‘ಟಾಟಾ, ಬಿರ್ಲಾಗಳು ಯಾರು? ಎಂದವ ಅವರುಗಳನ್ನು ಮೀರಿ ನಿಂತ ಕತೆ

‘ಟಾಟಾ, ಬಿರ್ಲಾಗಳು ಯಾರು? ಎಂದವ ಅವರುಗಳನ್ನು ಮೀರಿ ನಿಂತ ಕತೆ

 

‘’ನೀವುಗಳು ಯಾರೂ ಅವರನ್ನು ಏನೊಂದನ್ನೂ ಕೇಳಲು ಹೋಗಬೇಡಿರಿ. ಅವರೇನನ್ನ ಮಾಡುವರೋ ಅದನ್ನು ಗಮನವಿಟ್ಟು ನೋಡಿರಿ, ಕಲಿಯಿರಿ. ದಿನದ 24 ಘಂಟೆಗಳೂ ಕಾರ್ಖಾನೆಯಲ್ಲಿಯೇ ಇರಿ. ಅವಶ್ಯ ಬಿದ್ದರೆ ಅಲ್ಲಿಯೇ ನಿದ್ರಿಸಿದ್ರೂ ಯಾವ ಅಭ್ಯಂತರವಿಲ್ಲ. ನಿಮಗೆಷ್ಟು ಸಾಧ್ಯವೋ ಅಷ್ಟು ಜನರ ಸ್ನೇಹ ಸಂಪಾದಿಸಿಕೊಳ್ಳಿರಿ. ಒಬ್ಬ ಮನುಷ್ಯ ದೊಡ್ಡದಾಗಿ ಬೆಳೆಯಬೇಕಾದಲ್ಲಿ ಆತನಿಗೆ ವಿಶ್ವದಾದ್ಯಂತ ಎಲ್ಲೆಡೆಗಳಲ್ಲಿ ಸ್ನೇಹಿತರಿರುವುದು ಅವಶ್ಯಕ.”

 

 

ಅದು 1960 ರ ದಶಕ.

ಗುಜರಾತಿನ ಅಹಮದಾಬಾದ್ ನ ನರೋಡಾದಲ್ಲಿ ಅದಾಗಷ್ಟೇ ‘ರಿಲಯನ್ಸ್ ಟೆಕ್ಸ್ ಟೈಲ್ಸ್’ ಪ್ರಾರಂಭವಾಗಿತ್ತು. ಆ ಸಂಸ್ಟೆಯ ಸ್ಟಾಪಕ ಅಧ್ಯಕ್ಷ, ಪ್ರೇರಕ ಶಕ್ತಿಯಾದ ಧೀರೂಭಾಯಿ ಅಂಬಾನಿಯವರು ತಮ್ಮ ತಂಡದಲ್ಲಿದ್ದ ಕೆಲ ಮಂದಿಯನ್ನು ಹೆಚ್ಚಿನ ಅಧ್ಯಯನ, ಸಂಶೋಧನೆಗಾಗಿ ಜರ್ಮನಿಗೆ ಕಳಿಸುವವರಿದ್ದರು. ಅಂತಹಾ ಸಮಯದಲ್ಲಿ  ಹಾಗೆ ಜರ್ಮನಿಗೆ ತೆರಳಲು ಸಜ್ಜಾಗಿದ್ದ ಓರ್ವ ಸದಸ್ಯರು ತಾವು ದೂರ ದೇಶಕ್ಕೆ ತೆರಳುವ ಮುನ್ನ ಧೀರೂಭಯಿಯವರನ್ನು ಬೇಟಿಯಾದರು. ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ನಡೆದ ಸಂಭಷಣೆ ಹೀಗಿತ್ತು- 

ಅಂಬಾನಿ: “ನಿಮಗೆ ಟಾಟಾ, ಬಿರ್ಲಾಗಳ ಪರಿಚಯವಿದೆಯೆ?”

ಸದಸ್ಯ: “ಹೌದು... ನಾನವರನ್ನು ಇದುವರೆವಿಗೂ ನೋಡಿಲ್ಲ, ಮಾತನಾಡಿಸಿಲ್ಲ... ಆದರೆ ಅವರಾರೆನ್ನುವುದು ನನಗೆ ತಿಳಿದಿದೆ.”

ಅಂಬಾನಿ: “ಸರಿ, ಅವರು ಯಾರು?”

ಸದಸ್ಯ: “ಅವರಿಬ್ಬರೂ ಭಾರತ ದೇಶದ ಬಹು ದೊಡ್ಡ ಕೈಗಾರಿಕೋದ್ಯಮಿಗಳು.”

ಅಂಬಾನಿ: “ಸರಿ, ನೀವು ಹೆಚ್ಚಿನ ತರಬೇತಿಗಾಗಿ ಜರ್ಮನಿಗೆ ತೆರಳಬಹುದು.”

