ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….

ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….

ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ, ತರ್ಕ, ಜ್ಞಾನ, ಚಿತ್ತ ಇವುಗಳ ಕಾರಣವಾಗಿ ಮಾತ್ರ ಮಾನವ ಇತರ ಪ್ರಾಣಿಗಳಿಗಿಂತ ಬಿನ್ನವಾಗಿದ್ದಾನೆಯೇ ಹೊರತು ಉಳಿದಂತೆ ಮಾನವ ಸಹಾ ಮೂಲತಃ ಪ್ರಾಣಿಯೇ ಎಂಬುದು ಎಲ್ಲರು ಒಪ್ಪಿರತಕ್ಕಂತಹ ಸಂಗತಿಯೇ ಆಗಿದೆ. ಈ ಮೂಲಭೂತ ಕ್ರಿಯೆಗಳನ್ನು ಮೀರಿ ನಿಲ್ಲುವುದು ಅಥವಾ ಇವುಗಳನ್ನು ಗೆದ್ದು ಜೀವಿಸಲು ಯತ್ನಿಸುವುದು ತಾನು ಪ್ರಾಣಿಯೇ ಅಲ್ಲ ಎಂದು ತೋರ್ಪಡಿಸುಚ ಯತ್ನವಾಗಿರುತ್ತದೆ. ಅಸಲಿಗೆ ಗೆಲುವಾದರೂ ಯಾರ ವಿರುದ್ದ ? ಸಕಲ ಜೀವಸಂಕುಲದ ವಿರುದ್ದವೇ ? ಈ ಪ್ರಕೃತಿಯ ವಿರುದ್ದವೇ ? ಜೀವಿ ಹಾಗೂ ಪ್ರಕೃತಿಯನ್ನು ಹೊತ್ತ ಭೂಮಂಡಳದ ವಿರುದ್ದವೇ ? ಭೂಮಿಯ ಅಸ್ತಿತ್ವದ ಆಧಾರವಾಗಿರುವ ಸೂರ್ಯವ ವಿರುದ್ದವೇ ? ಅದಕ್ಕೂ ಮೀರಿ ಇಡೀ ವಿಶ್ವದ ವಿರುದ್ದವೇ ? ಸುತ್ತಲೂ ಗೆರೆಯೊಂದನ್ನು ಗೀಚಿ ಮೀರಿ ನಡೆದರೆ ಶಿಕ್ಷಿಸಲು ಭ್ರಮೆಯೊಂದನ್ನು ಹುಟ್ಟಿಸಿ ಹತ್ತು ಹಲವು ನಿಷೇಧಗಳನ್ನು ತಾವೇ ಹೇರಿಕೊಂಡು, ತಿನ್ನಲೊಂದು ನಿಯಮ, ತೇಗಲೊಂದು ನಿಯಮಗಳನ್ನು ಹಾಕಿಕೊಂಡು ಬಾಳುವ ಬದುಕಿನ ಸಾರ್ಥಕ್ಯವಾದರೂ ಏನು ? ಡಾ.ಯು.ಆರ್‍. ಅನಂತ ಮೂರ್ತಿ ಯವರ ಸಂಸ್ಕಾರ ಕಾದಂಬರಿಯ ಒಟ್ಟು ಸಾರಾಂಶ ಸಹಾ ಇದೇ ಆಗಿದೆ. ಅರ್ಥವಿಲ್ಲದ ಆಚಾರಗಳನ್ನು, ತರ್ಕಹೀನ ಸಂಪ್ರದಾಯಗಳನ್ನು ಕಡೆಗಣಿಸಿ ಬದುಕಿನ ನೆಲೆಯನ್ನು ವಿಸ್ತರಿಸಿ ಅರಿಯುವ ಪ್ರಯತ್ನ ಈ ಕಾದಂಬರಿಯಲ್ಲಿ ಕಂಡು ಬರುತ್ತದೆ. ಹಲವು ವಿವಾದಗಳನ್ನೂ ಮೀರಿ ಉನ್ನತ ವೈಚಾರಿಕ ಚಿಂತನೆಯ ಹರಿವಿನೊಂದಿಗೆ ಡಾ. ಯು.ಆರ್‍. ಅನಂತ ಮೂರ್ತಿಯವರ ಬರಹಗಳು ಪ್ರಿಯವೆನಿಸುತ್ತದೆ.

