ಒಂದೂರಲ್ಲಿ ಒಂದ್ ಲವ್ ಸ್ಟೋರಿ

ಒಂದೂರಲ್ಲಿ ಒಂದ್ ಲವ್ ಸ್ಟೋರಿ

ಒಂದ್​ ಒಳ್ಳೆ ಸಿನಿಮಾ ನೋಡಿದೆ. ಹೊಚ್ಚ ಹೊಸ ಅನುಭವ ಮೂಡಿತು.ಚಿತ್ರದ ಪಾತ್ರಗಳು ಖುಷಿಕೊಟ್ಟವು. ನಮ್ಮ ನಡುವಿನ ವ್ಯಕ್ತಿಗಳೇ ಅನ್ನೋ ಅನುಭವ. ಕೊಳ್ಳೆಗಾಲದ ಭಾಷೆ ತಿಳಿದವರಿಗೆ, ಈ ಕ್ಯಾರೆಕ್ಟರ್​ ಗಳು ಇನ್ನೂ  ಹತ್ತಿರ. ಚಿತ್ರದ ಹೆಸರು ಭಾಗ್ಯರಾಜ್​.

ಭಾಗ್ಯರಾಜ್​ ಕಥೆ ಇಷ್ಟವಾಗುತ್ತದೆ. ಕಥೆ ಹೇಳಿದರೆ, ಚಿತ್ರ ನೋಡೋ ಕುತೂಹಲ ಕಂಡಿತ ಕಡಿಮೆ ಆಗುತ್ತದೆ. ಕೆಲವು ಹೈಲೈಟ್ಸ್ ಇವೆ. ಹೇಳ್ತಾ ಹೋಗಬೇಕು ಅನಿಸಿತು. ಬರೀತಾಯಿದ್ದೀನಿ.

ಭಾಗ್ಯರಾಜ್ ಚಿತ್ರದಲ್ಲಿ  ನಮ್ಮತನ ಇದೆ. ಕೊಳ್ಳಗಾಲದ ಭಾಷೆಯ ಸೊಗಡು ಅಡಗಿದೆ. ಪಾತ್ರಗಳು ಅದೇ ಭಾಷೆಯಲ್ಲಿಯೇ ಮಾತನಾಡುತ್ತವೆ. ಮನರಂಜನೆ ಕೊಡುತ್ತವೆ. ಕೊಡುವ ಮನರಂಜನೆಯಲ್ಲಿ, ಎಲ್ಲೂ ಶೋಕಿಯಿಲ್ಲ. ಜೋಕು ಇಲ್ಲ. ಹಳ್ಳಿ ಹೈದರ ತುಂಟಾಂಟ, ಮೊಂಡಾಟ ಕಂಡು ಬರುತ್ತವೆ.

ಭಾಗ್ಯರಾಜ್ ಕಣ್ಣಿಗೆ ಹಬ್ಬ ಕೊಡ್ತಾನೆ. ಹಳ್ಳಿಯ ಜೀವಂತಿಕೆಯನ್ನ ಕಟ್ಟಿಕೊಡ್ತಾನೆ. ಭಾಗ್ಯರಾಜ್​ ಅಂದ್ರೆ ಇಲ್ಲಿ  ಒಬ್ಬನ ಹೆಸರು ಅಲ್ಲವೇ ಅಲ್ಲ. ಅದರಲ್ಲಿ ಹುಡುಗಿ ಹೆಸರು ಇದೆ. ಭಾಗ್ಯ ಅನ್ನೋದು ನಾಯಕಿಯ ಪಾತ್ರದ ಹೆಸರು. ರಾಜ್ ಈ ಕಥೆಯ ಕಥಾನಾಯಕ. ಎಲ್ಲೂ ಇವರು ನಾಯಕ-ನಾಯಕಿ ಅನ್ನಿಸೋದಿಲ್ಲ. ಝರಾಕ್ಸ್ ಮಾಡೋ ಹುಡುಗ ರಾಜಾ. ಕೇಬಲ್ ಆಫೀಸ್ ನಲ್ಲಿ ದುಡಿಯೋ  ಭಾಗ್ಯ ಅಂತಲೇ ನಿಮ್ಮ ಮನವನ್ನ ತಟ್ಟುತ್ತಾರೆ.

ಭಾಗ್ಯರಾಜ್ ಚಿತ್ರದಲ್ಲಿ ಒಂದು ನೋಟೀಸ್ ಮಾಡಬಹುದು. ಬದುಕಿನ ಸತ್ಯಗಳು ಯತಾವತ್ತು ಚಿತ್ರರೂಪ ಪಡೆದಿರೋ ಅನುಭವ, ನೋಡುಗರಿಗೆ ಬರುತ್ತದೆ. ಕಾರಣ, ಚಿತ್ರದ ಪಾತ್ರಗಳು ನೈಜವಾಗಿಯೆ ಇವೆ. ಎಲ್ಲೂ ಅವು ಸಿನಿಮಾ ಪಾತ್ರಗಳು ಅನಿಸೋದೆಯಲ್ಲ. ಹಂಗೆ ನಿರ್ದೇಶಕ  ದೀಪಕ್ ಮದುವನಹಳ್ಳಿ  ಪಾತ್ರಗಳನ್ನ ನಟರಿಂದ ತೆಗೆಸಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಭರವಸೆ ಮೂಡಿಸಿರೋ ದೀಪಕ್ ಉತ್ತಮ ಕಥೆಯನ್ನ ತುಂಬಾ ಚೆನ್ನಾಗಿಯೇ ಹೇಳಿದ್ದಾರೆ.

