ಶಾಶ್ವತ ಪ್ರೇಮ ....

ಶಾಶ್ವತ ಪ್ರೇಮ ....

 

ರಾಮ ಮತ್ತು ಕೃಷ್ಣ  ಭಾಲ್ಯದಿಂದಲೂ ಸ್ನೇಹಿತರು.  ತುಂಬಾ  ಆತ್ಮೀಯರು.  ಅವರೆಷ್ಟು ಅತ್ಮೀಯರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಕೂಡ ಇರುತ್ತಿರಲಿಲ್ಲ.  ಅದೆಷ್ಟೋ ಬಾರಿ ಸಣ್ಣ  ಪುಟ್ಟ ಜಗಳಗಳನ್ನು ಆಡಿದರೂ ಸಹ ಆ ಜಗಳಗಳು  ಕೇವಲ ಆ ಕ್ಷಣಗಳಿಗೆ  ಮಾತ್ರ ಸೀಮಿತವಾಗಿರುತ್ತಿದ್ದವು.

 

              ಈ ರೀತಿ ಇದ್ದ ರಾಮ ಹಾಗು ಕೃಷ್ಣರು  ದೊಡ್ಡವರಾದ ಮೇಲೆ ಉದ್ಯೋಗವನ್ನರಸಿ ತಮ್ಮ ಹುಟ್ಟೂರು ಬಿಟ್ಟು ಹೊರಟರು.  ಕೆಲಸವನ್ನು ಹುಡುಕುತ್ತ ಊರೂರು ಅಲೆದರು. ಇಬ್ಬರಿಗೂ ಒಟ್ಟಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಆದರೆ ಅವರ ಹುಡುಕಾಟ ಮಾತ್ರ ನಿಲ್ಲಲಿಲ್ಲ. ಸುತ್ತಲಿನ ಊರುಗಳು , ಪೇಟೆಗಳು, ಸುಮುದ್ರ ಬಂದರುಗಳು ಹಾಗು ಕಾಡುಗಳನ್ನು ಸುತ್ತಿದರು ಎಲ್ಲೂ ಕೆಲಸ ಸಿಗಲಿಲ್ಲ.  ಯಾರೋ ಹೇಳಿದ ಮಾತು ಕೇಳಿ ಅಲ್ಲಿರುವ ದೂರದ ಮರುಭೂಮಿಯನ್ನು  ದಾಟಿದರೆ, ಆಚೆ ಇರುವ  ಮತ್ತೊಂದು ಊರಿನಲ್ಲಿ ಕೆಲಸ ಸಿಗಬಹುದೆಂದು ನಂಬಿ , ಆ  ಮರುಭೂಮಿಯನ್ನು ದಾಟಲು ನಿರ್ಧರಿಸಿದರು.

 

