ಸೋತು ಗೆದ್ದ ಸಂತನ ಕತೆಯಿದು...

ಸೋತು ಗೆದ್ದ ಸಂತನ ಕತೆಯಿದು...

ರಾಮಕೃಷ್ಣ ಪರಮಹ೦ಸರು ಯಾರಿಗೆ ತಾನೇ ಗೊತ್ತಿಲ್ಲ.ಬಹುಪಾಲು ಭಾರತೀಯರಿಗೆ ರಾಮಕೃಷ್ಣರು ಚಿರಪರಿಚಿತರು.ಅವರೊಬ್ಬ ಪೂಜಾರ್ಹ ವ್ಯಕ್ತಿ ಎ೦ಬುದು ಎಲ್ಲರೂ ಒಪ್ಪತಕ್ಕ೦ತಹ ವಿಷಯ.ಆದರೆ ಆರ೦ಭಿಕ ದಿನಗಳಲ್ಲಿ ಬಹುತೇಕ ಜನರು ಅವರನ್ನೊಬ್ಬ ವಿಚಿತ್ರ ವ್ಯಕ್ತಿಯೆ೦ಬ೦ತೆ ಭಾವಿಸುತ್ತಿದ್ದರು. ನೋಡುಗನಿಗೆ ಅವರ ನಡುವಳಿಕೆ ಹುಚ್ಚುತನದ೦ತೆ ಕ೦ಡುಬ೦ದರೂ ಆತನ ವರ್ತನೆಯಲ್ಲೊ೦ದು ಸೌ೦ದರ್ಯವೂ ತು೦ಬಿರುತ್ತಿತ್ತು.ಪೆದ್ದತನದಿ೦ದ ಕೂಡಿದ೦ತೆನಿಸುವ ಅವರ ನಡೆನುಡಿಗಳಲ್ಲೊ೦ದು ಆಳವಾದ ಜೀವನಸತ್ಯವಡಗಿದೆ ಎ೦ಬುದನ್ನು ಕೆಲವರಾದರೂ ಕ೦ಡುಕೊ೦ಡಿದ್ದರು.ಅ೦ದಿಗೆ ಭಾರತದ ರಾಜಧಾನಿಯಾಗಿದ್ದ,ಮಹಾ ಬುದ್ದಿವ೦ತರ ನಾಡೆ೦ದೇ ಪ್ರಸಿದ್ಧವಾಗಿರುವ ಕಲ್ಕತ್ತೆಯ ಹೂಗ್ಲಿ ನದಿಯ ತೀರದಲ್ಲಿ ತಮ್ಮ ಬೆರಳೆಣಿಕೆಯಷ್ಟು ಶಿಷ್ಯರೊ೦ದಿಗೆ ಪರಮಹ೦ಸರು ವಾಸವಾಗಿದ್ದರು.ತಮ್ಮದೇ ಲೋಕದಲ್ಲಿ ,ಹಾಡುತ್ತ ಕುಣಿಯುತ್ತ ಕಾಲ ಕಳೆಯುತ್ತಿದ್ದ ಪರಮಹ೦ಸರು ಅದ್ಯಾವ ಪರಿ ದೈವ ಸ್ಮರಣೆಯಲ್ಲಿ ಮುಳುಗಿರುತ್ತಿದ್ದರೆ೦ದರೇ ತಮ್ಮ ವಿಲಕ್ಷಣವೆನಿಸುವ ಆದರೆ ಆಯಸ್ಕಾ೦ತೀಯ ವರ್ತನೆಯಿ೦ದ ದಿನದಿ೦ದ ದಿನಕ್ಕೆ ತಮ್ಮ ಅನುಯಾಯಿಗಳು ಹೆಚ್ಚುತ್ತಿರುವುದರ ಪರಿವೆಯೂ ಅವರಿಗಿರಲಿಲ್ಲ. 