ಇಷ್ಟು ಹೇಳಿದ ಬಳಿಕದಲ್ಲಿ ಸ್ವಲ್ಪ ಸಮಯ ಮೌನವಾಗಿದ್ದ ಅಂಬಾನಿ ಮತ್ತೆ ಆ ಸದಸ್ಯರನ್ನುದ್ದೇಶಿಸಿ ಹೀಗೆಂದರು- “ಈಗ ನಾನು ಹೇಳುವ ಮಾತು ನೀವಲ್ಲಿ ಇರುವಷ್ಟೂ ದಿನಗಳು ನಿಮ್ಮ ಮನಸ್ಸಿನಲ್ಲಿರಲಿ, ಮುಂದೊಂದು ದಿನ ನಾವೂ ಸಹ ಆ ಟಾಟಾ, ಬಿರ್ಲಾರಿಗಿಂತ ದೊಡ್ಡವರಾಗಲಿದ್ದೇವೆ. ಆದರೆ ಹಾಗಾಗಬೇಕಾದರೆ ನಾವೆಲ್ಲರೂ ನಮ್ಮನ್ನು ಯಾವುದೇ ಮಿತಿಗಳಿಗೆ ಒಳಗು ಮಾಡಿಕೊಳ್ಳಬಾರದು. ಮುಕ್ತ ಮನಸ್ಸು ಹೊಂದಿರಬೇಕು, ನಿಮ್ಮ ಕಣ್ಣುಗಳನ್ನು ಸದಾ ತೆರೆದಿಡಿರಿ. ಎಲ್ಲವನ್ನೂ ನೋಡಿರಿ, ಎಲ್ಲವನ್ನೂ ಕಲಿಯಿರಿ, ಅಲ್ಲಿನ ಸಂಶೋಧಕರು, ಉದ್ಯಮಿಗಳು, ಕೆಲಸಗಾರರು ಅವರೇನೇನನ್ನು ಮಾಡುವರೋ, ಯಾವ ಯಾವ ರೀತಿಯಲ್ಲಿ ಯೋಚಿಸುತ್ತಾರೆಯೋ, ಏನೇನನ್ನು ಅಭಿವೃದ್ದಿಪಡಿಸುತ್ತಾರೆಯೋ ಎಲ್ಲವನ್ನೂ ಟಿಪ್ಪಣಿ ಮಾಡಿಕೊಳ್ಳಿರಿ.

‘’ನೀವುಗಳು ಯಾರೂ ಅವರನ್ನು ಏನೊಂದನ್ನೂ ಕೇಳಲು ಹೋಗಬೇಡಿರಿ. ಅವರೇನನ್ನ ಮಾಡುವರೋ ಅದನ್ನು ಗಮನವಿಟ್ಟು ನೋಡಿರಿ, ಕಲಿಯಿರಿ. ದಿನದ 24 ಘಂಟೆಗಳೂ ಕಾರ್ಖಾನೆಯಲ್ಲಿಯೇ ಇರಿ. ಅವಶ್ಯ ಬಿದ್ದರೆ ಅಲ್ಲಿಯೇ ನಿದ್ರಿಸಿದ್ರೂ ಯಾವ ಅಭ್ಯಂತರವಿಲ್ಲ. ನಿಮಗೆಷ್ಟು ಸಾಧ್ಯವೋ ಅಷ್ಟು ಜನರ ಸ್ನೇಹ ಸಂಪಾದಿಸಿಕೊಳ್ಳಿರಿ. ಒಬ್ಬ ಮನುಷ್ಯ ದೊಡ್ಡದಾಗಿ ಬೆಳೆಯಬೇಕಾದಲ್ಲಿ ಆತನಿಗೆ ವಿಶ್ವದಾದ್ಯಂತ ಎಲ್ಲೆಡೆಗಳಲ್ಲಿ ಸ್ನೇಹಿತರಿರುವುದು ಅವಶ್ಯಕ.”

ಇದು ಧೀರೂಭಾಯಿ ಅಂಬಾನಿಯವರ ಯಶಸ್ಸಿನ ಮಂತ್ರ....!

