ಯಾರಿಗೆ ಬಂತು ಸ್ವಾತಂತ್ರ್ಯ?

ಯಾರಿಗೆ ಬಂತು ಸ್ವಾತಂತ್ರ್ಯ?

"ಬೆಳಿಗ್ಗೆ ಬೆಳಿಗ್ಗೆ ಎಲ್ ಹೋಗಿದ್ರಿ?

"ವಾಕಿಂಗ್ ಹೋಗಿದ್ದೆ ಕಣೇ"

"ಹೇಳಿ ಹೋಗೋದ್ ತಾನೇ? ಸುಮ್ನೆ ಎದ್ ಹೊರಟು ಹೋದರೆ ಮನೇಲಿ ಏನು ಅಂದುಕೊಳ್ಳಬೇಕು?"

"ನಾನೇನ್ ಸಿದ್ದಾರ್ಥನೇ ಎದ್ ಹೋಗಿ ಸನ್ಯಾಸಿ ಆಗಲಿಕ್ಕೆ?" ಅಂತ ಮನಸ್ಸಿನಲ್ಲೇ ಅಂದುಕೊಂಡರು ರಾಮರಾಯರು.

"ತೊಗೊಳ್ಳಿ ಕಾಫಿ"

ಸೊರ್ರ್ ... "ಸಕ್ಕರೆ ಸ್ವಲ್ಪಾನೂ ಇಲ್ಲ ... ಸ್ವಲ್ಪ ಹಾಕ್ತೀಯಾ?"

"ಇನ್ನೆರಡು ಜನ್ಮಕ್ಕಾಗೋ ಅಷ್ಟು ಸಕ್ಕರೆ ಮೈಯಲ್ಲೇ ಇದೆ. ಲೋಟಕ್ಕೆ ಯಾಕೆ? ಕಾಫಿ ಕುಡಿದು ಒಮ್ಮೆ ಅಲ್ಲಾಡಿ, ಸರಿ ಹೋಗುತ್ತೆ!"

"ಪೇಪರ್ ಬಂತಾ?"

"ಸುಮ್ನೆ ಪೇಪರ್ ಮುಖಕ್ಕೆ ಅಡ್ಡ ಹಿಡಿದು ತೂಕಡಿಸಬೇಡಿ. ಸ್ನಾನ ಮಾಡ್ಕೊಂಡ್ ಬನ್ನಿ. ಉಪ್ಪಿಟ್ಟು ರೆಡಿ ಮಾಡ್ತಿದ್ದೀನಿ"

"ಸರಿ, ಸ್ನಾನಕ್ಕೆ ಹೊರಟೆ"

ಸ್ನಾನವೂ ಆಯ್ತು. ರೆಡಿ ಆಗಿ ಬಂದರು ರಾಯರು.

"ಈಗ ಎಲ್ಲಿಗೆ ಹೋಗಬೇಕೂ ಅಂತ ಒಗೆದು ಐರನ್ ಮಾಡಿಟ್ಟ ಬಿಳೀ ಶರಟು ಹಾಕಿಕೊಂಡಿದ್ದು? ಮಗ ಊರಿನಿಂದ ಕಳಿಸಿದ್ನಲ್ಲ ಆ ಟಿ-ಶರಟು ಹಾಕ್ಕೋಬಾರದೇ?"

"ಸರಿ ಕಣೇ"

"ತೊಗೊಳ್ಳಿ ಉಪ್ಪಿಟ್ಟು"

"ಈಗ ಶರಟು ಬದಲಿಸಲೇ ಅಥವಾ ಉಪ್ಪಿಟ್ಟು ತಿನ್ನಲೇ?"

"ಏನಾದ್ರೂ ಮಾಡಿ ... ಮೊದಲು ಉಪ್ಪಿಟ್ಟು ತಿನ್ನಿ. ಹಸಿವಿಗೆ ತಲೆ ಸುತ್ತಿ ಬಿದ್ದೀರ. ಅಲ್ದೇ, ಶರಟಿನ ಮೇಲೆ ಬೀಳಿಸಿಕೊಂಡು ಕರೆ ಮಾಡಬೇಡಿ. ಆ ಲಚ್ಚಿ ಸುಮ್ನೆ ಕಿಚಿ ಕಿಚಿ ಅಂತಾಳೆ. ಶರಟು ಬದಲಿಸಿ"

"ಈಗ ಏನ್ ಮಾಡಲಿ?"

"ಇನ್ನೂ ಉಪ್ಪಿಟ್ಟಿನ ತಟ್ಟೆ ಕೈಯಲ್ಲೇ ಇಟ್ಕೊಂಡ್ ಏನು ತಾರಮ್ಮಯ್ಯ ಹಾಡ್ತಿದ್ದೀರಾ?"

"ಏನಿಲ್ಲ ಕಣೇ. ಒಂದು ಕೈಯಲ್ಲಿ ತಿಂತಾ, ಇನ್ನೊಂದ್ ಕೈಯಲ್ಲಿ ಶರಟು ಬದಲಿಸೋದು ಹೇಗೆ ಅಂತ ನೋಡ್ತಿದ್ದೀನಿ"

"ಏನಾದ್ರೂ ಮಾಡಿ ... ಅಂದ ಹಾಗೇ .... ಸ್ವಾತಂತ್ರ್ಯ ದಿನದ ಶುಭಾಶಯಗಳು"

"ಹಾಗಂದ್ರೆ ಏನೇ?"

 

Comments

Submitted by ravindra n angadi Mon, 08/25/2014 - 14:48

ನಮಸ್ಕಾರ ಸರ್.

ನಿಮ್ಮ ಬರಹ ತುಂಬಾ ಚನ್ನಾಗಿದೆ ದಿನ ನಿತ್ಯ ಈ ಘಟನೆ ನಡೆಯುತ್ತಿೃರುತ್ತದೆ ಇದನ್ನು ಹಾಸ್ಯಮಯವಾಗಿ ತೆಗೆದು ಕೊಂಡರೆ ಸಂತೋಷವನ್ನು ಕೂಡುತ್ತದೆ.

ಧನ್ಯವಾದಗಳು.