದಲ್ಲದೇ ಮುಂದೆ ಹೆಚ್ಚಿನ ಬಡ್ತಿಗಳನ್ನೂ ಪಡೆದ ಪ್ರಕರಣದ ಕುರಿತು ನೋಡೋಣ.

     ಎರಡು ದಶಕಗಳ ಹಿಂದೆ ಬಿಜಾಪುರ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿದ್ದವರೊಬ್ಬರು ಮಾಡಿದ ಅವ್ಯವಹಾರದ ಪ್ರಸಂಗವಿದು. ಪ್ರತಿ ತಿಂಗಳೂ ೩೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಬಿಡುಗಡೆ ಮಾಡುವಾಗ ಆಯ್ಕೆ ಮಾಡಿದ ೫೦ ಅಂಗಡಿಗಳಿಗೆ ಅಕ್ಕಿ ಮತ್ತು ಬೇರೆ ೫೦ ಅಂಗಡಿಗಳಿಗೆ ಗೋಧಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳಿನಲ್ಲಿ ಹಿಂದಿನ ತಿಂಗಳಲ್ಲಿ ಬಿಡುಗಡೆ ಮಾಡದಿದ್ದ ಅಂಗಡಿಗಳಿಗೆ ದಾಸ್ತಾನು ಬಿಡುಗಡೆ ಮಾಡುತ್ತಿದ್ದರು ಹಾಗೂ ಇನ್ನು ಬೇರೆ ಬೇರೆ ತಲಾ ೫೦ ಅಂಗಡಿಗಳಿಗೆ ಅಕ್ಕಿ, ಗೋಧಿಯನ್ನು ಹಂಚಿಕೆ ಮಾಡುತ್ತಿರಲಿಲ್ಲ. ಹೀಗೆ ಇದನ್ನು ರೊಟೇಶನ್ನಿನಂತೆ ಮಾಡುತ್ತಿದ್ದರು. ಪ್ರತಿ ತಿಂಗಳಿನಲ್ಲಿಯೂ ೫೦ ಅಂಗಡಿಗಳಿಗೆ ಬಿಡುಗಡೆ ಮಾಡಬೇಕಾಗಿದ್ದ ಪ್ರಮಾಣದ ಅಕ್ಕಿ ಮತ್ತು ೫೦ ಅಂಗಡಿಗಳಿಗೆ ಹೋಗಬೇಕಾಗಿದ್ದ ಗೋಧಿ ಮೂಟೆಗಳು ಸೋಲಾಪುರದ ದಾರಿ ಹಿಡಿಯುತ್ತಿದ್ದವು. ಅಲ್ಲಿ ಅದನ್ನು ಹಿಟ್ಟು, ರವೆಗಳಾಗಿ ಪರಿವರ್ತಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಪ್ರತಿ ತಿಂಗಳೂ ಆ ನೂರು ಅಂಗಡಿಗಳ ವ್ಯಾಪ್ತಿಯ ಗ್ರಾಹಕರಿಗೆ ಅಕ್ಕಿ, ಗೋಧಿಗಳು ಸಿಗುತ್ತಿರಲಿಲ್ಲ. ದಾಸ್ತಾನು ಕಡಿಮೆ ಬಂದಿದ್ದು, ಮುಂದಿನ ತಿಂಗಳು ಹಂಚಿಕೆಯಾಗುತ್ತದೆಂದು ಗ್ರಾಹಕರಿಗೆ ತಿಳಿಸಲಾಗುತ್ತಿತ್ತು. ಹೀಗೆ ಬಹಳ ಕಾಲದಿಂದ ನಡೆಯುತ್ತಿದ್ದ ವ್ಯವಹಾರದಿಂದ ಆ ಉಪನಿರ್ದೇಶಕರು ಆರ್ಥಿಕವಾಗಿ ಭಾರೀಕುಳ ಆದರು. 

