ವಿದಾಯ‌ (ನೀಳ್ಗತೆ) ೧

ವಿದಾಯ‌ (ನೀಳ್ಗತೆ) ೧

     
       
 
   ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ. ಪ್ರತಿವರ್ಷದಂತೆ ಆ ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮಕ್ಕಳೆಲ್ಲಾ ಸೇರಿ ಮನೆ ಕಿಕ್ಕಿರಿದು ತುಂಬಿತ್ತು. ಆದರೆ ಮನೆಯ ಕೊನೆಯ ಅಳಿಯ ರಾತ್ರಿ ಒಂಬತ್ತು ಗಂಟೆಯಾದರೂ ಇನ್ನೂ ಬಂದಿರಲಿಲ್ಲ. ಅವನ ಹೆಂಡತಿ ಸುಮಿತ್ರಾಳಿಗೆ ಗೇಟಿನ ಬಳಿ ಬಂದು ರಸ್ತೆಯತ್ತ ಕಣ್ಣುಹಾಯಿಸಿ ಸಾಕಾಗಿಹೋಗಿತ್ತು. ಅವನ ಮೊಬೈಲ್ ಫೋನಿಗೂ ಮೂರ್ನಾಲ್ಕು ಬಾರಿ ಕರೆ ಮಾಡಿದ್ದಳು. ಆದರೆ ಬಂದ ಉತ್ತರ ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂಬುದು ಮಾತ್ರ. ಇವನನ್ನು ಕಟ್ಟಿಕೊಂಡಂದಿನಿಂದಲೂ ನನ್ನದು ಇದೇ ಪಾಡಾಯಿತು.. ಅಕ್ಕಂದಿರು, ಬಾವಂದಿರು ಸಂತಸದ ಏರುದನಿಯಲ್ಲಿ ಮಾತನಾಡಿಕೊಳ್ಳುತಿದ್ದಾರೆ.. ಅವರ ಮಕ್ಕಳುಗಳೆಲ್ಲಾ ಹೊಸ ಬಟ್ಟೆ ಧರಿಸಿ ಮುಖಗಳಲ್ಲಿ ಇನ್ನಿಲ್ಲದ ಹರ್ಷವನ್ನು ತುಂಬಿಕೊಂಡು ಮನೆಯ ತುಂಬಾ ಓಡಾಡಿ ನಲಿದಾಡುತಿದ್ದಾರೆ.. ಎಂದು ಮನದಲ್ಲಿಯೇ ಅಸಹನೆಯನ್ನು ತುಂಬಿಕೊಂಡು ಕುದಿಯುತಿದ್ದ ಸುಮಿತ್ರಾ ಗೇಟಿನ ಬಳಿ ಹೋಗಿ ರಸ್ತೆಯತ್ತ ಬಗ್ಗಿ ನೋಡಿ ಒಳಗೆ ಹಾಲಿಗೆ ಬಂದೊಡನೆಯೇ, ಅಡುಗೆ ಮನೆಯಿಂದ ಹೊರಗೆ ಬಂದ ಮೂರನೆಯ ಅಕ್ಕ ಪರಿಮಳ ‘ಇನ್ನೂ ನಿಮ್ಮ ಯಜಮಾನರು ಬರಲಿಲ್ಲವೇನೇ ಸುಮೀ..’ ಎಂದು ತುಸು ವ್ಯಂಗವಾಗಿ ಪ್ರಶ್ನಿಸಿ, ಉತ್ತರವನ್ನೂ ನಿರೀಕ್ಷಿಸದೆ ತನ್ನ ರೂಮಿನ ಒಳಗೆ ಹೋಗಿದ್ದು ಕಂಡು ಹೊಟ್ಟೆಯೊಳಗೆ ಬೆಂಕಿ ಹತ್ತಿಕೊಂಡಂತಾಗಿ ಅಲ್ಲಿಯೇ ಇದ್ದ ಸೋಫಾದ ಮೇಲೆ ದೊಪ್ಪನೆ ಕುಸಿದು ಕುಳಿತಳು. ಅಡುಗೆಯ ಮನೆಗೆ ಹೋಗಿ ಅಜ್ಜಿ ಒಬ್ಬಟ್ಟು ಮಾಡಲು ತಯಾರಿಸಿದ್ದ ಸಿಹಿಹೂರಣವನ್ನು ಬಾಯಿಯಲ್ಲಿ ಹಾಕಿಕೊಂಡು ಮೆಲ್ಲುತ್ತಾ ಮಕ್ಕಳೆಲ್ಲಾ ಹಾಲಿನಲ್ಲಿ ಕುಳಿತಿದ್ದರು. ತನ್ನ ಹಿರಿಯಕ್ಕನ ಮಗಳು ಅದಾಗ ತಾನೇ ಎಂಜನಿಯರಿಂಗ್ ಮುಗಿಸಿ ಪ್ರತಿಷ್ಠಿತ ಐ.ಟಿ ಕಂಪೆನಿಯಲ್ಲಿ ಸಾಫ್ಟವೇರ್ ಎಂಜನಿಯರಾಗಿದ್ದ ಸುಸ್ಮಿತಾ ಲ್ಯಾಪ್‍ಟಾಪಿನಲ್ಲಿ ತೋರಿಸುತಿದ್ದ ಮಕ್ಕಳ ಸಿನೆಮಾವೊಂದನ್ನು ಕುತೂಹಲದಿಂದ ವೀಕ್ಷಿಸುತಿದ್ದ ತನ್ನ ಮಕ್ಕಳಾದ ಅಮರ್ ಮತ್ತು ಅನನ್ಯಳ ಕಡೆಗೊಮ್ಮೆ ದಿಟ್ಟಿಸಿ ನೋಡಿದಳು. ಅವರಿಗಿಂತ ದೊಡ್ಡವರಾದ ಇತರ ಅಕ್ಕಂದಿರ ಮಕ್ಕಳು ಅಲ್ಲಿಯೇ ಕುಳಿತು ತಮ್ಮ ಮೊಬೈಲ್ ಪೋನಿನಲ್ಲಿ ಆಟವಾಡುತಿದ್ದರು. ತನ್ನ ಮಕ್ಕಳನ್ನು ಕಂಡು ಯಾಕೋ ಏನೋ ಅವರಿಬ್ಬರೂ ತನ್ನ ಅಕ್ಕಂದಿರ ಮಕ್ಕಳಿಗೆ ಹೋಲಿಸಿದರೆ ದುರದೃಷ್ಟವಂತರು ಎನಿಸಿ ಸುಮಿತ್ರಾಳ ಮನದಲ್ಲಿ ಒಂದು ತರಹದ ಸಂಕಟವಾಯಿತು.
   ಬಾವಂದಿರೆಲ್ಲಾ ಮಹಡಿಯ ಮೇಲಿದ್ದ ಹಾಲಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಾ ಇಸ್ಪೀಟಿನ ರಮ್ಮಿ ಆಟದಲ್ಲಿ ತೊಡಗಿದ್ದರು. ಕಾರು ಓಡಿಸುವುದನ್ನು ಕಲಿತಿದ್ದ ನಾಲ್ಕನೆಯ ಅಕ್ಕನ ಜೊತೆ  ಎರಡನೆಯ ಅಕ್ಕ ಸಂಜೆಯೇ ಶಾಪಿಂಗಿಗೆಂದು ಕಾರಿನಲ್ಲಿ ಹೋಗಿದ್ದಳು. ಅದಾಗ ತಾನೇ ಅವರಿಬ್ಬರೂ ವಾಪಾಸು ಬಂದು ರೂಮಿನಲ್ಲಿದ್ದ ಮೂರನೆಯ ಅಕ್ಕನ ಜೊತೆ ಸೇರಿ ಹರುಷದಿಂದ ದೊಡ್ಡ ದನಿಯಲ್ಲಿ ಮಾತಿಗೆ ಇಳಿದಿದ್ದರು. ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ  ಅಳಿಯಂದಿರೆಲ್ಲಾ ಸೇರಿದಾಗ ಮದ್ಯಪಾನ ಮಾಡುವುದು, ಒಟ್ಟಿಗೆ ಕುಳಿತು ಇಸ್ಪೀಟು ಆಡುವುದು ಸುಮಿತ್ರಾಳ ತಂದೆ ರಂಗಪ್ಪಗೌಡರು ಬದುಕಿದ್ದಾಗಲಿಂದಲೇ ನಡೆದುಬಂದ ಪರಿಪಾಠವಾಗಿತ್ತು. ರಂಗಪ್ಪಗೌಡರೂ ಮದ್ಯಪಾನಪ್ರಿಯಯರಾಗಿದ್ದರು. ಇದರಿಂದಾಗಿ ಈ ಪರಿಪಾಠಕ್ಕೆ ಸುಮಿತ್ರಾಳ ತಾಯಿ ಮಹಾಲಕ್ಷ್ಮಮ್ಮನವರಿಂದಾಗಲೀ ಅಥವಾ ಅವರ ಹೆಣ್ಣುಮಕ್ಕಳಿಂದಾಗಲೀ ಯಾವುದೇ ಆಕ್ಷೇಪವಿರದೆ ರಂಗಪ್ಪಗೌಡರ ನಿಧನದ ನಂತರವೂ ಇದು ಮುಂದುವರೆದಿತ್ತು. ಅವರೆಲ್ಲಾ ಅದೊಂದು ಮೇಲ್ವರ್ಗದ ಕುಟುಂಬಗಳ ಪ್ರತಿಷ್ಟೆಯ ಹವ್ಯಾಸವೆಂದೇ ತಿಳಿದಿದ್ದರು. ಸಿವಿಲ್ ಎಂಜಿನಿಯರಾಗಿ ಖಾಸಗಿ ರಸ್ತೆ ನಿರ್ಮಾಣ ಕಂಪೆನಿಯಲ್ಲಿ ಸೈಟ್ ಎಂಜಿನಿಯರಾಗಿ ಕೆಲಸ ಮಾಡುತಿದ್ದ ಸುಮಿತ್ರಾಳ ಗಂಡ ಹನುಮಂತಯ್ಯನಿಗೆ ಮದ್ಯಪಾನ ಮಾಡುವ ಅಥವಾ ಇಸ್ಪೀಟು ಆಡುವ ಅಭ್ಯಾಸವಿರಲಿಲ್ಲ. ಆ ಮನೆಯ ಕೊನೆಯ ಮಗಳಾಗಿದ್ದ  ಸುಮಿತ್ರಾ ಮದುವೆಯಾಗುವುದಕ್ಕಿಂತ ಮುಂಚಿನಿಂದಲೂ ತನ್ನ ಬಾವಂದಿರೊಂದಿಗೆ ಪ್ರತಿ ಹಬ್ಬಗಳಲ್ಲಿ ರಮ್ಮಿ ಆಡಿ ಹೇಗಾದರೂ ಮಾಡಿ ಒಂದಿಷ್ಟು ದುಡ್ಡು ಗೆದ್ದುಕೊಂಡು ಸಂಭ್ರಮಿಸುತ್ತಾ ಬೆಳೆದವಳು. ಈ ಕಾರಣದಿಂದಾಗಿ ಅವಳಿಗೆ ಹನುಮಂತಯ್ಯನನ್ನು ಮದುವೆಯಾದ ನಂತರ ತನ್ನ ಗಂಡ ಸಾಮಾಜಿಕ ನಡುವಳಿಕೆಗಳನ್ನು ತಿಳಿಯದ ಒಬ್ಬ ಬುದ್ದು ಎಂಬ ಅಸಹನೆ ಹುಟ್ಟಿಕೊಂಡಿತ್ತು. ತನ್ನ ಗಂಡನಿಗೆ ವರ್ಷದ ಮುನ್ನೂರ ಅರವತ್ತೈದು  ದಿನಗಳು ಕೆಲಸ ಮಾಡುವುದನ್ನು ಬಿಟ್ಟು ಬೇರೆ ಏನೂ ತಿಳಿದಿಲ್ಲ.. ವರ್ಷಕ್ಕೊಂದು ಹಬ್ಬದ ದಿನವಾದರೂ ಒಂದು ದಿನ ತನ್ನ ಬಾವಂದಿರಂತೆ ಹೆಂಡತಿ ಮಕ್ಕಳೊಂದಿಗೆ ನಿರುಮ್ಮಳವಾಗಿ ಕಾಲ ಕಳೆಯುವುದು ಬೇಕಾಗಿಲ್ಲ.. ಯಾವಾಗಲೂ ಬರೀ ಕೆಲಸ, ಕೆಲಸ, ಕೆಲಸ.. ಸಂಪಾದಿಸಿರುವುದು ಅಷ್ಟರಲ್ಲಿಯೇ ಇದೆ ಎಂದು ಮನಸ್ಸಿನಲ್ಲಿಯೇ ತನ್ನ ಗಂಡನನ್ನು ಮೂದಲಿಸಿ ಹಳಿದುಕೊಂಡಳು.