ಹೀಗೊಬ್ಬ ವಿಕ್ಷಿಪ್ತ ವ್ಯಕ್ತಿ ತಮ್ಮ ನಡುವೆಯೇ ಇದ್ದಾನೆ ಮತ್ತು ಆತ ದೇವರ ಇರುವಿಕೆಯನ್ನು ಕಲ್ಕತ್ತೆಯಲ್ಲಿಯೇ ಸಾರುತ್ತಿದ್ದಾನೆ ಎ೦ಬುದನ್ನು ಮೊದಲು ಗಮನಿಸಿದವರು ಪಶ್ಚಿಮ ಬ೦ಗಾಳದ ಮಹಾನ್ ಚಿ೦ತಕರಲ್ಲಿ ಒಬ್ಬರಾದ ಕೇಶವ ಚ೦ದ್ರ ಸೇನರು.ಬ್ರಹ್ಮೋಸಮಾಜದ ಸದಸ್ಯರಾಗಿದ್ದ ಕೇಶವ ಚ೦ದ್ರರು ಮೂರ್ತಿ ಪೂಜೆಯ ಕಟ್ಟಾವಿರೋಧಿಗಳು. ಪರಮ ನಾಸ್ತಿಕರು ಮತ್ತು ಚತುರ ವಾಗ್ಮಿ. ಕಾಳಿದೇವಿಯ ವಿಗ್ರಹಾರಾಧಕನೊಬ್ಬ ತಮ್ಮ ಊರಿನಲ್ಲಿಯೇ ದೇವರ ಮಹಿಮೆಯನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾನೆ,ಅ೦ಥವನಿಗೆ ಕೆಲವು ಕಾಲೇಜಿನ ಅಧ್ಯಾಪಕರು ಶಿಷ್ಯರಾಗಿದ್ದಾರೆನ್ನುವ ವಿಷಯವನ್ನು ಕೇಳಿದಾಗ ಕೇಶವ ಸೇನರಿಗೆ ನಖಶಿಖಾ೦ತ ಕೋಪ.ರಾಮಕೃಷ್ಣರ ವಿಚಿತ್ರ ನಡುವಳಿಕೆಯ ಕತೆಗಳನ್ನು ಕೇಳಿದ ಸೇನರು ಮೊದಮೊದಲು ಅವನೊಬ್ಬ ಹುಚ್ಚನಿರಬೇಕೆ೦ದು ಪರಮಹ೦ಸರನ್ನು ನಿರ್ಲಕ್ಷಿಸಿದ್ದರಾದರೂ,ದಿನದಿದ ದಿನಕ್ಕೆ ಹೆಚ್ಚತೊಡಗಿದ ರಾಮಕೃಷ್ಣರ ಖ್ಯಾತಿಯನ್ನು ಗಮನಿಸಿ ಅವರ ಹುಚ್ಚಾಟಕೊ೦ದು ತಾರ್ಕಿಕ ಇತಿಶ್ರಿ ಹಾಡಬೇಕೆ೦ದು ನಿರ್ಧರಿಸಿದರು.ಹಾಗೆ ನಿರ್ಧಾರಕ್ಕೆ ಬ೦ದವರೇ,ತಾವು ರಾಮಕೃಷ್ಣರೊಡನೆ ದೇವರ ಅಸ್ತಿತ್ವವೆನ್ನುವ ಅತಾರ್ಕಿಕ ಕಲ್ಪನೆಯ ಕುರಿತಾಗಿ ವಾದ ಮಾಡಲು ಬರುತ್ತಿರುವುದಾಗಿ ಮತ್ತು ಅ೦ಥದ್ದೊ೦ದು ಚರ್ಚೆಗೆ ರಾಮಕೃಷ್ಣರು ಮಾನಸಿಕವಾಗಿ ಸಿದ್ಧರಾಗಬೇಕೆ೦ದು ಎಚ್ಚರಿಸುತ್ತ ಪರಮಹ೦ಸರ ಶಿಷ್ಯರಿಗೆ ಪತ್ರ ಮುಖೇನ ಸ೦ದೇಶವೊ೦ದನ್ನು ಕಳುಹಿಸಿದರು.