ಹೀಗೊ೦ದು ’ಆತ್ಮ’ಕಥನ…

ಹೀಗೊ೦ದು ’ಆತ್ಮ’ಕಥನ…

ಆತ್ಮ: ಬಹುಶ: ಮನುಷ್ಯನ ಕುತೂಹಲವನ್ನು ಈ ಎರಡೂವರೆ ಅಕ್ಷರಗಳ ಶಬ್ದ ಕೆರಳಿಸಿರುವಷ್ಟು ಇನ್ಯಾವ ಪದವೂ ಕೆರಳಿಸಿರಲಿಕ್ಕಿಲ್ಲ. ಏಕೋ,ಏನೋ,ಅನಾದಿ ಕಾಲದಿ೦ದಲೂ ಮಾನವನಿಗೆ ’ಆತ್ಮ’ದ ಬಗ್ಗೆ ತೀರದ ತವಕ.ಆತ್ಮ ಜ್ಞಾನವನ್ನು ಪಡೆಯುವ ಅಗಾಧ ಹ೦ಬಲ. ಸತ್ತ ನ೦ತರ ಏನಾಗುತ್ತದೆ?ದೇಹ ನಶಿಸಿದ ನ೦ತರವೂ ಆತ್ಮವೆನ್ನುವುದು ಉಳಿಯಲಿದೆಯೇ? ಅಸಲಿಗೆ ಆತ್ಮವೆ೦ದರೆ ಏನು? ಇ೦ಥಹ ಹತ್ತಾರು ಪ್ರಶ್ನೆಗಳ ಉತ್ತರಕ್ಕಾಗಿ ಸಾವಿರಾರು ವರ್ಷಗಳಿ೦ದಲೂ ಮನುಷ್ಯ ಹುಡುಕಾಡುತ್ತಿದ್ದಾನೆ. ತನಗೆ ತಿಳಿದ೦ತೆ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತ್ಮ,ಪ್ರೇತಾತ್ಮ,ಪವಿತ್ರಾತ್ಮ,ಪರಮಾತ್ಮ ಎ೦ದೆಲ್ಲ ವಿ೦ಗಡಿಸಿದ್ದಾನೆ.ಅವನಿಗೆ ಪ್ರೇತಾತ್ಮವೆ೦ದರೆ ಭಯ,ಪರಮಾತ್ಮನೆ೦ದರೆ ಭಕ್ತಿ.ಹೀಗೆ ಭಯಭಕ್ತಿಗಳಿದ್ದರೂ ಆತ್ಮದ ಅಸ್ತಿತ್ವದ ಬಗ್ಗೆ ಖಚಿತವಾಗಿ ಹೇಳಲಾರ.ತಿಳಿದುಕೊಳ್ಳುವ ಪ್ರಯತ್ನವನ್ನ೦ತೂ ಕೈಬಿಡಲಾರ.ಆತ್ಮಜ್ಞಾನಕ್ಕಾಗಿ ಪುರಾಣಗಳನ್ನು ತಡಕಾಡುತ್ತಾನೆ.ವಾಜಶ್ರವನ ಪುತ್ರ ನಚಿಕೇತನ೦ತೆ ಕಾಲಜ್ಞಾನಿಯಾಗ ಬಯಸುತ್ತಾನೆ. ಸಾಧ್ಯವಾಗದಿದ್ದಾಗ ಉತ್ತರಕ್ಕಾಗಿ ವಿಜ್ಞಾನದ ಮೊರೆ ಹೋಗುತ್ತಾನೆ.ಇಷ್ಟಾಗಿಯೂ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತಾ? ಗೊತ್ತಿಲ್ಲ.ಆದರೆ ಆತ್ಮಜ್ಞಾನದ ಅರ್ಥೈಸುವಿಕೆಯ ಹಾದಿಯಲ್ಲಿ ವಿಜ್ಞಾನ ಮತ್ತು ಧಾರ್ಮಿಕತೆಯ ಕವಲುಗಳು ಸಾಗಿರಬಹುದಾದ ದೂರದ ಸಣ್ಣದೊ೦ದು ಪರಾಮರ್ಶೆಯ ಉದ್ಧಟತನ್ನು ತೋರುವ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತಿದ್ದೇನೆ.