   ಮಹಾಲಕ್ಷಮ್ಮನವರು ಅಡುಗೆ ಮನೆಯಲ್ಲಿ ತಮ್ಮ ಹಿರಿಯ ಮಗಳು ಪ್ರಭಾ ಮತ್ತು ಕೆಲಸದ ಮುನಿಯಮ್ಮನೊಂದಿಗೆ ಸೇರಿ ಒಬ್ಬಟ್ಟು ಬೇಯಿಸುತಿದ್ದರು. ಪ್ರತಿದಿನ ಬೆಳಿಗ್ಗೆ ಬಂದು ಮನೆಗೆಲಸಗಳನ್ನೆಲ್ಲಾ ಮುಗಿಸಿಕೊಂಡು ರಾತ್ರಿ ತನ್ನ ಗುಡಿಸಿಲಿಗೆ ವಾಪಾಸಾಗುತಿದ್ದ ಕೆಲಸದ ಮುನಿಯಮ್ಮನೂ ದಿಕ್ಕಿಲ್ಲದ ಒಬ್ಬಂಟಿ ಹೆಂಗಸಾಗಿದ್ದಳು. ತಮ್ಮ ಹೆಣ್ಣಮಕ್ಕಳೆಲ್ಲಾ ಮದುವೆಯಾಗಿ ಅವರವರ ಗಂಡಂದಿರ ಜೊತೆ ತೆರಳಿದ ಮೇಲೆ ಆ ವಿಶಾಲವಾದ ಬಂಗಲೆ ಬಿಕೋ ಎನ್ನತೊಡಗಿತ್ತು. ತದನಂತರ ರಂಗಪ್ಪಗೌಡರು ದೈವಾಧಿನರಾದ ಮೇಲೆ ಆ ವಿಶಾಲವಾದ ಬಂಗಲೆಯಲ್ಲಿ ಒಬ್ಬರೇ ಇರಲು ಬೇಸರವಾಗಿ ಮಧ್ಯವಯಸ್ಸಿನ ಮುನಿಯಮ್ಮನನ್ನು ತಮ್ಮ  ಮನೆಯಲ್ಲಿಯೇ ಇರಿಸಿಕೊಂಡಿದ್ದರು.
   ಒಬ್ಬಟ್ಟು ಬೇಯಿಸುವವವುದರಲ್ಲಿ ನಿರತರಾಗಿದ್ದ ಮಹಾಲಕ್ಷ್ಮಮ್ಮನವರ ಮನದಲ್ಲಿ ಆಗುತಿದ್ದ ತಳಮಳವೇ ಬೇರೆಯದಾಗಿತ್ತು. ರಾತ್ರಿ ಒಂಬತ್ತು ಗಂಟೆಯಾದರೂ ತನ್ನ ಕಿರಿಯ ಅಳಿಯ ಇನ್ನೂ ಬರದೇ ಇರುವುದು ಅವರಿಗೆ ತುಸು ಆತಂಕವನ್ನುಂಟುಮಾಡಿತ್ತು. ಪಾಪ! ಖಾಸಗಿ ಕೆಲಸ.. ಏನು ಒತ್ತಡವೋ ಏನೋ.. ಎಂದು ಮನದಲ್ಲಿಯೇ ಚಿಂತಿಸಿಕೊಂಡು ಅವರೂ ಅಡುಗೆ ಮನೆಯಿಂದ ಮೂರ್ನಾಲ್ಕು ಬಾರಿ ಗೇಟಿನ ಬಳಿ ಬಂದು ಇಣುಕಿ ರಸ್ತೆಯನ್ನೊಮ್ಮೆ  ದೂರದವರೆಗೆ ದಿಟ್ಟಿಸಿ ಒಳಗೆ ಹೋಗಿದ್ದರು. ಗಂಡುಮಕ್ಕಳಿಲ್ಲದ ಮಹಾಲಕ್ಷಮ್ಮನವರಿಗೆ ತಮ್ಮ ಕಿರಿಯ ಅಳಿಯ ಹನುಮಂತಯ್ಯನನ್ನು ಕಂಡಾಗಲೆಲ್ಲಾ ತನ್ನ ಒಡಲಲ್ಲಿ ಹುಟ್ಟಿದ ಮಗನನ್ನೇ ನೋಡಿದಷ್ಟು ವಾತ್ಸಲ್ಯ ಉಕ್ಕಿ ಹರಿಯುತಿತ್ತು.  