ಭಾಗ್ಯರಾಜ್ ಒಂದು ರೀತಿ ಹಲವರ ಭಾಗ್ಯವನ್ನ ತೆರೆದಿದೆ. ನಿರ್ದೇಶಕ ದೀಪಕ್ ಮದುವನಹಳ್ಳಿ ಈ ಮೂಲಕ ಪರಿಚಯವಾಗುತ್ತಿದ್ದಾರೆ. ಲೂಸ ಮಾದ ಯೋಗಿ ಸೋದರ ಮಹೇಶ್ ನಾಯಕರಾದ ಮೊದಲ ಚಿತ್ರದಲ್ಲಿಯೇ ಉತ್ತಮ ನಟ ಎಂಬ ಭರವಸೆ ತಂದುಕೊಟ್ಟಿದ್ದಾರೆ. ಭಾಗ್ಯರಾಜ್ ಕನ್ನಡಿಗರ ಸಿನಿಮಾ. ಕನ್ನಡ ನೆಲದ ಕಥೆ. ಕನ್ನಡಿಗರು ನೋಡಬಹುದಾದ ಫಿಕ್ಚರ್.

ಚಿತ್ರದಲ್ಲಿ ಹಾಡುಗಳು ಉತ್ತಮವಾಗಿವೆ. ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಸಂಗೀತ ಖುಷಿ ಕೊಡುತ್ತವೆ. ಆದರೆ, ಪ್ರತಿ ಹಾಡು  ಕಥೆಯ ಸಂಕ್ಷಿಪ್ತ ಚಿತ್ರಣ ನೀಡುತ್ತವೆ. ‘ಮಂಗನ ಕೈಲಿ ಮಾಣಿಕ್ಯ’ ಹಾಡು ಪಾತ್ರಗಳ ಯೋಗ್ಯತೆ ತಿಳಿಸುತ್ತದೆ. ಯೋಗಿ ಇದರಲ್ಲಿ ಕಾಣಿಸಿಕೊಂಡು, ಸೋದರನ ಸಿನಿಮಾಕ್ಕೆ ಪ್ರಮೋಷನ್ ಮಾಡಿದ್ದಾರೆ.

ಚಿತ್ರದ ಇನ್ನೊಂದು ಹಾಡಿದೆ. ಇದು ಭಾಗ್ಯ ಮತ್ತು ರಾಜ್ ಲವ್ ಸ್ಟೋರಿ ಹೇಳುತ್ತದೆ. ಪ್ರೇಮದ ಮಧುರವಾದ ಪರಿಯನ್ನ ಚಿತ್ರಿಸುತ್ತದೆ. ‘ಗೀಯಾ ಗೀಯಾ’ ಅಂತ ಶುರುವಾಗಿ, ಒಳ್ಳೆ ಖಯಾಲಿ ಅಂತ ಆಗಾಗ ಕಾಡುತ್ತದೆ. ಆದರೆ, ‘ನಕಲು ಮಾಡಬೇಡಿ ಮನುಜರೇ’ ಅನ್ನೋ ಗೀತೆ ಚಿತ್ರದ ಥೀಮ್ ಹೇಳುತ್ತದೆ. ಈ ಒಂದು ಟೆಕ್ನಿಕ್ ಸಿನಿಮಾರಂಗಕ್ಕೆ ಹೊಸದು ಅನ್ನೋ ಭಾವನೆ ತಂದು ಕೊಡುತ್ತದೆ.

ಭಾಗ್ಯರಾಜ್ ಚಿತ್ರವನ್ನ ನಿರ್ಮಿಸಿರೋದು ಸಿದ್ಧರಾಜು. ದುನಿಯಾ, ಸಿದ್ಲಿಂಗು ಚಿತ್ರ ಮಾಡಿದವರು. ಲುಸ ಮಾದ ಯೋಗಿ ತಂದೆ ಕೂಡ ಹೌದು. ತಮ್ಮ ಮೊದಲ ಪುತ್ರ ಮಹೇಶ್ ಗಾಗಿಯೇ ಈ ಸಿನಿಮಾ ಮಾಡಿದ್ದಾರೆ. ಸಾಕಷ್ಟು ಕಷ್ಟಪಟ್ಟು ಮಾಡಿರೋ ಈ ಚಿತ್ರವನ್ನ, ಜನ ಸ್ವೀಕರಿಸಬೇಕು. ಉತ್ತಮ ಕಥೆಯ ಚಿತ್ರ ಇದಾಗಿರೋದರಿಂದ, ಜನ ಚಿತ್ರವನ್ನ ಗೆಲ್ಲಿಸುತ್ತಾರೆಂಬ ನಂಬಿಕೆ ತಂಡದಲ್ಲಿ ಬಲವಾಗಿದೆ.

-ರೇವನ್
 

Comments