     ಒಮ್ಮೆ ಬಿಜಾಪುರದ ಜಿಲ್ಲಾಧಿಕಾರಿಯವರ ಕೈಗೆ ಹೀಗೆ ಆಹಾರ ಪದಾರ್ಥದ ಕಳ್ಳಸಾಗಣೆಯಾಗುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. [ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ಅವರು ಈಗ ಸರ್ಕಾರದ ಉನ್ನತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ]. ಜಿಲ್ಲಾಧಿಕಾರಿಯವರು ಸಹಾಯಕ ಆಯುಕ್ತರೊಂದಿಗೆ ಸ್ವತಃ ಸಗಟು ಗೋಡೌನಿಗೆ ಹೋಗಿ ಸತತವಾಗಿ ಐದು ದಿನಗಳ ಕಾಲ ಅ"ರತ ತಪಾಸಣೆ ಮಾಡಿದರು. ತಪಾಸಣೆಯ ನಂತರದಲ್ಲಿ ದಾಸ್ತಾನಿನಲ್ಲಿ ವ್ಯತ್ಯಾಸ ಇರುವುದು, ಅವ್ಯವಹಾರ ನಡೆದಿರುವುದು ಧೃಢಪಟ್ಟಿತು. ಉಪನಿರ್ದೇಶಕರು ಜಿಲ್ಲಾಮಟ್ಟದ ಅಧಿಕಾರಿಯಾಗಿದ್ದರಿಂದ ಅವರ ವಿರುದ್ಧ ಸರ್ಕಾರದ ಮಟ್ಟದಲ್ಲೇ ಕ್ರಮ ಜರುಗಿಸಬೇಕಿದ್ದಿತು. ಬೇರೆ ಜಿಲ್ಲಾಧಿಕಾರಿಯವರಾಗಿದ್ದರೆ ಪ್ರಕರಣ ಮುಚ್ಚಿಹೋಗುತ್ತಿತ್ತೋ ಏನೋ! ಆದರೆ, ಆ ಜಿಲ್ಲಾಧಿಕಾರಿಯವರು ಸ್ವತಃ ಮುತುವರ್ಜಿ ವಹಿಸಿ ಯಾವುದೇ ಮಾಹಿತಿಗಳನ್ನೂ ಬಿಡದಂತೆ ದಾಖಲೆಗಳ ಸಹಿತ ವರದಿ ಸಿದ್ಧಪಡಿಸಿಕೊಂಡು ಗೃಹ ಇಲಾಖೆಯ ಕಮಿಷನರರನ್ನು ಮುಖತಃ ಭೇಟಿ ಮಾಡಿ ಪ್ರಕರಣದ ಗಂಭೀರತೆಯನ್ನು ವಿವರಿಸಿದರು. ಆ ಸಂದರ್ಭದಲ್ಲಿ ಆಹಾರ ಮಂತ್ರಿಯಾಗಿದ್ದ ಶ್ರೀಮತಿ ಮನೋರಮಾ ಮಧ್ವರಾಜರನ್ನೂ ಅವರ ಮನೆಗೇ ಹೋಗಿ ಭೇಟಿ ಮಾಡಿ ಅವ್ಯವಹಾರದ ವಿಷಯ ಗಮನಕ್ಕೆ ತಂದರು. ಸಾರ್ವಜನಿಕರಿಗೆ ಸೇರಬೇಕಾಗಿದ್ದ ಆಹಾರದ ಲೂಟಿ ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕೋರಿಕೊಂಡರು. ಆಹಾರ ಮಂತ್ರಿಗಳೂ ಒಪ್ಪಿ, ಸಿ.ಒ.ಡಿ. ತನಿಖೆಗೂ ಆದೇಶ ಮಾಡಿದರು. ಫಲಶೃತಿಯಾಗಿ ಉಪನಿರ್ದೇಶಕರು ಮತ್ತು ಫುಡ್ ಇನ್ಸ್‌ಪೆಕ್ಟರರ ಬಂಧನವಾಯಿತು. ಎರಡು ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದರು. 

     ೧೯೯೪ರಲ್ಲಿ ನಡೆದ ಈ ಪ್ರಕರಣದಲ್ಲಿ ೨೦೦೮ರವರೆವಿಗೂ ಸುಮಾರು ೧೪ ವರ್ಷಗಳ ಕಾಲ ದೀರ್ಘ ಅವಧಿಯವರೆಗೆ ವಿಚಾರಣೆ ನಡೆಯಿತು. ಸಿ.ಒ.ಡಿ. ತನಿಖೆಯಲ್ಲಿ ಉಪನಿರ್ದೇಶಕರು ಮಾಡಿದ ಅಪರಾಧ ರುಜುವಾತಾಗಿತ್ತು. ಸಿ.ಒ.ಡಿ.ಯವರು ತನಿಖೆ ನಡೆಸಬಹುದು, ತಪ್ಪಿತಸ್ಥರೆಂದು ತೀರ್ಮಾನಿಸಬಹುದು, ಆದರೆ ಅವರಿಗೆ ಶಿಕ್ಷೆ ಕೊಡಲು ಬರುವುದಿಲ್ಲ. ಕೇವಲ ಸರ್ಕಾರಕ್ಕೆ ವರದಿ ಸಲ್ಲಿಸಬಹುದಷ್ಟೆ. ಆ ಕೆಲಸವನ್ನು ಅವರು ಸರಿಯಾಗಿ ಮಾಡಿದರು. ನಂತರದಲ್ಲಿ ಸರ್ಕಾರದ ಕಡೆಯಿಂದ ಇಲಾಖಾ ವಿಚಾರಣೆ ನಡೆತು. ಅಧಿಕಾರಿಗಳು ಜಿಲ್ಲಾಧಿಕಾರಿಯವರನ್ನು (ಅಷ್ಟು ಹೊತ್ತಿಗೆ ಅವರು ಬಿಜಾಪುರದಿಂದ ಬೇರೆಡೆಗೆ ವರ್ಗವಾಗಿದ್ದರು) 'ಏನೋ ತಪ್ಪು ಮಾಡಿಬಿಟ್ಟಿದ್ದೇವೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಟ್ಟುಬಿಡಿ, ನಮ್ಮ ವಿರುದ್ಧ ಸಾಕ್ಷಿ ಹೇಳಬೇಡಿ' ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು. ಆದರೆ ಆ ಜಿಲ್ಲಾಧಿಕಾರಿಯವರು ಕರ್ತವ್ಯದ ದೃಷ್ಟಿಯಿಂದ ಮಾಡಬೇಕಾದ ಎಲ್ಲವನ್ನೂ ಮಾಡಿದರು. ಸಿ.ಒ.ಡಿ.ಯವರ ಮುಂದೆಯೂ, ಇಲಾಖಾ ವಿಚಾರಣಾಧಿಕಾರಿಯವರ ಮುಂದೆಯೂ ನೈಜ ಸಾಕ್ಷ್ಯ ಹೇಳಿದರು. ನಂತರದಲ್ಲಿ ಏನು ಆಯಿತೋ, ಹೇಗೆ ಆಯಿತೋ ಗೊತ್ತಿಲ್ಲ, ಅಧಿಕಾರಿಗಳು ನಿರ್ದೋಷಿಗಳಾಗಿ ಹೊರಬಂದರು! ಕಾನೂನುಗಳನ್ನು ಹೇಗೆ ತಿರುಚಬಹುದೆಂಬುದು ಮತ್ತು ಹೇಗೆ ಸುಲಭವಾಗಿ ಪಾರಾಗಬಹುದೆಂಬುದು ಜಾಹೀರಾಯಿತು. ವಿಶೇಷವೆಂದರೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವಿರಲಿಲ್ಲ. ಈ ಪ್ರಕರಣದಲ್ಲಿ ಸಾರ್ವಜನಿಕರಿಗೆ ಸೇರಬೇಕಾಗಿದ್ದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳು ಕಾಳಸಂತೆಯ ಪಾಲಾಗಿದ್ದು ಸತ್ಯ, ಸಂಬಂಧಿತ ಅಧಿಕಾರಿಗಳು ದುಂಡಗಾಗಿದ್ದು ಸತ್ಯ, ಜಿಲ್ಲಾಧಿಕಾರಿಯವರು ಪ್ರಾಮಾಣಿಕವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕ್ರಮ ಜರುಗಿಸಿದ್ದು ಸತ್ಯ, ಸಿ.ಒ.ಡಿ. ತನಿಖೆಯಲ್ಲಿ ಆರೋಪ ರುಜುವಾತಾಗಿದ್ದೂ ಸತ್ಯ, ಕೊನೆಗೆ ಇಲಾಖಾ ವಿಚಾರಣೆಯಲ್ಲಿ ಮಾತ್ರ ಸಂಬಂಧಿಸಿದವರು ನಿರ್ದೋಷಿಗಳೆಂದು ತೀರ್ಮಾನವಾಗಿ, ಅವರುಗಳು ಗೆಲುವಿನ ನಗೆ ಬೀರಿ, ಬರಬೇಕಾಗಿದ್ದ ಬಾಕಿ ಸಂಬಳ-ಸಾರಿಗೆಗಳನ್ನು ಪಡೆದುದಲ್ಲದೆ ಬಡ್ತಿಗಳನ್ನೂ ಪಡೆದು ಉನ್ನತ ಹುದ್ದೆಗಳಿಗೆ ಏರಿದ್ದೂ ಸತ್ಯವೇ!! ಇಲಾಖಾ ವಿಚಾರಣೆ ಸರಿಯಾಗಿ ನಡೆದಿದ್ದರೆ ಹೀಗಾಗುತ್ತಿತ್ತೆ? ಪುನರ್ವಿಚಾರಣೆಗೆ ಅವಕಾಶವಿತ್ತಲ್ಲವೆ? ಜನಪರ ಕಾಳಜಿಯ ಅಧಿಕಾರಿಗಳು ಮತ್ತು ಜಾಗೃತ ಜನರು ಮಾತ್ರ ಪರಿಸ್ಥಿತಿ ಸುಧಾರಿಸಬಲ್ಲರು.