ಕಷ್ಟಪಟ್ಟು ಕೆಲಸ ಮಾಡಿ ತನ್ನ ಹೆಂಡತಿ ಮಕ್ಕಳಿಗಾಗಿ ಜೀವತೇಯುತಿದ್ದ ಅವನನ್ನು ನೆನೆದು ಅವರಿಗೆ ಆಗಾಗ ಕಣ್ಣುತುಂಬಿ ಬರುತಿತ್ತು. ಮಹಾಲಕ್ಷಮ್ಮನವರಿಗೆ ತಮ್ಮ ಇತರ ಅಳಿಯಂದಿರ ಉದ್ಯೋಗ, ಅಧಿಕಾರ, ಅವರ ಕಾರುಬಾರನ್ನು ಕಂಡು ಅವರೊಂದಿಗೆ ಔಪಚಾರಿಕವಾಗಿ ಒಂದೆರಡು ಮಾತುಗಳನ್ನು ಆಡುವುದನ್ನು ಹೊರತುಪಡಿಸಿ, ಮನಬಿಚ್ಚಿ ಮಾತನಾಡಲು ಹಿಂಜರಿಕೆಯಾಗುತಿತ್ತು. ಅವರೆಲ್ಲರ ಎದುರಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಲೂ ಸಂಕೋಚವಾಗುತಿತ್ತು.  ಆದರೆ ಹನುಮಂತಯ್ಯನ ಬಳಿಯಲ್ಲಿ ಅವರು ಯಾವುದೇ ಸಂಕೋಚ, ಹಿಂಜರಿಕೆಗಳಿಲ್ಲದೆ ಎದುರಿನಲ್ಲಿಯೇ ಕುಳಿತು ಮನಬಿಚ್ಚಿ ಮಾತನಾಡುತಿದ್ದರು. ಇತರ ಅಳಿಯಂದಿರು ಆರ್ಥಿಕವಾಗಿ ಸಬಲರಾಗಿದ್ದು ತಮ್ಮ ಸಂಬಂಧಿಕರೆಲ್ಲಾ ಹೊಟ್ಟೆಕಿಚ್ಚುಪಡುವಂತೆ ಬದುಕುತಿದ್ದರು. ಆದರೆ ತನ್ನ ಕಿರಿಯ ಅಳಿಯ ಸಂಸಾರದ ನೊಗವನ್ನು ಸುಸೂತ್ರವಾಗಿ ಎಳೆಯಲು ಕಷ್ಟಪಡುತಿದ್ದುದನ್ನು ಕಂಡು ಅವರ ಮನ ಕರಗಿ ಕರುಳು ಮಿಡಿಯುತಿತ್ತು. ದೈಹಿಕವಾಗಿ ಸಾಧಾರಣ ರೂಪಿನವನಾಗಿ ಮೇಲ್ನೋಟಕ್ಕೆ ತುಸು ದಡ್ಡನಂತೆ ಕಾಣಿಸುತಿದ್ದರೂ ಅವನ ಅಂತರಂಗದಲ್ಲಿದ್ದ ಸರಳತೆ, ಕಷ್ಟಸಹಿಸ್ಣತೆ, ಹೃದಯವೈಶಾಲ್ಯತೆ, ನಿಷ್ಕಪಟ ಗುಣಗಳನ್ನು ಗಮನಿಸಿ ಬಹಳಷ್ಟು ಹೆಮ್ಮೆಯಾಗುತಿತ್ತು. ರಂಗಪ್ಪಗೌಡರು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣವನ್ನು ಉಳಿಸಿಹೋಗಿದ್ದರು. ಮಹಾಲಕ್ಷಮ್ಮನವರು ತಮ್ಮ ಕಿರಿಯ ಮಗಳು ಮತ್ತು ಅಳಿಯನ ಸಂಸಾರಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಮುಂದಾದರೂ ಸ್ವಾಭಿಮಾನಿಯಾಗಿದ್ದ ಹನುಮಂತಯ್ಯ  ಎಂದೂ ಒಪ್ಪಿಕೊಳ್ಳತ್ತಿರಲಿಲ್ಲ. ಆದರೂ ಮಹಾಲಕ್ಷಮ್ಮನವರು ಕಿರಿಯ ಮಗಳು-ಅಳಿಯನ ಕುಟುಂಬಕ್ಕೆ ಅವಶ್ಯಕತೆಯಿದ್ದಾಗ,  ವಾಪಾಸು ಮಾಡುವಿರಂತೆ.. ತೆಗೆದುಕೊಳ್ಳಿ ಎಂದು ದುಂಬಾಲುಬಿದ್ದು ಹಣದ ಸಹಾಯ ಮಾಡುತಿದ್ದರು. ಹಾಗೆ ಕೊಟ್ಟ ಹಣ ವಿಳಂಬವಾದರೂ ಮತ್ತೆ ಅವರ ಕೈಸೇರುತಿತ್ತು.