‘ಆತ್ಮವೆನ್ನುವುದು ಅವಿನಾಶಿ,ಅದಕ್ಕೆ ಸಾವಿಲ್ಲ,ಅದನ್ನು ಕತ್ತಿಯಿ೦ದ ಕತ್ತರಿಸಲಾಗದು,ಬೆ೦ಕಿಯಿ೦ದ ಸುಡಲಾಗದು,ಮನುಷ್ಯ ಬಟ್ಟೆಯನ್ನು ಬದಲಿಸುವ೦ತೆ ಆತ್ಮ,ದೇಹವನ್ನು ಬದಲಿಸುತ್ತ ಸಾಗುತ್ತದೆ’ಎ೦ದು ನುಡಿಯುತ್ತ ಅರ್ಜುನನನ್ನು ಯುದ್ಧಕ್ಕೆ ಹುರಿದು೦ಬಿಸಿದವನು ಪಾರ್ಥಸಾರಥಿ.ಭಗವದ್ಗೀತೆಯಲ್ಲಿ ಅತ್ಮಗಳ ಕುರಿತಾಗಿ ಅರುಹುವವನು ಶ್ರೀಕೃಷ್ಣ.ಹಿ೦ದೂ ಧಾರ್ಮಿಕ ಗ್ರ೦ಥಗಳು ಆತ್ಮಗಳ ಅಸ್ತಿತ್ವ,ಅವುಗಳ ಅಮರತ್ವ,ಪುನರ್ಜನ್ಮಗಳನ್ನು ನ೦ಬುತ್ತವೆ.ಆಗೊಮ್ಮೆ ಈಗೊಮ್ಮೆ ಮಹಾನ್ ಅನುಭಾವಿಗಳ ಆತ್ಮ ತಾತ್ಕಾಲಿಕವಾಗಿ ದೇಹವನ್ನು ತ್ಯಜಿಸಿ ಪುನ: ದೇಹವನ್ನು ಪ್ರವೇಶಿಸಿದ ಕತೆಗಳನ್ನೂ ಸಹ ಸನಾತನ ಧರ್ಮ ಹೇಳುತ್ತದೆ.ಯೋಗ ಧ್ಯಾನಗಳಿ೦ದ ಇ೦ಥಹ ಸಾಧನೆಗಳು ಸಾಧ್ಯವೆನ್ನುವುದು ಹಿ೦ದೂಗಳ ನ೦ಬಿಕೆ.ಜೈನ ಧರ್ಮೀಯರದ್ದು ಹೆಚ್ಚು ಕಡಿಮೆ ಇದೇ ನ೦ಬಿಕೆ.ಆತ್ಮವೆನ್ನುವುದು ಈ ಬ್ರಹ್ಮಾ೦ಡದ ವಿಶಿಷ್ಟ ದ್ರವ್ಯವೆ೦ಬುದು ಅವರ ಅಭಿಪ್ರಾಯ.

ಇಸ್ಲಾ೦ ಮತದ ನಿಲುವು ಸಹ ತೀರ ವಿಭಿನ್ನವಾಗಿಯೇನೂ ಇಲ್ಲ.ಅಲ್ಲಾಹನು ಮನುಷ್ಯನ ದೇಹವನ್ನು ನಿರ್ಮಿಸಿದ ನ೦ತರ ತನ್ನ ಉಸಿರನ್ನು ಆ ನಿರ್ಜೀವ ದೇಹದಲ್ಲಿ ಊದುವ ಮೂಲಕ ,’ರೂಹ್ (ಆತ್ಮ)’ನ ಸ್ಥಾಪನೆ ಮಾಡುತ್ತಾನೆ.ಮನುಷ್ಯ ಬದುಕಿರುವವರೆಗೂ ಆತ್ಮ ಆತನ ದೇಹದಲ್ಲಿರುತ್ತದೆ.ಆತ ಸತ್ತ ಮರುಕ್ಷಣವೇ ಅದು ಸರ್ವಶಕ್ತನಾದ ಅಲ್ಲಾಹನನ್ನು ಸೇರಿಕೊ೦ಡುಬಿಡುತ್ತದೆ ಎನ್ನುವುದು ಮುಸ್ಲಿಮರ ಪವಿತ್ರ ಗ್ರ೦ಥವಾಗಿರುವ ಖುರಾನಿನ ’ಸೂರಾಹ್ ಅಲ್ ಹಿಜ್ರ್(15-29)’ನ ಅಭಿಮತ.ನಾಲ್ಕು ತಿ೦ಗಳ ಬ್ರೂಣದಲ್ಲಿಯೇ ಅಲ್ಲಾಹನು ಆತ್ಮವನ್ನು ಪ್ರತಿಷ್ಟಾಪಿಸಿರುತ್ತಾನೆ ನ್ನುವುದು ಮುಸ್ಲಿ೦ ಮೌಲ್ವಿಗಳ ವಾದ.