-ಕ.ವೆಂ.ನಾಗರಾಜ್.

**************

ಹಿಂದಿನ ಲೇಖನ: 'ತಿಂದೂ ಹೋದ ಕೊಂಡೂ ಹೋದ'ಕ್ಕೆ ಲಿಂಕ್: http://sampada.net/%E0%B2%A4%E0%B2%BF%E0%B2%82%E0%B2%A6%E0%B3%82-%E0%B2%B9%E0%B3%8B%E0%B2%A6-%E0%B2%95%E0%B3%8A%E0%B2%82%E0%B2%A1%E0%B3%82-%E0%B2%B9%E0%B3%8B%E0%B2%A6

Comments

Submitted by nageshamysore Thu, 05/29/2014 - 05:53

ಪವಾಡಗಳು ಬರಿ ತೇತ್ರಾ, ದ್ವಾಪರ ಯುಗಗಳಲ್ಲಿ ಮಾತ್ರ ಆಗಬೇಕೆಂದೇನೂ ಇಲ್ಲ..ಕಲಿಯುಗದಲ್ಲಿ ಸರಕಾರಿ ನೌಕರರಲ್ಲೂ ಪವಾಡ ಪುರುಷರಿರುತ್ತಾರೆಂದಾಯ್ತು - ಸತ್ಯವೂ ಸೇರಿದಂತೆ ಎಲ್ಲವನ್ನೂ ಮಂಗಮಾಯ ಮಾಡುವವರು ..!