  ಅಡುಗೆ ಮನೆಯಿಂದ ಮತ್ತೊಮ್ಮೆ ಹೊರಗೆ ಬಂದು ರಸ್ತೆಯನ್ನೊಮ್ಮೆ ಇಣುಕಿ ನೋಡಿ ಕಳವಳಗೊಂಡು ಹಾಲಿನಲ್ಲಿ ಮುಖ ದಪ್ಪ ಮಾಡಿಕೊಂಡು ಕುಳಿತಿದ್ದ ಸುಮಿತ್ರಾಳ ಕಡಗೊಮ್ಮೆ ನೋಡಿ ‘ಎಲ್ಲೋ ಬಸ್ಸು ಲೇಟಾಗಿರಬಹುದು.. ಹನುಮಂತಯ್ಯನೋರು ಇನ್ನೇನು ಬರಬಹುದು...’ ಎಂದು ಸಮಾಧಾನದ ನುಡಿ ನುಡಿದು ಒಳಗೆ ತೆರಳಿದರು. ಸುಮಿತ್ರಾ ಏನೊಂದೂ ಪ್ರತಿಕ್ರಿಯಿಸದೇ ಹಾಲಿನಲ್ಲಿದ್ದ ಟೀವಿಯ ಕಡೆಗೆ ನೆಟ್ಟ ನೋಟ ಬೀರಿ ಕುಳಿತಿದ್ದಳು. ಮಹಾಲಕ್ಷ್ಮಮ್ಮನವರು ಎಂದೂ ತಮ್ಮ ಕಿರಿಯ ಅಳಿಯನನ್ನು ಅವನ ಅನುಪಸ್ಥಿತಿಯಲ್ಲಯೂ ಏಕವಚನದಲ್ಲಿ ಕರೆಯುತ್ತಿರಲಿಲ್ಲ.
         * * * * * *
   ರಂಗಪ್ಪಗೌಡರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗ್ರಾಮವೊಂದರ ಕೃಷಿಕ ಕುಟುಂಬದ ಹಿರಿಯ ಮಗನಾಗಿದ್ದರು. ಬಿ.ಎ ಪದವಿ ಪಡೆದು ಸರ್ಕಾರದ ಸಚಿವಾಲಯದಲ್ಲಿ ಸಾಮಾನ್ಯ ಗುಮಾಸ್ತನಾಗಿ ಕೆಲಸಕ್ಕೆ ಸೇರಿ ಬೆಂಗಳೂರಿನಲ್ಲಿ ನೆಲೆಸಿದ ಮೇಲೆ ಹಿರಿಯ ಮಗನಾಗಿ ಕೌಟುಂಬಿಕ ಜವಾಬ್ದಾರಿಯನ್ನರಿತು ತಮ್ಮ ತಂಗಿಯರು ಮತ್ತು ತಮ್ಮಂದಿರನ್ನೆಲ್ಲಾ ವಿದ್ಯಾವಂತರನ್ನಾಗಿ ಮಾಡಿ ಅವರುಗಳೆಲ್ಲರ ಮದುವೆ ಮಾಡಿ ಮುಗಿಸಿದಾಗ ವಯಸ್ಸು ಮೂವತ್ತನ್ನು ದಾಟಿತ್ತು. ಆನಂತರ ಅವರು ತಮ್ಮ ನೆರೆಯ ಗ್ರಾಮದ ಮಹಾಲಕ್ಷಮ್ಮನವರನ್ನು ವಿವಾಹವಾಗಿದ್ದರು. ಅವರೂ ಕೂಡ ಏಳನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಓದು-ಬರಹ ಬಲ್ಲವರಾಗಿದ್ದರು. ರೂಪು ಮತ್ತು ಗುಣದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯಂತಿದ್ದ ಪತ್ನಿ ಜೊತೆಗೂಡಿದ ಮೇಲೆ ರಂಗಪ್ಪಗೌಡರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲೆ ಬಂದಿದ್ದರು. ಉದ್ಯೋಗದಲ್ಲಿÀ ಸಂಬಳದ ಜೊತೆಗೆ  ಸಾಕಷ್ಟು ಗಿಂಬಳವೂ ಸಿಗುತಿತ್ತು. ಹಾಗೆಂದು ಅವರೂ ಎಂದಿಗೂ ಯಾರನ್ನೂ ಬಾಯಿಬಿಟ್ಟು ಹಣ ಕೇಳುವುದಾಗಲೀ, ಇಂತಿಷ್ಟೇ ಮೊತ್ತವನ್ನು ಕೊಡಿರೆಂದು ಪೀಡಿಸುವುದಾಗಲೀ ಮಾಡುತ್ತಿರಲಿಲ್ಲ. ಕೊಟ್ಟಷ್ಟು ಹಣ ತೆಗೆದುಕೊಂಡು ನಿಯತ್ತಿನಿಂದ ಅವರ ಕೆಲಸ ಮಾಡಿಕೊಡುತಿದ್ದರು. ಇದರಿಂದಾಗಿ ಅವರಿಗೆ ಅವರ ಸೆಕ್ಷನ್ನಿನಲ್ಲಿ ಒಳ್ಳೆಯ ಹೆಸರೂ ಇದ್ದಿತು. ಸಾಕಷ್ಟು ಪ್ರಭಾವಿ ವ್ಯಕ್ತಿಗಳ ಪರಿಚಯವೂ ಆಗಿದ್ದಿತು. ವೃತ್ತಿಯಲ್ಲಿ ಬಡ್ತಿಯ ಮೇಲೆ ಬಡ್ತಿ ದೊರೆತು ಸಚಿವಾಲಯದಲ್ಲಿ ಉಪಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. 
   ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರಿಗೆ ಒಂದರ ಹಿಂದೆ ಒಂದರಂತೆ ನಾಲ್ಕು ಜನ ಹೆಣ್ಣುಮಕ್ಕಳೇ ಹುಟ್ಟಿದರೂ ಒಂದು ಗಂಡುಮಗುವಾಗಲಿ ಎಂಬ ದೂರದ ಆಸೆಯಿಂದ ಕಾಯುತಿದ್ದರು. ಆದರೆ ಅದು ಈಡೇರದೆ ತಮ್ಮ ಐದನೆಯ ಮತ್ತು ಕೊನೆಯ ಮಗಳು ಸುಮಿತ್ರಾ ಹುಟ್ಟಿದಾಗ ಇನ್ನು ಮಕ್ಕಳು ಸಾಕೆಂಬ ನಿರ್ಧಾರಕ್ಕೆ ಬಂದು ಐದೂ ಜನ ಹೆಣ್ಣುಮಕ್ಕಳನ್ನು ಯಾವುದೇ ಕೊರತೆಯಿಲ್ಲದಂತೆ ಸಾಕಿ, ಎಲ್ಲರನ್ನೂ ಪದವೀಧರೆಯರನ್ನಾಗಿ ಮಾಡಿದರು. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆ ಬನಶಂಕರಿ ಮೊದಲ ಹಂತದಲ್ಲಿ ಆರು ಕೊಠಡಿಗಳ ವಿಶಾಲ ಬಂಗಲೆಯನ್ನು ಕಟ್ಟಿಸಿದರು. ಪ್ರತಿಯೊಬ್ಬ ಮಗಳಿಗೂ ಒಂದೊಂದು ನಿವೇಶನವನ್ನು ಖರೀದಿಸಿದರು. ತಮ್ಮ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಚಿನ್ನದ ಆಭರಣಗಳನ್ನು ಕೊಂಡಿದ್ದರು. ತಮಗಿದ್ದ ಪ