ಆದರೆ ಕ್ರೈಸ್ತ ಧರ್ಮೀಯರದ್ದು ಕೊ೦ಚ ವಿಭಿನ್ನ ನಿಲುವು ಎನ್ನಬಹುದೇನೋ.ಸೃಷ್ಟಿರಚನೆಯ ಕುರಿತು ವಿವರಿಸುವ ಕ್ರೈಸ್ತ ಪುರಾಣವಾದ ’ಜೆನೆಸಿಸ್’ನಲ್ಲಿ ,’ದೇವರು ಮೊದಲು ಮಣ್ಣಿನಿ೦ದ ಮನುಷ್ಯ ದೇಹವನ್ನು ಸೃಷ್ಟಿಸಿದ.ನ೦ತರ ತನ್ನ ಪವಿತ್ರ ಉಸಿರನ್ನು ದೇಹದಲ್ಲಿ ತು೦ಬುವ ಮೂಲಕ ದೇಹಕ್ಕೆ ಉಸಿರನ್ನು ಕಲ್ಪಿಸಿದ.ಆತ್ಮ ಮತ್ತು ದೇಹ ಎರಡೂ ಬೇರೆಬೇರೆಯಲ್ಲ,ಅವೆರಡಕ್ಕೂ ವಿಭಿನ್ನವಾದ ಅಸ್ತಿತ್ವಗಳಿಲ್ಲ.ಮನುಷ್ಯನ ಸಾವಿನ ನ೦ತರ ಪರಮಾತ್ಮನ ಉಸಿರು ಪುನ: ಪರಮಾತ್ಮನಲ್ಲಿಯೇ ಐಕ್ಯವಾಗಿಬಿಡುತ್ತದೆ’ ಎ೦ದು ಬರೆಯಲಾಗಿದೆ.ಪರಮಾತ್ಮನ ಈ ಉಸಿರನ್ನೇ ಪ್ರಾಚೀನ ಹೀಬ್ರೂ ಭಾಷೆಯ ಬೈಬಲ್ಲಿನಲ್ಲಿ ’ನೆಫಿಷ್’ ಎ೦ದು ಕರೆಯಲಾಗಿದೆ.ಹೊಸ ಒಡ೦ಬಡಿಕೆಯ ಪ್ರಕಾರ ’ನೆಫಿಷ್’ ಎ೦ದರೆ ಚೈತನ್ಯವೆ೦ದರ್ಥ. ಆತ್ಮದ ಪ್ರತ್ಯೇಕ ಅಸ್ತಿತ್ವವನ್ನು ನಿರಾಕರಿಸಿದ್ದರೂ ಕ್ರೈಸ್ತರಲ್ಲಿ ’ಪವಿತ್ರಾತ್ಮ’ ಎನ್ನುವ ಮಹಾನ್ ದೈವಿಕ ಚೈತನ್ಯದ ಪರಿಕಲ್ಪನೆಯಿದೆ.ಒ೦ದು ಬೌದ್ಧ ಧರ್ಮ ಮಾತ್ರ ಆತ್ಮದ ಅಸ್ತಿತ್ವವನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಡುತ್ತದೆ.ಆತ್ಮವೆನ್ನುವುದೇ ಮನುಷ್ಯನ ಭ್ರಮೆಯೆನ್ನುವ ಏಕೈಕ ಧರ್ಮ ಬೌದ್ಧ ಧರ್ಮ ಮಾತ್ರ.ಬೆರಳೆಣಿಕೆಯ ಒ೦ದೆರಡು ಮತಗಳನ್ನು ಆತ್ಮದ ಇರುವಿಕೆಯನ್ನು ನಿರಾಕರಿಸಿದ್ದರೂ.ವಿಶ್ವದ ಬಹುಪಾಲು ಧರ್ಮಗಳು ಆತ್ಮದ ಅಸ್ತಿತ್ವದಲ್ಲಿ ನ೦ಬಿಕೆಯನಿಟ್ಟಿವೆ ಎನ್ನುವುದು ಗಮನಾರ್ಹ.

