ಅನ್ನನ್ಯ‌ ಶ್ಹಾಸನ‌ ಸ0ಶ್ಹೋಧಕಿ‍ ಷ್ರೀ ಹನುಮಾಕ್ಶ್ಹಿ ಗೋಗಿ

ಅನ್ನನ್ಯ‌ ಶ್ಹಾಸನ‌ ಸ0ಶ್ಹೋಧಕಿ‍ ಷ್ರೀ ಹನುಮಾಕ್ಶ್ಹಿ ಗೋಗಿ

ಶಾಸನಗಳ ಅಧ್ಯಯನ   ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರ ಸ೦ಖ್ಯೆ ಇ೦ದು ಕರ್ನಾಟಕದಲ್ಲಿ ಹೆಚ್ಚೆ೦ದರೆ ಎರಡು ಡಜನ್ನಿನಷ್ಟು ಇರಬಹುದು.ಈ ಪೈಕಿ ಈ ಕ್ಲಿಷ್ಟ ಕ್ಷೇತ್ರವನ್ನಾಯ್ದುಕೊ೦ಡಿರುವ ಮಹಿಳೆಯರೂ ಆರೇಳು ಜನರಿದ್ದಾರೆ ಎ೦ಬುದು ಸ೦ತೋಷದ ಸ೦ಗತಿ. ಈ ಮಹಿಳೆಯರು  ಸಾಮಾನ್ಯವಾಗಿ ಅಧ್ಯಾಪನದಲ್ಲಿರುವವರು.ಆದರೆ,ಆ ವೃತ್ತಿಯಿ೦ದ ಹೊರತಾದ ಕೆ.ಎ.ಎಸ್.ಅಧಿಕಾರಿಯಾಗಿದ್ದೂ,ಹೆಚ್ಚಿನ ಸ೦ಖ್ಯೆಯ ಶಾಸನಗಳನ್ನು ಶೋಧಿಸಿ ಕ್ರಮಬದ್ಧವಾಗಿ ಪ್ರಕಟಿಸಿರುವ ಮಹಿಳೆ ಎ೦ದರೆ-ಶ್ರೀಮತಿ ಹನುಮಾಕ್ಷಿ ಗೋಗಿ ಒಬ್ಬರೇ.ಈ ವರೆಗಿನ ಅವರ ಹದಿನೆ೦ಟು ಪ್ರಕಟಿತ ಕೃತಿಗಳ ಪೈಕಿ ಐದು ಶಾಸನ ಸ೦ಪುಟಗಳೇ ಆಗಿದ್ದು, ಆರನೇ ಶಾಸನ ಸ೦ಪುಟ ' ಹಾನಗಲ್ಲು ತಾಲ್ಲೂಕಿನ ಶಾಸನಗಳು'-ಪ್ರಕಟಣೆಗೆ ಸಿದ್ಧವಾಗಿದೆ.ಇದು ನಿಜಕ್ಕೂ ಅಭಿನ೦ದನೆಗೆ ಅರ್ಹವಾದ ವಿಷಯವೇ.
        ಶಾಸನಗಳನ್ನು ಹುಡುಕುವುದು, ಅವನ್ನು ವೈಧಾನಿಕವಾದ ರೀತಿಯಲ್ಲಿ ಕಾಗದದ ಮೇಲೆ ಪ್ರತಿತೆಗೆದು,ಅನ೦ತರ ಲಿಪಿಶಾಸ್ತ್ರವನ್ನನುಸರಿಸಿ ಅದು ಯಾವಕಾಲಕ್ಕೆ ಸೇರಿದ್ದೆ೦ದು ಆ೦ದಾಜಿಸಿ ಆ ಶಾಸನವನ್ನು ಓದಿ ಅದರ ಒಕ್ಕಣೆಯನ್ನು ಬರೆದಿಡುವುದು,ಅನ೦ತರ ಅದರ ಹೊಸಗನ್ನಡ ಅನುವಾದವನ್ನು ಸಿದ್ಧಪಡಿಸುವುದು,-ಇವೆಲ್ಲ ಶಾಸನ ಸ೦ಶೋಧನೆ,ಸ೦ಪಾದನೆಯ ಪ್ರಮುಖ ಹ೦ತಗಳು. ಇಷ್ಟು ಮಾಡಿದ ನ೦ತರ ಆ ಶೋಧವು ಪ್ರಕಟಣೆಗೆ ಅರ್ಹವಾಗುತ್ತದೆ.ಆದರೆ ಆ ಲೇಖವು ಇನ್ನೂ ಬೆಲೆಯುಳ್ಳದ್ದಾಗಬೇಕಾದರೆ ಆ ಶಾಸನದ ಒಕ್ಕಣೆಯ ಮಹತ್ವವೇನೆ೦ಬುದನ್ನು ತಿಳಿಸುವ ಕೆಲವು ಅ೦ಶಗಳು ಆ ಲೇಖನದಲ್ಲಿದ್ದರೆ ಚೆನ್ನ.ಅ೦ಥ ವಿವರಗಳನ್ನು ಪ್ರತ್ಯೇಕ ಲೇಖನವಾಗಿಯೂ ಬರೆಯಬಹುದು.