              ಪ್ರಯಾಣ ಶುರುವಾಯಿತು, ಮರುಭೂಮಿಯನ್ನು ಅವರು ಕಾಲು ನಡಿಗೆಯಲ್ಲೇ ದಾಟಬೇಕಿತ್ತು. ನಡೆಯಲು ಭಾರ ಆಗದಿರಲಿ ಎಂದು ಸ್ವಲ್ಪ ಆಹಾರ ಹಾಗು ಒಂದು ಸಣ್ಣ  ಬಾಟಲಿಯಲ್ಲಿ ನೀರನ್ನು ತುಂಬಿಕೊಂಡಿದ್ದರು.  ಒಂದು ಪೂರ್ಣ ದಿನದ ಪ್ರಯಾಣದ ನಂತರ ಹಸಿವೆಯಾಯಿತು, ರಾಮನು ಕೃಷ್ಣನಿಗೆ ಚೀಲದಲಿದ್ದ ಆಹಾರದಲ್ಲಿ ಅರ್ಧ ಮಾತ್ರ ತಿನ್ನಲು ಹೇಳಿದನು.  ಅದೇ ರೀತಿ ಕೇವಲ ಅರ್ಧ ಆಹಾರವನ್ನು ಇಬ್ಬರು ಹಂಚಿಕೊಂಡು ತಿಂದರು.  ಮರುದಿನ ಇನ್ನರ್ಧ ಆಹಾರವನ್ನು ತಿಂದು ಮುಗಿಸಿದರು.ಅಷ್ಟೊತ್ತಿಗೆ ತಾವು ತಂದಿದ್ದ ನೀರು ಕೂಡ ಸ್ವಲ್ಪವೆ ಉಳಿದಿತ್ತು. ಮರುಭೂಮಿಯಲ್ಲಿ ಇನ್ನು ಎಲ್ಲೂ ಓಯಸಿಸ್ ಕಾಣುತ್ತಿಲ್ಲ. ಬಿಸಿಲಿನ ಬೇಗೆಯಿಂದ ಕೃಷ್ಣನಿಗೆ ತುಂಬಾ ಭಾಯಾರಿಕೆಯಾಗಿ ಬಳಲಿದ್ದ. ರಾಮನು ಕೃಷ್ಣನಿಗೆ" ಕೃಷ್ಣ ಉಳಿದಿರುವ ನೀರಿನಲ್ಲಿ ಅರ್ದವನ್ನು ಮಾತ್ರ ಕುಡಿ,ನೀರು ನಮಗೆ ಮುಂದೆ ಬೇಕಾಗುತ್ತದೆ ,  ನಮಗೆ ಮತ್ತೆಲ್ಲಿ ನೀರು ಸಿಗುತ್ತೋ ಗೊತ್ತಿಲ್ಲ" ಎಂದನು. ಆದರೆ ಭಾಯರಿಕೆಯಿಂದ ಕಂಗೆಟ್ಟಿದ್ದ ಕೃಷ್ಣ "ಇಲ್ಲ ನಾನು ಎಲ್ಲವನ್ನು ಕುಡಿಯುತ್ತೇನೆ , ಇಲ್ಲದಿದ್ದರೆ ನಾನು ಇಲ್ಲೇ ಸತ್ತೆ ಹೋಗುತ್ತೇನೆ " ಎಂದು ಕೋಪಗೊಂಡು ಹೇಳಿದ. ಅದಕ್ಕೆ ರಾಮ" ನೋಡು ಕೃಷ್ಣ ನಮ್ಮ ಮುಂದಿನ ಪ್ರಯಾಣಕ್ಕೆ ನೀರು ಮುಖ್ಯ, ಅಹಾರವಂತೂ ಖಾಲಿಯಾಗಿದೆ, ಓಯಸಿಸ್ ಸಿಗುವ ತನಕ  ನಮ್ಮಲ್ಲಿರುವ  ನೀರನ್ನೇ  ನಾವು ಸ್ವಲ್ಪ ಸ್ವಲ್ಪವೇ ಕುಡಿದು ಜೀವ ಉಳಿಸಿಕೊಳ್ಳಬೇಕು" ಎಂದನು. ಆದರೆ ಕೃಷ್ಣ ಇದನ್ನೆಲ್ಲಾ ಕೇಳದೆ ಎಲ್ಲ ನೀರನ್ನು ಕುಡಿಯಲು ಹೋದಾಗ , ರಾಮನಿಗೂ ಕೋಪ ಬಂದು ಇಬ್ಬರು ಜಗಳವಾಡಿದರು, ಆ ಜಗಳದಲ್ಲಿ ರಾಮನು ಕೃಷ್ಣನ ಕಪಾಳಕ್ಕೆ ಹೊಡೆದನು. ಕೃಷ್ಣನಿಗೆ ರಾಮನ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿತು. ಕೋಪಗೊಂಡು ಸುಮ್ಮನೆ ಕುಳಿತುಕೊಂಡ. ತನ್ನ ಮುಂದೆಯೇ ಇದ್ದ ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಮರಳಿನ ಮೇಲೆ " ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಕಪಾಳಕ್ಕೆ ಹೊಡೆದ" ಎಂದು ದೊಡ್ಡದಾಗಿ ಬರೆದ. ರಾಮನಿಗೆ ಅದನ್ನು ನೋಡಿ ಬೇಜಾರು ಆಯಿತು ಆದರೂ ಸಹಿಸಿಕೊಂಡ.

 

                  ಕೆಲ ಸಮಯದ ನಂತರ ಪ್ರಯಾಣವನ್ನು ಮತ್ತೆ ಮುಂದುವರೆಸಿದರು , ಸ್ವಲ್ಪ ದೂರದಲ್ಲೇ ಒಂದು ಮರಳುಗಾಡಿನ ಓಯಸಿಸ್  ಕಾಣಿಸಿತು. ಗಿಡ-ಮರಗಳು, ಅವುಗಳ ನೆರಳು, ಕುಡಿಯಲು ಸಾಕೊಷ್ಟು ನೀರು ಅವರಿಗೆ ಹೋದ ಜೀವ ಮತ್ತೆ ಬಂದ  ಹಾಗೆ ಆಯಿತು. ಹೊಟ್ಟೆ ತುಂಬುವಷ್ಟು ನೀರು ಕುಡಿದರು, ನೆರಳಲ್ಲಿ ವಿಶ್ರಾಂತಿ ಪಡೆದರು. ನಂತರ ದಣಿದಿದ್ದ ದೇಹಗಳನ್ನು ತಂಪಾಗಿಸಲು ಅಲ್ಲೇ ಇದ್ದ ಒಂದು ಕೊಳದಲ್ಲಿ ಈಜಲು ಶುರು ಮಾಡಿದರು. ಆ ಕೊಳ ಸಣ್ಣದಿದ್ದರೂ ಆಳವಾಗಿತ್ತು. ಕೃಷ್ಣ ಏನನ್ನು ಲೆಕ್ಕಿಸದೆ ನೀರಿಗೆ ದುಮುಕಿದಾಗ, ಅದರ ಪಾತಾಳ ಸೇರಿದ, ಹೇಗೋ ಕಷ್ಟಪಟ್ಟು ಮೇಲೆ ಬಂದ. ಆದರೆ ದಡಕ್ಕೆ ಬರಲು ಕೃಷ್ಣನಿಗೆ ಸಾದ್ಯವಾಗಲಿಲ್ಲ. ಪ್ರಯಾಣದಲ್ಲಿ ದಣಿದಿದ್ದ ಕೈಕಾಲುಗಳು ಅವನಿಗೆ ಸಹಕರಿಸಲೇ ಇಲ್ಲ. ಜೋರಾಗಿ " ಕಾಪಾಡಿ , ಕಾಪಾಡಿ " ಎಂದು ಕೂಗಿಕೊಂಡ. ಪ್ರಾಣ ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ರಾಮ ನೀರಿಗೆ ದುಮುಕಿ ಕೃಷ್ಣನನ್ನು ಕಾಪಾಡಿ ದಡಕ್ಕೆ ಎಳೆದುಕೊಂಡು ಬಂದ. ತಾನು ಸತ್ತೆ ಹೋದೆ ಅಂತ ಅಂದುಕೊಂಡಿದ್ದ ಕೃಷ್ಣನ ಜೀವವನ್ನು ರಾಮ ಉಳಿಸಿದ್ದ. ರಾಮನನ್ನು ಆಲಂಗಿಸಿದ ಕೃಷ್ಣ " ರಾಮ ನೀ ನನ್ನ ಜೀವ ಉಳಿಸಿದೆ, ನೀ ನನ್ನ ನಿಜವಾದ ಪ್ರಾಣ ಸ್ನೇಹಿತ" ಎಂದನು.