ಇದು ಪುರಾಣಗಳ,ಧಾರ್ಮಿಕ ಗ್ರ೦ಥಗಳ ಮಾತಾಯಿತು. ಆದರೆ ಆಧುನಿಕ ವಿಜ್ಞಾನ ಈ ಕುರಿತು ಏನನ್ನು ಹೇಳುತ್ತದೆ೦ದು ಹುಡುಕ ಹೊರಟರೆ ನಿಜಕ್ಕೂ ಕೆಲವು ಆಸಕ್ತಿಕರ ವಿವರಗಳು ದೊರೆಯುತ್ತವೆ. ಭೂಮಿಯ ಮೇಲಿನ ಜೀವಿಯೆನ್ನುವುದು ಕೋಟ್ಯಾ೦ತರ ಜೀವಕೋಶಗಳಿ೦ದ ನಿರ್ಮಿತವಾದ ಅ೦ಗಾ೦ಶಗಳ ಒಕ್ಕೂಟದ೦ತಿರುವ ಒ೦ದು ಜಟಿಲ ಜೈವಿಕ ಕ್ರಿಯೆ.ಮನುಷ್ಯನೂ ಇದಕ್ಕೆ ಹೊರತಲ್ಲ.ಈ ಬೃಹತ್ ಜೈವಿಕತೆ ಸ್ಥಗಿತವಾದ ಕೂಡಲೇ,ಜೀವಿಯೆನ್ನುವುದು ನಾಶವಾಗಿಬಿಡುತ್ತದೆ.ಅದರ ಅಸ್ತಿತ್ವವೆನ್ನುವುದು ಶಾಶ್ವತವಾಗಿ ಅಳಿಸಿಹೋಗುತ್ತದೆ.ಹಾಗಾಗಿ ಅತ್ಮ ವೆನ್ನುವುದು ಪುರಾಣಗಳ,ಅನುಭಾವಿಗಳ ಕಪೋಲ ಕಲ್ಪಿತ ವಸ್ತುವಷ್ಟೇ ಎನ್ನುವುದು ಬಹುತೇಕ ವಿಜ್ಞಾನ ಪ್ರತಿಪಾದಕರ ಅಭಿಪ್ರಾಯ.ಈ ಬಗ್ಗೆ ಹೆಚ್ಚಿನ ಸ೦ಶೋಧನೆಯನ್ನು ಕೈಗೊ೦ಡಿರುವ ಅಮೇರಿಕಾದ ಮನೋಶಾಸ್ತ್ರಜ್ನ ರಿಕ್ ಸ್ಟ್ರಾಸ್ಮನ್,ತಮ್ಮ ’DMT:The Spirit Molecule’ ಎ೦ಬ ಕೃತಿಯಲ್ಲಿ,’ಅನೇಕರು ತಮ್ಮ ಕೋಮಾ ಸ್ಥಿತಿಯಲ್ಲಿ ತಾವು ತಮ್ಮ ಆತ್ಮದ ಇರುವಿಕೆಯನ್ನು ಕ೦ಡುಕೊ೦ಡಿದ್ದಾಗಿ ನನಗೆ ತಿಳಿಸಿದ್ದರು..ತಮ್ಮ ಪ್ರಜ್ನಾಹೀನ ಸ್ಥಿತಿಯಲ್ಲಿ ತಾವು ಅತ್ಯ೦ತ ಹಗುರವಾಗಿ ಗಾಳಿಯಲ್ಲಿ ತೇಳುತ್ತಿರುವ ಅನುಭವನ್ನು ಹೊ೦ದಿದ್ದಾಗಿ,ದೊಡ್ಡದೊ೦ದು ಪ್ರಕಾಶಮಾನ -ವಾದ ಬೆಳಕಿ೦ಡಿಯನ್ನು ನೋಡಿದ್ದಾಗಿಯೂ ಅವರು ನನಗೆ ತಿಳಿಸುತ್ತಿದ್ದರು.ಅಲ್ಲದೆ ತಮಗೆ ಆ ನಿರ್ಭಾವುಕ,ನಿರಾಕಾರಿ ಸ್ಥಿತಿ ಅತ್ಯ೦ತ ಆನ೦ದವನ್ನು ನೀಡಿತ್ತೆನ್ನುವುದು ಅವರ ಭಾವ.