ಧೀರೂಭಾಯಿ ಹಿರಾಚಂದ್ ಗೋವರ್ಧನದಾಸ್ ಅಂಬಾನಿ

ಭಾರತೀಯ ಉದ್ಯಮ ರಂಗದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ್ದ ಮಹಾನ್ ಉದ್ಯಮಿ. ಇಂದು ನೂರಾರು ಕೋಟಿ ವಹಿವಾಟು ನಡೆಸುತ್ತಿರುವ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ನ ಸ್ಥಾಪಕ ಅಧ್ಯಕ್ಷರಾಗಿದ್ದವರು. ತಮ್ಮ ಸತತ ಪ್ರಯತ್ನ, ಸಂಕಲ್ಪ ಶಕ್ತಿಯಿಂದ ತಳ ಮಟ್ಟದಿಂದ ಉನ್ನತಿಯ ಶಿಖರಕ್ಕೇರಿದ ಸಾಧಕ. ಇವರ ಜೀವನಗಾಥೆ ಅಂದಿನಿಂದ ಇಂದಿನವರೆವಿಗಿನ ಎಲ್ಲಾ ಸಣ್ಣ, ಮದ್ಯಮ ಗಾತ್ರದ ಉದ್ಯಮಿಗಳಿಗೆ ಒಂದು ಸ್ಪೂರ್ತಿ ಸೆಲೆಯಾಗಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. “ನಾನು ಮುಚ್ಚುಮರೆಯಿಲದವ, ಆದರೆ ನನ್ನೆಲ್ಲಾ ಸಾಧನೆಗೆ ನನ್ನ ಜಾಣ್ಮೆಯನ್ನೇ ಹೊಣೆಯಾಗಿಸಲಾರೆ. ದೇವರ ಆಶೀರ್ವಾದವೂ ನನ್ನ ಮೇಲಿದೆ. ಇದನ್ನು ಒಬ್ಬೊಬ್ಬರು ಒಂದೊಂದು ಬಗೆಯಾಗಿ ಹೇಳಬಹುದು. ಆದರೆ ನಾನಂತೂ ಎಲ್ಲರ, ಎಲ್ಲದರ ನೆರವಿನಿಂದ ಈ ಸ್ಥಾನಕ್ಕೆ ಏರಿದ್ದೇನೆ.” ಎನ್ನುವುದಾಗಿ ಅಂಬಾನಿಯವರೇ ಒಮ್ಮೆ ಹೇಳಿಕೊಂಡಿದ್ದರು.

ಅಂಬಾನಿಯವರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ಬಡತನ, ಉದ್ಯಮ ಜಗತ್ತಿನಲಿ ಬೆಳೆದ ಬಗೆ, ತನ್ನ ಸ್ವಂತದ ಸಂಸ್ಥೆಯನ್ನು ಕಟ್ಟಲು ಅವರು ಪಟ್ಟ ಪರಿಪಾಟಲು, ಎಲ್ಲವೂ ಸಹ ಯುವಜನತೆ ಹಾಗೂ ಮುಂದಿನ ಪೀಳಿಗೆಯವರಿಗೆ ಮಾದರಿಯಾಗಿವೆ. ತನ್ನ ೨೬ ನೇ ವಯಸ್ಸಿನಲ್ಲಿ ಭಾರತದ ವಾಣಿಜ್ಯ ರಾಜಧಾನಿ ಮುಂಬೈಗೆ ಆಗಮಿಸಿದ ಧೀರೂಭಾಯಿ ತಾವು ಸಾಕಷ್ಟು ಔಪಚಾರಿಕ ಶಿಕ್ಷಣವನ್ನೂ ಪಡೆದವರಲ್ಲ. ಅಲ್ಲದೆ ಸ್ವಂತ ಉದ್ಯಮ ಸ್ಥಾಪನೆಗೆ ಸಾಕಷ್ಟು ಬಂಡವಾಳವೂ ಅವರಲ್ಲಿರಲಿಲ್ಲ. ಆದರೂ ಸಹ ಕೇವಲ ನಾಲ್ಕು ದಶಕಗಳಲ್ಲಿಯೇ ದೇಶಕ್ಕೆ ದೇಶವೇ ಅಚ್ಚರಿ ಪಡುವಂತೆ ಬೃಹತ್ ಉದ್ಯಮಪತಿಯಾಗಿ ಬೆಳೆದು ನಿಂತರು. ಅಂದು ಕೇವಲ 15000 ರೂಪಾಯಿ ಬಂಡವಾಳದೊಡನೆ ಪ್ರಾರಂಭಿಸಿದ ರಿಲಯನ್ಸ್ ಸಂಸ್ಥೆ ಇಂದು ಸಾವಿರಾರು ಕೋಟಿಗಳ ವಹಿವಾಟು ನಡೆಸುತ್ತಿದೆ. ಫಾರ್ಚೂನ್ 50 ಗುಂಪಿಗೆ ಸೇರಿದ ಭಾರತದ ಪ್ರಥಮ ಖಾಸಗಿ ಸಂಸ್ಥೆ ಎನ್ನುವ ಹಿರಿಮೆಗೆ ಭಾಜನವಾದ ರಿಲಯನ್ಸ್ ಸಮೂಹವನ್ನು ಇಷ್ಟೆತ್ತರ ಬೆಳೆಸುವುದರಲ್ಲಿ ಧೀರೂಭಾಯಿಯವರ ಪಾತ್ರ ನಿಜಕ್ಕೂ ಮಹತ್ವದ್ದಾಗಿದೆ.

