ಅಹಲ್ಯಾ ಸಂಹಿತೆ - ೦೯

ಅಹಲ್ಯಾ ಸಂಹಿತೆ - ೦೯

ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..!

ಹೀಗಾಗಿ ಕವಚದ ಅಂತಿಮ ಛೇಧನದ ಹೊತ್ತಲ್ಲಿ, ಅದರಲಿದ್ದ ಮಿಕ್ಕುಳಿದ ತಾಮಸ ಶಕ್ತಿಯೆಲ್ಲ ಭಯಂಕರ ವಿಷಾನಿಲದ ರೂಪತಾಳಿ, ಎದುರಾಳಿಯ ಅರಿವಿಗೆ ಬರುವ ಮೊದಲೆ ಅವನನ್ನು ನಿಶ್ಚೇಷ್ಟಿತನನ್ನಾಗಿಸಿ ಮರಣಿಸುವಂತೆ ಮಾಡಿಬಿಡುತ್ತಿತ್ತು... ಈ ಕಾರಣದಿಂದಲೆ ತಪದಲಿದ್ದ ನರನು ತಾನು ಕದನಕ್ಕೆ ತೊಡಗುವ ಮೊದಲು ತನ್ನ ತಪಃಶಕ್ತಿಯ ತುಣುಕನ್ನೆ ಬಳಸಿ, ನಾರಾಯಣನ ದೇಹಸತ್ವ ನಿಶ್ಚಲವಾಗುವ ಮುನ್ನವೆ ಆ ವಿಷನಿಗ್ರಹವಾಗಿ ನಿಷ್ಪಲವಾಗುವಂತೆ ಮಾಡಬೇಕಿತ್ತು. ನರನು ಕಾದಾಡುವ ಹೊತ್ತಲ್ಲಿ ಆ ಕೆಲಸ ನಾರಾಯಣನ ಪಾಲಿಗೆ... ಹೀಗೆ ಒಂದು ದಶಲಕ್ಷ ವರ್ಷಗಳವರೆಗು ತಮ್ಮ ಜೋಡಿ ಕದನವನ್ನು ಕಾಪಾಡಿಕೊಂಡು ಹೋಗುವುದರಿಂದಷ್ಟೆ ಸಹಸ್ರ ಕವಚನ ಅಂತಿಮವಧೆ ಸಾಧ್ಯವಾಗುತ್ತಿದ್ದುದು...!

ಹೀಗೆ ಒಂದೊಂದೇ ಕವಚಕ್ಕು ಸಹಸ್ರ ವರ್ಷಗಳನ್ನು ವ್ಯಯಿಸುತ್ತ ಎಲ್ಲಾ ಸಹಸ್ರ ಕವಚಗಳನ್ನು ನಿಗ್ರಹಿಸುವುದೆಂದರೆ ಸಾಮಾನ್ಯದ ಮಾತೆ ? ಆ ಕಾಲಧರ್ಮದ ಗಣನೆಯಲ್ಲೆ ಹುಚ್ಚು ಹಿಡಿದಂತಾಗಿ ಹೋಗುತ್ತದೆ.. ಆದರೆ ಈ ಯಾತ್ರೆಯಲ್ಲಿ ಈಗಾಗಲೆ ಅಂತಿಮ ಹಂತಕ್ಕೆ ಬಂದಾಗಿಬಿಟ್ಟಿದೆ.. ಇನ್ನುಳಿದಿರುವುದು ಎರಡೆ ಎರಡು ಕವಚ... ಈ ಬಾರಿ ನಾರಾಯಣನ ಕದನ ಮುಗಿದರೆ ಅದರೊಂದಿಗೆ ಮಿಕ್ಕುಳಿಯುವುದು ಕಡೆಯ ಕವಚ ಮಾತ್ರವೆ.. ಅದನ್ನು ಹೇಗಾದರೂ ಈ ಯುಗದ ಅಂತಿಮವಾಗುವುದರೊಳಗೆ ನಿಗ್ರಹಿಸಿಬಿಟ್ಟರೆ ಅಲ್ಲಿಗೆ ಈ ಸಾತ್ವಿಕ ಯಜ್ಞದ ಪೀಡಕವಾಗಿರುವ ಪ್ರಮುಖ ತಾಮಸಿ ಅಸುರ ಶಕ್ತಿಯೊಂದರ ದಮನವಾದಂತೆ...

