ವಾಸು ಡಿ ಗಾಮಾ..ಏನ್ ನಿನ್ನ ಡ್ರಾಮಾ..!

ವಾಸು ಡಿ ಗಾಮಾ..ಏನ್ ನಿನ್ನ ಡ್ರಾಮಾ..!

ಅವಳು ಹಚ್ಚೋ ನೇಲ್ ಪಾಲಿಶ್​ ನಲ್ಲಿ ವಿಷ ಇದೆ. ಅವಳು ಹಾಕೋ ಲಿಪ್​ಸ್ಟಿಕ್​ ನಲ್ಲಿ ವಿಷಯ ಇದೆ. ಅವಳ ದೇಹದ ಹೊರೆಗೆ ಇಷ್ಟು ವಿಷ ಇದೆ. ದೇಹದೊಳಗೆ ಎಷ್ಟಿರಬಹುದು. ಪ್ರೀತಿ ಎಂಬೋದು ವಿಷ.  ಅದನ್ನ ಕುಡಿದವ್ರು ನೀವೆಲ್ಲ ವಿಷಕಂಠರು. ಹೀಗನ್ನುತ್ತಲೇ, ಕಣ್ಣು ಎದುರೇ ಚೆಲುವೆಯೊಬ್ಬಳು ನಡೆದು ಹೋಗ್ತಾಳೆ. ಕೂದಲು ಹಾರಿಸಿಕೊಂಡು. ಆಗ, ಲವ್ ಬೇಡ ಎಂದು ಹೇಳೋ ಮೇಷ್ಟ್ರು ಲವ್ ನಲ್ಲಿ ಬಿದ್ದು ಹೊರಳಾಡುತ್ತಾರೆ. ಹಿನ್ನೆಲೆಯಾಗಿ ಉಳಿದವರು ಕಂಡಂತೆ ಚಿತ್ರದ ಘಟ್ಟದಾ ಅಂಚಿದಾಯೇ ಸಾಂಗ್ ಪ್ಲೇ ಆಗುತ್ತದೆ..

ಲವ್ ನಲ್ಲಿ ಬಿದ್ದು ಎದ್ದು ಕುಳಿತು.ಏನೂ ಹೇಳದೆ ಇದ್ದರೂ, ಏನೇನೋ ಹೇಳೊ ಮೇಷ್ಟ್ರ ಕಥೆಯಿದು. ಉಡಾಫೆ ಮೇಷ್ಟ್ರು. ಪಾಠ ಹೇಳೋದಿಲ್ಲ. ಕ್ಲಾಸ್​ ಗೆ ಬಂದರೂ ಸಿನಿಮಾದ ಕಥೆಗಳನ್ನ ಹೇಳೋದೆ ಪಾಠ. ಅದುವೇ ಮೋಜು. ಹುಡುಗರ ಜೊತೆಗೆ ಎಣ್ಣೆ ಹೊಡೆಯೋದು. ಅವರೊಟ್ಟಿಗೆ ಟಾಯಲೆಟ್​ ನಲ್ಲಿ ಕುಳಿತ ಇಸ್ಪೆಟ್ ಆಡೋದು. ಗ್ಯಾಪ್​ ನಲ್ಲಿ ಲವ್ ಮಾಡೋಕೆ ಹುಡುಗರಿಂದಲೇ  ಹೆಲ್ಪ ಪಡೆಯೋದು..

ಮೇಷ್ಟ್ರು ಹಿಂಗಿದ್ದರೆ ಏನ್ ಆಗಬೇಕು. ಪಾಠ ಕೇಳೋ ಮಕ್ಕಳು ಎಕ್ಕುಟ್ಟು ಹೋಗೋದಿಲ್ಲವೇ. ವಾಸ್ಕೋಡಿಗಾಮ ಚಿತ್ರದ ಮೇಷ್ಟ್ರು ವಾಸು ಡಿ ಗಾಮನಹಳ್ಳಿ ಇರೋದೆ ಹಿಂಗೆ. ಹುಡುಗರೊಟ್ಟಿಗೆ ಸಿಗರೇಟ್ ಸೇದೋದರು. ಸೇದಿದನ್ನೂ ಸಮರ್ಥಿಸಿಕೊಳ್ಳೋದು. ಆದರೆ, ಈ ಮೇಷ್ಟ್ರು ಅಟೆಂಡನ್ಸ್ ವಿರೋಧಿ. ಆ ಹಿನ್ನೆಲೆಯಲ್ಲಿ ಒತ್ತಾಯದಿಂದ ವಿದ್ಯಾರ್ಥಿಗಳನ್ನ ಕ್ಲಾಸ್ ರೂಮ್​ ನಲ್ಲಿ ಕುಳ್ಳಿರಿಸಿಕೊಳ್ಳಬಾರದು ಅನ್ನೋದು ಈ ಮೇಷ್ಟ್ರ ಪಾಲಿಸಿ.ಅದು ಹಿಂಗಿದೆ ಓದಿದೆ.

