ಮತ್ತೊಂದು ಡಿಸೆಂಬರ್ 31.....

ಮತ್ತೊಂದು ಡಿಸೆಂಬರ್ 31.....

ಮತ್ತೊಂದು ಡಿಸೆಂಬರ್ 31 ಬಂದು ಹೊಸವರ್ಷವನ್ನು ಬೆಂಗಳೂರಿನ ಜನತೆ ಸ್ವಾಗತಿಸಿದರು. 
ಅರ್ಧರಾತ್ರಿಯಲ್ಲೂ ಮತ್ತೇರಿ ಹೊಸವರ್ಷವನ್ನು ಬರಮಾಡಿಕೊಂಡರು.
ಕುಡಿದು ವಾಹನವನ್ನು ಚಲಾಯಿಸಬೇಡಿ ಅನ್ನುವ ಸರ್ಕಾರ ಅರ್ದರಾತ್ರಿಯ ನಂತರವೂ ಪಬ್ ಹಾಗು ಬಾರ್ ಗಳನ್ನು ತೆರೆದು ಇರಿಸಬಹುದೆಂದು ಒಪ್ಪಿಗೆ ಕೊಟ್ಟಿತ್ತು.

ಮೊದಲೆಲ್ಲ ನೆನಪಿದೆ ಎಂ ಜಿ ರೋಡನ್ನು ಹೊರತುಪಡಿಸಿ ಉಳಿದ ಬಾಗದ ಬೆಂಗಳೂರಿಗರು ಹೊಸವರ್ಷಕ್ಕೆ ತಣ್ಣನೆಯ ಸ್ವಾಗತ ನೀಡುತ್ತಿದ್ದರು. 
ಈಗೆಲ್ಲ ಬದಲಾಗಿದೆ ಬೆಂಗಳೂರಿನ ದಕ್ಷಿಣದ ಬಾಗಗಳಾದ ಬಸವನಗುಡಿ, ಹನುಮಂತನಗರ, ಜಯನಗರ, ಹೊಸಕೆರೆಹಳ್ಳಿಯಂತ ಹಳೆಯ ಸಂಸ್ಕೃತಿಯ ಬೆಂಗಳೂರಿನ ಜನರೇ ಇರುವ ಜಾಗದಲ್ಲಿ ಸಹ ರಾತ್ರಿ ಹನ್ನೊಂದಕ್ಕೆ ಪಟಾಕಿಯ ಅಬ್ಬರ ಪ್ರಾರಂಭವಾಗಿ ಅರ್ಧರಾತ್ರಿ ಕಳೆದ ಎಷ್ಟೋ ಹೊತ್ತಿನವರೆಗೂ ಕೇಳಿಬರುತ್ತಿತ್ತು.
ಎಲ್ಲರೂ ಮಲಗಿರಬಹುದಾದ ಆ ಹೊತ್ತಿನಲ್ಲಿ ಬೈಕ್ ಗಳನ್ನೇರಿದ ಮತ್ತೇರಿದ ಯುವಕರು, ಬೈಕಿನ ಹಾರನ್ನಿನ ಮೇಲಿನ ಬೆರಳು ಕದಲಿಸದೇ, ಅತ್ಯಂತ ವಿಕೃತವಾಗಿ ಕೂಗುತ್ತ ರಸ್ತೆಗಳಲ್ಲಿ ಹಾರಾಡಿದರು. ನಿದ್ದೆ ಮಾಡುತ್ತಿದ್ದ ಮಕ್ಕಳು ಬೆಚ್ಚಿ ಕುಳಿತುಕೊಂಡವು.
ಪಟಾಕಿ ಹಚ್ಚಬೇಡಿ ವಾಯುಮಾಲಿನ್ಯವಾಗುತ್ತದೆ, ಶಬ್ದಕ್ಕೆ ನಾಯಿಗಳು ಪಕ್ಷಿಗಳು ಬೆದರುತ್ತವೆ ಎಂದು ’ದೀಪಾವಳಿ’ ಹಬ್ಬಕ್ಕೆ ಒಂದು ತಿಂಗಳ ಮುಂಚೆ ಶಂಖೂ ಊದುವ ನಾಲಿಗೆಗಳು ಹೊಸವರ್ಷದ ಮದಿರಾಪಾನದ ರುಚಿ ಉಂಡು ಮೌನವಾಗಿದ್ದವು.
ಇದೆಲ್ಲ ಬೆಂಗಳೂರಿನ ಸಂಸ್ಕೃತಿಯಾಗಿರಲಿಲ್ಲ, ಕೇವಲ ಎಂ ಜೀ ರೋಡಿನ ಸಂಸ್ಕೃತಿಯಾಗಿತ್ತು ಎಂದು ಹೇಳಲು ನಾಲಿಗೆ ತಡವರಿಸುತ್ತದೆ, ಎಂ ಜೀ ರೋಡ್ ಎಂದರೆ ಭಾರತದ ಪಿತ ಮಹಾತ್ಮಗಾಂಧಿಯವರ ಹೆಸರಿನಲ್ಲಿರುವ ರಸ್ತೆ. ಇದು ಅಂತಹ ಹೆಸರಿನ ಸಂಸ್ಕೃತಿ ಎನ್ನಲಾದೀತೆ
ಬೆಂಗಳೂರಿನ ಹಲವು ರಸ್ತೆಗಳಿಗೆ , ಬಾಗಗಳಿಗೆ ಯಾರಾದಾರದೋ ಹೆಸರಿನ ಮರುನಾಮಕರಣವಾಗಿದೆ. ಸರ್ಕಾರಕ್ಕೆ ನಿಜಕ್ಕೂ ಮಹಾತ್ಮಗಾಂಧೀಜಿಯವರ ಬಗ್ಗೆ ಕಾಳಜಿ ಇದ್ದಲ್ಲಿ, ತಕ್ಷಣ ಎಂ ಜೀ ರೋಡ್ ಹೆಸರಿನ ರಸ್ತೆಯ ಹೆಸರನ್ನು ಬದಲಿಸಬೇಕಾಗಿ ಕೋರಿಕೆ. 
ನೀವು ಯಾರ ಹೆಸರಿಟ್ಟರು ನಮಗೆ ಸಮ್ಮತ. 
ದಯಮಾಡಿ ಗಾಂಧೀಯವರ ಹೆಸರು ಆ ರಸ್ತೆಗೆ ಬೇಡಾ! 
ಪ್ಲೀಸ್