ನರ ನಾರಾಯಣರು ದೈವಿಕ ಅಂಶದಿಂದ ಜನಿಸಿದವರಾದ ಕಾರಣ ಅವರು ತಪ ಮಾಡಿಯೆ ಏಕೆ ಯುದ್ಧಕ್ಕೆ ನಿಲ್ಲಬೇಕಾಯ್ತು ? ಎನ್ನುವ ಜಿಜ್ಞಾಸೆ ಸಹಜ. ಅದಕ್ಕೂ ಕಾರಣವಿರದಿರಲಿಲ್ಲ..

ಅದರ ಮುಖ್ಯ ಕಾರಣ ಅಡಗಿದ್ದುದ್ದು ಪ್ರತಿವಸ್ತುವಿನ ತತ್ವದಲ್ಲಿ..!

ಮೂಲತಃ ಪಂಚಭೂತ ದ್ರವ್ಯದಿಂದಾದ ಜೈವಿಕ ಕವಚವನ್ನು ಹರಿಯುವ ಪ್ರಕ್ರಿಯೆಯಲ್ಲಡಗಿತ್ತು ಆ ಗುಟ್ಟು. ಜೈವಿಕ ಕವಚದ ಹುಟ್ಟಿನ ಮೂಲವನ್ನೆ ಹಿಡಿದು, ಅದರ ವಿರುದ್ಧ ದಿಕ್ಕಿನ ಪ್ರಕ್ರಿಯೆಯಲ್ಲಷ್ಟೆ ಅದನ್ನು ನಾಶಪಡಿಸಲು ಸಾಧ್ಯವಿತ್ತು. ಅರ್ಥಾತ್, ಕವಚದಲ್ಲಿ ಶೇಖರಿತವಾದ ಅಪಾರ ಋಣಾತ್ಮಕ ಶಕ್ತಿಯನ್ನು ಅದರಷ್ಟೆ ಸಮಬಲದ ಧನಾತ್ಮಕ ಶಕ್ತಿಯಿಂದ ನಿಷ್ಕ್ರಿಯಗೊಳಿಸಿದ ನಂತರವಷ್ಟೆ ಅದರ ಶಕ್ತಿ ನಶಿಸುತ್ತಿದ್ದುದು. ಹೇಳಿ ಕೇಳಿ ಸಹಸ್ರಕವಚ ದಾನವ; ತಾಮಸತ್ವವೆನ್ನುವುದು ಅವನ ಹುಟ್ಟು ಗುಣ. ಹೀಗಾಗಿ ಕವಚ ರೂಪದಲ್ಲಿ ಸಮಷ್ಟಿಸಿದ ಅಸುರಿ ಶಕ್ತಿಯೆಲ್ಲ ಋಣಾತ್ಮಕ ತಾಮಸಿ ರೂಪದಲ್ಲಿರುವುದು ಸಹಜವೆ ಆಗಿತ್ತು.

