ರಿಲೀಫ್...

ರಿಲೀಫ್...

"ಹತ್ತ್ ಘಂಟೆ ಆಯ್ಥೊ!!….ಎದ್ದೇಳೋ...." ಅಡುಗೆ ಮನೆಯಿಂದ  ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್....
ಊರಿನಿಂದ ಸುಮಾರು ಮುನ್ನೂರು ಕಿಲೋಮೀಟರ್ ದೂರದಲ್ಲಿ, ವಾರದ ಐದೂ ದಿನಗಳೂ ಮಲ್ಟಿನ್ಯಾಷನಲ್  ಕಂಪನಿಯ ಗುಲಾಮನಾಗಿ ಸೇವೆ ಸಲ್ಲಿಸಿದ ನಂತರ ರಾಜನಂತೆ ಉಳಿದೆರೆದು ದಿನಗಳನ್ನು ಊರಿನಲ್ಲಿ ಕಳೆಯುತ್ತಿದ್ದ.ಗೆಳೆಯರೆಲ್ಲರೂ ವೀಕೆಂಡ್ನ ಟ್ರಿಪ್ ಅಂತ ನೂರಾರು ಮೈಲಿ ಕಲ್ಲು-ಮುಳ್ಳು, ಹಳ್ಳ-ದಿಬ್ಬ ಅಂತ 'ಪಟ್ಟಣದ ಆದಿವಾಸಿಗಳ' ಹಾಗೆ ಊರೆಲ್ಲ ಸುತ್ತಿ, ಸಭೂತಿಗೆ ಒಂದೈನೂರು ಫೋಟೋಗಳನ್ನು ದುಬಾರಿ ಕ್ಯಾಮರದಲ್ಲಿ ಸೆರೆ ಹಿಡಿದು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ ರಾಹುಲ್ನ ಅದರಲ್ಲಿ ಟ್ಯಾಗ್ ಮಾಡಿದರೂ ಸಹ ಈತ ಒಮ್ಮೆಯೂ ವೀಕೆಂಡ್ನನ್ನು ಮನೆಯ ಹೊರಗಡೆ ಕಳೆದಿಲ್ಲ. ಊರ ತೋಟ ಹಾಗು ಗದ್ದೆ, ಆದಷ್ಟು ಕೆಲಸ, ಮಾವು, ಹಲಸು ಅಥವಾ ಪೇರಲೆ ಮರದ ಮೇಲತ್ತಿ  ಕೆಲಸದ ದಣಿವನ್ನು ನಿವಾರಿಕೊಳ್ಳುವ ನೆಪದಲ್ಲಿ ಹಣ್ಣುಗಳನ್ನು ಹೊಟ್ಟೆ ಬಿರಿಯುವಂತೆ ತಿಂದು, ಸುಸ್ತಾಗಿ,ಊಟ ಮಾಡದೆ ಇದ್ದಾಗ ಅಮ್ಮನ ಬೈಗುಳದ ಸದ್ದು. ಇವುಗಳಲ್ಲಿ ಯಾವುದೊಂದಿಲ್ಲದಿದ್ದರೂ ಒಂದು ಆಪೂರ್ಣತೆಯ ಅನುಭವ ರಾಹುಲ್ನಿಗೆ. 
 
"ಈ ಜಾಗ ನೋಡೋಕ್ಕೆ ನೀವು ೮೦೦ ಮೈಲಿ ಹೋಗಬೇಕಿತ್ತ!!?? ಅದೂ ಅಸ್ಟ್ ಕರ್ಚ್ ಮಾಡ್ಕೊಂಡು??" ಅಂತ ಪ್ರತಿ ಬಾರಿನು ಟ್ರಿಪ್ನಿಂದ ದಣಿದು ಬಂದ ಗೆಳೆಯರ ಗುಂಪನ್ನು ಮತ್ತಷ್ಟು ರೇಗಿಸುತ್ತಿದ್ದ."ಇದೇ ನನ್ನೂರಿಗೆ ಬಂದಿದ್ರೆ ಇದ್ರ ೧೦% ದುಡ್ಡಲ್ಲಿ ನಿಮ್ಗೆ ಒಂದು ಮಿನಿ ಸ್ವರ್ಗಾನೆ ತೋರಿಸ್ತಿದ್ದೆ" ಅಂತ ತನ್ನ ಊರಿನ ಬಗ್ಗೆ ಹೆಮ್ಮಯಿಂದ ಹೇಳಿಕೊಳ್ಳುತಿದ್ದ.
 
