ಗಣಪೋತ್ತಮ..

ಗಣಪೋತ್ತಮ..

ಚೌತಿಯು ಕಾಲಿಟ್ಟಾಯ್ತು ಗಣಪನು ಮನೆಗೆ ಬರುವ ಹೊತ್ತಾಯ್ತು - ಸಾಂಪ್ರದಾಯಿಕವಾಗಿ ಮಂಟಪದಲ್ಲಿ ಅಕ್ಕಿಯ ಪೀಠದ ಪೂಜಿತನಾಗಿ ಸ್ಥಾಪನೆಗೊಳ್ಳುತ್ತ. ಶಕ್ತಾನುಸಾರ ಕೆಲವರ ಮನೆಯಲ್ಲಿ ಒಂದು ದಿನ, ಮತ್ತೆ ಕೆಲವೆಡೆ ಐದು, ಇನ್ನು ಕೆಲವೆಡೆ ಒಂಭತ್ತು ದಿನಗಳವರೆಗೆ ಬಿಡಾರ ಹೂಡಿ ಭಕ್ತರ ಮನ ತಣಿಸಲು ಸಿದ್ದನಾಗುತ್ತಿರುವ ಸಂಧರ್ಭ. ಫಲಸು ಕಟ್ಟಿದ ಹಲವಾರು ಫಲಗಳ ಚಪ್ಪರದಡಿಯೊ, ಒಂಭತ್ತು ದಿನ ಮೊದಲೆ ಮೊಳಕೆ ಹಾಕಿ ಬೆಳೆಸಿಟ್ಟ ನವ ಧಾನ್ಯಗಳ ಹಸಿರಿನ ನಡುವಲ್ಲೆ ಕೂತು ಬಾಳೆಯ ಕಂಬ, ಮಾವಿನೆಲೆ ತೋರಣಗಳಿಂದಲಂಕೃತ ಮಂಟಪದಲ್ಲಿ ಬಗೆ ಬಗೆಯ ಹೂಗಳಿಂದಲಂಕೃತನಾಗಿ ಹಚ್ಚಿಟ್ಟ ದೀಪಗಳ ನಡುವೆ ವಿರಾಜಿಸುವ ಗಣಪನ ವೈಭವ ಮನೆ ಮನೆಗೂ ಭಿನ್ನವಾದರೂ ಮೂಲ ಸತ್ವ ಮಾತ್ರ ಒಂದೆ. ಮನೆಗಳಿಂದಾಚೆ ಚಪ್ಪರಗಳಡಿ ಪೂಜೆಗೊಳ್ಳುವ ಗಣಪನೂ ಭಿನ್ನನಲ್ಲ - ಅವನ ಬೃಹತ್  ಗಾತ್ರ ಮತ್ತು ಜತೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯತ್ಯಾಸವನ್ನು ಬಿಟ್ಟರೆ. ಆದರೆ ಚಪ್ಪರದಡಿಯ ಬೀದಿ ಗಣೇಶನಿಗೆ ಚತುರ್ಥಿಯ ದಿನದ ಆರಂಭವೆ ಇರಬೇಕೆಂದಿಲ್ಲ, ಹಲವಾರು ದಿನ ವಾರ ತಿಂಗಳತನಕ ನಡೆಯುವ ಆಚರಣೆಗೆ ಸಂವಾದಿಯಾಗಿ ಸುಮಾರು ದಿನಗಳ ನಂತರವೂ ಮೈದಳೆಯಬಹುದು.

ಆ ವೈಭವದ ಮೂಲಕಾರಣನಾದ ಗಣಪೋತ್ತಮನಿಗೊಂದು ನಮನ ಈ ಕವನದ ಮುಖೇನ.

ಗಣಪೋತ್ತಮ..
_____________________

ಗಣಪೋತ್ತಮ ಗಣ ಸಮೃದ್ಧ
ವಿಪ್ರೋತ್ತಮ ವಟು ರಾವಣನು ಬಿದ್ದ
ಸರ್ವೋತ್ತಮಾಯುಧ ಮೂಷಕನೂ ಜಡ
ಪರಮೋನ್ನತ ಪರಶಿವನನು ಮನೆಯೊಳಬಿಡ ||

ತಾನಾಯುಧವಾದ ತಾಯುಸಿರ
ತನ್ನದೆ ದಂತ ಮುರಿದಾ ಅಗ್ರೇಸರ
ಕೊರಳ ತರಿದವನ ಕರುಳ ಮರುಗಿಸಿ
ಕರಿಯ ಶಿರೋಭಾರ ಹೊತ್ತು ಮತ್ತೆ ಜನಿಸಿ ||

ಕರ ಪೂರ ಆಯುಧಾಹಾರ
ಸೇವನೆಗಿಹ ಸೊಂಡಿಲ ಚಾಕರ 
ಉಗ್ರಾಣದಲಿಡಲಿದೆಯಲ್ಲ ಉದರ
ಮೊರದಗಲದ ಕಿವಿ ತುಂಬಿತಲ್ಲ ಚದರ ||

ಪಿಳಿಪಿಳಿ ಕಣ್ಣು ಏಮಾರಿಸೆ
ಸಿದ್ಧಿ ಬುದ್ಧಿಯರನು ಸಂಕಲಿಸೆ
ಅಗಾಧ ಗಾತ್ರ ಮೆದುಳಿನ ಪಾತ್ರ
ಹೂಂಕಾರದೆ ಸನ್ನದ್ಧ ಹಿಡಿದೆಲ್ಲಾ ಶಸ್ತ್ರ ||

ಅಸ್ತ್ರ ವಸ್ತ್ರ ಸರ್ಪದ ಸಮವಸ್ತ್ರ
ಸೊಂಟಪಟ್ಟಿಯ ನಗೆ ಸೊಕ್ಕಿಗೆ ಕರ
ವಿಧಿಸುತ್ತಕ್ಷಯ ಕ್ಷಯ ಭಯಾನಕ ಶಾಪ
ಕೃಷ್ಣಪಕ್ಷ ಹುಣ್ಣಿಮೆ ಕಾರಣಕರ್ತನ ಪ್ರತಾಪ ||

------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------