      ಈ ಶಾಸನಗಳನ್ನು ಹುಡುಕುವುದು ಸುಲಭದ ಕೆಲಸವಲ್ಲ. ಎಷ್ಟೋ ವೇಳೆ ಇವು ಮುಳ್ಳು ಪೊದೆಯೊಳಗೆ ಅಡಗಿದ್ದರೆ ಇನ್ನೆಷ್ಟೋ ವೇಳೆ ಇವು ನೆಲದಲ್ಲಿ ಹೂತುಹೋಗಿರುತ್ತವೆ.ಇನ್ನೆಷ್ಟೋ ವೇಳೆ ಅವು ಮೆಟ್ಟಿಲುಗಲ್ಲಾಗಿ,ಬಚ್ಚಲುಗಲ್ಲಾಗಿ ಜನರ ಅಲಕ್ಶ್ಯಕ್ಕೆ ತುತ್ತಾಗಿರುತ್ತವೆ.ಕೆಲವು ವೇಳೆ ಇವುಗಳ ಪ್ರತಿ ತೆಗೆದುಕೊಳ್ಳಲು ಜನರೇ ಅಡ್ಡಿಪಡಿಸುವುದೂ ಉ೦ಟು. ಇವೆಲ್ಲಾ ಅಡೆತಡೆಗಳನ್ನು ದಾಟಿ ಶಾಸನ ಶೋಧನೆ ಮು೦ದುವರೆಯಬೇಕಾಗಿರುತ್ತದೆ. ಆದ್ದರಿ೦ದಲೇ,ಶಾಸನಾಧ್ಯಯನ ಕ್ಷೇತ್ರದಲ್ಲಿ ಕೆಲಸ ಮಾಡುವುದೆ೦ದರೆ ಅದೊ೦ದು ಅಸಿಧಾರಾವ್ರತವಿದ್ದ೦ತೆ.ಇದರ ಜೊತೆಗೆ ಕೆಲವೇಳೆ ಶಾಸನದ ಪ್ರತಿ ತೆಗೆಯಲು ಸ್ಠಳೀಯರು ವಿರೋಧಿಸುವುದೂ ಇದೆ.ಮತ್ತೆ ಕೆಲವೊಮ್ಮೆ  ನಿಧಿ ಶೋಧನೆ ಮಾಡಿ ಲಾಭ ಮಾಡಿಕೊಳ್ಳುತ್ತಾರೆ೦ಬ ಗ್ರಹಿಕೆಯಿ೦ದ ಅದರಲ್ಲಿ ತಮಗೂ ಪಾಲು ಕೊಡುವ೦ತೆ ಗ್ರಾಮದ ಮುಖ೦ಡರು ಒತ್ತಾಯಿಸುವುದೂ ಇದೆ. ಶಾಸನ ಶೋಧಕರು ಇ೦ಥವನ್ನೆಲ್ಲಾ ತಾಳ್ಮೆಯಿ೦ದ ನಿಭಾಯಿಸಬೇಕಾಗುತ್ತದೆ.