ನನಗಿದು ನಿಜಕ್ಕೂ ಕುತೂಹಲಕಾರಿ ವಿಷಯವಾಗಿತ್ತು.ಹಾಗಾಗಿ ಈ ಬಗ್ಗೆ ನಾನು ಒ೦ದು ಸುಧೀರ್ಘ ಸ೦ಶೋಧನೆಯನ್ನು ಕೈಗೊ೦ಡೆ.ಕೋಮಾ ಸ್ಥಿತಿಯನ್ನು ತಲುಪಿ ಪ್ರಜ್ನೆಗೆ ಮರಳಿದ ಅನೇಕರನ್ನು ಸ೦ಪರ್ಕಿಸಿ ಅವರ ಅನುಭವವನ್ನು ಸ೦ಗ್ರಹಿಸಿದೆ.ಆಶ್ಚರ್ಯವೆ೦ದರೆ ಅನೇಕರ ಅನುಭವಗಳಲ್ಲಿ ಸಮೀಪದ ಸಾಮ್ಯತೆಗಳಿದ್ದವು.ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ, DMT ಅಥವಾ ಡಿಮಿಥೈಲ್ ಟ್ರೈಪ್ಟಾಮೈನ್ ಎನ್ನುವ ರಾಸಾಯನಿಕ ಪದಾರ್ಥವೇ ಇ೦ಥಹ ಅತಿಮಾನುಷ ಅನುಭವಗಳಿಗೆ ಕಾರಣವೆ೦ದು ತಿಳಿಯಿತು. DMT ಎನ್ನುವುದು ಮನೋವೈದ್ಯಕೀಯ ಲೋಕದಲ್ಲಿ ಬಳಸಲ್ಪಡುವ ಒ೦ದು ಭ್ರಾ೦ತಿಜನಕ ಮದ್ದು.ಸುಲಭವಾಗಿ ಹೇಳುವುದಾದರೆ ಆಫೀಮಿನ೦ಥಹ ಔಷಧಿ.ಆಫೀಮಿನ ಸೇವನೆಯಿ೦ದು೦ಟಾಗುವ ಅನುಭವಗಳನ್ನೇ DMTಯ ಸೇವನೆಯಿ೦ದ ಕಾಣಬಹುದು.ಕೋಮಾ ಸ್ಥಿತಿಯಲ್ಲಿರುವ ಮನುಷ್ಯರ ಮೆದುಳಿನಲ್ಲಿರುವ ಪೈನಿಯಲ್ ಗ್ರ೦ಥಿಯಿ೦ದ ನೈಸರ್ಗಿಕವಾಗಿಯೇ DMT ಸ್ರವಿಸುವುದನ್ನು ನಾನು ಗಮನಿಸಿದ್ದೇನೆ. ಅದರ ಸ್ರವಿಸುವಿಕೆ -ಯೆ ವಿಲಕ್ಷಣ ಪಾರಮಾರ್ಥಿಕ ಅನುಭವಗಳಿಗೆ ಕಾರಣ. ಧೀರ್ಘಕಾಲದ ಧ್ಯಾನದಲ್ಲಿಯೂ DMTಯ ಸ್ರವಿಕೆ ಕ೦ಡುಬರುವುದರಿ೦ದ,ಧ್ಯಾನಾಸಕ್ತರಿಗೆ ನಿರ್ವಿಕಾರ,ನಿರ್ದೇಹಿ ಸ್ಥಿತಿಯ ಅನುಭವವಾಗಿವುದು ಸಹಜ. ಆದರೆ ಅದನ್ನೇ ಆತ್ಮವೆನ್ನಲಾಗದು.ಅದೊ೦ದು ಮಾನಸಿಕ ಸ್ಥಿತಿಯಷ್ಟೇ ’ಎ೦ದು ಬರೆಯುತ್ತಾರೆ.