ಕೇವಲ ಧಾರ್ಮಿಕ ಹಾದಿಯ ಮುಕ್ತಿಯ ಭ್ರಮೆಯಲ್ಲಿ, ಆಚಾರ-ಸಂಪ್ರದಾಯಗಳ ಸರಪಳಿಗಳ ಬಂಧನದಲ್ಲಿ ಮಾನವ ಎಂದಿಗೂ ಸಹಾ ಮುಕ್ತವಾಗಲು ಸಾಧ್ಯವೇ ಇಲ್ಲ. ಮುಕ್ತನಾಗದ ಹೊರತು ಉನ್ನತಿಯ ಹಾದಿಯು ಮರೀಚಿಕೆಯೇ ಆಗಿರುತ್ತದೆ. ಬೌಧ್ದಿಕ ಉನ್ನತಿಯಿಂದ ಮಾತ್ರ ಮನುಕುಲದ ವಿಕಾಸ ಸಾಧ್ಯವಾಗುತ್ತದೆ. ಆದರೆ ಇಂದು “ಮುಕ್ತಿ” ಯ ಹಾದಿಯನ್ನು ತೋರಿಸಲು ನಮ್ಮಲ್ಲೇ ಹತ್ತು ಹಲವು ಮಾರ್ಗದರ್ಶಕರಿದ್ದಾರೆ. ಒಬ್ಬೊಬ್ಬರದೂ ಒಂದೊಂದು ಹಾದಿ ನನ್ನ ಹಾದಿಯೇ ಸರಿ ಎಂಬುದು ಎಲ್ಲರ ಸಮರ್ಥನೆ. ಎಲ್ಲರೂ ಹೇಳುವ ಗಮ್ಯ ಒಂದೇ ಆಗಿದ್ದರೂ ಸಹಾ ಇದಕ್ಕಾಗಿ ಕ್ರಮಿಸುವ ಹಾದಿ ಮಾತ್ರ ಬೇರೆ ಬೇರೆ. ಎಷ್ಟೇ ವೈಜ್ಞಾನಿಕ ಅನ್ವೇಷಣೆಗಳ ನಂತರವೂ ಶನಿ ಕಾಟಕ್ಕೆ ಪರಿಹಾರ ಹೇಳುವವರು ಇಲ್ಲಿ ನೂರು ಮಂದಿ ಸಿಗುತ್ತಾರೆ. ಯಾವುದೆ ಜಾತಿ ಬೇದ ಇಲ್ಲದೇ ಶುದ್ದ ಭಕ್ತಿಗೆ ಒಲಿದ ದೇವರು ಶತನಾಮಾವಳಿ, ಅಷ್ಟೋತ್ತರ, ಮಂತ್ರಪುಷ್ಪಗಳನ್ನು ಬಿಟ್ಟು, ಧೂಪ, ದೀಪ ನೈವೇದ್ಯಗಳನ್ನು ಕಡೆಗಣಿಸಿ ತಾನೇ ವಿರುದ್ದ ದಿಕ್ಕಿಗೆ ಮುಖ ಮಾಡಿರುವ ಪುರಾಣದ ಕಥೆ ಎಲ್ಲರಿಗೂ ತಿಳಿದೇ ಇದೆ. ಇದರ ನಿದರ್ಷನವೇ ಆಗಿರುವ ಉಡುಪಿಯ ಕನಕನಕಿಂಡಿ ಇಂದಿಗೂ ಹಾಗೇ ಇದೆ. ಆದರೆ ಇದೇ ಉಡುಪಿಯಲ್ಲಿ ಮಡಿವಂತಿಕೆ ಇನ್ನೂ ಜೀವಂತವಾಗಿದೆ. ಬ್ರಾಹ್ಮಣರೊಡನೆ ಇತರರ ಭೋಜನ ಇಲ್ಲಿ ನಿಷಿದ್ದ. ಬ್ರಾಹ್ಮಣ ಕುಲದಲ್ಲಿಯೇ ಮಾದ್ವ, ಸ್ಪಾರ್ಥರ ನಡುವೆ ಮಡಿ ತಾರತಮ್ಯ. ಇದಕ್ಕೂ ಅಚ್ಚರಿ ಹಾಗೂ ಅಸಹ್ಯ ಹುಟ್ಟಿಸುವ ವಿಷಯವೆಂದರೆ ನಿರ್ಮಲ ಭಕ್ತಿಯ ಹರಿಕಾರ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಹೀಗಿರುವಾಗ ಪುರಾಣ ಕಥೆಗಳ ಅರ್ಥವಾದರೂ ಏನು. ಈ ಕಥೆಗಳು ಹರಿಕಥೆ ಹೇಳಲು ಮಾತ್ರ ಸೀಮಿತವೇ ? ಅಥವಾ ನೀತಿ ತಾತ್ಪರ್ಯಗಳನ್ನು ಸಾರುವ ಪೌರಾಣಿಕ ಕಥೆಗಳು ಕೇವಲ ಕಲ್ಪಿತವೇ ?