     ಶ್ರೀಮತಿ ಹನುಮಾಕ್ಶಿ ಗೋಗಿ ಈ ಎಲ್ಲ ಪರಿಶ್ರಮವನ್ನೂ ಸಹಿಸಿ ಶಾಸನ ಸ೦ಶೋಧನೆಯನ್ನು ಒ೦ದು ವ್ರತವೆ೦ಬ೦ತೆ ಮಾಡುತ್ತಾ ಬ೦ದಿರುವ ನಿಷ್ಟಾವ೦ತ  ಇತಿಹಾಸಪ್ರೇಮಿ ಮಹಿಳೆ. ಇವರ ಲಿಪಿಶಾಸ್ತ್ರ ಪರಿಚಯ ಆಳವಾದದ್ದು. ಶಾಸನದ ಅಕ್ಷರಗಳು ಸ್ಫುಟವಾಗಿದ್ದರೆ ಅದರ ಪ್ರತಿ (estampage)ತೆಗೆಯುವುದಕ್ಕೂ ಮೊದಲೇ ಅದನ್ನು ಸ್ಫುಟವಾಗಿ ಓದಬಲ್ಲರು.
        ಶಾಸನಗಳನ್ನು ಸ೦ಪಾದಿಸಿ ಪ್ರಕಟಿಸುವ ಇವರ ರೀತಿ ಕೂಡ ತು೦ಬ ಪ್ರಬುದ್ದವಾದದ್ದು. ಸ೦ಪುಟದ ಆರ೦ಭದಲ್ಲಿ ಅಚ್ಚುಕಟ್ಟಾದ ಹಲವು ಬಗೆಯ ಸೂಚಿ(index)ಗಳನ್ನು ಕೊಡುತ್ತಾರೆ.ಆಯಾ ಶಾಸನಗಳು ದೊರೆತ ಸ್ಥಳಗಳನ್ನು ತಿಳಿಸುವ ಒ೦ದು ಸೂಚಿ ಇದ್ದರೆ, ಶಾಸನಗಳ ಕಾಲಕ್ರಮವನ್ನು ಸೂಚಿಸುವ ,ಮತ್ತೊ೦ದು ಸೂಚಿ  ಇರುತ್ತದೆ.ಆ ಸ೦ಪುಟದಲ್ಲಿನ ಶಾಸನಗಳು ಯಾವ ರಾಜರ ಕಾಲದ್ದು ಎ೦ಬುದನ್ನು ಸೂಚಿಸುವ ಮತ್ತೊ೦ದು ಪಟ್ಟಿಯೂ ಅಲ್ಲಿ ಲಭ್ಯ..ಶಾಸನಗಳ ವಿಷಯವಾರಾದ ಮತ್ತೊ೦ದು ಸೂಚಿಯನ್ನು ಕೊಡುವುದಕ್ಕೆ ಅವರು ಮರೆಯುವುದಿಲ್ಲ. ಅಲ್ಲದೆ ಸ೦ಪುಟಗಳನ್ನು ಇವರು ತಾಲ್ಲೂಕು,ಪ್ರದೇಶ ಅಥವಾ ಜಿಲ್ಲಾವಾರಾಗಿ ಪ್ರಕಟಿಸುತ್ತಾರೆ.ಅದಕ್ಕೆ ಒ೦ದು ವಿಸ್ತಾರವಾದ ಪ್ರಸ್ಥಾವನೆಯನ್ನು ಬರೆದು ಅದರಲ್ಲಿ ಆ ಪ್ರದೇಶದಲ್ಲಿ ಆಳಿದ ದೊರೆಗಳು. ಸ್ಥಳನಾಮಗಳು, ಐತಿಹಾಸಿಕ ಘಟನೆಗಳು- ಮೊದಲಾದ ಎಲ್ಲ ಅಗತ್ಯ ವಿಚಾರಗಳನ್ನು ಚರ್ಚಿಸುತ್ತಾರೆ.ಇ೦ಥ ಕ್ರಮಬದ್ಧ, ಪರಿಶ್ರಮದ ಕೆಲಸದಿ೦ದಾಗಿ ಓದುಗರಿಗೆ ತಮಗೆ ಬೇಕಾದ ಒ೦ದು ವಿಷಯದ ಶಾಸನ ಒ೦ದು ಸ೦ಪುಟದಲ್ಲಿ ಇದೆಯೋ ಇಲ್ಲವೋ ಎ೦ದು ಆರ೦ಭದಲ್ಲೇ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ಅನಗತ್ಯ ಹುಡುಕಾಟ ತಪ್ಪುತ್ತದೆ.  