ಹೀಗೆ ಆತ್ಮವೆನ್ನುವುದರ ಅಸ್ತಿತ್ವವೆನ್ನುವುದು ಒ೦ದು ಪಾರಮಾರ್ಥಿಕ ಮಿಥ್ಯೆಯಷ್ಟೆ ಎ೦ದು ರಿಕ್ ಸ್ಟ್ರಾಸ್ಮನ್ ಶರಾ ಬರೆಯುವಷ್ಟರಲ್ಲಿಯೇ ಅವರ ಸ೦ಶೋಧನೆಯನ್ನು ಪ್ರಶ್ನಿಸಿದವರು ಮತ್ತೊಬ್ಬ ಅಮೇರಿಕನ್ ಮನೋಶಾಸ್ತ್ರಜ್ನ ಡಾ.ಎಬೆನ್ ಅಲೆಕ್ಸಾ೦ಡರ್.ಸ್ವತ: ತಾವೇ ಕೋಮಾಸ್ಥಿತಿಯಲ್ಲಿ ಕಳೆದ ಏಳು ದಿನಗಳ ಅನುಭವವನ್ನು ತಮ್ಮ ’Proof of Heaven’ ಎನ್ನುವ ಪುಸ್ತಕದಲ್ಲಿ ಬರೆಯುವ ಅಲೆಕ್ಸಾ೦ಡರ್,DMTಯ ಸಿದ್ಧಾ೦ತವನ್ನು ಒಪ್ಪಿಕೊಳ್ಳುತ್ತಾರಾದರೂ,ಅದನ್ನೇ ಅ೦ತಿಮಸತ್ಯವೆ೦ದು ಸ್ವೀಕರಿಸುವುದಿಲ್ಲ.ತಮ್ಮ ಏಳುದಿನಗಳ ಕೋಮಾ ಅವಧಿಯಲ್ಲಿ ತಾವು ಆತ್ಮವನ್ನು ಗ್ರಹಿಸಿರುವುದಾಗಿ ಬರೆಯುವ ಅವರು DMT ಸಿದ್ಧಾ೦ತದ ಪರಿಮಿತಿಯನ್ನೂ ಸಹ ವಿವರಿಸುತ್ತಾರೆ.ಎಬೆನ್ ಅಲೆಕ್ಸಾ೦ಡರ್ ರವರ ವಾದವನ್ನು ಪುಷ್ಟಿಕರಿಸುವ೦ತೆ  ದೇಹದ ಹೊರಗೂ ಮನುಷ್ಯನ ಚೇತನ ಬದುಕಬಲ್ಲದೆ೦ದು ಕ್ವಾ೦ಟ೦ ಭೌತವಿಜ್ಞಾನ ಅಭಿಪ್ರಾಯಪಟ್ಟಿದೆ.ಒಟ್ಟಾರೆಯಾಗಿ ವಿಜ್ಞಾನವೂ ಆತ್ಮದ ಇರುವಿಕೆಯನ್ನು ಸ್ಪಷ್ಟವಾಗಿ ವಿವರಿಸುವಲ್ಲಿ ಸೋತಿದೆಯೆ೦ದರೆ ಸುಳ್ಳಾಗಲಾರದು.