ವಾರದ ಐದನೇ ದಿನದ ರಾತ್ರಿ ಗೆಳೆಯರೊಟ್ಟಿಗೆ ಸೇರಿ, ಒಂದೆರೆಡು ಸಿಪ್ ಬಿಯರ್ ಹೀರಿ, ಮುಂಜಾನೆ ಬೇಗ ಎದ್ದು ನಾಲ್ಕೈದು ಬಟ್ಟೆಗಳನ್ನು ಬ್ಯಾಗ್ಗೆ ತುಂಬಿ, ಜೇಡರ ಬಲೆಯ ಹಿಯರ್-ಫೋನ್ ಅನ್ನು ಕಿವಿಗೆ ತೂರಿಸೀ, ರೈಲಿನ ಕಿಟಕಿಯ ಪಕ್ಕದ ಸೀಟಿನಲ್ಲಿ ಘನಿಕರಿಸುವ ಸೂರ್ಯನನ್ನು ದಿಟ್ಟಿಸುತ್ತ ೩೦೦ ಕಿಲೋಮೀಟರ್ ಸಾಗುವಷ್ಟರಲ್ಲಿ ಊರು ಬಂದೆ ಬಿಡುತ್ತಿತ್ತು.ಸುಡುವ ಬಿಸಿಲು, ಬಿಸಿಯಾದ ಗಾಳಿ, ಕರ್ಕಶ ದ್ವನಿಯನ್ನು ಕೇಳಿದ್ದ ಕಣ್ಣು ಕಿವಿಗಳಿಗೆ ಹಸಿರಾದ ಪರ್ವತ,ತಂಪಾದ ಗಾಳಿ, ಇಂಪಾದ ಹಕ್ಕಿಗಳ ಸದ್ದನ್ನು ಕೇಳಿ,ನೋಡಿದಾಗ ಎಲ್ಲಿಲ್ಲದ ಸಂತೋಷ, ಶಾಂತಿ . ಕೋಟಿ ಕೊಟ್ಟರು ಸಿಗದನ್ನು ರಾಹುಲ್ ತನ್ನ ಊರಿನಲ್ಲಿ ಗಳಿಸುತ್ತಿದ್ದ … ನೆಮ್ಮದಿ.
 
"ಇನ್ನು ಎದ್ದಿಲ್ವೇನೋ .... ರೊಟ್ಟಿ ಎಲ್ಲಾ ತಣ್ಣಗಾಗೊದ್ವು... ನಾನ್ ಮತ್ತೆ ಬಿಸಿ ಮಾಡ್ತಾ ಕೂರಲ್ಲ.. ಬೇಕಾದ್ರೆ ಎದ್ದು ತಿನ್ನು" ಅಂತ ಅಮ್ಮ ತನ್ನ ಕೊನೆ ಪ್ರಯತ್ನ ಮಾಡಿದಳು. ಕೆಲವು ಬಾರಿ ಬೇಕಂತಲೇ, ಅಮ್ಮಾ ಕೂಗಿ ಹೇಳಲಿ ಅಂತ ರಾಹುಲ್ ಮಂಚದ ಮೇಲೆ ಬಿದ್ದಿರುತ್ತಿದ್ದ. ಎದ್ದು, ರೆಡಿಯಾಗಿ ತುಪ್ಪ ಎಲ್ಲಿದೆ ಅಂತ ಕೂಗಿ ಕೇಳಿ, ರೊಟ್ಟಿ,ಸಾರು,ತುಪ್ಪ ಹಾಕಿ ತಿಂದು ಕೈಬೆರಳುಗಳನ್ನು ಚೀಪಿ, ಮನೆಯಲ್ಲೇ ಮಾಡಿದ್ದ ಕಾಫಿ ಪುಡಿಯಿಂದ ತಯಾರಿಸಿದ್ದ ಕಾಫಿಯನ್ನು ಈರುತ್ತ ಮನೆಯಿಂದ ಹೊರಗಡೆ ನಿಂತು ಉದ್ದ ಪರ್ವತ ಶ್ರೇಣಿಯನ್ನು ದಿಟ್ಟಿಸುತ್ತ ನಿಂತ. ನಂತರ ಕೊಂಚ ಹೊತ್ತು ತೋಟದಲ್ಲಿ ಅಡ್ಡಾಡಿ ಬಂದ.
 