ಅಟೆಂಡೆನ್ಸ್ ಅನ್ನೋದು ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಾಕಿರೋ ಕಬ್ಬಿಣ್ಣದ ಕಾಚಾ. ಅದನ್ನ ಕಿತ್ತು ಎಸೆದು ಓಡ್ತಾ ಇರಬೇಕು. ಆದರೆ, ಎಲ್ಲವನ್ನೂ ಇಷ್ಟಪಟ್ಟು ಮಾಡಬೇಕು. ಕಷ್ಟಪಟ್ಟು ಏನು ಮಾಡಬಾರದು.

ಇದು ವಾಸ್ಕೋಡಿಗಾಮ ಮೇಷ್ಟ್ರ ನಂಬಿದ ತತ್ವ. ಜೊತೆಗೆ ಇರೋ ಹುಡುಗರು ಇದರ ಪರಿಪಾಲಕರು. ಆದರೆ ಈ ಮೇಷ್ಟ್ರ ನೀತಿ ಮತ್ತು ನಿಯಮ ಬದಲಾಗೋದು ಲವ್ಲಿ ಟೀಚರ್ ಪ್ರಿನ್ಸಿಪಾಲ್ ಆದಾಗಲೇ. ದಾರಿ ತಪ್ಪಿದ ಈ ವಾಸ್ಕೋಡಿಗಾಮ ಈಕೆಯ ರೂಲ್​ ನಲ್ಲಿ ಸರಿ ದಾರಿ ಹಿಡಿಯುವುದು. ಎರ್ರಾಬ್ರಿ ಪಾಠ ಮಾಡುತ್ತಿದ್ದ ಈ ಮೇಷ್ಟ್ರು ಮುಂದೆ ಹೋಗ್ತಾ..ಹೋಗ್ತಾ ಚೆನ್ನಾಗಿಯೇ ಪಾಠ ಮಾಡ್ತಾರೆ. ಗದಾಯುದ್ಧ ಅಧ್ಯಾಯ ಇದ್ದಾಗ, ಭೀಮನ ಗೆಟಪ್​ ಹಾಕಿಕೊಂಡೇ ಪಾಠ ಮಾಡ್ತಾರೆ. ಇದು ಈ ಮೇಷ್ಟ್ರ ಹೊಸ ಐಡಿಯಾ. ಮತ್ತು ಥಿಯೇರಿಗಿಂತ ಪ್ರಾಕ್ಟಿಕಲ್ಲೇ ಬೆಸ್ಟು ಅನ್ನೋ ಬಲವಾದ ನಂಬಿಕೆ.

ಹಾಗೆ ಬದಲಾದ ಈ ಮೇಷ್ಟ್ರ ಯೋಚನೆ  ಮತ್ತೆ..ಮತ್ತೆ ಬಂದು ತಲುಪೋದು, ಶಿಕ್ಷಣ ವ್ಯವಸ್ಥೆ ವಿರುದ್ಧವೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ಅನ್ನೊದೇ ಒಟ್ಟು ತಾತ್ಪರ್ಯ. ಮಕ್ಕಳ ಇಚ್ಚೆಯಂತೆ ಅವರಿಗೆ ಶಿಕ್ಷಣ ನೀಡಿ ಅನ್ನೋ ಬುದ್ದಿವಾದ ಪೋಷಕರಿಗೆ ಇಲ್ಲಿಯೇ ಕೊಡ್ತಾರೆ ಈ ವಾಸು ಸರ್..