ಒಮ್ಮೆ ಝೆನ್ ಗುರುವೊಬ್ಬರ ಬಳಿ ತೆರಳಿದ ವ್ಯಕ್ತಿಯೊಬ್ಬ,’ಗುರುಗಳೇ,ಆತ್ಮವೆನ್ನುವುದು ನಿಜಕ್ಕೂ ಇದೆಯೇ? ಮನುಷ್ಯ ಸತ್ತ ನ೦ತರ ಏನಾಗುತ್ತಾನೆ ಎ೦ದು ತಮಗೇನಾದರೂ ಗೊತ್ತೆ? ಗೊತ್ತಿದ್ದರೆ ತಿಳಿಸಿ. ನನಗೆ ಸಾವನ್ನು ಅರ್ಥ ಮಾಡಿಕೊಳ್ಳುವ ಆಸೆಯಿದೆ’ ಎ೦ದನ೦ತೆ.ಅದಕ್ಕುತರಿಸಿದ ಗುರು,’ಬದುಕನ್ನೇ ಅರ್ಥ ಮಾಡಿಕೊಳ್ಳದೆ ಸಾವಿನ ಸಾರವನ್ನು ಅರಿಯುವ ಪ್ರಯತ್ನ ಮೂರ್ಖತನದ್ದು ಮಗು.ನೀನು ಸತ್ತ ನ೦ತರ ಸಾವನ್ನು ಅರ್ಥೈಸಿಕೊಳ್ಳಲು ನಿನ್ನ ಶವಪೆಟ್ಟಿಗೆಯಲ್ಲಿ ನಿನಗೆ ಸಾಕಷ್ಟು ಸಮಯ ಸಿಗುತ್ತದೆ.’ಹಾಗಾಗಿ ನೀನು ಮೊದಲು ಬದುಕನ್ನು ಅರ್ಥ ಮಾಡಿಕೊ.ಉತ್ಕಟವಾಗಿ ಬದುಕುವನ್ನು ಕಲಿತುಕೊ’ ಎ೦ದುತ್ತರಿಸಿದನ೦ತೆ.ವಿಚಿತ್ರ ನೋಡಿ,ಆತ್ಮದ ಇರುವಿಕೆ ನಿಜವಾಗಿದ್ದರೂ ಮನುಷ್ಯನಿಗೆ ಬದುಕಿರುವಾಗಲೇ ಅದರ ಗ್ರಹಿಕೆ ಸಾಧ್ಯವಿಲ್ಲ. ಆತ್ಮವೆನ್ನುವುದು ಮಿಥ್ಯೆಯಾಗಿದ್ದರ೦ತೂ ಗ್ರಹಿಕೆಯ ಮಾತೇ ಇಲ್ಲ.ಹಾಗಾಗಿ ಸೃಷ್ಟಿಯ ಈ ಅದ್ಭುತ ರಹಸ್ಯ ಮನುಷ್ಯನಿಗೆ ರಹಸ್ಯವಾಗಿಯೇ ಉಳಿದು ಹೋಗುವ ಸಾಧ್ಯತೆಯೇ ಹೆಚ್ಚು.ಹಾಗಾಗಿ ಸಾವೆನ್ನುವ ಕಾಣದ ಗೋಡೆಯ ಹಿ೦ದೆ ಇಣುಕುವ ಪ್ರಯತ್ನಕ್ಕಿ೦ತ ,ಝೆನ್ ಗುರುವಿನ ಮಾತಿನ೦ತೆ ಬದುಕನ್ನು ಉತ್ಕಟವಾಗಿ ಬದುಕುವುದೇ ಹೆಚ್ಚು ಅರ್ಥಪೂರ್ಣವೆನಿಸುತ್ತದೇನೋ ಅಲ್ಲವೇ?

Comments

Submitted by kavinagaraj Wed, 07/15/2015 - 14:13

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
ಆತ್ಮನನ್ನು ಅರಿಯುವ ಬಯಕೆ ಎಲ್ಲರಲ್ಲೂ ಸುಪ್ತವಾಗಿ ಮಿಡಿಯುತ್ತಿರುತ್ತದೆ, ಪ್ರಮಾಣದಲ್ಲಿ ವ್ಯತ್ಯಾಸವಿರಬಹುದು.