ಆದರೆ ನರನಾರಾಯಣರ ತೊಡಕಿದ್ದುದು ಇಲ್ಲೆ... ಆ ಋಣಾತ್ಮಕತೆಯನ್ನು ಅಧಿಗಮಿಸಿ ಮೆಟ್ಟಿ ನಿಲಬಲ್ಲ ಧನಾತ್ಮಕ ಶಕ್ತಿಯನ್ನು ಕ್ರೋಢೀಕರಿಸಿದಾಗಲಷ್ಟೆ ಗೆಲುವು ಸಾಧ್ಯವಿದ್ದುದು. ಅಂದರೆ ಅಸೀಮ ಮನೋಬಲದ ಧನಾತ್ಮಕ ಸಾತ್ವಿಕ ಶಕ್ತಿಯಿದ್ದರೆ ಮಾತ್ರ ಸಾಲದು; ಜತೆಗೆ ಕ್ಷಾತ್ರಿಯ ತೇಜದ ರಾಜಸಶಕ್ತಿಯನ್ನು ಸೇರಿಸಿದರಷ್ಟೆ ಆ ಕದನದಲ್ಲಿ ಗೆಲ್ಲಲು ಸಾಧ್ಯ. ಸಹಸ್ರಬಾಹುವಿನ ವೀರತ್ವ, ಶೌರ್ಯವೇನು ಕಡಿಮೆಯದಲ್ಲವಲ್ಲ ? ತಮ್ಮ ಸಾತ್ವಿಕ ಮತ್ತು ರಾಜಸದ ಸಂಯುಕ್ತ ಬಲದಿಂದಲೆ ಅಸುರನ ತಾಮಸ ಮತ್ತು ರಾಜಸದ ಸಂಯುಕ್ತ ಬಲದ ಮೇಲೆ ಗೆಲುವು ಸಾಧಿಸಬೇಕು; ಆ ಪ್ರಕ್ರಿಯೆಯಲ್ಲಿ ನಶಿಸಿಹೋದ ತೇಜೋಬಲದ ಪುನರುತ್ಥಾನಕ್ಕಾಗಿ ಮತ್ತೆ ತಪಸ್ಸಿನಲ್ಲಿ ಕೂತು ಮುಂದಿನ ಸುತ್ತಿಗೆ ಸಿದ್ದರಾಗಬೇಕು - ಮತ್ತದೆ ಧನಾತ್ಮಕ ಶಕ್ತಿಯನ್ನು ಸಮಷ್ಟಿಸುತ್ತ.

ಸಹಸ್ರಕವಚನಲ್ಲಿದ್ದ ಶಕ್ತಿಮೂಲ ವಸ್ತುತತ್ವದಿಂದ ಉದ್ಭವಿಸಿದ್ದು ಎಂದಿಟ್ಟುಕೊಂಡರೆ, ಅದನ್ನು ಪ್ರತಿರೋಧಿಸಿ, ನಿರ್ಬಂಧಿಸಿ, ನಿಷ್ಕ್ರಿಯವಾಗಿಸಲು ನರನಾರಾಯಣರು ಪ್ರತಿ-ವಸ್ತುವಿನ ತತ್ವದ ಮೊರೆ ಹೋಗಬೇಕಿತ್ತು. ವಸ್ತುತತ್ವದ ಸರಕೇನೊ ಅವರಲ್ಲೂ ಹೇರಳವಾಗಿದ್ದರು, ಪ್ರತಿ-ವಸ್ತು ತತ್ವದ ಸ್ವರೂಪದಲ್ಲಿ ಇಲ್ಲದ ಕಾರಣ, ತಪಸ್ಸಿನ ಮೊರೆ ಹೊಕ್ಕು ತಮ್ಮೆಲ್ಲ 'ವಸ್ತುಶಕ್ತಿ'ಯನ್ನು 'ಪ್ರತಿವಸ್ತುಶಕ್ತಿ'ಯಾಗಿ ಪರಿವರ್ತಿಸಿಕೊಳ್ಳಬೇಕಿತ್ತು - ಅಂತರಂಗದ ಮಾನಸಿಕ ಶಕ್ತಿಯನ್ನೆ ದ್ರವ್ಯವಾಗಿ ಬಳಸಿಕೊಳ್ಳುತ್ತ. ಆ ಕಾರಣದಿಂದಲೆ ನಡುವಿನ ಅಸ್ಥಿರತೆಯ ಪ್ರಶ್ನೆಯೂ ಉದ್ಬವಿಸುತ್ತಿದ್ದುದ್ದು. 