ವಾಸ್ಕೋಡಿಗಾಮ ಚಿತ್ರದ ಕಥೆ ಮತ್ತು ನಿರೂಪನೆ ನಿಮಗೆ ಮೇಲೆ ಹೇಳಿದ ಎಲ್ಲ ವಿಚಾರವನ್ನೂ ಹೇಳುತ್ತದೆ. ಮನಸ್ಸಿಗೆ ಇಳಿಯುವಂತೆ ಮಾಡುತ್ತದೆ. ಕಥೆಯಲ್ಲಿ ಗಟ್ಟಿತನ ಇದೆ. ಆಮೀರ್ ಖಾನ್ ಥ್ರೀಈಡಿಯೆಟ್ಸ್ ನಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಅಂತ ಕಮರ್ಷಿಲ್ ಚೌಕಟ್ಟಿನಲ್ಲಿಯೇ ಹೇಳಿದ್ದರು. ವಾಸ್ಕೋಡಿಗಾಮ ಕೂಡ ಅದನ್ನ  ಕನ್ನಡಿಗರ ಹೃಯದ ತಟ್ಟೋ ಹಾಗೆ ಹೇಳ್ತಿದ್ದಾನೆ.
ವಾಸ್ಕೋಡಿಗಾಮನ ಹಿಂದಿರೋ ನಿರ್ದೇಶಕ ಮಧುಚಂದ್ರ ಒಳ್ಳೆ ಕೆಲಸ ಮಾಡಿದ್ದಾರೆ. ಕಥೆ ಬರೆದುಕೊಂಡು, ಸಂಭಾಷಣೆಯನ್ನೂ ಪಂಚಿಂಗ್ ಆಗಿ ಕೊಟ್ಟು, ನಿರ್ದೇಶನದಲ್ಲೂ ಹೊಸ ಹುಡುಗರಿಂದ ಕೆಲಸ ತೆಗೆಸಿಕೊಂಡಿರೋ ಮಧು ಚಂದ್ರ, ನಟ ಕಿಶೋರ್​ ಗೆ ಒಳ್ಳೆ ಹೊಸ ರೂಪವನ್ನೇ ಕೊಟ್ಟಿದ್ದಾರೆ.

ವಾಸ್ಕೋಡಿಗಾಮ ಚಿತ್ರದಲ್ಲಿ ಲೂಸಿಯಾ ಮ್ಯೂಜಿಕ್ ಡೈರೆಕ್ಟರ್ , ಪೂರ್ಣ ಚಂದ್ರ ತೇಜಸ್ವಿ ಸಂಗೀತ ರಿಂಗಣಿಸುತ್ತದೆ.ಅದರಲ್ಲೂ ಸಾ.ರಿ.ಗಾ.ಮಾ.ಪ ಹಾಡು ಸೂಪರ್. ಕಾಲೇಜ್ ಹುಡುಗರು ಗುನುಗುನಿಸುವಂತಿದೆ. ಪಾರ್ವತಿ ನಾಯರ್ ಮತ್ತು ಕಿಶೋರ್ ನಟನೆಯ ರೋಮ್ಯಾಂಟಿಕ್ ‘ಒನ್ಸ್ ಮೋರ್’  ಗೀತೆ ಖುಷಿ ಕೊಡುತ್ತದೆ. ಹೊಸ ಫೀಲು ನೀಡುತ್ತದೆ.

ವಾಸ್ಕೋಡಿಗಾಮ ಕನ್ನಡದ ಮಟ್ಟಿಗೆ ಒಳ್ಳೆ ಸಿನಿಮಾ. ತೀರಾ ಗಂಭೀರವಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಅಂತ, ಇದೇ ವಾಸ್ಕೋಡಿಗಾಮ ಹೇಳಿದ್ದರೆ, ದೇವರಾಣೆ ಯಾರೂ ಕೇಳ್ತಿರಲಿಲ್ಲ. ಆದರೆ, ಈ ವಾಸು ಡಿ. ಗಾಮನಹಳ್ಳಿ ನಗಿಸುತ್ತಾರೆ. ನಲಿಸುತ್ತಾರೆ. ಐಟಂ ಡ್ಯಾನ್ಸು ತೋರುತ್ತಾರೆ. ಮಾರುಕಟ್ಟೆಗೆ ಕರದೆ ಕೊಂಡು ಹೋಗಿ, ಕಾಮನ್​ ಸೆನ್ಸು ಕಲಿಸುತ್ತಾರೆ. ಅಷ್ಟೆಲ್ಲದರ ಹಿಂದಿನ ಈ ಮೇಷ್ಟ್ರ ಉದೇಶ ಒಂದೇ. ಮಕ್ಕಳ ಮನಸ್ಸಿನಂತೆ, ಆಸೆಯಂತೆ ಶಿಕ್ಷಣ ಕೊಡಿಸಿ ಅನ್ನೋದು. ಚಿತ್ರ ನೋಡೋವಾಗ ಎಲ್ಲವೂ ನಿಜವಲ್ಲೇ ಅನಿಸುತ್ತದೆ. ನಮ್ಮ..ನಮ್ಮ ಕಾಲೇಜು ದಿನಗಳಲ್ಲೂ ನೆನಪಾದರೂ ಆಶ್ಚರ್ಯಯಿಲ್ಲ. ಒಮ್ಮೆ ಥಿಯೇಟರ್​ ಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.
-ರೇವನ್