"ಮದ್ಯಾನ ಏನ್ ಮಾಡ್ಲಿ ಊಟಕ್ಕೆ... " ಎಂದು ಐದು ದಿನಗಳ ನಂತರ ಬಂದ ಮಗನನ್ನು ಅಮ್ಮ ಕೇಳಿದಳು.
 
"ಗೊತ್ತಿದ್ದು ಅದನ್ನೇ ಕೇಳ್ತಿಯಲ್ಲ" ಅಂತ ರಾಹುಲ್ ಬೈಕನ್ನು ಹೊರತೆಗೆದು ಕೋಳಿ ಮಾಂಸವನ್ನು ತರಲು ಹೊರಟ. ಮದ್ಯಾನ ಅಮ್ಮ ಮಾಡಿದ್ದ ಭೂರಿ ಬೋಜನವನ್ನು ತಿಂದು, ಟೀವಿ ನೋಡುತ್ತ ಹಾಗೆ ನಿದ್ರೆಗೆ ಜಾರಿ ಕಣ್ಣು ತೆರೆದಾಗ ಸಂಜೆ ಐದಾಗಿತ್ತು. ಇನ್ನು ನಲವತ್ತು ತಾಸುಗಳ ನಂತರ ತಾನು ಪುನಃ ಮಲ್ಟಿನ್ಯಾಷನಲ್  ಕಂಪನಿಯ ಗುಲಾಮನಾಗುವುದನ್ನು ನೆನೆದು ಏನೋ ಒಂದು ದುಗುಡ ಮನದಲ್ಲಿ ಮೂಡಿದರೂ ಕೆಲದಿನಗಳ ನಂತರ ಪುನ್ಹ ಮನೆಗೆ ಹಿಂತಿರುಗುವ ಖುಷಿ ಅದೆಲ್ಲವನ್ನು ಮರೆಮಾಚಿತು. ಪಕ್ಕದ ಬೆಟ್ಟದ ತಪ್ಪಲಿನಲ್ಲಿ ತನ್ನ ಇಷ್ಟವಾದ ಜಾಗಕ್ಕೆ ಹೋಗಿ, ಆಶಾ-ಕಿಶೋರ್ರ ಮಧುರ ಸ್ವರದಲ್ಲಿ ಸೂರ್ಯ ಕರಗುವುದನ್ನು ನೋಡಲ್ಲಿಲ ಅಂದರೆ ಅದೇನೊ ಅಪೂರ್ಣತೆಯ ಅನುಭವ. ಇತ್ತಿಚೆಗೆ ಬಿಡುಗಡೆಗೊಂಡ, ನೋಡದೆ ಉಳಿದಿರುವ ಚಲನಚಿತ್ರಗಳನ್ನು ಗೆಳೆಯರಿಂದ ಕೇಳಿ ತಂದಿದ್ದ. ಯಾವುದಾದರು ಒಂದನ್ನು ಆಮೇಲೆ ನೋಡಿದರಾಯಿತು ಎಂದುಕೊಂಡು ಮತ್ತೊಮ್ಮೆ ಬೈಕನ್ನು ಹೊರಗೆಳೆದು ಹೊರಟ..
 