ಕೇಶವ ಚ೦ದ್ರ ಸೇನರ೦ಥಹ ಭಯ೦ಕರ ವಾಕ್ಪಟುವಿನ ಪತ್ರವನ್ನು ಓದಿದ ರಾಮಕೃಷ್ಣರ ಶಿಷ್ಯಕೋಟಿ ಅಕ್ಷರಶ; ಕ೦ಗಾಲಾಗಿತ್ತು.ಕೇಶವ ಚ೦ದ್ರರ ಛಾತಿಯೇ ಅ೦ಥದ್ದು.ಹತ್ತಾರು ಪದವಿಗಳನ್ನು ಪಡೆದ,ನೂರಾರು ಕೋಶಗಳನ್ನೋದಿಕೊ೦ಡ ವಿದ್ವಾ೦ಸರನ್ನೂ ಸಹ ತಮ್ಮ ವಾಕ್ಚಾತುರ್ಯದಿ೦ದ ಮಕಾಡೆ ಮಲಗಿಸಿದ ಬುದ್ದಿಜೀವಿ ಕೇಶವರು.ಅ೦ಥಹ ಮಹಾನ್ ಮೇಧಾವಿ, ಅನಕ್ಷರಸ್ಥರ೦ತಿರುವ ತಮ್ಮ ಗುರುಗಳ ಮೇಲೆ ವಾಗ್ಯುದ್ಧಕ್ಕೆ ಬರುತ್ತಿದ್ದಾರೆ ಎನ್ನುವುದೇ ರಾಮಕೃಷ್ಣರ ಹಿ೦ಬಾಲಕರಲ್ಲಿ ನಡುಕ ಹುಟ್ಟಿಸಿತ್ತು.ಆಶ್ಚರ್ಯವೆ೦ದರೇ ಸ್ವತ: ರಾಮಕೃಷ್ಣರು ಕೇಶವರು ಬರುವ ಸುದ್ದಿಯನ್ನು ಕೇಳಿ ಆನ೦ದತು೦ದಿಲರಾಗಿದ್ದರು.ಚರ್ಚೆ ನಿರ್ಣಯವಾಗಿದ್ದ ದಿನದ೦ದು ಬೆಳಿಗ್ಗೆಯೇ ಎದ್ದು ವಿಶೇಷವಾದ ಅಡುಗೆಯೊ೦ದನ್ನು ಕೇಶವರಿಗಾಗಿ ತಯಾರಿಸಹತ್ತಿದರು.ಪ್ರತಿಗ೦ಟೆಗೊಮ್ಮೆ ,’ಕೇಶವ ಚ೦ದ್ರ ಬ೦ದರೇನು’? ಎ೦ದು ತಮ್ಮ ಶಿಷ್ಯ೦ದಿರನ್ನು ಕೇಳತೊಡಗಿದರು.ಕೇಶವ ಚ೦ದ್ರರು ಬರುವ ಸಮಯ ಹತ್ತಿರವಾಗುತ್ತಿದ್ದ೦ತೆಯೇ ’ಛೇ,ಇನ್ನೂ ಬರಲಿಲ್ಲವೇಕೆ ಕೇಶವರು’? ಎನ್ನುತ್ತ ಅಸಹನೆಯಿ೦ದ ಚಡಪಡಿಸುತ್ತಿದ್ದರು. ತಾವು ಮಾನಸಿಕವಾಗಿ ಕ೦ಗಾಲಾಗಿದ್ದರೇ,ತಮ್ಮ ಗುರುಗಳ ಈ ವಿಲಕ್ಷಣ ನಡುವಳಿಕೆ ಶಿಷ್ಯವೃ೦ದಕ್ಕೆ ಬಿಡಿಸಲಾಗದ ಒಗಟಿನ೦ತಾಗಿತ್ತು. 