ಪರಿವರ್ತನೆಯ ಪ್ರತಿ ಮೆಟ್ಟಿಲಲ್ಲು ಹಂತ ಹಂತವಾಗಿ ರೂಪಾಂತರವಾಗುತ್ತ ಹೋಗುತ್ತಿದ್ದ ಈ ಶಕ್ತಿ, ಕೊನೆಯ ಹಂತದಲ್ಲಿ ದಾನವ ಶಕ್ತಿಯನ್ನು ನೀಗಿಸಲು ಬೇಕಾದ ಗರಿಷ್ಠ ಮಟ್ಟವನ್ನು ತಲುಪುತ್ತಿತ್ತಾದರು, ಯಾವುದೆ ಕಾರಣದಿಂದ ಯಾವುದೆ ಹಂತದಲ್ಲಿ ಅಡ್ಡಿ, ತೊಡಕುಂಟಾದರು ಆ ಹಂತದ ಶಕ್ತಿಯ ಅಸ್ಥಿರ ಸ್ಥಿತಿಯ ದೆಸೆಯಿಂದಾಗಿ ಶೇಖರಿತವಾದದ್ದೆಲ್ಲ ಕರಗಿ ಮತ್ತೆ ಮೊದಲಿನಿಂದ ಆರಂಭಿಸಬೇಕಾಗುತ್ತಿತ್ತು. ಮೊದಲೆ ಸಹಸ್ರವರ್ಷಗಳ ಸಿದ್ದತೆ; ಅದರಲ್ಲಿ ತಡೆಯಾಯ್ತೆಂದರೆ ಈ ಕಾಲದ ಪರಿಧಿ ಇನ್ನೂ ವಿಸ್ತಾರವಾಯ್ತೆಂದೆ ಲೆಕ್ಕ. ಆ ಕಾರಣದಿಂದಾಗಿಯೆ ನರ ನಾರಾಯಣರಿಬ್ಬರು ಯಾರ ಸಂಪರ್ಕವನ್ನೂ ಇಟ್ಟುಕೊಳ್ಳದೆ, ಬದರೀಕಾಶ್ರಮದ ನಿಗೂಢ ತಾಣದಲ್ಲಿ ನೆಲೆಸಿ ಏಕಾಗ್ರತೆಗೆ ಭಂಗ ಬರದಂತೆ ತಪೋನಿರತರಾಗಿದ್ದುದ್ದು.

ಈಗಾಗಲೆ ನಿರಂತರ ಕದನದಲ್ಲಿ ನಿರತರಾಗಿದ್ದರೂ ಅವರ ಸಾಧನೆಯ ಛಲ, ಮನೋಸ್ಥೈರ್ಯ ಇನಿತೂ ಕುಗ್ಗಿಲ್ಲ - ಈಗಾಗಲೆ ಒಂಭೈನೂರ ತೊಂಭತ್ತೆಂಟು ಕದನಗಳನ್ನು ಮುಗಿಸಿಯಾಗಿದ್ದರು ಸಹ...! ಸಹಸ್ರಕವಚನ ಪ್ರತಿ ಕವಚವನ್ನು ಅಷ್ಟೆ ಬಾರಿ ಛೇಧಿಸುತ್ತ ಬಂದ ಕಾರಣ, ಈಗಿನ್ನುಳಿದಿರುವುದು ಎರಡೆ ಎರಡು ಕವಚ ಮಾತ್ರ. ಅದರಲ್ಲೀಗಾಗಲೆ ಒಂದು ಹೋರಾಟ ನಡೆಯುತ್ತಾ ಇದೆ - ನಾರಾಯಣನ ಜತೆಗೆ. ಆ ಕದನದ ಸಹಸ್ರವರ್ಷಗಳು ಮುಗಿಯುವುದರೊಳಗೆ ನರನ ತಪಸ್ಸು ಮುಗಿದಿರಬೇಕು - ಕಟ್ಟ ಕಡೆಯ ಸಾವಿರದನೆ ಹೋರಾಟ ಆರಂಭಿಸಲು..