***

ಸ್ನೇಹಿತರೆ, ಇದೇ ವಾರ ನಾನು ಬರೆದ ‘ಧೀರೂಭಾಯಿ ಹಿರಾಚಂದ್ ಗೋವರ್ಧನದಾಸ್ ಅಂಬಾನಿ (ಜೀವನ ಚರಿತ್ರೆ)’ ಪುಸ್ತಕವು ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ‘ವಾಸನ್ ಪಬ್ಲಿಕೇಷನ್ಸ್’ ರವರಿಂದ ಪ್ರಕಟವಾಗಿದೆ. ಭಾರತದ ಅತ್ಯಂತ ಶ್ರೀಮಂತ ಉದ್ಯಮಪತಿಯಾಗಿದ್ದು, ಬಡತನದಿಂದ ಸಿರಿತನಕ್ಕೇರಿದ ಸಾಧಕನೋರ್ವನ ಜೀವನಗಾಥೆ ತಮಗೂ ಇಷ್ಟವಾಗುತ್ತದೆ. ತಪ್ಪದೇ ಪುಸ್ತಕವನ್ನು ಕೊಂಡು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಇದು ನನ್ನ ಎರಡನೇ ಪುಸ್ತಕವಾಗಿದ್ದು ಇದಕ್ಕೂ ಮೊದಲು ಜೂನ್ ತಿಂಗಳ 16, 2014 ನೇ ದಿನಾಂಕದಂದು ನನ್ನ ಮೊದಲ ಪುಸ್ತಕ ‘ನರೇಂದ್ರ ದಾಮೋದರದಾಸ್ ಮೂಲಚಂದ್ ಮೋದಿ (ಜೀವನ ಚರಿತ್ರೆ)’ ಪುಸ್ತಕವು ಇದೇ ‘ವಾಸನ್ ಪಬ್ಲಿಕೇಷನ್ಸ್’ ಸಂಸ್ಥೆಯಿಂದ ಪ್ರಕಟಗೊಂಡಿತ್ತು.  ಬರವಣಿಗೆ ಕ್ಷೇತ್ರದಲ್ಲಿ ಅಂಬೆಗಾಲಿಕ್ಕುತ್ತಿರುವ ನಮ್ಮಂತಹಾ ಬರಹಗಾರರನ್ನು ವಿಶಾಲ ಹೃದಯಿಗಳಾದ ಕನ್ನಡಿಗರು ಕೈ ಹಿಡಿದು ನಡೆಸುವಿರೆನ್ನುವ ನಂಬಿಕೆ ನನ್ನದು.

ಅಂದಹಾಗೆ ನಾನು ಬರೆದುಕೊಟ್ಟ ಪುಸ್ತಕವನ್ನು, ಅದರಲ್ಲಿನ ಅದೆಷ್ಯೋ ತಪ್ಪುಗಳನ್ನು ತಿದ್ದಿ, ಸುಂದರವಾಗಿ ಮುದ್ರಿಸಿ ಪ್ರಕಟಿಸಿಕಿದ ‘ವಾಸನ್ ಪಬ್ಲಿಕೇಷನ್ಸ್’ ಮುಖ್ಯಸ್ಥರಿಗೂ, ಸಿಬ್ಬಂದಿವರ್ಗಕ್ಕೂ ನನ್ನ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

 

“ಪುಸ್ತಕಗಳನ್ನು ಕೊಳ್ಳಿರಿ,

ಪುಸ್ತಕಗಳನ್ನು ಓದಿರಿ,

ಪುಸ್ತಕಗಳನ್ನು ನೀಡಿರಿ.”

 

ಜೈ ಕನ್ನಡಾಂಬೆ...!

ಜೈ ಹಿಂದ್....!

Comments

ಕವಿನಾಗರಾಜರೆ, ರಾಘವೇಂದ್ರ ಅಡಿಗರನ್ನು ನಾವಡರೆಂದು( http://bit.ly/1utJHvO ) ಅವಸರದಲ್ಲಿ ಬರೆದಿರಿ :)

ಹೌದು ಗಣೇಶರೇ, ನಾನೂ ಇದನ್ನು ಆಗಲೇ ಗಮನಿಸಿದೆ. ಮತ್ತೊಮ್ಮೆ ತಿದ್ದುವುದೇನು ಎಂದು ಸುಮ್ಮನಾಗಿದ್ದೆ. ಅಡಿಗರು ತಪ್ಪು ತಿಳಿಯಲಾರರು! ನಾವಡರಿಗೂ ಪುಸತಕ ಪ್ರಕಟಿಸಲು ಬೆನ್ನು ತಟ್ಟಿದಂತಾಗಲಿ!