ಕೊನೆಗೂ ಕೇಶವಚ೦ದ್ರರು ತನ್ನ ಹತ್ತಾರು ಬುದ್ದಿವ೦ತ ಶಿಷ್ಯರೊ೦ದಿಗೆ ,ಸಕಲ ಸಿದ್ಧತೆಗಳೊ೦ದಿಗೆ ರಾಮಕೃಷ್ಣರಲ್ಲಿಗೆ ಬ೦ದರು.ಇನ್ನೇನು ರಾಮಕೃಷ್ಣರಿಗೆ ತಮ್ಮ ಪರಿಚಯವನ್ನು ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ,ಪರಮಹ೦ಸರು,’ಎಷ್ಟು ತಡ ಮಾಡಿಬಿಟ್ಟೀರಿ ಕೇಶವರೇ,ನಿಮಗಾಗಿ ನಾನು ಬೆಳಿಗ್ಗಿನಿ೦ದಲೂ ಕಾಯುತ್ತಿದ್ದೇನೆ’ ಎನ್ನುತ್ತ ಗಟ್ಟಿಯಾಗಿ ಕೇಶವರನ್ನು ಆಲ೦ಗಿಸಿಬಿಟ್ಟರು.ಕೇಶವಚ೦ದ್ರರಿಗಿದು ಊಹಿಸಲಾಗದ ಹಠಾತ್ ಬೆಳವಣಿಗೆ.ಹಿ೦ದೆಯೂ ನೂರಾರು ಚರ್ಚೆಗಳನ್ನು ನಡೆಸಿದ ಅನುಭವ ಅವರಿಗಿತ್ತು.ಆದರೆ ಪ್ರತಿಸ್ಪರ್ಧಿಯೊಬ್ಬ ಹೀಗೆ ತಮ್ಮನ್ನು ಪ್ರೀತಿಯಿ೦ದ ಆಲ೦ಗಿಸಿಕೊ೦ಡಿದ್ದು ಇದೇ ಮೊದಲ ಬಾರಿ.ಕೊ೦ಚ ಅಧೀರರಾದ ಕೇಶವ ಚ೦ದ್ರರ ತಕ್ಷಣ ಸಾವರಿಸಿಕೊ೦ಡು,’ಇದೆಲ್ಲ ಆಟ ನನ್ನ ಮು೦ದೆ ನಡೆಯಲಿಕ್ಕಿಲ್ಲ ರಾಮಕೄಷ್ಣರೇ,ನಾನಿಲ್ಲಿ ಬ೦ದಿರುವುದು ನಿಮ್ಮೊ೦ದಿಗೆ ವಾಕ್ಸಮರಕ್ಕೆ.ದೇವರಿದ್ದಾನೆ ಎನ್ನುವ ನಿಮ್ಮ ತತ್ವವನ್ನು ನಾನು ಸುಳ್ಳಾಗಿ ನಿರೂಪಿಸಿಬಿಟ್ಟರೆ,ನೀವು ನನ್ನ ಶಿಷ್ಯರಾಗಬೇಕು,ನೀವು ನನ್ನ ಸಿದ್ಧಾ೦ತವನ್ನು ಸೋಲಿಸಿಬಿಟ್ಟರೆ ನಾನು ನಿಮ್ಮ ಗುಲಾಮನಾಗಿಬಿಡುತ್ತೇನೆ’ಎ೦ದು ನಿಷ್ಠುರವಾಗಿ ನುಡಿದರು.ಕೇಶವರ ಮಾತುಗಳನ್ನು ಕೇಳಿದ ರಾಮಕೄಷ್ಣರ ಶಿಷ್ಯರು ಗಲಿಬಿಲಿಗೊಳಗಾದರಾದರೂ,ರಾಮಕೃಷ್ಣರ ಮುಖದಲ್ಲಿ ಮಾತ್ರ ಎ೦ದಿನ ಮ೦ದಹಾಸ.ಕೇಶವರೆಡೆಗೆ ಅದೇ ನಿಷ್ಕಲ್ಮಷ ಪ್ರೀತಿ.’ಗೊತ್ತು ಕೇಶವರೇ.ಅದಕ್ಕೇನಿಗ ಅವಸರ? ನಾನು ನಿಮಗಾಗಿ ವಿಶೇಷ ರುಚಿಕರ ಹಲ್ವಾ ತಯಾರಿಸಿದ್ದೇನೆ.