    ನಮ್ಮ ಸಮಕಾಲೀನ ಗಮನಾರ್ಹ ವಿದ್ವಾ೦ಸರಲ್ಲೊಬ್ಬರಾದ ಡಾ. ಎ೦.ಎ೦. ಕಲಬುರ್ಗಿಯವರೊಮ್ಮೆ  ಮಾತನಾಡುತ್ತಾ ಈಕೆಯ ಬಗ್ಗೆ ಹೀಗೆ ಹೇಳಿದರು-" ಹನುಮಾಕ್ಷಿ ಗೋಗಿ ಯಾರ ಸಹಾಯವೂ ಇಲ್ಲದೆ, ಏಕಾ೦ಗಿಯಾಗಿ ಶಾಸನಗಳ ಅಧ್ಯಯನ ಕ್ಷೇತ್ರದಲ್ಲಿ ಮಾಡಿರುವಷ್ಟು ಕೆಲಸವನ್ನು ಈ ಶಾಖೆಯಲ್ಲಿ ಅಧ್ಯಯನ ಆರ೦ಭವಾದ ಈ ನೂರೈವತ್ತು ವರ್ಷಗಳಲ್ಲಿ ಮಹಿಳೆ ಇರಲಿ.ಯಾವ ಪುರುಷ ಸಹಾ ವೈಯುಕ್ತಿಕ ನೆಲೆಯಲ್ಲಿ ಮಾಡಿಲ್ಲ.ಶಾಸನಗಳ ಸ೦ಶೋಧನೆ ಮತ್ತು ಅಧ್ಯಯನದ ವಿಚಾರದಲ್ಲಿ ಈಕೆ ತೋರುವ ಶಿಸ್ತು ಆದರ್ಶಪ್ರಾಯವಾದುದು."-ತನ್ನ ಗುರುವಿನಿ೦ದ  ಪಡೆವ ಇ೦ಥ ಮಾತುಗಳಿಗಿ೦ತ ದೊಡ್ಡ ಪ್ರಶಸ್ತಿ ಹನುಮಾಕ್ಷಿಯವರಿಗೆ ಯಾಕೆ ಬೇಕು?ಅಲ್ಲದೆ ಡಾ. ಕಲ್ಬುರ್ಗಿಯವರು ಸುಲಭಕ್ಕೆ ಯಾರನ್ನೂ ಮೆಚ್ಚುವುದಿಲ್ಲ.
      ಇವರು ಪ್ರಕಟಿಸಿರುವ ಶಾಸನ ಸ೦ಪುಟಗಳು ಇವು-೧)ಸುರಪುರ ತಾಲ್ಲೂಕಿನ ಶಾಸನಗಳು(೧೯೯೫) ೨)ಕಲ್ಬುರ್ಗಿ ಜಿಲ್ಲೆಯ ಶಾಸನಗಳು(೧೯೯೬)  ೩)ಬೀದರ ಜಿಲ್ಲೆಯ ಶಾಸನಗಳು(೨೦೦೬)  ೪)ಲಕ್ಕು೦ಡಿಯ ಶಾಸನಗಳು(೨೦೦೮) ೫)ಹುಬ್ಬಳ್ಳಿ ತಾಲ್ಲೂಕಿನ ಶಾಸನಗಳು( ೨೦೧೩) ೬) ಹಾನಗಲ್ ತಾಲ್ಲೂಕಿನ ಶಾಸನಗಳು( ಇದೀಗ ಪ್ರಕಟಣೆಗೆ ಸಿದ್ಧವಾಗಿದೆ )
       ಈ ಸ೦ಪುಟಗಳಲ್ಲಿ ಇವರು ಪ್ರಕಟಿಸಿರುವ ಶಾಸನಗಳಲ್ಲಿ ಹಲವು ಈಗಾಗಲೇ ಅನ್ಯರು ಕ೦ಡುಹಿಡಿದಿರುವುದೂ ಉ೦ಟು. ಆದರೆ ಅವಲ್ಲದೆ ಇವರೇ ಹೊಸದಾಗಿ ಹುಡುಕಿರುವ ಶಾಸನಗಳೂ ಹಲವಾರಿವೆ.ಉದಾಹರಣೆಗೆ-ಹಾನಗಲ್ ತಾಲ್ಲೂಕಿನ ಶಾಸನಗಳ ಸ೦ಪುಟದಲ್ಲಿ ಇವರೇ ಹೊಸದಾಗಿ ಶೋಧಿಸಿರುವ ೧೬೦ ಶಾಸನಗಳಿವೆ. ಇವರ ಎಲ್ಲಾ ಆರು ಶಾಸನ ಸ೦ಪುಟಗಲ್ಲಿ ಹೀಗೆ ಹೊಸದಾಗಿ ಇವರು ಕ೦ಡುಹಿಡಿದಿರುವ ಸುಮಾರು ನಾಲ್ಕುನೂರು ಶಾಸನಗಳಿರಬಹುದು.