“ನೂರು ದೇವರನೆಲ್ಲಾ ನೂಕಾಚೆ ದೂರ” ಎಂದು ಹಾಗೂ “ಮನು ನಿನಗೆ ನೀನು.. ಮನು ನಿನಗೆ ನೀನು” ಎಂದು ಹೇಳಿರುವ ರಾಷ್ಟ್ರ ಕವಿ ಕುವೆಂಪುರವರೂ ಮಾನವಕುಲದಲ್ಲಿ ವೈಚಾರಿಕ ದೃಷ್ಟಿಯ ಅಗತ್ಯವನ್ನು ಒತ್ತಿ ಸಾರಿದ್ದಾರೆ. ನಿಗೂಢ ಸೃಷ್ಟಿಯೊಂದಿಗೆ ಅತ್ಯಂತ ಸರಳವಾದ, ಸುಂದರವಾದ, ರಸವತ್ತಾದ  ಜೀವನವನ್ನು ಅನುಭವಿಸ ಬೇಕಾಗಿರುವ ಮನುಕುಲಕ್ಕೆ ವೈರಾಗ್ಯವೆಂಬ ಹಾಗೂ ಮುಕ್ತಿಗೆ ವೈರಾಗ್ಯ ಅನಿವಾರ್ಯವೆಂಬ ಅರ್ಥಹೀನ ಭ್ರಮೆಯನ್ನು ಹುಟ್ಟಿಸಲಾಗುತ್ತಿದೆ. ಕೆಲವು ನೀತಿಗಳು ವೈರಾಗ್ಯದ ಹಾದಿಯನ್ನು ನೇರವಾಗಿಯೇ ಹೇಳಿದರೆ ಮತ್ತೆ ಕೆಲವು ಸುತ್ತು ಬಳಸಿ ಹೇಳುತ್ತಿವೆ. ಈ ದೇಹವೇ ನಿನ್ನದಲ್ಲ ಎಂಬುದೂ ಸಹಾ ಅರ್ಥ ಹೀನ ವೈರಾಗ್ಯದ ಪ್ರಥಮ ಹೆಜ್ಜೆಯೇ ಆಗಿದೆ. ಈ ರೀತಿ ಸಾರುವ ಪಂಥದ ಕಲ್ಪಿತ ವಿಚಾರಗಳಿಗೆ ಅವರದೇ ಆದ ತರ್ಕದ ಬುನಾದಿ ಸಹಾ ಹಾಕಲಾಗಿದೆ. ಇಂತಹ ಧಾರ್ಮಿಕ ನೀತಿಗಳು ಮಾನವ ಕುಲದ ಬೌದ್ದಿಕ ಉನ್ನತಿಗೆ ಅಡ್ಡಗಾಲು ಹಾಕುತ್ತಿವೆ ತನ್ಮೂಲಕ ಮಾನವನ ಮನಸ್ಸು ಸಂಕುಚಿತವಾಗುತ್ತಾ ಸಾಗಿದೆ. ಕುವೆಂಪು ರವರಾಗಲೀ ಅನಂತ ಮೂರ್ತಿಯವರಾಗಲೀ ಅಥವಾ ವೈಚಾರಿಕ ಚಿಂತನೆಯ ಹರಿವಿನ ಸಾಹಿತಿಗಳು, ಬುದ್ದಿಜೀವಿಗಳು ತಮ್ಮ ವೈಚಾರಿಕ ನಿಲುವನ್ನು ಪ್ರಕಟಿಸುವ ಮೂಲಕ ಮನುಕುಲದ ಬೌಧ್ದಿಕ ಉನ್ನತಿಗೆ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ..

