ಮಸುಕು ಬೆಟ್ಟದ ದಾರಿ

ಮಸುಕು ಬೆಟ್ಟದ ದಾರಿ

ಮಸುಕು ಬೆಟ್ಟದ ದಾರಿ - ದತ್ತಾತ್ರಿ  ಎಂ ಆರ್ ಅವರ  ಎರಡನೇ ಕಾದಂಬರಿ. 

ಇವರ ಮೊದಲ   ಕಾದಂಬರಿಯಾದ "ದ್ವೀಪವ ಬಯಸಿ" ಆರ್ಥಿಕ ಕುಸಿತದ ಹಿನ್ನಲೆಯಲ್ಲಿ, ಬೇಲೂರಿನ ಬಳಿಯ ಹಳ್ಳಿಯೊಂದರಲ್ಲಿ ಮತ್ತೆ ಲಾಸ್ ಏಂಜಲೀಸ್ ಸುತ್ತಮುತ್ತ ನಡೆಯುವ ಕಥೆಯಾಗಿದ್ದರೆ, ಈ ಎರಡನೆಯ ಪುಸ್ತಕದಲ್ಲಿ, ಮರೆಯಲಾರದ ಖಾಯಿಲೆ (ಮರೆವಿನ ಖಾಯಿಲೆ ಅಲ್ಲ) ಇರುವ ಒಬ್ಬಾತನನ್ನ ಕೇಂದ್ರವಾಗಿರಿಸಿಕೊಂಡ ಕಾದಂಬರಿ.ಜೀವನದ ಸಣ್ಣಪುಟ್ಟ ವಿವರಗಳೂ ಎಷ್ಟೇ ವರ್ಷಗಳು ಕಳೆದರೂ ಮರೆಯದೇ ಹೋಗುವ ನಿರಂಜನ ಈ ಕಥೆಯ ನಾಯಕ. ಆ ಕಾರಣದಿಂದಲೇ ಶಾಲಾ ಕಾಲೇಜುಗಳಲ್ಲಿ ಬೇರೆಯವರಂತೆ ಯಶಸ್ವಿಯಾಗದೇ ಹೋಗುವ ನಿರಂಜನನ ಐದಾರು ವರ್ಷದ ಬಾಲ್ಯದಿಂದ ಸುಮಾರು ೧೯೭೦ರ ವೇಳೆಗೆ ಆರಂಭವಾಗುವ ಕಥೆ, ಅವನ ಕುಟುಂಬ, ಅವನ ನೆರೆಹೊರೆ, ಗೆಳೆಯರ ಕಥೆಗಳೊಂದಿಗೆ ಬೆಸೆದುಕೊಳ್ಳುತ್ತಾ ಬೆಳೆದು, ಹೊಸ ಶತಮಾನ ಆರಂಭವಾಗುವ ಸಮಯದಲ್ಲಿ ಮಗಿತಾಯ ಹೊಂದುತ್ತೆ. ಇದಕ್ಕಿಂತ ಹೆಚ್ಚು ಹೇಳೋಲ್ಲ, ಓದಿ ನೋಡಿ!

ಕಾದಂಬರಿ ಚಿಕ್ಕಮಗಳೂರಿನ ರತ್ನಗಿರಿ ಬೋರೆ, ಮತ್ತೆ ಮುಳ್ಳಯ್ಯನ ಗಿರಿ ಎರಡನ್ನೂ ಜೀವತುಂಬಿದ ಪಾತ್ರಗಳನ್ನಾಗಿಸಿರುವುದು ಬಹಳ ಹಿಡಿಸಿತು. ಎಪ್ಪತ್ತರ ದಶಕದ ಬೆಳೆಯುತ್ತಿರುವ ಬೆಂಗಳೂರು, ಮತ್ತೆ ಶತಮಾನದಂಚಿನ ಧಾವಿಸುವ ವೇಗದ ಬೆಂಗಳೂರು, ಜೀವನದಲ್ಲಿ ಕಾಣಸಿಗುವ ನ್ಯಾಯಾನ್ಯಾಯಗಳು - ಒಳ್ಳೆಯ, ಕೆಟ್ಟ, ಎಲ್ಲ ರೀತಿಯ ಪಾತ್ರಗಳ ಚಿತ್ರಣ , ಕತೆಯನ್ನು ವೈವಿಧ್ಯಮಯವಾಗಿ, ಸುಲಭವಾಗಿ ಓದಿಸಿಕೊಂಡು ಹೋಗುವಂತೆ ಮಾಡಿವೆ.

ಬಹಳ ಕಾಲದ ನಂತರ, ಓದತೊಡಗಿದ ಮೇಲೆ, ಕೆಳಗಿಡಲು ಮನಸ್ಸಾಗದೇ, ನಾನು ಒಂದೇ ಪಟ್ಟಿಗೆ, ಅದೇ ದಿವಸ ಮುಗಿಸಿದ ಕಾದಂಬರಿ ಇದು,

ದತ್ತಾತ್ರಿ ಅವರೆ, ಹೀಗೇ ಒಳ್ಳೇ ಕಥೆಗಳನ್ನ ಬರೆಯುತ್ತಿರಿ!

http://chukkubukku.com/kagada/1403720414
ಆಸಕ್ತರಿಗೆ, ಈ ಕಾದಂಬರಿಯ ಕೆಲವು ಪುಟಗಳು ಇಲ್ಲಿವೆ: 

ಇ-ಪುಸ್ತಕ ಇಲ್ಲಿ ಖರೀದಿಗಿದೆ: - http://www.vividlipi.com/product/musuku-bettada-dari/

-ಹಂಸಾನಂದಿ 

 

Comments

Submitted by abdul Wed, 11/11/2015 - 14:13

ಹಂಸಾ ಅವರೇ,
ಮಸುಕು ಬೆಟ್ಟದ ದಾರಿ ಯ ಕಥಾ ನಾಯಕನ ಪಾತ್ರ ನನ್ನನು ಹೋಲುವಂತೆ ಕಾಣುವ ಅಂಶಗಳು ಕಾಣುತ್ತಿವೆ. -)
ತಾಪತ್ರಯ ಏನೆಂದರೆ, ಇಲ್ಲಿ ರಿಯಾದ್ ನಲ್ಲಿ, ಕನ್ನಡ ಪುಸ್ತಕಗಳು ಸಿಗೋಲ್ಲ. ಆಮದು ಕಷ್ಟ, ಸೆನ್ಸಾರ್ ಪ್ರಕ್ರಿಯೆಯ ಕಾರಣ. ಊರಿನಿಂದ ಬರುವವರ ಕೈಯ್ಯಲ್ಲಿ ತರಿಸಿ ಓದಬೇಕು. ಧನ್ಯವಾದಗಳು. ತಮಗೂ, ಓದುಗರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.