 

Comments

Submitted by ಗಣೇಶ Sun, 01/03/2016 - 21:39

>>>ದಯಮಾಡಿ ಗಾಂಧೀಯವರ ಹೆಸರು ಆ ರಸ್ತೆಗೆ ಬೇಡಾ!
ಪಾರ್ಥರೆ, ಗಾಂಧಿಯನ್ನು ಮರೆತಾಗಿದೆ. ಈಗ ಅದು ಎಮ್.ಜಿ.ರಸ್ತೆ ಅಷ್ಟೇ.. ಹೆಸರು ಬದಲಾಯಿಸಲು ಹೊರಟರೆ ಇನ್ನೊಂದು ದೊಡ್ಡ ಕದನ ಸುರುವಾಗುವುದು. :(
ಅದರ ಬದಲು ಯುವಕರನ್ನು ಸೆಳೆಯುವಂತಹ ಕಾರ್ಯಕ್ರಮವನ್ನು ನಿಮ್ಮ ಏರಿಯಾದಲ್ಲಿ ನಡೆಸಿ. ನಮ್ಮಲ್ಲಿ(ಅಪಾರ್ಟ್‌ಮೆಂಟ್ನಲ್ಲಿ) ಕೆಲ ವರ್ಷದಿಂದ ಮಕ್ಕಳಿಂದ ಮುದುಕರವರೆಗೆ ಎಲ್ಲರನ್ನು ಸೇರಿಸಿ ಹಾಡು,ಕುಣಿತ,ವಿವಿಧ ಮನರಂಜನೆಕಾರ್ಯಕ್ರಮ,ಸ್ವೀಟು, ಊಟ.. ವರ್ಷದ ಕೊನೆಯದಿನ ಇಟ್ಟುಕೊಂಡು,ಹೊಸವರ್ಷಕ್ಕೆ ಒಬ್ಬರಿಗೊಬ್ಬರು ಶುಭಹಾರೈಸುವೆವು.