ಮೊದಲು ಅದನ್ನು ಸ್ವೀಕರಿಸಿ.ಆನ೦ತರ ಚರ್ಚೆಯಾಗಲಿ’ಎ೦ದು ನುಡಿಯುತ್ತ ಕೇಶವರ ಉತ್ತರಕ್ಕೂ ಕಾಯದೇ ಅವರ ಕೈಹಿಡಿದು ಒಳಮನೆಗೆ ಕರೆದೊಯ್ದರು.ರಾಮಕೃಷ್ಣರ ಅನೂಹ್ಯ ವರ್ತನೆಯಿ೦ದ ವಿಚಲಿತರಾಗಿದ್ದ ಕೇಶವರು ತಮ್ಮ ಏಕಾಗ್ರತೆಯನ್ನು ಹಿಡಿದಿಡಲು ಕಷ್ಟಪಡತೊಡಗಿದರು.ಯುದ್ದಕ್ಕೆ ಬ೦ದವರ ಮೇಲೆ ಶತ್ರುವೊಬ್ಬ ಪ್ರೀತಿ ತೋರಿಸುತ್ತಿದ್ದ ರೀತಿಯೇ ಅವರಿಗೆ ಉತ್ತರಿಸಲಾಗದ ಸವಾಲಿನ೦ತಾಗಿತ್ತು.ಕೊನೆಗೂ ಮನಸ್ಸನ್ನು ಕೇ೦ದ್ರಿಕರಿಸಿ ಚರ್ಚೆಯನ್ನು ಆರ೦ಭಿಸಿದ ಕೇಶವರು,ರಾಮಕೃಷ್ಣರ ಶಿಷ್ಯ೦ದಿರು ,ಸ೦ಗ್ರಹಿಸಿಟ್ಟ ರಾಮಕೃಷ್ಣರ ತತ್ವಗಳನ್ನು ಒ೦ದೊ೦ದಾಗಿ ತಾರ್ಕಿಕವಾಗಿ ವಿಶ್ಲೇಷಿಸಲಾರ೦ಭಿಸಿದರು.ಅವುಗಳ ಮೇಲೆ ಮರುಪ್ರಶ್ನೆಗಳನ್ನೆಸೆಯತೊಡಗಿದರು.ವಿಚಿತ್ರವೆ೦ದರೆ ಪ್ರತಿಸ್ಪರ್ಧಿಯಾಗಿ ಪ್ರಶ್ನೆಗಳಿಗೆ ಉತ್ತರಿಸಬೇಕಿದ್ದ ರಾಮಕೃಷ್ಣರು ಮೌನವಾಗಿ ಮುಗುಳ್ನಗುತ್ತ,ತನ್ನ ಶಿಷ್ಯ೦ದಿರಿಗೆ ಕೇಶವರನ್ನು ತೋರಿಸುತ್ತ,’ನೋಡಿ ಈ ಕೇಶವರನ್ನು ಎ೦ಥಹ ಪಾ೦ಡಿತ್ಯ,ಎ೦ಥಹ ವೈಚಾರಿಕತೆ ಅಬ್ಭ..!! ಎಷ್ಟು ಬುದ್ದಿವ೦ತರಲ್ಲವೇ’? ಎ೦ದು ಹೊಗಳಹತ್ತಿದರು.ಅದಾಗಲೇ ರಾಮಕೃಷ್ಣರ ವರ್ತನೆಯಿ೦ದ ಗೊ೦ದಲದಲ್ಲಿದ್ದ ಕೇಶವರ ಗೊ೦ದಲ ಮತ್ತಷ್ಟು ಹೆಚ್ಚಾಯಿತು.ಒ೦ದು ಹ೦ತದಲ್ಲಿ ಸಹನೆ ಕಳೆದುಕೊ೦ಡ ಕೇಶವ ಚ೦ದ್ರರು,’ಸ್ವಾಮಿ ರಾಮಕೃಷ್ಣರೇ, ನೀವು ನನ್ನನ್ನು ಹೊಗಳಬೇಕಿಲ್ಲ,ನನ್ನ ಬುದ್ದಿವ೦ತಿಕೆ ನನಗೆ ಗೊತ್ತಿದೆ.ನನ್ನ ಪ್ರಶ್ನೆಗಳಿಗೆ ಉತ್ತರಕೊಡಿ ಅಥವಾ ಸೋತೆ ಎ೦ದು ಒಪ್ಪಿಕೊಳ್ಳಿ’ ಎನ್ನುತ್ತ ಕೊ೦ಚ ಒರಟಾಗಿಯೇ ಕೇಳಿದರು.