ಕಿಶೋರ್,ಆಶಾ,ಲತಾ, ಈಗೆ ಎಲ್ಲರನ್ನು ತನ್ನ ಫೋನಿನಲ್ಲಿ ನಗಿಸಿ,ಅಳಿಸಿ,ಪ್ರೀತಿಸಿ, ಪುನಃ ನಗಿಸಿ,ಅಳಿಸಿ, ಸೂರ್ಯ ಪಶ್ಹಿಮದಲ್ಲಿ ಕಣ್ಮರೆಯಾದ ಮೇಲೆ ಮನೆಗೆ ವಾಪಸ್ಸಾದ.  ಅಮ್ಮ ಮಾಡಿಟ್ಟಿದ್ದ ಕಾಫಿಯನ್ನು ಕುಡಿಯುತ್ತ ಲ್ಯಾಪ್ಟಾಪ್ ಮುಂದೆ ಕೂತು ಇಮೇಲ್ಗಳ ಮೇಲೆ ಕಣ್ಣಾಯಿಸಿ, ಕೆಲಸಕ್ಕೆ ಹಾಕಿದ್ದ ಅರ್ಜಿಗೆ ಉತ್ತರ ಬಂದಿದ್ದನ್ನು ಗಮನಿಸಿದ. ಉತ್ತಮ ಸಂಬಳ, ವಸತಿ, ವಾಹನ ಈಗೆ ಎಲ್ಲವನ್ನು ಕೊಡಲಾಗಿತ್ತು. ಆಸಕ್ತರಿದ್ದರೆ ನಾಳಿನ ವೀಡಿಯೊ ಸಂದರ್ಶನಕ್ಕೆ ಬರಲು ಕಾಲವನ್ನು ನಿಗದಿಮಾಡಲಾಗಿತ್ತು. ಇಲ್ಲಿಯವರೆಗೂ ಅಪ್ಪ-ಅಮ್ಮನನ್ನು ಕೇಳಿ ಏನೂ ಮಾಡಿರದ ರಾಹುಲ್ ಈ ಬಾರಿಯೂ ಅವರಿಗೆ ಏನು ಹೇಳಲಿಲ್ಲ. ಕೆಲ ನಿಮಿಷಗಳ ದ್ವಂದ್ವ ಆಲೋಚನೆಯ ನಂತರ ಸಂದರ್ಶನ ಕೊಡಲು ತೀರ್ಮಾನಿಸಿದ...
 
"ದೂರದ ಬೆಟ್ಟ ನೋಡಲು ಬಹು ಸೊಗಸು" ರಾಹುಲ್ನ ಮನಸ್ಸು ಮಲಗುವ ಮುನ್ನ ಮಾತಾಡಿತು!
 
ನಂತರದ ಕೆಲ ದಿನಗಳಲ್ಲಿ ಎಲ್ಲಾ ರಾಹುಲ್ ಬಯಸಿದಂತೆ ನಡಯಿತು. ನೋಡ ನೋಡುತ್ತಲೇ ರಾಹುಲ್ ಸಾವಿರ ಮೈಲುಗಳ ದೂರದ ಜಾಗದಲ್ಲಿ ಗುಲಾಮನಾಗಲು ಹೊರಟು ನಿಂತ.
 
"ಅಲ್ಲಿಂದ ವಾಪಾಸ್ ಬರೋಕ್ಕೆ ಎಷ್ಟ್ ದಿನ ತಗೋನುತ್ತ್ಹೋ ... " ಹೊರಡುವಾಗ ಕಣ್ಣೀರನ್ನು ಜಿನಿಗಿಸುತ್ತ ಅಮ್ಮ ಕೇಳಿದಳು…
 