ಬೌದ್ದಿಕ ಉನ್ನತಿಗೆ ಅಡ್ಡಿಯಾಗಿರುವ ಇಂತಹ ಧಾರ್ಮಿಕ ನೀತಿ ನಿಯಮಗಳು ಋಣಾತ್ಮಕವಾದ ಶಕ್ತಿಯನ್ನು ತುಂಬತೊಡಗಿದರೆ, ಮನುಕುಲದ ನಾಷವನ್ನೇ ಸಾರುವ ಉಗ್ರ ಪಂಥವಾದಗಳು ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಾ ಸಮಾಜಕ್ಕೆ ಮಾರಕವಾಗಿದೆ. ಇಂದು ಧಾರ್ಮಿಕ ಉಗ್ರವಾದ ಜಗತ್ತಿಗೆ ಮಾರಕವಾಗಿರುವ ಸಂಗತಿಯಾಗಿದೆ. ತಮ್ಮ ಧರ್ಮದ ನೀತಿಯನ್ನು ಇಲ್ಲಿ ಅನುಯಾಯಿಗಳ ಮೇಲೆ ಹೇರಲಾಗುತ್ತದೆ. ಇತರ ಧರ್ಮದವರನ್ನು ಕೊಂದರೂ ಇಲ್ಲಿ ಸ್ವರ್ಘ ಪ್ರಾಪ್ತಿಯಂತೆ. ಧರ್ಮ ವಿರೋಧಿಗಳ ಕೊಂದು ಅಥವಾ ಈ ಯತ್ನದಲ್ಲಿ ವೀರ ಮರಣ (!!??) ಹೊಂದಿದಲ್ಲಿ ಅಪ್ಸರೆಗಿಂತಲೂ ಸುಂದರ ಕನ್ಯೆಯರು ಸ್ವರ್ಘದಲ್ಲಿ ಜೊತೆಗೋಡುವರೆಂಬ ಹಿಂಸೆಗೆ ಪ್ರೇರೆಪಿಸುವ ಸಿದ್ದಾಂತ!! ಇಂತಹ ನೀತಿಯನ್ನು ಖಂಡಿಸುವುದೂ ಸಹಾ ಮನುಕುಲಕ್ಕೆ ಮಾಡುವ ಉಪಕಾರವೇ ಅಲ್ಲವೇ ? ಆದರೆ ಈಗ ಆಗುತ್ತಿರುವುದಾದರೂ ಏನು ? ಒಂದು ಧರ್ಮದ ನ್ಯೂನತೆಗಳನ್ನು ಎತ್ತಿ ತೋರಿಸಿ, ಅಂಧ ಆಚರಣೆ ಸಂಪ್ರದಾಯಗಳನ್ನು ವಿರೋಧಿಸಿದರೆ ಬುದ್ದಿಜೀವಿಗಳು, ವೈಚಾರಿಕ ಸಾಹಿತ್ಯ ಎಂಬ ಹಣೆ ಪಟ್ಟಿ ದೊರೆತರೆ ಅದೇ ಮತ್ತೊಂದು ಧರ್ಮದ ಉಗ್ರ, ಹಿಂಸಾ ನೀತಿಯನ್ನು ವಿರೋಧಿಸುವ ಧೈರ್ಯವನ್ನು ತೋರುವವರಿಗೆ ದೊರೆಯುವ ಹಣೆ ಪಟ್ಟಿ ಬಲಪಂಥೀಯ ಲೇಖಕ ಅಥವಾ ಕೋಮುವಾದ ಪ್ರಚೋದನಾ ಸಾಹಿತ್ಯ ಎಂಬುದು ಎಷ್ಟರ ಮಟ್ಟಿಗೆ ಸರಿ ? ವೈಚಾರಿಕ ನಿಲುವಿಗೆ ಧರ್ಮ ಅಥವಾ ಜಾತಿಯ ಆಧಾರವಿಹುದೇ ? ನಿಜವಾಗಿಯೂ ಯೋಚಿಸತಕ್ಕ ವಿಚಾರವೇ ಅಲ್ಲವೇ ಇದು.

ಒಬ್ಬ ಲೇಖಕ, ಚಿಂತಕ ಅಥವಾ ಯಾವುದೇ ಸಾಮಾನ್ಯ ವ್ಯಕ್ತಿಯೇ ಆಗಲೀ ತನ್ನದೇ ಜಾತಿಯ ಅಥವಾ ತನ್ನದೇ ಧರ್ಮದ ನೀತಿ ನಿರೂಪಣೆಗಳನ್ನು ಖಂಡಿಸಿ ಅದರ ವಿಮುಖವಾಗಿ ನಡೆದಾದ ಸಹಜವಾಗಿಯೇ ಆತನ ಚಿಂತನೆಗಳು ಹೆಚ್ಚು ಪ್ರಚಲಿತವಾಗುತ್ತವೆ. ಆದರೆ ಯಾವುದೇ ಪ್ರಕಾರದ ವೈಚಾರಿಕ ಸಾಹಿತ್ಯ ಎಲ್ಲಾ ಧರ್ಮಗಳಿಗೂ ಅತೀತವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮನುಕುಲದ ಉನ್ನತಿಗೆ, ಮಾನವ ಪ್ರೀತಿಗೆ ಧರ್ಮನಿಷ್ಟೆಯ ಬಣ್ಣ ಬಳಿಯಬಾರದು. ಮೌಡ್ಯ, ಕಂದಾಚಾರಗಳಿರಬಹುದು, ಜಿಹಾದ್ ಉಗ್ರವಾದಗಳಿರಬಹುದು ಇಂತಹ ನೀತಿಗಳೆಲ್ಲವೂ ಸಮಾಜಕ್ಕೆ ಅಂಟಿರುವ ಕೊಳಕುಗಳಾಗಿವೆ. ಆರೋಗ್ಯಕರವಾದ, ಚಿಂತನೆಗೆ ಪ್ರರೇಪಿಸುವ ಸಾಹಿತ್ಯ ಬಂದಲ್ಲಿ  ಅದನ್ನು ಇನ್ನೊಂದು ದೃಷ್ಟಿಯಿಂದ ಎಂದಿಗೂ ನೋಡಬಾರದು. ಇಷ್ಟಕ್ಕೂ ಒಬ್ಬ ಲೇಖಕ ರಚಿಸುವ ಸಾಹಿತ್ಯವು ಅವರ ವ್ಯಕ್ತಿತ್ವ, ಅನುಭವಗಳು, ಯೋಚನಾ ಲಹರಿಗಳು, ನಿಲುವುಗಳು ಇವುಗಳ ಆಧಾರದ ಮೇಲೆ ಒಂದು ಕಥಾವಸ್ತುವಿನ ಸುತ್ತಾ ಹೆಣೆಯಲ್ಪಟ್ಟಿರುತ್ತವೆ. ನಮ್ಮದೇ ತರ್ಕವನ್ನು ಬುದ್ದಿಯನ್ನು ಅನುಭವದ ಸಾಣೆಗೆ ಹಿಡಿದು ತೂಗಿ ನೋಡಿ ಸ್ವೀಕರಿಸಲರ್ಹವಾದ ಅಂಶಗಳನ್ನು ಸ್ವೀಕರಿಸಿ ಉಳಿದುವನ್ನು ತ್ಯಜಿಸಲು ಯಾವ ಅಡ್ಡಿಯೂ ಇಲ್ಲವಲ್ಲ.