ಇನ್ನೇನು ಹಿಡಿದ ಕಾರ್ಯ ಪೂರ್ಣಗೊಳ್ಳುವ ಕಾಲ ಹತ್ತಿರವಾಗುತ್ತಿದೆಯೆಂಬ ನಿರಾಳತೆ ಒಂದೆಡೆಯಾದರೆ ಅದೇ ಹೊತ್ತಿನಲ್ಲಿ ಮತ್ತೊಂದು ಆತಂಕವೂ ಕಾಡಿದೆ.. ಈ ಕಡೆಯ ಬಾರಿಯ ಸಹಸ್ರವರ್ಷ ಎಂದಿನಂತದ್ದಲ್ಲ ; ಅದು ಯುಗಸಂಧಿ ಕಾಲ. ಸತ್ಯಯುಗವು ಅಂತ್ಯವಾಗಿ ತೇತ್ರಾಯುಗದತ್ತ ಕಾಲಿಡುವ ಸಮಯ... ಅಂದರೆ ಆ ಯುಗಸಂಧಿಯ ರೂಪಾಂತರವನ್ನು ನಿಭಾಯಿಸುವ ಪ್ರಳಯವು ಆ ಸಮಯದಲ್ಲೆ ಸಂಭವಿಸಲಿದೆ. ಅದು ಎಂದು, ಹೇಗೆ ಸಂಭವಿಸಲಿದೆಯೆಂದು ಚೆನ್ನಾಗಿ ಬಲ್ಲ ನರನಾರಾಯಣರು ಆ ಆಧಾರದ ಮೇಲೆ ಲೆಕ್ಕ ಹಾಕಿಯೆ ತಪಸಿಗೆ ಕುಳಿತದ್ದು - ಪ್ರಳಯದ ಹೊತ್ತಿಗೆ ಮುನ್ನ ಸಹಸ್ರಕವಚನ ಎಲ್ಲಾ ಸಹಸ್ರ ಅವತಾರಗಳನ್ನು ಮುಗಿಸಿಬಿಡಬೇಕೆಂದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಮಿಕ್ಕುಳಿದ ಕವಚಶಕ್ತಿಯ ನಿಗ್ರಹಕ್ಕಾಗಿ ಮತ್ತೆ ಮುಂದಿನ ಯುಗದಲ್ಲಿಯೂ ಜನ್ಮವೆತ್ತಿ ಶ್ರಮಿಸಬೇಕಾಗುತ್ತದೆ.. ಅದು ಮತ್ತಷ್ಟು ಪ್ರಯಾಸದ, ಸಂಕೀರ್ಣತೆಯ ವಿಷಯ. ಅದಕ್ಕನುವು ಮಾಡಿಕೊಡದಂತೆ ಈ ಯುಗದಲ್ಲೆ ಎಲ್ಲಾ ಮುಗಿಸಿಬಿಡುವ ಹವಣಿಕೆ ನರನಾರಾಯಣರದು - ಅವರ ಈ ಮಹಾಕಾರ್ಯಕ್ಕೆ ಯಾವುದೂ ಅಡ್ಡಿ ಆತಂಕ ಬರದಿದ್ದರೆ.