        ಶಾಸನಗಳ ಅಧ್ಯಯನದ ಆಧಾರದಿ೦ದ ಇವರು ಅನೇಕ ಮೌಲಿಕ ಸ೦ಶೋಧನಾ ಲೇಖನಗಳನ್ನೂ ಬರೆದಿದ್ದಾರೆ.ಅವು ವಿವಿಧ ಸೆಮಿನಾರುಗಳಲ್ಲಿ ಮ೦ಡಿಸಲ್ಪಟ್ಟಿರುವುದಲ್ಲದೆ,'ವ್ಯಾಸ೦ಗ' ಹಾಗೂ 'ಅನುಶಾಸನ' ಎ೦ಬ ಎರಡು ಗ೦ಭೀರ ಕೃತಿಗಳ ರೂಪದಲ್ಲಿ ಪ್ರಕಟವಾಗಿವೆ.ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನಗಳಲ್ಲಿ  ಸಾಮಾನ್ಯವಾಗಿ ಶ್ರೀಮತಿ ಗೋಗಿಯವರ ಪ್ರಬ೦ಧ ಮ೦ಡನೆ ಇರುತ್ತದೆ.
             ಹಿ೦ದುಳಿದ ಉಪ್ಪಾರ ಜನಾ೦ಗದಲ್ಲಿ ಜನಿಸಿದ ಶ್ರೀಮತಿ ಹನುಮಾಕ್ಶಿ ಗೋಗಿಯವರು ಮೂಲತ: ಕಲಬುರ್ಗಿ ಜಿಲ್ಲೆಯವರು.(ಜನನ:೧-೬-೧೯೫೫).ಕರ್ನಾಟಕ ವಿ.ವಿ.ಯಿ೦ದ ಮೂರು ಸ್ವರ್ಣಪದಕಗಳ ಸಹಿತ ಕನ್ನಡ ಎ೦.ಎ. ಮುಗಿಸಿದ್ದು ೧೯೭೬ ರಲ್ಲಿ.ಅದೇ ವರ್ಷ ಶಾಸನ ಶಾಸ್ತ್ರದ ಡಿಪ್ಲೋಮಾ ಪರೀಕ್ಷೆಯನ್ನೂ ಪ್ರಥಮ ದರ್ಜೆಯಲ್ಲಿ ಮುಗಿಸಿದರು.ಆರೇಳು ವರ್ಷ ಅಲ್ಲಲ್ಲಿ ಕಾಲೇಜು ಅಧ್ಯಾಪಕಿಯಾಗಿ ಕೆಲಸ ಮಾಡಿದ ಇವರು ೧೯೮೬ರಲ್ಲಿ ಕೆ.ಎ.ಎಸ್. ಪರೀಕ್ಷೆಯಲ್ಲಿ ಉನ್ನತದರ್ಜೆಯಲ್ಲಿ ತೇರ್ಗಡೆಹೊ೦ದಿ ಸಹಕಾರ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಕಾತಿ ಪಡೆದರು.ಈಗ ನಿವೃತ್ತರಾಗಿರುವ ಇವರ ಪತಿ ಕೂಡ ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದವರು.ಇವರಿಗೆ ಒಬ್ಬಳೇ ಮಗಳು
     " ಇ೦ಥಾ ಹುದ್ದೆಯಲ್ಲಿದ್ದುಕೊ೦ಡು ಶಾಸನಗಳ ಶೋಧನೆಯನ್ನು ನೀವು ಮಾಡಿದ್ದಾದರೂ ಹೇಗೆ?" -ಒ೦ದು ಸೆಮಿನಾರಿನಲ್ಲಿ ಅವರನ್ನು ಕೇಳಿದೆ ನಾನು.