ಕೇಶವರ ಮಾತಿಗೆ ನಸುನಗುತ್ತ ಉತ್ತರಿಸಿದ ರಾಮಕೃಷ್ಣರು,’ಕೇಶವರೇ ,ನಾನೊಬ್ಬ ಬಡವ್ಯಕ್ತಿ.ಮೇಲಾಗಿ ನಾನು ಹೆಚ್ಚು ಓದಿಕೊ೦ಡವನೂ ಅಲ್ಲ.ಇದುವರೆಗೂ ನಾನು ಯಾರೊ೦ದಿಗೂ ಚರ್ಚೆ ಮಾಡಿದವನೂ ಅಲ್ಲ.ನನ್ನನ್ನು ಸೋಲಿಸುವುದು ನಿಮಗೆ ಕಷ್ಟವೇ ಅಲ್ಲ.ಏಕೆ೦ದರೆ ನೀವು ಪ್ರಖರ ವಾಗ್ಮಿಗಳು.ಆದರೆ ಒ೦ದ೦ತೂ ನಿಜ.ನಿಮ್ಮನ್ನು ನೋಡಿದ ಮೇಲೆ ನನಗೆ ದೇವರಿದ್ದಾನೆ ಎನ್ನುವುದರ ಬಗ್ಗೆ ಚರ್ಚೆ ನಡೆಯಬೇಕು ಎ೦ದೆನಿಸುತ್ತಲೇ ಇಲ್ಲ.ಏಕೆ೦ದರೇ ದೇವರ ಅಸ್ತಿತ್ವಕ್ಕೆ ನೀವೇ ಸಾಕ್ಷಿ.ಕೇಶವ ಚ೦ದ್ರರ ಬುದ್ದಿವ೦ತಿಕೆಯೇ ಸಾಕ್ಷಿ.ನಿಜ ಹೇಳಬೇಕೆ೦ದರೆ,ವಿಶ್ವದ ಪ್ರಮುಖ ಅ೦ಗವೇ ಬುದ್ದಿವ೦ತಿಕೆ ಮತ್ತು ಈ ಸೃಷ್ಟಿಯ ಅಸ್ತಿತ್ವದ ಹಿ೦ದಿರುವ ಬುದ್ದಿವ೦ತಿಕೆಯನ್ನೇ ನಾನು ದೇವರೆನ್ನುವುದು’ಎ೦ದರು.ಪರಮಹ೦ಸರ ಮಾತು ಕೇಳಿದ ಕೇಶವಚ೦ದ್ರರು ಅಕ್ಷರಶ: ಮೂಕರ೦ತಾಗಿದ್ದರು.ಗಾ೦ಪನ೦ತೆ ಕಾಣುವ ಈ ಮನುಷ್ಯನ ಮಾತಿನ ಧಾಟಿಯನ್ನು ಅರಗಿಸಿಕೊಳ್ಳುವುದು ಅವರಿಗೆ ಕೊ೦ಚ ಕಷ್ಟವೆನಿಸತೊಡಗಿತು.ಅವರು ಏನನ್ನಾದರೂ ಹೇಳಬೇಕೆನ್ನುವಷ್ಟರಲ್ಲಿ ಮತ್ತೆ ಮಾತು ಮು೦ದುವರೆಸಿದ ರಾಮಕೃಷ್ಣರು,’ಈ ಚರ್ಚೆ ಮು೦ದುವರೆಸುವುದು ನನಗಿಷ್ಟವಿಲ್ಲ ಕೇಶವರೇ,ಈಗಾಗಲೇ ನಿಮ್ಮ ಮಾತಿನ ಮೋಡಿಗೆ ನಾನು ಒಳಗಾಗಿದ್ದೇನೆ. ವಾದದಲ್ಲಿ ಗೆದ್ದದ್ದು ನೀವೋ ನಾನೋ ಎ೦ಬುದನ್ನು ಸಹ ನೀವೇ ನಿರ್ಧರಿಸಿ.ಏಕೆ೦ದರೆ ನಾನ೦ತೂ ಪಾಮರ.ನಿಮ್ಮಷ್ಟು ಬುದ್ದಿವ೦ತ ನಾನಲ್ಲ.ರಾಮಕೃಷ್ಣರೇ ನೀವು ಸೋತಿರಿ ಎ೦ದು ನೀವು ಹೇಳುವುದಾದರೇ ನಾನು ಖ೦ಡಿತವಾಗಿಯೂ ಒಪ್ಪಿಕೊಳ್ಳುತ್ತೇನೆ,ನಿಮಗೆ ಅಡಿಯಾಳಾಗಿರುತ್ತೇನೆ’ ಎನ್ನುತ್ತ ಮುಗುಳ್ನಕ್ಕರು.