ಆದರೆ ವಿಧಿ ನಿಯಮದ ತಿದಿಯೊಳಗಿನೊಳಗುಟ್ಟನ್ನು ಬಲ್ಲವರಾರು ? ಅದುವರೆವಿಗು ಅವರಿಬ್ಬರ ಬಗ್ಗೆ ತಲೆ ಕೆಡಿಸಿಕೊಂಡಿರದಿದ್ದ ಇಂದ್ರನೂ, ಈ ಕಡೆಯ ಹಂತದಲ್ಲಿ ಇದ್ದಕ್ಕಿದ್ದಂತೆ ಪ್ರಚೋದಿತನಾಗಿ ಅವರ ತಪೋಭಂಗಕ್ಕಿಳಿಯುವ ಅವಸರವಾದರೂ ಏನಿತ್ತೊ ? ದೇವರಾಜನೂ ನಾರದರೊಡನೆ ಹಾಗೆಯೆ ವಾದಿಸಿದ್ದ - ಒಂಭೈನೂರಕ್ಕೂ ಮೀರಿದ ತಪೋಕದನಗಳಲ್ಲಿ ನಿರತರಾಗಿರುವ ಅವರಿಬ್ಬರಿಗೆ ತನ್ನ ಪಟ್ಟದ ಮೇಲೇಕೆ ಆಸೆ ಬಂದೀತು ? ಹಾಗಿದ್ದರೆ ಇಷ್ಟು ಹೊತ್ತಿಗಾಗಲೆ ಬಂದು ಆಕ್ರಮಿಸಿಬಿಡಬಹುದಿತ್ತಲ್ಲಾ? ಎಂದು. ಆಗ ನಾರದರು ನುಡಿದಿದ್ದು ದೇವೇಂದ್ರನ ಕಿವಿಯಲ್ಲಿನ್ನು ರಿಂಗಣಿಸುತ್ತಿತ್ತು..

" ಅಯ್ಯೋ ಮೂಢಾ..! ಅಷ್ಟನ್ನು ಕಾಣಲಾಗುವುದಿಲ್ಲವೆ ನಿನ್ನ ಸೂಕ್ಷ್ಮಮತಿಗೆ ? ನರನಾರಾಯಣರಿಗೆ ಇಲ್ಲಿಯವರೆವಿಗು ಬೇರಾವ ಮಹತ್ವಾಕಾಂಕ್ಷೆಯೂ ಇರಲಿಲ್ಲ - ಸಹಸ್ರಕವಚನ ವಧೆಯ ಹೊರತಾಗಿ. ಆದರೀಗ ಆ ಕಾರ್ಯ ತನ್ನ ಅಂತಿಮ ಹಂತ ಮುಟ್ಟುತ್ತಿದೆ.. ಅವನ ವಧೆಯಾದ ಮೇಲೆ ಅವರಿಬ್ಬರ ಶಕ್ತಿ-ಸಾಮರ್ಥ್ಯ-ತಪೋಬಲಗಳು ನಷ್ಟವಾಗಿ ಹೋಗುವುದೇನು ? ನಿರಂತರ ಕದನೋತ್ಸಾಹದಿಂದ ಹುರಿಗೊಂಡ ಆ ಕ್ಷಾತ್ರತೇಜ ಎಲ್ಲಾ ಮುಗಿಯಿತೆಂದು ಮೂಗು ಹಿಡಿದು ಕಂದಾಹಾರ ಸೇವಿಸುತ್ತಾ ತಪಸ್ಸಿಗೆ ಕೂಡುವುದೆಂದುಕೊಂಡೆಯಾ ? ಆ ಅಸೀಮ ಬಲ, ಸಾಮರ್ಥ್ಯದ ಕ್ಷಾತ್ರತೇಜ ಅವರನ್ನು ಸುಮ್ಮನೆ ಕೂಡಬಿಡುವುದಿಲ್ಲ. ಆ ಬಲದ ಮುಂದೆ ಭೂಲೋಕದ ಯಾವ ರಾಜರೂ ತಾನೆ ಅವರ ಸರಿಸಾಟಿಯಾಗಿ ನಿಲ್ಲಲು ಸಾಧ್ಯ ? ಅಂದಮೇಲೆ ಅವರ ಕಣ್ಣು ಅಮರಾವತಿಯ ಮೇಲೆ ಬೀಳುವುದಿಲ್ಲ ಎಂದು ಹೇಗೆ ಭಾವಿಸುವೆ ? ಆ ಮಹತ್ತರ ಸಾಧನೆಯ ನಂತರ ಅವರ ಕೀರ್ತಿ ಪ್ರತಿಷ್ಠೆಗೆ ಶೋಭೆ ತರುವಂತಹ ಸ್ಥಾನಮಾನವೆಂದರೆ ಇಂದ್ರಪದವಿ ತಾನೆ ? ಯೋಚಿಸಿ ನೋಡು - ಸಾಧುವೊ, ಅಸಾಧುವೊ ಸಾಧ್ಯತೆಯಂತು ಖಂಡಿತ ಇದೆ.. ಇದುವರೆವಿಗು ಆ ಭೀತಿ ಇರಲಿಲ್ಲ ನಿಜ.. ಆದರೆ ಇನ್ನು ಮುಂದೆಯೂ ಇಲ್ಲ ಎಂದರೆ ನನಗೆ ನಂಬಿಕೆಯಿಲ್ಲ.."