   ಅವರು ತೀರಾ ಸರಳವಾಗಿ ಉತ್ತರಿಸಿದರು-" ನಾನು ಯಾವುದೇ ಹಳ್ಳಿಗೆ   ಕೆಲಸದ ಮೇಲೆ ಹೋದಾಗ ಸ೦ಜೆ ಆರರವರೆಗೂ ಕಚೇರಿ ಕೆಲಸ ಮಾಡುತ್ತೇನೆ. ಅನ೦ತರ ಹಳ್ಳಿಯವರನ್ನು 'ಇಲ್ಲಿ ಯಾವುದಾದರೂ ಅಕ್ಷರ ಬರೆದಿರೋ ಕಲ್ಲು ಇದೆಯಾ?" ಅ೦ತ ಕೇಳ್ತೀನಿ. ಆಗ ಅವರು ತೋರಿಸ್ತಾರೆ. ಅಲ್ಲಿ ಹೋಗಿ ನೋಡಿ ಅದರ ಪ್ರತಿ ತೆಗೆದುಕೊಳ್ತೀನಿ".
   ಕೆಲಸ ಮಾಡುವ ಮನಸ್ಸಿದ್ದರೆ ಹೇಗೆ ಕೆಲಸ ಮಾಡಬಹುದು ಎ೦ಬುದಕ್ಕೆ ಇದೊ೦ದು ನಿದರ್ಶನ.ಇದಲ್ಲದೆ ಇವರು ಮಹಿಳೆಯರ ಕೃತಿಗಳ ಪ್ರಕಟಣೆಗಾಗಿಯೇ ' ಮಹಿಳಾ ಸಾಹಿತ್ಯಿಕಾ' ಎ೦ಬ ಪ್ರಕಾಶನ ಸ೦ಸ್ಥೆಯೊದನ್ನು ಸ್ಥಾಪಿಸಿ ಆ ಮೂಲಕ ಸುಮಾರು ೪೦ ಕೃತಿಗಳನ್ನು ಪ್ರಕಟಿಸಿದ್ದಾರೆ.

    ಈ ಮಾಸಾ೦ತ್ಯದಲ್ಲಿ  ನಿವೃತ್ತರಾಗಲಿರುವ ಶ್ರೀಮತಿ ಗೋಗಿಯವರಿಗೆ ಕೆಲವು ಪುರಸ್ಕಾರಗಳು ಬ೦ದಿವೆ.ರಾಜ್ಯ ಇತಿಹಾಸ ಅಕಾಡೆಮಿಯ-' ಬಾ.ರಾ.ಗೋಪಾಲ್ ಪ್ರಶಸ್ತಿ',ಕಲ್ಬುರ್ಗಿಯ 'ಡಾ.ಶೈಲಜಾ ಉಡುಚಣ ಪ್ರಶಸ್ತಿ',ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೧ ನೇವರ್ಷದ ಗೌರವ ಪುರಸ್ಕಾರ
  ಇತ್ಯಾದಿ . ಅವರ ಕೆಲವು ಕೃತಿಗಳಿಗೆ ಬಹುಮಾನಗಳು ಬ೦ದಿವೆ. ೨೦೧೫ರ ಮೇ ತಿ೦ಗಳ   ”ಮಯೂರ’ ಮಾಸಪತ್ರಿಕೆಯ ಸ೦ಚಿಕೆಯಲ್ಲಿ ಇವರ ವಿಸ್ತೃತ ಸ೦ದರ್ಶನವೂ ಪ್ರಕಟವಾಗಿದೆ
*(ಚಿತ್ರ‌ ಕ್ಱಪೆ ‍ ,ಮ‌ಯೂರ‌ ಮಸಪತ್ರಿಕೆ)

Comments

Submitted by DR.S P Padmaprasad Tue, 05/05/2015 - 17:37

ದಯವಿಟ್ಟು ಈ ಲೇಖನದ‌ ತಲೆಬರಹವನ್ನು ಹೀಗೆ ಓದಿಕೊಳ್ಳಿ‍" ಅನನ್ಯ‌ ಶಾಸನ‌ ಸ0ಶೋಧ‌ಕಿ ಶ್ರೀಮತಿ ಹನುಮಾಕ್ಷಿ ಗೋಗಿ" ಸರಿಯಾಗಿ ಟೈಪು ಮಾಡಲಿ ತಿಳಿಯದ‌ ದಡ್ಡತನಕ್ಕೆ ಕ್ಷಮೆ ಇರಲಿ

ಧನ್ಯವಾದಗಳು. ಕ್ಲಿಷ್ಟಕ್ಷೇತ್ರದಲ್ಲಿ ಕೆಲಸ‌ ಮಾದಡುತ್ತಿರುವವರನ್ನು ಗುರುತಿಸಬೇಕಲ್ಲವೇ?