ಮನಯಿಂದ, ಮನೆಯವರಿಂದ, ಊರಿಂದ, ನಾಡಿಂದ ದೂರವಿರದ ರಾಹುಲ್ಗೆ ತಾನು ಯಾವುದೊ ಬೇರೆಯ ಸೌರಮಂಡಳಕ್ಕೆ ಬಂದ ಹಾಗಾನಿಸಿತು. ಮಾಡುತಿದ್ದ ಊಟ ೨ನೇ ಬಾರಿಗೇ ಬೇಜಾರಿಯಿತು. ಹಿಂದೆಂದೂ ಸಹ ರಾಹುಲ್ಗೆ ಮನೆಯ ನೆನಪು ಇಷ್ಟೊಂದು ಕಾಡಿಸಿರಲಿಲ್ಲ.  ಮನಸ್ಸು ಊರಲ್ಲೇ ಹಸಿರು ಪರ್ವತಗಳ ನಡುವೆ ಅಲೆಯುತಿದ್ದರೆ, ದೇಹ ಮಾತ್ರ ಆ ದೂರದ ಊರಲ್ಲಿ ಇದ್ದಿತು. ಮನಸಿಲ್ಲದ ಮನಸ್ಸಿಂದ ಕೆಲಸ ಮಾಡುವುದೆನಂತ ಈಗ ಅರಿವಾಹಿತು. ತನ್ನ ಹಳೆಯ ಕೆಲಸದ ಉತ್ತರ ಭಾರತದ ಸಹೋದ್ಯೋಗಿಗಳ ಪಾಡು ಅರ್ಥವಾಗತೊಡಗಿತು.ಇಲ್ಲಿಂದ ಇಂದೇ ವಾಪಾಸ್ ಹೋಗುವಂತನಿಸಿದರೂ ಕಂಪನಿಯ ಜೊತೆ ಇದ್ದ ಒಪ್ಪಂದ ಯಾಕೋ ಬೇಡವೆನಿಸುವಂತೆ ಮಾಡಿತು.ಇಲ್ಲಿಗೆ ಬರುವ ನಿರ್ಣಯದ ಬದಲು ಅಪ್ಪ-ಅಮ್ಮನನ್ನು ಕೇಳಬೇಕಿತ್ತು ಅನ್ನುವುದರ ಅರಿವು ಕೊನೆಗೂ ಆಯಿತು.
 
ಇಲ್ಲಿಂದ ತುಸು ದೂರ ಸಾಗಿದರೆ ಒಂದು ಒಳ್ಳೆಯ ಸೂರ್ಯಾಸ್ತ ನೋಡುವ ಜಾಗವಿದೆ ಅಂತ ತಿಳಿದು ಅಲ್ಲಿಗೆ ಹೊರಡುತ್ತಾನೆ. ಸಕಲ ಸೌರಮಡಲಕ್ಕೂ ಒಬ್ಬನೇ ಸೂರ್ಯನಾದರೂ ರಾಹುಲ್ಗೆ ಇಲ್ಲಿನ ಸೂರ್ಯ ತೀರಾ ಭಿನ್ನವಾಗಿ ಕಾಣಿಸಿದ. ಊರಿನ ತನ್ನ ಇಷ್ಟವಾದ ಜಾಗದಲ್ಲಿ ನಿಂತು ಸೂರ್ಯನನ್ನು ನೋಡುತ್ತಾ ನಿಂತರೆ ಆತ  ಮುಳುಗುತ್ತಾ ತನ್ನ ನೋವು-ಚಿಂತೆಯನೆಲ್ಲ ಕರಗಿಸುವ ಭಾಸ. ತಿಪ್ಪರಲಾಗ ಹಾಕಿದರೂ ಅವಳು ಸಿಗುವುದಿಲ್ಲ ಅಂತ ಗೊತ್ತಿದ್ದರೂ ಊರಿನಲ್ಲಿ ಮುಳುಗುವ ಸೂರ್ಯನನ್ನು ಇಂಪಾದ ಹಾಡುಗಳೋಟ್ಟಿಗೆ ನೋಡುತ್ತ ನಿಂತರೆ ಅದೇನೋ ಖುಷಿ. ಆಕೆ ಪಕ್ಕದಲ್ಲೇ ನಿಂತ ಭಾವ! ಆದರೆ ಇಲ್ಲಿನ ಸೂರ್ಯ ಅವನೆಲ್ಲ ಪುನಃ ರಾಹುಲನ ಮನದೊಳಗೆ ಹಾಕಿ ಕದಲಿಸಿ-ನೋಯಿಸುವ ಅನುಭವ!
 