 

                  ಆ ಕ್ಷಣದಲ್ಲೇ ಅಲ್ಲಿ ಇದ್ದ ಒಂದು  ಬಂಡೆಗಲ್ಲಿನ ಮೇಲೆ "ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಜೀವ ಉಳಿಸಿದ" ಎಂದು ಕೃಷ್ಣ ಮತ್ತೆ ಕೆತ್ತಿದ್ದ. ಇದನ್ನು ನೋಡಿ ಆಶ್ಚರ್ಯ ಚಕಿತನಾದ ರಾಮನು ಕೃಷ್ಣನಿಗೆ ಕೇಳಿದ " ಕೃಷ್ಣ ಅಲ್ಲಿ ಮರಳಿನ ಮೇಲೆ ನನ್ನ ಸ್ನೇಹಿತ ನನ್ನನ್ನು  ಹೊಡೆದ ಅಂತ ಬರೆದೆ,  ಈಗ  ಬಂಡೆಗಲ್ಲಿನ ಮೇಲೆ ನನ್ನ ಸ್ನೇಹಿತ ನನ್ನ ಜೀವ ಉಳಿಸಿದ ಅಂತ ಬರೆದೆ, ಏಕೆ ಹೀಗೆ ಮಾಡಿದೆ ?" ಎಂದಾಗ , ಕೃಷ್ಣನು ಹೇಳುತ್ತಾನೆ " ನೋಡು ರಾಮ " ನೀ ನನ್ನ ಪ್ರಾಣ ಸ್ನೇಹಿತ, ನೀನು ನನ್ನ ಕಪಾಳಕ್ಕೆ ಹೊಡೆದಾಗ ಆ ಕ್ಷಣಕ್ಕೆ ನಾನು ಕೋಪಗೊಂಡು ಹಾಗೆ ಬರೆದಿದ್ದು ನಿಜ, ಅದು ಕೇವಲ ಕ್ಷಣಿಕ , ಬೇಕಾದರೆ ಈಗ ಹೋಗಿ ನೋಡು ಮರಳಿನ ಮೇಲೆ ಬರೆದದ್ದು ಗಾಳಿಯಿಂದ ಅಳಿಸಿ ಹೋಗಿರುತ್ತೆ. ನನ್ನ ಕೋಪ ಯಾವಗಲು ಕ್ಷಣಿಕ. ಈಗ ನಿಜವಾಗಿಯೂ ನಿನ್ನ ಮೇಲೆ ಪ್ರೀತಿಯಿಂದ ಬಂಡೆಗಲ್ಲಿನ ಮೇಲೆ ನಿನ್ನ ಒಳ್ಳೆಯತನದ ಬಗ್ಗೆ ಬರೆದಿರುವೆ ಇದು ಶಾಶ್ವತ, ಸದಾ ನೆನಪಿನಲ್ಲಿ ಇರುತ್ತದೆ, ಒಳ್ಳೆಯದನ್ನು ಮಾತ್ರ ನಾ ನೆನಪಿನಲ್ಲಿ ಇಟ್ಟುಕೊಳ್ಳು ಬಯಸುತ್ತೇನೆ" ಎಂದನು.

ಸ್ನೇಹಿತರೆ ನಾವು ಕೂಡ ಯಾವಾಗಲೂ ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ನೋಡಿಯೂ ನೋಡದಿರಬೇಕು , ಒಂದು ವೇಳೆ ನೋಡಿದರೂ ಸಹ ಮರೆಯಬೇಕು. 

Comments