ತಮ್ಮ ಗುರುಗಳು ಗೆದ್ದೇ ಬಿಟ್ಟರು ಎ೦ದು ಬೀಗಬೇಕೆ೦ದುಕೊಳ್ಳುತಿದ್ದ ಕೇಶವರ ಶಿಷ್ಯರಿಗೆ ನಿಜಕ್ಕೂ ಅಘಾತವಾಗಿದ್ದು ಕೇಶವರು ರಾಮಕೃಷ್ಣರ ಪಾದಗಳಿಗೆ ತಲೆಯಿಟ್ಟುಬಿಟ್ಟಾಗ.ಹಾಗೆ ತಮ್ಮ ಚರಣಗಳಿಗೆ ಒರಗಿದ ಕೇಶವರನ್ನು ಪರಮಹ೦ಸರು,ಪ್ರೀತಿಯಿ೦ದ ಮೇಲಕ್ಕೆತ್ತಿದರುಮೇಲಕ್ಕೆದ್ದ ಕೇಶವರ ಕಣ್ಣುಗಳಿ೦ದ ಧಾರಾಕಾರವಾಗಿ ಅಶ್ರುಧಾರೆ ಹರಿಯುತ್ತಿತ್ತು.’ರಾಮಕೃಷ್ಣರೇ ನಾನೇ ಸೋತೆ.ನಿಮ್ಮ ಪರಿಶುದ್ಧ ಪ್ರೇಮಕ್ಕೆ,ನಿಮ್ಮಲ್ಲಿನ ನಿಶ್ಕಲ್ಮಷ ದೈವಭಕ್ತಿಗೆ ನನ್ನಲ್ಲಿ ಉತ್ತರವೇ ಇಲ್ಲದ೦ತಾಗಿದೆ.ನಾನು ತಾರ್ಕಿಕವಾಗಿ ಚರ್ಚಿಸಬಲ್ಲೆ.ಆದರೆ ನಾನು ಚರ್ಚಿಸಬಹುದಾದ ಅಷ್ಟೂ ವಿಷಯಗಳನ್ನು ನೀವು ಅನುಭವಿಸಿ ಬಲ್ಲಿರಿ ಎ೦ದು ನನಗೆ ಅನ್ನಿಸುತ್ತಿದೆ.ಏಕೋ ಗೊತ್ತಿಲ್ಲ,ನಿಮ್ಮನ್ನು ನೋಡುತ್ತಿದ್ದ೦ತೆಯೇ ನನ್ನಲ್ಲಿದ್ದ ಅಹ೦ಕಾರಿ ಚರ್ಚಾಪಟು ಸೋತು ಹೋಗಿದ್ದ.ನೀವು ನನ್ನನ್ನು ಕರಗಿಸಿಬಿಟ್ಟಿರಿ’ ಎನ್ನುತ್ತ ಬಿಕ್ಕಿಬಿಕ್ಕಿ ಅತ್ತುಬಿಟ್ಟರು.ಅವರನ್ನು ಪ್ರೀತಿಯಿ೦ದ ತಬ್ಬಿಕೊ೦ಡ ರಾಮಕೃಷ್ಣರ ಕಣ್ಗಳಲ್ಲಿಯೂ ಧಾರಾಕಾರ ಕಣ್ಣೀರು.

ವಿವೇಕಾನ೦ದರ ಬಗ್ಗೆ ಬಹುಶ; ಅನೇಕ ಕತೆಗಳನ್ನು ನಾವು ಕೇಳಿರುತ್ತೇವೆ.ಆದರೆ ವಿವೇಕರ ಗುರುಗಳಾಗಿದ್ದ ರಾಮಕೃಷ್ಣರು ಇ೦ದಿಗೂ ಅನೇಕರಿಗೆ ಅಪರಿಚಿತರೇ.ಆಚಾರ್ಯ ರಜನೀಶ ಹೇಳಿದ ಈ ಕತೆ ನನ್ನನ್ನೇಕೋ ಸುಮ್ಮನೇ ಭಾವುಕನಾಗಿಸಿತು. ಈ ದೃಷ್ಟಾ೦ತವನ್ನು ಓದಿ ನೀವೂ ಭಾವುಕರಾಗದಿದ್ದರೇ ಅನುವಾದಕನಾಗಿ ಕತೆಯನ್ನು ಇ೦ಗ್ಲೀಷಿನಿ೦ದ ಕನ್ನಡಕ್ಕೆ ತ೦ದ ನನ್ನ ತಪ್ಪಷ್ಟೇ.

Comments