ಇದ್ದಕ್ಕಿದ್ದಂತೆ ಮಳೆ ಹನಿಗಳು ಒಂದೊಂದಾಗಿ ಬೀಳಲಾರಂಬಿಸಿದವು. ಇದು ಕೇವಲ ತುಸು ಸಮಯದ ಉದುರು ಮಳೆ ಎಂದು ರಾಹುಲ್ ನಡೆಯುತ್ತಲೇ ರೂಮಿನೆಡೆಗೆ ನಡೆದ. ತನ್ನ ಊರಿನ ಮಳೆಗಾಲದ ನೆನಪು ರಾಹುಲ್ನನ್ನು ಕಾಡಲರಂಬಿಸಿದವು. ಊರಿನ ಮಳೆ, ದೂರ ದೂರಕ್ಕೆ ಒಡೆದು ನಿಂತಿರುವ ಹಸಿರು ಗದ್ದೆಗಳು, ಮಳೆಯಲ್ಲೇ ಅದರೊಳಗೆ ಆಟದ ಗೊಂಬೆಗಳಂತೆ ಓಡಾಡುವ ಕೆಲಸಗಾರು. ಜಿನುಗುವ ಮಳೆಯಲ್ಲೇ ಊರೆಲ್ಲ ಸುತ್ತಿ ಒಲೆಯ ಮುಂದೆ ಕೂತು ಮೈ ಕಾಯಿಸಿಕೊಳ್ಳುವುದು, ಬೆಳಗಿನ ತಿಂಡಿ,ಊಟ ಎಲ್ಲವನ್ನು ಹಲಸಿನ ಹಣ್ಣಿನ ಒಟ್ಟಿಗೆ ಮಾಡಿದ ಆ ದಿನಗಳು ರಾಹುಲ್ನನ್ನು ಊರಿನೆಡೆಗೆ ಕರೆದವು.ತುಸು ಹೊತ್ತು ಬಂದ ಮಳೆಗೆ ಒದ್ದೆಯಾಗಿದ್ದ ತಲೆಯನ್ನೂ ಒರೆಸದೆ ರಾಹುಲ್ ಬಟ್ಟೆಗಳನ್ನು ಪ್ಯಾಕ್ ಮಾಡಲು ಶುರು ಮಾಡಿದ!! ಇರಲಿ ಅಂತ ತನ್ನ ರಾಜೀನಾಮೆ ಪತ್ರವನ್ನು ಇಮೇಲ್ ಮಾಡಿ, ಆ ದಿನ ರಾತ್ರಿಯೇ ರೈಲನ್ನು ಹಿಡಿದು ಊರಿನೆಡೆ ಸಾಗಿದ.
 
ದೂರ ಕ್ಷೀಣಿಸಿದ ಹಾಗೆ ಮನಸ್ಸಿನ ಭಾರ ಕಡಿಮೆಯಾಗತೊಡಗಿತು. ಊರು ತಲುಪಿದಾಗ ಮನಸ್ಸು ಹಗುರಾಹಿತು........
.
.
.
ದಿನಗಳು ಕಳೆದವು........
 
"ಘಂಟೆ ಹ್ಹನ್ನೊಂದು!!.....ಇನ್ನೂ ಮಲ್ಗಿದ್ದಿಯಲ್ಲ ಮಾರಾಯ" ಅಮ್ಮನ ದ್ವನಿ ಕಿವಿಗೆ ಬಿದ್ದಿತು. ಐದು ದಿನಗಳ ನಂತರ ವೀಕೆಂಡ್ಗೆ ಪುನಃ ಮನೆಗೆ ಬಂದು ಮಲಗಿದ್ದ ರಾಹುಲ್ಗೆ ಮನದಲ್ಲೇ ಹಾಗೆ ಒಂದು ಮುಗುಳ್ನಗೆ ಮೂಡಿತು... ಎಷ್ಟೋ ದಿನಗಳ ನಂತರ ಬಂದ ಗುಬ್ಬಚ್ಚಿ ಸದ್ದಿಗೆ ಎಚ್ಚರವಾಗಿ ಕಬೋರ್ಡ್ನ ಮೂಲೆಯಲ್ಲಿ ಇಟ್ಟಿದ್ದ ಕ್ಯಾಮರ ತರಲು ರಾಹುಲ್ ದೌಡಹಿಸಿದ.....