Submitted by partha1059 Tue, 01/05/2016 - 10:54

In reply to by ಗಣೇಶ

ನಿಮ್ಮ‌ ಮಾತು ನಿಜ‌ ಗಣೇಶರೆ , ನಾವು ಆಗಲೆ ಆ ಕೆಲಸ‌ ಮಾಡುತ್ತಿರುವೆವು, ನಮ್ಮ‌ ರಸ್ತೆಯಲ್ಲಿ ಇಪ್ಪತ್ತು ಮನೆಗಳವರು ಒಂದಾಗಿ ಇಂತಹ‌ ಕಾರ್ಯಕ್ರಮ‌ ಹಮ್ಮಿಕೊಳ್ಳುತ್ತಿದ್ದೇವೆ. ಅದರೆ ಅದಕ್ಕೆ ಲಿಮಿಟೇಷನ್ ಇದೆ ಅಲ್ಲವ‌, ನಾವು ಬೆಂಗಳೂರಿನ‌ , ನಮ್ಮ‌ ಏರಿಯಾದ‌ ಎಲ್ಲ‌ ಮನೆಗಳನ್ನು ಒಂದು ಗೂಡಿಸುವ‌ ಕೆಲಸ‌ ಮಾಡಲಾರೆವು
ಅಲ್ಲದೆ ಆ ರೀತಿ ಆಸಕ್ತಿ ಇರುವ‌ ಜನ‌ ಬಹಳ‌ ಕಡಿಮೆ. ಈಗೆಲ್ಲ‌ ಬೇರೆಯದೇ ಲೋಕ‌
ಇರಲಿ ಬಿಡಿ,
ಹೊಸವರ್ಷದಲ್ಲಿಯಾದರು ನಿಮ್ಮನ್ನು ಈ ಮೂಲಕ‌ ಸಂದಿಸಿದಂತೆ ಆಯಿತಲ್ಲ‌ :‍)
ಹೊಸ‌ ವರ್ಷದ‌ ಶುಭಾಶಯಗಳು

Submitted by H A Patil Fri, 01/08/2016 - 17:48

ಪಾರ್ಥಸಾರಥಿಯವರಿಗೆ ವಂದನೆಗಳು
ಮತ್ತೊಂದು ಡಿಸೆಂಬರ್ 31 ಒಂದು ಅರ್ಥಪೂರ್ಣ ಲೇಖನ ಬೆಂಗಳೂರಿನ ಹೊಸ ಜಮಾನಾದ ಕುರಿತಾಗಿ ಮನ ಮುಟ್ಟುವಂತೆ ಬರೆದಿದ್ದೀರಿ, ದೀಪಾವಳಿಯಲ್ಲಿ ಪಟಾಕಿ ಹಚ್ಚಿದರೆ ವಾಯು ಮಾಲಿನ್ಯ, ಅದೇ ಪಟಾಕಿ ಹೊಸ ವರ್ಷದಲಿ ಹಚ್ಚಿದರೆ ವಾಯು ಮಾಲಿನ್ಯವಲ್ಲ, ಈ ದ್ವಂದ್ವ ನಿಲುವುಗಳು ಅನೇಕ ಇವೆ, ಇಂದಿನ ಜನ ಸಮೂಹದ ಮನಸ್ಥಿತಿ ಅರ್ಥವಾಗುತ್ತಿಲ್ಲ, ತಡವಾಗಿ ಹೊಸ ವರ್ಷದ ಶುಭಾಶಯಗಳು ಧನ್ಯವಾದಗಳು.