ಹಲವಾರು ವೈಚಾರಿಕ ಚಿಂತನೆಗಳು ತುಂಬಿದ ಅರ್ಥಪೂರ್ಣ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟಿರುವ ಡಾ. ಯು.ಆರ್‍.ಅನಂತಮೂರ್ತಿ ಯವರು ಈ ಜಗತ್ತನ್ನು ಅಗಲಿ ತೆರಳಿದ್ದಾರೆ. ಇವರ ಸಾಹಿತ್ಯದ ವೈಚಾರಿಕ ವಸ್ತುವಿನದ್ದೇ ಒಂದು ತೂಕವಾದರೆ ಕಥೆ ಕಾದಂಬರಿಗಳ ಶೈಲಿ, ಪಾತ್ರಗಳ ತೂಕ, ಅದ್ಭುತ ವರ್ಣನೆಗಳದ್ದೇ ಮತ್ತೊಂದು ತೂಕ. ಇವರ ಅಗಲಿಕೆ ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ನಷ್ಟವೇ ಸರಿ. ದೇವಸ್ಥಾನದಲ್ಲಿ ಕೊಟ್ಟ ಪ್ರಸಾದದಂತೆ ಇವರು ತಮ್ಮ ಜೀವನವನ್ನು ಸ್ವೀಕರಿಸಿ ಆರೋಗ್ಯಕರ ವಿಮರ್ಷೆ, ಚಿಂತನೆಗಳನ್ನು ಪಸರಿಸಿ ವಿಧಿಯಲ್ಲಿ ಲೀನವಾಗಿದ್ದಾರೆ. ಆದರೆ ಅವರ ಸಾಹಿತ್ಯ ಮಾತ್ರ ಮನುಕುಲದ ಅಸ್ತಿತ್ವ ಈ ಸೃಷ್ಟಿಯಲ್ಲಿ ಇರುವವರೆಗೂ ನಿಸ್ಸಂದೇಹವಾಗಿ ಉಳಿಯುವುದು.

“ಹೀಗೊಂದು ಕನಸು”

ಕಂದಾಚಾರಗಳನ್ನು ಚಿತೆಗೆ ಹಾಕಿ,

ಹೊತ್ತುರಿಯಲಿ ಚಿತಾ ಭಸ್ಮ;

ಅನರ್ಥ ಆಚರಣೆಗಳಿಗೆ ಅಷ್ಟ ದಿಗ್ಭಂಧನ,

ಬೆಳಗಲಿ ಜ್ಞಾನದೀವಿಗೆ ಮನದ ತುಂಬ.

 

ಹಳಸು ಚಿಂತನೆಗಳನ್ನು ಹೊಸಕಿ ಹಾಕಿ,

ಹಬ್ಬಿ ಬರಲಿ ತುಂಬು ಪ್ರೀತಿ ನಿತ್ಯ ನಿರಂತರ;

ಮೇಲು-ಕೀಳೆಂಬ ಭಾವಕ್ಕೆ ಬಿಡಿ ರಾಮ ಬಾಣ,

ಮೂಳೆ-ಮಾಂಸದ ಮಾನವರು ನಾವು ಇದೆಂತಹ ಅಂತರ.

 

ಮಡಿ-ಮೈಲಿಗೆ ಮುಳ್ಳಾಗಿದೆ ಮನುಕುಲಕೆ,

ನಡೆಯಲಿ ಇನ್ನು ಅಂತ್ಯ ಸಂಸ್ಕಾರ;

ಮನ-ಮನಗಳಲ್ಲಿ ಮೊಳೆಯಲಿ ಪ್ರೀತಿ,

ಮಾನವೀಯತೆಗೆ ಹಾಕೋಣವಿನ್ನು ಜೈಕಾರ.

 

ಇಂದಿದ್ದು ನಾಳೆ ಹೋಗುವ ಬದುಕಾಗಲಿ ಸೊಗಸು,

ಮನದಲ್ಲಿ ಪ್ರೀತಿಯ ಧಾರೆಯ ನೀ ಹರಿಸು;

ಕಾಣದ ಕೈಗಳ ಹಿಡಿತದಿಂದ ಮುಕ್ತವಾಗಲಿ ಮನಸು,

ನನಸಾಗಲಿ ಮಾನವ ಪ್ರೀತಿ ಬರಿತ ಕನಸು,

 

ಮರಳಿ ಬಾರದ ಲೋಕಕ್ಕೆ ತೆರಳಿದ ಡಾ. ಯು.ಆರ್‍. ಅನಂತಮೂರ್ತಿ ಯವರಿಗೆ ಈ ಕವನ ಅರ್ಪಣೆ.

 

-ಎಸ್.ಎನ್.ಭಾಸ್ಕರ್‍.