ಆ ಮಾತು ಕೇಳಿದ್ದಂತೆ ಎದೆ ಧಸಕ್ಕೆಂದಿತ್ತು ದೇವೇಂದ್ರನಿಗೆ - ತಾನು ಆ ನಿಟ್ಟಿನಲ್ಲಿ ಯೋಚಿಸಿರಲೆ ಇಲ್ಲವಲ್ಲ ಎಂದು. ಈಗ ಚಿಂತಿಸಿದಷ್ಟು ಆ ಸಾಧ್ಯತೆ ಹೆಚ್ಚು ಎಂದೇ ಭಾಸವಾಗುತ್ತಿತ್ತು. ಅನುಮಾನವಿದ್ದ ಮೇಲೆ ಸುಮ್ಮನಿರುವುದಾದರು ಹೇಗೆ ? ಅದಕ್ಕಾಗಿಯೆ ನಿರ್ಧರಿಸಿಬಿಟ್ಟಿದ್ದ - ಆದದ್ದಾಗಲಿ ಈ ತಪದ ಭಂಗ ಮಾಡಲೇಬೇಕೆಂದು.

ಈ ಹಿನ್ನಲೆಯನ್ನೆಲ್ಲ ಅರಿಯದಿದ್ದರು ತಪೋನಿರತ ನರನ ಮನದಲ್ಲಿದ್ದದ್ದು ಅದೊಂದೆ ಆತಂಕ - 'ಬರಿ ಸಹಸ್ರವರ್ಷದ ಕದನ ಮಾತ್ರ ಬಾಕಿಯಿದೆ.. ಯಾವುದಾದರು ಅಡ್ಡಿಯಿಂದ ತಪ ವಿಳಂಬಿತಗೊಂಡರೆ ಏನು ಮಾಡುವುದು ?' ಎಂದು. ಏಕೆಂದರೆ ಇದು ಬರಿಯ ತಪದ ಮಾತು ಮಾತ್ರವಾಗಿರಲಿಲ್ಲ... ಯುಗಾಂತರ ಯಾನದ ಜಿಜ್ಞಾಸೆ !

ಆ ಗುರಿಯನ್ನೆ ನಿಶ್ಚಲ ಮನದ ಏಕೈಕ ಗಮನವಾಗಿರಿಸಿಕೊಂಡು, ಸುತ್ತಲಿನ ಪರಿಸರದ ಯಾವ ಪ್ರಚೋದನೆ-ಪ್ರಲೋಭನೆಗೂ ನಿಶ್ಚಲವಾಗಿರುವ ನರನ ಪ್ರಜ್ಞೆಗೂ, ಅಂದು ಏಕೊ ಇದ್ದಕ್ಕಿದ್ದಂತೆ ಸುತ್ತಲಿನ ವಾತಾವರಣದಲ್ಲೇನೊ ಬದಲಾವಣೆಯಾದಂತಿದೆಯಲ್ಲ ಅನಿಸಿತು...

ಕಾಮದೇವನ ಕೈಚಳಕ ಮತ್ತು ರತಿದೇವಿಯ ವಸಂತಚಿತ್ತದ ಚಮತ್ಕಾರ - ಎರಡೂ ತನ್ನ ಕೆಲಸ ಮಾಡಲಾರಂಭಿಸಿತ್ತು...!

(ಇನ್ನೂ ಇದೆ)